Episodes
Saturday May 21, 2011
Curry Leaves Of Barcelona
Saturday May 21, 2011
Saturday May 21, 2011
ದಿನಾಂಕ 22 ಮೇ 2011ರ ಸಂಚಿಕೆ...
ಬಾರ್ಸಿಲೊನಾದಲ್ಲಿ ಕರಿಬೇವು ಸಿಕ್ಕ ಸಂತಸ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಸ್ಪೆಷಲ್ ಏನೂ ಇಲ್ಲಾ ಸರ್, ಬಾರ್ಸಿಲೊನಾದಲ್ಲಿ ಒಳ್ಳೆಯ ಭಾರತೀಯ ರೆಸ್ಟೋರೆಂಟ್ ಇಲ್ಲ, ಹಾಗಾಗಿ ಮನೆ ಊಟವೇ ಇಂದು ಕೂಡ. ಶಾಕಾಹಾರಿಗಳಿಗೆ ಆಯ್ಕೆ ಮಾಡಲು ಇಲ್ಲಿ ಏನೂ ಇಲ್ಲ. ಕರಿಬೇವು ಸಿಕ್ಕ ದಿನವೇ ಸ್ಪೆಷಲ್!” - ಎಂದು ಬರೆದಿದ್ದರು ನನ್ನೊಬ್ಬ ಫೇಸ್ಬುಕ್ ಸ್ನೇಹಿತ. ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ನನ್ನ ಸೌಹಾರ್ದ ಪ್ರಶ್ನೆಗೆ ಉತ್ತರವಾಗಿ. ಅವರ ಹೆಸರು ರಂಗಸ್ವಾಮಿ ಮೂಕನಹಳ್ಳಿ. ಮೂಲತಃ ಬೆಂಗಳೂರಿನವರು, ಈಗ ಬಾರ್ಸಿಲೊನಾದಲ್ಲಿದ್ದಾರೆ. ಫೇಸ್ಬುಕ್ ಮೂಲಕವಷ್ಟೇ ನನಗೆ ಪರಿಚಯ. ಇನ್ನೂ ಫೇಸ್ ನೋಡಿಲ್ಲ, ಮಾತನಾಡಿಲ್ಲ. ಬಹುಶಃ ಸಾಫ್ಟ್ವೇರಿಗರೇ ಇರಬಹುದು ಎಂದುಕೊಳ್ಳುತ್ತೇನೆ. ಕನ್ನಡಾಭಿಮಾನಿ ಎಂದು ಅವರ ಪ್ರೊಫೈಲ್ನಿಂದ ಗೊತ್ತಾಗುತ್ತದೆ. ಜತೆಯಲ್ಲೇ ಸ್ಪಾನಿಷ್, ಪೋರ್ಚುಗೀಸ್ ಮತ್ತು ಇಟಾಲಿಯನ್ ಭಾಷೆಗಳನ್ನು ಕಲಿತಿದ್ದಾರೆಂದೂ ತಿಳಿಯುತ್ತದೆ. ಅಂದರೆ ಕೆಲವರ್ಷಗಳಿಂದ ಅಲ್ಲಿ ವಾಸವಾಗಿದ್ದಾರೆ ಎನ್ನಲಡ್ಡಿಯಿಲ್ಲ. ಫೇಸ್ಬುಕ್ ಕ್ಯಾಲೆಂಡರ್ ಯಾರದೆಲ್ಲ ಬರ್ತ್ಡೇ ಎಂದು ಸೂಚಿಸುತ್ತದೆಯೋ ಅವರಿಗೆಲ್ಲ ಆಯಾಯ ದಿನದಂದೇ ಪುಟ್ಟದೊಂದು ಶುಭಾಶಯ ಸಂದೇಶ ಕಳಿಸುವುದು ನನ್ನ ಕ್ರಮ. ಅದು ತೀರಾ ಔಪಚಾರಿಕವಾಗದಂತೆ ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ಪ್ರಶ್ನೆಯನ್ನೂ ಒಂದು ನಗುಮುಖ ಚಿತ್ರವನ್ನೂ ಕೊನೆಯಲ್ಲಿ ಸೇರಿಸುತ್ತೇನೆ. ಅದರಿಂದ ಪ್ರಯೋಜನವಿದೆ- ನನ್ನ ಗ್ರೀಟಿಂಗ್ ಆದರೋ ಎಲ್ಲ ದಿನಗಳಲ್ಲೂ ಎಲ್ಲರಿಗೂ ಒಂದೇ ಮಾದರಿ; ಆದರೆ ಬರುವ ಜವಾಬುಗಳು ಮಾತ್ರ ಸಖತ್ ವೆರೈಟಿಯವು. ವಿಭಿನ್ನ ಅಭಿರುಚಿ, ಖಯಾಲಿ ಮತ್ತು ಜೀವನಶೈಲಿಗಳನ್ನು ಪ್ರತಿಫಲಿಸುವಂಥವು. ರಂಗಸ್ವಾಮಿಯವರದು ಒಂದು ಒಳ್ಳೆಯ ಉದಾಹರಣೆ. ಅವರು ಬರೆದದ್ದರಲ್ಲಿ ಮೊದಲ ಭಾಗ ಅಂಥ ವಿಶೇಷವೇನಲ್ಲ. ಬಾರ್ಸಿಲೊನಾ ಅಷ್ಟೇಅಲ್ಲ ಯುರೋಪ್ನಲ್ಲಿ ಸುಮಾರಷ್ಟು ನಗರಗಳು ಸಸ್ಯಾಹಾರಿಗಳಿಗೆ ಹೇಳಿದಂಥವಲ್ಲ; ಅಲ್ಲಿ ಭಾರತೀಯ ರೆಸ್ಟೋರೆಂಟ್ಗಳಾಗಲೀ ದಿನಸಿ ಅಂಗಡಿಗಳಾಗಲೀ ಇರುವುದಿಲ್ಲವೆಂಬ ವಿಚಾರ ಗೊತ್ತಿದ್ದದ್ದೇ. ಆದರೆ ‘ಕರಿಬೇವು ಸಿಕ್ಕದಿನ ಭರ್ಜರಿ ಸಡಗರ’ ಎಂದಿದ್ದಾರಲ್ಲ ಆ ವಾಕ್ಯವನ್ನು ನಾವು- ತಾಯ್ನಾಡಿನಿಂದ ದೂರವಿರುವವರು- ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು. ನಮ್ಮ ಜೀವನಕ್ಕೆ ರಿಲೇಟ್ ಮಾಡಿಕೊಳ್ಳಬಲ್ಲೆವು. ಆದರೂ ನನ್ನಂತೆ ಹತ್ತುವರ್ಷಗಳ ಹಿಂದೆಯಷ್ಟೇ ಅಮೆರಿಕಕ್ಕೆ ಬಂದವರ, ವಾಷಿಂಗ್ಟನ್ನಂಥ ದೊಡ್ಡ ನಗರಗಳಲ್ಲಿರುವವರ ಸ್ಥಿತಿ ಎಷ್ಟೋ ವಾಸಿ. ನಮಗೆ ಭಾರತದಿಂದ ದೂರವಿದ್ದೇವೆ ಅನಿಸುವುದಿಲ್ಲ. ಎಪ್ಪತ್ತರ ದಶಕದಲ್ಲಿ ಇಲ್ಲಿಗೆ ಬಂದವರ ಅನುಭವಗಳೇ ಬೇರೆ. ಆಗ ಯಾವುದಾದರೂ ಚೈನಿಸ್/ಕೋರಿಯನ್ ತರಕಾರಿ ಅಂಗಡಿಯಲ್ಲಿ ಅಪರೂಪಕ್ಕೆ ಕೊತ್ತಂಬರಿಸೊಪ್ಪು ಸಿಕ್ಕಿದರೆ ನಿಧಿ ಸಿಕ್ಕಿದಂತೆಯೇ. ಹಿರಿಯಮಿತ್ರ ಮೈಸೂರು ನಟರಾಜ್ ನೆನಪಿಸಿಕೊಳ್ಳುತ್ತಿರುತ್ತಾರೆ, ಕೊತ್ತಂಬರಿಸೊಪ್ಪು ಬಂದಿದೆ ಎಂದು ಪರಸ್ಪರ ದೂರವಾಣಿ ಕರೆಗಳನ್ನು ಮಾಡಿಕೊಂಡು ಅಂಗಡಿಗೆ ಮುತ್ತಿಗೆಯಿಡುತ್ತಿದ್ದರಂತೆ. ತಾಜಾ ಇರುವಾಗ ತಂದು ಸಾರು ಮಾಡಿ ಮನೆಯಲ್ಲಿ ಘಮಘಮ ತುಂಬಿ ಸಂಭ್ರಮಿಸುತ್ತಿದ್ದರಂತೆ. ವಿದೇಶದಲ್ಲಿ ಅಪರೂಪವಾಗಿ ಅನಿರೀಕ್ಷಿತವಾಗಿ ನಮ್ಮ ನೆಲದ ವಸ್ತುವೇನಾದರೂ ಕಣ್ಣಿಗೆಬಿದ್ದಾಗಿನ ಸಂಭ್ರಮವಿದೆಯಲ್ಲ ಅದು ಮಾತಿನಲ್ಲಿ/ಅಕ್ಷರಗಳಲ್ಲಿ ವರ್ಣಿಸಲಾಗದ್ದು. ವಿದೇಶವೆಂದರೆ ವಿದೇಶವೇ ಆಗಬೇಕಂತೇನೂ ಇಲ್ಲ, ಆ ವಸ್ತು ಅಡುಗೆಪದಾರ್ಥವೇ ಆಗಿರಬೇಕಂತನೂ ಇಲ್ಲ. ನನ್ನದೇ ಒಂದು ಅನುಭವವನ್ನು ಹೇಳುತ್ತೇನೆ. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ ನಾನು ದಿಲ್ಲಿಯಲ್ಲಿ ಉದ್ಯೋಗಕ್ಕೆ ಸೇರಿದ್ದೆ. ಅದೇ ಮೊದಲಬಾರಿಗೆ ಕರ್ನಾಟಕದಿಂದ ಹೊರಗಿದ್ದದ್ದು. ದಿಲ್ಲಿಯಲ್ಲಿ ಆರೇಳು ತಿಂಗಳ ತರಬೇತಿಯ ನಂತರ ಹೈದರಾಬಾದ್ನಲ್ಲಿ ನನ್ನ ಪೋಸ್ಟಿಂಗ್. ದಿಲ್ಲಿಯಿಂದ ನೇರವಾಗಿ ಹೈದರಾಬಾದ್ಗೆ ನನ್ನ ಬಿಡಾರ ವರ್ಗಾಯಿಸಿದ್ದೆ. ರಜೆಯಲ್ಲೂ ಊರಿಗೆ ಹೋಗಿರಲಿಲ್ಲ, ಕರ್ನಾಟಕದೊಳಗೆ ಪ್ರವೇಶಿಸಿರಲಿಲ್ಲ. ಹೀಗಿರಲು ಒಂದುದಿನ ಹೈದರಾಬಾದ್ನಲ್ಲಿ ಸಿಟಿಬಸ್ನಲ್ಲಿ ಹೋಗುತ್ತಿದ್ದಾಗ ಅಲ್ಲಿನ ಮುಖ್ಯ ಬಸ್ನಿಲ್ದಾಣದಲ್ಲಿ ಒಂದೆರಡು ಕೆಎಸ್ಸಾರ್ಟಿಸಿ ಬಸ್ಸುಗಳು ಕಾಣಸಿಕ್ಕವು. ಹೈದರಾಬಾದ್ನಿಂದ ಗುಲ್ಬರ್ಗ ರಾಯಚೂರು ಮುಂತಾದೆಡೆಗಳಿಗೆ ಹೋಗುವ ಕೆಂಪುಬಸ್ಸುಗಳು. ಅವುಗಳನ್ನು ಕಂಡಾಗ ಆ ಕ್ಷಣದಲ್ಲಾಗಿದ್ದ ಒಂದು ಹಿತಕರ ರೋಮಾಂಚನ ನನಗೆ ಈಗಲೂ ನೆನಪಿದೆ. ಇಂಗ್ಲೆಂಡ್ನಲ್ಲಿರುವ ನನ್ನ ಅಣ್ಣ ಕಳೆದವರ್ಷ ತನಗಾದ ಅಂತಹದೇ ಒಂದು ರೋಮಾಂಚಕ ಕ್ಷಣವನ್ನು ಬಣ್ಣಿಸಿದ್ದರು. ಅದಕ್ಕೆ ಕಾರಣವಾದ ವಸ್ತುವಿನ ಚಿತ್ರವನ್ನು ನನಗೆ ಇಮೇಲ್ನಲ್ಲಿ ಕಳಿಸಿದ್ದರು. ಅವರೆಲ್ಲ ಕುಟುಂಬಸಮೇತ ಫಿನ್ಲ್ಯಾಂಡ್ ದೇಶಕ್ಕೆ ಪ್ರವಾಸ ಹೋಗಿದ್ದರಂತೆ. ಅಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಒಂದು ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ‘ಲ್ಯಾಂಟರ್ನ್’ ದೀಪಗಳನ್ನು ಕಂಡರಂತೆ. ಥೇಟ್ ನಮ್ಮೂರಿನಲ್ಲಿ ಉಪಯೋಗಿಸುವ ಲಾಟೀನಿನದೇ ಆಕಾರ, ಗಾತ್ರ, ರಚನೆ. ಅದೇಥರ ಸರಿಗೆಗಳ ಬಂಧದೊಳಗೆ ಗಾಜಿನ ಬುರುಡೆ, ಸೀಮೆಎಣ್ಣೆ ಟ್ಯಾಂಕ್, ಬತ್ತಿಯ ಜ್ವಾಲೆ ಚಿಕ್ಕದುದೊಡ್ಡದು ಮಾಡಲು ದುಂಡಗಿನ ಬಿರಡೆ... ಎಲ್ಲವೂ ತದ್ರೂಪಿ ನಮ್ಮೂರಿನ ಲಾಟೀನು. ಜರ್ಮನಿಯಲ್ಲಿ ತಯಾರಾದ ಅದನ್ನು 20 ಯೂರೋ (ಸುಮಾರು 1250 ರೂ.) ಕೊಟ್ಟು ಖರೀದಿಸಿ ನೆನಪಿಗೋಸ್ಕರ ತಂದಿಟ್ಟುಕೊಂಡಿದ್ದಾರಂತೆ. ಶಿಕಾಗೊದಲ್ಲಿರುವ ನನ್ನ ಸ್ನೇಹಿತ ಶ್ರೀನಿವಾಸ ರಾವ್ ಒಮ್ಮೆ ನನಗೆ ಇಮೇಲ್ನಲ್ಲಿ ಅಶೋಕ ವೃಕ್ಷದ ಫೋಟೊ ಕಳಿಸಿದ್ದರು. ಜತೆಯಲ್ಲಿ ಒಂದು ಚಿಕ್ಕ ಟಿಪ್ಪಣಿ- “ಶ್ರೀರಾಮ ನನ್ನ ಆರಾಧ್ಯದೈವ. ದಿನದ 24 ಘಂಟೆಯಲ್ಲಿ ಒಂದೆರಡು ನಿಮಿಷವಾದರೂ ನನ್ನ ರಾಮನ ಬಗ್ಗೆ ಏನಾದರೂ ಮೆಲುಕು ಹಾಕುತ್ತಿರುತ್ತೇನೆ. ಮೊನ್ನೆ ಇಲ್ಲಿ ಶಿಕಾಗೋದ ಬೊಟಾನಿಕಲ್ ಗಾರ್ಡನ್ಸ್ನಲ್ಲಿ ‘ಅಶೋಕ’ ವೃಕ್ಷವನ್ನು ನೋಡಿದಾಗ, ಅದರ ಕೆಳಗಿದ್ದ ಬೋರ್ಡ್ನಲ್ಲಿ ಮುದ್ದಾದ ಅಕ್ಷರಗಳಲ್ಲಿ Ashoka Tree ಎಂದು ಬರೆದದ್ದನ್ನು ಓದಿದಾಗ ಅರೆಕ್ಷಣ ನನ್ನನ್ನೇ ಮರೆತಿದ್ದೆ. ಚಿಕ್ಕ ಮರವಾದರೂ ಅದರ ಬುಡದಲ್ಲಿ ನನ್ನ ಸೀತಾಮಾತೆ ಒಮ್ಮೆ ಮಿಂಚಿಹೋದಳು. ಇಂದಿಗೂ ಆ ಕ್ಷಣವನ್ನು ನೆನೆಸಿಕೊಂಡರೆ ನನ್ನ ಮೈನವಿರೇಳುತ್ತದೆ!” ಆಸ್ಟ್ರೇಲಿಯಾದಲ್ಲಿರುವ ಅನುರಾಧಾ ಶಿವರಾಂ (ಅಂಕಣದ ಓದುಗರಾಗಿ ನನಗೆ ಇ-ಪರಿಚಿತರು) ಸಹ ಇದೇರೀತಿಯ ಒಂದು ಅನುಭವವನ್ನು ಇಮೇಲ್ನಲ್ಲಿ ಬಣ್ಣಿಸಿದ್ದರು. “ಸಿಡ್ನಿಯಲ್ಲಿ ನಮ್ಮನೆ ಹತ್ತಿರ ವಾಕ್ ಹೋಗ್ತಿದ್ದಾಗ ಇದ್ದಕ್ಕಿದ್ದಂತೆ ಕೆಂಡಸಂಪಿಗೆ ಹೂವಿನ ಸುವಾಸನೆ ಗಾಳಿಯಲ್ಲಿ ತೇಲಿಬಂತು. ಆ ಪರಿಮಳದೊಡನೆ, ಊರು, ಬಾಲ್ಯ, ಹಬ್ಬ, ನೆನಪುಗಳ ಮೆರವಣಿಗೆಯೇ ಬಂತು. ಮನಸ್ಸು ತಡೆಯದೆ ಆ ಗಿಡವಿದ್ದ ಮನೆಯ ಬಾಗಿಲು ತಟ್ಟಿ ಗಿಡವನ್ನು ಎಲ್ಲಿಂದ ತಂದಿರಿ ಎಂದು ಕೇಳಿದೆ. ಏಕೆಂದರೆ ಅದುವರೆಗೂ ನನಗೆ ಈದೇಶದಲ್ಲಿ ಸಂಪಿಗೆಹೂ ಕಂಡುಬಂದದ್ದೇ ಇಲ್ಲ. ಸಂಪಿಗೆಹೂ ನಮಗೆ ಭಾರತೀಯರಿಗೆ ಎಷ್ಟು ಪ್ರಿಯವಾದದ್ದು, ಪೂಜ್ಯವಾದದ್ದು ಎಂದು ಅದರ ಹಿಂದಿನ ಕಥೆಯನ್ನೂ ಅವರಿಗೆ ವಿವರಿಸಿದೆ. ಅಪರೂಪದ ನರ್ಸರಿಯ ವಿಳಾಸ ಕೊಟ್ಟ ಆ ಆಸ್ಟ್ರೇಲಿಯನ್ ದಂಪತಿ ನಮಗೆ ಇಂದಿಗೂ ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದಾರೆ, ಸಂಪಿಗೆಯ ಸುವಾಸನೆಯಂತೆಯೇ!” ಕುವೆಂಪು ಅದನ್ನೇ ತಾನೆ ಹೇಳಿದ್ದು? ‘ತನ್ನ ನಾಡಿನ ನೀಲಿಯಬಾನು... ತನ್ನ ನಾಡಿನ ಹಸುರಿನಕಾನು... ತನ್ನ ನಾಡಿನ ಹೊಳೆ-ಕೆರೆ-ಬೆಟ್ಟ... ತನ್ನ ನಾಡಿನ ಪಶ್ಚಿಮಘಟ್ಟ... ದೂರದೇಶಕೆ ಹೋದ ಸಮಯದಿ ತನ್ನ ನಾಡನು ನೆನೆನೆನೆದುಬ್ಬದ.. ಮಾನವನಿದ್ದರೆ ಲೋಕದಲಿ ತಾವಿಲ್ಲವನಿಗೆ ನಾಕದಲಿ...’ ದಯವಿಟ್ಟು ತಪ್ಪುತಿಳಿಯಬೇಡಿ. ಇದು ಅನಿವಾಸಿಗಳ ಹುಚ್ಚು ಹಳವಂಡ ಎಂದುಕೊಳ್ಳಬೇಡಿ. ಬಾರ್ಸಿಲೊನಾದಲ್ಲಿ ಕರಿಬೇವಿನ ರುಚಿ, ಸಿಡ್ನಿಯಲ್ಲಿ ಸಂಪಿಗೆ ಪರಿಮಳ, ನ್ಯೂಯಾರ್ಕ್ನ ಕೆನಡಿ ಏರ್ಪೋರ್ಟ್ನಲ್ಲಿ ರಾಶಿರಾಶಿ ವಿಮಾನಗಳ ಮಧ್ಯೆ ಏರ್ಇಂಡಿಯಾ ವಿಮಾನ ನಿಂತ ದೃಶ್ಯ, ವಾಷಿಂಗ್ಟನ್ನ ಕೆನಡಿ ಆರ್ಟ್ಸೆಂಟರ್ನಲ್ಲಿ ರಘುದೀಕ್ಷಿತ್ ಬಣ್ಣದ ಲುಂಗಿಯುಟ್ಟು ಹಾಡಿದ ‘ಕೋಡಗನ ಕೋಳಿ ನುಂಗಿತ್ತಾ...’ ಹಾಡಿನ ಕೇಳ್ಮೆ, ಡಿಸ್ನಿಲ್ಯಾಂಡ್ನ ಗೈಡ್ ‘ದಿಸ್ ಈಸ್ ಎಲಿಫೆಂಟ್ ಹೆಡೆಡ್ ಗಾಡ್ ಆಫ್ ಇಂಡಿಯಾ’ ಎಂದು ತೋರಿಸುವ ಕಲ್ಲಿನ ಗಣೇಶನನ್ನು ತಡವಿದಾಗಿನ ಸ್ಪರ್ಶ- ಈರೀತಿ ಪಂಚೇಂದ್ರಿಯಗಳ ಪರಮಾನಂದಗಳು, ರೋಮಾಂಚಕಾರಿ ಹಿತಾನುಭವದ ನಿದರ್ಶನಗಳು ಇನ್ನೂ ತುಂಬಾ ಇವೆ. ಮುಂದಿನವಾರ ನೋಡೋಣ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 14, 2011
Capital Bikeshare
Saturday May 14, 2011
Saturday May 14, 2011
ದಿನಾಂಕ 15 ಮೇ 2011ರ ಸಂಚಿಕೆ...
ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಸೈಕಲ್ ಎಂದ ಕೂಡಲೇ ಬಹುಶಃ ನಮ್ಮಲ್ಲಿ ಎಷ್ಟೋ ಜನರಿಗೆ ಹಳೆಯ ನೆನಪುಗಳ ದೊಡ್ಡ ಮೂಟೆಯೇ ಬಿಚ್ಚಿಕೊಳ್ಳುತ್ತದೆ. ಸೈಕಲ್ ಸವಾರಿ ಮಾಡುತ್ತ ನೆನಪಿನ ಓಣಿಗಳಲ್ಲಿ ಸುತ್ತಿಬಂದ ಹಾಯಾದ ಅನುಭವವಾಗುತ್ತದೆ. ಆ ಮಟ್ಟಿಗೆ ಹೇಳುವುದಾದರೆ ‘ಬುಲಂದ್ ಭಾರತ್ಕೀ ಬುಲಂದ್ ತಸ್ವೀರ್...’ ಎಂದು ಬಜಾಜ್ ಸ್ಕೂಟರ್ ಎಷ್ಟೇ ಬೀಗಿಕೊಂಡರೂ ಅದಕ್ಕಿಂತ ನೂರುಪಟ್ಟು ಬುಲಂದ್ ತಸ್ವೀರ್ (ವಿಶಾಲ ಚಿತ್ರಹಾಸು) ಸೈಕಲ್ನದು; ಸೈಕಲ್ ಎಂಬ ಪದದ ಪ್ರಸ್ತಾಪವೊಂದೇ ಹೊತ್ತುತರಬಲ್ಲ ಹಚ್ಚಹಸಿರು ನೆನಪುಗಳದು. ಇರಲಿ, ಈ ಲೇಖನ ಅಂತಹ ಸೈಕಲ್ ನೆನಪುಗಳದಲ್ಲ. ಬರೆಯಬೇಕೆಂದುಕೊಂಡಿರುವುದು ಬಾಡಿಗೆ ಸೈಕಲ್ ಬಗ್ಗೆ. ಆದರೆ ಬಾಡಿಗೆ ಸೈಕಲ್ ಎಂದರೇನು? ಮರೆತೇ ಹೋಗಿರಬಹುದಾದ, ಅಥವಾ ಈಗಿನ ಯುವಪೀಳಿಗೆಗೆ ಗೊತ್ತೇ ಇಲ್ಲದ ವಿಚಾರವಾಗಿರುವ ಸಾಧ್ಯತೆಯೂ ಇದೆ! ಅದಕ್ಕಾಗಿ, ಬಾಡಿಗೆ ಸೈಕಲ್ ನೆನಪುಗಳನ್ನು ತಾಜಾಗೊಳಿಸುವ ಒಂದೆರಡು ಉಲ್ಲೇಖಗಳನ್ನು ಇಲ್ಲಿ ಸೇರಿಸುತ್ತಿದ್ದೇನೆ. ಅಲ್ಲಿಇಲ್ಲಿ ಬ್ಲಾಗುಗಳಲ್ಲಿ ಸಿಕ್ಕಿದ ಈ ರಸಘಟ್ಟಿಗಳನ್ನು ಒಮ್ಮೆ ಹಾಗೇಸುಮ್ಮನೆ ಓದಿಕೊಳ್ಳಿ. ಇವು ನಿಮ್ಮದೇ ಅನುಭವಗಳಂತೆ ಭಾಸವಾದರೂ ಆಶ್ಚರ್ಯವಿಲ್ಲ. “ಬಳ್ಳಾರಿಯಲ್ಲಿ ಆರನೇ ತರಗತಿಯಲ್ಲಿದ್ದಾಗಿನ (1962-63) ಕಥೆ. ಕೌಲ್ಬಜಾರಿನ ಗಿರಣಿಗೆ ಅಕ್ಕಿ-ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇಬೇಕಾಗುತ್ತಿತ್ತು. ಅಕ್ಕಿ-ಗೋಧಿ ಚೀಲ ಹ್ಯಾಂಡಲಿಗೆ ತೂಗುಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕ್ಆಫ್ ಆದವನಿಗೆ ಗಿರಣಿಯೆದುರಿನ ಮೋಟುಜಗಲಿಯೇ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ಲ್ಯಾಂಡು!” - ಮಂಗಳೂರಿನ ಅತ್ರಿ ಬುಕ್ಸೆಂಟರ್ ಮಾಲೀಕ ಜಿ.ಎನ್.ಅಶೋಕವರ್ಧನ ‘ಅತ್ರಿ ಬುಕ್ ಸೆಂಟರ್’ ಹೆಸರಿನದೇ ಒಂದು ಬ್ಲಾಗ್ ಬರೆಯುತ್ತಾರೆ. ಅದರಲ್ಲಿ ಬಾಡಿಗೆ ಸೈಕಲ್ ಸವಾರಿಯ ಸುಮಾರಷ್ಟು ನೆನಪುಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಹರ್ಷ ಎಂಬುವರ ಬ್ಲಾಗಿನಲ್ಲೂ ಅಂತಹದೇ ನೆನಪು- “ಆರನೇ ಕ್ಲಾಸಿನಲ್ಲಿದ್ದಾಗ, ಆ ವಯಸ್ಸಿನ ಬಹಳಷ್ಟು ಹುಡುಗರಿಗೆ (ಆ ಕಾಲದಲ್ಲಿ) ಬರುವ ಬಯಕೆಯಂತೆ, ಸೈಕಲ್ ಹೊಡೆಯುವ ಹುಚ್ಚು. ಅದಕ್ಕಾಗಿ ನಾನು ಮನೆಯಲ್ಲಿ ಸಾಕಷ್ಟು ಅಳು-ಜಗಳದ ಅಪ್ಲಿಕೇಶನ್ನುಗಳನ್ನು ಹಾಕಿದ್ದೆ. ಯಾವುದೂ ವರ್ಕೌಟ್ ಆಗುವುದಿಲ್ಲ ಅನ್ನಿಸಿ ಅನಿರ್ದಿಷ್ಟ ಉಪವಾಸ ಹೂಡಿ ಏಟುಗಳನ್ನೂ ತಿಂದಿದ್ದೆ. ನನ್ನ ಬಯಕೆ ತಡೆಯಲಾಗದೆ ಪಾಕೆಟ್ಮನಿಯನ್ನು ಉಳಿಸಿ ಬಾಡಿಗೆ ಸೈಕಲ್ ಓಡಿಸಿದ್ದೆ. ದೊಡ್ಡ ಅಟ್ಲಾಸ್ ಸೈಕಲನ್ನು ‘ಒಳಗಾಲು’ ಹಾಕಿ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ...” ಇನ್ನು, ಚಿಕ್ಕಮಗಳೂರಿನ ಕಾಫಿತೋಟದ ಮಾಲೀಕ ಎಸ್.ಎಂ.ಪೆಜತ್ತಾಯರ ಆತ್ಮಕಥೆ ‘ಕಾಗದದ ದೋಣಿ’ಯಲ್ಲಿ ‘ನಾನೂ ಸೈಕಲ್ ಸವಾರಿ ಕಲಿತೆ’ ಎಂಬ ಅಧ್ಯಾಯ ಬರುತ್ತದೆ. “ನಮ್ಮನೆ ಹತ್ತಿರ ರಾಮ ಎಂಬ ಲೋಕಲ್ ರೌಡಿಯೊಬ್ಬ ಹೊಸದಾಗಿ ಸೈಕಲ್ ಅಂಗಡಿ ತೆರೆದ. ಅವನಲ್ಲಿ ಎಲ್ಲಾ ಸೈಜಿನ ಸೈಕಲ್ಗಳು ಬಾಡಿಗೆಗೆ ಸಿಗುತ್ತಿದ್ದುವು. ಬಾಡಿಗೆ ಒಂದು ಗಂಟೆಗೆ ಎರಡಾಣೆ ಮಾತ್ರ. ಆದರೆ ಪಾಕೆಟ್ಮನಿ ಪದ್ಧತಿ ಇಲ್ಲದ ಆ ಕಾಲದಲ್ಲಿ ಅದು ನಮಗೆ ದೊಡ್ಡ ಮೊತ್ತವೇ ಆಗಿತ್ತು. ಅಲ್ಲದೇ, ರೌಡಿ ರಾಮನು ಸೈಕಲ್ ಹೊಡೆಯಲು ಬರದ ಹುಡುಗರಿಗೆ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ. ಪ್ರತೀ ಬಾಡಿಗೆದಾರ ಹುಡುಗನೂ ರೌಡಿ ರಾಮನೆದುರು ಸೈಕಲ್ಸವಾರಿ ಮಾಡಿ ತೋರಿಸಿಯೇ ಅವನಿಂದ ಸೈಕಲ್ ಪಡೆಯಬೇಕಾಗಿತ್ತು..." ಅಂಥ ನಿರ್ದಯಿ ರಾಮನಿಂದ ಬಾಡಿಗೆ ಸೈಕಲ್ ಪಡೆದು ತನ್ನ ಮಿತ್ರ ರವಿಯ ನೆರವಿನಿಂದ ಸೈಕಲ್ ಕಲಿತ ಸ್ವಾರಸ್ಯಕರ ಪ್ರಸಂಗಗಳನ್ನು ಪೆಜತ್ತಾಯ ಬಣ್ಣಿಸುತ್ತಾರೆ. ಅದೂ ಒಂದು ಕಾಲ. ನಗರಗಳಲ್ಲಿ, ಹದಾ ದೊಡ್ಡ ಎನ್ನಬಹುದಾದ ಪಟ್ಟಣಗಳಲ್ಲಿ ಬಾಡಿಗೆ ಸೈಕಲ್ ಬಳಕೆ ತೀರಾಸಾಮಾನ್ಯ. ಹೆಚ್ಚಾಗಿ ಸೈಕಲ್ ರಿಪೇರಿ ಅಂಗಡಿಗಳಲ್ಲೇ ಸಾಲಾಗಿ ನಿಲ್ಲಿಸಿಟ್ಟ ಬಾಡಿಗೆ ಸೈಕಲ್ಗಳು ಇರುತ್ತಿದ್ದವು. ಗಂಟೆಗೆ ಇಂತಿಷ್ಟು ದುಡ್ಡು ಬಾಡಿಗೆ ಲೆಕ್ಕ. ಸೈಕಲ್ ಪಡೆದು ಉಪಯೋಗದ ನಂತರ ಅಲ್ಲಿಗೇ ಹಿಂದಿರುಗಿಸಬೇಕು. ಬಹುತೇಕ ಮುಖಪರಿಚಯ ಮತ್ತು ನಂಬುಗೆಯಿಂದಲೇ ವ್ಯವಹಾರ. ಕ್ರಮೇಣ ಜನರಲ್ಲಿ ಸ್ವಂತ ವಾಹನ, ಅದರಲ್ಲೂ ಇಂಧನಚಾಲಿತ ವಾಹನ ಬಳಕೆ ಹೆಚ್ಚಿದಂತೆ ಸೈಕಲ್ ರಿಪೇರಿ ಅಂಗಡಿಗಳು ಮುಚ್ಚಿದವು. ಬಾಡಿಗೆ ಸೈಕಲ್ಗಳೂ ಕಣ್ಮರೆಯಾದವು. ಕಾಲಗರ್ಭದಲ್ಲಿ ಹುದುಗಿಹೋದವು. ಕಾಲಾಯ ತಸ್ಮೈನಮಃ. ಆದರೆ ಕಾಲವೂ ಒಂದು ಚಕ್ರ. ಸೈಕಲ್ಚಕ್ರದಂತೆಯೇ ತಿರುಗುತ್ತದೆ. 21ನೇ ಶತಮಾನದ ಮೊದಲ ದಶಕ ಕಳೆಯಿತೆನ್ನುವಾಗ ಇದೀಗ ಮತ್ತೆ ಪ್ರತ್ಯಕ್ಷವಾಗಿವೆ ಬಾಡಿಗೆ ಸೈಕಲ್ಗಳು. ಅದೂ ಎಲ್ಲಿ? ಕಾರ್ ಕಾರ್ ಎಲ್ನೋಡಿದ್ರೂ ಕಾರ್... ನಾಡಾದ ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ! ಕಳೆದವರ್ಷ ಸಪ್ಟೆಂಬರ್ನಲ್ಲಿ ಇಲ್ಲಿ Capital Bikeshare ಎಂಬ ಹೊಸ ವ್ಯವಸ್ಥೆ ಆರಂಭವಾಗಿದೆ. ನಗರದ ವಿವಿಧೆಡೆಗಳಲ್ಲಿ ಬಾಡಿಗೆ ಸೈಕಲ್ ಸ್ಟ್ಯಾಂಡ್ಗಳು. ದಿನದ ೨೪ ಗಂಟೆಗಳೂ ಸಾರ್ವಜನಿಕರ ಸೇವೆಗೆ ತೆರೆದಿರುವ ಈ ಸ್ಟ್ಯಾಂಡ್ಗಳು ಸಂಪೂರ್ಣ ಸ್ವಯಂಚಾಲಿತ. ರೌಡಿರಾಮನೂ ಇಲ್ಲ, ಸೈಕಲ್ ಪಡೆವ ಮುನ್ನ ಅವನಿಂದ ಪರೀಕ್ಷೆಯೂ ಇಲ್ಲ. ಬಾಡಿಗೆ ಸೈಕಲ್ ಬಳಸಲಿಚ್ಛಿಸುವವರು ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯ ಸದಸ್ಯರಾಗಬೇಕು. ವಾರ್ಷಿಕ (75 ಡಾಲರ್), ಮಾಸಿಕ(25 ಡಾಲರ್), ಸಾಪ್ತಾಹಿಕ(15 ಡಾಲರ್) ಅಥವಾ ದೈನಂದಿನ (5 ಡಾಲರ್) ಸದಸ್ಯತ್ವ ಶುಲ್ಕ ಪಾವತಿಸಿ ‘ಕೀ’ ಕಾರ್ಡ್ ಪಡೆದುಕೊಳ್ಳಬೇಕು. ಅದು ಸೈಕಲ್ನ ಬೀಗದಕೈ. ಯಾವುದೇ ಸ್ಟ್ಯಾಂಡ್ಗಾದರೂ ಹೋಗಿ ಅಲ್ಲಿಂದ ಸೈಕಲ್ ಪಡೆದುಕೊಂಡು ಎಷ್ಟು ಸಮಯ ಬೇಕಾದರೂ ಬಳಸಿ ಯಾವುದೇ ಸ್ಟ್ಯಾಂಡ್ನಲ್ಲಾದರೂ ಹಿಂದಿರುಗಿಸಬಹುದು. ಮೊದಲ ಅರ್ಧ ಗಂಟೆ ಬಳಕೆಗೆ ಚಾರ್ಜ್ ಇಲ್ಲ. ಆಮೇಲೆ ಗಂಟೆ ಲೆಕ್ಕದಲ್ಲಿ ಬಳಕೆ ಶುಲ್ಕ. ಇದೀಗ ಆರೇಳು ತಿಂಗಳೊಳಗೇ ಅಪಾರ ಜನಪ್ರಿಯತೆ ಗಳಿಸಿರುವ ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯಲ್ಲಿ ಸುಮಾರು 11000 ಸದಸ್ಯರಿದ್ದಾರೆ, ನೂರಕ್ಕೂ ಹೆಚ್ಚು ಸ್ಟ್ಯಾಂಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಸೈಕಲ್ಗಳಿವೆ. ಗಟ್ಟಿಮುಟ್ಟಾದ ಅಲ್ಯುಮಿನಿಯಂ ಫ್ರೇಮ್, ಕೆಂಪುಬಣ್ಣ, ಮುಂದುಗಡೆ ಕ್ಯಾರಿಯರ್ ಬ್ಯಾಸ್ಕೆಟ್- ಆಕರ್ಷಕ ಸೈಕಲ್ಗಳು. ಗಂಡಸರು-ಹೆಂಗಸರೆನ್ನದೆ, ಸಾಮಾಜಿಕ ಸ್ತರಗಳ ಭೇದವಿಲ್ಲದೆ ಎಲ್ಲ ವರ್ಗದ ಬಳಕೆದಾರರು. ಈಗ ಬೇಸಿಗೆಯ ದಿನಗಳಲ್ಲಂತೂ ಬೈಸಿಕಲ್ಗಳ ಭರಾಟೆ ವಿಪರೀತ. ಮೊನ್ನೆ ಬಿನ್ಲಾಡನ್ ಹತ್ಯೆಯ ವಾರ್ತೆ ಬಂದಾಗ ವಾಷಿಂಗ್ಟನ್ನಲ್ಲಿ ತಡರಾತ್ರೆಯಾಗಿತ್ತು, ಮೆಟ್ರೊರೈಲು/ಸಿಟಿಬಸ್ಸುಗಳ ಸಂಚಾರ ಮುಗಿದಿತ್ತು. ಆ ಅಪರಾತ್ರಿಯಲ್ಲಿ ವ್ಹೈಟ್ಹೌಸ್ ಪ್ರಾಂಗಣದಲ್ಲಿ ಹರ್ಷಾಚರಣೆಗೆ ಬಹಳಷ್ಟು ಜನರು ಹೋದದ್ದು ಬಾಡಿಗೆ ಸೈಕಲ್ ತುಳಿದುಕೊಂಡು! ಮುಂದುವರೆದ ದೇಶಗಳಲ್ಲಿ ಈರೀತಿಯ ಬಾಡಿಗೆ ಸೈಕಲ್ ವ್ಯವಸ್ಥೆ ಶುರುವಾಗುವುದಕ್ಕೆ, ಅತ್ಯಂತ ಜನಪ್ರಿಯವಾಗುವುದಕ್ಕೆ ಪ್ರಬಲ ಕಾರಣಗಳಿವೆ. ತಾಳ್ಮೆಗೆಡಿಸುವ ಸಂಚಾರ ದಟ್ಟಣೆ; ಏರುತ್ತಲೇ ಇರುವ ಇಂಧನ ಬೆಲೆ; ಜತೆಯಲ್ಲೇ ಪರಿಸರ ಮಾಲಿನ್ಯ. ಸಾರ್ವಜನಿಕರು ರೋಸಿಹೋಗಿದ್ದಾರೆ; ಸರಕಾರಗಳು ಸಕಾಲದಲ್ಲಿ ಎಚ್ಚೆತ್ತಿವೆ. ಚೈನಾ ದೇಶದ ಷಾಂಘಾಯ್ನಲ್ಲಿ ಸ್ವಂತ ಕಾರು ಖರೀದಿ ಮತ್ತು ಬಳಕೆ ಬಲುದುಬಾರಿಯಾಗುವಂತೆ ಮಾಡಿದ್ದಾರಂತೆ. ಅಲ್ಲಿ ಮೆಟ್ರೊ ರೈಲ್ವೇನಿಲ್ದಾಣಗಳು ಮತ್ತು ಬಸ್ ನಿಲುಗಡೆ ಸ್ಥಳಗಳ ನಡುವೆ ಜನಸಂಚಾರಕ್ಕೆ ಉಚಿತವಾಗಿ ಬಾಡಿಗೆ ಸೈಕಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ಯುರೋಪ್ನಲ್ಲೂ ಬಾಡಿಗೆ ಸೈಕಲ್ ವ್ಯವಸ್ಥೆ ಕಳೆದ ನಾಲ್ಕೈದು ವರ್ಷಗಳಿಂದ ಚಾಲ್ತಿಯಲ್ಲಿದೆ. ಪ್ಯಾರಿಸ್ನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅಂತೆಯೇ ಡಬ್ಲಿನ್, ಕೊಪನ್ಹೇಗಾನ್, ಬಾರ್ಸಿಲೊನಾ, ಲಂಡನ್ ಮುಂತಾದ ನಗರಗಳಲ್ಲಿ. ಅಮೆರಿಕಾದಲ್ಲಿ ಸದ್ಯಕ್ಕೆ ವಾಷಿಂಗ್ಟನ್ನಲ್ಲಿ (ಬಿಳಿಮನೆಯೂರಿನಲ್ಲಿ = ವ್ಹೈಟ್ಹೌಸ್ ನಗರದಲ್ಲಿ) ಮಾತ್ರ ಆರಂಭವಾಗಿದ್ದು ಇನ್ನು ನ್ಯೂಯಾರ್ಕ್, ಷಿಕಾಗೊ, ಸ್ಯಾನ್ಫ್ರಾನ್ಸಿಸ್ಕೊ ಮೊದಲಾದ ನಗರಗಳಿಗೂ ವ್ಯಾಪಿಸಲಿದೆ. ಸೈಕ್ಲಿಂಗ್ ಮತ್ತು ರೀಸೈಕ್ಲಿಂಗ್- ಬಹುಶಃ ನಾವು ಮಾಡದಿದ್ದರೂ ಪ್ರಕೃತಿಯೇ ನಮ್ಮಿಂದ ಮಾಡಿಸುತ್ತದೆ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20230822