Episodes
Saturday Jul 23, 2011
The joy of reading continues
Saturday Jul 23, 2011
Saturday Jul 23, 2011
ದಿನಾಂಕ 24 ಜುಲೈ 2011ರ ಸಂಚಿಕೆ...
ಪುಸ್ತಕವೆಂದರೆ ಜೇಬಿನೊಳಗಿನ ಉದ್ಯಾನವನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]ಕೈಬೀಸಿ ಕರೆದಿಹುದು ಸಾಹಿತ್ಯ ತೋಟ ಕಣ್ಸೆಳೆಯೆ ದಕ್ಕುವುದು ತಂಪಿನ ನೋಟ ಹಣ್ಣುಂಟು ಕಾಯುಂಟು ಹೀಚುಗಾಯಿಗಳು ಕಂಪನ್ನು ಚೆಲ್ಲುವ ಬಗೆಬಗೆಯ ಹೂಗಳು
ಕುವೆಂಪು ಬೇಂದ್ರೆಯಿಹ ಕನ್ನಡವೇ ಚೆನ್ನ ಮಂಕುತಿಮ್ಮನ ನೀನು ಮರೆಯಬೇಡಣ್ಣ ಅನಕೃ ತರಾಸು ತೇಜಸ್ವಿ ಜೊತೆಗೆ ಬಲ್ಲಾಳ ಕಾರಂತ ಚಿತ್ತಾಲರೆಡೆಗೆ
ತ್ರಿವೇಣಿ ಸಾಯಿಸುತೆ ಇಂದಿರೆಯ ನೆನೆದು ವೈದೇಹಿ ಅನುಪಮಾ ಸುಧೆಯನ್ನು ಮೊಗೆದು ಭೈರಪ್ಪ ಪುತಿನ ಮಾಸ್ತಿ ಗೊರೂರು ಸರಸತಿಯ ಮಕ್ಕಳಿಗೆ ಸಾಟಿ ಯಾರಿಹರು
ಬಂಡಾಯ ಕಹಳೆಯ ಸಿದ್ಧಲಿಂಗಯ್ಯ ಗಾಂಧಿಕ್ಲಾಸಿನ ಕುಂವೀ ನಮ್ಮವರೇ ಅಯ್ಯಾ ವಿವೇಕ ಜಯಂತ ವಸುಧೇಂದ್ರ ಇಷ್ಟ ಓದದೇ ಉಳಿದರೆ ನಮಗೆಯೇ ನಷ್ಟ...‘ಸಾಹಿತ್ಯಿಕ ಓದಿನ ಗೀಳನ್ನು ಇನ್ನಾದರೂ ಬೆಳೆಸಿಕೊಳ್ಳಬೇಕು’ ಎಂಬ ನನ್ನ ನಿರ್ಧಾರವನ್ನು ಶಿಕಾಗೋದಲ್ಲಿರುವ ಸ್ನೇಹಿತೆ ತ್ರಿವೇಣಿ ಶ್ರೀನಿವಾಸ ರಾವ್ ಸ್ವಾಗತಿಸಿದ್ದು ಹೀಗೆ! ಕಳೆದ ವಾರದ ಅಂಕಣವನ್ನು ಓದಿದ ಕೂಡಲೇ ಮನದಲ್ಲಿ ಮೂಡಿದ ಆಶುಕವಿತೆಯಾಗಿ ಇದನ್ನವರು ಬರೆದು ಕಳಿಸಿದ್ದಾರೆ. ಬೇಂದ್ರೆಯವರಿಂದ ಹಿಡಿದು ವಸುಧೇಂದ್ರವರೆಗೆ, ಸಾಯಿಸುತೆಯಿಂದ ಹಿಡಿದು ಸುಧಾಮೂರ್ತಿವರೆಗೆ ಕನ್ನಡ ಸಾಹಿತ್ಯಲೋಕದ ಮುತ್ತುಗಳನ್ನು ಪೋಣಿಸಿ ಸೊಗಸಾದ ಮಾಲೆ ಕಟ್ಟಿದ್ದಾರೆ. ಎಷ್ಟು ಚೆನ್ನಾಗಿದೆ ಅಲ್ಲವೇ? ತ್ರಿವೇಣಿ ಇದನ್ನು ಬರೀ ಸ್ತುತಿಗೀತೆಯಾಗಿ ಹೇಳಿದ್ದಲ್ಲ. ಈ ಎಲ್ಲ ಮಹಾನ್ ಸಾಹಿತಿಗಳ ಅನೇಕ ಕೃತಿಗಳನ್ನು ಅವರು ಓದಿ ಆನಂದಿಸಿದ್ದಾರೆ. ಅಷ್ಟೇಅಲ್ಲ, ಅವರು ಸ್ವತಃ ಓರ್ವ ಬರಹಗಾರ್ತಿ. ಹಿರಿಯ ‘ತ್ರಿವೇಣಿ’ಯವರ ಜಾಡಲ್ಲಿ ಹೆಜ್ಜೆಯಿಟ್ಟವರು. ಚಂದದ ಕಥೆ, ಕವಿತೆ, ಲಲಿತಪ್ರಬಂಧಗಳನ್ನೂ ಬರೆಯುತ್ತಾರೆ. ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯಿಕ ಓದು ಅವರ ಚಿಂತನಾಶಕ್ತಿಯನ್ನು ಪಕ್ವವಾಗಿಸಿದೆ. ಬರವಣಿಗೆಯಲ್ಲಿನ ಸತ್ವವನ್ನು ಹೆಚ್ಚಿಸಿದೆ. ಅಂದಮೇಲೆ ಸಾಹಿತ್ಯ ತೋಟಕ್ಕೆ ಸ್ವಾಗತ ಕೋರಿರುವ ತ್ರಿವೇಣಿಯವರ ಆಶಯಕ್ಕೆ ಹೆಚ್ಚು ಬೆಲೆ. ಸಾಹಿತ್ಯಿಕ ಓದನ್ನು ಇನ್ನೂ ಹೆಚ್ಚುಹೆಚ್ಚು ಜನರು ರೂಢಿಸಿಕೊಳ್ಳುವುದಕ್ಕೆ ಅವರ ಈ ಆಶುಕವಿತೆಯೇ ಒಂದು ಸ್ಫೂರ್ತಿ ಸೆಲೆ. ಹಾಂ! ತೋಟ ಎಂದೊಡನೆ ನೆನಪಾಯ್ತು, A book is like a garden carried in the pocket" ಅಂತ ಒಂದು ಚೈನೀಸ್ ನಾಣ್ಣುಡಿಯಿದೆ. ಪುಸ್ತಕವೆಂದರೆ ಜೇಬಿನೊಳಗೇ ಒಂದು ಪುಟ್ಟ ಉದ್ಯಾನವಿದ್ದಂತೆ. ಆಗಾಗ ಓದಿಕೊಂಡರೆ (ವಾಯುವಿಹಾರಕ್ಕೆ ಮನಸ್ಸನ್ನು ಒಡ್ಡಿಕೊಂಡರೆ) ಆಹ್ಲಾದ ಮತ್ತು ಆನಂದ. ಮೆದುಳಿಗೂ ಅಷ್ಟಿಷ್ಟು ವ್ಯಾಯಾಮ. ನಿಜಕ್ಕೂ ಬಹಳ ಅರ್ಥಗರ್ಭಿತವಾಗಿದೆ ಈ ನಾಣ್ಣುಡಿ. ಅದೇನೇ ಇರಲಿ ಓದಿನ ಹಿರಿಮೆಯನ್ನು ಮತ್ತು ಪುಸ್ತಕಗಳ ಗರಿಮೆಯನ್ನು ನಿಮಗೆ, ಅದರಲ್ಲೂ ನಾನು, ತಿಳಿಸುವುದೇನಿದೆ? ಆದರೆ ಭಾರತದಿಂದ ಹಿಂದಿರುಗುವಾಗ ಸೂಟ್ಕೇಸ್ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದೇನೆ, ಅವು ಯಾವುವಂತ ತಿಳಿಸುತ್ತೇನೆ ಎಂದಿದ್ದೆನಷ್ಟೆ, ಅದನ್ನೇ ಈಗ ಮಾಡುತ್ತೇನೆ. ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು- ಕೆ.ವಿ.ಸುಬ್ಬಣ್ಣ ನೆನಪಿನಲ್ಲಿ ಅಕ್ಷರ ಪ್ರಕಾಶನ ಹೊರತಂದ ‘ಮೊದಲ ಓದು’ ಪುಸ್ತಕಮಾಲೆ- ನನ್ನಂಥವರಿಗೆ ಹೇಳಿ ಮಾಡಿಸಿದ ಪುಸ್ತಕಗಳಿವು. ಒಂದೊಂದರಲ್ಲೂ ನೂರಎಂಟು ಪುಟಗಳು. ಆ ಸರಣಿಯಲ್ಲಿ ಒಟ್ಟು ಐವತ್ತು ಪುಸ್ತಕಗಳಿವೆಯಂತೆ. ಆದಿಕವಿ ಪಂಪನಿಂದ ಹಿಡಿದು ಈಗಿನ ಅನಂತಮೂರ್ತಿವರೆಗೂ ವಿವಿಧ ಲೇಖಕರ ಬರಹಗಳ ಸಂಗ್ರಹ. ಪ್ರಾತಿನಿಧಿಕವಾಗಿ ನನಗೆ ‘ನಾಗೇಶ ಹೆಗಡೆ ಅವರ ಆಯ್ದ ಬರಹಗಳು’ ಪುಸ್ತಕ ಸಿಕ್ಕಿದೆ. ಬಹಳ ಚೆನ್ನಾಗಿದೆ. ಇನ್ನೊಂದು ಪುಸ್ತಕ ನನ್ನ ಓದಿನ ಆರಂಭಕ್ಕೆ ಸರಿಯಾಗಿಯೇ ಇದೆ ಅಂತನಿಸಿದ್ದು ‘ಗಾಂಧೀಜಿಯವರ ಸಂಕ್ಷಿಪ್ತ ಆತ್ಮಕಥನ’ ಎಂಬ ಪುಸ್ತಕ. ಇದನ್ನು ಸುಮಾರಾಗಿ ಹೈಸ್ಕೂಲ್ ವಿದ್ಯಾರ್ಥಿಗಳ ಮಟ್ಟಕ್ಕಾಗುವಂತೆ ಬರೆಯಲಾಗಿದೆ. ಇದರ ಲೇಖಕಿ ಎಚ್.ಎಲ್.ಸೀತಾದೇವಿ. ಅವರ ಹೆಸರನ್ನು ನೀವೂ ಕೇಳಿಯೇ ಇರುತ್ತೀರಿ- ಎಂಬತ್ತರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಓದುತ್ತಿದ್ದರು. ಆಮೇಲೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿಸಂಪಾದಕಿಯೂ ಆಗಿದ್ದರಂತೆ. ನನಗೆ ಪರಾಗಸ್ಪರ್ಶ ಓದುಗರಾಗಿ ಇ-ಪರಿಚಿತರಾದರು, ವಿಶ್ವಾಸಪೂರ್ವಕವಾಗಿ ಪುಸ್ತಕ ಕೊಟ್ಟು ನನ್ನ ಓದಿಗೆ ಪ್ರೇರಕರಾದರು. ಸೀತಾದೇವಿಯ ವಿಚಾರ ಅದಾದರೆ, ಸೀತೆಯನ್ನು ಕುರಿತ ‘ಸೀತಾಂತರಂಗ’ ಎಂಬ ತಮ್ಮ ಕೃತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ ಬೆಂಗಳೂರಿನ ಡಾ.ಜಯಂತಿ ಮನೋಹರ್. ಈ ಕಥಾನಕವು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತಂತೆ. ಮತ್ತೆ, ಸುಧಾದಲ್ಲಿಯೇ ತುಂಬ ವರ್ಷಗಳ ಹಿಂದೆ ಬರುತ್ತಿದ್ದ ‘ಕಜ್ಜಾಯ’ದ ಪುಸ್ತಕರೂಪವೂ ನನಗೆ ಉಡುಗೊರೆಯಾಗಿ ಸಿಕ್ಕಿದೆ, ಸ್ವತಃ ಸುನಂದಾ ಬೆಳಗಾಂವಕರ್ ಅವರಿಂದಲೇ! ಕಾದಂಬರಿ ಓದುವವರಿಗಾದರೆ ಆಮೇಲೆ ಅದು ಚಲನಚಿತ್ರವಾಗಿ ಬಂದಾಗ ಹೇಗಿದೆ ಎಂದು ನೋಡುವ ಕುತೂಹಲ ಇರುತ್ತದೆ. ನನಗಾದರೋ ಈಗ ತದ್ವಿರುದ್ಧ ಅನುಭವ ಆಗುವುದಿದೆ- ಮೊನ್ನೆ ಬೆಂಗಳೂರಿನಲ್ಲಿದ್ದಾಗ ‘ಬೆಟ್ಟದ ಜೀವ’ ಸಿನೆಮಾ ನೋಡಿದೆ, ಇಷ್ಟ ಆಯ್ತು. ಈಗಿನ್ನು ಶಿವರಾಮ ಕಾರಂತರ ಮೂಲ ಕಾದಂಬರಿಯನ್ನು ಓದಬೇಕೂಂತಿದ್ದೇನೆ. ಹಿರಿಯ ಮಿತ್ರ ಎಸ್.ಎಂ.ಪೆಜತ್ತಾಯ ಅವರು ಕಳೆದವರ್ಷವೇ ಆ ಪುಸ್ತಕವನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದರು, ಓದುವ ಮುಹೂರ್ತ ಕೂಡಿಬಂದಿರಲಿಲ್ಲ ಅಷ್ಟೇ. ಈರೀತಿ ಓದಿಗೆ ಕಾಯುತ್ತಿರುವ ಕಾದಂಬರಿಗಳು ಈಗ ನನ್ನ ಬಳಿ ಇನ್ನೂ ಕೆಲವಿವೆ. “ಒಳ್ಳೆಯ ಪುಸ್ತಕ, ಓದಿ!” ಎಂದು ಸ್ನೇಹಿತರು ಕೊಟ್ಟಿರುವಂಥವು- ಕೆ.ವಿ.ಅಯ್ಯರ್ ಅವರ ‘ರೂಪದರ್ಶಿ’, ಅನಂತಮೂರ್ತಿ ಅವರ ‘ಸಂಸ್ಕಾರ’, ತರಾಸು ಅವರ ‘ಹಂಸಗೀತೆ’; ಇನ್ನುಳಿದವು ಕಾದಂಬರಿಕಾರರೇ ಕಾಂಪ್ಲಿಮೆಂಟರಿ ಕಾಪಿ ಕೊಟ್ಟಿರುವಂಥವು- ಡಾ.ತೋನ್ಸೆ ಕೃಷ್ಣರಾಜು ಅವರ ‘ಸಾವಿರ ಪಕ್ಷಿಗಳು’ (ಇದು ನೊಬೆಲ್ ಪಾರಿತೋಷಕ ಪುರಸ್ಕೃತ ಜಪಾನಿ ಕೃತಿಯ ಕನ್ನಡ ಅನುವಾದ. ಡಾ.ತೋನ್ಸೆ ಇಲ್ಲೇ ವಾಷಿಂಗ್ಟನ್ನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಅವರು ಗೋಪಾಲಕೃಷ್ಣ ಅಡಿಗರ ಅಳಿಯ ಎಂಬುದು ಸುಲಭ ಪರಿಚಯ), ದಾವಣಗೆರೆಯಲ್ಲಿ ಇನ್ನೂ ಎಂಜಿನಿಯರಿಂಗ್ ಓದುತ್ತಿರುವ ಗಣೇಶ ಭಟ್ ಬರೆದ ಕಿರುಕಾದಂಬರಿ ‘ಸಮಯದ ಸರ್ಕಲ್’, ಡಾ. ಗುರುಪ್ರಸಾದ್ ಕಾಗಿನೆಲೆಯವರ ‘ಗುಣ’ ಇತ್ಯಾದಿ. ಮತ್ತೆ ಕೆಲವು ಕಥಾಸಂಕಲನಗಳು: ಮಹಾಬಲಮೂರ್ತಿ ಕೊಡ್ಲೆಕೆರೆಯವರ ‘ನೆರಳು ಮತ್ತು ಇತರ ಕಥೆಗಳು’, ರಘುನಾಥ ಚ.ಹ ಅವರ ‘ಹೊರಗೂ ಮಳೆ ಒಳಗೂ ಮಳೆ’, ವಸುಧೇಂದ್ರ ಬರೆದ ‘ಮನೀಷೆ’, ‘ಚೇಳು’, ‘ಹಂಪಿ ಎಕ್ಸ್ಪ್ರೆಸ್’, ಎಂ.ಎಸ್.ಶ್ರೀರಾಮ್ ಅವರ ‘ತೇಲ್ ಮಾಲೀಶ್’ ವಗೈರಾ ವಗೈರಾ. ಪತ್ರಿಕೆಗಳಲ್ಲಿ ಬರುವ ‘ಸಾದರ ಸ್ವೀಕಾರ’ ಪಟ್ಟಿಯಂತೆ ತೋರಬಹುದು, ಆದರೆ ನಾನೀಗ ನೀಟಾಗಿ ಜೋಡಿಸಿಟ್ಟಿರುವ ಕಪಾಟಿನಲ್ಲಿ ಹೆಸರಿಸಲೇಬೇಕಾದ ಇನ್ನೂ ಹಲವಾರು ಪುಸ್ತಕಗಳಿವೆ- ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’, ನೇಮಿಚಂದ್ರ ಅವರ ‘ಬದುಕು ಬದಲಿಸಬಹುದು’, ಡಾ.ಜೀ.ವಿ.ಕುಲಕರ್ಣಿ ಅವರ ‘ಬೇಂದ್ರೆ ಜೀವನ ಮತ್ತು ಸಾಹಿತ್ಯ’, ಕ್ಯಾಪ್ಟನ್ ಗೋಪಿನಾಥ್ ಬರೆದು ವಿಶ್ವೇಶ್ವರ ಭಟ್ ಕನ್ನಡಕ್ಕೆ ಅನುವಾದಿಸಿದ ‘ಬಾನ ಯಾನ’, ಕನ್ನಡ ಚಿತ್ರರಂಗ ೭೫ ವರ್ಷಗಳ ಒಂದು ಫ್ಲಾಷ್ಬ್ಯಾಕ್ - ಡಾ.ಕೆ.ಪುಟ್ಟಸ್ವಾಮಿ ಬರೆದ ‘ಸಿನಿಮಾ ಯಾನ’, ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದ ಮುದ್ದಣನ ಸಂಸ್ಮರಣೆಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ನಂದಳಿಕೆಯ ನಂದನ’ ಮತ್ತು ‘ಮುದ್ದಣನಿಗೆ ನಮನ’, ಪೂರ್ಣವಾಗಿ ವಾರ್ಧಕ ಷಟ್ಪದಿಯಲ್ಲೇ ರಚಿತವಾಗಿರುವ ರಾಮಚಂದ್ರರಾವ್ ಜಾಣ ಅವರ ‘ರಾಮಾಯಣ ಸುಂದರಕಾಂಡ’, ಡಿವಿಜಿಯವರ ಬದುಕಿನ ನೂರಾರು ರಸಪ್ರಸಂಗಗಳನ್ನು ಶತಾವಧಾನಿ ಡಾ.ಆರ್.ಗಣೇಶ್ ವಿದ್ವತ್ಪೂರ್ಣವಾಗಿ ಸಾದರಪಡಿಸಿರುವ ‘ಬ್ರಹ್ಮಪುರಿಯ ಭಿಕ್ಷುಕ’... ಒಂದು ಪುಸ್ತಕವೆಂದರೇನೇ ಉದ್ಯಾನವನ ಅಂತಾದರೆ, ಇಷ್ಟೊಂದು ಪುಸ್ತಕಗಳೆಂದರೆ ನನ್ನ ಪಾಲಿಗಂತೂ ಸಹ್ಯಾದ್ರಿಯ ನಿತ್ಯಹರಿದ್ವರ್ಣ ವನರಾಜಿಯೇ ಸೈ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Jul 16, 2011
Need to cultivate Book-Reading habit
Saturday Jul 16, 2011
Saturday Jul 16, 2011
ದಿನಾಂಕ 17 ಜುಲೈ 2011ರ ಸಂಚಿಕೆ...
ಇನ್ನಾದರೂ ಬೆಳೆಸಿಕೊಳ್ಳಬೇಕು ಓದಿನ ಗೀಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅದೊಂದು ಕೊರಗು ನನ್ನನ್ನು ಆಗಾಗ ಕಾಡುವುದಿದೆ. ಏನೆಂದರೆ, ಸಾಹಿತ್ಯಿಕ ಓದಿನ ಒಳ್ಳೆಯ ಹವ್ಯಾಸವನ್ನು ನಾನು ಬೆಳೆಸಿಕೊಳ್ಳಲೇ ಇಲ್ಲ. ಓದು ಕೊಡುವ ಅಮಿತಾನಂದಕ್ಕೆ ನನ್ನನ್ನು ಒಡ್ಡಿಕೊಳ್ಳಲೇ ಇಲ್ಲ. ಇದನ್ನೇಕೆ ಹೇಳುತ್ತಿದ್ದೇನೆಂದರೆ ‘ಇವನು ತುಂಬಾ ಓದಿಕೊಂಡವನಿರಬೇಕು...’ ಎಂದು ನನ್ನ ಬಗ್ಗೆ ಒಂದು ರೀತಿಯ ಸದಭಿಪ್ರಾಯ ಇಟ್ಟುಕೊಂಡವರು ಕೆಲವರಿದ್ದಾರೆ. ಅವರ ಮನಸ್ಸಿನಲ್ಲಿ ಈತ ಸಾಹಿತ್ಯದ ಸರಕನ್ನು ಸಾಕಷ್ಟು ಅರೆದು ಕುಡಿದವನು ಎಂಬ ಭಾವನೆಯಿದೆ. ಪ್ರಾಯಶಃ ನನ್ನ ಅಂಕಣ ಬರವಣಿಗೆಯಲ್ಲಿ ಕಂಡುಬರುವ ವಸ್ತುವೈವಿಧ್ಯವೂ ಅಂಥದೊಂದು ಮಿಥ್ಯೆಗೆ ಕಾರಣವಾಗಿದೆ. ಆದರೆ ವಾಸ್ತವಾಂಶ ಬೇರೆಯೇ ಇದೆ. ಕನ್ನಡದಲ್ಲಾಗಲೀ, ಇಂಗ್ಲಿಷ್ ಅಥವಾ ಬೇರಾವ ಭಾಷೆಯಲ್ಲಾಗಲೀ ನನ್ನ ‘ಸಾಹಿತ್ಯಿಕ’ ಓದು ಸೊನ್ನೆ. ಕಥೆ-ಕಾದಂಬರಿ, ಕಾವ್ಯ-ನಾಟಕ, ಆತ್ಮಚರಿತ್ರೆ ಮುಂತಾದ ಗಂಭೀರ ಸಾಹಿತ್ಯಪ್ರಕಾರಗಳು ಅದೇಕೋ ನನ್ನ ಆಸಕ್ತಿಯ ವ್ಯಾಪ್ತಿಯೊಳಕ್ಕೆ ಇದುವರೆಗೆ ಬಂದೇ ಇಲ್ಲ. Voracious reader ಎನ್ನುವಲ್ಲಿನ voracious ಹಾಗಿರಲಿ, ಒಬ್ಬ ಸಾಮಾನ್ಯ reader ಅಂತನ್ನಿಸಿಕೊಳ್ಳುವಷ್ಟನ್ನೂ ನಾನು ಓದಿಲ್ಲ. ಇದನ್ನೇನೂ ನನ್ನ ಹೆಗ್ಗಳಿಕೆ ಎನ್ನುತ್ತಿಲ್ಲ. ಅಥವಾ ತೀರಾ ಕೀಳರಿಮೆಯಿಂದ ಹೇಳುತ್ತಿರುವುದೂ ಅಲ್ಲ. ಹಾಗಂತ, ಏನನ್ನೂ ಓದುವುದೇ ಇಲ್ಲ ಎಂದೇನಿಲ್ಲ. ಪುಸ್ತಕಗಳೆಂದರೆ ನನಗೂ ಇಷ್ಟವೇ; ಸಾಧ್ಯವಾದಾಗೆಲ್ಲ ಗ್ರಂಥಾಲಯಗಳಿಗೂ ಭೇಟಿ ಕೊಡುತ್ತೇನೆ. ಆದರೆ ಏನಿದ್ದರೂ ‘ಆಕರ ಗ್ರಂಥ’ (reference book)ಗಳೇ ಮೊದಲು ನನ್ನ ದೃಷ್ಟಿಗೆ ಬೀಳುವುದು. ಅಟ್ಲಸ್, ಡಿಕ್ಷನರಿ, ಎನ್ಸೈಕ್ಲೊಪೀಡಿಯಾ, ಇಯರ್ಬುಕ್ನಂಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಕಣ್ಣಾಡಿಸುವುದೆಂದರೆ ಎಲ್ಲಿಲ್ಲದ ಉಮೇದು. ಕೊನೆಗೆ ರೈಲ್ವೇ ಟೈಮ್ಟೇಬಲ್ ಮಾದರಿಯ ಪುಸ್ತಕಗಳಾದರೂ ಸರಿ, ಒಟ್ಟಿನಲ್ಲಿ ಮಾಹಿತಿಯ ಕಣಜ ಆದರಾಯಿತು. ಅಂತಹ ಪುಸ್ತಕಗಳಿಂದ ನಮ್ಮ ಜ್ಞಾನದ ಆಳ ಹೆಚ್ಚುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಜ್ಞಾನದ ಅಗಲ ಖಂಡಿತ ಹೆಚ್ಚುತ್ತದೆ ಎಂದು ನನ್ನ ಅನಿಸಿಕೆ, ಮತ್ತು ಅನುಭವ ಕೂಡ. ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ- ಯಾವುದೋ ಲೇಖನದಲ್ಲಿ ನಾನು ಭೈರಪ್ಪನವರ ಕಾದಂಬರಿಗಳ ಹೆಸರುಗಳನ್ನು ಉಲ್ಲೇಖಿಸುತ್ತೇನೆ ಎಂದುಕೊಳ್ಳಿ. ಆ ಕಾದಂಬರಿಗಳನ್ನು ನಾನು ಅದಾಗಲೇ ಓದಿರುತ್ತೇನೆ ಎಂದು ಅಲ್ಲಿ ಭಾಸವಾಗಬಹುದು. ಆದರೆ ನಿಜಕ್ಕೂ ಓದಿರುವುದಿಲ್ಲ. ಭೈರಪ್ಪನವರ ಎಲ್ಲ ಕಾದಂಬರಿಗಳ ಹೆಸರು, ಪ್ರಕಟಣೆಯ ವರ್ಷ, ಬಂದ ಪ್ರಶಸ್ತಿಗಳು, ಯಾವಯಾವ ಭಾಷೆಗಳಿಗೆ ಅವು ಅನುವಾದಗೊಂಡಿವೆ ಅಂತೆಲ್ಲ ಸಮಗ್ರ ಮಾಹಿತಿ ನನ್ನಲ್ಲಿದೆ. ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇನೆ ಕೂಡ. ಆದರೆ ಒಂದೇಒಂದು ಕಾದಂಬರಿಯನ್ನೂ ನಾನು ಓದಿಲ್ಲ! ಸಂಗೀತ ಹಾಡಲು ಅರಿಯದವನಾದರೂ ಯಾವ ಕೃತಿ ಯಾರ ರಚನೆ ಯಾವ ರಾಗದಲ್ಲಿದೆ ಎಂಬುದನ್ನೆಲ್ಲ ತಿಳಿದುಕೊಂಡಿರುವಂತೆ. ಇದೊಂಥರ ಕಂಪ್ಯೂಟರ್ ಕ್ಷೇತ್ರದಲ್ಲಿ ಮೆಟಾ-ಡೇಟಾ ಇದ್ದಹಾಗೆ. ಮೆಟಾ-ಡೇಟಾ ಎಂದರೆ ಆಕ್ಚುವಲ್ ಡೇಟಾ ಅಲ್ಲ; ಡೇಟಾ ಕುರಿತಾದ ಡೇಟಾ. ಸಾಹಿತ್ಯಿಕ ಉಲ್ಲೇಖಗಳ ಮಟ್ಟಿಗೆ ನನ್ನ ಬಂಡವಾಳ ಬಹುತೇಕವಾಗಿ ಮೆಟಾ-ಡೇಟಾ ಮಾತ್ರ. ಆದರೆ ಈಗ ಹೊಸತೊಂದು ಹುರುಪು ಬಂದಿದೆ. ನಾನೂ ಸಹ ಸಾಹಿತ್ಯಿಕ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಒಮ್ಮಿಂದೊಮ್ಮೆಲೇ ಕಾದಂಬರಿ ಅಲ್ಲದಿದ್ದರೂ, ಯಾವ ತೆರನಾದ ಪುಸ್ತಕಗಳಿಂದ ಇದುವರೆವಿಗೂ ದೂರವಿದ್ದೆನೋ ಅಂತಹ ಪುಸ್ತಕಗಳನ್ನು ಓದತೊಡಗಬೇಕು. ಹೇಗೂ ಈ ದಿನಗಳಲ್ಲಿ ನಾನು ಕೆಲಸಕ್ಕೆ ಹೋಗಿ ಬರುವುದು ಕಾರ್ ಡ್ರೈವ್ ಮಾಡಿಕೊಂಡು ಅಲ್ಲ, ಬಸ್ಸು ಮತ್ತು ಮೆಟ್ರೋ ರೈಲಿನಲ್ಲಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ತಗಲುತ್ತದೆ. ನನ್ನ ಸಹಪ್ರಯಾಣಿಕರಲ್ಲಿ ಹೆಚ್ಚಿನವರು ಪುಸ್ತಕದ ಓದಿನಲ್ಲಿ ಮುಳುಗಿರುವುದನ್ನು ಗಮನಿಸಿದ್ದೇನೆ. ಪುಸ್ತಕ ಅಲ್ಲದಿದ್ದರೆ ಕಿಂಡಲ್, ನುಕ್, ಐಪ್ಯಾಡ್ನಂಥ ಇ-ಪುಸ್ತಕಗಳಲ್ಲಿ ಮುಳುಗಿರುತ್ತಾರೆ. ಅಂತೂ ಅಮೆರಿಕನ್ನರು ಸಿಕ್ಕಾಪಟ್ಟೆ ಓದುತ್ತಾರೆ. ಅಂದಮೇಲೆ ನಾನೂ ಕೂಡ ಅವರಂತೆಯೇ ‘ಓಡಾಟ’ದ ವೇಳೆಯನ್ನು ‘ಓದಾಟ’ದ ವೇಳೆಯನ್ನಾಗಿಸಬಹುದು/ ಆಗಿಸಬೇಕು. ನನ್ನ ಈ ಹೊಸ ಹುರುಪಿಗೆ ಪೂರಕ ಅಂಶವೂ ಒಂದಿದೆ. ಮೊನ್ನೆ ಭಾರತಪ್ರವಾಸದ ವೇಳೆ ಭೇಟಿಯಾಗಿದ್ದ ಸುಮಾರಷ್ಟು ಸ್ನೇಹಿತರು ಮತ್ತು ಇಮೇಲ್ನಲ್ಲಷ್ಟೇ ಸಂಪರ್ಕವಿದ್ದು ಇದೀಗ ಮುಖಪರಿಚಯವಾಗಿರುವ ಕೆಲ ಓದುಗ ಮಿತ್ರರು ಒಳ್ಳೊಳ್ಳೆಯ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಒಬ್ಬಿಬ್ಬರಂತೂ ತಮ್ಮದೇ ಸಾಹಿತ್ಯರಚನೆಯ ಹಸ್ತಪ್ರತಿ ಕೊಟ್ಟು ಓದಿ ಅಭಿಪ್ರಾಯ ತಿಳಿಸಿ ಎಂದಿದ್ದಾರೆ. ಅವರ ಪ್ರೀತಿ-ವಿಶ್ವಾಸಗಳನ್ನು ಗೌರವಿಸುವುದಕ್ಕಾದರೂ ನಾನು ಆ ಪುಸ್ತಕಗಳನ್ನೆಲ್ಲ ಓದುವವನಿದ್ದೇನೆ. ಓದತೊಡಗಿದ್ದೇನೆ ಎಂದರೂ ಸರಿಯೇ. ಏಕೆಂದರೆ ಡುಂಡಿರಾಜ್ ಅವರು ಪ್ರೀತಿಯಿಂದ ಕೊಟ್ಟಿರುವ ‘ಟೈಮಿಲ್ಲ ಸಾರ್ ಟೈಮಿಲ್ಲ’ ಪುಸ್ತಕವನ್ನು ‘ಟೈಮಿದೆ ಸಾರ್ ಟೈಮಿದೆ’ ಎಂದುಕೊಂಡು ಆಗಲೇ ಓದಿ ಮುಗಿಸಿದ್ದೇನೆ. ಹರಟೆಗಳು ಮತ್ತು ಲಘುಲೇಖನಗಳ ಓದಿನ ಸವಿಯನ್ನು ಹತ್ತಿಸಿಕೊಂಡಿದ್ದೇನೆ. ಈಗಿನ್ನು ಬೇಲೂರು ರಾಮಮೂರ್ತಿ ಅವರು ಕೊಟ್ಟಿರುವ ‘ಜಾಲಿ ಜಾಲಿ ಜೋಕಾಲಿ’ ಮತ್ತು ‘ಸಖತ್ ಕಾಮಿಡಿ’ ನಗೆಬರಹಗಳ ಸಂಗ್ರಹವನ್ನು ಕೈಗೆತ್ತಿಕೊಳ್ಳುತ್ತೇನೆ. ಆಮೇಲೆ ದಾ.ಭೀ ಪ್ರಾಣೇಶರಾವ್ ಅವರ ‘ಆಗೊಂದಿಷ್ಟು ಈಗೊಂದಿಷ್ಟು’ ಓದುತ್ತೇನೆ. ಸಿ.ಆರ್.ಸತ್ಯ ಅವರ ‘ಏಕಾದ್ಸಿ ಉಪ್ವಾಸ’ ನೆಕ್ಸ್ಟ್. ಯಾರಿವರು ಸಿ.ಆರ್.ಸತ್ಯ? ನನಗೂ ಅವರ ಪರಿಚಯವಿರಲಿಲ್ಲ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಮೆರಿಕನ್ನಡೋತ್ಸವದ ಸಂದರ್ಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿಯಾದರು. ಜತೆಯಲ್ಲಿ ಪತ್ನಿ ಶ್ಯಾಮಲಾ ಸತ್ಯ ಇದ್ದರು. ಅವರಿಬ್ಬರೂ ಪರಾಗಸ್ಪರ್ಶ ಅಂಕಣದ ಖಾಯಂ ಓದುಗರಂತೆ. ಅದಲ್ಲ ಮುಖ್ಯ. ಸತ್ಯ ಅವರು “ಆಚೆಮನೆಯ ಸುಬ್ಬಮ್ಮನಿಗೆ ಏಕಾದಶೀ ಉಪವಾಸ... ಪದ್ಯವನ್ನು ಕೇಳಿದ್ದೀರಷ್ಟೆ? ಅದನ್ನು ಸುಮಾರು ನಲ್ವತ್ತು ವರ್ಷಗಳ ಹಿಂದೆ ನಾನೇ ಬರೆದದ್ದು. ಕೊರವಂಜಿ ಪತ್ರಿಕೆಯಲ್ಲಿ ಮೊಟ್ಟಮೊದಲು ಪ್ರಕಟವಾದದ್ದು” ಎಂದು ಪರಿಚಯ ಮಾಡಿಕೊಟ್ಟರು. ವಾಹ್! ಅಷ್ಟು ಜನಪ್ರಿಯ ಪದ್ಯ ಬರೆದ ವ್ಯಕ್ತಿ ಯಾವೊಂದೂ ಬಿಗುಮಾನವಿಲ್ಲದೆ ತಾನೇ ಪರಿಚಯ ತಿಳಿಸಿ ‘ಏಕಾದ್ಸಿ ಉಪ್ವಾಸ’ ಹೆಸರಿನದೇ ಪುಸ್ತಕವನ್ನೂ ಕೊಟ್ಟದ್ದು ಕಂಡು ನನಗೆ ನಿಜಕ್ಕೂ ರೋಮಾಂಚನ. ಅವರು ಕನ್ನಡದ ಪ್ರಸಿದ್ಧ ವಿದ್ವಾಂಸ ಎ.ಆರ್.ಕೃಷ್ಣಶಾಸ್ತ್ರಿಯವರ ಮೊಮ್ಮಗ ಎಂಬ ಅಂಶದಿಂದ ಮತ್ತಷ್ಟು ರೋಮಾಂಚನ. ರವೀಂದ್ರ ಕಲಾಕ್ಷೇತ್ರದಲ್ಲಿಯೇ ನನಗೆ ಇನ್ನೂ ಒಬ್ಬ ವ್ಯಕ್ತಿ ಭೇಟಿಯಾಗಿ ಪುಸ್ತಕ ಕೊಟ್ಟು ರೋಮಾಂಚನ ತಂದರು. ಅವರು ಎಚ್.ಎಸ್.ಮಂಜುನಾಥ. ೨೦೦೫ರಲ್ಲಿ ನನ್ನ ಮೊಟ್ಟಮೊದಲ ಪುಸ್ತಕ ‘ವಿಚಿತ್ರಾನ್ನ’ (ದಟ್ಸ್ಕನ್ನಡ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯಲ್ಲಿ ನಾನು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ) ಪ್ರಕಟವಾದಾಗ ಮಂಜುನಾಥ ಅವರು ಅದರ ಬಗ್ಗೆ ಬರೆದ ವಿಮರ್ಶೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂದರೆ ಒಬ್ಬ ವಿಮರ್ಶಕ ಮತ್ತು ಹವ್ಯಾಸಿ/ಅಭ್ಯಾಸಿ ಬರಹಗಾರನ ಸೌಹಾರ್ದ ಮುಖಾಮುಖಿ! ಮಂಜುನಾಥ ಅವರು ತಮ್ಮ ಇತ್ತೀಚಿನ ಕೃತಿ ‘ಚಾರ್ಲಿ ಚಾಪ್ಲಿನ್’ ವ್ಯಕ್ತಿಚಿತ್ರ ಪುಸ್ತಕದ ಪ್ರತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ. ಅದನ್ನೂ ಓದಬೇಕೆಂದುಕೊಂಡಿದ್ದೇನೆ. ಇವಿಷ್ಟೂ ಪುಸ್ತಕಗಳನ್ನು ಲೈಟ್ರೀಡಿಂಗ್ ಎಂದು ಮೊದಲಿಗೆ ಓದುವುದಕ್ಕೆ ಗುರುತಿಸಿಟ್ಟಿದ್ದೇನೆ. ಊಟಕ್ಕೆ ಮೊದಲು ‘ಎಪೆಟೈಜರ್’ ಇದ್ದಹಾಗೆ. ಇನ್ನು ‘ಮೈನ್ ಕೋರ್ಸ್’ನಲ್ಲಿ ಓದುವುದಕ್ಕೆ ತೂಕದ ಕೃತಿಗಳು ತುಂಬಾ ಇವೆ. ಅಕ್ಷರಶಃ ತೂಕದವೇ, ಏಕೆಂದರೆ ಮೊನ್ನೆ ಭಾರತದಿಂದ ಹಿಂದಿರುಗುವಾಗ ಒಂದು ಸೂಟ್ಕೇಸ್ ತುಂಬ ಪುಸ್ತಕಗಳೇ ಇದ್ದದ್ದು. ವಾಷಿಂಗ್ಟನ್ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ‘ವ್ಹಾಟ್ಸ್ ದೇರ್ ಇನ್ ಯುವರ್ ಸೂಟ್ಕೇಸಸ್? ಎನಿ ಫುಡ್ ಐಟಮ್ಸ್?’ ಎಂದು ವಿಚಾರಿಸಿದ್ದಾಗ ‘ನೋ ಫುಡ್, ಬಟ್ ದೆರ್ ಈಸ್ ಇನಫ್ ಫುಡ್ ಫಾರ್ ಥಾಟ್’ ಎಂದು ಪುಸ್ತಕಗಳ ಬಗ್ಗೆ ಅವರಿಗೂ ಹೆಮ್ಮೆಯಿಂದ ತಿಳಿಸಿದ್ದೆ. ಯಾವುದೆಲ್ಲ ಪುಸ್ತಕಗಳು? ಮುಂದಿನ ವಾರ ಬರೆಯುತ್ತೇನೆ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Jul 09, 2011
Cow-stopper for the gate
Saturday Jul 09, 2011
Saturday Jul 09, 2011
ದಿನಾಂಕ 10 ಜುಲೈ 2011ರ ಸಂಚಿಕೆ...
‘ಹಸು ತಡೆ’ಯನು ದಾಟಿ ಬಾ ಓ ಅತಿಥಿ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ರವಿಯು ಅಜ್ಜನ ಮನೆಗೆ ಹೋದನು. ಅಂಗಳದಲ್ಲಿ ಕಾರಂಜಿಯನ್ನು ಕಂಡನು. ಹಿರಿಹಿರಿ ಹಿಗ್ಗಿದನು... ಇವು ಎರಡನೇ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಿಂದ ನೆನಪಿಸಿಕೊಂಡ ಸಾಲುಗಳು. ರವಿ ಬಹುಶಃ ಪ್ರತಿವರ್ಷವೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಾನೆ. ಅದರಲ್ಲೇನೂ ವಿಶೇಷವಿಲ್ಲ. ಆ ಸರ್ತಿ ಹೋದಾಗ ಅವನಿಗೆ ಅಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ಅಜ್ಜನ ಮನೆಯ ಅಂಗಳದಲ್ಲಿ ಹೊಸದಾಗಿ ಕಟ್ಟಿಸಿದ್ದ ಕಾರಂಜಿ. ಜುಳುಜುಳು ಶಬ್ದದೊಂದಿಗೆ ತಣ್ಣನೆಯ ನೀರು ನೊರೆನೊರೆಯಾಗಿ ಚಿಮ್ಮುವ ಕಾರಂಜಿ. ಬಿರುಬೇಸಿಗೆಯಲ್ಲಿ ಅದಕ್ಕೆ ಮೈಯೊಡ್ಡಬಹುದು. ನೀರಿನಲ್ಲಿ ಯಥೇಚ್ಛ ಆಡಬಹುದು. ಅಜ್ಜ-ಅಜ್ಜಿಯ ಪ್ರೀತಿಕಾರಂಜಿಯ ಜತೆಗೆ ಇದರ ಮೋಜನ್ನೂ ಸವಿಯಬಹುದು. ರವಿಯ ಹಿಗ್ಗಿಗೆ ಅದೇ ಕಾರಣ. ಇಲ್ಲಿ ರವಿ ಮತ್ತು ಕಾರಂಜಿಯನ್ನು ಸಾಂಕೇತಿಕವಾಗಿ ತೆಗೆದುಕೊಂಡು ನೋಡಿ. ಅದು ನಮ್ಮ-ನಿಮ್ಮೆಲ್ಲರ ಆನಂದಾನುಭವವೂ ಆಗುತ್ತದೆ! ದೂರದ ಊರಿನಲ್ಲಿದ್ದು ವರ್ಷಕ್ಕೊಮ್ಮೆಯೋ ಮೂರ್ನಾಲ್ಕು ವರ್ಷಗಳಿಗೊಮ್ಮೆಯೋ ತವರೂರಿಗೆ ಹೋದಾಗ, ಹುಟ್ಟಿ ಬೆಳೆದ ಮನೆಗೆ ಭೇಟಿಕೊಟ್ಟಾಗ, ಅಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು, ಹೊಸ ವಸ್ತು ಅಥವಾ ಸೌಲಭ್ಯ-ಸೌಕರ್ಯಗಳನ್ನು ಗಮನಿಸಿದಾಗಿನ ಪುಳಕವಿದೆಯಲ್ಲ ಅದೊಂಥರ ವಿಶೇಷವಾದುದು. ಅದು, ಹಜಾರದಲ್ಲಿನ ಹೊಸ ತೂಗುಮಂಚ ಇರಬಹುದು, ಅಡುಗೆಮನೆಯಲ್ಲಿ ಹೊಸದೊಂದು ಪರಿಕರ ಇರಬಹುದು, ಗೋಡೆಗಳಿಗೆ ಹೊಸ ಸುಣ್ಣಬಣ್ಣ ಇರಬಹುದು, ಅಮ್ಮನೋ ಅಕ್ಕನೋ ಕೈಕರಣದಿಂದ ಮಾಡಿದ ಕಲಾಕೃತಿಯಿರಬಹುದು, ಕೊನೆಗೆ ಹಳೇ ಪೀಠೋಪಕರಣಗಳನ್ನೇ ಹೊಸ ನಮೂನೆಯಲ್ಲಿ ಜೋಡಿಸಿದ್ದಿರಬಹುದು- ಅಂತೂ “ವಾಹ್! ಎಷ್ಟು ಚೆನ್ನಾಗಿದೆ! ಕಳೆದಸಲ ಬಂದಾಗ ಇದು ಇರಲಿಲ್ಲ...” ಎನ್ನಬಹುದಾದ ಯಾವುದಾದರೂ ಸರಿ. ಮಾತಿಗೆ ಸಾಮಗ್ರಿಯಾಗುತ್ತದೆ, ಮನಸ್ಸಿಗೆ ಮುದ ಕೊಡುತ್ತದೆ, ರವಿಗೆ ಕಾರಂಜಿಯಿದ್ದಂತೆ ನಮಗೆ ಹಿಗ್ಗಿನ ಬುಗ್ಗೆಯಾಗುತ್ತದೆ. ಈ ಸಲ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಅಂಥದೊಂದು ಹೊಸ ಆಕರ್ಷಣೆಯ ಕಾರಂಜಿಯಿತ್ತು. ಅದೇನಂತೀರಾ? ನಮ್ಮ ಮನೆಯ ಗೇಟಿಗೆ ಅಳವಡಿಸಿದ ‘ಹಸು ತಡೆ’! ಇಂಗ್ಲಿಷ್ನಲ್ಲಿ cow-stopper ಅಥವಾ cow-catch ಎನ್ನುತ್ತಾರೆ. ಹಾಗೆಂದರೇನು ಅಂತ ನಿಮಗೆ ತತ್ಕ್ಷಣ ಗೊತ್ತಾಗುವಂತೆ ಇಲ್ಲಿ ಅದರ ಚಿತ್ರವನ್ನು ಕೊಟ್ಟಿದ್ದೇನೆ. ಚಿತ್ರದ ಜತೆಗೆ ಒಂದಿಷ್ಟು ಅಕ್ಷರ-ಚಿತ್ರಣವೂ ಇರಲೆಂದು ಅದನ್ನೂ ಕೊಡುತ್ತಿದ್ದೇನೆ. ಇಪ್ಪತ್ತೈದು ವರ್ಷಗಳಿಗೂ ಹಿಂದಿನ ಮಾತು. ನಾನಾಗ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದೆ. ನಮ್ಮ ಕಾಲೇಜಿನ ಭವ್ಯವಾದ ಕಟ್ಟಡದ ಎದುರಿಗೆ ಒಂದಿಷ್ಟು ಜಾಗದಲ್ಲಿ ಹೂತೋಟ. ಮುಖ್ಯ ರಸ್ತೆಯಿಂದ ಕಾಲೇಜಿನ ಆವರಣದೊಳಕ್ಕೆ ಹೋಗಲು ಆಚೀಚೆ ಎರಡು ದೊಡ್ಡ ಗೇಟುಗಳು. ಅವುಗಳಿಗೆ ಹೊಂದಿಕೊಂಡಂತೆ ಒಂದು ಚಿಕ್ಕ ಕಂದಕದ ಮೇಲೆ, ಸಮಾನಾಂತರವಾಗಿ ಅಡ್ಡ ಹಾಸಿದ ಕಬ್ಬಿಣದ ಕೊಳವೆಗಳು. ಕಾಲೇಜಿಗೆ ಹೋಗುವವರ ವಾಹನಗಳು (ಆಗ ಕಾರು ಇದ್ದದ್ದು ಬಹುಶಃ ಪ್ರಿನ್ಸಿಪಾಲರದು ಮಾತ್ರ; ಉಳಿದಂತೆ ಸ್ಕೂಟರ್ ಅಥವಾ ಸೈಕಲ್ಗಳು) ಮತ್ತು ಪಾದಚಾರಿಗಳು ಅದನ್ನು ದಾಟಿಯೇ ಹೋಗಬೇಕು. ಗೇಟುಗಳು ಯಾವಾಗಲೂ ತೆರೆದೇ ಇರುತ್ತಿದ್ದವು. ಅಲ್ಲಿ ಆ ಕಂದಕ ಮತ್ತು ಅದರ ಮೇಲೆ ಕಬ್ಬಿಣದ ಸಲಾಕೆಗಳು ಯಾಕಿರುತ್ತವೆ ಅಂತ ನನಗೆ ಗೊತ್ತೇ ಇರಲಿಲ್ಲ. ಯಾರೋ ಹೇಳಿದ್ದರು, ದನಕರುಗಳು ಕಾಲೇಜಿನ ಆವರಣದೊಳಕ್ಕೆ ಬರದಂತೆ ತಡೆಯುವುದಕ್ಕಾಗಿ ಆ ವ್ಯವಸ್ಥೆ. ಕಾಲು ಸಿಕ್ಕಿಹಾಕಿಕೊಳ್ಳುವ ಭಯದಿಂದ ದನಗಳು ಅದನ್ನು ದಾಟಲು ಯತ್ನಿಸುವುದಿಲ್ಲ. ಪದೇಪದೇ ಗೇಟ್ ಹಾಕಿ-ತೆಗೆಯುವ ಅವಶ್ಯಕತೆ ಇಲ್ಲ. ಹೂಂ, ಒಳ್ಳೆಯ ವ್ಯವಸ್ಥೆ, ಆದರೆ ‘ದನಗಳು ಯಾಕೆ ಕಾಲೇಜಿಗೆ ಬರುತ್ತವೆ? ಅವಕ್ಕೇನು ಓದಿ ಡಿಗ್ರಿ ಪಾಸಾಗಬೇಕಂತಿದೆಯೇ?’ ಎಂಬ ತುಂಟ ಪ್ರಶ್ನೆ ಈಗಾದರೆ ನನ್ನ ತಲೆಯಲ್ಲಿ ಹೊಳೆಯುತ್ತಿತ್ತು. ಇರಲಿ, ಅಂತೂ ‘ಹಸು ತಡೆ’ಂiiನ್ನು ನಾನು ಮೊಟ್ಟಮೊದಲು ನೋಡಿದ್ದು ಉಜಿರೆ ಕಾಲೇಜಿನಲ್ಲಿ. ಆಮೇಲೆ ಎಷ್ಟೋ ಕಡೆ ಸಾರ್ವಜನಿಕ ಕಟ್ಟಡಗಳ ಗೇಟುಗಳಿಗೆ ಅಂಥ ರಚನೆ ಇರುವುದು ನೋಡಿ ಅದರ ಬಗ್ಗೆ ಕುತೂಹಲ ಕಡಿಮೆಯಾಗಿತ್ತು. ಈಗ, ಕಾರ್ಕಳ ತಾಲೂಕಿನ ಮಾಳ ಎಂಬ ಹಳ್ಳಿಯಲ್ಲಿರುವ ನಮ್ಮ ಮನೆಗೆ ಹೋಗೋಣ. ನಮ್ಮಕಡೆಯ ಹಳ್ಳಿಮನೆಗಳಲ್ಲಿ ಸಾಮಾನ್ಯವಾಗಿ ಇರುವಂತೆ ನಮ್ಮಲ್ಲೂ ಮನೆಯ ಸುತ್ತ ತೋಟ, ಅದಕ್ಕೆ ಬೇಲಿಯ ಆವರಣ. ಮಣ್ಣಿನ ರಸ್ತೆ ಬರುವಲ್ಲಿ ಮಾತ್ರ ದೊಡ್ಡದೊಂದು ಗೇಟು. ಅದು ಮನೆಯಿಂದ ಕನಿಷ್ಠ ನೂರಿನ್ನೂರು ಅಡಿಗಳಷ್ಟು ದೂರದಲ್ಲೇ ಇರುತ್ತದೆ. ವಾಹನಗಳು ಮನೆಯ ಅಂಗಳದವರೆಗೂ ಬರಬಹುದಾದರೂ ಮುಚ್ಚಿರುವ ಗೇಟನ್ನು ತೆಗೆಯಲು ಒಂದೋ ಮನೆಯವರೇ ಯಾರಾದರೂ ಬರಬೇಕು, ಇಲ್ಲ ವಾಹನದಲ್ಲಿದ್ದವರೇ ಒಮ್ಮೆ ಇಳಿದು ಗೇಟು ತೆರೆದುಕೊಂಡು ಮತ್ತೆ ವಾಹನವೇರಿ ಬರಬೇಕು. ನನ್ನ ಅಣ್ಣ ಡೇರಿಗೆ ಹಾಲು ಕೊಟ್ಟು ಬರಲಿಕ್ಕೊಮ್ಮೆ, ಕಾರ್ಕಳ ಪೇಟೆಯಲ್ಲಿ ಏನಾದರೂ ವ್ಯವಹಾರದ ಕೆಲಸಗಳಿದ್ದರೆ ಅದಕ್ಕೆ, ನಮ್ಮೂರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನಾದ್ದರಿಂದ ಅದರ ವಿಚಾರವಾಗಿ, ಅಥವಾ ಮನೆಗೆ ಯಾರಾದರೂ ಬಂದಾಗ ಅವರನ್ನು ಬಸ್ಸ್ಟಾಪ್ವರೆಗೆ ಬಿಟ್ಟು ಬರುವುದಿದ್ದರೆ... ಹೀಗೆ ಒಂದಿಲ್ಲೊಂದು ಕಾರಣಗಳಿಂದ ದಿನಕ್ಕೆ ಏನಿಲ್ಲವೆಂದರೂ ಐದಾರು ಸರ್ತಿ ಬೈಕ್ ಅಥವಾ ಕಾರು ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿ ಬರಬೇಕಾಗುತ್ತದೆ. ಮನೆಯಲ್ಲಿ ಉಳಿವವರು ಅತ್ತಿಗೆ ಮತ್ತು ಅಮ್ಮ ಮಾತ್ರ. ಇಬ್ಬರೂ ಮನೆಗೆಲಸಗಳಲ್ಲಿ ಮುಳುಗಿರುತ್ತಾರೆ. ಆಗೆಲ್ಲ ಗೇಟು ತೆಗೆದು-ಹಾಕುವ ಕೆಲಸ ದೊಡ್ಡ ತಲೆನೋವು. ಹಾಗಂತ ಗೇಟು ತೆರೆದೇ ಇಟ್ಟರೆ ದನಕರುಗಳ ಕಾಟ. ನಮ್ಮ ಕೊಟ್ಟಿಗೆಯ ದನಗಳಲ್ಲದಿದ್ದರೂ ಬೇರೆ ಉಂಡಾಡಿ ದನಗಳು ಒಳಬಂದು ತರಕಾರಿ ಗಿಡಗಳು ಹೂಗಿಡಗಳು ಅದೂಇದೂ ಎನ್ನದೇ ಎಲ್ಲವನ್ನೂ ತಿಂದು ಹಾಕುತ್ತವೆ. ನಮ್ಮ ಮನೆಯ ಮತ್ತು ನಿವೇಶನದ ಹೆಸರು ‘ಫಲವಾಡಿ’ (ಹಣ್ಣುಹಂಪಲಿನ ತೋಟ ಎಂದು ಮರಾಠಿ ಭಾಷೆಯಲ್ಲಿ ಅರ್ಥ) ಎಂದಿರುವುದು, ಒಳಗೆ ಹೋದರೆ ಒಳ್ಳೆಯ ಮೇವು ಎಂದು ಬಹುಶಃ ದನಕರುಗಳಿಗೂ ಗೊತ್ತಿದೆ. ಅಂತೂ ಗೇಟು ಹಾಕಿಟ್ಟರೂ ಕಷ್ಟ, ತೆರೆದಿಟ್ಟರೂ ಕಷ್ಟ. ಅದಕ್ಕಾಗಿ ಈಗ ಅಣ್ಣ ಮಾಡಿರುವ ಹೊಸ ವ್ಯವಸ್ಥೆಯೇ ಗೇಟಿನ ಹೊರಗಡೆ ‘ಹಸು ತಡೆ’. ಇನ್ನು ದನಕರುಗಳ ಕಾಟವಿಲ್ಲ. ಬೆಳಿಗ್ಗೆ ಒಮ್ಮೆ ಗೇಟು ತೆರೆದರೆ ರಾತ್ರಿಯವರೆಗೂ ಮುಚ್ಚಬೇಕಿಲ್ಲ. ಮೊನ್ನೆ ಹೊಸತರಲ್ಲಿ ಒಂದೆರಡು ದನಗಳು ಗೇಟಿನವರೆಗೂ ಬಂದು ತಡೆಯನ್ನು ಕಂಡು ವಾಪಸಾದದ್ದನ್ನು ನೋಡುವಾಗ ಖುಷಿಯೋ ಖುಷಿ ಎನ್ನುತ್ತಿದ್ದರು ನನ್ನಣ್ಣ. ಉಜಿರೆ ಕಾಲೇಜನ್ನು ನೆನಪಿಗೆ ತಂದ cow-stopper ನಮ್ಮನೆಯ ಗೇಟಿಗೂ ಅಳವಡಿಸಿದ್ದನ್ನು ನೋಡಿದಾಗ ನನಗೂ ಖುಷಿಯಾಯಿತು. ಅದಕ್ಕಿಂತ ಹೆಚ್ಚಾಗಿ, ಇನ್ನು ನಮ್ಮ ಮನೆಯಲ್ಲಿ ‘ತೆರೆದಿದೆ ಗೇಟು ಓ ಬಾ ಅತಿಥಿ... ಹಸು ತಡೆಯನು ದಾಟಿ ಬಾ ಓ ಅತಿಥಿ...’ ಎಂದು ಹಾಡಬಹುದೆನ್ನುವ ಹಾಸ್ಯಚಟಾಕಿಯಿಂದ ಮತ್ತಷ್ಟು ಖುಷಿಯಾಯಿತು. ಸ್ಪರ್ಶ ಸಂಭ್ರಮ: ಕಳೆದ ರವಿವಾರ ಜುಲೈ ೩ರಂದು ಬೆಂಗಳೂರಿನಲ್ಲಿ ನಡೆದ ‘ಸ್ನೇಹಸ್ಪರ್ಶ’ ಕಾರ್ಯಕ್ರಮ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಇತ್ತು; ಒಟ್ಟಿನಲ್ಲಿ ಅತ್ಯಂತ ಆತ್ಮೀಯವಾಗಿತ್ತು, ಅದರಲ್ಲಿ ಪಾಲ್ಗೊಂಡದ್ದು ತುಂಬ ಖುಷಿಕೊಟ್ಟಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಸ್ನೇಹಸ್ಪರ್ಶಕ್ಕೆ ಅನನ್ಯತೆಯ ಅಂದ ತಂದುಕೊಡಲು ಕಾರಣರಾದವರಿಗೆಲ್ಲ, ಶುಭಾಶಯ ಕೋರಿದವರಿಗೆಲ್ಲ, ಹೃತ್ಪೂರ್ವಕ ಧನ್ಯವಾದಗಳು. ಅವತ್ತು ಬಿಡುಗಡೆಯಾದ ‘ಗೆಲುವಿನ ಟಚ್!’ ಮತ್ತು ‘ಚೆಲುವಿನ ಟಚ್!’ ಅವಳಿ ಪುಸ್ತಕಗಳು (ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಕರ್ನಾಟಕದಾದ್ಯಂತ ಪ್ರಮುಖ ಪುಸ್ತಕದಂಗಡಿಗಳಲ್ಲಿ ಸಿಗುತ್ತವೆ. ಕೊಂಡು ಓದಿ. ಇಷ್ಟಮಿತ್ರ ಬಂಧುಬಾಂಧವರಿಗೆ ಉಡುಗೊರೆಯಾಗಿ ಕೊಡಿ. ಅಕ್ಷರಪ್ರೀತಿ, ತನ್ಮೂಲಕ ಜೀವನಪ್ರೀತಿ ಎಲ್ಲರದಾಗಲಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]Wednesday Jul 06, 2011
Double Decker Airbus A380
Wednesday Jul 06, 2011
Wednesday Jul 06, 2011
ದಿನಾಂಕ 3 ಜುಲೈ 2011ರ ಸಂಚಿಕೆ...
ಎರಡಂತಸ್ತಿನ ಆ ವಿಮಾನದ್ದೇ ಒಂದು ಗತ್ತು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಏರ್ಬಸ್ ಎ-380. ಶಾರ್ಟ್ ಆಗಿ ‘ಎ-ತ್ರೀಎಯ್ಟಿ’. ನಮಗೆಲ್ಲ ಬಿಡಿ, ವಿಮಾನಗಳನ್ನು ಸಿಟಿಬಸ್ಸುಗಳಂತೆ ನೋಡುವ/ಬಳಸುವ ಅಮೆರಿಕನ್ನರಿಗೂ ಅದೊಂದು ಅದ್ಭುತವೆನಿಸುವ ಅಚ್ಚರಿ. ನೋಡಿದೊಡನೆಯೇ ನಿಬ್ಬೆರಗಾಗಿ ವಾಹ್ ಎಂದು ಉದ್ಗಾರ ತರಿಸುವಂಥ ದೈತ್ಯ ವಿಮಾನ. ಈಗ ಪ್ರಪಂಚದ ಅತಿದೊಡ್ಡ ‘ಪ್ಯಾಸೆಂಜರ್ ಫ್ಲೈಟ್’ ಎಂಬ ಹೆಗ್ಗಳಿಕೆ ಅದರದು. ದೊಡ್ಡದೆಂದರೆ ಅಷ್ಟಿಷ್ಟಲ್ಲ, ಒಂದು ಸರಾಸರಿ ಸಾಮಾನ್ಯ ಗಾತ್ರದ ವಿಮಾನಕ್ಕಿಂತ ನಾಲ್ಕು ಪಟ್ಟು ದೊಡ್ಡದು! ರಟ್ಟೆಯ ಬಲದಲ್ಲಿ ಭೀಮನಂಥದು. ಹೊಟ್ಟೆಯೊಳಗೆ ತುಂಬಿಸಿಕೊಳ್ಳುವ ವಿಚಾರದಲ್ಲಿ ಬಕಾಸುರನಂಥದು. ಮಿಕ್ಕೆಲ್ಲ ವಿಮಾನಗಳು ಈ ಗಿಡುಗನೆದುರಿಗೆ ಪುಟ್ಟ ಗುಬ್ಬಚ್ಚಿಗಳಂತೆ ಕಾಣುತ್ತವೆ. ಅಂತಹ ಏರ್ಬಸ್ ಎ-380 ವಿಮಾನದಲ್ಲಿ ಮೊನ್ನೆ ವಾಷಿಂಗ್ಟನ್ನಿಂದ ಪ್ಯಾರಿಸ್ವರೆಗೆ ಪ್ರಯಾಣ ಮಾಡಿದ ಪುಳಕ ನನ್ನದಾಯಿತು. ಅದಿನ್ನೂ ತಾಜಾ ಇರುವಾಗಲೇ ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಇವತ್ತಿನ ಅಂಕಣ ಏರ್ಬಸ್ ಎ-380 ಸ್ಪೆಷಲ್! ‘ಎರಡಂತಸ್ತಿನ...’ ಎಂದೆನಲ್ಲಾ, ಹಾಗೆ ನೋಡಿದರೆ ಬೋಯಿಂಗ್ ೭೪೭-೪೦೦ ಜಂಬೋ ಜೆಟ್ (ಏರ್ಬಸ್ ಎ-380 ಆವಿಷ್ಕಾರವಾಗುವ ಮೊದಲು ನಾಲ್ಕೈದು ದಶಕಗಳ ಕಾಲ ಅತಿದೊಡ್ಡ ವಿಮಾನ ಎಂಬ ಖ್ಯಾತಿ ಹೊಂದಿದ್ದದ್ದು) ಕೂಡ ಡಬ್ಬಲ್ಡೆಕ್ಕರ್ ವಿಮಾನವೇ. ಆದರೆ ಅದರಲ್ಲಿ ಮುಂಭಾಗವಷ್ಟೇ ಎರಡು ಅಂತಸ್ತುಗಳು. ಏರ್ಬಸ್ನಲ್ಲಿ ಹಾಗಲ್ಲ, ವಿಮಾನದ ಅಷ್ಟೂ ಉದ್ದವೂ ಎರಡು ಡೆಕ್ಗಳು. ಜಂಬೋ ಜೆಟ್ನ ಕೆಪ್ಯಾಸಿಟಿ ಸುಮಾರು ನಾಲ್ನೂರು ಪ್ರಯಾಣಿಕರು ಅಷ್ಟೇ. ಏರ್ಬಸ್ ಎ-380 ಒಮ್ಮೆಗೇ 555 ಪ್ರಯಾಣಿಕರನ್ನು ಹೊತ್ತುಕೊಂಡು ಹಾರಬಲ್ಲದು! ಅದೂ ಮೂರು ಬೇರೆಬೇರೆ ಶ್ರೇಣಿಗಳ ಆಸನವ್ಯವಸ್ಥೆ ಆದ್ದರಿಂದ ಅಷ್ಟು, ಒಂದುವೇಳೆ ಎಲ್ಲವೂ ‘ಎಕಾನಮಿ ಕ್ಲಾಸ್’ ಅಂತಿದ್ದರೆ ಸುಮಾರು 850 ಸೀಟ್ಗಳು! ಜತೆಯಲ್ಲಿ ಅವರೆಲ್ಲರ ಲಗೇಜ್. ಊಟೋಪಚಾರ ಮತ್ತಿತರ ಸೇವೆಗಳಿಗೆ ಬೇಕಾಗುವ ಸಾಮಗ್ರಿ. ಸಾವಿರಾರು ಮೈಲು ಕ್ರಮಿಸಲು ಬೇಕಾಗುವಷ್ಟು ಇಂಧನವನ್ನೂ ಟ್ಯಾಂಕ್ ತುಂಬ ತುಂಬಿಸಿಕೊಂಡು ಹೊರಡಬೇಕು. ಅಂದರೆ ಟೇಕ್ಆಫ್ ಆಗುವಾಗ ಈ ದೈತ್ಯವಿಮಾನದ ತೂಕ ಎಷ್ಟಿರಬಹುದೆಂದು ಅಂದಾಜಿಸಿ! ಅದಕ್ಕೋಸ್ಕರವೇ ಮಾಮೂಲಿ ವಿಮಾನಗಳಿಗಿಂತ ಆರು ಪಟ್ಟು ಹೆಚ್ಚು ಸಾಮರ್ಥ್ಯದ ಎಂಜಿನ್ಗಳು ಇದರವು. ಅಷ್ಟು ದೊಡ್ಡ ವಿಮಾನ ಇಳಿಯುವುದಕ್ಕೆ ರನ್ವೇ ಕೂಡ ದೊಡ್ಡದಾಗಿಯೇ ಇರಬೇಕಲ್ಲ? ಹೌದು, ಆದರೆ ರನ್ವೇಯಷ್ಟೇ ಸಾಲದು, ವಿಮಾನ ನಿಲ್ದಾಣದ ಟರ್ಮಿನಲ್ಗಳು ಮತ್ತು ಗೇಟ್ಗಳು ಕೂಡ ವಿಶೇಷ ಸಾಮರ್ಥ್ಯದವಾಗಿರಬೇಕು. ವಿಮಾನದಲ್ಲಿ ಪ್ರಯಾಣಿಕರು ಹತ್ತಿ-ಇಳಿಯುವುದಕ್ಕೆ ಬಳಸುವ ‘ಏರೋಬ್ರಿಡ್ಜ್’ಗಳು ಎರಡು ಅಂತಸ್ತುಗಳ ಬಾಗಿಲುಗಳಿಗೆ ಅಟ್ಯಾಚ್ ಆಗುವಂತೆ ಇರಬೇಕು. ಲಂಡನ್, ನ್ಯೂಯಾರ್ಕ್ನಂಥ ದಟ್ಟ ಸಂಚಾರದ ಏರ್ಪೋರ್ಟ್ಗಳಲ್ಲಿ ಕೆಲವೊಮ್ಮೆ ವಿಮಾನ ನಿಲ್ಲಿಸಲು ಒಂದು ಗೇಟ್ ಸಿಗುವುದೇ ಕಷ್ಟವಿರುವಾಗ ಏರ್ಬಸ್ ಎ-380ಗೆ ಅಕ್ಕಪಕ್ಕದ ಎರಡು ಗೇಟ್ಗಳು ಖಾಲಿ ಸಿಗಬೇಕು! ಅಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರಿರುವಾಗ ಅವರ ಭದ್ರತಾ ತಪಾಸಣೆ, ಕಸ್ಟಮ್ಸ್ ಕ್ಲಿಯರೆನ್ಸ್ ಮುಂತಾದ ಮಾಮೂಲಿ ವಿಧಿವಿಧಾನಗಳೆಲ್ಲ ಬೇಗಬೇಗ ಆಗಬೇಕು. ಸದ್ಯಕ್ಕೆ ಪ್ರಪಂಚದಲ್ಲಿ ಕೇವಲ 20 ವಿಮಾನ ನಿಲ್ದಾಣಗಳಲ್ಲಿ ಮಾತ್ರ ಏರ್ಬಸ್ ಎ-380ಯನ್ನು ನಿಭಾಯಿಸುವ ಸಾಮರ್ಥ್ಯ-ಸೌಕರ್ಯ ಇರುವುದು. ನಮ್ಮ ವಾಷಿಂಗ್ಟನ್ ವಿಮಾನನಿಲ್ದಾಣವೂ ಇತ್ತೀಚೆಗಷ್ಟೇ ಅಪ್ಗ್ರೇಡ್ ಆಗಿ ಈ ಸಾಮರ್ಥ್ಯವನ್ನು ಪಡಕೊಂಡದ್ದು. ಜಸ್ಟ್ ಹದಿನೈದು ದಿನಗಳ ಹಿಂದೆಯಷ್ಟೇ ಏರ್ಫ್ರಾನ್ಸ್ನ ವಾಷಿಂಗ್ಟನ್-ಪ್ಯಾರಿಸ್ ವಿಮಾನಯಾನದ ಎ-380 ಸರ್ವೀಸ್ ಶುರುವಾದದ್ದು. ಹಾಗಾಗಿಯೇ ಮೊನ್ನೆ ನಾನು ಪ್ರಯಾಣಿಸುವಾಗ ವಾಷಿಂಗ್ಟನ್ ಏರ್ಪೋರ್ಟ್ನ ಟರ್ಮಿನಲ್ನಲ್ಲೂ, ವಿಮಾನದಲ್ಲೂ ಎಲ್ಲವೂ ಹೊಸತು ಹೊಸತು! ಐದಾರು ವರ್ಷಗಳ ಹಿಂದೆ ಎ-380 ವಿಮಾನಗಳ ಉತ್ಪಾದನೆ ಶುರುವಾದಾಗಿನಿಂದಲೂ ಅದರ ಬಗ್ಗೆ ತುಂಬಾ ಪ್ರಚಾರ ಇತ್ತು. ಅಮೆರಿಕದ ಬೋಯಿಂಗ್ ಕಂಪನಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್ನ ಏರ್ಬಸ್ ಕಂಪನಿಯು ಈ ಗಜಗಾತ್ರದ ವಿಮಾನಗಳ ತಯಾರಿ, ಪ್ರಯೋಗಾರ್ಥ ಹಾರಾಟ ಮತ್ತು ಕಮರ್ಷಿಯಲ್ ಏರ್ಲೈನ್ಗಳಿಗೆ ಮಾರಾಟವನ್ನು ಆರಂಭಿಸಿದ್ದಾದ್ದರಿಂದ ಒಂದು ರೀತಿಯ ಪೈಪೋಟಿಯ ವಾತಾವರಣವೂ ಇತ್ತು. ಬೋಯಿಂಗ್ನ ಹಳತಾದ ಮಾಡೆಲ್ಗಳನ್ನು ನೋಡಿನೋಡಿ ಬೇಸತ್ತಿದ್ದ ಜನರಲ್ಲಿ ಎ-380 ಬಗ್ಗೆ ಸಾಕಷ್ಟು ಎಕ್ಸೈಟ್ಮೆಂಟ್ ಇತ್ತು. ಟಿವಿ ಡಾಕ್ಯುಮೆಂಟರಿಗಳಲ್ಲಿ, ಪತ್ರಿಕೆಗಳಲ್ಲಿ, ಕೊನೆಗೆ ಇಮೇಲ್ಫಾರ್ವರ್ಡ್ಗಳಲ್ಲೂ ಎ-380 ಅಚ್ಚರಿಗಳ ಗುಣಗಾನ ನಡೆದಿತ್ತು. ಯುರೋಪ್ನ ವಿವಿಧ ದೇಶಗಳಲ್ಲಿ ಅದರ ಬಿಡಿಭಾಗಗಳು ತಯಾರಾಗಿ ಫ್ರಾನ್ಸ್ನ ಟೌಲೌಸ್ ಎಂಬಲ್ಲಿ ಅಸೆಂಬ್ಲಿಯಾಗುವ ದೃಶ್ಯಗಳಲ್ಲೇ ಒಂದು ರೋಮಾಂಚನವಿತ್ತು. ಎ-380 ಎಂದರೆ ಅದೊಂದು ಬರೀ ವಿಮಾನವಲ್ಲ; ಬಾರ್, ಕ್ಯಾಸಿನೊ, ಬ್ಯೂಟಿ-ಸಲೂನ್, ಡ್ಯೂಟಿ-ಫ್ರೀ ಮಳಿಗೆಗಳು ಇತ್ಯಾದಿ ಲಕ್ಷುರಿಗಳೂ ಸೇರಿಕೊಂಡ ಒಂದು ಐಷಾರಾಮಿ ಗಗನನೌಕೆ ಎಂಬ ಚಿತ್ರಣವಿತ್ತು. ನಿಜಕ್ಕೂ ಅವೆಲ್ಲ ಇರುವುದು ಹೌದಾ ಎಂಬ ಕುತೂಹಲ ನನಗೂ ಇತ್ತು. ನಾನು ಪ್ರಯಾಣಿಸಿದ್ದು ಏರ್ಫ್ರಾನ್ಸ್ನ ಎ-380 ವಿಮಾನದ ಎಕಾನಮಿ ಕ್ಲಾಸ್ನಲ್ಲಿ. ಅದರಲ್ಲಿ ಹೇಳಿಕೊಳ್ಳುವಂಥ ಸ್ಪೆಷಲ್ ಫೀಚರ್ಗಳೇನೂ ಕಾಣಲಿಲ್ಲ. ಅವೇ ಇಕ್ಕಟ್ಟಾದ ಸೀಟ್ಗಳು. ಕಾಲು ಚಾಚಲಿಕ್ಕೂ ಹೆಚ್ಚೇನೂ ಜಾಗವಿಲ್ಲ. ನನ್ನ ಸೀಟ್ ಇದ್ದದ್ದು ಕೆಳಗಿನ ಸ್ತರದಲ್ಲಿ. ಮೇಲಿನ ಡೆಕ್ ಹೇಗಿರುತ್ತದೆ ನೋಡಿಕೊಂಡು ಬರಬಹುದೇ ಎಂದು ಗಗನಸಖಿಯೊಬ್ಬಳನ್ನು ಪುಸಲಾಯಿಸಿದಾಗ ಅಲ್ಲಿನ ಎಕಾನಮಿ ಕ್ಲಾಸ್ಗೆ ಮಾತ್ರ ಹೋಗಿಬರುವ ಪರ್ಮಿಷನ್ ಸಿಕ್ಕಿತು. ಹೇಳಿಕೇಳಿ ಏರ್ಫ್ರಾನ್ಸ್ನ ವಿಮಾನ. ಏರ್ಫ್ರಾನ್ಸ್ ‘ನಗುಮೊಗ’ದ ಸೇವೆಗಿಂತ ‘ಬಿಗುಮೊಗ’ದ ಸೇವೆಗೇ ಪ್ರಸಿದ್ಧ. ಆಫ್ಕೋರ್ಸ್, ವಿಮಾನವೆಲ್ಲ ಸುತ್ತಾಡಿ ನೋಡಿಬರುತ್ತೇನೆ ಎಂದು ನನ್ನಹಾಗೆ ಎಲ್ಲರೂ ಕೇಳಿದರೆ ಅದೇನೂ ಮ್ಯೂಸಿಯಂ ಅಲ್ಲವಲ್ಲ. ‘ಎ-380ಯಲ್ಲಿ ನಾನೂ ಪ್ರಯಾಣಿಸಿದ್ದೇನೆ ಎಂಬ ಬಿಂಕವೇ ಹೆಚ್ಚಿನದು’ ಎಂದುಕೊಂಡು ಸುಮ್ಮನಾದೆ. ಇನ್ಫ್ಲೈಟ್ ಎಂಟರ್ಟೇನ್ಮೆಂಟ್ ಸಿಸ್ಟಂ (ಪ್ರತಿ ಸೀಟ್ಗೂ ಅಳವಡಿಸಿರುವ ಬಹುಮಾಧ್ಯಮ ಮನರಂಜನೆಯ ವ್ಯವಸ್ಥೆ) ಮಾತ್ರ ತುಂಬಾ ಚೆನ್ನಾಗಿತ್ತು. ಅದರಲ್ಲೂ ವಿಮಾನದ ಟೇಲ್ಪೀಸ್ಗೆ ಅಳವಡಿಸಿದ ಕ್ಯಾಮೆರಾದಿಂದ ಟೇಕ್ಆಫ್ ಮತ್ತು ಲ್ಯಾಂಡಿಂಗ್ ವೇಳೆಯಲ್ಲಿ ಮೂಡಿಬರುವ ಲೈವ್ ಚಿತ್ರಗಳನ್ನು ನಾನು ಇದೇ ಮೊದಲಸಲ ನೋಡಿದ್ದು. ವಿಮಾನದ ಟಾಪ್ ಮೇಲೆ ಕುಳಿತು ನೋಡಿದರೆ ಹೇಗೆ ಕಾಣುತ್ತದೆ ಎಂದು ತೋರಿಸುವ ಚಿತ್ರಗಳು. ಸೂಪರ್! ವಾಷಿಂಗ್ಟನ್ನಿಂದ ಪ್ಯಾರಿಸ್ ವಿಮಾನಯಾನಕ್ಕೆ ಸುಮಾರು ಆರು ಗಂಟೆ ತಗಲುತ್ತದೆ (ದಶಕಗಳ ಹಿಂದೆ ಇದೇ ಏರ್ಫ್ರಾನ್ಸ್ ಸಂಸ್ಥೆಯ ಛಿoಟಿಛಿoಡಿಜ ಪ್ಯಾಸೆಂಜರ್ ವಿಮಾನಗಳು ಶಬ್ದದ ವೇಗದಲ್ಲಿ ಚಲಿಸಿ ಪ್ಯಾರಿಸ್-ನ್ಯೂಯಾರ್ಕ್ ದೂರವನ್ನು ಒಂದೆರಡು ಗಂಟೆಗಳಲ್ಲಿ ಕ್ರಮಿಸುತ್ತಿದ್ದವು. ಒಂದು ಭೀಕರ ಅಪಘಾತದ ನಂತರ ಈಗ ಕಾನ್ಕಾರ್ಡ್ ವಿಮಾನಗಳ ಹಾರಾಟ ನಿಂತಿದೆ). ಆರು ತಾಸಿನ ಐಷಾರಾಮ ಯಾನ ಎನ್ನುತ್ತದೆ ಏರ್ಫ್ರಾನ್ಸ್ನ ಜಾಹೀರಾತು. ಐಷಾರಾಮ ಅವರವರ ಭಾವಕ್ಕೆ ಅವರವರ ಅಭಿರುಚಿಗೆ ಮತ್ತು ಕಿಸೆ-ಸಾಮರ್ಥ್ಯಕ್ಕೆ ಬಿಟ್ಟದ್ದು. ಆದರೆ ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಎ-380 ವಿಮಾನಗಳಿಂದ ಪ್ರಯೋಜನಗಳೂ ಇವೆ. ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಒಂದೇ ವಿಮಾನವು ಏಕಕಾಲಕ್ಕೆ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಒಯ್ಯುವಂತಾದರೆ ಒಳ್ಳೆಯದೇ. ಇಲ್ಲಿಯವರೆಗೆ ಏರ್ಫ್ರಾನ್ಸ್, ಲುಫ್ತಾನ್ಸಾ, ಎಮಿರೇಟ್ಸ್, ಸಿಂಗಾಪುರ್, ಕೋರಿಯನ್, ಮತ್ತು ಕ್ವಾಂಟಾಸ್ ಏರ್ಲೈನ್ಗಳಷ್ಟೇ ಎ-380 ವಿಮಾನಗಳನ್ನು ಬಳಸುತ್ತಿರುವುದು. ಇನ್ನು ಸದ್ಯದಲ್ಲಿಯೇ ಬೆಂಗಳೂರು ಸೇರಿದಂತೆ ಭಾರತದ ಕೆಲವು ವಿಮಾನ ನಿಲ್ದಾಣಗಳೂ ಎ-380 ಕಂಪಾಟಿಬಲ್ ಆಗಲಿವೆ. ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ಫಿಶರ್ ಸಂಸ್ಥೆ ಆಗಲೇ ಐದು ಎ-380 ವಿಮಾನಗಳಿಗೆ ಆರ್ಡರ್ ಸಲ್ಲಿಸಿದೆಯಂತೆ. ಮೊದಲಿಗೆ ಮುಂಬಯಿಯಿಂದ ಎ-380 ಸರ್ವೀಸ್ ಆರಂಭಿಸುತ್ತದೆಯಂತೆ. ನಾಲ್ಕೈದು ವರ್ಷಗಳ ನಂತರ ಒಂದುವೇಳೆ ನಾನು ಹೀಗೆ ‘ಎ-380 ಎರಡಂತಸ್ತಿನ ವಿಮಾನದ ಗತ್ತು’ ಎಂದು ಲೇಖನ ಬರೆದರೆ ಆಗ ನೀವು ‘ಹೌದ್ರೀ ಅದು ನಮಗೂ ಗೊತ್ತು’ ಎನ್ನುತ್ತೀರಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]Version: 20240320