Episodes

Saturday Jul 23, 2011
The joy of reading continues
Saturday Jul 23, 2011
Saturday Jul 23, 2011
ದಿನಾಂಕ 24 ಜುಲೈ 2011ರ ಸಂಚಿಕೆ...
ಪುಸ್ತಕವೆಂದರೆ ಜೇಬಿನೊಳಗಿನ ಉದ್ಯಾನವನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]ಕೈಬೀಸಿ ಕರೆದಿಹುದು ಸಾಹಿತ್ಯ ತೋಟ ಕಣ್ಸೆಳೆಯೆ ದಕ್ಕುವುದು ತಂಪಿನ ನೋಟ ಹಣ್ಣುಂಟು ಕಾಯುಂಟು ಹೀಚುಗಾಯಿಗಳು ಕಂಪನ್ನು ಚೆಲ್ಲುವ ಬಗೆಬಗೆಯ ಹೂಗಳು
ಕುವೆಂಪು ಬೇಂದ್ರೆಯಿಹ ಕನ್ನಡವೇ ಚೆನ್ನ ಮಂಕುತಿಮ್ಮನ ನೀನು ಮರೆಯಬೇಡಣ್ಣ ಅನಕೃ ತರಾಸು ತೇಜಸ್ವಿ ಜೊತೆಗೆ ಬಲ್ಲಾಳ ಕಾರಂತ ಚಿತ್ತಾಲರೆಡೆಗೆ
ತ್ರಿವೇಣಿ ಸಾಯಿಸುತೆ ಇಂದಿರೆಯ ನೆನೆದು ವೈದೇಹಿ ಅನುಪಮಾ ಸುಧೆಯನ್ನು ಮೊಗೆದು ಭೈರಪ್ಪ ಪುತಿನ ಮಾಸ್ತಿ ಗೊರೂರು ಸರಸತಿಯ ಮಕ್ಕಳಿಗೆ ಸಾಟಿ ಯಾರಿಹರು
ಬಂಡಾಯ ಕಹಳೆಯ ಸಿದ್ಧಲಿಂಗಯ್ಯ ಗಾಂಧಿಕ್ಲಾಸಿನ ಕುಂವೀ ನಮ್ಮವರೇ ಅಯ್ಯಾ ವಿವೇಕ ಜಯಂತ ವಸುಧೇಂದ್ರ ಇಷ್ಟ ಓದದೇ ಉಳಿದರೆ ನಮಗೆಯೇ ನಷ್ಟ...‘ಸಾಹಿತ್ಯಿಕ ಓದಿನ ಗೀಳನ್ನು ಇನ್ನಾದರೂ ಬೆಳೆಸಿಕೊಳ್ಳಬೇಕು’ ಎಂಬ ನನ್ನ ನಿರ್ಧಾರವನ್ನು ಶಿಕಾಗೋದಲ್ಲಿರುವ ಸ್ನೇಹಿತೆ ತ್ರಿವೇಣಿ ಶ್ರೀನಿವಾಸ ರಾವ್ ಸ್ವಾಗತಿಸಿದ್ದು ಹೀಗೆ! ಕಳೆದ ವಾರದ ಅಂಕಣವನ್ನು ಓದಿದ ಕೂಡಲೇ ಮನದಲ್ಲಿ ಮೂಡಿದ ಆಶುಕವಿತೆಯಾಗಿ ಇದನ್ನವರು ಬರೆದು ಕಳಿಸಿದ್ದಾರೆ. ಬೇಂದ್ರೆಯವರಿಂದ ಹಿಡಿದು ವಸುಧೇಂದ್ರವರೆಗೆ, ಸಾಯಿಸುತೆಯಿಂದ ಹಿಡಿದು ಸುಧಾಮೂರ್ತಿವರೆಗೆ ಕನ್ನಡ ಸಾಹಿತ್ಯಲೋಕದ ಮುತ್ತುಗಳನ್ನು ಪೋಣಿಸಿ ಸೊಗಸಾದ ಮಾಲೆ ಕಟ್ಟಿದ್ದಾರೆ. ಎಷ್ಟು ಚೆನ್ನಾಗಿದೆ ಅಲ್ಲವೇ? ತ್ರಿವೇಣಿ ಇದನ್ನು ಬರೀ ಸ್ತುತಿಗೀತೆಯಾಗಿ ಹೇಳಿದ್ದಲ್ಲ. ಈ ಎಲ್ಲ ಮಹಾನ್ ಸಾಹಿತಿಗಳ ಅನೇಕ ಕೃತಿಗಳನ್ನು ಅವರು ಓದಿ ಆನಂದಿಸಿದ್ದಾರೆ. ಅಷ್ಟೇಅಲ್ಲ, ಅವರು ಸ್ವತಃ ಓರ್ವ ಬರಹಗಾರ್ತಿ. ಹಿರಿಯ ‘ತ್ರಿವೇಣಿ’ಯವರ ಜಾಡಲ್ಲಿ ಹೆಜ್ಜೆಯಿಟ್ಟವರು. ಚಂದದ ಕಥೆ, ಕವಿತೆ, ಲಲಿತಪ್ರಬಂಧಗಳನ್ನೂ ಬರೆಯುತ್ತಾರೆ. ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯಿಕ ಓದು ಅವರ ಚಿಂತನಾಶಕ್ತಿಯನ್ನು ಪಕ್ವವಾಗಿಸಿದೆ. ಬರವಣಿಗೆಯಲ್ಲಿನ ಸತ್ವವನ್ನು ಹೆಚ್ಚಿಸಿದೆ. ಅಂದಮೇಲೆ ಸಾಹಿತ್ಯ ತೋಟಕ್ಕೆ ಸ್ವಾಗತ ಕೋರಿರುವ ತ್ರಿವೇಣಿಯವರ ಆಶಯಕ್ಕೆ ಹೆಚ್ಚು ಬೆಲೆ. ಸಾಹಿತ್ಯಿಕ ಓದನ್ನು ಇನ್ನೂ ಹೆಚ್ಚುಹೆಚ್ಚು ಜನರು ರೂಢಿಸಿಕೊಳ್ಳುವುದಕ್ಕೆ ಅವರ ಈ ಆಶುಕವಿತೆಯೇ ಒಂದು ಸ್ಫೂರ್ತಿ ಸೆಲೆ. ಹಾಂ! ತೋಟ ಎಂದೊಡನೆ ನೆನಪಾಯ್ತು, A book is like a garden carried in the pocket" ಅಂತ ಒಂದು ಚೈನೀಸ್ ನಾಣ್ಣುಡಿಯಿದೆ. ಪುಸ್ತಕವೆಂದರೆ ಜೇಬಿನೊಳಗೇ ಒಂದು ಪುಟ್ಟ ಉದ್ಯಾನವಿದ್ದಂತೆ. ಆಗಾಗ ಓದಿಕೊಂಡರೆ (ವಾಯುವಿಹಾರಕ್ಕೆ ಮನಸ್ಸನ್ನು ಒಡ್ಡಿಕೊಂಡರೆ) ಆಹ್ಲಾದ ಮತ್ತು ಆನಂದ. ಮೆದುಳಿಗೂ ಅಷ್ಟಿಷ್ಟು ವ್ಯಾಯಾಮ. ನಿಜಕ್ಕೂ ಬಹಳ ಅರ್ಥಗರ್ಭಿತವಾಗಿದೆ ಈ ನಾಣ್ಣುಡಿ. ಅದೇನೇ ಇರಲಿ ಓದಿನ ಹಿರಿಮೆಯನ್ನು ಮತ್ತು ಪುಸ್ತಕಗಳ ಗರಿಮೆಯನ್ನು ನಿಮಗೆ, ಅದರಲ್ಲೂ ನಾನು, ತಿಳಿಸುವುದೇನಿದೆ? ಆದರೆ ಭಾರತದಿಂದ ಹಿಂದಿರುಗುವಾಗ ಸೂಟ್ಕೇಸ್ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದೇನೆ, ಅವು ಯಾವುವಂತ ತಿಳಿಸುತ್ತೇನೆ ಎಂದಿದ್ದೆನಷ್ಟೆ, ಅದನ್ನೇ ಈಗ ಮಾಡುತ್ತೇನೆ. ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು- ಕೆ.ವಿ.ಸುಬ್ಬಣ್ಣ ನೆನಪಿನಲ್ಲಿ ಅಕ್ಷರ ಪ್ರಕಾಶನ ಹೊರತಂದ ‘ಮೊದಲ ಓದು’ ಪುಸ್ತಕಮಾಲೆ- ನನ್ನಂಥವರಿಗೆ ಹೇಳಿ ಮಾಡಿಸಿದ ಪುಸ್ತಕಗಳಿವು. ಒಂದೊಂದರಲ್ಲೂ ನೂರಎಂಟು ಪುಟಗಳು. ಆ ಸರಣಿಯಲ್ಲಿ ಒಟ್ಟು ಐವತ್ತು ಪುಸ್ತಕಗಳಿವೆಯಂತೆ. ಆದಿಕವಿ ಪಂಪನಿಂದ ಹಿಡಿದು ಈಗಿನ ಅನಂತಮೂರ್ತಿವರೆಗೂ ವಿವಿಧ ಲೇಖಕರ ಬರಹಗಳ ಸಂಗ್ರಹ. ಪ್ರಾತಿನಿಧಿಕವಾಗಿ ನನಗೆ ‘ನಾಗೇಶ ಹೆಗಡೆ ಅವರ ಆಯ್ದ ಬರಹಗಳು’ ಪುಸ್ತಕ ಸಿಕ್ಕಿದೆ. ಬಹಳ ಚೆನ್ನಾಗಿದೆ. ಇನ್ನೊಂದು ಪುಸ್ತಕ ನನ್ನ ಓದಿನ ಆರಂಭಕ್ಕೆ ಸರಿಯಾಗಿಯೇ ಇದೆ ಅಂತನಿಸಿದ್ದು ‘ಗಾಂಧೀಜಿಯವರ ಸಂಕ್ಷಿಪ್ತ ಆತ್ಮಕಥನ’ ಎಂಬ ಪುಸ್ತಕ. ಇದನ್ನು ಸುಮಾರಾಗಿ ಹೈಸ್ಕೂಲ್ ವಿದ್ಯಾರ್ಥಿಗಳ ಮಟ್ಟಕ್ಕಾಗುವಂತೆ ಬರೆಯಲಾಗಿದೆ. ಇದರ ಲೇಖಕಿ ಎಚ್.ಎಲ್.ಸೀತಾದೇವಿ. ಅವರ ಹೆಸರನ್ನು ನೀವೂ ಕೇಳಿಯೇ ಇರುತ್ತೀರಿ- ಎಂಬತ್ತರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಓದುತ್ತಿದ್ದರು. ಆಮೇಲೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿಸಂಪಾದಕಿಯೂ ಆಗಿದ್ದರಂತೆ. ನನಗೆ ಪರಾಗಸ್ಪರ್ಶ ಓದುಗರಾಗಿ ಇ-ಪರಿಚಿತರಾದರು, ವಿಶ್ವಾಸಪೂರ್ವಕವಾಗಿ ಪುಸ್ತಕ ಕೊಟ್ಟು ನನ್ನ ಓದಿಗೆ ಪ್ರೇರಕರಾದರು. ಸೀತಾದೇವಿಯ ವಿಚಾರ ಅದಾದರೆ, ಸೀತೆಯನ್ನು ಕುರಿತ ‘ಸೀತಾಂತರಂಗ’ ಎಂಬ ತಮ್ಮ ಕೃತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ ಬೆಂಗಳೂರಿನ ಡಾ.ಜಯಂತಿ ಮನೋಹರ್. ಈ ಕಥಾನಕವು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತಂತೆ. ಮತ್ತೆ, ಸುಧಾದಲ್ಲಿಯೇ ತುಂಬ ವರ್ಷಗಳ ಹಿಂದೆ ಬರುತ್ತಿದ್ದ ‘ಕಜ್ಜಾಯ’ದ ಪುಸ್ತಕರೂಪವೂ ನನಗೆ ಉಡುಗೊರೆಯಾಗಿ ಸಿಕ್ಕಿದೆ, ಸ್ವತಃ ಸುನಂದಾ ಬೆಳಗಾಂವಕರ್ ಅವರಿಂದಲೇ!


Saturday Jul 16, 2011
Need to cultivate Book-Reading habit
Saturday Jul 16, 2011
Saturday Jul 16, 2011
ದಿನಾಂಕ 17 ಜುಲೈ 2011ರ ಸಂಚಿಕೆ...
ಇನ್ನಾದರೂ ಬೆಳೆಸಿಕೊಳ್ಳಬೇಕು ಓದಿನ ಗೀಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅದೊಂದು ಕೊರಗು ನನ್ನನ್ನು ಆಗಾಗ ಕಾಡುವುದಿದೆ. ಏನೆಂದರೆ, ಸಾಹಿತ್ಯಿಕ ಓದಿನ ಒಳ್ಳೆಯ ಹವ್ಯಾಸವನ್ನು ನಾನು ಬೆಳೆಸಿಕೊಳ್ಳಲೇ ಇಲ್ಲ. ಓದು ಕೊಡುವ ಅಮಿತಾನಂದಕ್ಕೆ ನನ್ನನ್ನು ಒಡ್ಡಿಕೊಳ್ಳಲೇ ಇಲ್ಲ. ಇದನ್ನೇಕೆ ಹೇಳುತ್ತಿದ್ದೇನೆಂದರೆ ‘ಇವನು ತುಂಬಾ ಓದಿಕೊಂಡವನಿರಬೇಕು...’ ಎಂದು ನನ್ನ ಬಗ್ಗೆ ಒಂದು ರೀತಿಯ ಸದಭಿಪ್ರಾಯ ಇಟ್ಟುಕೊಂಡವರು ಕೆಲವರಿದ್ದಾರೆ. ಅವರ ಮನಸ್ಸಿನಲ್ಲಿ ಈತ ಸಾಹಿತ್ಯದ ಸರಕನ್ನು ಸಾಕಷ್ಟು ಅರೆದು ಕುಡಿದವನು ಎಂಬ ಭಾವನೆಯಿದೆ. ಪ್ರಾಯಶಃ ನನ್ನ ಅಂಕಣ ಬರವಣಿಗೆಯಲ್ಲಿ ಕಂಡುಬರುವ ವಸ್ತುವೈವಿಧ್ಯವೂ ಅಂಥದೊಂದು ಮಿಥ್ಯೆಗೆ ಕಾರಣವಾಗಿದೆ. ಆದರೆ ವಾಸ್ತವಾಂಶ ಬೇರೆಯೇ ಇದೆ. ಕನ್ನಡದಲ್ಲಾಗಲೀ, ಇಂಗ್ಲಿಷ್ ಅಥವಾ ಬೇರಾವ ಭಾಷೆಯಲ್ಲಾಗಲೀ ನನ್ನ ‘ಸಾಹಿತ್ಯಿಕ’ ಓದು ಸೊನ್ನೆ. ಕಥೆ-ಕಾದಂಬರಿ, ಕಾವ್ಯ-ನಾಟಕ, ಆತ್ಮಚರಿತ್ರೆ ಮುಂತಾದ ಗಂಭೀರ ಸಾಹಿತ್ಯಪ್ರಕಾರಗಳು ಅದೇಕೋ ನನ್ನ ಆಸಕ್ತಿಯ ವ್ಯಾಪ್ತಿಯೊಳಕ್ಕೆ ಇದುವರೆಗೆ ಬಂದೇ ಇಲ್ಲ. Voracious reader ಎನ್ನುವಲ್ಲಿನ voracious ಹಾಗಿರಲಿ, ಒಬ್ಬ ಸಾಮಾನ್ಯ reader ಅಂತನ್ನಿಸಿಕೊಳ್ಳುವಷ್ಟನ್ನೂ ನಾನು ಓದಿಲ್ಲ. ಇದನ್ನೇನೂ ನನ್ನ ಹೆಗ್ಗಳಿಕೆ ಎನ್ನುತ್ತಿಲ್ಲ. ಅಥವಾ ತೀರಾ ಕೀಳರಿಮೆಯಿಂದ ಹೇಳುತ್ತಿರುವುದೂ ಅಲ್ಲ. ಹಾಗಂತ, ಏನನ್ನೂ ಓದುವುದೇ ಇಲ್ಲ ಎಂದೇನಿಲ್ಲ. ಪುಸ್ತಕಗಳೆಂದರೆ ನನಗೂ ಇಷ್ಟವೇ; ಸಾಧ್ಯವಾದಾಗೆಲ್ಲ ಗ್ರಂಥಾಲಯಗಳಿಗೂ ಭೇಟಿ ಕೊಡುತ್ತೇನೆ. ಆದರೆ ಏನಿದ್ದರೂ ‘ಆಕರ ಗ್ರಂಥ’ (reference book)ಗಳೇ ಮೊದಲು ನನ್ನ ದೃಷ್ಟಿಗೆ ಬೀಳುವುದು. ಅಟ್ಲಸ್, ಡಿಕ್ಷನರಿ, ಎನ್ಸೈಕ್ಲೊಪೀಡಿಯಾ, ಇಯರ್ಬುಕ್ನಂಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಕಣ್ಣಾಡಿಸುವುದೆಂದರೆ ಎಲ್ಲಿಲ್ಲದ ಉಮೇದು. ಕೊನೆಗೆ ರೈಲ್ವೇ ಟೈಮ್ಟೇಬಲ್ ಮಾದರಿಯ ಪುಸ್ತಕಗಳಾದರೂ ಸರಿ, ಒಟ್ಟಿನಲ್ಲಿ ಮಾಹಿತಿಯ ಕಣಜ ಆದರಾಯಿತು. ಅಂತಹ ಪುಸ್ತಕಗಳಿಂದ ನಮ್ಮ ಜ್ಞಾನದ ಆಳ ಹೆಚ್ಚುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಜ್ಞಾನದ ಅಗಲ ಖಂಡಿತ ಹೆಚ್ಚುತ್ತದೆ ಎಂದು ನನ್ನ ಅನಿಸಿಕೆ, ಮತ್ತು ಅನುಭವ ಕೂಡ. ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ- ಯಾವುದೋ ಲೇಖನದಲ್ಲಿ ನಾನು ಭೈರಪ್ಪನವರ ಕಾದಂಬರಿಗಳ ಹೆಸರುಗಳನ್ನು ಉಲ್ಲೇಖಿಸುತ್ತೇನೆ ಎಂದುಕೊಳ್ಳಿ. ಆ ಕಾದಂಬರಿಗಳನ್ನು ನಾನು ಅದಾಗಲೇ ಓದಿರುತ್ತೇನೆ ಎಂದು ಅಲ್ಲಿ ಭಾಸವಾಗಬಹುದು. ಆದರೆ ನಿಜಕ್ಕೂ ಓದಿರುವುದಿಲ್ಲ. ಭೈರಪ್ಪನವರ ಎಲ್ಲ ಕಾದಂಬರಿಗಳ ಹೆಸರು, ಪ್ರಕಟಣೆಯ ವರ್ಷ, ಬಂದ ಪ್ರಶಸ್ತಿಗಳು, ಯಾವಯಾವ ಭಾಷೆಗಳಿಗೆ ಅವು ಅನುವಾದಗೊಂಡಿವೆ ಅಂತೆಲ್ಲ ಸಮಗ್ರ ಮಾಹಿತಿ ನನ್ನಲ್ಲಿದೆ. ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇನೆ ಕೂಡ. ಆದರೆ ಒಂದೇಒಂದು ಕಾದಂಬರಿಯನ್ನೂ ನಾನು ಓದಿಲ್ಲ! ಸಂಗೀತ ಹಾಡಲು ಅರಿಯದವನಾದರೂ ಯಾವ ಕೃತಿ ಯಾರ ರಚನೆ ಯಾವ ರಾಗದಲ್ಲಿದೆ ಎಂಬುದನ್ನೆಲ್ಲ ತಿಳಿದುಕೊಂಡಿರುವಂತೆ. ಇದೊಂಥರ ಕಂಪ್ಯೂಟರ್ ಕ್ಷೇತ್ರದಲ್ಲಿ ಮೆಟಾ-ಡೇಟಾ ಇದ್ದಹಾಗೆ. ಮೆಟಾ-ಡೇಟಾ ಎಂದರೆ ಆಕ್ಚುವಲ್ ಡೇಟಾ ಅಲ್ಲ; ಡೇಟಾ ಕುರಿತಾದ ಡೇಟಾ. ಸಾಹಿತ್ಯಿಕ ಉಲ್ಲೇಖಗಳ ಮಟ್ಟಿಗೆ ನನ್ನ ಬಂಡವಾಳ ಬಹುತೇಕವಾಗಿ ಮೆಟಾ-ಡೇಟಾ ಮಾತ್ರ. ಆದರೆ ಈಗ ಹೊಸತೊಂದು ಹುರುಪು ಬಂದಿದೆ. ನಾನೂ ಸಹ ಸಾಹಿತ್ಯಿಕ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಒಮ್ಮಿಂದೊಮ್ಮೆಲೇ ಕಾದಂಬರಿ ಅಲ್ಲದಿದ್ದರೂ, ಯಾವ ತೆರನಾದ ಪುಸ್ತಕಗಳಿಂದ ಇದುವರೆವಿಗೂ ದೂರವಿದ್ದೆನೋ ಅಂತಹ ಪುಸ್ತಕಗಳನ್ನು ಓದತೊಡಗಬೇಕು. ಹೇಗೂ ಈ ದಿನಗಳಲ್ಲಿ ನಾನು ಕೆಲಸಕ್ಕೆ ಹೋಗಿ ಬರುವುದು ಕಾರ್ ಡ್ರೈವ್ ಮಾಡಿಕೊಂಡು ಅಲ್ಲ, ಬಸ್ಸು ಮತ್ತು ಮೆಟ್ರೋ ರೈಲಿನಲ್ಲಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ತಗಲುತ್ತದೆ. ನನ್ನ ಸಹಪ್ರಯಾಣಿಕರಲ್ಲಿ ಹೆಚ್ಚಿನವರು ಪುಸ್ತಕದ ಓದಿನಲ್ಲಿ ಮುಳುಗಿರುವುದನ್ನು ಗಮನಿಸಿದ್ದೇನೆ. ಪುಸ್ತಕ ಅಲ್ಲದಿದ್ದರೆ ಕಿಂಡಲ್, ನುಕ್, ಐಪ್ಯಾಡ್ನಂಥ ಇ-ಪುಸ್ತಕಗಳಲ್ಲಿ ಮುಳುಗಿರುತ್ತಾರೆ. ಅಂತೂ ಅಮೆರಿಕನ್ನರು ಸಿಕ್ಕಾಪಟ್ಟೆ ಓದುತ್ತಾರೆ. ಅಂದಮೇಲೆ ನಾನೂ ಕೂಡ ಅವರಂತೆಯೇ ‘ಓಡಾಟ’ದ ವೇಳೆಯನ್ನು ‘ಓದಾಟ’ದ ವೇಳೆಯನ್ನಾಗಿಸಬಹುದು/ ಆಗಿಸಬೇಕು.


Saturday Jul 09, 2011
Cow-stopper for the gate
Saturday Jul 09, 2011
Saturday Jul 09, 2011
ದಿನಾಂಕ 10 ಜುಲೈ 2011ರ ಸಂಚಿಕೆ...
‘ಹಸು ತಡೆ’ಯನು ದಾಟಿ ಬಾ ಓ ಅತಿಥಿ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ರವಿಯು ಅಜ್ಜನ ಮನೆಗೆ ಹೋದನು. ಅಂಗಳದಲ್ಲಿ ಕಾರಂಜಿಯನ್ನು ಕಂಡನು. ಹಿರಿಹಿರಿ ಹಿಗ್ಗಿದನು... ಇವು ಎರಡನೇ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಿಂದ ನೆನಪಿಸಿಕೊಂಡ ಸಾಲುಗಳು. ರವಿ ಬಹುಶಃ ಪ್ರತಿವರ್ಷವೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಾನೆ. ಅದರಲ್ಲೇನೂ ವಿಶೇಷವಿಲ್ಲ. ಆ ಸರ್ತಿ ಹೋದಾಗ ಅವನಿಗೆ ಅಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ಅಜ್ಜನ ಮನೆಯ ಅಂಗಳದಲ್ಲಿ ಹೊಸದಾಗಿ ಕಟ್ಟಿಸಿದ್ದ ಕಾರಂಜಿ. ಜುಳುಜುಳು ಶಬ್ದದೊಂದಿಗೆ ತಣ್ಣನೆಯ ನೀರು ನೊರೆನೊರೆಯಾಗಿ ಚಿಮ್ಮುವ ಕಾರಂಜಿ. ಬಿರುಬೇಸಿಗೆಯಲ್ಲಿ ಅದಕ್ಕೆ ಮೈಯೊಡ್ಡಬಹುದು. ನೀರಿನಲ್ಲಿ ಯಥೇಚ್ಛ ಆಡಬಹುದು. ಅಜ್ಜ-ಅಜ್ಜಿಯ ಪ್ರೀತಿಕಾರಂಜಿಯ ಜತೆಗೆ ಇದರ ಮೋಜನ್ನೂ ಸವಿಯಬಹುದು. ರವಿಯ ಹಿಗ್ಗಿಗೆ ಅದೇ ಕಾರಣ. ಇಲ್ಲಿ ರವಿ ಮತ್ತು ಕಾರಂಜಿಯನ್ನು ಸಾಂಕೇತಿಕವಾಗಿ ತೆಗೆದುಕೊಂಡು ನೋಡಿ. ಅದು ನಮ್ಮ-ನಿಮ್ಮೆಲ್ಲರ ಆನಂದಾನುಭವವೂ ಆಗುತ್ತದೆ! ದೂರದ ಊರಿನಲ್ಲಿದ್ದು ವರ್ಷಕ್ಕೊಮ್ಮೆಯೋ ಮೂರ್ನಾಲ್ಕು ವರ್ಷಗಳಿಗೊಮ್ಮೆಯೋ ತವರೂರಿಗೆ ಹೋದಾಗ, ಹುಟ್ಟಿ ಬೆಳೆದ ಮನೆಗೆ ಭೇಟಿಕೊಟ್ಟಾಗ, ಅಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು, ಹೊಸ ವಸ್ತು ಅಥವಾ ಸೌಲಭ್ಯ-ಸೌಕರ್ಯಗಳನ್ನು ಗಮನಿಸಿದಾಗಿನ ಪುಳಕವಿದೆಯಲ್ಲ ಅದೊಂಥರ ವಿಶೇಷವಾದುದು. ಅದು, ಹಜಾರದಲ್ಲಿನ ಹೊಸ ತೂಗುಮಂಚ ಇರಬಹುದು, ಅಡುಗೆಮನೆಯಲ್ಲಿ ಹೊಸದೊಂದು ಪರಿಕರ ಇರಬಹುದು, ಗೋಡೆಗಳಿಗೆ ಹೊಸ ಸುಣ್ಣಬಣ್ಣ ಇರಬಹುದು, ಅಮ್ಮನೋ ಅಕ್ಕನೋ ಕೈಕರಣದಿಂದ ಮಾಡಿದ ಕಲಾಕೃತಿಯಿರಬಹುದು, ಕೊನೆಗೆ ಹಳೇ ಪೀಠೋಪಕರಣಗಳನ್ನೇ ಹೊಸ ನಮೂನೆಯಲ್ಲಿ ಜೋಡಿಸಿದ್ದಿರಬಹುದು- ಅಂತೂ “ವಾಹ್! ಎಷ್ಟು ಚೆನ್ನಾಗಿದೆ! ಕಳೆದಸಲ ಬಂದಾಗ ಇದು ಇರಲಿಲ್ಲ...” ಎನ್ನಬಹುದಾದ ಯಾವುದಾದರೂ ಸರಿ. ಮಾತಿಗೆ ಸಾಮಗ್ರಿಯಾಗುತ್ತದೆ, ಮನಸ್ಸಿಗೆ ಮುದ ಕೊಡುತ್ತದೆ, ರವಿಗೆ ಕಾರಂಜಿಯಿದ್ದಂತೆ ನಮಗೆ ಹಿಗ್ಗಿನ ಬುಗ್ಗೆಯಾಗುತ್ತದೆ. ಈ ಸಲ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಅಂಥದೊಂದು ಹೊಸ ಆಕರ್ಷಣೆಯ ಕಾರಂಜಿಯಿತ್ತು. ಅದೇನಂತೀರಾ? ನಮ್ಮ ಮನೆಯ ಗೇಟಿಗೆ ಅಳವಡಿಸಿದ ‘ಹಸು ತಡೆ’! ಇಂಗ್ಲಿಷ್ನಲ್ಲಿ cow-stopper ಅಥವಾ cow-catch ಎನ್ನುತ್ತಾರೆ. ಹಾಗೆಂದರೇನು ಅಂತ ನಿಮಗೆ ತತ್ಕ್ಷಣ ಗೊತ್ತಾಗುವಂತೆ ಇಲ್ಲಿ ಅದರ ಚಿತ್ರವನ್ನು ಕೊಟ್ಟಿದ್ದೇನೆ. ಚಿತ್ರದ ಜತೆಗೆ ಒಂದಿಷ್ಟು ಅಕ್ಷರ-ಚಿತ್ರಣವೂ ಇರಲೆಂದು ಅದನ್ನೂ ಕೊಡುತ್ತಿದ್ದೇನೆ.

Wednesday Jul 06, 2011
Double Decker Airbus A380
Wednesday Jul 06, 2011
Wednesday Jul 06, 2011
ದಿನಾಂಕ 3 ಜುಲೈ 2011ರ ಸಂಚಿಕೆ...
ಎರಡಂತಸ್ತಿನ ಆ ವಿಮಾನದ್ದೇ ಒಂದು ಗತ್ತು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಏರ್ಬಸ್ ಎ-380. ಶಾರ್ಟ್ ಆಗಿ ‘ಎ-ತ್ರೀಎಯ್ಟಿ’. ನಮಗೆಲ್ಲ ಬಿಡಿ, ವಿಮಾನಗಳನ್ನು ಸಿಟಿಬಸ್ಸುಗಳಂತೆ ನೋಡುವ/ಬಳಸುವ ಅಮೆರಿಕನ್ನರಿಗೂ ಅದೊಂದು ಅದ್ಭುತವೆನಿಸುವ ಅಚ್ಚರಿ. ನೋಡಿದೊಡನೆಯೇ ನಿಬ್ಬೆರಗಾಗಿ ವಾಹ್ ಎಂದು ಉದ್ಗಾರ ತರಿಸುವಂಥ ದೈತ್ಯ ವಿಮಾನ. ಈಗ ಪ್ರಪಂಚದ ಅತಿದೊಡ್ಡ ‘ಪ್ಯಾಸೆಂಜರ್ ಫ್ಲೈಟ್’ ಎಂಬ ಹೆಗ್ಗಳಿಕೆ ಅದರದು. ದೊಡ್ಡದೆಂದರೆ ಅಷ್ಟಿಷ್ಟಲ್ಲ, ಒಂದು ಸರಾಸರಿ ಸಾಮಾನ್ಯ ಗಾತ್ರದ ವಿಮಾನಕ್ಕಿಂತ ನಾಲ್ಕು ಪಟ್ಟು ದೊಡ್ಡದು! ರಟ್ಟೆಯ ಬಲದಲ್ಲಿ ಭೀಮನಂಥದು. ಹೊಟ್ಟೆಯೊಳಗೆ ತುಂಬಿಸಿಕೊಳ್ಳುವ ವಿಚಾರದಲ್ಲಿ ಬಕಾಸುರನಂಥದು. ಮಿಕ್ಕೆಲ್ಲ ವಿಮಾನಗಳು ಈ ಗಿಡುಗನೆದುರಿಗೆ ಪುಟ್ಟ ಗುಬ್ಬಚ್ಚಿಗಳಂತೆ ಕಾಣುತ್ತವೆ. ಅಂತಹ ಏರ್ಬಸ್ ಎ-380 ವಿಮಾನದಲ್ಲಿ ಮೊನ್ನೆ ವಾಷಿಂಗ್ಟನ್ನಿಂದ ಪ್ಯಾರಿಸ್ವರೆಗೆ ಪ್ರಯಾಣ ಮಾಡಿದ ಪುಳಕ ನನ್ನದಾಯಿತು. ಅದಿನ್ನೂ ತಾಜಾ ಇರುವಾಗಲೇ ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಇವತ್ತಿನ ಅಂಕಣ ಏರ್ಬಸ್ ಎ-380 ಸ್ಪೆಷಲ್!
Version: 20241125