Episodes

Saturday Oct 22, 2011
Naarada Also Uses Deodorant
Saturday Oct 22, 2011
Saturday Oct 22, 2011
ದಿನಾಂಕ 23 ಅಕ್ಟೋಬರ್ 2011ರ ಸಂಚಿಕೆ...
ನಾರದ ಮುನಿ ಪರಿಮಳಕ್ಕೆ ಅತ್ತರು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವರು ತ್ರಿಲೋಕಸಂಚಾರಿ. ತಂಬೂರಿ ಹಿಡಕೊಂಡು ಹೊರಟರೆಂದರೆ ತಿರುಗಾಟದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ರಲ್ಲ? “ಇದು ಎಂಥಾ ಲೋಕವಯ್ಯಾ...” ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ರಲ್ಲ? (ಈಗಾದ್ರೆ ಮೆಟ್ರೊ ರೈಲ್ನಲ್ಲೂ ಕಾಣಿಸಿಕೊಳ್ತಿದ್ರೋ ಏನೊ). ಇಂತಿರ್ಪ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ (ಟೂರ್ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ). ಯಾವಾಗ ನೋಡಿದರೂ ತಾಜಾ ಮೈ ಕಾಂತಿ. ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು!
ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸಂಭಾಷಣೆಯಲ್ಲಿ ಹಾಸ್ಯರಸೋತ್ಪನ್ನವಾಗುವುದು ಹೆಚ್ಚಾಗಿ ಶ್ಲೇಷೆಯಿಂದಲೇ. ದೂತ, ಕಾವಲುಗಾರ, ಸೇವಕ ಮುಂತಾದ ಚಿಲ್ಲರೆ ಪಾತ್ರಗಳು ರಸವತ್ತಾದ, ಸಮಯಸ್ಫೂರ್ತಿಯ ಶ್ಲೇಷೆಯಿಂದ ಪ್ರೇಕ್ಷಕರನ್ನು ನಗಿಸುತ್ತವೆ. ಕೃಷ್ಣಸಂಧಾನ ಪ್ರಸಂಗದಲ್ಲಿ ಕೃಷ್ಣನ ಪಾತ್ರವನ್ನು ಯಕ್ಷಗಾನದ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ವಾಸುದೇವ ಸಾಮಗರು ನಿರ್ವಹಿಸಿದರೆನ್ನಿ, ಆಗ ದೂತನ ಪಾತ್ರಧಾರಿ ಒಮ್ಮೆಯಾದರೂ “ವಾಸುದೇವಾ ನಿನಗೆ ಗೊತ್ತಿಲ್ಲದ್ದು ಏನಿದೆ ಈ ಪ್ರಪಂಚದಲ್ಲಿ? ಎಲ್ಲದಕ್ಕೂ ನೀನೇ ಕಾರಣ” ಎಂದು ಶ್ಲೇಷೆ ಮಾಡದೆ ಇರುವುದಿಲ್ಲ. ಸಾಮಗರಂಥ ಹಿರಿಯರನ್ನು ಹೆಸರು ಹಿಡಿದು ಏಕವಚನದಲ್ಲಿ ಕರೆಯುವ ಅವಕಾಶದಿಂದ ತಪ್ಪಿಸಿಕೊಳ್ಳುವುದಿಲ್ಲ. ಕೃಷ್ಣನ ಪಾತ್ರ ವಾಸುದೇವ ಸಾಮಗರದ್ದೆಂದು ಗೊತ್ತೇ ಇರುವುದರಿಂದ ಪ್ರೇಕ್ಷಕರಿಗೂ ರೋಮಾಂಚನ. ಕೆಲವೊಮ್ಮೆ ವಿದೂಷಕನ ಪ್ರತ್ಯುತ್ಪನ್ನಮತಿಗೆ ಅನುವಾಗಲೆಂದೇ ರಾಜ/ರಕ್ಕಸ ಪಾತ್ರಗಳು ಸಂಭಾಷಣೆಯಲ್ಲಿ ಕಿಡಿಹಚ್ಚುವುದೂ ಇದೆ. ಆಗ ವಿದೂಷಕನಿದ್ದವನು ಪ್ರಸಂಗ ಪೌರಾಣಿಕವಾದರೂ ಪ್ರಸ್ತುತ ವಿದ್ಯಮಾನದ, ಈಗಿನ ಕಾಲಘಟ್ಟದ ನುಡಿಮತ್ತುಗಳನ್ನು ಶ್ಲೇಷೆಯಾಗಿ ಉದುರಿಸುವುದೂ ಉಂಟು. ಉದಾಹರಣೆಗೆ, “ಆಹಾ! ಅಲ್ಲಿ ನೋಡು. ಸುಂದರ ಸರೋವರದಲ್ಲಿ ನೀರಿನ ತರಂಗಗಳನ್ನು ಕಂಡೆಯಾ?” ಎಂದು ಕೇಳುತ್ತಾನೆ ಅರ್ಜುನ. “ತರಂಗ!? ನಮ್ಮ ಮನೆಯಲ್ಲಿ ಪ್ರತಿ ವಾರ ತರಿಸ್ತೇವೆ. ಈ ವಾರದ್ದು ಇನ್ನೂ ಓದಿ ಆಗಿಲ್ಲ ಅಷ್ಟೇ” ಎನ್ನುತ್ತಾನೆ ದೂತ! “ಅದಲ್ವೋ ನಾನು ಹೇಳಿದ್ದು. ಸುಭದ್ರೆಯ ಚೆಲುವಿನಿಂದ ನನ್ನ ಹೃದಯದಲ್ಲೆದ್ದಿರುವ ಪ್ರೇಮತರಂಗಗಳನ್ನು ಗಮನಿಸಿದೆಯಾ ಎಂದು ನಿನ್ನನ್ನು ಕೇಳಿದ್ದು!” ಅರ್ಜುನ ಉವಾಚ. ಪ್ರೇಕ್ಷಕರ ಚಪ್ಪಾಳೆ.
ಬುದ್ಧಿ ಹರಿತಗೊಳಿಸುವುದಕ್ಕೆ ಶ್ಲೇಷೆ ಖಂಡಿತವಾಗಿಯೂ ಸಹಾಯಕವಾಗುತ್ತದೆ. ನಮ್ಮ ಜನಪದ ಕಾವ್ಯಗಳಲ್ಲಿನ ಒಗಟುಗಳು, ದಾಸಸಾಹಿತ್ಯದಲ್ಲಿನ ‘ಮುಂಡಿಗೆ’ಗಳು ಮುಂತಾದವೆಲ್ಲ ಶ್ಲೇಷೆಯಲ್ಲದೆ ಬೇರೇನಲ್ಲ. ಶಿಶುನಾಳ ಶರೀಫರ ರಚನೆಗಳೂ ಪಾರಮಾರ್ಥಿಕ ತತ್ತ್ವಗಳನ್ನು ಶ್ಲೇಷೆಯಾಗಿ ಒಗಟಿನ ರೂಪದಲ್ಲಿ ತಿಳಿಯಹೇಳುತ್ತವೆ. ಹಾಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ ಕೋಡಗನ ಕೋಳಿ ನುಂಗಿತ್ತಾ. ಅದೇರೀತಿ, ಆತ್ಮವು ಶರೀರವನ್ನು ತೊರೆದು ಹೋಗುವ ಪ್ರಕ್ರಿಯೆಯನ್ನು ಪುರಂದರದಾಸರು ಮಾರ್ಮಿಕವಾಗಿ ಬಣ್ಣಿಸುತ್ತಾರೆ- “ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿತುಂಬಿ ಮಂದಿಯಿರಲು ಕಂಬ ಮುರಿದು ಡಿಂಬ ಬಿದ್ದು ಅಂಬರಕ್ಕೆ ಹಾರಿತಲ್ಲೋ... ರಾಮಾ... ಗಿಳಿಯು ಪಂಜರದೊಳಿಲ್ಲ...” ಕನಕದಾಸರು ಒಂದು ಕೀರ್ತನೆಯಲ್ಲಿ ತರಕಾರಿ ಮಾರುತ್ತಿದ್ದಾರೇನೊ ಅನ್ನಿಸುವಂತೆ “ಪರಮಪುರುಷ ನೀನೆಲ್ಲಿಕಾಯಿ/ ಸರಸಿಯೊಳಗೆ ಕರಿಕೂಗಲುಕಾಯಿ/ ಹಿರಿದು ಮಾಡಿದ ಪಾಪ ನುಗ್ಗೇಕಾಯಿ/ ಹರಿ ನಿನ್ನ ಧ್ಯಾನ ಬಾಳೇಕಾಯಿ/ ಸರುವ ಜೀವರ್ಗುಣಿಸಿಯುಂ ಬದನೆಕಾಯಿ/ ಅರಿಷಡ್ವರ್ಗಗಳೊದಗಿಲಿಕಾಯಿ” ಎನ್ನುತ್ತಾರೆ. ಇಲ್ಲಿ ‘ಕಾಯಿ’ ಎಂದರೆ ಭಗವಂತನಲ್ಲಿ ಮೊರೆ,“ನೀನೇ ಕಾಪಾಡಬೇಕಪ್ಪಾ” ಎಂದು.
ಅದೆಲ್ಲ ಇರಲಿ. ಈ ಸಿಂಪಲ್ ಶ್ಲೇಷೆಯೊಗಟು ಗೊತ್ತಾ ನಿಮಗೆ? ‘ಕಾವಲಿಯಿಂದ ಏಳು ದೋಸೆ; ತಟ್ಟೆಯಲ್ಲಿ ಆರು ದೋಸೆ; ಬಾಯಿಗೆ ಹತ್ತು ದೋಸೆ. ಒಟ್ಟು ಎಷ್ಟು ದೋಸೆ?’ ಉತ್ತರ: ಒಂದೇ ದೋಸೆ. ಅದನ್ನು ನಾನೇ ತಿಂದುಬಿಟ್ಟೆ, ನಿಮಗೆ ಒಂಚೂರೂ ಉಳಿಸಿಲ್ಲ! ದೋಸೆಯಷ್ಟೇ ಅಲ್ಲ, ಎರಡು ಕಂತುಗಳಲ್ಲಿ ಹರಿದುಬಂದ ಶ್ಲೇಷ ರಸಾಯನವೂ ನಿಶ್ಶೇಷವಾಯಿತು. ಬೇರೆ ಭಾಷೆಯ ಪದಗಳನ್ನೂ ಸೇರಿಸಿ, ಕಸಿ ಕಟ್ಟಿ ಇನ್ನೂ ಗಮ್ಮತ್ತಿನ ಶ್ಲೇಷೆಗಳನ್ನು ರಚಿಸಬಹುದು, ಹುಡುಕಬಹುದು. ಆದರೆ ನನ್ನ ಉದ್ದೇಶವಿದ್ದದ್ದು ಕಸ್ತೂರಿಕನ್ನಡದಲ್ಲಿ ಶ್ಲೇಷೆ ಎಷ್ಟು ಚೆನ್ನಾಗಿದೆ ಎಂದು ಪರಿಚಯಿಸುವುದು. ಅದಕ್ಕೋಸ್ಕರ ಅಚ್ಚಕನ್ನಡ ಶ್ಲೇಷೆಗಳನ್ನಷ್ಟೇ ಅಳವಡಿಸಿಕೊಂಡೆ. ಅಂದಹಾಗೆ ಕನ್ನಡಪ್ರೇಮ ಎರಡು ವಿಧ : ಎಂದಿಗೂ ಮಾಸದ ಕನ್ನಡಪ್ರೇಮ; ನವೆಂಬರ್ ಮಾಸದ ಕನ್ನಡಪ್ರೇಮ. ನಿಮ್ಮದು ಯಾವುದು?
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125


No comments yet. Be the first to say something!