Episodes
Saturday Jan 22, 2011
Eat but dont eat
Saturday Jan 22, 2011
Saturday Jan 22, 2011
ದಿನಾಂಕ 23 ಜನವರಿ 2011ರ ಸಂಚಿಕೆ...
ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] ಮತ್ತಿನ್ನೇನು ಎಂದು ನೀವು ಕೇಳಬಹುದು. ತಿನ್ನುವುದೆಂದರೆ ತಿನ್ನುವುದಷ್ಟೇ ಅಲ್ಲದೆ ಬೇರೇನು ಅರ್ಥ ಬರುತ್ತದೆ ಎಂದು ಪ್ರಶ್ನಿಸಬಹುದು. ಆದರೆ ನಮ್ಮೆಲ್ಲರ ಮಾತಿನಲ್ಲಾಗಲೀ ಬರವಣಿಗೆಯಲ್ಲಾಗಲೀ ತಿನ್ನು ಮತ್ತು ಅದರ ಸಮಸಂಬಂಧಿ ಕ್ರಿಯಾಧಾತುಗಳ ಬಗೆಬಗೆಯ ಬಳಕೆಯನ್ನು ಒಮ್ಮೆ ಗಮನಿಸಿದರೆ ಗೊತ್ತಾಗುತ್ತದೆ. ತಿನ್ನುವ ಪ್ರಕ್ರಿಯೆ ಅಥವಾ ತಿನ್ನದೆಯೇ ತಿನ್ನುವ ಪ್ರಕ್ರಿಯೆಯಿಂದ ಭಾಷೆಗೊಂದು ಸೊಗಸು ಬಂದಿರುವುದು ನಮಗೆ ಕಂಡುಬರುತ್ತದೆ. ಒಂದು ಸರಳ ಉದಾಹರಣೆ ಕೊಡುತ್ತೇನೆ. ಮುದ್ದಾದ ಮಗುವನ್ನು ಮುದ್ದುಮಾಡುವಾಗ ನಾವು ಕೆಲವೊಮ್ಮೆ ಪ್ರೀತಿಯಿಂದ ತಿಂದುಬಿಡೋಣ ಅನ್ನಿಸ್ತಿದೆ ಎನ್ನುವುದಿದೆ. ಹಾಗಂತ ಮಕ್ಕಳನ್ನು ತಿಂದುಬಿಡಲಿಕ್ಕೆ ನಾವೇನೂ ಮಾರ್ಜಾಲ ಜಾತಿ ಅಲ್ಲ. ಆಶ್ಚರ್ಯವೆಂದರೆ ಮಕ್ಕಳು ತುಂಬಾ ತಂಟೆಕೋರರಾಗಿದ್ದರೆ ಅವರ ಮೇಲೆ ಸಿಟ್ಟಿನಿಂದ ದುರುಗುಟ್ಟುವಾಗಲೂ ತಿಂದುಬಿಡುತ್ತೇವೇನೋ ಎಂಬಂತೆಯೇ ಇರುತ್ತದೆ ನಮ್ಮ ಮುಖಭಾವ. ಪ್ರೀತಿ ಮತ್ತು ಸಿಟ್ಟು ತದ್ವಿರುದ್ಧ ಭಾವನೆಗಳು. ತಿನ್ನದೆಯೇ ತಿನ್ನುವ ಪ್ರಕ್ರಿಯೆಯ ಮೂಲಕ ಅವುಗಳನ್ನು ಪ್ರಕಟಪಡಿಸುವುದು ನಮಗೆ ಸಾಧ್ಯವಾಗಿರುತ್ತದೆ. ಅವನು ತುಂಬಾ ತಲೆ ತಿಂತಾನೆ ಎನ್ನುತ್ತೇವೆ. ನಿಜವಾಗಿಯೂ ತಲೆಯನ್ನು ತಿನ್ನುವುದು ಸಾಧ್ಯವಿಲ್ಲವೆಂದು ಗೊತ್ತು. ಅದರಲ್ಲೂ ಸಸ್ಯಾಹಾರಿಯಾಗಿದ್ದರಂತೂ ಬಿಲ್ಕುಲ್ ಸಾಧ್ಯವಿಲ್ಲ. ಅಲ್ಲದೆ ತುಂಬಾ ತಲೆ ತಿನ್ನಲು ನಾವೇನು ರಾವಣನಂತೆ ಹತ್ತು ತಲೆಗಳನ್ನಿಟ್ಟುಕೊಂಡಿರುವುದಿಲ್ಲ. ಪ್ರಾಣ ತಿಂತಾನೆ ಅಥವಾ ಜೀವ ತಿಂತಾನೆ ಎಂದೂ ಹೇಳುತ್ತೇವೆ. ಪ್ರಾಣ ಅಥವಾ ಜೀವ ಎನ್ನುವುದು ಭೌತಿಕ ವಸ್ತು ಅಲ್ಲ. ಹಾಗಿರುವಾಗ ಅದನ್ನು ತಿನ್ನುವುದು ಸಾಧ್ಯವೇ ಇಲ್ಲ. ಶಾಲೆಯಲ್ಲಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದದ್ದನ್ನು ನೆನಪಿಸಿಕೊಳ್ಳುತ್ತೇವೆ. ಮಗ್ಗಿಯನ್ನೋ ಪದ್ಯವನ್ನೋ ಬಾಯಿಪಾಠ ಒಪ್ಪಿಸುವಾಗ ನಡುವೆ ಅಲ್ಲಲ್ಲಿ ಬಿಟ್ಟುಕೊಂಡು ಹೇಳಿದರೆ ಅದನ್ನ್ಯಾಕೆ ತಿಂದುಬಿಟ್ಟೆ ಎನ್ನುತ್ತಾರೆ ಮೇಷ್ಟ್ರು. ಹೊಟ್ಟೆಗೇನು ತಿನ್ನುತ್ತೀ ಅನ್ನವಾ ಸೆಗಣಿಯಾ ಎಂದು ಮೂದಲಿಸುತ್ತಾರೆ. ಏಟು ಬೀಳುವುದು ಚರ್ಮಕ್ಕೆ. ಆದರೂ ಪೆಟ್ಟು ತಿನ್ನುವುದು ಅಂತಲೇ ಹೇಳುತ್ತೇವೆ. ಏಟಿನ ರುಚಿ ಹೇಗಿತ್ತು ಎಂಬ ವಿವರಣೆ ಬೇರೆ. ಕಿತ್ತು ತಿನ್ನುವ ಬಡತನ ಎಂಬ ಮಾತು. ಬಡತನ ಏನನ್ನು ಕೀಳುತ್ತದೆ ಅಥವಾ ಏನನ್ನು ತಿನ್ನುತ್ತದೋ ಗೊತ್ತಿಲ್ಲ. ಅದೇವೇಳೆ ಶ್ರೀಮಂತನಾಗಿ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು. ಕುಡಿಕೆಯಲ್ಲಿನ ಹೊನ್ನನ್ನು ಅದೇ ರೂಪದಲ್ಲಿ ಇಷ್ಟರವರೆಗೆ ಯಾರಾದರೂ ತಿಂದವರಿದ್ದಾರೆಯೇ ತಿಳಿಯದು. ಮೊನ್ನೆ ಎಲ್ಲೋ ಓದಿದ ನೆನಪು. ಚಿನ್ನದಸರ ಕದ್ದ ಒಬ್ಬ ಕಳ್ಳ ಸಿಕ್ಕಿಬೀಳುತ್ತೇನೆಂದು ಗೊತ್ತಾದಾಗ ಆ ಸರವನ್ನು ತಿಂದುಬಿಟ್ಟನಂತೆ. ಅನ್ನ ತಿನ್ನುವ ಬದಲು ಚಿನ್ನ ತಿಂದವನಾದನಂತೆ. ತಾನು ಚಿನ್ನ ತಿಂದು ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುವ ಹುನ್ನಾರ ಅವನದು. ಚಳ್ಳೇಹಣ್ಣು ಎಂದರೇನು ಅದನ್ನು ತಿನ್ನಲಿಕ್ಕಾಗುತ್ತದೆಯೇ ರುಚಿ ಹೇಗಿರುತ್ತದೆ ಎಂದು ಬಲ್ಲವರಿಲ್ಲ. ಪೊಲೀಸರು ಮಾತ್ರ ಅದನ್ನು ತಿನ್ನುತ್ತಾರೆ. ಅದೂ ಕಳ್ಳನ ಕೈಯಿಂದ ಮಾತ್ರ. ಹಾಗೆಂದು ಸೃಷ್ಟಿಕರ್ತನೇ ನಿಯಮ ಮಾಡಿಟ್ಟಿದ್ದಾನೋ ಗೊತ್ತಿಲ್ಲ. ಅಂದಹಾಗೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಯಿಂದಲೇ ನಿಂತು ತಿನ್ನುವ ಪದ್ಧತಿ ಅಂದರೆ ಬೆಂಗಳೂರಿನ ದರ್ಶಿನಿಗಳು ಶುರುವಾದದ್ದು. ಬಫೆ ಊಟದ ಸಂಗತಿಯೂ ಸೇಮ್. ಇಂಗು ತಿಂದ ಮಂಗನ ಹೋಲಿಕೆ ಮುಖಭಂಗ ಮಾಡಿಕೊಂಡವರಿಗೆ. ಮಂಗ ನಿಜವಾಗಿಯೂ ಇಂಗು ತಿಂದ ಪುರಾವೆ ಇದೆಯೇ ಎಂದು ಆ ಹನುಮಂತನಿಗೂ ಗೊತ್ತಿರಲಿಕ್ಕಿಲ್ಲ. ಕಡಲೆ ತಿಂದು ಕೈತೊಳೆದುಕೊಂಡಂತೆ ಅಂತ ಇನ್ನೊಂದು ಗಾದೆ. ವಹಿಸಿಕೊಂಡ ಕೆಲಸವನ್ನು ಚೊಕ್ಕವಾಗಿ ಮಾಡಿಮುಗಿಸುವುದು ಎಂದು ಅರ್ಥ. ನಿಜವಾಗಿ ಕಡಲೆ ತಿನ್ನುವುದೇನಿದ್ದರೂ ಕೆಲಸವೆಲ್ಲ ಮುಗಿದಮೇಲೆಯೇ. ತಾತ್ಪರ್ಯವೇನೆಂದರೆ ಮೇಲಿನೆಲ್ಲ ಉದಾಹರಣೆಗಳಲ್ಲೂ ಅಸಲಿಗೆ ಏನನ್ನೂ ತಿನ್ನದೆಯೇ ಬಹಳಷ್ಟನ್ನು ತಿಂದದ್ದಿರುತ್ತದೆ. ತಿನ್ನುವಷ್ಟೇ ಸ್ವಾರಸ್ಯ ನುಂಗುವ ಕ್ರಿಯೆಯದೂ. ಜೀವ ತಿನ್ನುವ ರೋಗ ವಾಸಿಯಾಗಲೆಂದು ಮಾತ್ರೆ ನುಂಗುತ್ತೇವೆ. ಕೆಲವರಿಗೆ ಬೆಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರುಹೊತ್ತೂ ಮಾತ್ರೆಗಳದೇ ಫಳ್ಹಾರ. ನೋವು ನುಂಗಿ ನಲಿವಿನಿಂದಿರಲು ಪ್ರಯತ್ನಿಸುತ್ತೇವೆ. ಅಳು ನುಂಗಿ ನಗುಮುಖ ಪ್ರದರ್ಶಿಸುತ್ತೇವೆ. ಗುಟ್ಟನ್ನು ನುಂಗಿ ಹೊಟ್ಟೇಲಿಟ್ಟುಕೊಳ್ಳುತ್ತೇವೆ. ಭ್ರಷ್ಟ ರಾಜಕಾರಣಿಗಳು ಕಣ್ಣೆದುರೇ ಕೋಟಿಗಟ್ಟಲೆ ನುಂಗುತ್ತಿರಬೇಕಾದರೆ ಏನೂ ಮಾಡದವರಾಗುತ್ತೇವೆ. ಜಾಗತೀಕರಣದ ಹೆಸರಿನಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳು ಸಣ್ಣ ಉದ್ಯಮಗಳನ್ನು ನುಂಗುವುದನ್ನು ನೋಡುತ್ತೇವೆ. ತಿಮಿಂಗಿಲಗಳು ಸಣ್ಣ ಮೀನುಗಳನ್ನು ನುಂಗಿದಂತೆ ಎನ್ನುತ್ತೇವೆ. ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳು ಬಡರೈತರ ಜಮೀನನ್ನು ಆಪೋಷಣ ತೆಗೆದುಕೊಳ್ಳುವುದನ್ನು ದಿನಾಲೂ ನೋಡುತ್ತೇವೆ. ಒಳಗೊಳಗೇ ಕುದಿಯಬೇಕಾಗಿ ಬಂದರೂ ಸಿಟ್ಟನ್ನೂ ನುಂಗಿಕೊಳ್ಳುತ್ತೇವೆ. ಪ್ರಕೃತಿವಿಕೋಪಗಳು ಆಸ್ತಿಪಾಸ್ತಿಯನ್ನು ನುಂಗಿ ನೊಣೆದಾಗ ಹತಾಶರಾಗುತ್ತೇವೆ. ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ ಎಂದುಕೊಂಡು ಶಿಶುನಾಳ ಶರೀಫರಾಗುತ್ತೇವೆ. ಕೋಡಗನ ಕೋಳಿ ನುಂಗಿತ್ತಾ ತತ್ತ್ವಪದದಲ್ಲಿ ಶರೀಫಜ್ಜ ನಿಜವಾಗಿಯೂ ಅದೇನೋ ಪಾರಮಾರ್ಥಿಕವಾದುದನ್ನೇ ಹೇಳಿದ್ದಾನೆ. ನಮಗದು ಸುಲಭದಲ್ಲಿ ಅರ್ಥವಾಗುವುದಿಲ್ಲ ಅಷ್ಟೇ. ಸಾಮಾನ್ಯವಾಗಿ ಯಾವುದು ನುಂಗುತ್ತದೋ ಅದು ಹೊರಗೆ ಮತ್ತು ಯಾವುದು ನುಂಗಲ್ಪಡುತ್ತದೋ ಅದು ಒಳಗೆ. ಕೇರೆಹಾವು ಕಪ್ಪೆಯನ್ನು ನುಂಗಿದರೂ ಹಾಗೆಯೇ. ಕಾಳಿಂಗ ಸರ್ಪವು ಕೇರೆಹಾವನ್ನು ನುಂಗಿದರೂ ಹಾಗೆಯೇ. ಇದು ಸಾಮಾನ್ಯ ಜ್ಞಾನ. ಆದರೆ ಶರೀಫಜ್ಜನ ಪದದಲ್ಲಿ ಗೋಡೆ ಸುಣ್ಣವ ನುಂಗಿ ಎಂಬ ಸಾಲನ್ನೇ ತೆಗೆದುಕೊಳ್ಳಿ. ಗೋಡೆಗೆ ಸುಣ್ಣ ಹಚ್ಚಿದಾಗ ಸುಣ್ಣ ಹೊರಗೆ ಮತ್ತು ಗೋಡೆ ಒಳಗೆ. ಅಂದರೆ ಸುಣ್ಣ ಗೋಡೆಯನ್ನು ನುಂಗಿದಂತೆ. ಆದರೆ ಸುಣ್ಣ ಹಚ್ಚುವಾಗ ಗೋಡೆ ಅದನ್ನು ಹೀರಿಕೊಂಡಿರುತ್ತದೆ. ಆ ಲೆಕ್ಕದಲ್ಲಿ ಗೋಡೆ ಹೊರಗೆ ಸುಣ್ಣ ಒಳಗೆ. ಇದೊಂಥರ ಕನಕದಾಸರು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂದು ಹಾಡಿದಂತೆಯೇ. ಅರ್ಥೈಸಲು ಜಟಿಲವಾದ ವಿಚಾರ. ನುಂಗುವುದು ತಿನ್ನುವುದು ಕುಡಿಯುವುದು ಕಬಳಿಸುವುದು ಎಲ್ಲ ಒಂದೇ. ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಎಂಬಂತೆ ಸೇರುವುದು ಎಲ್ಲ ಹೊಟ್ಟೆಗೇ. ಆದರೆ ಕುಡಿಯುವ ವಿಚಾರದಲ್ಲೂ ತಿನ್ನುವುದರಂತೆಯೇ ಗಮ್ಮತ್ತಿದೆ. ಅರೆದು ಕುಡಿಯುವುದು ಎಂದು ನೀವು ಕೇಳಿರಬಹುದು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿನ್ನೆಯಷ್ಟೇ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆನ್ನುತ್ತದೆಯೆಂದರೆ ಬರೆದೂ ಬರೆದು ಅರೆದು ಕುಡಿಯುವುದೇ ವಿದ್ಯಾರ್ಥಿಗಳಿಗೆ ಉತ್ತಮವಂತೆ. ಅದರಿಂದ ಮೆದುಳಿನಲ್ಲಿ ಜ್ಞಾನ ಹೆಚ್ಚು ಪರಿಣಾಮಕಾರಿಯಾಗಿ ಅಚ್ಚೊತ್ತುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರಂತೆ. ಹಾಗಾಗಿಯೇ ಇರಬಹುದು ಗಣಿತ ಪ್ರಮೇಯಗಳನ್ನು ಕೆಮೆಸ್ಟ್ರಿ ಫಾರ್ಮುಲಾಗಳನ್ನು ಅರೆದು ಕುಡಿಯುತ್ತಾರೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಶಿಕ್ಷಣದ ಕನಸು ಕಾಣುವವರು. ಪ್ರೀತಿ ಸೌಂದರ್ಯ ಶೃಂಗಾರ ಇತ್ಯಾದಿಗಳನ್ನು ಬೊಗಸೆಯಲ್ಲಿ ಮೊಗೆಮೊಗೆದು ಕುಡಿಯುತ್ತಾರೆ ಕವಿಹೃದಯ ಇದ್ದವರು. ಹೃದಯ ಕದ್ದವರೂ ಅನ್ನಿ ಬೇಕಿದ್ದರೆ. ಪ್ರೇಮವಂಚಿತರಾದವರು ನಿಜವಾಗಿಯೂ ಕುಡಿಯುವ ಚಟಕ್ಕೆ ಬಲಿಬೀಳಬಹುದು. ಹಾಗೆ ನೋಡಿದರೆ ಆ ಕುಡಿತವೂ ನಿಜ ಅರ್ಥದಲ್ಲಿ ಹೊಟ್ಟೆಗಲ್ಲ ತಲೆಗೇ ಹೋಗುವುದು. ಇನ್ನು ಹೊಟ್ಟೆಬಾಕರ ತಿನ್ನುವಿಕೆಯ ಬಣ್ಣನೆಯಲ್ಲೂ ಭಾಷೆಯ ಬೆಡಗು ಬಹಳ ಚೆನ್ನಾಗಿರುತ್ತದೆ. ಅಗೋಳಿ ಮಂಜಣ್ಣ ಅಂತೊಬ್ಬ ಐತಿಹಾಸಿಕ ಪುರುಷ ಹಿಂದೆ ತುಳುನಾಡಿನಲ್ಲಿದ್ದನಂತೆ. ಮಹಾಬಲಾಢ್ಯ ಕಟ್ಟುಮಸ್ತಾದ ಆಳು. ಅವನ ಕಥೆಯಲ್ಲಿ ಅವನ ಊಟತಿಂಡಿಯ ವಿವರಗಳು ರೋಚಕ. ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾಅರಾ ಆಪುಂಡ್. ಗೋಂಟು ಥಾರಾಯಿ ಇರ್ವತ್ತೈನ್ಲಾ ಬಾಯಿಡೇ ಗಾಣ ಫಾಡುಂಡ್. ಅಗೋಳಿ ಮಂಜಣ್ಣನ ಕಥೆ ಹೇಳುವ ತುಳು ಪಾಡ್ದನದ ಸಾಲುಗಳು ಅವು. ಕಳಸಿಗೆಯಷ್ಟು ಅವಲಕ್ಕಿ ಇದ್ದರೂ ಅಗೋಳಿ ಮಂಜಣ್ಣನಿಗೆ ಅದು ಮುಷ್ಟಿಯಲ್ಲಿ ತುಂಬಿದರೆ ಹೆಚ್ಚು. ಕೊಬ್ಬರಿ ಗಿಟುಕುಗಳನ್ನು ಒಂದಿಪ್ಪತ್ತೈದರಷ್ಟು ಒಟ್ಟಿಗೇ ಬಾಯಿಗೆ ಹಾಕಿ ಅಗಿಯತೊಡಗಿದನೆಂದರೆ ಮಂಜಣ್ಣನ ಬಾಯಿ ಎಣ್ಣೆಯ ಗಾಣವೋ ಎಂದುಕೊಳ್ಳಬೇಕು. ಹಾಗಿರುತ್ತಿತ್ತಂತೆ ದೃಶ್ಯ. ಮಹಾಭಾರತದಲ್ಲಿ ಬಕಾಸುರನಿಗೆ ಬಂಡಿ ತುಂಬ ಆಹಾರ ತೆಗೆದುಕೊಂಡು ಹೋಗುವ ಭೀಮಸೇನ ತಾನೇ ಅದನ್ನು ತಿಂದು ತೇಗುತ್ತಾನೆ. ಆಮೇಲೆ ಬಕಾಸುರನನ್ನೂ ಕೊಂದು ಮುಗಿಸುತ್ತಾನೆ. ಮಾಯಾಬಝಾರ್ ಸಿನೆಮಾದಲ್ಲಿ ಅದು ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಎಂಬ ಹಾಡಾಗುತ್ತದೆ. ತಿಂದು ತೇಗುವ ಅಥವಾ ತಿಂದು ಅರಗಿಸಿಕೊಳ್ಳುವ ವಿಚಾರ ಬಂದಾಗ ವಾತಾಪಿಯ ಕಥೆಯೂ ನೆನಪಾಗುತ್ತದೆ. ಇಲ್ವಲ ಮತ್ತು ವಾತಾಪಿ ಹೆಸರಿನ ಇಬ್ಬರು ರಾಕ್ಷಸರಿದ್ದರು. ಅವರು ಅಣ್ಣತಮ್ಮಂದಿರು. ತಮಗೆ ಸಂತಾನಪ್ರಾಪ್ತಿಯಾಗಬೇಕಂತಷ್ಟೇ ಅಲ್ಲ ಇಂದ್ರನಂಥ ಮಗನೇ ಹುಟ್ಟಬೇಕು ಎಂದು ಅವರಿಬ್ಬರಿಗೂ ಬಯಕೆ. ಹಾಗೆಂದು ಅನುಗ್ರಹಿಸುವಂತೆ ಅವರು ಕಂಡಕಂಡ ಬ್ರಾಹ್ಮಣರನ್ನೆಲ್ಲ ಬೇಡುತ್ತಿದ್ದರು. ಇಷ್ಟಾರ್ಥ ಕೈಗೂಡದಾದಾಗ ಅದೇ ಬ್ರಾಹ್ಮಣರನ್ನು ಪೀಡಿಸುತ್ತಿದ್ದರು. ಹೇಗೆಂದರೆ ಇಲ್ವಲನು ವಾತಾಪಿಯನ್ನು ಮೇಕೆಯನ್ನಾಗಿಸಿ ಕೊಂದು ಆ ಮಾಂಸವನ್ನು ಅಡುಗೆಮಾಡಿ ಬ್ರಾಹ್ಮಣರಿಗೆ ಬಡಿಸುವನು. ಬ್ರಾಹ್ಮಣರ ಊಟ ಮುಗಿಯುತ್ತಿದ್ದಂತೆಯೇ ವಾತಾಪಿಯನ್ನು ಹೊರಗೆ ಬರುವಂತೆ ಕರೆಯುವನು. ಬ್ರಾಹ್ಮಣರ ಹೊಟ್ಟೆ ಸೀಳಿ ವಾತಾಪಿ ಹೊರಬರುವನು. ಹೀಗೆ ಅನೇಕ ಮಂದಿ ಬ್ರಾಹ್ಮಣರು ಸತ್ತುಹೋದರು. ಒಮ್ಮೆ ಅಗಸ್ತ್ಯಮಹರ್ಷಿ ಇಲ್ವಲನಲ್ಲಿಗೆ ಬಂದಿದ್ದಾಗ ಇಲ್ವಲ ಅವನಿಗೂ ಹಾಗೆಯೇ ಮಾಡಿದ. ಅಗಸ್ತ್ಯನಿಗೆ ಈ ದುಷ್ಟಸಹೋದರರ ಗುಟ್ಟು ಗೊತ್ತಾಯಿತು. ಅವನು ಹೊಟ್ಟೆತುಂಬ ಉಂಡಮೇಲೆ ಹೊಟ್ಟೆಯನ್ನು ಒಮ್ಮೆ ಬಲಗೈಯಿಂದ ಸವರುತ್ತ ತನ್ನ ತಪಃಶಕ್ತಿಯಿಂದ ವಾತಾಪಿ ಹೊಟ್ಟೆಯಲ್ಲೇ ಜೀರ್ಣವಾಗುವಂತೆ ಮಾಡಿಬಿಟ್ಟ. ಇಲ್ವಲ ಹೆದರಿ ಅಗಸ್ತ್ಯನಿಗೆ ಶರಣಾದ. ಅಂದಿನಿಂದ ಬ್ರಹ್ಮದ್ವೇಷವನ್ನು ಬಿಟ್ಟುಬಿಟ್ಟ. ಇದು ಪುರಾಣದ ಕಥೆ. ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರೇ ಅಂತೆಲ್ಲ ಪ್ರಶ್ನೆ ಕೇಳುವುದಕ್ಕೆ ಹೋಗಬಾರದು. ಆಯ್ತು. ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ ಎಂದು ತಲೆಬರಹವಿರುವ ಈ ಲೇಖನದಲ್ಲಿ ಸ್ವಲ್ಪವಾದರೂ ತಿರುಳಿರುವ ಅಂಶ ಇರಲೆಂದು ಇದನ್ನು ಬರೆಯುತ್ತಿದ್ದೇನೆ. ತಿನ್ನುವ ಕುಡಿಯುವ ವಿಷಯದಲ್ಲಿ ಅಮೆರಿಕನ್ನರೂ ಅಗೋಳಿ ಮಂಜಣ್ಣನಿಗಿಂತ ಕಮ್ಮಿಯೇನಲ್ಲ. ಅದರಲ್ಲೂ ಫಾಸ್ಟ್ಫುಡ್ ಸಂಸ್ಕೃತಿ ಅಮೆರಿಕನ್ನರನ್ನು ಸಿಕ್ಕಾಪಟ್ಟೆ ಸ್ಥೂಲಕಾಯರನ್ನಾಗಿಸಿದೆ. ಇದೀಗ ಪ್ರಥಮ ಮಹಿಳೆ ಮಿಶೆಲ್ ಒಬಾಮ ಈ ವಿಷಯದಲ್ಲಿ ಜವಾಬ್ದಾರಿಯಿಂದ ಎಚ್ಚೆತ್ತು ಜನಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಶಾಲಾಮಕ್ಕಳಿಗೆ ನಿಯಮಿತ ಆಹಾರಸೇವನೆಯ ಪಾಠಗಳನ್ನು ಅವರು ತಾವೇ ಶಾಲೆಗಳಿಗೆ ಹೋಗಿ ಮಾಡುತ್ತಿರುವ ನಿದರ್ಶನಗಳೂ ಇವೆ. ಅಮೆರಿಕದ ಪ್ರಖ್ಯಾತ ರಿಟೇಲ್ ಮಳಿಗೆ ವಾಲ್ಮಾರ್ಟ್ ಸಹ ಮಿಶೆಲ್ ಒಬಾಮ ಅಭಿಯಾನದಲ್ಲಿ ಕೈಜೋಡಿಸಿದೆ. ತಾನು ಮಾರುವ ಆಹಾರ ಪದಾರ್ಥಗಳಾವುವೂ ಒಬೆಸಿಟಿ ಹೆಚ್ಚಿಸದಿರುವಂತೆ ನೋಡಿಕೊಳ್ಳುತ್ತೇನೆಂದಿದೆ. ತಿನ್ನುವುದಕ್ಕಾಗಿ ಬದುಕು ಎಂದಾಗದೆ ಬದುಕುವುದಕ್ಕಾಗಿಯಷ್ಟೇ ತಿನ್ನಬೇಕು. ಈಗ ಇದು ಮಿಶೆಲ್ ಮಂತ್ರ. ಕೊನೆಯಲ್ಲೊಂದು ಕ್ವಿಜ್. ಇವತ್ತಿನ ಲೇಖನದಲ್ಲಿ ಸ್ವಲ್ಪ ಅಸಾಮಾನ್ಯ ಎನಿಸುವಂಥ ಅಂಶವೊಂದನ್ನು ಅಳವಡಿಸಲಾಗಿದೆ. ಅಥವಾ ಬೇಕಂತಲೇ ಅಳವಡಿಸಿಕೊಂಡಿಲ್ಲ ಎಂದೂ ಹೇಳಬಹುದು. ಅದೇನೆಂದು ನಿಮ್ಮ ಗಮನಕ್ಕೆ ಬಂದಿದ್ದರೆ ಬರೆದು ತಿಳಿಸಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Jan 01, 2011
Mistakes by Habit
Saturday Jan 01, 2011
Saturday Jan 01, 2011
ದಿನಾಂಕ 2 ಜನವರಿ 2011ರ ಸಂಚಿಕೆ...
ಅಭ್ಯಾಸಬಲದ ಅನುಭವಗಳೂ ಆಭಾಸಗಳೂ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಎರಡು ಸಾವಿರದ ಹತ್ತಕ್ಕೆ ಗುಡ್ಬೈ ಹೇಳಿ ಹನ್ನೊಂದನ್ನು ಭವ್ಯವಾಗಿ ಸ್ವಾಗತಿಸಿದ್ದಾಗಿದೆ. ಹ್ಯಾಪಿ ನ್ಯೂ ಇಯರ್ ಶುಭಾಶಯದ ಸಹಸ್ರನಾಮ- ಅಂದರೆ ವಿನಿಮಯ ಮೊನ್ನೆ ೩೧ರ ಮಧ್ಯರಾತ್ರೆ ಶುರುವಾದದ್ದು, ಇವತ್ತಿಗೆನ್ನುವಾಗ ಇಷ್ಟಮಿತ್ರಬಂಧುಬಾಂಧವರನ್ನೆಲ್ಲ ಒಂದು ರೌಂಡ್ ಕವರ್ ಮಾಡಿ ಆಗಿದೆ. ಗೋಡೆಯ ಮೇಲೆ ಹೊಸ ವರ್ಷದ ವರ್ಣರಂಜಿತ ಕ್ಯಾಲೆಂಡರ್ ಕಂಗೊಳಿಸುತ್ತಿದೆ. ಪಕ್ಕದಲ್ಲೇ ಕಾಲನಿರ್ಣಯವೋ ಬೆಂಗಳೂರುಪ್ರೆಸ್ನದೋ ಒಂದು ದಿನದರ್ಶಿಕೆಯೂ ತೂಗಾಡುತ್ತಿದೆ. ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ರಜಾದಿನಗಳನ್ನು ಕೆಂಪುಬಣ್ಣದಲ್ಲಿ ತೋರಿಸುತ್ತಿದೆ. ಡೈರಿ ಬರೆಯುವ ಅಭ್ಯಾಸವಿರುವವರ ಬಳಿ ಹೊಸ ಡೈರಿಯೂ ಬಂದಿದೆ. ಜನವರಿ ಒಂದನೇ ತಾರೀಕಿನದನ್ನು ಆಗಲೇ ಶಿಸ್ತಿನಿಂದ, ಅತ್ಯುತ್ಸಾಹದಿಂದ ಬರೆದದ್ದೂ ಆಗಿದೆ. ಒಟ್ಟಿನಲ್ಲಿ ವಾತಾವರಣದಲ್ಲೂ ಮನಸ್ಸಿನೊಳಗೂ ಏನೋ ಒಂದು ಹೊಸತನದ ಅನುಭವವಾಗಿದೆ. ಕಡೇಪಕ್ಷ ಹಾಗಂತ ಮನಸ್ಸು ಅಂದುಕೊಂಡಿದೆ. ಎಲ್ಲ ಸರಿಯೇ. ಆದರೆ ಇವತ್ತು-ನಾಳೆ ಅರ್ಜೆಂಟ್ನಲ್ಲಿ ಒಂದು ಚೆಕ್ ಬರೆದುಕೊಡುವ ಸಂದರ್ಭವೋ ಅಥವಾ ದಿನಾಂಕ ನಮೂದಿಸಬೇಕಾಗುವ ಅಂತಹ ಇನ್ನಾವುದೇ ಸನ್ನಿವೇಶ ಬಂತು ಅಂದ್ಕೊಳ್ಳಿ. ತಾರೀಕು ಮತ್ತು ತಿಂಗಳನ್ನು ಸರಿಯಾಗಿಯೇ ಬರೆಯುತ್ತೀರಿ, ಇಸವಿಯನ್ನು ಮಾತ್ರ 2010 ಎಂದು ಬರೆಯುವ ಸಾಧ್ಯತೆಗಳೇ ಹೆಚ್ಚು. ಒಂದುವೇಳೆ 2011 ಎಂದು ಬರೆದರೂ ಅದು ಅತಿಜಾಗ್ರತೆಯಿಂದ ಪ್ರಜ್ಞಾಪೂರ್ವಕವಾಗಿ ಬರೆದದ್ದಾಗಿರುತ್ತದೆ. ಹೌದು, ಕನಿಷ್ಠ ಒಂದೆರಡು ವಾರಗಳಾದರೂ ಬೇಕಾಗುತ್ತದೆ ಹೊಸ ಇಸವಿ ಶುರುವಾಗಿರುವುದು ನಮ್ಮ ಸಬ್ಕಾನ್ಷಿಯಸ್ ಮನಸ್ಸಿನಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿಕೊಳ್ಳುವುದಕ್ಕೆ. ಅಲ್ಲಿಯವರೆಗೆ ‘ಅಭ್ಯಾಸಬಲ’ವೆಂಬ ಎಕ್ಸ್ಕ್ಯೂಸ್ ಇದ್ದೇಇರುತ್ತದೆ. ಇವತ್ತು ಅಭ್ಯಾಸಬಲದ ಬಗ್ಗೆಯೇ ಒಂದು ಸೋದಾಹರಣ ಹರಟೆ ಮಾಡೋಣವೆಂದುಕೊಂಡಿದ್ದೇನೆ. ಇಸವಿ ಬದಲಾವಣೆಯ ಪ್ರಸ್ತುತ ಸಂದರ್ಭ ಒಂದು ಒಳ್ಳೆಯ ಉದಾಹರಣೆಯಾದ್ದರಿಂದ ಅದನ್ನೇ ಇಂಟ್ರೊದಲ್ಲಿ ಬಳಸಿದ್ದೇನೆ. ‘ನಮ್ಮನೆಯ ಗೋಡೆಗಡಿಯಾರ ಮೊನ್ನೆ ಕೆಳಗೆಬಿದ್ದು ಒಡೆದುಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದಬುಟ್ಟಿಗೆ ಹಾಕಿದ್ದೆ. ಆದರೆ ಈಗಲೂ ಟೈಮ್ ಎಷ್ಟಾಯ್ತು ಅನ್ಕೊಳ್ಳೋಹೊತ್ತಿಗೆ ದೃಷ್ಟಿ ಆ ಗಡಿಯಾರ ತಗಲುಹಾಕಿದ್ದ ಜಾಗದೆಡೆಗೇ ಹೋಗುತ್ತೆ. ನಿಮಗೂ ಹೀಗಾಗಿದ್ದಿದೆಯೇ?’ - ಹಿಂದೊಮ್ಮೆ sampada.net ನ ವಿಚಾರವಿನಿಮಯ ವೇದಿಕೆಯಲ್ಲಿ ಮಿತ್ರ ಹರಿಪ್ರಸಾದ್ ನಾಡಿಗ್ ಈರೀತಿ ಒಂದು ಪೋಸ್ಟ್ ಹಾಕಿದ್ದರು. ಆಗ ಅಭ್ಯಾಸಬಲದ ಅಂತಹ ಅನುಭವಗಳ ಬಗ್ಗೆ ನಾವು ಕೆಲವು ಸಂಪದ ಸದಸ್ಯರು ರಸವತ್ತಾಗಿ ಚರ್ಚಿಸಿದ್ದೆವು. ರಷ್ಯನ್ ವಿಜ್ಞಾನಿ ಐವಾನ್ ಪಾವ್ಲೊವ್ನ ಜಗದ್ವಿಖ್ಯಾತ ನಾಯಿ-ಗಂಟೆ-ಆಹಾರ ಪ್ರಯೋಗವೂ ಸೇರಿದಂತೆ ಸುಮಾರಷ್ಟು ವಿಚಾರಗಳು ಅಲ್ಲಿ ಬಂದಿದ್ದವು. ಎಸೋಸಿಯೇಟಿವ್ ಲರ್ನಿಂಗ್, ಕಂಡೀಷನ್ಡ್ ರಿಫ್ಲೆಕ್ಸಸ್ ಮುಂತಾಗಿ ಅಭ್ಯಾಸಬಲದ ಎಡಬಲಗಳನ್ನೆಲ್ಲ ಅಲ್ಲಿ ತಡಕಾಡಿದ್ದೆವು. ಇವತ್ತಿಲ್ಲಿ ಆ ಥಿಯರಿಗಳನ್ನೆಲ್ಲ ವಿವರಿಸುವುದಕ್ಕೆ ಹೋಗುವುದಿಲ್ಲ. ಆದರೆ ನಾಡಿಗ್ ಕೇಳಿದ್ದ ಪ್ರಶ್ನೆಯನ್ನೇ ನಾನು ನಿಮಗೆ ಕೇಳುತ್ತಿದ್ದೇನೆ. ನೀವೂ ನೆನಪಿಸಿಕೊಳ್ಳಿ ಅಭ್ಯಾಸಬಲದಿಂದ ನಿಮಗಾದ ಅನುಭವ ಆಭಾಸ ಇರುಸುಮುರುಸಿನ ಈರೀತಿಯ ಉದಾಹರಣೆಗಳನ್ನು. ಅಷ್ಟೊತ್ತಿಗೆ, ಪುರಾಣಗಳಲ್ಲಿ ನಮ್ಮ ಗಮನಕ್ಕೆ ಬರುವ ಒಂದೆರಡು ಪ್ರಸಂಗಗಳನ್ನು ನಾನಿಲ್ಲಿ ದಾಖಲಿಸುತ್ತೇನೆ. ಮಹಾಭಾರತದ ಕಥೆಯಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದವನು ಪಾರ್ಥನೊಬ್ಬನೇ. ಆದರೆ ದ್ರೌಪದಿ ಪಂಚಪಾಂಡವರಿಗೂ ಧರ್ಮಪತ್ನಿ ಅಂತನಿಸಿಕೊಳ್ಳಬೇಕಾಗಿ ಬಂದದ್ದು ಕುಂತಿಯ ಅಭ್ಯಾಸಬಲದಿಂದಾದ ಎಡವಟ್ಟಿನಿಂದ! ಭಿಕ್ಷೆ ಬೇಡಿ ಬದುಕಿಕೊಂಡಿದ್ದ ಪಾಂಡವರು ಅವತ್ತು ಕೂಡ ಭಿಕ್ಷಾಟನೆಯಿಂದ ಮರಳುವಾಗ ಜತೆಯಲ್ಲಿ ದ್ರೌಪದಿಯನ್ನು ಕರೆದುಕೊಂಡು ಬಂದು ಗುಡಿಸಲಿನ ಹೊರಗಿನಿಂದಲೇ “ಅಮ್ಮಾ ನೋಡು ಇವತ್ತಿನ ನಮ್ಮ ಭಿಕ್ಷೆಯನ್ನು!” ಎಂದರು. ಕುಂತಿ ಮನೆಯೊಳಗಿನಿಂದಲೇ ತನ್ನ ಎಂದಿನ ಅಭ್ಯಾಸದಂತೆ “ಆಯ್ತಪ್ಪಾ ಎಲ್ಲರೂ ಹಂಚಿಕೊಳ್ಳಿ” ಎಂದುಬಿಟ್ಟಳು. ಆಮೇಲಿನದು ನಮಗೆಲ್ಲ ಗೊತ್ತೇ ಇರುವ ಕಥೆ. ರಾಮಾಯಣದಲ್ಲಿ ಒಂದು ತಮಾಷೆ ಪ್ರಸಂಗ ಬರುತ್ತದೆ. ಇದು ವಾಲ್ಮೀಕಿ ಬರೆದದ್ದರಲ್ಲಿ ಇಲ್ಲವಂತೆ, ಆದರೂ ತುಂಬ ಚೆನ್ನಾಗಿದೆ. ಮುಖ್ಯವಾಗಿ ಇದರ ಚಿತ್ರಣ ಸೊಗಸಾಗಿದೆ. ಓದಿ. ಲಂಕೆಯಿಂದ ಮರಳಿದ ನಂತರ ಶ್ರೀರಾಮಚಂದ್ರನ ಪಟ್ಟಾಭಿಷೇಕದ ತರುವಾಯ ಒಮ್ಮೆ ಜನಕಮಹಾರಾಜನು ರಾಮನ ಪರಿವಾರದವರನ್ನೆಲ್ಲ ಮಿಥಿಲೆಗೆ ಆಹ್ವಾನಿಸಿದನು. ಒಂದು ಔತಣಕೂಟ ಏರ್ಪಡಿಸಿ ಸಂಭ್ರಮಿಸುವುದು ಅವನ ಉದ್ದೇಶ. ರಾಮನ ಪರಿವಾರವೆಂದ ಮೇಲೆ ಅದರಲ್ಲಿ ವಾನರಸೇನೆಯೂ ಸೇರಿಕೊಂಡಿತ್ತು. ರಾಮ ಅವರಿಗೆಲ್ಲ “ನೋಡ್ರಪಾ ಅದು ಗೌರವಾನ್ವಿತರ, ಮರ್ಯಾದಸ್ಥರ ಸಭೆ. ಅಲ್ಲಿ ಕುಚೋದ್ಯಗಳನ್ನೆಲ್ಲ ಮಾಡಲಿಕ್ಕೆ ಹೋಗಬೇಡಿ. ಬಿಹೇವ್ ಪ್ರಾಪರ್ಲಿ. ಓಕೆ?” ಎಂದು ಮೊದಲೇ ಸಾಕಷ್ಟು ತರಬೇತುಗೊಳಿಸಿದ್ದ. ಸರಿ, ಮಿಥಿಲೆಯಲ್ಲಿ ಔತಣಕೂಟ ಶುರುವಾಯಿತು. ನೆಲದ ಮೇಲೆ ಸಾಲಾಗಿ ಬಾಳೆಎಲೆ ಹಾಕಿ ಎಲ್ಲರಿಗೂ ಪಂಕ್ತಿಭೋಜನ. ವಾನರರೆಲ್ಲ ಶಿಸ್ತಿನಿಂದಲೇ ಇದ್ದರು. ಪಂಚಭಕ್ಷ್ಯಗಳನ್ನೆಲ್ಲ ಸವಿದರು. ಇನ್ನೇನು ಊಟದ ಕೊನೆ. ಮಜ್ಜಿಗೆಯನ್ನಕ್ಕೆ ನೆಂಚಿಕೊಳ್ಳಲಿಕ್ಕೆಂದು ಉಪ್ಪಿನಕಾಯಿ ಬಡಿಸಲಾಯ್ತು. ಅದು, ಮಿಥಿಲೆಯಲ್ಲೇ ಬೆಳೆದ ಇಡೀ ಮಾವಿನಮಿಡಿಗಳ ರುಚಿರುಚಿಯಾದ ಉಪ್ಪಿನಕಾಯಿ. ಒಬ್ಬ ವಾನರ ಮಾವಿನಮಿಡಿಯನ್ನು ಕೈಯಲ್ಲಿ ಹಿಚುಕಿದಾಗ ಅದರೊಳಗಿದ್ದ ಸಣ್ಣ ಬೀಜ ಛಂಗನೆ ಜಿಗಿಯಿತು! ಅದನ್ನು ನೋಡಿದವನೇ “ಎಲಾಇವ್ನ! ಅಷ್ಟೆತ್ತರಕ್ಕೆ ಜಿಗಿಯುವುದಕ್ಕೆ ನನ್ನಿಂದ ಆಗೋದಿಲ್ಲ ಅಂದ್ಕೊಂಡಿಯಾ?” ಎನ್ನುತ್ತ ಅವನೂ ಅಲ್ಲಿಯೇ ಊಟಕ್ಕೆ ಕುಳಿತವನೇ ಒಮ್ಮೆ ಮೇಲಕ್ಕೆ ಜಿಗಿದ. ಅವನನ್ನು ನೋಡಿದ ಇತರ ವಾನರರೂ ಜಿಗಿಯತೊಡಗಿದರು. ಉಳಿದವರೆಲ್ಲ ಮಜ್ಜಿಗೆಯೂಟ ಅರ್ಧಕ್ಕೇ ಬಿಟ್ಟು ಇದೇನಿದು ಗಲಾಟೆ ಎಂದು ಗಾಬರಿಯಾದರು. ವಾನರರ ಅಭ್ಯಾಸಬಲದಿಂದಾಗಿ ಜನಕಮಹಾರಾಜನ ಡೈನಿಂಗ್ಹಾಲ್ ಹೇಗೆ ‘ಮೆಸ್’ ಆಗಿದ್ದಿರಬಹುದೆಂಬ ದೃಶ್ಯವನ್ನು ನೀವೇ ಊಹಿಸಿ. ಅದಿರಲಿ, ರಾಮ ವಾನರರೊಂದಿಗೆ ಮಾತನಾಡುವಾಗ ಇಂಗ್ಲೀಷ್ ಪದಗಳನ್ನೂ ಬಳಸಿದನೇ? ಯಾಕಾಗಬಾರದು? ಬಹುಶಃ ಅವನಿಗೂ ನಮ್ಮಂತೆಯೇ ಅಭ್ಯಾಸಬಲ. ಅಷ್ಟಕ್ಕೂ ‘ಬಿಹೇವ್ ಪ್ರಾಪರ್ಲಿ’ ಎಂದದ್ದೇ ವಾನರರ ಜಿಗಿತಕ್ಕೆ ಹೇತುವಾಯಿತೋ ಏನೊ. ಇನ್ನು, ಹಾಸ್ಯಪ್ರವೃತ್ತಿಯ ದೇವರೆಂದೇ ಖ್ಯಾತನಾದ ಗಣೇಶ ಮಾಡಿದ ಒಂದು ಕಿತಾಪತಿಯ ಪ್ರಸಂಗವೂ ಚೆನ್ನಾಗಿದೆ. ಕೈಲಾಸದ ಫ್ಯಾಮಿಲಿಫೊಟೊ ನೀವು ನೋಡೇಇರುತ್ತೀರಿ. ಅದನ್ನೊಮ್ಮೆ ನೆನಪಿಸಿಕೊಳ್ಳಿ. ಆಚೀಚೆ ಶಿವ-ಪಾರ್ವತಿ. ನಡುವೆ ಗಣೇಶ. ಅವರು ಕುಳಿತುಕೊಳ್ಳುತ್ತಿದ್ದದ್ದೇ ಹಾಗೆ. ಅಷ್ಟೇಅಲ್ಲ, ಗಣೇಶನಿಗೆ ಎಡಗೆನ್ನೆಗೆ ಪಾರ್ವತಿಯೂ ಬಲಗೆನ್ನೆಗೆ ಶಿವನೂ ಕಂಟಿನ್ಯುವಸ್ ಆಗಿ ಮುತ್ತು ಕೊಡುತ್ತಿದ್ದರು. ‘ಹೌದಾ ಇದೇ ನಿಮ್ಮ ಅಭ್ಯಾಸವಾ ಮಾಡ್ತೇನ್ ತಡೀರಿ ನಿಮಗೆ’ ಎಂದುಕೊಂಡ ಕಿಲಾಡಿ ಗಣೇಶ ಒಮ್ಮೆ ಏನುಮಾಡಿದನೆಂದರೆ ಆಕಡೆಯಿಂದ ಪಾರ್ವತಿಯೂ ಈಕಡೆಯಿಂದ ಈಶ್ವರನೂ ಮುತ್ತುಕೊಡಲು ಬಗ್ಗಿದಾಗ ತಾನು ಅಲ್ಲಿಂದ ಥಟ್ಟನೆ ಹಿಂದೆಸರಿದುಬಿಟ್ಟ! ಜಗತಃ ಪಿತರೌ ಪಾರ್ವತೀ-ಪರಮೇಶ್ವರೌ ಚುಂಬನದೃಶ್ಯದಲ್ಲಿ ಕಂಡುಬಂದ ಪರಿ ಇದು. ನಾನೇ ಹೆಣೆದದ್ದು ಅಂದ್ಕೊಳ್ಳಬೇಡಿ. ಸುಭಾಷಿತ ರತ್ನಭಾಂಡಾಗಾರಂ ಪುಸ್ತಕದಲ್ಲಿರುವ ಸಂಸ್ಕೃತ ಶ್ಲೋಕವನ್ನು ನಾನು ಅನುವಾದಿಸಿದ್ದು ಅಷ್ಟೇ. ಆಯ್ತು. ಪುರಾಣಗಳ, ದೇವ-ವಾನರರ ವಿಚಾರದ ನಂತರ ಈಗ ನರರ ವಿಷಯಕ್ಕೆ ಬರೋಣ. ದೂರವಾಣಿ ಸಂಭಾಷಣೆಯಲ್ಲಿ ಕೆಲವರ ಅಭ್ಯಾಸಬಲಗಳು ಪ್ರಕಟಗೊಳ್ಳುವುದಿದೆ. ಮಾತೆಲ್ಲ ಮುಗಿದಮೇಲೆ ‘ಇಡ್ಲಾ?’ ಎಂದುಹೇಳಿ ಕೊನೆಗೊಳಿಸುವುದು ಅಭ್ಯಾಸ. ಹಳೇಕಾಲದಲ್ಲಿ, ಅಥವಾ ಈಗಲೂ, ಲ್ಯಾಂಡ್ಲೈನ್ ಫೋನ್ನಲ್ಲಿ ಮಾತನಾಡಿ ಆದಮೇಲೆ ರಿಸೀವರನ್ನು ಅದರ ಬೇಸ್ಡಿವೈಸ್ಗೆ ಕ್ರೆಡಲ್ ಮಾಡಬೇಕು ತಾನೆ? ಹಾಗಾಗಿ ‘ಇಡ್ಲಾ?’ ಎಂಬ ಪ್ರಶ್ನೆ. ಈಗ ವಿವಿಧ ವಿನ್ಯಾಸಗಳ ಮೊಬೈಲ್ಫೋನ್ಗಳು ಬಂದಿರುವಾಗ ‘ಇಡುವುದು’ ಏನಿದ್ದರೂ ಜೇಬಿನಲ್ಲಿ/ಚೀಲದಲ್ಲಿ. ಇನ್ನು ಕೆಲವರಿಗೆ ಫೋನ್ ಸಂಭಾಷಣೆಯನ್ನು ‘ಬರ್ಲಾ?’ ಎಂದುಹೇಳಿ ಕೊನೆಗೊಳಿಸುವ ರೂಢಿ. ಅದರಲ್ಲೇನೂ ತಪ್ಪಿಲ್ಲ, ಆದರೆ ಆಭಾಸವೆನಿಸುವುದು “ಇಲ್ಲಪ್ಪಾ ಆಫೀಸ್ನಲ್ಲಿ ಸಿಕ್ಕಾಪಟ್ಟೆ ಕೆಲ್ಸ, ರಜೆ ಸಿಗೋಹಾಗಿಲ್ಲ. ಊರಿಗೆ ಬರೋದಕ್ಕೆ ಆಗೋದೇಇಲ್ಲ. ಬರೋದಿಲ್ಲ ನಾನು, ತಪ್ಪ್ತಿಳ್ಕೋಬೇಡಿ...” ಅಂತೆಲ್ಲ ಹೇಳಿ ಆಕಡೆಯ ಪಾರ್ಟಿಯವರನ್ನು ಕನ್ವಿನ್ಸ್ ಮಾಡಿ ಎಲ್ಲ ಮುಗಿದಾದಮೇಲೆ ‘ಬರ್ಲಾ?’ ಎಂದುಹೇಳಿ ಫೋನ್ ಇಟ್ಟಾಗ. ಅಭ್ಯಾಸಬಲ! ಬರವಣಿಗೆಯಲ್ಲೂ ಕೆಲವೊಮ್ಮೆ ಆಭಾಸಗಳಾಗುವುದಿದೆ. ಮೊನ್ನೆ ಒಂದು ಲೇಖನದಲ್ಲಿ ಗಮನಿಸಿದ ವಾಕ್ಯ. ‘ಇತ್ತೀಚೆಗೆ ನಿಧನರಾದ ಸೋಏಂಡ್ಸೋ ಅವರ ಶ್ರದ್ಧಾಂಜಲಿ ಸಭೆ ಅಭೂತಪೂರ್ವವಾಗಿ ನಡೆಯಿತು.’ ಬಹುಶಃ ಆ ಲೇಖಕರಿಗೆ ಅದ್ಧೂರಿ, ಅಭೂತಪೂರ್ವ, ವೈಭವೋಪೇತ ಅಂತೆಲ್ಲ ವಿಶೇಷಣಗಳನ್ನು ಬಳಸಿ ಅಭ್ಯಾಸ. ಶ್ರದ್ಧಾಂಜಲಿ ಸಭೆ ಎಷ್ಟೇ ಅದ್ಧೂರಿಯಿರಲಿ ಸಪ್ಪೆಯಿರಲಿ ಸತ್ತ ವ್ಯಕ್ತಿಯ ಮಟ್ಟಿಗೆ ಅಭೂತಪೂರ್ವವೇ ಆಗಿರುತ್ತದಲ್ಲ? ಇಲ್ಲಿ ನನಗೆ ಇನ್ನೊಂದು ಪ್ರಸಂಗ ನೆನಪಾಗುತ್ತಿದೆ. ಒಂದೆರಡು ವರ್ಷಗಳ ಹಿಂದೆ ಸ್ನೇಹಿತರೊಬ್ಬರ ಅಮ್ಮ ನಿಧನರಾದಾಗ ಆ ಸುದ್ದಿಯಿದ್ದ ಇಮೇಲ್ ನನಗೆ ಮತ್ತು ಸುಮಾರಷ್ಟು ಜನ ಕಾಮನ್ಫ್ರೆಂಡ್ಸ್ಗೆಲ್ಲ ಹೋಗಿತ್ತು. ಅದರಲ್ಲಿ ಕೆಲವರು ಶೋಕತಪ್ತ ಸ್ನೇಹಿತನಿಗಷ್ಟೇ ರಿಪ್ಲೈ ಕಳಿಸಿದರೆ ಮತ್ತೆ ಕೆಲವರು reply all ಬಟನ್ ಒತ್ತಿ ‘sad to hear. may your mother's soul rest in peace..’ ಎಂದು ಟೈಪಿಸಿ ಕಳಿಸಿದ್ದರು. ಇದ್ದಬಿದ್ದವರ ಅಮ್ಮಂದಿರನ್ನೆಲ್ಲ ಸುಮ್ಮನೆ ಸಾಯಿಸಿದ್ದರು. ಪರವಾಗಿಲ್ಲ, ಅದು ಶೋಕತಪ್ತ ಸ್ನೇಹಿತನನ್ನಷ್ಟೇ ಉದ್ದೇಶಿಸಿದ್ದೆಂದು ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಇಮೇಲ್ ಲಿಸ್ಟ್ನಲ್ಲಿದ್ದ ಒಬ್ಬಾಕೆ ‘ರಿಪ್ಲೈ ಆಲ್’ ಮಾಡಿದ್ದಷ್ಟೇ ಅಲ್ಲ, ಆಕೆಯ ಇಮೇಲ್ ಸಿಗ್ನೇಚರ್ನಲ್ಲಿ Don't worry, Be happy! ಎಂದು ಒಂದು ಸ್ಮೈಲಿ ಬೇರೆ! ಏನು ಮಾಡುವುದು, ಅಭ್ಯಾಸಬಲ. ಏನ್ರೀ ಹೊಸವರ್ಷದ ಖುಶಿಯಲ್ಲಿರುವಾಗ ಸಾವಿನ ಸುದ್ದಿ ಮಾತಾಡ್ತಿದ್ದೀರಲ್ಲಾ ಎಂದು ನೀವು ಅಸಮಾಧಾನ ವ್ಯಕ್ತಪಡಿಸುವ ಮೊದಲೇ ಅದನ್ನು ನಿಲ್ಲಿಸುತ್ತೇನೆ. ಅದಕ್ಕಿಂತ, ಅಭ್ಯಾಸಬಲದ ಈ ಜೋಕು ಇಂಟರ್ನೆಟ್ನಲ್ಲಿ ಸಿಕ್ಕಿದ್ದು, ಚೆನ್ನಾಗಿದೆ. ಓದಿನೋಡಿ. ಬಸ್ಡ್ರೈವರ್ ಆಗಿದ್ದ ಗುಂಡ, ಕಷ್ಟಪಟ್ಟು ಟ್ರೈನಿಂಗ್ ಮುಗಿಸಿ ಪೈಲಟ್ ಆಗೇಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವಾಗ ಇದ್ದಕ್ಕಿದ್ದಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸಬಲದಂತೆ ಗುಂಡ ಹೇಳ್ದ, “ರೀ ಎಲ್ರೂ ಕೆಳಗೆ ಇಳಿದು ಗಾಡೀನ ಸ್ವಲ್ಪ ದೂರ ತಳ್ಳಿ. ಎಂಜಿನ್ ಆಫ್ ಆಗಿದೆ...” ಈ ಜೋಕ್ನಂತೆ ಅಲ್ಲವಾದರೂ ವಿಮಾನಯಾನಕ್ಕೆ ಸಂಬಂಧಿಸಿದಂತೆಯೇ ಮೊನ್ನೆ ನನಗೊಂದು ಅನುಭವ ಆಯ್ತು. ಇದರಲ್ಲಿ ಅಭ್ಯಾಸಬಲದ ಆಭಾಸ ಮಾಡಿದವನು ನಾನೇ. ಅದು ಹೀಗಾಯ್ತು- ವಿಮಾನನಿಲ್ದಾಣದಲ್ಲಿ ಚೆಕ್ಇನ್ ಎಲ್ಲ ಆದಮೇಲೆ ಅಲ್ಲಿನ ಸಿಬ್ಬಂದಿ(ಣಿ) ನನಗೆ ಬೋರ್ಡಿಂಗ್ಪಾಸ್ ಕೊಡುತ್ತ ‘ಹ್ಯಾವ್ ಎ ನೈಸ್ ಜರ್ನಿ’ ಎಂದಳು. ಯಾವ ಗುಂಗಿನಲ್ಲಿದ್ದೆನೋ ‘ಸೇಮ್ ಟು ಯೂ!’ ಎಂದೆ. ತತ್ಕ್ಷಣ ಅವಳು ನಸುನಕ್ಕು ‘ಓಹ್ ನೋ ಐ ಆಮ್ ನಾಟ್ ಫ್ಲೈಯಿಂಗ್!’ ಎಂದಳು. ನನ್ನ ಎಡವಟ್ಟಿನ ಅರಿವಾಗಿ ‘ದೆನ್ ಫೈನ್, ಹ್ಯಾವ್ ಎ ಗುಡ್ ಡೇ’ ಎಂದು ವಿಶ್ ಮಾಡಿ ಅಲ್ಲಿಂದ ಹೊರಟೆ. ಅಮೆರಿಕದಲ್ಲಿ ‘ಹ್ಯಾವ್ ಎ ಗುಡ್ ಡೇ’ ಅಥವಾ ‘ಹ್ಯಾವ್ ಎ ಗುಡ್ ವನ್’ ಎಂಬಂಥ ಅನುದಿನದ ಒಣಹಾರೈಕೆಗಳಿಗೆ ‘ಯೂ ಟೂ’ ಎಂದೋ ‘ಸೇಮ್ ಟು ಯೂ’ ಎಂದೋ ಹೇಳಿಹೇಳಿ ಅಭ್ಯಾಸವಾದ್ದರಿಂದ ಏರ್ಪೋರ್ಟ್ನಲ್ಲಿ ಆರೀತಿ ನನ್ನ ಅಭ್ಯಾಸಬಲಪ್ರದರ್ಶನ ಆಗಿತ್ತು. ಈಗ ನಿಮ್ಮ ಸರದಿ. ಅಭ್ಯಾಸಬಲ ನಿಮಗೆಷ್ಟು ಇದೆ ಎಂದು ಬರೆದು ತಿಳಿಸುತ್ತೀರಾ? ಆಯ್ದ ಅನುಭವಗಳನ್ನೆಲ್ಲ ಪೋಣಿಸಿ ಒಂದು ಪರಾಗ ಸ್ಪರ್ಶಿಸೋಣವಂತೆ! ======== [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20230822