Episodes
Monday May 28, 2012
Breaking News
Monday May 28, 2012
Monday May 28, 2012
ದಿನಾಂಕ 27 ಮೇ 2012ರ ಸಂಚಿಕೆ...
ಕೆಮ್ಮೋತ್ತರ ಬ್ರೇಕಿಂಗ್ ನ್ಯೂಸ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ಕನ್ನಡ ಚಿತ್ರಗೀತೆಗಳಿಗೆ ಸಂಬಂಧಪಟ್ಟ ರಸಪ್ರಶ್ನೆ ಕೇಳಿದ್ದರಿಂದಲೋ, ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಲಕ್ಷಣ ವಿಷಯವನ್ನು ಅಂಕಣಕ್ಕೆ ಆರಿಸಿಕೊಂಡಿದ್ದರಿಂದಲೋ, ಅಥವಾ, ಕಣ್ಣಿಗೆ ರಾಚುವಂಥ ತಪ್ಪೊಂದು ಅದರಲ್ಲಿ ನುಸುಳಿದ್ದರಿಂದಲೋ ಅಂತೂ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬಂದಿವೆ. ನನ್ನ ಮಿಂಚಂಚೆಪೆಟ್ಟಿಗೆ ತುಂಬಿತುಳುಕಿದೆ. ಲೇಖನವನ್ನು ಸಿದ್ಧಪಡಿಸುವಾಗ ನನಗೆ ಸ್ವಲ್ಪ ಅಳುಕಿತ್ತು, ಡಬ್ಬಾತೀತ ಯೋಚನೆ ಅಂತೆಲ್ಲ ಹೇಳಿ ಎಲ್ಲಿ ಡಬ್ಬ ಅನಿಸಿಕೊಳ್ಳುವುದೋ ಎಂದು. ಆದರೆ ಓದುಗರ ಸ್ಪಂದನ ಅದನ್ನು ಸುಳ್ಳಾಗಿಸಿದೆ. ರಸಪ್ರಶ್ನೆಗೆ ಉತ್ತರವಷ್ಟೇ ಅಲ್ಲ, ಸಿನೆಮಾದಲ್ಲಿ ಕೆಮ್ಮು ಅಂತೊಂದು ಸಂಶೋಧನಾಪ್ರಬಂಧ ಮಂಡಿಸಿ ಪಿಎಚ್ಡಿ ಗಳಿಸಬಹುದಾದಷ್ಟು ಪೂರಕ ಕೆಮ್ಮು ಪತ್ರಗಳಲ್ಲಿ ಪ್ರತಿಧ್ವನಿಸಿದೆ. ‘ಬಂಧನ’ ಚಿತ್ರದ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ...’ ಹಾಡು, ರಸಪ್ರಶ್ನೆಯ ಸರಿಯುತ್ತರ. ತುಂಬ ಜನಪ್ರಿಯ ಚಿತ್ರಗೀತೆ. ವಿಷ್ಣುವರ್ಧನ್ ಕೆಮ್ಮುತ್ತ ಅಭಿನಯಿಸಿದ, ಎಸ್ಪಿಬಿ ಕೆಮ್ಮುತ್ತ ಹಾಡಿದ ಅದ್ಭುತಗೀತೆ. ಉತ್ತರಕ್ಕಾಗಿ ತಲೆಕೆರೆದುಕೊಳ್ಳುವ ಅಗತ್ಯವಿಲ್ಲದೆ ಹೆಚ್ಚಿನವರಿಗೆ ನೆನಪಿಗೆ ಬಂದಿದೆ. ಕೆಲವರು ಮಾತ್ರ ಬಂಧನ ಸಿನೆಮಾ ಹೆಸರು ನೆನಪಾದರೂ ‘ನೂರೊಂದು ನೆನಪು ಎದೆಯಾಳದಿಂದ...’ ಕೆಮ್ಮಿನಹಾಡು ಎಂದುಕೊಂಡು ಅದೇ ಉತ್ತರವೆಂದಿದ್ದಾರೆ. ಸರಿಯುತ್ತರ ಬರೆದು ತಿಳಿಸಿದವರಿಗೆಲ್ಲ ಅಭಿನಂದನೆಗಳು. ‘ಕೆಮ್ಮು ಇರುವ ಚಿತ್ರಗೀತೆಗಳಲ್ಲಿಯೇ ಈ ಹಾಡಿಗೆ ಅಗ್ರಸ್ಥಾನ ಸಲ್ಲಬೇಕು. ಇದರಲ್ಲಿ ಎಸ್ಪಿಬಿಯವರು ಕೆಮ್ಮನ್ನು ಎಷ್ಟು ಲಯಬದ್ಧವಾಗಿ ಉಪಯೋಗಿಸಿದ್ದಾರೆಂದರೆ ಹಾಡಿನ ಲಯಕ್ಕೆ ಸ್ವಲ್ಪವೂ ತೊಂದರೆ ಇಲ್ಲದಂತೆ, ನಿಜವಾಗಿ ಹಾಡಿನ ಮಧ್ಯದಲ್ಲಿ ಕೆಮ್ಮು ಬಂದಿರುವಂತೆ ಕೇಳಿಸುತ್ತದೆ. ಬಾಲು ಅವರೇ ಹೇಳುವಂತೆ ಇದನ್ನು ಹಾಡುವಾಗ ಅವರ ದೇಹದ ರಕ್ತವೆಲ್ಲ ಅವರ ಮಿದುಳಿಗೆ ಹರಿದಿತ್ತಂತೆ!’ ಎಂದು ಹಾಡಿನ ಕುರಿತು ವ್ಯಾಖ್ಯಾನಿಸಿದ ಓದುಗಮಿತ್ರ ಚಿತ್ತಾಪುರದ ವಿನಯಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು. ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ತಿಳಿಸಿ ಎಂದಿದ್ದೆನಷ್ಟೆ? ಬಹುಮಂದಿ ಸೂಚಿಸಿರುವುದು ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ...’ ಗೀತೆಯನ್ನು. ‘ಅಣ್ಣಾವ್ರ ಹಾಡು ಲೇಖನದಲ್ಲೇ ಇರುತ್ತೆ ಅಂದ್ಕೊಂಡಿದ್ದೆ. ಅದರಲ್ಲಿ ಫ್ರಂಟ್-ಎಂಡ್ ಹಾಸ್ಯನಟ ಉಮೇಶ್. ಬ್ಯಾಕ್-ಎಂಡ್ ಅಣ್ಣಾವ್ರು. ಹಾಡಿನ ನಡುವೆ ಅಣ್ಣಾವ್ರಿಗೆ ಕೆಮ್ಮು ಬರುತ್ತೆ. ಅಲ್ಲಿದ್ದವರು ಫ್ರಂಟ್-ಎಂಡ್ ಉಮೇಶ್ಗೆ ಕೆಮ್ಮುನಿವಾರಣೆಗೆ ನೆರವಾಗ್ತಾರೆ. ನಾಯಕಿ ಮಾಧವಿಗೆ ಗೊತ್ತಾಗಿ ಆಕೆಯೂ ಅಣ್ಣಾವ್ರ ಜೊತೆ ಹಾಡತೊಡಗುತ್ತಾರೆ (ಬ್ಯಾಕ್-ಎಂಡ್ನಲ್ಲಿ). ಪ್ರೇಕ್ಷಕರು ಉಮೇಶ್ ಅವರೇ ಹೆಣ್ಣುಧ್ವನಿಯಲ್ಲಿ ಹಾಡ್ತಿದ್ದಾರೆ ಅಂದ್ಕೊಳ್ತಾರೆ! ತುಂಬ ಹಾಸ್ಯಮಯ.’ ಎಂದು ಹಾಡಿನ ದೃಶ್ಯಾವಳಿಯನ್ನೂ ವಿವರಿಸಿದ್ದಾರೆ ಮಂಗಳೂರಿನ ಗಿರೀಶ್ ಐತಾಳ. ‘ಗಡಿಬಿಡಿ ಗಂಡ’ ಚಿತ್ರದಲ್ಲಿ ರವಿಚಂದ್ರನ್ ಜತೆ ಗಾಯನಸ್ಪರ್ಧೆಗಿಳಿವ ತಾಯ್ ನಾಗೇಶ್ ‘ನೀನು ನೀನೇ ಇಲ್ಲಿ ನಾನು ನಾನೇ’ ಹಾಡುವ ಮೊದಲು ಗಂಟಲು ಟೆಸ್ಟ್ ಮಾಡಿಕೊಳ್ಳುವ ಕೆಮ್ಮನ್ನು ಜ್ಞಾಪಿಸಿದ್ದಾರೆ ಮೈಸೂರಿನ ಮೋಹನ್ರಾಜ್. ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ‘ಉಮಂಡ್ಘುಮಂಡ್ ಘನಗರಜೇ ಬದರಾ...’ ಹಾಡಿನ ಕೆಮ್ಮನ್ನೂ ಒಂದಿಬ್ಬರು ನೆನೆಸಿಕೊಂಡಿದ್ದಾರೆ. ಹಾಸ್ಯೋತ್ಸವದಲ್ಲಿ ಮಂಗಳಗೀತೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ...’ ಹಾಡುವಾಗ ಕಿರ್ಲೋಸ್ಕರ್ ಶಾಸ್ತ್ರಿಗಳಿಗೆ ಕೆಮ್ಮು ಬಂದು ಆಮೇಲೆ ಹಾಡನ್ನು ರಫೀಕ್ ಮುಂದುವರಿಸುವ ಸೂಪರ್ಹಾಸ್ಯದ ಸನ್ನಿವೇಶವೂ ಕೆಲವರಿಗೆ ನೆನಪಾಗಿದೆ. ಅಂತೆಯೇ ಡುಂಡಿರಾಜರ ಕೆಮ್ಮುಕವನ ‘ಪೆಹಲೇ ಕವಿತಾ ಪಢ್ನೇ ದೋ ಹಮ್ಕೊ, ಆಮೇಲೆ ಬೇಕಿದ್ರೆ ನೀ ಕೆಮ್ಕೊ’ ಕೂಡ. ರಸಪ್ರಶ್ನೆಯ ಉತ್ತರದ ಹೊರತಾಗಿ ಅತಿಹೆಚ್ಚು ಪತ್ರಗಳಲ್ಲಿ ಉಲ್ಲೇಖಗೊಂಡದ್ದು ಲೇಖನದಲ್ಲಿ ಕಂಡುಬಂದಿದ್ದ ಒಂದು ತಪ್ಪು. ‘ಹಾಲುಜೇನು’ ಚಿತ್ರದಲ್ಲಿ ಡಾ.ರಾಜ್ ಅವರೊಡನೆ ನಾಯಕಿಯಾಗಿ ನಟಿಸಿದವರು ಸರಿತಾ ಎಂಬರ್ಥದಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸರಿತಾ ಅಲ್ಲ, ಮಾಧವಿ ಅಂತಾಗಬೇಕಿತ್ತು. ಲೇಖನ ಬರೆಯುವುದಕ್ಕೆ ಸ್ವಲ್ಪ ಮೊದಲಷ್ಟೇ ಯೂಟ್ಯೂಬ್ನಲ್ಲಿ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಹಾಡಿನ ವಿಡಿಯೋ ನೋಡಿ ಅದರಲ್ಲಿ ಕೆಮ್ಮು ಇರುವುದನ್ನು ಖಾತರಿಪಡಿಸಿಕೊಂಡಿದ್ದೆ. ರಾಜ್-ಮಾಧವಿ ಜೋಡಿಯನ್ನೂ ಗಮನಿಸಿದ್ದೆ. ಆದರೆ ಯಾವುದೋ ಗುಂಗಿನಲ್ಲಿ ಟೈಪಿಸುವಾಗ ಮಾಧವಿ ಬದಲು ಸರಿತಾ ಪ್ರತ್ಯಕ್ಷವಾದರು. ಸ್ವಾರಸ್ಯವೆಂದರೆ ಆ ಚಿತ್ರದಲ್ಲಿ ಮಾಧವಿಗೆ ಕಂಠದಾನ ಮಾಡಿದ್ದು ಸರಿತಾ! ಕೆಲವರು ಸೂಕ್ಷ್ಮಮತಿಗಳು ಇನ್ನೂ ಒಂದು ತಪ್ಪನ್ನು ಕಂಡುಹಿಡಿದಿದ್ದಾರೆ. ಬೆಂಗಳೂರಿನಿಂದ ಸುಮಾ ಅಮೃತೇಶ್ ಬರೆಯುತ್ತಾರೆ: ‘ನಿಮ್ಮ ರಸಪ್ರಶ್ನೆಯಲ್ಲಿ, ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ ಎಂದಿದ್ದೀರಿ. ವಿಷ್ಣು ಸರ್ ಆ ಹಾಡಿನ ಕೊನೆಗೇ ಸಾಯುವುದಿಲ್ಲ. ಚಿತ್ರದ ಕೊನೆಯಲ್ಲಿ ಸುಹಾಸಿನಿಯ ಮಗುಗೆ ಜೀವ ಕೊಡು ಅಂತ ಬೆಳಕಲ್ಲಿ ದೇವ್ರನ್ನ ಕೇಳಿ ಜೀವಬಿಡ್ತಾರೆ. ಈಗಲೂ ಅದನ್ನು ನೆನೆಸಿಕೊಂಡರೆ ಕಣ್ಣೀರುಬರುತ್ತೆ.’ ಏನೇಇರಲಿ, ತಪ್ಪು ತಪ್ಪೇ. ನ್ಯೂನಾನಿಚಾತಿರಿಕ್ತಾಣಿ ಕ್ಷಮಸ್ವ ಪರಮೇಶ್ವರ ಎಂದು ಪೂಜೆಯ ಕೊನೆಯಲ್ಲಿ ಹೇಳುವಂತೆ ಅಂಕಣದಲ್ಲಿನ ನ್ಯೂನಗಳನ್ನೂ ಅತಿರಿಕ್ತಗಳನ್ನೂ (ಉದಾ: ವ್ಯಾಕರಣಬದ್ಧ ಗುಣಸಂಧಿಯ ಪದವಾಗದೆಯೂ ‘ಕೆಮ್ಮೋತ್ತರ’ ಎಂದು ಇವತ್ತಿನ ತಲೆಬರಹದಲ್ಲಿ ಬಳಸಿರುವಂಥದನ್ನು) ಓದುಗರು ದೊಡ್ಡಮನಸ್ಸಿನಿಂದ ಕ್ಷಮಿಸುವರೆಂಬ ನಂಬಿಕೆ. ಇನ್ನು, ಬ್ರೇಕಿಂಗ್ ನ್ಯೂಸ್ ಏನಿರಬಹುದಪ್ಪಾ ಅಂತ ಬಹುಶಃ ಉಸಿರು ಬಿಗಿಹಿಡಿದುಕೊಂಡಿದ್ರಿ. ಏನಿಲ್ಲ, ಇದು ಬ್ರೇಕಿಂಗ್ ನ್ಯೂಸ್ ಅಲ್ಲ, ‘ಬ್ರೇಕ್’ ನ್ಯೂಸ್. ಸರಿಸುಮಾರಾಗಿ ಹತ್ತು ವರ್ಷಗಳಿಂದ ವಾರವಾರವೂ ಅಂಕಣ ಬರೆಯುತ್ತ ಬಂದಿದ್ದೇನೆ. 2002ರಿಂದ 2007ರವರೆಗೆ ದಟ್ಸ್ಕನ್ನಡ ಡಾಟ್ಕಾಮ್ ಅಂತರಜಾಲ ಪತ್ರಿಕೆಯಲ್ಲಿ ಮಂಗಳವಾರದ ಅಂಕಣ ‘ವಿಚಿತ್ರಾನ್ನ’; ಅದಾದಮೇಲೆ ಕಳೆದೈದು ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಭಾನುವಾರಗಳಂದು ಪರಾಗಸ್ಪರ್ಶ. ಒಟ್ಟುಸೇರಿ ಐನೂರಕ್ಕೂ ಹೆಚ್ಚು ಬರಹಗಳು. ಹೆಚ್ಚೂಕಡಿಮೆ ಅಷ್ಟೇ ಬಗೆಬಗೆಯ ವಿಷಯಗಳು. ಬಿಂದುಪೂರ್ವಕ ಡಕಾರದಿಂದ ಹಿಡಿದು ಹಿಲ್ಬರ್ಟ್ ಹೊಟೇಲ್ನ ಅನಂತದವರೆಗೆ ಅವುಗಳ ಹರವು. ಸಾಹಿತ್ಯಿಕವಾಗಿ ಅವೆಲ್ಲ ಶ್ರೇಷ್ಠವಾಗಿದ್ದವು ಎನ್ನಲಾರೆ, ಆದರೆ ಮಾಹಿತಿ-ಮನರಂಜನೆಗಳ ಆರೋಗ್ಯಕರ ಮಿಶ್ರಣದೊಂದಿಗೆ ಜೀವನಪ್ರೀತಿ ತುಂಬಿಸುವ ಯತ್ನವಂತೂ ಅವೆಲ್ಲದರಲ್ಲಿ ಖಂಡಿತ ಇತ್ತು. ಪತ್ರಿಕೆಯ ಸಂಚಿಕೆ ಪ್ರಕಟವಾಗದೆ (ಹಬ್ಬದ ಬಿಡುವಿನಿಂದಾಗಿ) ಆ ವಾರ ಅಂಕಣ ಇರುತ್ತಿರಲಿಲ್ಲವೇ ಹೊರತು ಬೇರೆ ಒಂದು ವಾರವೂ ತಪ್ಪಿಸಿದ್ದಿಲ್ಲ. ಹತ್ತು ವರ್ಷಗಳ ಸತತ ಬರವಣಿಗೆಯ ನಂತರ ಈಗೊಂದು ‘ಬ್ರೇಕ್’ (ವಿರಾಮ) ತೆಗೆದುಕೊಳ್ಳುವ ಕಾಲ. ಇವತ್ತಿನದು ಪರಾಗಸ್ಪರ್ಶ ಅಂಕಣದ ಕೊನೆಯ ಕಂತು. ಹಾಂ! ನನಗೆ ಹೊಸ ಚೈತನ್ಯ ತುಂಬಿಸಿಕೊಳ್ಳಲಿಕ್ಕಷ್ಟೇ ಅಲ್ಲ ಈ ಬ್ರೇಕ್. ಪತ್ರಿಕೆಯೂ ಹೊಸತನಕ್ಕೆ ತೆರೆದುಕೊಂಡು ವೈವಿಧ್ಯಮಯ ಸರಕನ್ನು ಓದುಗರಿಗೆ ಉಣಿಸುವುದು ಬೇಡವೇ? ಸಂಪಾದಕರ ಹೊಸಹೊಸ ಯೋಜನೆಗಳಿಗೆ ಅನುವು ಮಾಡಿಕೊಡುವುದು ಬೇಡವೇ? ಓದುಗರಾದ ನೀವಾದರೂ ಅದೇ ಅಂಕಣ, ಅದೇ ಲೇಖಕ ಎಷ್ಟು ದಿನ ಅಂತ ಸಹಿಸಿಕೊಳ್ತೀರಿ? ಬದಲಾವಣೆ ಆಗಾಗ ಆಗುತ್ತಿರಬೇಕು. ಈ ಎಲ್ಲ ಅಂಶಗಳನ್ನು ಮನಗಂಡು, ಪ್ರಧಾನ ಸಂಪಾದಕರೊಡನೆ ಸಮಾಲೋಚನೆ ನಡೆಸಿಯೇ ನಾನು ಈ ನಿರ್ಧಾರಕ್ಕೆ ಬಂದದ್ದು. ವಾರವಾರ ಕ್ಲಪ್ತವಾಗಿ ಬರೆಯುವ ನಿಯತ್ತನ್ನು ಬೇಡುವ ಅಂಕಣಗಾರಿಕೆಗೆ ವಿರಾಮ ಘೋಷಿಸಿದ್ದೇ ಹೊರತು ಬರವಣಿಗೆಯನ್ನೇ ಬಿಟ್ಟುಬಿಡುತ್ತೇನೆಂಬ ವೈರಾಗ್ಯವಲ್ಲ. ಇಷ್ಟು ದಿನವೂ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ ವಿಜಯ ಕರ್ನಾಟಕ ಪತ್ರಿಕೆಯೊಂದಿಗೆ, ಪತ್ರಿಕೆಯ ಓದುಗರೊಂದಿಗೆ ಸ್ನೇಹಸಂಬಂಧ ಕಡಿದು ಹಾಕುತ್ತಿರುವುದಲ್ಲ. ಆ ದೃಷ್ಟಿಯಿಂದಲೂ ಇದು ‘ಬ್ರೇಕಿಂಗ್’ ಅಲ್ಲವೇಅಲ್ಲ, ಜಸ್ಟ್ ಒಂದು ‘ಬ್ರೇಕ್’ ಅಷ್ಟೇ. ಶ್ರೀವತ್ಸ ಜೋಶಿ ಬರೆಯುವ ವೈನೋದಿಕ/ವೈಚಾರಿಕ ಬರಹಗಳನ್ನು ಆಗೊಮ್ಮೆ ಈಗೊಮ್ಮೆ ಇದೇ ಪತ್ರಿಕೆಯ ಪುಟಗಳಲ್ಲಿ, ಪುರವಣಿಗಳಲ್ಲಿ ನೀವು ಖಂಡಿತ ನಿರೀಕ್ಷಿಸಬಹುದು. ಇಲ್ಲೊಂದು ಕಾಕತಾಳೀಯ. ರಸಪ್ರಶ್ನೆ ಉತ್ತರದ ರೂಪದಲ್ಲಿ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ... ಕಥೆಯು ಮುಗಿದೇ ಹೋದರೂ ಮುಗಿಯದಿರಲಿ ಬಂಧನ...’ ಹಾಡು ಅಂಕಣದ ಕೊನೆಯ ಕಂತಿನಲ್ಲಿ. ಆದರೆ ಅದು ವಿಷಾದದ ಹಾಡು. ಪರಾಗಸ್ಪರ್ಶಕ್ಕೂ ವಿಷಾದಕ್ಕೂ ಗಾವುದ ದೂರ. ಇಲ್ಲೇನಿದ್ದರೂ fun (ವಿನೋದ) ಮತ್ತು pun (ಪದವಿನೋದ)ಗಳ ದರ್ಬಾರು. ಅವತ್ತು ಅಂಕಣವನ್ನು ಆರಂಭಿಸುವಾಗ ಸಂಪಾದಕರು ಹೇಳಿದ್ದಾದರೂ ಅದನ್ನೇ- ಫನ್ ಮತ್ತು ಪನ್ ಇರುವ ಅಂಕಣ ಬರೀರಿ ಅಂತ. ನಾನು ಸಂತೋಷದಿಂದ ವಾರವಾರವೂ ಬರೆದದ್ದಾದರೂ ಅದನ್ನೇ- ಒಂದಿಲ್ಲೊಂದು ಫನ್ ಅಥವಾ ಪನ್. ನಿಜ, ಇನ್ನೂ ಅರ್ಥಪೂರ್ಣವಾಗಿ, ಉತ್ತಮವಾಗಿ, ಉಪಯುಕ್ತವಾಗಿ ಬರೆಯಬಹುದಿತ್ತು. ಆದರೂ ಮೆಚ್ಚಿಕೊಂಡಿದ್ದೀರಿ, ಬೆನ್ನುತಟ್ಟಿದ್ದೀರಿ. ಇದೀಗ ಅಂಕಣ ಮುಗಿದರೂ ಈ ಮಧುರಬಾಂಧವ್ಯ ಚಿರಕಾಲ ಮುಂದುವರಿಯಲಿ ಎಂಬ ಆಶಯ. ಅಂಥದೊಂದು ಒಳ್ಳೆಯ ಹಾರೈಕೆಯೊಂದಿಗೆ ವಿಷಾದಗೀತೆಯನ್ನು ಹೀಗೆ ವಿನೋದಗೀತೆಯಾಗಿಸೋಣ: ‘ಫನ್ಇನ ಕಾಲಂ ಬರಿ... ಬರೆದೆನು ಪನ್ನೀರಲಿ... ಕಾಲಂ ಮುಗಿದೇ ಹೋದರೂ... ಮುಗಿಯದಿರಲಿ ಬಂಧನ.’ ಇದರಲ್ಲಿ ಕೆಮ್ಮಿಲ್ಲ, ಕೆಮ್ಮಂಗಿಲ್ಲ! ಶುಭಂ. ನಮಸ್ಕಾರ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 19, 2012
Cough in Filmsongs
Saturday May 19, 2012
Saturday May 19, 2012
ದಿನಾಂಕ 20 ಮೇ 2012ರ ಸಂಚಿಕೆ...
ಚಿತ್ರಗೀತೆಗಳಲ್ಲಿ ವಿಚಿತ್ರ ಕೆಮ್ಮು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಂಕಣಬರಹಕ್ಕೆ ನಿಮಗೆ ವಿಷಯ ಹೇಗೆ ಹೊಳೆಯುತ್ತದೆ? ಪೂರಕ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸುತ್ತೀರಿ? ಮೊದಲಿಂದ ಕೊನೆವರೆಗೂ ಓದಿಸಿಕೊಳ್ಳುವಂತೆ ವಿಷಯಗಳನ್ನು ಹೇಗೆ ಪೋಣಿಸುತ್ತೀರಿ? ಇದಕ್ಕೆಲ್ಲ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ? ನಮಗೂ ಸ್ವಲ್ಪ ಹೇಳಿಕೊಡ್ತೀರಾ? - ಪರಾಗಸ್ಪರ್ಶ ಓದುಗಮಿತ್ರರಲ್ಲಿ ಹಲವರು ಈ ಪ್ರಶ್ನೆಗಳನ್ನು ನನಗೆ ಈಗಾಗಲೇ ಕೇಳಿದ್ದಿದೆ. ಅವರಿಗೆಲ್ಲ ನಾನು ಪ್ರಾಮಾಣಿಕವಾಗಿ ಉತ್ತರಿಸಿದ್ದೂ ಇದೆ. ಪರಿಚಯವಾಗಿ ಮುಖತಾ ಭೇಟಿಯಾದಾಗ, ಅಥವಾ ಮಿಂಚಂಚೆಯಲ್ಲಿ ಈ ಪ್ರಶ್ನೋತ್ತರ ನಡೆಯುತ್ತಲೇ ಇರುತ್ತದೆ. ಇನ್ನೂ ಭೇಟಿಯಾಗದ ಮತ್ತು ಇದುವರೆಗೂ ಪತ್ರ ಬರೆಯದ ಅನೇಕರ ಮನಸ್ಸಿನಲ್ಲಿಯೂ ಬಹುಶಃ ಇದೇ/ಇಂಥದೇ ಪ್ರಶ್ನೆಗಳಿವೆ ಎಂದು ನನ್ನೆಣಿಕೆ. ಇವತ್ತು ನನಗೊಂದು ಐಡಿಯಾ ಬಂದಿದೆ, ಏನ್ಗೊತ್ತಾ? ಈ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಇಂದಿನ ಅಂಕಣವನ್ನು ಪ್ರಸ್ತುತಪಡಿಸುವುದು! ಆದರೆ ಇದು ಶುಷ್ಕ ವಿವರಣೆಯ ಥಿಯರಿ ಅಲ್ಲ, ಪ್ರಾಕ್ಟಿಕಲ್ ಎಕ್ಸಾಂಪಲ್. ‘ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್’ಗಳಿಗೆ ಉತ್ತರಗಳ ಜತೆಯಲ್ಲೇ ಈ ವಾರದ ಅಂಕಣವೂ ತಯಾರು. ಪ್ರಶ್ನೆಗಳಿಗೆ ಅಂಕಣವೇ ಉತ್ತರವೂ, ಉದಾಹರಣೆಯೂ. ಟೂ-ಇನ್-ವನ್. ಓದಿ ನೋಡಿ. ಇಷ್ಟವಾದರೆ ವಾಟೆನ್ ಐಡಿಯಾ ಸರ್ಜೀ! ‘ಡಬ್ಬದಿಂದ ಆಚೆಗೂ ಯೋಚಿಸು’ ಎಂಬ ಪದಪುಂಜವನ್ನು ಹಿಂದೊಮ್ಮೆ ಬಳಸಿದ್ದೆ, ನೀವು ಗಮನಿಸಿರಬಹುದು. ಅದು think outside the box ಎನ್ನುವುದಕ್ಕೆ ನನ್ನ ಕನ್ನಡ ತರ್ಜುಮೆ. ನಮ್ಮ ಆಲೋಚನೆಗಳು ಸೀಮಿತ ಚೌಕಟ್ಟಿನೊಳಕ್ಕೇ ಸುತ್ತುತ್ತಿರಬಾರದು, ಅದರಾಚೆಗೂ ವಿಸ್ತರಿಸಿಕೊಳ್ಳಬೇಕು, ಹೊಸ ಸಾಧ್ಯಾಸಾಧ್ಯತೆಗಳನ್ನು ಕಂಡುಕೊಳ್ಳಬೇಕು ಎಂಬ ಒಳ್ಳೆಯ ಅರ್ಥ-ಆಶಯ ಈ ನುಡಿಗಟ್ಟಿಗಿದೆ. ನಿಜಕ್ಕಾದರೆ ಇದನ್ನು ಬಳಸುವುದು ದೈನಂದಿನ ಬದುಕಿನಲ್ಲಿ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ. ಸಮಸ್ಯೆ ಪರಿಹಾರಕ್ಕೆ ಸುಲಭೋಪಾಯಗಳ ಹುಡುಕಾಟದಲ್ಲಿ. ಆದರೆ ನಾನು ಅಂಕಣಕ್ಕೆ ವಿಷಯ ಆರಿಸುವಾಗಲೂ ಡಬ್ಬದಿಂದ ಆಚೆಗೆ ಯೋಚಿಸುವುದುಂಟು. ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ ಇದ್ದರೂ ಅದರಲ್ಲಿ ವೈಶಿಷ್ಟ್ಯದ ಏನೋ ಒಂದು ಹೊಳಹನ್ನು ಹುಡುಕುವುದುಂಟು. ಅದು ಅಂಕಣದ ತಲೆಬರಹದಲ್ಲೇ ವ್ಯಕ್ತವಾದರೆ ಮತ್ತೂ ಒಳ್ಳೆಯದು. ಇವತ್ತಿನ ತಲೆಬರಹವನ್ನೇ ತೆಗೆದುಕೊಳ್ಳಿ. ಚಿತ್ರಗೀತೆಗಳೆಂದರೆ ಎಲ್ಲರಿಗೂ ಗೊತ್ತಿರುವ, ಎಲ್ಲರಿಗೂ ಇಷ್ಟವಾಗುವ ವಿಷಯ. ಆದರೆ ಚಿತ್ರಗೀತೆಗಳಲ್ಲಿ ಕೆಮ್ಮು? ಅದೂ ವಿಚಿತ್ರ ಕೆಮ್ಮು? ಇದೆಂಥದಪ್ಪಾ ಹೊಸ ವಿಚಾರ ಎಂದು ಓದುಗರಿಗೆ ಅಚ್ಚರಿ. ಇಡೀ ಲೇಖನವನ್ನು ಓದುವಂತೆ ತಲೆಬರಹದಿಂದಲೇ ಪ್ರೇರಣೆ. ವಿಷಯ ನಿಗದಿಪಡಿಸಿದ ಮೇಲೆ ಮತ್ತು ತಲೆಬರಹವನ್ನೂ ನಿರ್ಧರಿಸಿದ ಮೇಲೆ (ಕೆಲವೊಮ್ಮೆ ಲೇಖನ ಬರೆದಾದಮೇಲೆ ತಲೆಬರಹ ಕೊಡುವುದೂ ಇದೆ), ಲೇಖನದ ಆರಂಭ ಹೇಗಿರಬೇಕೆಂದು ಯೋಚಿಸುತ್ತೇನೆ. ಅಲ್ಲೂ ಅಷ್ಟೇ, ಸಾಂಪ್ರದಾಯಿಕ ಶೈಲಿಯಲ್ಲಿ ಸವಕಲು ಪದಗಳನ್ನು ಬಳಸಿ ಬರೆದರೆ ಚೆನ್ನಾಗಿರುವುದಿಲ್ಲ. ಒಳ್ಳೆಯ ಇಂಟ್ರೊ (ಪೀಠಿಕೆ) ಪರಿಣಾಮಕಾರಿಯಾಗಿ ಇರುವಂತೆ ಹೇಗೆ ಬರೆಯಬಹುದೆಂದು ಒಂದೆರಡು ನಮೂನೆಗಳನ್ನು ತೂಗಿನೋಡುತ್ತೇನೆ. ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಷಯವಿದ್ದ ಮಾತ್ರಕ್ಕೇ ಯಾವುದಾದರೂ ಚಿತ್ರಗೀತೆಯ ಸಾಲಿನಿಂದಲೋ, ಉಹ್ಹು ಉಹ್ಹು... ಎಂದು ಕೆಮ್ಮುತ್ತಲೋ ಆರಂಭಿಸಬೇಕೆಂದೇನಿಲ್ಲ. ಚಿತ್ರಗೀತೆಗಳನ್ನು (ಕನ್ನಡ ಅಥವಾ ಯಾವುದೇ ಭಾಷೆಯದಿರಲಿ) ಬರಿ ಹಾಡು ಎಂದುಕೊಳ್ಳದೆ ವಿಶೇಷ ಗಮನವಿಟ್ಟು ಕೇಳಿದರೆ ಅವುಗಳದ್ದೇ ವೈವಿಧ್ಯಮಯ ಲೋಕವೊಂದು ತೆರೆದುಕೊಳ್ಳುತ್ತದೆ. ಉದಾಹರಣೆಗೆ ನಡುವೆ ಸಂಭಾಷಣೆ ಸಾಲುಗಳು ಬರುವ ಚಿತ್ರಗೀತೆಗಳಿವೆ; ಗುರು ಹೇಳಿಕೊಟ್ಟದ್ದನ್ನು ಶಿಷ್ಯ/ಶಿಷ್ಯೆ ಪುನರುಚ್ಚರಿಸುವ ರೀತಿಯ ಚಿತ್ರಗೀತೆಗಳಿವೆ; ತಪ್ಪುತಪ್ಪಾಗಿ ಹೇಳಿದರೆ ಪ್ರೀತಿಯಿಂದ ತಿದ್ದುವ (‘ರಾಂಗೇನ ಹಾಲ್ಲಿಯಾಗೆ’ ಎಂದು ವಾಣಿಜಯರಾಂ ಹಾಡಿದಾಗ ‘ಹಾಲ್ಲಿಯಲ್ಲಮ್ಮ ಹಳ್ಳಿ ಹಳ್ಳಿ...’ ಎಂದು ಕಸ್ತೂರಿಶಂಕರ್ ತಿದ್ದಿಹೇಳುವ ‘ಬಿಳಿಹೆಂಡ್ತಿ’ ಚಿತ್ರದ ಗೀತೆ, ‘ಸಾವನ್ಕಾ ಮಹಿನಾ ಪವನ್ ಕರೇ ಶೋರ್...’ ಎಂದು ಲತಾ ಹಾಡಿದಾಗ ‘ಅರೇಬಾಬಾ ಶೋರ್ ನಹೀಂ ಸೋರ್ ಸೋರ್...’ ಎಂದು ಮುಕೇಶ್ ಅದನ್ನು ತಿದ್ದುವ ಹಾಡು), ಅಥವಾ ಸಿಟ್ಟಿನಿಂದ ಗದರಿಸುವ (‘ಶಂಕರಾಭರಣಂ’ ಚಿತ್ರದಲ್ಲಿ ‘ಗಪದಪದಪ ಗಪದಪದಪ’ ಎಂಬ ಸ್ವರಪಾಠವನ್ನು ವಿದ್ಯಾರ್ಥಿಯು ‘ಗಗಪದಪದ ಗಗಪದಪದ’ ಎಂದಾಗ ಶಂಕರಶಾಸ್ತ್ರಿಗಳು ‘ಊಂ’ ಎಂದು ಸಿಟ್ಟಾಗುವ) ಗೀತೆಗಳಿವೆ. ಹೀಗೆ ಪೀಠಿಕೆಯಲ್ಲಿ ಕೆಮ್ಮಿನ ಬಗ್ಗೆ ಏನೂ ಹೇಳದೆ, ಒಟ್ಟಾರೆಯಾಗಿ ಚಿತ್ರಗೀತೆಗಳಲ್ಲಿ ಯಾವ ರೀತಿ ವಿಶೇಷಗಳನ್ನು ಗುರುತಿಸಬಹುದೆಂದು ಸೋದಾಹರಣವಾಗಿ ವಿವರಿಸುತ್ತೇನೆ. ಅಲ್ಲಿಗೆ ಲೇಖನದ ವಿಷಯಗ್ರಹಿಕೆಗೆ ಓದುಗರ ಮನಸ್ಸನ್ನು ಅಣಿಗೊಳಿಸಿದಂತೆ. ಇನ್ನು, ಚಿತ್ರಗೀತೆಗಳಲ್ಲಿ ಕೆಮ್ಮು ಎಂದು ಶೀರ್ಷಿಕೆ ಕೊಟ್ಟ ಮೇಲೆ ಕೆಮ್ಮಿರುವ ಕೆಲವಾದರೂ ಚಿತ್ರಗೀತೆಗಳನ್ನು ಉಲ್ಲೇಖಿಸಬೇಕಲ್ಲ? ಅವೇನು ಸುಲಭವಾಗಿ ಸಿಗುತ್ತವೆಯೇ? ಹುಡುಕಬೇಕು, ನೆನಪಿಸಿಕೊಳ್ಳಬೇಕು. ಒಂದು ಸಂಗತಿಯನ್ನು ನೀವೂ ಗಮನಿಸಿರುತ್ತೀರಿ ಎಂದುಕೊಳ್ಳುತ್ತೇನೆ- ಚಿತ್ರಗೀತೆ ಬಿಡಿ, ಸಾಮಾನ್ಯವಾಗಿ ಸಿನೆಮಾಗಳಲ್ಲಿ ನಟನಟಿಯರಿಗೆ ಕೆಮ್ಮು ಸೀನು ಬಿಕ್ಕಳಿಕೆಗಳೆಲ್ಲ ಬರೋದೇ ಇಲ್ಲ! ಯಾವುದಾದರೂ ಪಾತ್ರ ಕೆಮ್ಮುತ್ತದೆಯೆಂದರೆ ಅದು ಮಾರಣಾಂತಿಕ ಸನ್ನಿವೇಶವೆಂದೇ ಅರ್ಥ. ಚಿತ್ರಗೀತೆಯಲ್ಲಿ ಕೆಮ್ಮು ಕೇಳಿಬರುವುದಂತೂ ದೂರದ ಮಾತು. ನಿರಾಶೆಗೊಂಡು ಲೇಖನಕ್ಕೆ ಆ ವಿಷಯವೇ ಬೇಡವೆಂದು ಬಿಟ್ಟುಬಿಡುವುದೇ? ಖಂಡಿತ ಇಲ್ಲ! ಕೆಮ್ಮಿನ ಚಿತ್ರಗೀತೆಗಳಿಲ್ಲ ಎಂದವರಾರು? ಶಂಕರಾಭರಣಂ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ‘ದೊರಕುನಾ ಇಟುವಂಟಿ ಸೇವಾ...’ ಕೇಳಿದ್ದೀರಾ? ಅದರಲ್ಲಿ ಶಂಕರಶಾಸ್ತ್ರಿಗಳಿಗೆ ವಿಪರೀತ ಕೆಮ್ಮು ಬರಲಾರಂಭಿಸುತ್ತದೆ. ಮೊದಲ ಚರಣದಲ್ಲಿ ‘ನಾದಾತ್ಮ ಕುಡವೈ ನಾಲೋನ ಚೆಲಗಿ...’ ಸಾಲು ಮುಗಿದಾಕ್ಷಣ ಸಂಗೀತನಿರ್ದೇಶಕ ಕೆ.ವಿ.ಮಹಾದೇವನ್ ಒಂದು ಸಿಗ್ನಲ್ ನೋಟ್ ‘ಟೆಡೇಂ...’ ಎಂದು ಕೇಳುವಂತೆ ಮಾಡುತ್ತಾರೆ. ಅದು ಹಿನ್ನೆಲೆ ಕೆಮ್ಮು ಕಲಾವಿದನಿಗೆ ಸೂಚನೆ. ಅಲ್ಲಿಂದ ಏಕ್ದಂ ಕೆಮ್ಮು. ಹಾಡನ್ನು ಶಂಕರಶಾಸ್ತ್ರಿಗಳ ಶಿಷ್ಯ ಮುಂದುವರಿಸುತ್ತಾನೆ. ಹಾಡು ಮುಗಿದಾಗ ಶಾಸ್ತ್ರಿಗಳ (ಸೋಮಯಾಜುಲು) ಬದುಕಿನ ಹಾಡೂ ಮುಗಿಯುತ್ತದೆ. ಜತೆಯಲ್ಲೇ ಶಾರದೆ(ಮಂಜುಭಾರ್ಗವಿ)ಯದೂ. ‘ದೊರಕುನಾ ಇಟುವಂಟಿ ಸೇವಾ...’ ತೆಲುಗಿನಲ್ಲಿ ಎಸ್ಪಿಬಿ ಹಾಡಿದ್ದು ಮತ್ತು ಜತೆಗಿನ ಕೆಮ್ಮು ಅದೆಷ್ಟು ಪರ್ಫೆಕ್ಟಾಗಿ ಬಂದಿತ್ತೆಂದರೆ, ಶಂಕರಾಭರಣಂ ಚಿತ್ರ ಮಲಯಾಳಮ್ಗೆ ಡಬ್ ಆದಾಗ ಹಾಡಿನ ತೆಲುಗು ಆವೃತ್ತಿಯನ್ನೇ ಉಳಿಸಿಕೊಂಡಿದ್ದರಂತೆ. ಶಂಕರಾಭರಣಂ ಹಾಡು ಕೆಮ್ಮಿನ ಚಿತ್ರಗೀತೆಗೆ ಉದಾಹರಣೆಯೇನೋ ಆಯ್ತು, ಆದರೆ ಕನ್ನಡ ಲೇಖನದಲ್ಲಿ ಕನ್ನಡ ಚಿತ್ರಗೀತೆಗಳದೇ ಉದಾಹರಣೆಗಳಿದ್ದರೆ ಒಳ್ಳೆಯದಲ್ಲವೇ? ಖಂಡಿತ. ‘ಸೀತಾ’ ಚಿತ್ರದ ಶುಭಾಶಯ ಹಾಡು! ‘ಮದುವೆಯ ಈ ಬಂಧ ಅನುರಾಗದ ಅನುಬಂಧ...’ ಅದರ ರೇಡಿಯೊ ಆವೃತ್ತಿಯಲ್ಲಿ ಕೇಳಿಬರೋದು ಎರಡೇ ಚರಣಗಳು. ಸಿನೆಮಾ ಆವೃತ್ತಿಯಲ್ಲಿ ಮೂರನೇ ಚರಣವೂ ಇದೆ. ಮೂರನೇ ಚರಣಕ್ಕೆ ಮೊದಲು ಕೆಮ್ಮಿನಿಂದಾಗಿ ಹಾಡು ಒಮ್ಮೆ ನಿಂತು ಮತ್ತೆ ಶುರುವಾಗುತ್ತದೆ. ‘ಹಾಲು ಜೇನು’ ಚಿತ್ರದಲ್ಲಿ ಅಣ್ಣಾವ್ರು ಹಾಡಿರುವ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಇದೆಯಲ್ಲ, ಅದರಲ್ಲಿ ಸರಿತಾ ‘ಏನ್ರೀಇದು ಗಂಡ್ಸಾಗ್ಹುಟ್ಟಿ ನೀವು ಅಡುಗೆ ಮಾಡೋದಾ?’ ಎಂದು ಕೇಳ್ತಾರೆ. ಡಾ.ರಾಜ್ ‘ಉಹ್ಹು ಉಹ್ಹು’ ಎಂದು ಹುಸಿಯಾಗಿ ಕೆಮ್ಮಿದಂತೆ ನಟಿಸಿ ‘ಭೀಮಸೇನ ನಳಮಹಾರಾಜರು ಗಂಡಸರಲ್ಲವೇ...’ ಎಂದು ಹಾಡು ಮುಂದುವರಿಸುತ್ತಾರೆ. ಕ್ಯಾನ್ಸರ್ನಿಂದ ಬಳಲುವ ಸರಿತಾ ಹಾಡಿನ ಕೊನೆಗೆ ನಿಜವಾಗಿಯೂ ಕೆಮ್ಮುತ್ತಾರೆ, ರಾಜ್ ಆಕೆಯನ್ನು ಹೂವಿನಂತೆ ಆರೈಕೆ ಮಾಡುತ್ತಾರೆ. ಮತ್ತೊಂದು ಹಾಡು ‘ಪರಮೇಶಿ ಪ್ರೇಮಪ್ರಸಂಗ’ ಚಿತ್ರದ್ದು- ‘ಉಪ್ಪಿಲ್ಲ ಮೆಣಸಿಲ್ಲ ತರಕಾರಿ ಏನಿಲ್ಲ...’ ಭಲೇ ತಮಾಷೆಯದು. ಅದರಲ್ಲಿ ವಿಚಿತ್ರವೆಂದರೆ ಒಗ್ಗರಣೆಯ ಹೊಗೆಗೆ ಮುಖವೊಡ್ಡಿದರೂ ರಮೇಶ್ಭಟ್ ಸ್ವಲ್ಪವೂ ಕೆಮ್ಮುವುದಿಲ್ಲ! ಕೆಮ್ಮು ಇರುವ ಇನ್ನೂ ಒಂದು ಸೂಪರ್ಹಿಟ್ ಕನ್ನಡ ಚಿತ್ರಗೀತೆ ನನಗೆ ನೆನಪಾಗುತ್ತದೆ. ಅದನ್ನು ನಾನು ಲೇಖನದಲ್ಲಿ ಬಳಸದೆ ಓದುಗರಿಗೆ ರಸಪ್ರಶ್ನೆಯಾಗಿ ಕೊಡುತ್ತೇನೆ. ಲೇಖನವು ಓದುಗರ ಮನಸ್ಸಿನಲ್ಲಿ ಹೆಚ್ಚು ಹೊತ್ತು ಗುಂಯ್ಗುಡುವಂತೆ ಮಾಡುವ ಉದ್ದೇಶ. ಆದರೆ ಲೇಖನಕ್ಕೊಂದು ತಾರ್ಕಿಕ ಅಂತ್ಯವೂ ಬೇಕಲ್ವಾ, ಅದಕ್ಕೋಸ್ಕರ ಒಂದು ತಮಾಷೆ ಪ್ಯಾರಗ್ರಾಫ್ ಹೆಣೆಯುತ್ತೇನೆ- “ಕೊನೆ ಕೆಮ್ಮು: ಸಾಮಾನ್ಯವಾಗಿ ಆಕಳಿಕೆ ಬಗ್ಗೆ ಓದುವಾಗ, ಆಕಳಿಸುತ್ತಿರುವವರನ್ನು ನೋಡಿದಾಗ, ನಮಗೂ ಆಕಳಿಕೆ ಬರುತ್ತದೆ. ಕೆಮ್ಮಿನ ವಿಚಾರ ಹಾಗಲ್ಲ. ಇದೀಗ ಇಷ್ಟೆಲ್ಲ ಕೆಮ್ಮೋಪಾಖ್ಯಾನವನ್ನು ಓದಿದರೂ ನಿಮಗೆ ಒಂಚೂರೂ ಕೆಮ್ಮು ಬಂದಿಲ್ಲವೆಂದೇ ನನ್ನ ಭಾವನೆ. ಹಾಗೂ ಒಂದುವೇಳೆ ಬಂದರೆ ‘ಕೆಮ್ಮಾರೊ ಕೆಮ್ಮ್... ಮಿಟ್ಜಾಯೇ ಕೆಮ್ಮ್...’ ಎಂದು ಹಾಡಿಕೊಂಡರಾಯ್ತು. ಅಷ್ಟೇ.” ಪರಾಗಸ್ಪರ್ಶ ಅಂಕಣಬರಹ ರೂಪುಗೊಳ್ಳುವುದು ಹೇಗೆಂದು ನಿಮಗೀಗ ಅಂದಾಜಾಯ್ತಲ್ಲ? ಹಾಂ, ರಸಪ್ರಶ್ನೆ ಉಳಿದೇಬಿಟ್ಟಿತು! ವಿಷ್ಣುವರ್ಧನ್ ಅಭಿನಯದ ಅತ್ಯಂತ ಹೃದಯಸ್ಪರ್ಶಿ ಚಿತ್ರ, ಕೆಮ್ಮುತ್ತ ಕೆಮ್ಮುತ್ತ ರಕ್ತ ಕಾರಿಕೊಂಡು ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ. ಯಾವ ಚಿತ್ರ? ಯಾವ ಹಾಡು? ಉತ್ತರ ಗೊತ್ತಾದರೆ ಬರೆದು ತಿಳಿಸಿ. ಹಾಗೆಯೇ, ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ಅದನ್ನೂ ಬರೆಯಿರಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 12, 2012
Mothers Day 2012
Saturday May 12, 2012
Saturday May 12, 2012
ದಿನಾಂಕ 13 ಮೇ 2012ರ ಸಂಚಿಕೆ...
ಇವಳು ಸು‘ಸಂಸ್ಕೃತ’ ಅಮ್ಮ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮದರ್ಸ್ ಡೇ ಆಚರಣೆ ನಮಗೆ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದದ್ದು. ಆದರೇನಂತೆ, ಒಳ್ಳೆಯ ವಿಚಾರಗಳು ಎಲ್ಲೆಡೆಯಿಂದಲೂ ಹರಿದು ಬರಬೇಕು. ‘ಆನೋ ಭದ್ರಾ ಕೃತವೋ ಯಂತು ವಿಶ್ವತಃ’ ಎನ್ನುವವರು ನಾವು. ಗಾಂಧೀಜಿಯವರೂ ಅದನ್ನೇ ಹೇಳಿದ್ದರು- ಬೇರೆ ದೇಶಗಳ ಸಂಸ್ಕೃತಿಯ ತಂಗಾಳಿ ಹಿತವಾಗಿ ಸುಳಿದಾಡಲು ಅನುಕೂಲವಾಗುವಂತೆ ನಮ್ಮನೆಯ ಕಿಟಕಿಗಳು ತೆರೆದಿರಲಿ. ಆದರೆ ಯಾವಕಾಲಕ್ಕೂ ಅದು ಚಂಡಮಾರುತವಾಗಿ ನಮ್ಮ ಮನೆಯನ್ನೇ ಸರ್ವನಾಶ ಮಾಡದಿರಲಿ. ಮುಖ್ಯವಾಗಿ ನಮ್ಮತನದ ಅರಿವು ನಮ್ಮೆಲ್ಲರಲ್ಲೂ ಸದಾಕಾಲ ಜಾಗ್ರತವಾಗಿ ಇರಲಿ. ಇವತ್ತು ಅಮ್ಮಂದಿರ ದಿನದ ಸಂದರ್ಭದಲ್ಲೂ ನಮ್ಮ ನಿಲುವು ಅದೇ ಆಗಿರಬೇಕಲ್ಲವೇ? ವರ್ಷಕ್ಕೊಂದು ದಿನ ಮಾತ್ರ ಅಮ್ಮನ ನೆನಪಾಗುವುದೇ ಎಂದು ಮೂಗುಮುರಿಯುವುದು ಬೇಡ. ಇವತ್ತಿನ ದಿನ ಅಮ್ಮಂದಿರನ್ನು ವಿಶೇಷವಾಗಿಯೇ ಗೌರವಿಸೋಣ; ಅದೇವೇಳೆ ನಮ್ಮ ಭಾರತೀಯ ಸಂಸ್ಕೃತಿಯು ಹೇಗೆ ಅಮ್ಮನಿಗೆ ಅನುದಿನವೂ ಅತ್ಯುಚ್ಚ ಸ್ಥಾನವನ್ನು ನೀಡಿದೆ ಎನ್ನುವುದನ್ನು ಮನನ ಮಾಡಿಕೊಳ್ಳೋಣ. ‘ಮಾತೃ ದೇವೋಭವ’ - ತೈತ್ತಿರೀಯ ಉಪನಿಷತ್ನಲ್ಲಿ ಬರುವ ಈ ವಾಕ್ಯವೊಂದೇ ಸಾಕು ತಾಯಿಯು ದೇವರಿಗೆ ಸಮಾನವೆಂಬ ಸಾರ್ವಕಾಲಿಕ ಸತ್ಯವನ್ನು ಭಾರತೀಯ ಸಂಸ್ಕೃತಿಯು ಜಗತ್ತಿಗೆಲ್ಲ ಸಾರಿರುವುದನ್ನು ತಿಳಿಯಲು. ತಂದೆಯ ಸ್ಥಾನ, ಗುರುವಿನ ಸ್ಥಾನ ಆನಂತರದ್ದು. ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಇವೆಲ್ಲ ಆಮೇಲೆ ಬರುವಂಥವು. ‘ನಾನ್ನೋದಕಸಮಂ ದಾನಂ ನ ತಿಥಿರ್ದ್ವಾದಶೀಸಮಾ| ನ ಗಾಯತ್ರ್ಯಾಸಮೋ ಮಂತ್ರೋ ನ ಮಾತುಃ ಪರದೈವತಮ್||’ ಎನ್ನುತ್ತದೆ ಇನ್ನೊಂದು ಸೂಕ್ತಿ. ಅನ್ನದಾನಕ್ಕೆ ಸಮಾನವಾದ ದಾನವಿಲ್ಲ, ಅದರಿಂದ ಸಿಗುವ ತೃಪ್ತಿ ಬೇರಾವ ದಾನದಿಂದಲೂ ಸಿಗದು. ದ್ವಾದಶಿಗೆ ಸಮಾನವಾದ ತಿಥಿಯಿಲ್ಲ, ವಿಷ್ಣುವಿನ ಪೂಜೆಗೆ ಅದು ಶ್ರೇಷ್ಠವಾದುದು. ಗಾಯತ್ರಿಗೆ ಸಮನಾದ ಮಂತ್ರವಿಲ್ಲ, ಅದು ಸುಲಭವೂ ಪಾಪನಾಶಕವೂ ಆಗಿರುವುದು. ತಾಯಿಗಿಂತ ದೊಡ್ಡ ದೇವರಿಲ್ಲ. ಇದ್ದಾನೆಯೇ ಎಂದು ಹುಡುಕುವುದೂ ಬೇಕಿಲ್ಲ. ‘ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ| ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ||’ ರಾಮಾಯಣದಲ್ಲಿ ಅಯೋಧ್ಯಾಕಾಂಡದ ಈ ಶ್ಲೋಕದಲ್ಲೂ ಅದನ್ನೇ ಹೇಳಿದೆ: ಕಣ್ಣೆದುರಿಗಿರುವ ತಾಯಿ-ತಂದೆಯರನ್ನೇ ದೇವರೆಂದುಕೊಳ್ಳದೆ ಕಾಣದ ಬೇರಾವುದೋ ದೇವರನ್ನೇಕೆ ಹುಡುಕುತ್ತಿರುವೆ? ವಾಲ್ಮಿಕೀರಾಮಾಯಣದಲ್ಲಿ ಒಂದು ಸನ್ನಿವೇಶ ಬರುತ್ತದೆ. ರಾವಣನನ್ನು ಕೊಂದ ಮೇಲೆ ರಾಮ, ಸೀತೆ, ಲಕ್ಷ್ಮಣ ಮತ್ತು ವಾನರಸೇನೆಯೆಲ್ಲ ಲಂಕೆಯಿಂದ ಹಿಂದಿರುಗುವ ಘಳಿಗೆ. ವಿಶ್ವಕರ್ಮನಿಂದ ನಿರ್ಮಿತ ಅತ್ಯಾಕರ್ಷಕ ಲಂಕಾನಗರಿಯನ್ನು ಬಿಟ್ಟುಹೋಗುವುದೇ ಎಂದು ಲಕ್ಷ್ಮಣನ ಮನಸ್ಸು ಒಮ್ಮೆ ವಿಚಲಿತವಾಗುತ್ತದೆ. ಅಣ್ಣನಲ್ಲಿ ಹೇಳುತ್ತಾನೆ, ಇಲ್ಲೇ ಇದ್ದುಬಿಡೋಣ ಅಯೋಧ್ಯೆಗೇಕೆ ಹಿಂದಿರುಗಬೇಕು? ಅಲ್ಲಿ ಭರತ ನಮ್ಮನ್ನು ಸೇರಿಸಿಕೊಳ್ಳುತ್ತಾನೋ ಇಲ್ಲವೋ. ಆಗ ರಾಮ ಲಕ್ಷ್ಮಣನಿಗೆ ಹೇಳುವ ಮಾತು ಅತ್ಯಂತ ಮಾರ್ಮಿಕವೂ ಮನೋಜ್ಞವೂ ಆದುದು. ಆತನೆನ್ನುತ್ತಾನೆ, ‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ| ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ|| ಲಕ್ಷ್ಮಣಾ, ಈ ಲಂಕಾನಗರಿಯು ಬಂಗಾರದಿಂದ ನಿರ್ಮಿಸಿದ್ದೇ ಆಗಿರಬಹುದು, ಸಕಲಸೌಕರ್ಯಗಳಿರುವ ಸಮೃದ್ಧ ನಾಡೇ ಆಗಿರಬಹುದು. ಆದರೆ ನನಗೆ ಇದು ಆಕರ್ಷಕವೆನಿಸುವುದಿಲ್ಲ. ಏಕೆಂದರೆ ಹೆತ್ತತಾಯಿ ಮತ್ತು ಜನ್ಮಭೂಮಿ ಇವು ಸ್ವರ್ಗಕ್ಕಿಂತಲೂ ಶ್ರೇಷ್ಠವಾದವು. ನಾನು ತಾಯಿಯಿದ್ದಲ್ಲಿಗೆ, ತಾಯ್ನಾಡಿಗೆ ಹಿಂದಿರುಗಲೇಬೇಕು.’ ರಾಮಾಯಣದ್ದೇ ಇನ್ನೊಂದು ಹೃದಯಸ್ಪರ್ಶಿ ಸನ್ನಿವೇಶ. ಇದು ಭಾಸ ಕವಿಯ ‘ಪ್ರತಿಮಾ’ ನಾಟಕದಲ್ಲಿ ಬರುತ್ತದೆ. ಪಟ್ಟಾಭಿಷೇಕದ ಬದಲು ರಾಮನಿಗೆ ವನವಾಸವೆಂದು ಘೋಷಿಸಿ ಏನೇನೆಲ್ಲ ಉಪದ್ವ್ಯಾಪಗಳನ್ನು ಮಾಡಿದ ಕೈಕೇಯಿಯ ಕುಕೃತ್ಯಗಳ ದೆಸೆಯಿಂದಾಗಿ ದಶರಥನ ಮರಣವಾಗಿದೆ. ರಾಮ-ಸೀತೆ-ಲಕ್ಷ್ಮಣರು ಆಗಲೇ ಕಾಡು ಸೇರಿಯಾಗಿದೆ. ಮಾವನ ಮನೆಗೆ ಹೋಗಿದ್ದ ಭರತ ಶತ್ರುಘ್ನರನ್ನು ಅಯೋಧ್ಯೆಗೆ ಕರೆಸಲಾಗಿದೆ. ಪಟ್ಟಣದ ಹೊರಗಿನ ಉದ್ಯಾನವನದವರೆಗೆ ಅವರು ತಲುಪಿದ್ದಾರೆ. ಅದು ರಘುವಂಶದ ದಿವಂಗತ ಅರಸರೆಲ್ಲರ ಪ್ರತಿಮೆಗಳನ್ನು ನಿಲ್ಲಿಸಿರುವ ಸ್ಥಳ. ಮೊದಲು ದಿಲೀಪ, ರಘು ಮತ್ತು ಅಜ ಈ ಮೂವರ ಪ್ರತಿಮೆಗಳಷ್ಟೇ ಅಲ್ಲಿದ್ದವು. ಈಗ ನಾಲ್ಕನೆಯದಾಗಿ ದಶರಥನ ಪ್ರತಿಮೆಯನ್ನೂ ನೋಡಿ ಭರತ ದಿಗ್ಭ್ರಾಂತನಾಗಿದ್ದಾನೆ, ಮೂರ್ಛೆತಪ್ಪಿ ಬಿದ್ದಿದ್ದಾನೆ. ಹೃದಯವಿದ್ರಾವಕ ದೃಶ್ಯ. ತಂದೆ ತೀರಿಹೋದ ಸಮಾಚಾರ ಭರತನಿಗಿನ್ನೂ ತಿಳಿದಿರಲಿಲ್ಲ, ಅಲ್ಲಿ ತಂದೆಯದೇ ಪ್ರತಿಮೆಯನ್ನು ನೋಡಿದಾಗಲೇ ಅವನಿಗೆ ಗೊತ್ತಾದದ್ದು. ಅಷ್ಟುಹೊತ್ತಿಗೆ ಅಲ್ಲಿಗೆ ಕೌಸಲ್ಯಾ, ಕೈಕೇಯಿ, ಸುಮಿತ್ರೆಯರೂ ಬರುತ್ತಾರೆ. ಅವರು ಪ್ರೀತಿಯಿಂದ ಭರತನ ಮೈದಡವುತ್ತಾರೆ. ಪ್ರತಿಮಾಗೃಹದ ಕಾವಲುಗಾರ ದೇವಕುಲಿಕ ಎಂಬಾತ ನುಡಿಯುತ್ತಾನೆ, ‘ಹಸ್ತಸ್ಪರ್ಶೋಹಿ ಮಾತ್ರೇಣಾಂ ಅಜಲಸ್ಯ ಜಲಾಂಜಲಿಃ - ಭರತನಿಗೆ ಅಮ್ಮಂದಿರ ಕರಸ್ಪರ್ಶವೇ ಬಾಯಾರಿದವನಿಗೆ ಬೊಗಸೆನೀರು ಸಿಕ್ಕಂತಾಯ್ತು.’ ಮಾತೃಹೃದಯದ ಮಮತೆಯ ಸಿಂಚನ ಎಂತಹದೆಂದು ಆ ಯಃಕಶ್ಚಿತ್ ಕಾವಲುಗಾರ ಕೂಡ ಎಷ್ಟು ಮಧುರಭಾವದಿಂದ ಬಣ್ಣಿಸಿದ್ದಾನೆ! ‘ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಂ’ ಎಂದ ಆದಿಶಂಕರಾಚಾರ್ಯರು ತಾಯಿಯನ್ನು ಬಣ್ಣಿಸಿರುವ ಪರಿಯಂತೂ ಅದ್ಭುತ. ದೇವ್ಯಪರಾಧಕ್ಷಮಾಪಣಾ ಸ್ತೋತ್ರದಲ್ಲಿ ಅವರೆನ್ನುತ್ತಾರೆ: ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ| ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ| ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ| ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ|| ಎಲೈ ಜಗನ್ಮಾತೆಯಾದ ನನ್ನ ತಾಯಿಯೇ, ನಿನ್ನ ಪಾದಸೇವೆಯನ್ನು ನಾನು ಮಾಡಲಿಲ್ಲ. ನಿನಗಾಗಿ ಸಾಕಷ್ಟು ಧನವನ್ನೂ ವ್ಯಯಿಸಲಿಲ್ಲ. ಆದರೂ ನೀನು ನನ್ನ ವಿಷಯದಲ್ಲಿ ಅನುಪಮವಾದ ಸ್ನೇಹವಾತ್ಸಲ್ಯಗಳನ್ನು ತೋರಿಸುತ್ತಿರುವೆ. ಲೋಕದಲ್ಲಿ ಯಾವನೋ ಕೆಟ್ಟ ಮಗ ಹುಟ್ಟಿಯಾನು, ಆದರೆ ಕೆಟ್ಟ ತಾಯಿ ಅಂತ ಯಾರೂ ಅನಿಸಿಕೊಳ್ಳುವುದಿಲ್ಲ.’ ಅದೇ ಸ್ತೋತ್ರದಲ್ಲಿ ಇನ್ನೊಂದು ಶ್ಲೋಕವೂ ತಾಯಿಯ ಹೆಚ್ಚುಗಾರಿಕೆಯನ್ನು ಬಣ್ಣಿಸುತ್ತದೆ. ಜಗದಂಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ| ಅಪರಾಧ ಪರಂಪರಾವೃತಂ ನ ಹಿ ಮಾತಾ ಸಮುಪೇಕ್ಷತೇ ಸುತಮ್|| ನೀನು ನನ್ನ ಮೇಲೆ ಸಂಪೂರ್ಣ ಕರುಣೆ ತೋರಿಸುತ್ತಾ ಇರುವುದರಲ್ಲಿ ಆಶ್ಚರ್ಯವೇನಿದೆ? ಏಕೆಂದರೆ ಸಾವಿರ ತಪ್ಪು ಮಾಡಿದ್ದರೂ ಕೂಡ ತಾಯಿಯಾದವಳು ಯಾವತ್ತಿಗೂ ಮಗನನ್ನು ಕಡೆಗಣಿಸುವುದಿಲ್ಲ.’ ಇಲ್ಲಿ ತಾಯಿಯೆಂದರೆ ಹೆತ್ತತಾಯಿಯಲ್ಲ ಜಗನ್ಮಾತೆ, ‘ಯಾದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ’ ಎಂದು ದೇವೀಸಪ್ತಶತಿಯಲ್ಲಿ ಇರುವಂತೆ ಹೇಳಿರುವುದು ಅಂತ ನೀವೆನ್ನಬಹುದು. ಹೌದು, ಶಂಕರಾಚಾರ್ಯರು ಯತಿಗಳು; ಸನ್ಯಾಸ ಸ್ವೀಕರಿಸುವಾಗ ಪ್ರಾಪಂಚಿಕ ಸಂಬಂಧಗಳನ್ನೆಲ್ಲ ಕಡಿದುಕೊಂಡವರು. ಆದರೆ ತಾಯಿಗೂ ಮಗನಿಗೂ ಇರುವ ಕರುಳಿನ ಸಂಬಂಧ ಮಾತ್ರ ಎಂದಿಗೂ ಕಡಿದುಹೋಗುವುದಿಲ್ಲ. ಸನ್ಯಾಸಿಯಾದವನೂ ತನ್ನ ತಾಯಿಗೆ ಗೌರವ ಸೂಚಿಸಲೇಬೇಕು. ಶಂಕರಾಚಾರ್ಯರು ತನ್ನ ಪೂರ್ವಾಶ್ರಮದ ತಾಯಿ ದೈವಾಧೀನರಾದಾಗ ಅಂತ್ಯಕ್ರಿಯೆ ಮಾಡಿದ ನಿದರ್ಶನವನ್ನೇ ಇವತ್ತಿಗೂ ಯತಿಗಳು ಪಾಲಿಸುತ್ತಾರೆ. ಸಂಸ್ಕೃತ ಸುಭಾಷಿತಗಳಲ್ಲಿಯೂ ಮಾತೆಯ ಮಹತ್ವ ಅನೇಕ ರೀತಿಯಲ್ಲಿ ಬಣ್ಣಿಸಲ್ಪಟ್ಟಿದೆ. ‘ಮಾತ್ರಾಸಮಂ ನಾಸ್ತಿ ಶರೀರಪೋಷಣಂ| ಚಿಂತಾಸಮಂ ನಾಸ್ತಿ ಶರೀರಶೋಷಣಂ| ಭಾರ್ಯಾಸಮಂ ನಾಸ್ತಿ ಶರೀರತೋಷಣಂ| ವಿದ್ಯಾಸಮಂ ನಾಸ್ತಿ ಶರೀರಭೂಷಣಂ||’ ಎನ್ನುತ್ತದೆ ಒಂದು ಸೂಕ್ತಿಮುಕ್ತಕ. ನಮ್ಮ ಶರೀರದ ಆರೈಕೆಯನ್ನು ಅಮ್ಮ ಮಾಡಿದಷ್ಟು ಮಜಬೂತಾಗಿ ಬೇರಾರೂ ಮಾಡಲಾರರು. ವಿದ್ಯೆಯ ಮಹತ್ವವನ್ನು ಬಣ್ಣಿಸುವ ಒಂದು ಸುಭಾಷಿತದಲ್ಲೂ ‘ಮಾತೇವ ರಕ್ಷತಿ...’ ಎಂದು ಬರುತ್ತದೆ. ತಾಯಿಯು ಮಗುವನ್ನು ಹೊತ್ತು ಹೆತ್ತು ಸಲಹುವಂತೆ ವಿದ್ಯೆಯೂ ಮನುಷ್ಯನನ್ನು ಪಾಲನೆ ಪೋಷಣೆ ಮಾಡಿ ರಕ್ಷಿಸುತ್ತದೆ ಎಂಬ ವಿವರಣೆ. ‘ಮಾತಾ ಯಸ್ಯ ಗೃಹೇ ನಾಸ್ತಿ ಭಾರ್ಯಾ ವಾ ಪ್ರಿಯವಾದಿನೀ| ಅರಣ್ಯಂ ತೇನ ಗಂತವ್ಯಂ ಯಥಾರಣ್ಯಂ ತಥಾಗೃಹಂ||’ ತಾಯಿಯಿಲ್ಲದ ಮನೆ ಮನೆಯೇ ಅಲ್ಲ, ಕಾಡಿದ್ದಂತೆ. ‘ಮಾತಾ ಮಿತ್ರಂ ಪಿತಾಚೇತಿ ಸ್ವಭಾವತ್ರಿತಯಂ ಹಿತಂ| ಕಾರ್ಯಕಾರಣತಶ್ಚಾನ್ಯೇ ಭವಂತಿ ಹಿತಬುದ್ಧಯಃ||’ ತಾಯಿ-ತಂದೆಯರು ಮತ್ತು ಪ್ರಾಣಸ್ನೇಹಿತರು ಮಾತ್ರ ಅತ್ಯಂತ ಸಹಜತೆಯಿಂದ ನಮ್ಮ ಹಿತಚಿಂತನೆ ಮಾಡುತ್ತಾರೆ. ಬೇರೆಯವರೆಲ್ಲ ತಂತಮ್ಮ ಒಳಿತಿನ ದೃಷ್ಟಿಯಿಂದಷ್ಟೇ ನಮ್ಮ ಕುಶಲ ವಿಚಾರಿಸುತ್ತಾರೆ ಎನ್ನುತ್ತದೆ ಒಂದು ಸುಭಾಷಿತ. ಇನ್ನೂ ಒಂದು ಶ್ಲೋಕದ ಪ್ರಕಾರ ‘ರಾಜಪತ್ನೀ ಗುರೋಃ ಪತ್ನೀ ಮಿತ್ರಪತ್ನೀ ತಥೈವ ಚ| ಪತ್ನೀಮಾತಾ ಸ್ವಸ್ಯ ಮಾತಾ ಪಂಚೈತಾಮಾತರಸ್ಮೃತಃ||’ - ರಾಜಭಾರ್ಯೆ, ಗುರುಭಾರ್ಯೆ, ಮಿತ್ರಭಾರ್ಯೆ, ಹೆಂಡತಿಯ ತಾಯಿ ಮತ್ತು ತನ್ನ ಸ್ವಂತ ತಾಯಿ - ಈ ಐದು ಮಂದಿಯೂ ತಾಯಂದಿರೇ, ಹೆತ್ತತಾಯಿಗೆ ಸಲ್ಲುವ ಗೌರವಕ್ಕೆ ಅರ್ಹರಾದವರೇ. ನಾನು ಹೇಳುವುದಾದರೆ ಬರಿ ಅವರಷ್ಟೇ ಅಲ್ಲ, ಈ ಅಂಕಣ ಓದುವ (ಮತ್ತು ಓದುವವರ) ಅಮ್ಮಂದಿರೆಲ್ಲರೂ ಗೌರವಾರ್ಹರು. ಇವತ್ತು ಅಮ್ಮಂದಿರ ದಿನದ ಶುಭಾಶಯಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕಾದವರು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 05, 2012
Soma Cube
Saturday May 05, 2012
Saturday May 05, 2012
ದಿನಾಂಕ 6 ಮೇ 2012ರ ಸಂಚಿಕೆ...
ಸೋಮರಸವಲ್ಲ ಸೋಮ ಘನ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ರೂಬಿಕ್ಸ್ ಕ್ಯೂಬ್ ಎಂಬ ಸಮಸ್ಯಾಪೂರಣ ಆಟಿಗೆಯ ಹೆಸರನ್ನು ನೀವು ಕೇಳಿರಬಹುದು. ನಿಮ್ಮಲ್ಲಿ ಕೆಲವರು ಅದನ್ನು ಆಡಿರಲೂಬಹುದು. ಘನಾಕೃತಿಯ ಆರು ಮೇಲ್ಮೈಗಳಿಗೆ ಆರು ಬಣ್ಣಗಳ ಜೋಡಣೆಯಲ್ಲಿ ನೀವು ಪರಿಣತರೂ ಇರಬಹುದು. ರೂಬಿಕ್ಸ್ ಕ್ಯೂಬ್ನಷ್ಟು ಜನಪ್ರಿಯವಾಗಿರದ, ಆದರೆ ಅಷ್ಟೇ ಸ್ವಾರಸ್ಯಕರವಾದ, ಅದರಂತೆಯೇ ಸಮಸ್ಯಾಪೂರಣದ ಸವಾಲೊಡ್ಡುವ ಇನ್ನೊಂದು ಆಟಿಗೆ ಇದೆ. ಸೋಮ ಘನ ಎಂದು ಅದರ ಹೆಸರು. ಇವತ್ತಿನ ಅಂಕಣದಲ್ಲಿ ಈ ಸ್ವಾರಸ್ಯಕರ ಆಟಿಗೆಯ ಪರಿಚಯ ಮಾಡಿಕೊಳ್ಳೋಣ. ಮುಖ್ಯವಾಗಿ ಅದಕ್ಕೆ ‘ಸೋಮ’ ಎಂಬ ಹೆಸರೇಕೆ ಬಂತೆಂದು ತಿಳಿದುಕೊಳ್ಳೋಣ. ಸೋಮ ಘನ ರೂಪುಗೊಂಡಿರುವುದು ಒಟ್ಟು ಏಳು ತುಂಡುಗಳಿಂದ. ಚಿತ್ರದಲ್ಲಿ ತೋರಿಸಿದಂತೆ ಏಳು ತುಂಡುಗಳೂ ತಮ್ಮೊಳಗೇ ಪುಟ್ಟಪುಟ್ಟ ಘನಾಕೃತಿಗಳ ಜೋಡಣೆಗಳು. ಒಂದರಲ್ಲಿ ಮೂರು ಘನಾಕೃತಿಗಳಿದ್ದರೆ ಮಿಕ್ಕ ಆರರಲ್ಲಿ ತಲಾ ನಾಲ್ಕು ಘನಾಕೃತಿಗಳ ಜೋಡಣೆಯಿದೆ. ಈ ಏಳು ತುಂಡುಗಳನ್ನು ಒಂದಕ್ಕೊಂದು ಜೋಡಿಸಿ ಪೂರ್ಣ ಘನಾಕೃತಿ ಆಗುವಂತೆ ಮಾಡಬೇಕು. ಅಷ್ಟೇ ಸಮಸ್ಯೆ. ಅದೇನು ಮಹಾ ಅಂತನಿಸುವಷ್ಟು ಸುಲಭವಾಗಿ ತೋರುತ್ತದೆ. ಆದರೆ ತುಂಡುಗಳನ್ನು ಜೋಡಿಸುತ್ತ ಹೋದಂತೆ ಸಮಸ್ಯೆ ನಾವೆಣಿಸಿದ್ದಕ್ಕಿಂತ ಜಟಿಲವಿದೆ ಅನಿಸುತ್ತದೆ. ಸೋಜಿಗವೆಂದರೆ ಏಳು ತುಂಡುಗಳನ್ನು ಪೂರ್ಣ ಘನಾಕೃತಿಯಾಗಿ ಜೋಡಿಸುವ ವಿಧಾನ, ಅಂದರೆ ಸೋಮ ಘನ ಸಮಸ್ಯೆಯ ಪರಿಹಾರ, ಬರಿ ಒಂದೇ ರೀತಿಯದಲ್ಲ. ಬೇರೆಬೇರೆ ರೀತಿಯಲ್ಲಿ ಅದೇ ಏಳು ತುಂಡುಗಳನ್ನು ಜೋಡಿಸಿ ಪೂರ್ಣ ಘನಾಕೃತಿಯಾಗಿಸುವುದು ಸಾಧ್ಯವಿದೆ. ಅಷ್ಟಿದ್ದರೂ ಒಂದು ರೀತಿಯೂ ನಮಗೆ ಬರುವುದಿಲ್ಲವಲ್ಲ ಎಂದು ಹತಾಶೆ, ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇನೆಂಬ ಛಲ- ಸೋಮ ಘನ ಎಡಿಕ್ಟಿವ್ ಆಗುವುದು ಅದೇ ಕಾರಣಕ್ಕೆ. ಸೋಮ ಘನದ ಮೂಲ ಕಲ್ಪನೆ ಮೂಡಿದ್ದು ಡೆನ್ಮಾರ್ಕ್ ದೇಶದ ಪೀಟ್ ಹೆಯ್ನ್ ಎಂಬ ಸಂಶೋಧಕನಿಗೆ. ಆತ ಕವಿ, ತತ್ತ್ವಜ್ಞಾನಿ, ವಿಜ್ಞಾನಿ, ಎಂಜಿನಿಯರ್ ಹೀಗೆ ಬಹುಮುಖ ಪ್ರತಿಭೆಯವನು. ಯೂರೋಪ್ನ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಭೌತಶಾಸ್ತ್ರ ವಿಚಾರಸಂಕಿರಣಗಳಲ್ಲಿ ಪೀಟ್ ಭಾಗವಹಿಸುತ್ತಿದ್ದ. ಒಮ್ಮೆ ಖ್ಯಾತ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ ವರ್ನರ್ ಹೈಸನ್ಬರ್ಗ್ನ ಉಪನ್ಯಾಸ ನಡೆದಿತ್ತು. ಘನ ವಿಚಾರಧಾರೆಗಳು ಒಂದಾದ ಮೇಲೊಂದು ಸಾಗಿದ್ದವು. ಭಾಷಣ ಕೇಳುತ್ತ ಸುಮ್ಮನೆ ಕುಳಿತುಕೊಳ್ಳಲೊಲ್ಲದ ಪೀಟ್ ಮನಸ್ಸಿನಲ್ಲಿ ಘನಾಕೃತಿಗಳದೇ ಗುಂಗಿಹುಳ. ಆಗ ಹೊಳೆದದ್ದೇ ಸೋಮ ಘನ. ಭಾಷಣ ಕೇಳುತ್ತಿರುವಾಗಲೇ ಕಾಗದದಲ್ಲಿ ಪೆನ್ಸಿಲ್ನಿಂದ ರೇಖಾಕೃತಿ ರಚಿಸಿ ಅದನ್ನು ಕತ್ತರಿಸಿ ಪುಟ್ಟ ಘನಾಕೃತಿಗಳನ್ನು ಮಾಡಿಕೊಂಡ ಪೀಟ್ ಭಾಷಣ ಮುಗಿಯುವ ವೇಳೆಗೆ ಅಂತಹ ಏಳು ತುಂಡುಗಳ ಜೋಡಣೆಯಿಂದ ಪೂರ್ಣ ಘನಾಕೃತಿಯನ್ನು ರೂಪಿಸುವುದು ಸಾಧ್ಯ ಎಂಬ ತೀರ್ಮಾನಕ್ಕೆ ಬಂದಿದ್ದ! ಪೀಟ್ನ ಚಟುವಟಿಕೆಯನ್ನು ಉಪನ್ಯಾಸಕಾರ ಹೈಸನ್ಬರ್ಗ್ ಗಮನಿಸದೇ ಇದ್ದದ್ದು ಅವನ ಪುಣ್ಯ. 1933ರಲ್ಲಿ ಪೀಟ್ ಹೆಯ್ನ್ ತನ್ನ ಸೋಮ ಘನ ಸಂಶೋಧನೆಯ ಪೇಟಂಟ್ಗೆ ಅರ್ಜಿ ಸಲ್ಲಿಸಿದ. ಅವನ ಹೊಸ ಆಟಿಗೆ ಡೆನ್ಮಾರ್ಕ್ನಲ್ಲಿ ಹೊಸ ಕ್ರೇಜ್ ಹುಟ್ಟಿಸಿತು. ಆದರೂ ಬೇರೆಡೆಗಳಲ್ಲಿ ಅದು ಅಷ್ಟೇನೂ ಕಾಣಿಸಿಕೊಳ್ಳಲಿಲ್ಲ. 1958ರಲ್ಲಿ ಅಮೆರಿಕದ ಪ್ರಖ್ಯಾತ ಗಣಿತಜ್ಞ ಮಾರ್ಟಿನ್ ಗಾರ್ಡನರ್ ಸೋಮ ಘನದ ಕುರಿತು ಸೈಂಟಿಫಿಕ್ ಅಮೆರಿಕನ್ ಮ್ಯಾಗಜಿನ್ನಲ್ಲಿ ಸಚಿತ್ರ ಲೇಖನ ಬರೆದ. ಅಮೆರಿಕದ ಆಟಿಗೆಗಳ ತಯಾರಕ ಕಂಪನಿ ಪಾರ್ಕರ್ ಬ್ರದರ್ಸ್ 1969ರಲ್ಲಿ ಸೋಮ ಘನದ ಆಕರ್ಷಕ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆಮೇಲೆ ಸೋಮ ಘನ ಒಂದು ಆಟಿಗೆಯಾಗಿ ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಪ್ರಸಿದ್ಧವಾಯ್ತು. ಸೋಮ ಘನದ ಮೂಲ ಘಟಕಗಳು ಏಳು ಪ್ರತ್ಯೇಕ ತುಂಡುಗಳು ಎಂದಿದ್ದೆನಷ್ಟೆ? ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಪ್ರತಿಯೊಂದು ತುಂಡಿನಲ್ಲೂ ತಲಾ ಮೂರು ಘನಗಳಿಂದಾದ ಇಂಗ್ಲಿಷ್ ಎಲ್ ಅಕ್ಷರಾಕಾರದ ಜೋಡಣೆಯಿದೆ. ಏಳರ ಪೈಕಿ ಒಂದು ತುಂಡು ಮಾತ್ರ ಮೂರೇ ಘನಗಳ ಎಲ್ ಜೋಡಣೆ. ಉಳಿದ ಆರರಲ್ಲಿ ಎಲ್ ಆಕೃತಿಗೆ ತಾಗಿಕೊಂಡು ಇನ್ನೊದು ಘನವೂ ಇರುತ್ತದೆ. ಎಲ್ಲ ಸೇರಿ ೨೭ ಪುಟ್ಟ ಘನಾಕೃತಿಗಳು. ಅವುಗಳನ್ನು 3x3x3 ರೀತಿಯಲ್ಲಿ ಜೋಡಿಸಿದರೇನೇ ಪೂರ್ಣ ಘನಾಕೃತಿ ಆಗುವುದು. ಪೀಟ್ ಹೆಯ್ನ್ಗೆ ಮೊದಲು ಹೊಳೆದದ್ದು ಈ ಏಳು ತುಂಡುಗಳ ಕಲ್ಪನೆಯೇ ಹೊರತು ಅವುಗಳನ್ನು ಜೋಡಿಸಿ ಪೂರ್ಣ ಘನಾಕೃತಿ ಮಾಡಬಹುದೆಂಬ ಸಂಗತಿಯಲ್ಲ. ಆದರೆ ಮತ್ತೆಮತ್ತೆ ಆ ಏಳು ತುಂಡುಗಳನ್ನು ಜೋಡಿಸುವ ಪ್ರಯತ್ನದಲ್ಲಿ ಒಮ್ಮೆ ಅಕಸ್ಮಾತ್ತಾಗಿ ಪೂರ್ಣ ಘನಾಕೃತಿ ಮೈದಳೆಯಿತು! ಒಂದೇ ರೀತಿಯಲ್ಲಲ್ಲ 240 ಬೇರೆಬೇರೆ ರೀತಿಗಳಲ್ಲಿ ಪೂರ್ಣ ಘನಾಕೃತಿಯನ್ನು ರೂಪಿಸಬಹುದೆಂಬ ಅರಿವಾದಾಗಂತೂ ಪೀಟ್ನ ಸಂತಸಕ್ಕೆ ಪಾರವೇ ಇಲ್ಲ. ಪೀಟ್ನ ಸಮಕಾಲೀನ ಗಣಿತಜ್ಞರಿಗೂ ಸೋಮ ಘನದಲ್ಲಿ ಆಸಕ್ತಿ ಹುಟ್ಟಿತು. ಜಾನ್ ಹಾರ್ಟನ್ ಕಾನ್ವೆ ಎಂಬೊಬ್ಬ ಗಣಿತಜ್ಞ ಸೋಮ ಘನದ 240 ವಿನ್ಯಾಸರೀತಿಗಳ ಪರಸ್ಪರ ಸಂಬಂಧಗಳನ್ನು ಗಣಿತರೀತ್ಯಾ ವಿಶ್ಲೇಷಿಸಿದ. ಅದನ್ನು ‘ಸೋಮ್ಯಾಪ್’ ಎಂದು ಕರೆದ. ಆ ಸರಣಿಯಲ್ಲಿನ ಒಂದು ವಿನ್ಯಾಸವನ್ನು ಅರ್ಥ ಮಾಡಿಕೊಂಡರೆ ಸಾಕು ಅದರ ನಂತರದ್ದೂ ಸುಲಭವಾಗುತ್ತದೆ. ಏಕೆಂದರೆ ವಿನ್ಯಾಸಗಳಲ್ಲಿನ ಅಂತರವು ಹೆಚ್ಚೆಂದರೆ ಮೂರು ತುಂಡುಗಳ ಅದಲುಬದಲಿನಿಂದ ಆಗಿದ್ದಿರುತ್ತದೆ. ಎಲ್ಲ ೨೪೦ ವಿನ್ಯಾಸಗಳನ್ನು ಕಂಡುಕೊಳ್ಳುವುದು ಒಂದು ಸವಾಲಾದರೆ ಸೋಮ ಘನದ ಏಳು ತುಂಡುಗಳಿಂದ ಪೂರ್ಣ ಘನಾಕೃತಿಯಲ್ಲದ ಬೇರೆ ಹಲವಾರು ವಿನ್ಯಾಸಗಳನ್ನು ರಚಿಸುವುದೂ ಮೋಜಿನ ಸಂಗತಿ. ಒಟ್ಟಿನಲ್ಲಿ ಅಗೆವ ಬುದ್ಧಿಗೆ ಅನಂತ ಅವಕಾಶ. ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕವು ಸೋಮ ಘನದ ಬಗ್ಗೆ ಲೇಖನಗಳನ್ನು ಪ್ರಕಟಿಸಿದ ಮೇಲೆ ಅದರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೋಪಕರಣವಾಗಿ ಸೋಮ ಘನಗಳನ್ನು ರಚಿಸಿದರು. ಮನೋವೈದ್ಯರು ರೋಗಿಗಳ ವಿವೇಚನಾಶಕ್ತಿಯನ್ನು ಅಳೆಯಲು ಸೋಮ ಘನಗಳನ್ನು ಬಳಸತೊಡಗಿದರು. ಒಂಟಿತನದ ಆಲಸ್ಯ ಪರಿಹಾರಕ್ಕೆಂದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೋಮ ಘನಗಳನ್ನು ಕೊಡುವ ಪರಿಪಾಟ ಆರಂಭವಾಯಿತು. ಸೋಮ ಘನಗಳು ಕ್ರಿಸ್ಮಸ್ ಉಡುಗೊರೆಗಳಾದವು. ಸ್ನೇಹಸೌಹಾರ್ದತೆಗಳ ಸಂಕೇತವಾದವು. ಸರಿ, ಆಟಿಗೆಯ ಹೆಸರಿನಲ್ಲಿ ‘ಸೋಮ’ ಎಲ್ಲಿಂದ ಬಂತು? ಅದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯದ್ದೇ! ಸೋಮ ಎಂಬ ಸಂಸ್ಕೃತ ಪದವನ್ನೇ ಪೀಟ್ ಹೆಯ್ನ್ ತನ್ನ ಸಂಶೋಧನೆಯ ಹೆಸರಿಗೆ ಬಳಸಿದ್ದು. ಆಗಲೇ ಹೇಳಿದಂತೆ ಆತ ತತ್ತ್ವಜ್ಞಾನಿಯೂ ಆಗಿದ್ದರಿಂದ ಅವನಿಗೆ ಭಾರತೀಯ ಸಂಸ್ಕೃತಿಯ, ಸಂಸ್ಕೃತ ಭಾಷೆಯ ಪರಿಚಯ ಚೆನ್ನಾಗಿ ಇತ್ತು. ಜೀವವೈವಿಧ್ಯ ಮತ್ತು ಸೃಷ್ಟಿಯ ಪ್ರಚ್ಛನ್ನ ಶಕ್ತಿಯನ್ನು ‘ಸೋಮ’ ಎಂದು ಗುರುತಿಸಬಹುದು, ತನ್ನ ಆಟಿಗೆಯ ಅಗಾಧತೆಯನ್ನು ಆ ಪದ ಸಮರ್ಥವಾಗಿ ಪ್ರತಿನಿಧಿಸಬಲ್ಲದು ಎಂದು ಪೀಟ್ನ ಅಂಬೋಣ. ಅಂತೆಯೇ ‘ಸೋಮ’ ಎನ್ನುವುದು ವೇದಗಳ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಒಂದು ಪೇಯ ಪದಾರ್ಥ. ‘ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ’ ಎಂದು ಬರುತ್ತದೆ ವೇದಮಂತ್ರಗಳಲ್ಲಿ. ಸೋಮ ಬರಿ ಪೇಯವಲ್ಲ, ನಶೆಯೇರಿಸುವಂಥದ್ದು. ತಾನು ಕಂಡುಹಿಡಿದ ಆಟಿಗೆಯೂ ಅದೇರೀತಿ ಅಮಲೇರಿಸುವಂಥದ್ದು ಎನ್ನುವುದು ‘ಸೋಮ’ ಹೆಸರಿಗೆ ಪೀಟ್ ಹೆಯ್ನ್ ಸಮರ್ಥನೆ. ಕಾಕತಾಳೀಯವಾಗಿ, 1930ರ ಆಸುಪಾಸಿನಲ್ಲೇ, ಆಲ್ಡಸ್ ಹಕ್ಸ್ಲೇ ಎಂಬಾತ ಬರೆದ ‘ಬ್ರೇವ್ ನ್ಯೂ ವರ್ಲ್ಡ್’ ಎಂಬ ವೈಜ್ಞಾನಿಕ ಕಾದಂಬರಿಯಲ್ಲೂ ‘ಸೋಮ’ ಪದ ಪ್ರಸ್ತಾಪವಾಗಿತ್ತಂತೆ. ಅಲ್ಲಿ ಅದನ್ನೊಂದು ಅಡ್ಡ ಪರಿಣಾಮಗಳಿಲ್ಲದ ಮಾದಕ ಪೇಯ ಎಂಬರ್ಥದಲ್ಲಿ ವಿವರಿಸಲಾಗಿತ್ತು. ಅತಿಯಾದ ಸಂಭ್ರಮದಲ್ಲೂ, ಒಂಟಿತನದ ಬೇಸರದಲ್ಲೂ ಬಳಸಬಹುದಾದ ಪೇಯ ಎಂದು ಬಣ್ಣಿಸಲಾಗಿತ್ತು. ಪೀಟ್ ಹೆಯ್ನ್ನ ಹೊಸ ಆಟಿಗೆಯೂ ಅದೇ ಗುಣಸ್ವಭಾವದ್ದೆಂದು ಕಂಡುಕೊಂಡ ಜನರು ‘ಸೋಮ’ ಎಂಬ ಹೆಸರನ್ನು ಸುಲಭವಾಗಿ ಅರ್ಥೈಸಿಕೊಂಡರು. ಇದಿಷ್ಟನ್ನು ಓದಿದ ಮೇಲೆ ಸೋಮ ಘನವನ್ನು ಒಂದು ಕೈ ನೋಡಬೇಕು ಎಂದು ನಿಮಗೆ ಅನಿಸಿದರೆ ಅಚ್ಚರಿಯಿಲ್ಲ. ಭಾರತದಲ್ಲಿ ಆಟಿಗೆ ಅಂಗಡಿಗಳಲ್ಲಿ ಸೋಮ ಘನ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಸೋಮ ಘನದ ಏಳು ತುಂಡುಗಳನ್ನು ರಟ್ಟಿನಿಂದ, ಕಟ್ಟಿಗೆಯಿಂದ ಸ್ವಂತ ತಯಾರಿಸಿಕೊಳ್ಳಬಹುದು. ಅಂತರಜಾಲದಲ್ಲಿ Soma cube ಎಂದು ಹುಡುಕಿದರೆ ಸಂಪನ್ಮೂಲಗಳು ಧಾರಾಳ ಸಿಗುತ್ತವೆ. ಒಮ್ಮೆ ಸೋಮ ಘನದ ಮೇಲೆ ಕೈಯಾಡಿಸಿದಿರೋ ಆಮೇಲೆ ನಿಮಗೆ ಅದನ್ನು ಬಿಡುವ ಮನಸ್ಸಾಗಲಿಕ್ಕಿಲ್ಲ. ನಿಜವಾಗಿ ಸೋಮರಸವನ್ನು ಸೇವಿಸಿ ಗೊತ್ತಿಲ್ಲದಿದ್ದರೂ ಅದರ ಕಿಕ್ ಹೀಗೆಯೇ ಇದ್ದಿರಬಹುದೆಂದು ತೋರಿಸುವಷ್ಟು ಕಿಕ್ ಸೋಮ ಘನಕ್ಕಿದೆ. ಒಮ್ಮೆ ಪ್ರಯತ್ನಿಸಿ ನೋಡಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20240320