Episodes
Sunday Sep 23, 2012
Vedhadhyayana Vismaya
Sunday Sep 23, 2012
Sunday Sep 23, 2012
ದಿನಾಂಕ 23 ಸೆಪ್ಟೆಂಬರ್ 2012
ವೇದಾಧ್ಯಯನ ವಿಧಾನದ ವಿಸ್ಮಯ
* ಶ್ರೀವತ್ಸ ಜೋಶಿ
* * * ಹದಿಮೂರ್ ಹದಿನೇಳ್ಲ ಎಷ್ಟು ಎಂದು ಕೇಳಿದರೆ ಬೆಚ್ಚಿಬಿದ್ದು ಕಾಲ್ಕ್ಯುಲೇಟರ್ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ (ಈಗ ಅದನ್ನೂ ಮರೆತ) ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು. ಅದೂ ರಿವರ್ಸ್ ಆರ್ಡರ್, ಡಯಾಗನಲ್ ಆರ್ಡರ್ ಹೀಗೆ ಯಾವ ನಮೂನೆಯಲ್ಲಿ ಬೇಕೊ ಹಾಗೆ ಮಗ್ಗಿಯನ್ನು ಒಪ್ಪಿಸುವ ಜಾಣರಿರುತ್ತಿದ್ದರು. ಯಾಕೆ ಆ ಜಾಣ್ಮೆ ಇರುತ್ತಿತ್ತೆಂದರೆ ಆಗ ಕ್ಯಾಲ್ಕುಲೇಟರ್ಗಳು ಇರಲಿಲ್ಲ, ಅದಕ್ಕೂ ಹಿಂದೆ ಮಗ್ಗಿ ಪುಸ್ತಕಗಳೂ ಇರುತ್ತಿರಲಿಲ್ಲವೇನೊ. ಎಲ್ಲವೂ ಬಾಯಿಪಾಠದ ಕಲಿಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಚಿಕ್ಕಂದಿನಲ್ಲೇ ಮಗ್ಗಿ-ಕೋಷ್ಟಕಗಳ, ಗಣಿತ ಸೂತ್ರಗಳ ಕಂಠಪಾಠದ ಅಭ್ಯಾಸ. ಅದರ ಒಳಿತು-ಕೆಡುಕುಗಳು ಏನೇ ಇರಲಿ ಆಗಿನ ಕಾಲದಲ್ಲಿ ಅದು ಅನಿವಾರ್ಯವೆಂಬ ವಿಷಯವೂ ಗಮನಾರ್ಹ. ಮಗ್ಗಿ-ಕೋಷ್ಟಕ, ಸೂತ್ರ-ಸ್ತೋತ್ರಗಳದೇ ಮಾತು ಅನ್ವಯವಾಗುತ್ತದೆ ವೇದಗಳಿಗೂ ಕೂಡ! ವೇದಗಳು ಭಗವಂತನ ಉಸಿರಿನಿಂದ ಉದ್ಭವವಾದುವು (“ಯಸ್ಯ ನಿಶ್ವಸಿತಂ ವೇದಾ:") ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಋಷಿಮುನಿಗಳು ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿ, ಒಂದಿನಿತೂ ಬದಲಾವಣೆ ಇಲ್ಲದಂತೆ ಜತನವಾಗಿ ಇರಿಸುವಲ್ಲಿ ಬಹಳ ಎಚ್ಚರ ಮತ್ತು ಶ್ರಮ ವಹಿಸಿದ್ದಾರೆ. ಲಿಖಿತ ದಾಖಲೆಗಳಿಲ್ಲದೆ ಬಾಯಿಂದ ಬಾಯಿಗೆ ಮಾತ್ರ (ತಂದೆಯಿಂದ ಮಗನಿಗೆ ಅಥವಾ ಗುರುವಿನಿಂದ ಶಿಷ್ಯನಿಗೆ) ವರ್ಗಾವಣೆ ಹೊಂದುತ್ತ ಸಹಸ್ರಾರು ವರ್ಷಗಳ ಕಾಲದಿಂದಲೂ ವೇದಗಳು ಅಸ್ತಿತ್ವದಲ್ಲಿ ಇವೆಯೆಂದರೆ ಈ ಮೂಲಸ್ವರೂಪ ರಕ್ಷಣೆಯ ಮಹತ್ವ ಮತ್ತು ಅದರ ವಿಸ್ಮಯಕರವಾದ ತಂತ್ರ ನಿಜಕ್ಕೂ ಅದ್ಭುತವಾದುದು! ವೇದಮಂತ್ರ ಪಠಣದ ಒಂದು ಮೂಲಭೂತ ಅವಶ್ಯಕತೆಯೆಂದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕಾದರೆ ಅಕ್ಷರಶುದ್ಧಿ (ಪ್ರತಿಯೊಂದು ಅಕ್ಷರದ ಸರಿಯಾದ ಉಚ್ಚಾರ), ಮಾತ್ರಾಶುದ್ಧಿ (ಪ್ರತಿ ಅಕ್ಷರ ಉಚ್ಚಾರಕ್ಕೆ ನಿಖರವಾದ ಅವಧಿ) ಮತ್ತು ಸ್ವರಶುದ್ಧಿ - ಈ ಮೂರರಲ್ಲೂ ಯಾವೊಂದು ಲೋಪವೂ ಇರಬಾರದು. ಅಷ್ಟೇ ಅಲ್ಲ, ಗೀತೀ ಶೀಘ್ರೀ ಶಿರಃಕಂಪೀ ತಥಾ ಲಿಖಿತಪಾಠಕಃ ಅನರ್ಥಜ್ಞಃ ಅಲ್ಪಕಂಠಶ್ಚ ಷಡೈತೆ ಪಾಠಕಾಧಮಾಃ || ಅಂದರೆ ಹಾಡು ಗುನುಗಿದಂತೆ, ಅವಸರದಲ್ಲಿ, ಸುಮ್ಮನೆ ತಲೆಯನ್ನು ಮೇಲೆ-ಕೆಳಗೆ ಅಲ್ಲಾಡಿಸುತ್ತ, ಪುಸ್ತಕದಿಂದ ಓದುತ್ತ, ಅರ್ಥವನ್ನು ತಿಳಿದುಕೊಳ್ಳದೆ ಮತ್ತು ಕ್ಷೀಣಸ್ವರದಲ್ಲಿ - ಈ ಆರು ನಮೂನೆಯ ವೇದಪಠಣ ನಿಷ್ಪ್ರಯೋಜಕ. ವೇದಗಳ ಸರಿಯಾದ ಪಠಣಕ್ಕೆ, ಜತೆಯಲ್ಲೇ ಅವುಗಳ ಮೂಲರೂಪ ರಕ್ಷಣೆಗೆ ದೋಷರಹಿತ ವಿಧಾನ ಮತ್ತು ನಿಯಮಗಳ ಅವಶ್ಯಕತೆ ಬಹಳವಾಗಿ ಇದೆ. ದೋಷರಹಿತ (error proof) ಯಾಕೆಂದರೆ ವೇದೋಚ್ಚಾರದಲ್ಲಿ ಒಂದೇಒಂದು ಅಕ್ಷರ, ಮಾತ್ರೆ ಅಥವಾ ಸ್ವರದ ಲೋಪವಾದರೂ ಆ ಮಂತ್ರದ ಪರಿಣಾಮ ತದ್ವಿರುದ್ಧವಾಗಬಹುದು (ಇಂದ್ರನನ್ನು ಕೊಲ್ಲಲು ಹೊರಟ ‘ವೃತ್ರ’ನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಕೇವಲ ಒಂದು ಸ್ವರವಷ್ಟೇ ತಪ್ಪಾಗಿದ್ದರಿಂದ ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು ಎಂದು ಕಥೆಯಿದೆ)! ವೇದೋಚ್ಚಾರದ ನಿಯಮಗಳೆಲ್ಲ ‘ಶೀಕ್ಷಾ’ ಎನ್ನುವ ವೇದಾಂಗದಲ್ಲೇ ಅಳವಡಿಸಲ್ಪಟ್ಟಿವೆ. ವರ್ಣ (ಅಕ್ಷರಗಳು), ಸ್ವರ (ಉದಾತ್ತ, ಅನುದಾತ್ತ ಮತ್ತು ಸ್ವರಿತ ಎಂಬ ಮೂರು ಸ್ವರಗಳು), ಮಾತ್ರಾಕಾಲ, ಬಲ (ಉಚ್ಚರಿಸಲು ಬೇಕಾದ ಧ್ವನಿಶಕ್ತಿ), ಸಾಮ (ಸ್ವರಗಳ ಏರಿಳಿತದಲ್ಲಿ ಏಕರೂಪ) ಮತ್ತು ಸಂತಾನ (ನಿರಂತರತೆ) - ಇವೆಲ್ಲವುಗಳಿಗೆ ಸಂಬಂಧಿಸಿದಂತೆ ‘ಶೀಕ್ಷಾ’ದಲ್ಲಿ ನಿಯಮಗಳಿವೆ. ಇಷ್ಟೆಲ್ಲ ಚಾಕಚಕ್ಯತೆ ವಹಿಸಿ ವೇದಪಠಣ ಮಾಡಬೇಕಿದ್ದರೆ ಅದರ ಅಭ್ಯಾಸದಲ್ಲೂ ಕಠಿಣ ಪರಿಶ್ರಮದ ಆವಶ್ಯಕತೆ ಇದೆಯೆಂದು ಬೇರೆ ಹೇಳಬೇಕಿಲ್ಲ. ವೇದಾಭ್ಯಾಸ ಒಂದು ಆಸಕ್ತಿಯ ವಿಷಯವಾಗುವಂತೆ, ಬರೀ ಬಾಯಿಪಾಠವಷ್ಟೇ ಎನಿಸದೆ ಬುದ್ಧಿವಂತಿಕೆಯ ಉಪಯೋಗವೂ ಚೆನ್ನಾಗಿ ಆಗುವಂತೆ ಮಾಡಬೇಕಾದರೆ ಪಠಣ ಕ್ರಮದಲ್ಲಿ ವೈವಿಧ್ಯವಿರಬೇಕಾಗುತ್ತದೆ. ಇದನ್ನು ಮನಗಂಡ ಋಷಿಗಳು ಕೆಲವು ‘ಪಾಠಕ್ರಮ’ಗಳನ್ನು ರೂಪಿಸಿದರು. ಅವುಗಳ ಮೂಲಕ ವೇದಕಲಿಕೆ ದೋಷರಹಿತವಾಗಿರುವಂತೆ ನೋಡಿಕೊಂಡರು. ಅಂತಹ ಪಾಠಕ್ರಮಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳುವುದಕ್ಕಾಗಿ ಈ ಲೇಖನ. ಬೇರೆಬೇರೆ ಕ್ರಮಗಳಲ್ಲಿ ಪದಗಳ ಜೋಡಣೆ ಅರ್ಥವಾಗುವುದಕ್ಕೋಸ್ಕರ ಸಂಸ್ಕೃತ ಮಂತ್ರಗಳ ಬದಲಿಗೆ, ನಮಗೆಲ್ಲ ಚಿರಪರಿಚಿತವಾದ ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ ಎಂಬ ಕನ್ನಡ ಪದ್ಯದ ಸಾಲನ್ನು ಉದಾಹರಣೆಗಳಲ್ಲಿ ಅಳವಡಿಸಿಕೊಂಡಿದ್ದೇನೆ. ಕೇವಲ ಉದಾಹರಣೆಗಾಗಿ ಹೊರತು ವೇದಗಳನ್ನು ಲಘುವಾಗಿ ಪರಿಗಣಿಸುವುದಾಗಲೀ ಜಿ.ಪಿ.ರಾಜರತ್ನಂ ಪದ್ಯವನ್ನು ತಿರುಚುವುದಾಗಲಿ ಇಲ್ಲಿಯ ಉದ್ದೇಶವಲ್ಲ. * ಅತ್ಯಂತ ಪ್ರಾಥಮಿಕವಾದ ಮತ್ತು ಸರಳವಾದ (ಸೀದಾಸಾದಾ) ಪಾಠವೆಂದರೆ ‘ವಾಕ್ಯ ಪಾಠ’. ವೇದದ ಒಂದೊಂದೇ ಮಂತ್ರವನ್ನು ಒಂದು ವಾಕ್ಯದಂತೆ ಪಠಿಸುವುದು. ಇದನ್ನೇ 'ಸಂಹಿತಾಪಾಠ’ ಎಂದೂ ಕರೆಯುವರು. ವಾಕ್ಯಪಾಠದಲ್ಲಿ ನಮ್ಮ ತುತ್ತೂರಿಪದ್ಯದ ಸಾಲು ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ || ಎಂದು ಸುಲಭರೂಪದಲ್ಲೇ ಇರುತ್ತದೆ. ಮುಂದಿನದು ‘ಪದ ಪಾಠ’. ನಮಗೆ ಪ್ರಾಥಮಿಕಶಾಲೆಯಲ್ಲಿ ಒಂದನೆ, ಎರಡನೆ ತರಗತಿಯ ಪಠ್ಯಪುಸ್ತಕದಲ್ಲಿ ‘ಕಲಿತ ಪದಗಳು...’ ಎಂದಿರುತ್ತಿತ್ತಲ್ಲ? ಹಾಗೆ, ಮಂತ್ರದ ಪ್ರತಿಯೊಂದು ಪದವನ್ನೂ ಕಲಿತುಕೊಳ್ಳುವುದು. ಸಾಂಕೇತಿಕವಾಗಿ ತುತ್ತೂರಿಹಾಡು ಪದಪಾಠದಲ್ಲಿ ಈ ರೀತಿ ಉಚ್ಚರಿಸಲ್ಪಡುತ್ತದೆ. ಬಣ್ಣದ. ತಗಡಿನ. ತುತ್ತೂರಿ. ಕಾಸಿಗೆ. ಕೊಂಡನು. ಕಸ್ತೂರಿ. ಪದಪಾಠಕ್ಕಿಂತ ತುಸು ಸಂಕೀರ್ಣವಾದದ್ದು ‘ಕ್ರಮ ಪಾಠ’. ಇದರ ವೈಶಿಷ್ಟ್ಯವೆಂದರೆ ಮಂತ್ರದ ಎರಡೆರಡು ಪದಗಳನ್ನು, ಒಂದಕ್ಕೊಂದು ಓವರ್ಲ್ಯಾಪ್ ಆಗುವಂತೆ ಉಚ್ಚರಿಸುತ್ತ ಹೋಗುವುದು. 1-2, 2-3, 3-4, 4-5, 5-೬... ಈ ರೀತಿ. ಇದರಿಂದ ಮಂತ್ರದ ಪದಗಳನ್ನು ಕಲಿತಂತೆ ಆಗುತ್ತದೆಯಷ್ಟೇ ಅಲ್ಲ ಪದಗಳ ಜೋಡಣೆ ಮತ್ತು ಅದರಿಂದಾಗಬೇಕಾದ ಸ್ವರಬದಲಾವಣೆಯನ್ನೂ ಅಭ್ಯಸಿಸಿದಂತಾಗುತ್ತದೆ. (ಕ್ರಮಪಾಠದಲ್ಲಿ ವೇದಮಂತ್ರಪಠಣದ ನಿಷ್ಣಾತಿ ಹೊಂದಿದವರನ್ನು ‘ಕ್ರಮವಿತ್’ ಎನ್ನುತ್ತಾರೆ). ತುತ್ತೂರಿಪದ್ಯದ ಸಾಲು ಕ್ರಮಪಾಠದಲ್ಲಿ ಹೀಗೆ ಬರುತ್ತದೆ. ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ || ಗಮನಿಸಬೇಕಾದ ಅಂಶವೆಂದರೆ ಇದುವರೆಗಿನ ವಾಕ್ಯಪಾಠ, ಪದಪಾಠ ಮತ್ತು ಕ್ರಮಪಾಠ - ಈ ಮೂರರಲ್ಲೂ ಮಂತ್ರದ ಪದಗಳ ಅನುಕ್ರಮವು ಯಥಾಸ್ಥಿತಿಯಲ್ಲಿ, ಅಂದರೆ ಸ್ವಾಭಾವಿಕ ಹರಿವಿನಲ್ಲೇ ಇರುತ್ತದೆ. ಆದ್ದರಿಂದ ಈ ಮೂರು ವಿಧಾನಗಳನ್ನು ‘ಪ್ರಕೃತಿ’ ರೂಪದವು ಎನ್ನುತ್ತಾರೆ. ಮುಂದೆ ವಿವರಿಸಲಿರುವ ಪಾಠಕ್ರಮಗಳಲ್ಲಿ ಮಂತ್ರದ ಪ್ರತ್ಯೇಕ ಪದಗಳನ್ನೂ ಆಚೀಚೆ, ಹಿಂದೆಮುಂದೆ ಸ್ಥಾನಪಲ್ಲಟ ಮಾಡುವುದಿರುತ್ತದೆ. ಅಂದರೆ ಅವುಗಳ ಸ್ವಾಭಾವಿಕ ಅನುಕ್ರಮವನ್ನು ಬದಲಿಸಲಾಗುತ್ತದೆ. ಆದ್ದರಿಂದ ಇಂತಹ ಪಾಠಕ್ರಮಗಳಿಗೆ ‘ವಿಕೃತಿ’ ಎಂದು ಹೆಸರು. ಸಂಸ್ಕೃತ ಶ್ಲೋಕಗಳಲ್ಲಿ ಹೇಗೂ ಕರ್ತೃ-ಕರ್ಮ-ಕ್ರಿಯಾ ಇದೇ ಮಾದರಿಯಲ್ಲಿ (ಕನ್ನಡದಲ್ಲಿದ್ದಂತೆ) ಪದಗಳು ಬರಬೇಕೆಂದೇನಿಲ್ಲ, ಹಾಗಾಗಿ ವಿಕೃತಿಗೊಳಪಟ್ಟ ಶ್ಲೋಕವೂ ಅರ್ಥಪೂರ್ಣವೇ ಆಗಿರುತ್ತದೆ. ಜಟಾ ಮಾಲಾ ಶಿಖಾ ರೇಖಾ ಧ್ವಜೊ ದಂಡೊ ರಥೊ ಘನಃ ಇತ್ಯಷ್ಟಾಃ ವಿಕೃತಯಃ ಪ್ರೊಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ || ಮುಖ್ಯವಾದ ಎಂಟು ಪಾಠಕ್ರಮಗಳು - ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ - ಇವು ವಿಕೃತಿ ರೂಪದವು. ಇವುಗಳ ಪೈಕಿ ಜಟಾ ಮತ್ತು ಫ಼ನ ಪಾಠಕ್ರಮಗಳು ಮಾತ್ರ ತುಂಬ ಪ್ರಸಿದ್ಧವಾದುವು ಮತ್ತು ಚಾಲ್ತಿಯಲ್ಲಿರುವಂಥವು. ವಿಕೃತಿ ಪಾಠಕ್ರಮಗಳ ಪೈಕಿ ಕೆಲವನ್ನು ಈಗ ಪರಿಶೀಲಿಸೋಣ. ‘ಜಟಾ ಪಾಠ’ದಲ್ಲಿ ಪದಗಳು ಜಡೆ ಹೆಣೆದಂತೆ (ಜಟಾ ಎಂದರೆ ಜಡೆ) 1-2-2-1-1-2, 2-3-3-2-2-3, 3-4-4-3-3-4, 4-5-5-4-4-5... ಈ ಶ್ರೇಣಿರೂಪದಲ್ಲಿ ಆವರ್ತವಾಗುತ್ತವೆ. ತುತ್ತೂರಿಪದ್ಯದ ಸಾಲನ್ನು ಜಟಾಕ್ರಮದಲ್ಲಿ ಅಳವಡಿಸಿದಾಗ: ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || ‘ದಂಡ ಪಾಠ’ಕ್ರಮ ಸ್ವಾರಸ್ಯಕರವಾಗಿದೆ. ಇದರಲ್ಲಿಯೂ ಪದಯುಗ್ಮಗಳನ್ನು ಪೋಣಿಸುತ್ತ ಹೋಗಬೇಕು, ಒಂದೊಂದು ಸಲಕ್ಕೂ ಒಂದು ಪದವನ್ನು ಹೆಚ್ಚಿಸುತ್ತ ಹೋಗಬೇಕು ಮಾತ್ರವಲ್ಲ ಅವರೋಹಣ ಕ್ರಮದಲ್ಲಿ ಮೊದಲಿನ ಪದದವರೆಗೂ ಬರಬೇಕು. ತುತ್ತೂರಿಪದ್ಯದ ಸಾಲು ದಂಡಪಾಠದಲ್ಲಿ ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || ಘನಪಾಠಿ ವಿದ್ವಾಂಸ ಎಂಬ ವಿಶೇಷಣವನ್ನು ನೀವೆಂದಾದರೂ ಯಾರ ಬಗ್ಗೆಯಾದರೂ ಓದಿದ್ದೀರಿ/ಕೇಳಿದ್ದೀರಾದರೆ ಅವರು ಘನಪಾಠ ಕ್ರಮದಲ್ಲಿ ವೇದಗಳನ್ನುಚ್ಚರಿಸಬಲ್ಲ ಪಂಡಿತರೆಂದರ್ಥ. ಘನಪಾಠ ತುಂಬ ಜನಪ್ರಿಯವಾದದ್ದು. ಇದರಲ್ಲಿ ಪದಗಳ ಜೋಡಣೆ 1-2-2-1-1-2-3-3-2-1-1-2-3; 2-3-3-2-2-3-4-4-3-2-2-3-4; 3-4-4-3-3-4-5-5-4-3-3-4-5... ಈ ಕ್ರಮದಲ್ಲಿ. ಮತ್ತೆ ನಮ್ಮ ತುತ್ತೂರಿಪದ್ಯದ ಸಾಲಿಗೆ ಅನ್ವಯವಾಗುವಂತೆ ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || (ಇಲ್ಲಿ, ‘ಕಸ್ತೂರಿ ಎಂಬ ಕಸ್ತೂರಿ...’ ಸಾಲು ಎಲ್ಲಿಂದ ಬಂತು, ರಾಜರತ್ನಂ ಬರೆದ ಮೂಲಪದ್ಯದಲ್ಲಿ ಹಾಗಿರಲಿಲ್ಲವಲ್ಲ ಎಂದು ನಿಮಗೆ ಸಂಶಯ ಬರಬಹುದು. ವೇದಪಠಣದ ವಿವಿಧ ಕ್ರಮಗಳಲ್ಲಿ, ಸೂಕ್ತದ ಕೊನೆಯ ಪದವನ್ನುಪಯೋಗಿಸಿ ಈ ರೀತಿ ಉಚ್ಚರಿಸುವುದು ವಾಡಿಕೆ. ಉದಾಹರಣೆಗೆ ಒಂದು ಸೂಕ್ತವು ’ಸುವೃತ್ತಿ’ ಎಂಬ ಪದದೊಂದಿಗೆ ಮುಕ್ತಾಯವಾಗುವುದಿದ್ದರೆ ಸೂಕ್ತದ ಕೊನೆಯಲ್ಲಿ ‘ಸುವೃತ್ತಿ ಇತಿ ಸುವೃತ್ತಿ...’ ಎಂದು ಹೇಳಬೇಕು. ಆ ಕ್ರಮವನ್ನು ಕನ್ನಡಕ್ಕೆ ತಂದು ‘ಕಸ್ತೂರಿ ಎಂಬ ಕಸ್ತೂರಿ’ ಸಾಲನ್ನು ಸೇರಿಸಿದ್ದೇನೆ). ಘನಪಾಠದ ಘನತೆ ಎಷ್ಟಿದೆಯೆಂದರೆ ಅದು ಅತ್ಯಂತ ಕ್ಲಿಷ್ಟದ ಪಾಠಕ್ರಮವಾದ್ದರಿಂದ ಘನಪಾಠದಲ್ಲಿ ಮಂತ್ರವನ್ನು ಉಚ್ಚರಿಸುವುದರಿಂದ ಸಾವಿರಪಟ್ಟು ಹೆಚ್ಚು ಪುಣ್ಯ. ಸಹಜವಾಗಿಯೇ ಪದಗಳೆಲ್ಲ ಪುನರಾವರ್ತನೆ ಆಗುವುದರಿಂದ ಭಗವಂತನ ಗುಣಗಾನ, ಸದ್ಗುಣ ಚಿಂತನೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ. ಮೇಲಿನ ಪದ್ಯವನ್ನೇ ನೋಡಿ - ಕಸ್ತೂರಿ, ತುತ್ತೂರಿ ಪದಗಳು ಎಷ್ಟು ಸಲ ಬಂದುಹೋಗುತ್ತವೆ! ಅಂದಹಾಗೆ, ಘನಪಾಠ ರೀತಿಯಲ್ಲಿ ಸಂಪೂರ್ಣ ಋಗ್ವೇದವನ್ನು ಪಠಿಸಲು ಸುಮಾರು 450 ಗಂಟೆಗಳು ಬೇಕಾಗಬಹುದು! ಗಾಯತ್ರೀಮಂತ್ರವನ್ನು ಘನಪಾಠ ರೂಪದಲ್ಲಿ ಪಠಿಸುವುದು ಹೇಗೆಂದು ಈ ವಿಡಿಯೋದಲ್ಲಿ ನೋಡಬಹುದು: [youtube=http://www.youtube.com/watch?v=0gDJgnhF23Y] ಪದಪಾಠ, ಕ್ರಮಪಾಠ, ಜಟಾಪಾಠ ಮತ್ತು ಘನಪಾಠದಲ್ಲಿ ಗಾಯತ್ರೀ ಮಂತ್ರ: ಇನ್ನೊಂದು ವಿಡಿಯೋ- [youtube=http://www.youtube.com/watch?v=2_D1qGcxYxM] ಮಾಲಾ ಪಾಠಕ್ರಮದಲ್ಲಿ ಪುಷ್ಪಮಾಲಾ ಮತ್ತು ಕ್ರಮಮಾಲಾ ಎಂಬ ಎರಡು ನಮೂನೆಗಳಿವೆ. ದೇವರಿಗೆ ಅರ್ಪಿಸಲು ಹೂಮಾಲೆ ಕಟ್ಟುವವರು ಹೇಗೆ ಬೇರೆಬೇರೆ ಬಣ್ಣದ, ಜಾತಿಯ ಹೂಗಳಿದ್ದರೂ ಮಾಲೆಯು ಸಮಮಿತಿಯಲ್ಲಿರುವಂತೆ ಕಾಯ್ದುಕೊಳ್ಳುತ್ತಾರೊ ಹಾಗೆಯೇ ಪದಗಳ ಜೋಡಣೆಯ ಪಾಠಕ್ರಮವಿದು. ಶಿಖಾ ಪಾಠಕ್ರಮವೂ ಜಟಾ ಇದ್ದಂತೆ, ಆದರೆ ಎರಡೆರಡು ಪದಗಳ ಬದಲಿಗೆ ಮೂರುಮೂರು ಪದಗಳನ್ನು ಜೋಡಿಸುತ್ತ ಹೋಗಬೇಕು. ರಥ ಪಾಠಕ್ರಮದಲ್ಲಿ ದ್ವಿಪಾದ, ತ್ರಿಪಾದ ಮತ್ತು ಚತುಷ್ಪಾದ ರಥ (ಆಗಲೇ ಟು-ವ್ಹೀಲರ್, ತ್ರೀ-ವ್ಹೀಲರ್ ಕಾನ್ಸೆಪ್ಟ್ ಇತ್ತೇ?) ಎಂಬ ಉಪವಿಧಾನಗಳೂ ಇವೆ, ಒಂದೊಂದೂ ಜಟಿಲವಾಗುತ್ತ ಹೋಗುತ್ತವೆ. ಹಾಗೆಯೇ ರೇಖಾ ಮತ್ತು ಧ್ವಜ ಪಾಠಕ್ರಮಗಳೂ ತೀರಾ ಕ್ಲಿಷ್ಟವಾದುವು; ಈ ಲೇಖನದ ವ್ಯಾಪ್ತಿಗೆ ತೀರಾ ಭಾರವಾದುವು. ನಮ್ಮ ಪೂರ್ವಜರು ಕಂಡುಕೊಂಡ ಈ ಪಾಠಕ್ರಮಗಳು, ಅವುಗಳ ಸಂಕೀರ್ಣತೆ, ಅವುಗಳಲ್ಲಿ ಹೇರಳವಾಗಿ ಉಪಯೋಗವಾಗಿರುವ ಗಣಿತ-ಸಂಖ್ಯಾಶಾಸ್ತ್ರ - ಇವೆಲ್ಲ ಅಚ್ಚರಿ ಮೂಡಿಸುತ್ತವೆಯಲ್ಲವೆ? ಇಂತಹ ಪ್ರಮಾಣೀಕೃತ, ನಿಯಮಬದ್ಧ ಮೌಖಿಕ ವೇದಪಠಣ ಕ್ರಮವನ್ನು ಒಂದು ಅತ್ಯಮೂಲ್ಯ, ದುರ್ಲಭ ಸಂಪ್ರದಾಯವೆಂದು UNESCO (United Nations Educational Scientific and Cultural Organization) ಪ್ಯಾರಿಸ್ನಲ್ಲಿ 2003ರಲ್ಲಿ ನಡೆದ ಶೃಂಗಸಭೆಯಲ್ಲಿ ಘೋಷಿಸಿ ಗೌರವಿಸಿದೆ! ಹಿಂದೂಧರ್ಮದ, ಭಾರತೀಯ ಸಂಸ್ಕೃತಿಯ ಅರ್ಥಪೂರ್ಣ ಸತ್ಸಂಪ್ರದಾಯವೊಂದಕ್ಕೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ನಿಜಕ್ಕೂ ನಾವೆಲ್ಲರೂ ಹೆಮ್ಮೆಪಡುವಂಥದು! * * * ಈ ಲೇಖನವು 2006ರಲ್ಲಿ thatskannada.com ಅಂತರ್ಜಾಲ ಪತ್ರಿಕೆಯ ‘ವಿಚಿತ್ರಾನ್ನ’ ಅಂಕಣದಲ್ಲಿ ಪ್ರಕಟವಾಗಿ ಆಮೇಲೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಮರುಪ್ರಕಟಗೊಂಡಿತ್ತು. ಬೆಂಗಳೂರಿನ ‘ವೇದಪ್ರಕಾಶ’ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಲೇಖನವನ್ನೋದಿದ ಮೈಸೂರಿನ ಡಾ.ನ.ರತ್ನ ಅವರು ತಾವು ಬರೆಯುತ್ತಿದ್ದ 'ನಟ ಮತ್ತು ಮಾತು' ಪುಸ್ತಕದಲ್ಲಿ ಒಂದು ಅನುಬಂಧ (annexure) ಆಗಿ ಈ ಲೇಖನವನ್ನು ಅಳವಡಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಅನುಮತಿ ಕೋರಿದ್ದರು. ವೇದವನ್ನು ಕಂಠಪಾಠ ಮಾಡುವ ಕ್ರಮಬದ್ಧ ರೀತಿಯು ನಟನಟಿಯರಿಗೆ ಸಂಭಾಷಣೆ ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳುವುದಕ್ಕೆ ನೆರವಾಗುತ್ತದೆ ಎಂಬ ತರ್ಕ ಅವರದು. ಇದೀಗ 7Sep2012ರಂದು 'ನಟ ಮತ್ತು ಮಾತು’ ಪುಸ್ತಕ ಬಿಡುಗಡೆಯಾಗಿ ಡಾ.ನ.ರತ್ನ ಅವರು ಕೈಬರಹದ ಒಂದು ಪತ್ರದೊಂದಿಗೆ ಪುಸ್ತಕದ ಪ್ರತಿಯನ್ನು ನನಗೆ ಕಳಿಸಿದ್ದಾರೆ. ರಂಗಭೂಮಿಯ ವಾಚಿಕದ ಬಗ್ಗೆ ಪೂರ್ಣಪ್ರಮಾಣದ ಅತ್ಯಮೂಲ್ಯ ಆಕರಗ್ರಂಥ ರಚನೆಗಾಗಿ ನ.ರತ್ನ ಅವರನ್ನು ಅಭಿನಂದಿಸುತ್ತ ಅವರ ಪುಸ್ತಕಕ್ಕೆಂದು ವಿಶೇಷವಾಗಿ ಗುರುತಿಸಿದ ಈ ಲೇಖನವನ್ನು ಪಠ್ಯ ಮತ್ತು ಧ್ವನಿಮಾಧ್ಯಮದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ವಿಚಿತ್ರಾನ್ನ ಅಂಕಣದಲ್ಲಿ ಲೇಖನ ಪ್ರಕಟವಾದಾಗ ಬಂದಿದ್ದ ಪ್ರತಿಕ್ರಿಯೆಗಳು ಇಲ್ಲಿವೆ. * * * ["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Thursday Sep 20, 2012
nanna baravaNige beLeda bage
Thursday Sep 20, 2012
Thursday Sep 20, 2012
ದಿನಾಂಕ 21 ಸೆಪ್ಟೆಂಬರ್ 2012
ನನ್ನ ಬರವಣಿಗೆ ಬೆಳೆದ ಬಗೆ
* ಶ್ರೀವತ್ಸ ಜೋಶಿ
[ಖ್ಯಾತ ಲೇಖಕ, ಪತ್ರಕರ್ತ, ನನ್ನ ಆತ್ಮೀಯ ಸ್ನೇಹಿತ ‘ಜೋಗಿ’ (ಗಿರೀಶ್ ಹತ್ವಾರ್) ಅವರ ಪುಸ್ತಕ "ಹಲಗೆ ಬಳಪ- ಹೊಸ ಬರಹಗಾರರಿಗೆ ಪಾಠಗಳು" ಪುಸ್ತಕಕ್ಕೆಂದು ಬರೆದ ವಿಶೇಷ ಲೇಖನ ] [ಲೇಖನದ ಕೊನೆಯಲ್ಲಿರುವ "Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಇದನ್ನು ಧ್ವನಿಮಾಧ್ಯಮದಲ್ಲಿಯೂ ಆನಂದಿಸಬಹುದು!] * * * ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’ ಎನ್ನುತ್ತಾನೆ ಎದೆತುಂಬಿ ಹಾಡುವ, ಸ್ವಲ್ಪ ಫಿಲಾಸಫಿಕಲ್ ರೀತಿಯಲ್ಲಿ ಚಿಂತಿಸುವ ಹಾಡುಗಾರ. ಅವನು ಕೇವಲ ತನ್ನ ಆತ್ಮಸಂತೋಷಕ್ಕೆಂದು ಹಾಡುವವನು. ಅದೇ ಧಾಟಿಯಲ್ಲಿ ಒಬ್ಬ ಬರಹಗಾರನೂ ಹೇಳಬಹುದು- ‘ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಯಾರು ಓದದಿದ್ದರೂ ನನಗಿಲ್ಲ ಚಿಂತೆ...’ - ಅವನದೂ ಹೆಚ್ಚೂಕಡಿಮೆ ಫಿಲಾಸಫಿ ಕ್ಯಾಟಗರಿಯೇ. ‘ಯಾರಾದರೂ ಓದಲಿ ಎಂದು ನಾನು ಬರೆಯುವುದಿಲ್ಲ; ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂದು ಪ್ರಪಂಚದ ಪ್ರತಿಯೊಬ್ಬ ಬರಹಗಾರನೂ ಹೇಳಿದ್ದೇ ಆದರೆ ಬರಹಗಳೆಲ್ಲ ಬರೀ ಪರ್ಸನಲ್ ಡೈರಿಗಳಷ್ಟೇ ಆಗಬೇಕಿತ್ತಲ್ಲವೇ? ಪುಣ್ಯಕ್ಕೆ ಹಾಗಿಲ್ಲ ಪರಿಸ್ಥಿತಿ. ಪರ್ಸನಲ್ ಡೈರಿ ಮಾತ್ರ ನಮ್ಮ ಸಂತೋಷಕ್ಕೆ, ನಮ್ಮೊಳಗಿನ ಸ್ವಗತದ ರೂಪದಲ್ಲಿ, ನಮಗೋಸ್ಕರವಷ್ಟೇ ಬರೆಯುವುದು. ಮಿಕ್ಕೆಲ್ಲ ಬರಹಗಳೂ ಯಾರಾದರೂ ಓದಲಿ ಎಂದೇ ಬರೆಯುವಂಥವು. ಅಂದಮೇಲೆ ಅದರಲ್ಲಿ ಮುಚ್ಚುಮರೆ ಏಕೆ? ನಾನೇನೂ ಮಹಾನ್ ಬರಹಗಾರ ಅಲ್ಲ. ಆದರೆ ಬರೆದದ್ದಷ್ಟನ್ನು ನಾನು ಬೇರೆಯವರು ಓದಲೆಂದೇ ಬರೆದಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲೆ! ನನ್ನ ಬರವಣಿಗೆ ಹೇಗೆ ಆರಂಭವಾಯಿತು, ಹೇಗೆ ಮುಂದುವರಿಯಿತು ಎಂದು ನಾನೀಗ ವಿವರಿಸುವವನಿದ್ದೇನಲ್ಲ, ಆಗ ಈ ಮಾತು ಪುಷ್ಟಿಗೊಳ್ಳುತ್ತ ಹೋಗುತ್ತದೆ. ನೀವೇ ನೋಡುವಿರಂತೆ. ಕಡೆಗೆ ಈ ಬರಹವನ್ನಾದರೂ ನೀವು ಓದಬೇಕಂತಲೇ ತಾನೆ ನಾನು ಬರೆಯುತ್ತಿರುವುದು? ದೊಡ್ಡ ಕುಟುಂಬದಲ್ಲಿ ಅತಿ ಕಿರಿಯವನಾಗಿ ಹುಟ್ಟಿ ಬೆಳೆದ ನಾನು, ಸುಮಾರಾಗಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ನನ್ನ ಅಣ್ಣಂದಿರು ವಿದ್ಯಾಭ್ಯಾಸ ಅಥವಾ ವೃತ್ತಿಗಾಗಿ, ಮತ್ತು ಅಕ್ಕಂದಿರು ಮದುವೆಯಾಗಿ, ಪರವೂರಿನಲ್ಲಿದ್ದರು. ಅವರಿಗೆಲ್ಲ ತಿಂಗಳಿಗೊಮ್ಮೆ ಕ್ಷೇಮಸಮಾಚಾರದ ಪತ್ರ ಬರೆಯುವ ಕೆಲಸವನ್ನು ನಮ್ಮ ತಂದೆಯವರು ಹೆಚ್ಚಾಗಿ ನನ್ನ ಕೈಯಿಂದಲೇ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಮೊಬೈಲ್ ಬಿಡಿ, ಲ್ಯಾಂಡ್ಲೈನ್ ಟೆಲಿಫೋನ್ ಸಹ ನಮ್ಮಲ್ಲಿರಲಿಲ್ಲ. ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಲೆಟರ್ ಮತ್ತು ಕವರ್ಗಳೇ ಸಂದೇಶವಾಹಕಗಳು. ಹಾಗಾಗಿ ಶಾಲಾದಿನಗಳಲ್ಲಿ ಪಠ್ಯೇತರವಾಗಿ ನಾನೇನಾದರೂ ಬರೆದದ್ದಿದ್ದರೆ ಆ ಪತ್ರಗಳು ಮಾತ್ರ. ಆದರೆ, ವಿಷಯ-ವಿಚಾರಗಳನ್ನು, ಸಮಾಚಾರ-ಸ್ವಾರಸ್ಯಗಳನ್ನು ಇನ್ನೊಬ್ಬರೊಡನೆ ಎದುರು ಕುಳಿತು ಮಾತನಾಡುತ್ತಿರುವಂತೆ ವಿನಿಮಯ ಮಾಡಿಕೊಳ್ಳುವ ಧಾಟಿ ನನ್ನ ಬರವಣಿಗೆಯಲ್ಲಿ ಕಾಣಿಸಿಕೊಂಡಿದೆಯಾದರೆ ಅದು ಆ ಪತ್ರವ್ಯವಹಾರದಿಂದಲೇ ಎಂದು ನಾನು ದೃಢವಾಗಿ ನಂಬಿದ್ದೇನೆ. ಮತ್ತು ಅದಕ್ಕಾಗಿ ನನ್ನ ದಿ.ತೀರ್ಥರೂಪರವರಿಗೆ ಎಂದೆಂದಿಗೂ ಋಣಿಯಾಗಿದ್ದೇನೆ. ಅಣ್ಣಂದಿರಿಗೆ, ಅಕ್ಕಂದಿರಿಗಷ್ಟೇ ಅಲ್ಲ ನಾನು ಪತ್ರ ಬರೆಯುತ್ತಿದ್ದದ್ದು. ಬಾಲ್ಯದಲ್ಲಿ ಒಬ್ಬ ಆತ್ಮೀಯ ಸ್ನೇಹಿತನೆಂದೇ ಪರಿಗಣಿಸಿದ್ದ ‘ಮಂಗಳೂರು ಆಕಾಶವಾಣಿ’ಗೂ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಬಾಲವೃಂದ ಕಾರ್ಯಕ್ರಮದಲ್ಲಿ ಬರುತ್ತಿದ್ದ ರಸಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ, ಕೋರಿಕೆ ಕಾರ್ಯಕ್ರಮದಲ್ಲಿ ನೆಚ್ಚಿನ ಚಿತ್ರಗೀತೆ ಕೇಳಲಿಕ್ಕೆ, ಪತ್ರೋತ್ತರ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ತಿಳಿಸಲಿಕ್ಕೆ - ಹೀಗೆ ಆಕಾಶವಾಣಿಯೊಂದಿಗೆ ನನ್ನ ಪತ್ರವ್ಯವಹಾರ. ರೇಡಿಯೊದಲ್ಲಿ ನನ್ನ ಪತ್ರದ ಉಲ್ಲೇಖವಾದಾಗೆಲ್ಲ ಒಂಥರದ ರೋಮಾಂಚನ. ಮಾಧ್ಯಮದೊಂದಿಗೆ ಸಂಪರ್ಕ-ಸಂವಹನದ ನನ್ನ ಬರವಣಿಗೆಗೆ ಅದು ಭದ್ರ ಅಡಿಪಾಯ ಹಾಕಿತು. ಮುಂದೆ ನನ್ನ ಹೆಚ್ಚಿನ ಬರವಣಿಗೆಯೆಲ್ಲ ಮಾಧ್ಯಮಗಳಿಗೆಂದೇ ಬರೆದದ್ದು ಅಂತಾಯ್ತು. ದಾವಣಗೆರೆಯಲ್ಲಿ ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ‘ಸುಧಾ’ದಲ್ಲಿ ನನ್ನದೊಂದು ಪತ್ರ ಪ್ರಕಟವಾಯ್ತು. ಅದು ಸುಧಾ ಪತ್ರಿಕೆಯ ಬೆಳ್ಳಿಹಬ್ಬದ ವರ್ಷ. ‘ಸುಧಾ ಪತ್ರಿಕೆ ನಿಮಗೇಕೆ ಇಷ್ಟವಾಗುತ್ತದೆ ಅಥವಾ ಆಗುವುದಿಲ್ಲ?’ ಎಂದು ಓದುಗರಿಂದ ವಿಶೇಷವಾಗಿ ಪತ್ರಗಳನ್ನು ಆಹ್ವಾನಿಸಿದ್ದರು. ‘ಸುಧಾ ಬಗ್ಗೆ ನನ್ನ ಪರ-ವಿರೋಧ ನಿಲುವುಗಳನ್ನು ತಕ್ಕಡಿಯ ಎರಡು ತಟ್ಟೆಗಳಲ್ಲಿಟ್ಟಾಗ...’ ಎಂಬ ನನ್ನ ಪತ್ರವೂ ಆಯ್ಕೆಯಾಗಿ ಪ್ರಕಟವಾಯ್ತು. ನಮ್ಮ ಹಾಸ್ಟೆಲ್ನ ವಾಚನಾಲಯಕ್ಕೆ ತರಿಸುತ್ತಿದ್ದ ಪತ್ರಿಕೆಗಳಲ್ಲಿ ಸುಧಾ ಕೂಡ ಇರುತ್ತಿತ್ತು. ಆ ವಾರ ಸುಧಾದಲ್ಲಿ ನನ್ನ ಪತ್ರ/ಹೆಸರು ಪ್ರಕಟವಾಗಿದೆಯೆಂದು ನನಗೆಷ್ಟು ಪುಳಕವೋ ಅಷ್ಟೇ ಹಿಗ್ಗು ನನ್ನೆಲ್ಲ ಸಹಪಾಠಿಗಳಿಗೂ. ಗೌರವಧನವೆಂದು ಐವತ್ತು ರೂಪಾಯಿಗಳ ಚೆಕ್ ಮತ್ತು ಆ ವಾರದ ಸುಧಾ ಸಂಚಿಕೆ ಅಂಚೆಯಲ್ಲಿ ಬಂದಾಗಿನ ಸಂಭ್ರಮವಂತೂ ಸಾಟಿಯಿಲ್ಲದ್ದು! ಮುಂದೆ ನಾನು ಉದ್ಯೋಗಕ್ಕಾಗಿ ದಿಲ್ಲಿ ಮತ್ತು ಹೈದರಾಬಾದ್ನಲ್ಲಿ ಇದ್ದಾಗಲೂ ತಪ್ಪದೇ ಸುಧಾ ತರಿಸುತ್ತಿದ್ದೆ. ಸಮುದ್ರಮಥನ ವಿಭಾಗಕ್ಕೆ ಪತ್ರ ಬರೆಯುತ್ತಿದ್ದೆ. ಸುಧಾದಲ್ಲಿ ಆಗ ಅತ್ಯಂತ ಜನಪ್ರಿಯವಾಗಿದ್ದ ‘ಚೌ ಚೌ ಚೌಕಿ’ ಅಂಕಣದಲ್ಲಿ ಭಾಗವಹಿಸುತ್ತಿದ್ದೆ. ಸಿಲ್ಲಿ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ಬರೆದುಕಳಿಸುತ್ತಿದ್ದೆ. ಅವು ಪ್ರಕಟವೂ ಆಗುತ್ತಿದ್ದವು. ಹೈದರಾಬಾದ್ನಲ್ಲಿದ್ದಾಗ ನಾನು ‘ದ ಹಿಂದು’ ಪತ್ರಿಕೆ ಓದುತ್ತಿದ್ದೆ. ಅಂಕಣಬರಹಗಳ ಓದನ್ನು ನಾನು ಆರಂಭಿಸಿದ್ದು ಹಿಂದು ಪತ್ರಿಕೆಯಲ್ಲೇ. ಭಾನುವಾರಗಳಂದು ಪ್ರಕಟವಾಗುತ್ತಿದ್ದ ಅಮೆರಿಕನ್ ಹಾಸ್ಯಬರಹಗಾರ ಆರ್ಟ್ ಬಕ್ವಾಲ್ಡ್ನ ಅಂಕಣ ಮತ್ತು ವಿ.ಗಂಗಾಧರ್ ಬರೆಯುತ್ತಿದ್ದ Slice of Life ಅಂಕಣ ನನ್ನ ನೆಚ್ಚಿನ ಓದು. ಸೋಮವಾರಗಳಂದು Between You and Me ಎಂಬ ಅಂಕಣ ಬರುತ್ತಿತ್ತು. ಹಿಂದು ಪತ್ರಿಕೆಯ ಹೈದರಾಬಾದ್ ಆವೃತ್ತಿಯಲ್ಲಿ ಅದನ್ನು ನಡೆಸುತ್ತಿದ್ದವರು ಪ್ರೊ. ಕೆ. ಸುಬ್ರಹ್ಮಣ್ಯಂ (Know Your English ಅಂಕಣವನ್ನೂ ಅವರೇ ನಿರ್ವಹಿಸುತ್ತಿದ್ದರು). ಆ ಅಂಕಣಕ್ಕೆ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಅವು ಪ್ರಕಟವಾಗುತ್ತಿದ್ದವು. ಒಮ್ಮೆ ಸಿಕಂದರಾಬಾದ್ ರೈಲ್ವೇ ಸ್ಟೇಷನ್ನ ಯಾವುದೋ ಅವ್ಯವಸ್ಥೆಯ ಕುರಿತು ನಾನು ಬರೆದಿದ್ದ ಪತ್ರಕ್ಕೆ ಸುಬ್ರಹ್ಮಣ್ಯಂ ತಮ್ಮದೊಂದಿಷ್ಟು ವ್ಯಂಗ್ಯವನ್ನೂ ಸೇರಿಸಿ ಪ್ರಕಟಿಸಿದ್ದರು. ಮಾರನೇದಿನ ಹೋಗಿ ನೋಡಿದಾಗ ರೈಲ್ವೇ ಸ್ಟೇಷನ್ನ ಅವ್ಯವಸ್ಥೆ ರಿಪೇರಿ ಆಗಿತ್ತು! ಇದಿಷ್ಟು ಪತ್ರಲೇಖನದ ವಿಚಾರವಾಯ್ತು. ನನ್ನ ಬರವಣಿಗೆಗೆ ಪೂರಕವಾಗಿ ಪರಿಣಮಿಸಿದ ಇನ್ನೂ ಒಂದು ಮುಖ್ಯ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗಲೇ ಹೇಳಿದಂತೆ ನಾನು ಎಂಜಿನಿಯರಿಂಗ್ ಓದಿದ್ದು ದಾವಣಗೆರೆಯ ಬಿ.ಡಿ.ಟಿ ಕಾಲೇಜಿನಲ್ಲಿ, ಎಂಬತ್ತರ ದಶಕದ ಉತ್ತರಾರ್ಧದಲ್ಲಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಆಗಷ್ಟೇ ಶುರುವಾದದ್ದು. ವಿಭಾಗಕ್ಕೆ ಮುಖ್ಯಸ್ಥರಾಗಲಿ ಉಪನ್ಯಾಸಕರಾಗಲಿ ಯಾರೂ ಇರಲಿಲ್ಲ. ಪ್ರಯೋಗಾಲಯ ಸೌಲಭ್ಯವೂ ಅಷ್ಟಕ್ಕಷ್ಟೇ. ಬೇರೆ ವಿಭಾಗಗಳ ಅಥವಾ ಬೇರೆ ಕಾಲೇಜಿನ ಪ್ರಾಧ್ಯಾಪಕರು ಆಗೊಮ್ಮೆ ಈಗೊಮ್ಮೆ ಬಂದು ಪಾಠ ಮಾಡುವ ವ್ಯವಸ್ಥೆ. ವಿದ್ಯಾರ್ಥಿಗಳದು ಹೆಚ್ಚೂಕಡಿಮೆ ಏಕಲವ್ಯನ ಪರಿಸ್ಥಿತಿ. ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಸೆಮಿಸ್ಟರ್ ಆರಂಭದಿಂದಲೇ ಆಯಾಯ ಸಬ್ಜೆಕ್ಟ್ನ ಸಿಲೆಬಸ್ ಏನಿದೆ, ಯಾವ ಪಠ್ಯಪುಸ್ತಕಗಳನ್ನು ಶಿಫಾರಸು ಮಾಡಿದ್ದಾರೆ, ಹಿಂದಿನ ಪ್ರಶ್ನೆಪತ್ರಿಕೆಗಳ ಸ್ವರೂಪ ಹೇಗಿದೆ ಅಂತೆಲ್ಲ ಅಧ್ಯಯನ ನಡೆಸಿ ನನ್ನದೇ ನೋಟ್ಸ್ ತಯಾರಿಸುವುದು. ಅದೂ ಹೇಗೆ, ಒಂದೆರಡು ಸೆಮಿಸ್ಟರ್ಗಳಲ್ಲಿ ಒಂದೆರಡು ಸಬ್ಜೆಕ್ಟ್ಗಳಿಗಲ್ಲ, ಮೂರರಿಂದ ಎಂಟನೇ ಸೆಮಿಸ್ಟರ್ವರೆಗೂ ಅದೇ ಪದ್ಧತಿ. ಮೊದಮೊದಲಿಗೆ ನನಗೋಸ್ಕರವಷ್ಟೇ ಸಿದ್ಧಪಡಿಸಿಕೊಳ್ಳುತ್ತಿದ್ದ ಆ ನೋಟ್ಸ್, ಕ್ರಮೇಣ ಸಹಪಾಠಿಗಳಿಗೂ ಸರಳವಾಗಿದೆಯೆಂದು ತೋರಿತು. ಅವರೆಲ್ಲರೂ ಪಠ್ಯಪುಸ್ತಕಗಳಿಗಿಂತ ನನ್ನ ನೋಟ್ಸನ್ನೇ ಫೊಟೊಕಾಪಿ ಮಾಡಿ ಓದತೊಡಗಿದರು. ಅನಿವಾರ್ಯ ಪರಿಸ್ಥಿತಿಯಲ್ಲಿ ಆಲಂಗಿಸಿಕೊಂಡ ಆ ನೋಟ್ಸ್ ಕಲೆ ನನಗೆ ಚೆನ್ನಾಗಿ ಕರಗತವಾಯಿತು. ಯಾವುದೇ ವಿಷಯವಿರಲಿ, ಅದರ ಬಗ್ಗೆ ಸುಲಭಗ್ರಾಹ್ಯವಾಗುವಂಥ ಕಿರು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು, ಇನ್ನೊಬ್ಬರಿಗೆ ಅರ್ಥವಾಗುವಂತೆ ಆ ವಿಷಯವನ್ನು ಪ್ರಸ್ತುತಪಡಿಸುವುದು ಕರತಲಾಮಲಕವಾಗಿಹೋಯ್ತು. ಎಂಜಿನಿಯರಿಂಗ್ ಶಿಕ್ಷಣ ಮುಗಿದು ಸುಮಾರು ಹತ್ತು ವರ್ಷಗಳ ನಂತರ ನಾನು ಅಮೆರಿಕ ದೇಶಕ್ಕೆ ಬಂದಾಗ ಮೊದಲು ಮಾಡಿದ ಕೆಲಸವೆಂದರೆ ಇಲ್ಲಿ ಗಮನಿಸಿದ ಹೊಸಹೊಸ ಸಂಗತಿಗಳ ಬಗ್ಗೆ ಟಿಪ್ಪಣಿಗಳನ್ನು ತಯಾರಿಸಿ, ಪೂರಕ ಮಾಹಿತಿ ಸಂಗ್ರಹಿಸಿ, Let us know US ಎಂಬ ವೆಬ್ ಜರ್ನಲ್ ತಯಾರಿಸಿದ್ದು. ಅದಕ್ಕೆ ನೆರವಾದದ್ದೂ ನನ್ನ ಎಂಜಿನಿಯರಿಂಗ್ ಶಿಕ್ಷಣದ ನೋಟ್ಸ್ ಕಲೆಯೇ. Let us know US ವೆಬ್ ಜರ್ನಲ್ ಅಂತರಜಾಲದಲ್ಲಿ ಒಬ್ಬ ಅಮೆರಿಕನ್ ಶಿಕ್ಷಕಿಯ ಕಣ್ಣಿಗೆ ಬಿದ್ದು ಆಕೆ ಅದನ್ನು ಮೆಚ್ಚಿ ‘ನನ್ನ ವಿದ್ಯಾರ್ಥಿಗಳಿಗೆ ಮಾಹಿತಿಸಂಗ್ರಹಣೆಯ ಪ್ರಾಜೆಕ್ಟ್ಗೆ ಇದನ್ನು ಮಾದರಿಯಾಗಿ ಕೊಡುತ್ತಿದ್ದೇನೆ’ ಎಂದು ಇಮೇಲ್ ಬರೆದಿದ್ದನ್ನು ಓದಿ ನನಗಾದ ಸಂತಸ ಅಷ್ಟಿಷ್ಟಲ್ಲ. ಹಾಗೆ ನೋಡಿದರೆ ಆಮೇಲೆ ನಾನು ದಟ್ಸ್ಕನ್ನಡ ಡಾಟ್ ಕಾಮ್ ಅಂತರಜಾಲ ಪತ್ರಿಕೆಯಲ್ಲಿ ಬರೆದ ‘ವಿಚಿತ್ರಾನ್ನ’ ಅಂಕಣದಲ್ಲೂ, ಅದಾದಮೇಲೆ ಐದು ವರ್ಷಗಳ ಕಾಲ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ‘ಪರಾಗಸ್ಪರ್ಶ’ ಅಂಕಣದಲ್ಲೂ, ಈ ನೋಟ್ಸ್ ಕಲೆಯ ಬಲದಿಂದಲೇ ರಸಪಾಕ ಸಿದ್ಧಪಡಿಸುತ್ತಿದ್ದದ್ದು. ಜತೆಯಲ್ಲೇ ಓದುಗರೊಡನೆ ಸಂಭಾಷಿಸುತ್ತಿರುವೆನೋ ಎಂದೆನಿಸುವ ಶೈಲಿ, ಬಾಲ್ಯದಲ್ಲಿ ರೂಢಿಯಾಗಿದ್ದ ಪತ್ರಲೇಖನದ ಬಳುವಳಿ. ಅಂಕಣದ ಓದುಗರಿಗೆ ಅದು ಗೊತ್ತಾಗುತ್ತಿತ್ತೋ ಇಲ್ಲವೋ, ಪ್ರತಿ ವಾರದ ಅಂಕಣವನ್ನು ಸಿದ್ಧಪಡಿಸುವಾಗ ನನಗಂತೂ ಚೆನ್ನಾಗಿ ಗೊತ್ತಾಗುತ್ತಿತ್ತು. ಇನ್ನು, ಒಂದನೇ ತರಗತಿಯಿಂದ ಹತ್ತನೆಯವರೆಗೆ ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದದ್ದನ್ನೂ ನನ್ನ ಬರವಣಿಗೆಗೆ ಸತ್ವ ನೀಡಿದ ಪೋಷಕಾಂಶವೆಂದೇ ನಾನು ಗುರುತಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಓದಿದೆನೆಂಬ ಸಂಗತಿ ನನಗೆ ಒಂದು ಕೊರಗಾಗಿ, ಕೀಳರಿಮೆಯಾಗಿ ಯಾವತ್ತಿಗೂ ಅನಿಸಿದ್ದಿಲ್ಲ. ಬದಲಿಗೆ ಆಬಗ್ಗೆ ನನಗೆ ವಿಶೇಷ ಹೆಮ್ಮೆಯೇ ಇದೆ. ಹಾಗೆಯೇ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಸಂಸ್ಕೃತ ಭಾಷೆಯ ಕಲಿಕೆಯೂ ನನ್ನ ಬರವಣಿಗೆಗೆ ಕಿಂಚಿತ್ತಾದರೂ ಮೆರುಗು ಕೊಡುವುದರಲ್ಲಿ ನೆರವಾಗಿದೆ. ಭಾಷೆಗಳ ಬಗ್ಗೆ ನನಗಿರುವ ಕುತೂಹಲ, ಬೇರೆಬೇರೆ ಭಾಷೆಗಳ ನಡುವಿನ ಸಾಮ್ಯ-ವ್ಯತ್ಯಾಸಗಳ ವಿಶ್ಲೇಷಣೆ, ತೀರಾ ಮಡಿವಂತಿಕೆಯಿಲ್ಲದೆ ಸಂದರ್ಭೋಚಿತವಾಗಿ ಬೇರೆಬೇರೆ ಭಾಷೆಗಳ ಪದ-ವಾಕ್ಯಗಳ ಬಳಕೆ - ಇವೆಲ್ಲವೂ ಬರವಣಿಗೆಗೊಂದು ಬಣ್ಣ ಕೊಟ್ಟಿವೆ. ಅಷ್ಟೇಕೆ, ಪಿಯುಸಿ ಓದುತ್ತ ಉಜಿರೆಯ ಸಿದ್ಧವನ ಗುರುಕುಲದಲ್ಲಿ, ಎಂಜಿನಿಯರಿಂಗ್ ಓದುತ್ತ ದಾವಣಗೆರೆಯ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಅಭ್ಯಸಿಸಿದ್ದೂ ನನ್ನ ಬದುಕನ್ನು, ಬರವಣಿಗೆಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದೆ ಎಂದು ನಾನು ಗರ್ವದಿಂದ ಹೇಳುತ್ತೇನೆ. ಬರವಣಿಗೆಯಲ್ಲಿ ನಾನು ಅಳವಡಿಸಿಕೊಂಡ, ಅಭ್ಯಾಸಮಾಡಿಕೊಂಡ ಕೆಲವು ಸರಳ ತಂತ್ರಗಳ ಬಗ್ಗೆಯೂ ಹೇಳಿ ಈ ಬರಹವನ್ನು ಮುಗಿಸುತ್ತೇನೆ. ಮೊದಲನೆಯದಾಗಿ, ಎತ್ತರದ ಪೀಠದಲ್ಲಿ ಕುಳಿತು/ನಿಂತು ಕೆಳಗೆ ನೋಡುತ್ತ ಜನರಿಗೆ ಉಪದೇಶ ಕೊಡುತ್ತಿದ್ದೇನೆ ಎಂಬಂತೆ ಬರೆಯುವುದನ್ನು (ಇದನ್ನು ivory tower writing ಎನ್ನುತ್ತಾರೆ) ನಾನು ಸ್ವಲ್ಪವೂ ಇಷ್ಟಪಡುವುದಿಲ್ಲ. ‘ಏನೋ ಒಂದು ಸ್ವಾರಸ್ಯಕರ ವಿಷಯವಿದೆ ಎಲ್ಲರೂ ಸೇರಿ ಅದನ್ನು ತಿಳಿದುಕೊಳ್ಳೋಣ, ಆನಂದಿಸೋಣ’ ಎನ್ನುವಂಥ ಧಾಟಿಯೇ ನನಗೆ ಬಹಳ ಹಿಡಿಸುತ್ತದೆ. ಮತ್ತದೇ, ಎಂಜಿನಿಯರಿಂಗ್ ನೋಟ್ಸ್ ಕಲೆಯ ಪ್ರಭಾವ. ಎರಡನೆಯದಾಗಿ, ಓದುಗನಿಗೆ ಹಿತಾನುಭವ ಆಗಬೇಕು, ಅದು ಬರಹದುದ್ದಕ್ಕೂ ಆಗುತ್ತಲೇ ಇರಬೇಕು ಎನ್ನುವುದು ನನ್ನ ಮುಖ್ಯ ಕಾಳಜಿ. ಅಂದಮಾತ್ರಕ್ಕೆ ಓದುಗನನ್ನು ಪ್ಯಾಂಪರ್ ಮಾಡು ಅಂತಲ್ಲ. ನಡುನಡುವೆ ತುಂಟತನದ ಕಚಗುಳಿ, ಲಘುಹಾಸ್ಯದ ಕೀಟಲೆ, ತರ್ಕದ ತರ್ಲೆ ಎಲ್ಲ ಇರಬೇಕು. ಅನಾವಶ್ಯಕ ಕಿರಿಕಿರಿಯಾಗಬಾರದು, ಕೀಳರಿಮೆಗೆ ಆಸ್ಪದವಿರಬಾರದು ಅಷ್ಟೇ. ಮೂರನೆಯದಾಗಿ, ಯಾವುದೇ ಬರಹವು ‘ಹರಕೆ ಸಂದಾಯ’ ಆಗಬಾರದು. ಉಡಾಫೆ ಮತ್ತು ಅತಿಯಾದ ಆತ್ಮವಿಶ್ವಾಸ ಸಲ್ಲದು. ಬರೆದಾದ ನಂತರ ಲೇಖನವನ್ನು ಕಡ್ಡಾಯವಾಗಿ ಕನಿಷ್ಠ ಎರಡು-ಮೂರು ಸಲವಾದರೂ ಪೂರ್ತಿ ಓದಿನೋಡುವ ಪರಿಪಾಠವನ್ನಿಟ್ಟುಕೊಳ್ಳಬೇಕು. ನಾನು ಕೆಲವೊಮ್ಮೆ ನಾಲ್ಕೈದು ಸಲ, ‘ಬೇರೆಬೇರೆ ಓದುಗರ ಪಾದರಕ್ಷೆಗಳಲ್ಲಿ ನನ್ನ ಕಾಲುಗಳನ್ನಿಟ್ಟುಕೊಂಡಂತೆ ಊಹಿಸಿ’ ಓದಿ ನೋಡುವುದೂ ಇದೆ. ಬರಹದಲ್ಲಿನ ಸುಕ್ಕುಗಳನ್ನು, ನಿರಿಗೆಗಳನ್ನು ತೆಗೆಯಲು ಇದು ಸಹಾಯಕವಾಗುತ್ತದೆ. ಮೊದಲಿಂದ ಕೊನೆಯವರೆಗೂ ಅಡೆತಡೆಗಳಿಲ್ಲದೆ ಓದಿಸಿಕೊಳ್ಳುವ ಗುಣ ಬರಹದಲ್ಲಿ ಮೈದಳೆಯುತ್ತದೆ. ನಾನು ಬರೆಯುವುದು ಬರೀ ನನ್ನ ಆತ್ಮಸಂತೋಷಕ್ಕಲ್ಲ, ಓದುವವರಿಗೊಂದು ಆಪ್ತ ಅನುಭೂತಿಯಾಗುವುದಕ್ಕೆ, ಹಿತಾನುಭವ ಕೊಡುವುದಕ್ಕೆ ಎಂದು ಮೊದಲೇ ಹೇಳಿಬಿಟ್ಟಿದ್ದೆನಲ್ಲ? ಹಾಗಾಗಿ ಬರಹದಲ್ಲಿ ಸತ್ವ ಇರಲಿ ಇಲ್ಲದಿರಲಿ, ಬರಹ ಬಂಧುರವಾಗಿರಲಿ ಇಲ್ಲ ಬರಡಾಗಿರಲಿ ಓದಿಸಿಕೊಳ್ಳುವ ಗುಣವನ್ನಾದರೂ ಖಾತರಿಪಡಿಸುವುದು ನನ್ನ ಆದ್ಯತೆ. ಪ್ರಸ್ತುತ, ಈ ಬರಹದಲ್ಲೂ ಅದನ್ನಂತೂ ಸಾಧ್ಯವಾದಷ್ಟು ಪಾಲಿಸಿದ್ದೇನೆ ಎಂಬ ನಂಬಿಕೆ ನನ್ನದು! * * * ["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Version: 20240320