Episodes
Saturday Jun 25, 2011
Names and Nice Memories
Saturday Jun 25, 2011
Saturday Jun 25, 2011
ದಿನಾಂಕ 26 ಜೂನ್ 2011ರ ಸಂಚಿಕೆ...
ಹೆಸರಿನ ಹಿಂದೆ ಒಂದು ಹಸಿರು ನೆನಪು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಅಮೆರಿಕದ ಸಸ್ಯೋದ್ಯಾನದಲ್ಲಿ ಅಶೋಕ ವೃಕ್ಷವನ್ನು ನೋಡಿದಾಗ ಅದರ ಕೆಳಗೆ ಸೀತಾಮಾತೆ ಕುಳಿತ ಚಿತ್ರ ಕಣ್ಮುಂದೆ ಬಂದುಹೋಯಿತು ಎಂದು ನಿಮ್ಮ ಸ್ನೇಹಿತರೊಬ್ಬರ ಅನುಭವವನ್ನು ಬಣ್ಣಿಸಿದ್ದೀರಷ್ಟೇ? ಅದನ್ನು ಓದಿದಾಗಿನಿಂದ ನನಗೊಂದು ಸಂದೇಹ ಕಾಡುತ್ತಿದೆ. ರಾಮಾಯಣದ ಕಥೆಯಲ್ಲಿ, ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಲಂಕೆಯಲ್ಲಿ ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಕೆಳಗೆ ಕುಳಿತು ದಿನಕಳೆಯುತ್ತಿದ್ದಳು ಎಂದು ವಿವರಣೆಯಿದೆ. ಅಂದರೆ ವನದ ಹೆಸರು ಅಶೋಕವೇ ಆದರೂ ಸೀತಾಮಾತೆಗೆ ನೆರಳು ನೀಡಿದ್ದ ವೃಕ್ಷದ ಹೆಸರು ಶಿಂಶುಪ ಅಲ್ಲವೇ? ಇದನ್ನು ನಾನು ಚಂದಮಾಮ ಕಥೆಗಳಲ್ಲಿ ಓದಿದ್ದೆ. ಇಷ್ಟು ಚೆನ್ನಾಗಿ ಹೇಗೆ ನನ್ನ ನೆನಪಿನಲ್ಲಿ ಉಳಿದಿದೆ ಎಂಬುದನ್ನೂ ವಿವರಿಸುತ್ತೇನೆ. ಚಂದಮಾಮದಲ್ಲಿ ಆ ಕಥೆಗಳನ್ನು ಓದುತ್ತಿದ್ದ ದಿನಗಳಲ್ಲಿ ನಾನು ಚೊಚ್ಚಲ ಬಸುರಿ. ಸೀತೆಯ ಕಷ್ಟಕಾಲದಲ್ಲಿ ಅವಳಿಗೆ ನೆರಳಿತ್ತ ಶಿಂಶುಪ ವೃಕ್ಷದ ಬಗ್ಗೆ ನನಗೆ ಅಪಾರ ಗೌರವ ಮೂಡಿತ್ತು. ನನಗೇನಾದರೂ ಹೆಣ್ಣು ಮಗುವಾದರೆ ಶಿಂಶುಪಾ ಎಂದೇ ಹೆಸರಿಡುತ್ತೇನೆ ಎಂದು ಆಗಲೇ ಅಂದುಕೊಂಡಿದ್ದೆ. ಅದರಂತೆ ನನಗೆ ಹೆಣ್ಣುಮಗುವೇ ಹುಟ್ಟಿತು. ಶಿಂಶುಪಾ ಎಂದೇ ಹೆಸರಿಟ್ಟೆವು. ಈಗ ಅವಳು ದೊಡ್ಡವಳಾಗಿ ಮದುವೆಯೂ ಆಗಿ ಗಂಡನ ಮನೆ ಸೇರಿದ್ದಾಳೆ...” ಇದು, ಮೇ ೨೨ರ ಅಂಕಣದಲ್ಲಿ ಪ್ರಕಟವಾಗಿದ್ದ ‘ಬಾರ್ಸಿಲೋನಾದಲ್ಲಿ ಕರಿಬೇವು ಸಿಕ್ಕ ಸಂತಸ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬಂದ ಒಂದು ಪತ್ರ. ಬರೆದವರು ಮಡಿಕೇರಿಯಿಂದ ಗೀತಾ ಶ್ರೀಧರ ಎಂಬುವರು. ಇದೇ ಮೊದಲ ಸಲ ಅವರು ನನಗೆ ಪತ್ರ ಬರೆದಿರುವುದು. ಅವರೆನ್ನುವುದು ನಿಜ. ಲಂಕೆಯಲ್ಲಿ ಸೀತೆ ಕುಳಿತುಕೊಂಡಿದ್ದದ್ದು ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಅಡಿಯಲ್ಲಿ. ಶಿಂಶುಪ ವೃಕ್ಷಕ್ಕೆ ಕನ್ನಡದಲ್ಲಿ ಏನಂತಾರೆ, ಅದರ ಸಸ್ಯಶಾಸ್ತ್ರೀಯ ಹೆಸರೇನು, ಅಶೋಕ ವೃಕ್ಷಕ್ಕಿಂತ ಅದು ಹೇಗೆ ಭಿನ್ನ ಎಂಬೆಲ್ಲ ವಿವರಗಳು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಸುಂದರಕಾಂಡದಲ್ಲಿ ‘ಶಿಂಶುಪ ವೃಕ್ಷವನೇರಿ ಕುಳಿತನವ ಸೀತೆಯ ಹುಡುಕಲು ಹನುಮಂತ... ಮಾಸಿದ ಸೀರೆಯ ಮ್ಲಾನವದನೆಯನು ಕಂಡು ಮರುಗಿದನು ಗುಣವಂತ...’ ಎಂದು ಕೇಳಿದ್ದು ನೆನಪಿದೆ. ನಿಖರವಾದ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ, ಅದಕ್ಕಿಂತಲೂ ಹೆಚ್ಚಾಗಿ ಹೆಸರಿನ ಹಿಂದಿನ ಹಸಿರು ನೆನಪನ್ನು ಹಂಚಿಕೊಂಡದ್ದಕ್ಕಾಗಿ ಗೀತಾ ಅವರಿಗೆ ವಿಶೇಷ ಧನ್ಯವಾದಗಳು. ಟಿವಿ ರಾಮಾಯಣದಲ್ಲಿ ಸೀತೆಯ ಪಾತ್ರ ಮಾಡಿದ್ದ ನಟಿ ನಿಮಗೆ ನೆನಪಿದ್ದಾಳೆಯೇ? ಆಕೆಯ ಹೆಸರು ದೀಪಿಕಾ. ಕೆಲ ದಿನಗಳ ಹಿಂದೆ ನನಗೆ ದ್ವೀಪಿಕಾ ದೇಸಾಯಿ ಎಂಬುವರಿಂದ ಒಂದು ಫೇಸ್ಬುಕ್ ಫ್ರೆಂಡ್ರಿಕ್ವೆಸ್ಟ್ ಬಂದಿತ್ತು. ಅವರ ಹೆಸರು ನೋಡಿ ಕನ್ನಡದವರಲ್ಲವೇನೊ ಎಂದುಕೊಂಡಿದ್ದೆ ನಾನು. ಪರಿಚಯ ತಿಳಿಸುತ್ತೀರಾ ಎಂದು ಅವರಿಗೆ ಬರೆದು ಕೇಳಿದ್ದೆ. ಅದಕ್ಕೆ ಕನ್ನಡದಲ್ಲೇ ಉತ್ತರಿಸಿದ ದ್ವೀಪಿಕಾ, ತಾನು ಕ್ಯಾಲಿಫೋರ್ನಿಯಾದಲ್ಲಿರುವ ಓರ್ವ ಕನ್ನಡತಿ ಗೃಹಿಣಿಯೆಂದೂ ಈಗ ಅಮ್ಮ-ಅಪ್ಪ ತನ್ನನ್ನು ಭೇಟಿಯಾಗಲು ಅಮೆರಿಕೆಗೆ ಬಂದಿದ್ದಾರೆಂದೂ, ಅಮ್ಮ ಪರಾಗಸ್ಪರ್ಶ ಅಂಕಣದ ರೆಗ್ಯುಲರ್ ಓದುಗರೆಂದೂ, ಅಮೆರಿಕದಿಂದ ಹಿಂದಿರುಗುವುದರೊಳಗೆ ನನ್ನೊಡನೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಲು ಬಯಸುತ್ತಾರೆಂದೂ ಬರೆದಿದ್ದರು. ನನ್ನ ಫೋನ್ ನಂಬರ್ ತಿಳಿಸಿದ ಮೇಲೆ ಅವರಮ್ಮನೊಡನೆ ಟೆಲಿಮಾತುಕತೆ ಆಯಿತು. ತಮಾಷೆಗಾಗಿಯೇ ನಾನು ಅವರಲ್ಲಿ “ನಿಮ್ಮ ಮಗಳ ಹೆಸರು ನಿಜವಾಗಿಯೂ ದ್ವೀಪಿಕಾ ಅಂತಲೇ ಇರುವುದಾ ಅಥವಾ ದೀಪಿಕಾ ಅಂತಿದ್ದದ್ದು ಬರೆಯುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ನಡುವೆ ಡಬ್ಲ್ಯೂ ಸೇರಿಕೊಂಡದ್ದಾ?” ಎಂದು ಕೇಳಿಯೇಬಿಟ್ಟೆ. ಅದಕ್ಕೆ ಅವರ ಉತ್ತರ ಹೀಗಿತ್ತು- “ದ್ವೀಪಿಕಾ ಅಂತಲೇ ಹೆಸರು. ಅವಳ ಅಪ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು ಈಗ ನಿವೃತ್ತರಾಗಿದ್ದಾರೆ. ಅವರಿಗೆ ಕೆಲಸದಲ್ಲಿ ಬೇರೆಬೇರೆ ಊರುಗಳಿಗೆ ಟ್ರಾನ್ಸ್ಫರ್ ಆಗುತ್ತಿತ್ತು. ಮಗಳು ಹುಟ್ಟುವಾಗ ನಮ್ಮವರ ಉದ್ಯೋಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿತ್ತು. ಆ ನೆನಪಿಗಾಗಿ ದ್ವೀಪಿಕಾ ಎಂದು ಹೆಸರಿಟ್ಟೆವು. ಎಲ್ಲರೂ ಅದೇ ಪ್ರಶ್ನೆ ಕೇಳೋದು- ದೀಪಿಕಾ ಎನ್ನುವ ಹೆಸರು ಸಾಮಾನ್ಯವಾಗಿ ಗೊತ್ತಿರುತ್ತೆ. ಇದೇನಿದು ದ್ವೀಪಿಕಾ ಎಂಬ ಹೆಸರು? ಅವರೆಲ್ಲರಿಗೆ ವಿವರಿಸುವಾಗ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪವಾಸದ ದಿನಗಳನ್ನು ನೆನೆದು ಖುಷಿಪಡುತ್ತೇವೆ.” ರಾಮಾಯಣದಲ್ಲಿ ಸೀತೆಯ ಅಪಹರಣಕ್ಕೆ ಕಾರಣವಾದದ್ದು ಏನು ಹೇಳಿ? ಮಾರೀಚ ಬಂಗಾರದ ಜಿಂಕೆಯಾಗಿ ಸೀತೆಯ ಕಣ್ಮುಂದೆ ಸುಳಿದಾಡಿದ್ದು. ಹಿಂದೊಮ್ಮೆ ನಾನು ಅಮೆರಿಕದ ರಸ್ತೆಗಳಲ್ಲಿ ಜಿಂಕೆಗಳು ಓಡಾಡುವುದರ ಕುರಿತು ‘ಪಬ್ಲಿಕ್ ರೋಡಿನಲಿ ಜಿಂಕೆ ಬಂದೈತಲ್ಲೋ...’ ಎಂಬ ಲೇಖನ ಬರೆದಿದ್ದೆ. ಅದರಲ್ಲಿ ‘ಕೆಲವೊಮ್ಮೆ ಈ ಜಿಂಕೆಗಳು ಎಚ್ಚರಿಕೆ ಫಲಕಗಳಿರುವಲ್ಲಿಯೇ ರಸ್ತೆ ದಾಟುವ ಸುಭಗತನವನ್ನು ಪ್ರದರ್ಶಿಸುವುದೂ ಇದೆ’ ಎಂದು ಬರೆದಿದ್ದೆ. ಅಮೆರಿಕದ ನಾರ್ತ್ಕೆರೊಲಿನಾದಲ್ಲಿರುವ ಮಲ್ಲಿಕಾ ರಾಜೀವ್ ಎಂಬುವರು ಅದನ್ನೋದಿ, “ನೀವು ಲೇಖನದಲ್ಲಿ ಒಂದುಕಡೆ ಸುಭಗತನ ಎಂಬ ಪದ ಬಳಿಸಿದ್ದೀರಲ್ಲಾ ಅದರ ಅರ್ಥವೇನು? ಏಕೆ ಕೇಳುತ್ತಿದ್ದೇನೆಂದರೆ ನನ್ನ ಮಗನ ಹೆಸರು ಸುಭಗ ಅಂತಲೇ ಇರುವುದು. ಹೆಸರಿನ ನಿಜಾರ್ಥ ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?” ಎಂದು ಪತ್ರ ಬರೆದು ಕೇಳಿದ್ದರು. ಸುಭಗ ಎನ್ನುವುದು ಗಣಪತಿಯ ಹೆಸರುಗಳಲ್ಲೊಂದು. ಸುಭಗ ಎಂಬ ಪದದ ವಾಚ್ಯಾರ್ಥವು ಜಾಣ ಅಥವಾ ಬುದ್ಧಿವಂತ (ಇಂಗ್ಲಿಷ್ನಲ್ಲಾದರೆ smart) ಎಂದು. ಇದನ್ನು ಅವರಿಗೆ ವಿವರಿಸಿದ್ದೆ. ಹೌದು ತನ್ನ ಮಗ ನಿಜಕ್ಕೂ ಜಾಣ ಎಂದು ಅವರು ಹೆಮ್ಮೆಪಟ್ಟುಕೊಂಡಿದ್ದರು. ಈ ಮೇಲಿನ ಮೂರು ಹೆಸರಾಯಣಗಳನ್ನು ಒಂದು ಸಾಮಾನ್ಯ ಅಂಶದಿಂದ ಪೋಣಿಸಿರುವುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಇಲ್ಲವಾದರೂ ನಾನೇ ತಿಳಿಸುತ್ತೇನೆ- ಮೂರಕ್ಕೂ ಪೀಠಿಕೆಯಲ್ಲಿ ಸೀತಾಮಾತೆ ಬರುತ್ತಾಳೆ! ಈರೀತಿ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳನ್ನು ಯಾವುದೋ ಒಂದು ಸ್ವಾರಸ್ಯಕರ ಎಳೆಯಿಂದ ಪೋಣಿಸುವುದು ಅಥವಾ ಸರಪಳಿಯಂತೆ ಜೋಡಿಸುವುದು ನನಗೆ ಇಷ್ಟದ ಕೆಲಸ. ಕೆಲ ವಾರಗಳ ಹಿಂದೆ, ಅಭ್ಯಾಸಬಲದ ಅನುಭವಗಳು ಮತ್ತು ಆಭಾಸಗಳ ಬಗ್ಗೆ ಓದುಗರ ಪ್ರತಿಕ್ರಿಯೆಗಳನ್ನು ಪೋಣಿಸಿ ಒಂದು ಅಂಕಣದಲ್ಲಿ ಪ್ರಸ್ತುತಪಡಿಸಿದ್ದು, ಅಭ್ಯಾಸಬಲ ಪ್ರದರ್ಶನದ ಉದ್ಘಾಟನೆಯನ್ನು ಹತ್ತು ತಿಂಗಳ ಪುಟ್ಟ ಪಾಪುವಿನಿಂದ ಮಾಡಿಸಿದ್ದು ನಿಮಗೆ ನೆನಪಿರಬಹುದು (ವಾಕಿಂಗ್ನಲ್ಲೂ ಅಭ್ಯಾಸಬಲಗೈಯಿಂದ ಸಿಗ್ನಲ್ : 9 ಜನವರಿ 2011). ಅವತ್ತಿನ ಅಂಕಣವನ್ನು ಬರೆಯುವಾಗ ನನಗೆ ಆ ಮಗುವಿನ ಹೆಸರು ಗೊತ್ತಿರಲಿಲ್ಲ. ಮಗುವಿನ ಅಜ್ಜಿ, ಭದ್ರಾವತಿಯ ಮಮತಾ ನಾಗರಾಜ ಅವರು ‘ಮುದ್ದಿನ ಮೊಮ್ಮಗಳು’ ಎಂದು ಬರೆದಿದ್ದರೇ ಹೊರತು ಹೆಸರೇನೆಂದು ತಿಳಿಸಿರಲಿಲ್ಲ. ಅಂಕಣ ಪ್ರಕಟವಾದ ಮೇಲೆ ಅವರೇ ಪತ್ರ ಬರೆದು ಮೊಮ್ಮಗುವಿನ ಹೆಸರು ‘ಶೃಂಖಲಾ’ ಎಂದು ತಿಳಿಸಿದರು. ಶೃಂಖಲಾ ಎಂದರೆ ಸಂಸ್ಕೃತದಲ್ಲಿ ಸರಪಳಿ ಎಂದರ್ಥ. ಓದುಗರ ಅನುಭವಗಳನ್ನು ನಾನು ಸರಪಳಿಯಿಂದ ಜೋಡಿಸಿದ್ದನ್ನು ಶೃಂಖಲಾ ಉದ್ಘಾಟಿಸಿದ್ದಳು! ಸ್ನೇಹಸ್ಪರ್ಶ: ಮುಂದಿನ ಭಾನುವಾರ ಜುಲೈ 3ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಒಂದು ಅನೌಪಚಾರಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪರಾಗಸ್ಪರ್ಶ ಅಂಕಣದ ಓದುಗಬಳಗದ ಸ್ನೇಹಸಮಾವೇಶ. ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶ. ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು (‘ಗೆಲುವಿನ ಟಚ್!’ ಮತ್ತು ‘ಚೆಲುವಿನ ಟಚ್!’ - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ ‘ಹನಿ’ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಓದುಗಮಿತ್ರರೆಲ್ಲರಿಗೂ ಆತ್ಮೀಯ ಸ್ವಾಗತ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Jun 18, 2011
Four Colors For Map
Saturday Jun 18, 2011
Saturday Jun 18, 2011
ದಿನಾಂಕ 19 ಜೂನ್ 2011ರ ಸಂಚಿಕೆ...
ನಕ್ಷೆ ಬಿಡಿಸಲು ಸಾಕು ಬಣ್ಣ ಬರಿ ನಾಲ್ಕು?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಬರೆಯಲಿಕ್ಕೆ ಹೊರಟಿರುವುದು ನಕಾಶೆಗಳ ಕುರಿತಾದರೂ ಕಳೆದವಾರದ ‘ಕೌದಿ’ ಮತ್ತೆ ನೆನಪಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಬೇರೆಬೇರೆ ಬಣ್ಣದ ಬಟ್ಟೆತುಂಡುಗಳನ್ನು ಜೋಡಿಸಿ ಹೊಲಿದ ದುಪ್ಪಟ್ಟಿಯನ್ನು ಕೌದಿ ಎನ್ನುತ್ತಾರಷ್ಟೇ? ಹಾಗೆಯೇ ಪ್ರತ್ಯೇಕ ಭೂಭಾಗಗಳನ್ನು ವಿಭಿನ್ನ ಬಣ್ಣಗಳಲ್ಲಿ ತೋರಿಸುವ ನಕಾಶೆಯೂ ಒಂಥರದಲ್ಲಿ ಕೌದಿಯಂತೆ ಕಾಣಿಸುವುದಿಲ್ಲವೇ? ಅದರಲ್ಲೂ ಅಮೆರಿಕ ದೇಶದ ಭೂಪಟವನ್ನು ನೀವು ನೋಡಬೇಕು. ಇಲ್ಲಿ ಸುಮಾರಷ್ಟು ಸಂಸ್ಥಾನಗಳ ಗಡಿಗಳು ಸರಳರೇಖೆಯಲ್ಲಿವೆ. ಕೊಲರಾಡೊ, ವ್ಯೋಮಿಂಗ್, ಕ್ಯಾನ್ಸಸ್ ಮುಂತಾದ ಸಂಸ್ಥಾನಗಳಂತೂ ನೀಟಾಗಿ ಹಲ್ವಾ ಕತ್ತರಿಸಿದಂತೆ ಚತುರ್ಭುಜ ಆಕೃತಿಯಲ್ಲಿವೆ (ಅಲ್ಲಿನ ಎಲಿಮೆಂಟರಿ ಶಾಲೆಯ ಮಕ್ಕಳಿಗೆ ಜಿಯಾಗ್ರಫಿ ಪರೀಕ್ಷೆಯಲ್ಲಿ ‘ನಿಮ್ಮ ರಾಜ್ಯದ ನಕ್ಷೆ ಬರೆಯಿರಿ’ ಪ್ರಶ್ನೆ ತುಂಬ ಸುಲಭ. ಒಂದು ಆಯತ ಬಿಡಿಸಿ ಇದು ನಮ್ಮ ರಾಜ್ಯ ಎಂದರಾಯಿತು). ಹಾಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಕೌದಿಯ ಬಟ್ಟೆತುಂಡುಗಳಿಗೆ ಹೋಲಿಸಿದ ನನ್ನ ಕಲ್ಪನೆ ನಿಮಗೆ ವಿಚಿತ್ರ ಅನಿಸಲಿಕ್ಕಿಲ್ಲ ಎಂದುಕೊಂಡಿದ್ದೇನೆ. ಅಮೆರಿಕ ಮತ್ತು ಕೌದಿಯನ್ನು ಬಿಟ್ಟು ಈಗ ಕಲರಿಂಗ್ ವಿಷಯಕ್ಕೆ ಬರೋಣ. ಏಕೆಂದರೆ ನಕಾಶೆಗೂ ಕಲರಿಂಗ್ಗೂ ಎಲ್ಲಿಲ್ಲದ ನಂಟು. ಪ್ರಪಂಚದ ನಕಾಶೆಯಲ್ಲಿ ದೇಶಗಳು, ದೇಶದ ನಕಾಶೆಯಲ್ಲಿ ರಾಜ್ಯಗಳು, ರಾಜ್ಯದ ನಕಾಶೆಯಲ್ಲಿ ಜಿಲ್ಲೆಗಳು, ಜಿಲ್ಲೆಯದರಲ್ಲಿ ತಾಲೂಕುಗಳು- ಬೇರೆಬೇರೆ ಬಣ್ಣದಲ್ಲಿರುವುದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಪ್ರಾಥಮಿಕ ಶಾಲೆಯ ಸಮಾಜಪರಿಚಯ ಪಾಠದ ಅಭ್ಯಾಸ ಚಟುವಟಿಕೆಯಾಗಿ ನಾವೇ ನಮ್ಮ ರಾಜ್ಯದ/ಜಿಲ್ಲೆಯ ನಕಾಶೆ ಬರೆದಿದ್ದೇವೆ. ಜಿಲ್ಲೆ/ತಾಲೂಕುಗಳನ್ನು ಬೇರೆಬೇರೆ ಬಣ್ಣಗಳಿಂದ ಗುರುತಿಸಿದ್ದೇವೆ. ಒಂದೇ ವ್ಯತ್ಯಾಸವೆಂದರೆ ಆಗ ಕರ್ನಾಟಕದಲ್ಲಿ ಹದಿನೆಂಟೋ ಇಪ್ಪತ್ತೋ ಜಿಲ್ಲೆಗಳಿದ್ದವು; ಈಗ ಒಟ್ಟು ಮೂವತ್ತು ಆಗಿವೆ. ನಕಾಶೆಯಲ್ಲಿ ಬಣ್ಣಗಳ ಪಾತ್ರ ಮಹತ್ವದ್ದು. ಯಾವ ಪ್ರದೇಶಕ್ಕೆ ಯಾವ ಬಣ್ಣ ಎನ್ನುವುದು ಮುಖ್ಯವಲ್ಲ; ಆದರೆ ಅಕ್ಕಪಕ್ಕದ ರಾಜ್ಯ/ಜಿಲ್ಲೆ/ತಾಲೂಕುಗಳು ಒಂದೇ ಬಣ್ಣದಲ್ಲಿದ್ದರೆ ಅವುಗಳ ಗಡಿ ಯಾವುದಂತ ಗೊತ್ತಾಗುವುದಾದರೂ ಹೇಗೆ? ಆದ್ದರಿಂದ, ನಕಾಶೆ ಪರಿಣಾಮಕಾರಿಯಾಗಿ ಇರಬೇಕಾದರೆ ಒಂದಕ್ಕಿಂತ ಹೆಚ್ಚು ಬಣ್ಣಗಳು ಅವಶ್ಯ. ಬರಿ ಒಂದು ದ್ವೀಪದ (ಅದರೊಳಗೆ ಯಾವುದೇ ಉಪವಿಭಾಗಗಳು ಇಲ್ಲ ಎಂದುಕೊಳ್ಳೋಣ) ನಕಾಶೆ ಬಿಡಿಸುವುದಿದ್ದರೂ ಎರಡು ಬಣ್ಣಗಳು ಬೇಕು. ಇಡೀ ದ್ವೀಪಕ್ಕೆ ಒಂದು ಬಣ್ಣ, ಸುತ್ತಲಿನ ಸಮುದ್ರಕ್ಕೆ ಇನ್ನೊಂದು ಬಣ್ಣ. ಒಂದುವೇಳೆ ಆ ದ್ವೀಪವು ರಾಜಕೀಯವಾಗಿ ಎರಡು ಭಿನ್ನ ಪ್ರದೇಶಗಳಾಗಿ ವಿಭಜಿಸಲ್ಪಟ್ಟಿದ್ದರೆ? ಉದಾಹರಣೆಗೆ ಯುರೋಪ್ ಖಂಡದ ಐರ್ಲ್ಯಾಂಡ್ ದ್ವೀಪರಾಷ್ಟ್ರದಲ್ಲಿ ಉತ್ತರ ಭಾಗವು ಗ್ರೇಟ್ ಬ್ರಿಟನ್ಗೆ ಸೇರಿದೆ; ದಕ್ಷಿಣದ ಭಾಗ ಸ್ವತಂತ್ರ ಐರ್ಲ್ಯಾಂಡ್ ದೇಶವಾಗಿದೆ. ಹಾಗಾಗಿ ಐರ್ಲ್ಯಾಂಡ್ ನಕಾಶೆಗೆ ಮೂರು ಬಣ್ಣಗಳು ಬೇಕು. ಇದೇ ತರ್ಕವನ್ನು ಮುಂದುವರಿಸುತ್ತ ಕರ್ನಾಟಕದ ನಕಾಶೆಗೆ ಬಣ್ಣ ತುಂಬಿಸುವುದಾದರೆ ಒಟ್ಟು 31 ಬಣ್ಣಗಳು ಬೇಕು (30 ಜಿಲ್ಲೆಗಳಿಗೆ ಒಂದೊಂದು ಮತ್ತು ಅರಬಿಸಮುದ್ರಕ್ಕೆ ನೀಲಿ ಬಣ್ಣ) ಎಂಬ ತೀರ್ಮಾನಕ್ಕೆ ಬರಬಹುದೇ? ಧಾರಾಳವಾಗಿ! ಆದರೆ ತುಸು ಯೋಚಿಸಿ. ಜಿಲ್ಲೆಗಳಿಗೆ ಬಣ್ಣ ಬಳಿಯುವುದು ಅವು ಒಂದರಿಂದೊಂದು ಪ್ರತ್ಯೇಕವಾಗಿ ಕಾಣಬೇಕೆಂದೇ ಹೊರತು ಇಡೀ ನಕಾಶೆಯು ಕಲರ್ಫುಲ್ ಆಗಿರಬೇಕು ಅಥವಾ ಹೆಚ್ಚು ಕಲರ್ಗಳಿದ್ದಷ್ಟೂ ಹೆಚ್ಚು ಬ್ಯೂಟಿಫುಲ್ ಅಂತೇನಲ್ಲ. ಅಸಲಿಗೆ ಬಣ್ಣಗಳ ಸಂಖ್ಯೆ ಹೆಚ್ಚಿದಂತೆಲ್ಲ ನಕಾಶೆ ತಯಾರಿಕೆಯ ವೆಚ್ಚವೂ ಹೆಚ್ಚುತ್ತದೆ. ನಕಾಶೆ ಮುದ್ರಕರು (Cartographers) ಆದಷ್ಟು ಕಡಿಮೆ ಸಂಖ್ಯೆಯ ಬಣ್ಣಗಳನ್ನು ಬಳಸಲಿಕ್ಕಾಗುತ್ತದೆಯೇ ಎಂದು ಲೆಕ್ಕಹಾಕುತ್ತಾರೆ. ಹಾಂ! ‘ಲೆಕ್ಕ ಹಾಕುವುದು’ ಎಂದಾಗ ಈ ಲೇಖನದ ತಿರುಳಿಗೇ ಬಂದಂತಾಯಿತು. ನಿಮಗೆ ಆಶ್ಚರ್ಯವಾಗಬಹುದು, ನಕಾಶೆಯಲ್ಲಿ ಬಣ್ಣ ತುಂಬುವುದರ ಹಿಂದೆ ಅದ್ಭುತವಾದ ಗಣಿತ ಇದೆ! ಯಾವುದೇ ನಕಾಶೆಯಾದರೂ ಸರಿ ಹೆಚ್ಚೆಂದರೆ ನಾಲ್ಕು ಬೇರೆಬೇರೆ ಬಣ್ಣಗಳು ಸಾಕು ಎನ್ನುತ್ತದೆ ಆ ಗಣಿತ. ಯಾವುದೇ ನಕಾಶೆ ಎಂದರೆ ಯಾವ ದೇಶ/ರಾಜ್ಯ/ಜಿಲ್ಲೆಯದಾದರೂ ಆಗುತ್ತದೆ. ಆದರೆ ನಾವು ನಮ್ಮ ಕರ್ನಾಟಕದ ನಕಾಶೆಯನ್ನೇ ಉದಾಹರಣೆಯಾಗಿಟ್ಟು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಮೊದಲಿಗೆ ಶಿವಮೊಗ್ಗ (ಯಾಕೆ ಅದನ್ನೇ ಆಯ್ದುಕೊಂಡದ್ದೆಂದು ಕೇಳಬೇಡಿ) ಜಿಲ್ಲೆಯನ್ನು ತೆಗೆದುಕೊಳ್ಳೋಣ. ಅದಕ್ಕೆ ನೇರಳೆ ಬಣ್ಣ ಹಚ್ಚೋಣ. ಈಗಿನ್ನು ಶಿವಮೊಗ್ಗದ ಸುತ್ತಲಿನ ಜಿಲ್ಲೆಗಳಿಗೆ ಬಣ್ಣ ತುಂಬಬೇಕು. ಉಡುಪಿಗೆ ಹಳದಿ ಬಣ್ಣ ಕೊಡೋಣ. ಉತ್ತರಕನ್ನಡಕ್ಕೆ- ನೇರಳೆ ಮತ್ತು ಹಳದಿ ಬಿಟ್ಟು ಬೇರೆ ಬಣ್ಣ ಕೊಡಬೇಕಾಗುತ್ತದೆ, ಆದ್ದರಿಂದ ಹಸಿರು ಬಣ್ಣವಿರಲಿ. ಆಮೇಲೆ ಹಾವೇರಿಗೆ ಹಳದಿ ಹಚ್ಚಬಹುದು. ಅದೇರೀತಿ ದಾವಣಗೆರೆಗೆ ಹಸಿರು. ನೆನಪಿರಲಿ, ಇದುವರೆಗೆ ಮೂರೇ ಬಣ್ಣಗಳನ್ನು ಬಳಸಿದ್ದು. ಆದರೆ ಕೊನೆಯದಾಗಿ ಚಿಕ್ಕಮಗಳೂರಿಗೆ ಬಣ್ಣ ಬಳಿಯುವಾಗ ನೇರಳೆ, ಹಳದಿ ಮತ್ತು ಹಸಿರು ಈ ಮೂರನ್ನೂ ಬಳಸಲಿಕ್ಕಾಗುವುದಿಲ್ಲ, ಅಲ್ಲಿ ನಾಲ್ಕನೇ ಬಣ್ಣವಾಗಿ ಕೆಂಪು ಬೇಕಾಗುತ್ತದೆ. ಅಂತೂ ನಾಲ್ಕೇ ಬಣ್ಣಗಳಲ್ಲಿ ಶಿವಮೊಗ್ಗ ಮತ್ತು ಸುತ್ತಲಿನ ಜಿಲ್ಲೆಗಳು ಪ್ರತ್ಯೇಕವಾಗಿ ಕಾಣುವಂತೆ ಬಣ್ಣಕೊಟ್ಟದ್ದಾಯಿತು. ಇದೇ ಮಾದರಿಯನ್ನು ಮುಂದುವರಿಸಿ ಎಲ್ಲ ೩೦ ಜಿಲ್ಲೆಗಳನ್ನೂ ನಾಲ್ಕೇ ಬಣ್ಣಗಳಿಂದ ನಿಭಾಯಿಸಬಹುದು. ಹಾಗೆನೋಡಿದರೆ ಅರಬಿಸಮುದ್ರಕ್ಕೂ ಐದನೆಯ ಪ್ರತ್ಯೇಕ ಬಣ್ಣ ಬೇಕಂತಿಲ್ಲ. ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೆ ಕೊಟ್ಟ ಬಣ್ಣಗಳಿಗಿಂತ ಬೇರೆ ಇದ್ದರಾಯಿತು. ಒಟ್ಟಿನಲ್ಲಿ ನಾಲ್ಕೇ ಬಣ್ಣಗಳಿಂದ ಕರ್ನಾಟಕ ನಕಾಶೆ ಸಿದ್ಧ! ಗಣಿತ ಕ್ಷೇತ್ರದಲ್ಲಿ ಇದು ‘ನಾಲ್ಕು ಬಣ್ಣಗಳ ಪ್ರಮೇಯ’ ಎಂದು ಪ್ರಸಿದ್ಧ. 1850ರಲ್ಲಿ ಲಂಡನ್ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಫ್ರಾನ್ಸಿಸ್ ಗತ್ರೀ ಎಂಬಾತ ಮೊಟ್ಟಮೊದಲ ಬಾರಿಗೆ ಇದನ್ನು ಮಂಡಿಸಿದ. ಇಂಗ್ಲೇಂಡ್ ದೇಶದ ನಕಾಶೆಯಲ್ಲಿ ‘ಕೌಂಟಿ’ಗಳಿಗೆ ಬಣ್ಣ ತುಂಬುವಾಗ ಅವನಿಗೆ ಇದರ ಅರಿವಾಯಿತು. ಆದರೆ ಗಣಿತರೀತ್ಯಾ ಸಾಧಿಸಿತೋರಿಸುವುದು ಅವನಿಂದಾಗಲಿಲ್ಲ. ಮುಂದೆ 1879ರಲ್ಲಿ ಲಂಡನ್ನವನೇ ಆದ ಆಲ್ಫ್ರೆಡ್ ಕೆಂಪ್ ಎಂಬಾತ ಈ ಪ್ರಮೇಯಕ್ಕೊಂದು ಸಾಧನೆಯನ್ನೂ ನಿರೂಪಿಸಿದ. ವಿಶ್ವಾದ್ಯಂತ ಗಣಿತಜ್ಞರನ್ನು ಅದು ಆಕರ್ಷಿಸಿತು. ಕೆಂಪ್ನ ಸಾಧನೆ ಅಮೆರಿಕನ್ ಜರ್ನಲ್ ಆಫ್ ಮ್ಯಾಥಮೆಟಿಕ್ಸ್ನಲ್ಲಿ ಪ್ರಕಟವಾಯಿತು; ರಾಯಲ್ ಸೊಸೈಟಿಯ ಸದಸ್ಯತ್ವವೂ ಅವನಿಗೆ ಸಿಕ್ಕಿತು. ಅದಾದಮೇಲೆ ಪರ್ಸಿ ಹೂವುಡ್ ಎಂಬ ಗಣಿತಜ್ಞ ಈ ಪ್ರಮೇಯವನ್ನು ಮತ್ತಷ್ಟು ಸಂಸ್ಕರಣಗೊಳಿಸಿದ. 1976ರಲ್ಲಿ ಅಮೆರಿಕದ ಏಪೆಲ್ ಮತ್ತು ಹೇಕನ್ ಎಂಬ ವಿದ್ಯಾರ್ಥಿಗಳಿಬ್ಬರು ಕಂಪ್ಯೂಟರ್ ಬಳಸಿ ಪ್ರಮೇಯದ ಸಾಧನೆಯನ್ನು ನಿರೂಪಿಸಿದರು. ಅದು ಸಾವಿರ ಪುಟಗಳಷ್ಟಿತ್ತಂತೆ. ಸುಮಾರು 10000 ಚಿತ್ರಗಳಿದ್ದುವಂತೆ. ಅವರು ಬರೆದ ಕಂಪ್ಯೂಟರ್ ಪ್ರೊಗ್ರಾಮ್ನ ಪ್ರಿಂಟ್ಔಟ್ ತೆಗೆದಾಗ ಅದು ನಾಲ್ಕಡಿ ಎತ್ತರದ ಅಟ್ಟೆಯಾಗಿತ್ತಂತೆ! ಏನಿದು, ನಕಾಶೆಗೆ ಬಣ್ಣ ತುಂಬಿಸುವ ವಿಚಾರದಲ್ಲಿ ಅಷ್ಟೊಂದು ತಲೆಕೆಡಿಸ್ಕೊಳ್ಳಬೇಕಾ ಎಂದು ನೀವೆನ್ನಬಹುದು. ಅದೇ ಶುದ್ಧ ಗಣಿತಕ್ಕೂ ಅನ್ವಯಿತ ಗಣಿತಕ್ಕೂ (applied mathematics) ಇರುವ ವ್ಯತ್ಯಾಸ. ಗಣಿತರೀತ್ಯಾ ನಾಲ್ಕೇ ಬಣ್ಣ ಸಾಕು ಎಂದು ಸಾಧಿಸುವುದು ತಲೆನೋವೇ ಇರಬಹುದು. ಆದರೆ ನಾಲ್ಕೇ ಸಾಕು ಎಂಬ ಸಿದ್ಧಾಂತವಿದೆಯಲ್ಲಾ, ಅದರ ಉಪಯೋಗಗಳು ಬಹಳ ಇವೆ. ಆಗಲೇ ಹೇಳಿದಂತೆ ನಕಾಶೆ ತಯಾರಕರಿಗೆ ವೆಚ್ಚ ತಗ್ಗಿಸಲು ಇದು ಮುಖ್ಯವಾಗುತ್ತದೆ. ಸೆಲ್ಫೋನ್ ಕಂಪನಿಗಳ ಎಂಜಿನಿಯರ್ಗಳೂ ಈ ಪ್ರಮೇಯವನ್ನು ಬಳಸುತ್ತಾರೆ. ಸೆಲ್ಫೋನ್ ಸಿಗ್ನಲ್ಗಳಲ್ಲಿ ಇಂಟರ್ಫೆರೆನ್ಸ್ ಬಾರದಂತೆ, ಪ್ರಸಾರವ್ಯಾಪ್ತಿ ಹೆಚ್ಚುವಂತೆ, ಅತಿ ಕಡಿಮೆ ಸಂಖ್ಯೆಯ ಚಾನೆಲ್ಗಳನ್ನು ಬಳಸುವಂತೆ ಟ್ರಾನ್ಸ್ಮಿಟರ್ಗಳ ಸ್ಥಾಪನೆಯ ವಿನ್ಯಾಸ ಮಾಡುವಾಗ ಅವರಿಗೆ ನೆರವಾಗುವುದು ನಕಾಶೆಯಲ್ಲಿ ಬಣ್ಣ ತುಂಬುವ ಸಿದ್ಧಾಂತವೇ. ನೋಡಿದಿರಾ? ಸಮಾಜ, ಗಣಿತ, ವಿಜ್ಞಾನ ಎಲ್ಲವೂ ಹೇಗೆ ಒಂದಕ್ಕೊಂದು ಹೊಂದಿಕೊಂಡಿವೆ! ಅದೇ ಒಂದು ಕೌತುಕದ ಕೌದಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Jun 04, 2011
Digital Diet
Saturday Jun 04, 2011
Saturday Jun 04, 2011
ದಿನಾಂಕ 5 ಜೂನ್ 2011ರ ಸಂಚಿಕೆ...
ನಮಗೂ ಬೇಕಾದೀತು ‘ಡಿಜಿಟಲ್ ಡಯಟ್’
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇನ್ನೊಬ್ಬರೊಂದಿಗೆ ಆತ್ಮೀಯ ಸಂವಾದದಲ್ಲಿರುವ ಹೊತ್ತಿಗೇ ನಿಮ್ಮ ಮೊಬೈಲ್ ರಿಂಗಣಿಸುವ, ಅಥವಾ ನೀವೇ ಏತಕ್ಕೋ ಮೊಬೈಲನ್ನು ಬಳಸಬೇಕಾಗುವ ಸಂದರ್ಭಗಳು ಆಗಾಗ ಬರುತ್ತಿವೆಯೇ? ನಿಮ್ಮ ಮಗು ಶಾಲೆಯ ಸಮಾಚಾರಗಳನ್ನು ಆಸಕ್ತಿಯಿಂದ ನಿಮ್ಮಲ್ಲಿ ಹೇಳುತ್ತಿರುವಾಗ ನೀವೇನೋ ಮೊಬೈಲ್ನಲ್ಲಿ ಇಮೇಲ್ಸ್ ಚೆಕ್ಮಾಡುತ್ತಿರುವುದು, ಎಸ್ಸೆಮ್ಮೆಸ್ ಕಳಿಸುತ್ತಿರುವುದು ಆಗುತ್ತಿದೆಯೇ? ನೀವು ಫೇಸ್ಬುಕ್ನಲ್ಲಿ ಎನೌನ್ಸ್ ಮಾಡುವವರೆಗೂ, ಟ್ವಿಟ್ಟರ್ನಲ್ಲಿ ಟ್ವೀಟುವವರೆಗೂ, ಯಾವ ಮಹಾನ್ ಘಟನೆಯೇ ಆಗಲಿ ಘಟಿಸಿದಂತೆಯೇ ಅಲ್ಲ ಅಂತನಿಸಿದ್ದಿದೆಯೇ? ಬ್ಲಾಕ್ಬೆರ್ರಿಯ ಕೆಂಪುದೀಪ ಮಿನುಗತೊಡಗುತ್ತಿದ್ದಂತೆ ನಿಮ್ಮ ಎದೆಬಡಿತ ಹೆಚ್ಚುತ್ತದೆಯೇ? ಗಂಡಹೆಂಡತಿ ಅಕ್ಕಪಕ್ಕ ಕುಳಿತಿದ್ದೂ ಇಬ್ಬರೂ ಪರಸ್ಪರ ಹಾಂಹೂಂ ಎನ್ನದೆ ಬೇರೆಬೇರೆ ಇ-ಯಂತ್ರಗಳಲ್ಲಿ ತಾಸುಗಟ್ಟಲೆ ತಲ್ಲೀನರಾಗಿರುತ್ತೀರಾ? - ಈಪೈಕಿ ಯಾವುದೇ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೂ ನಿಮಗೆ ‘ಟೆಕ್ನಾಲಜಿಯ ಬೊಜ್ಜು’ ಬಂದಿದೆ ಮತ್ತು ನೀವು ‘ಡಿಜಿಟಲ್ ಡಯಟ್’ ಮಾಡಬೇಕಿದೆ ಎಂದು ಅರ್ಥ! ಹೀಗೆನ್ನುತ್ತಾನೆ ಡೇನಿಯಲ್ ಸೀಬರ್ಗ್. ಈತ ಅಮೆರಿಕದ ವಾರ್ತಾವಾಹಿನಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ವರದಿಗಾರ. ಕಳೆದ ವರ್ಷದವರೆಗೂ ಸ್ವತಃ ಒಬ್ಬ ಟೆಕ್ನೋ-ಎಡಿಕ್ಟ್ ಆಗಿದ್ದವನು. ಆಮೇಲೆ ಏಕಾಏಕಿ ಜ್ಞಾನೋದಯವಾಗಿ ತಾನೇ ಕಂಡುಕೊಂಡ ‘ಡಿಜಿಟಲ್ ಡಯಟ್’ ಎಂಬ ವ್ರತನೇಮವನ್ನು ಅನುಸರಿಸಿ, ಇದೀಗ ಅದೇ ಹೆಸರಿನ ಪುಸ್ತಕವನ್ನೂ ಬರೆದು ಪ್ರಕಟಿಸಿದವನು. ಈಗ ಈ ಪುಸ್ತಕ ಅಮೆರಿಕದಲ್ಲಿ ಸುದ್ದಿಯಲ್ಲಿದೆ. ವಾಷಿಂಗ್ಟನ್ಪೋಸ್ಟ್ ಪತ್ರಿಕೆಯಲ್ಲಿ ಪುಸ್ತಕದ ಕೆಲ ಭಾಗಗಳು ಮೊನ್ನೆ ಮುಖಪುಟ ಲೇಖನವಾಗಿ ಪ್ರಕಟವಾಗಿವೆ. “ಟೆಕ್ನಾಲಜಿಯಲ್ಲಿ ಎಲ್ಲಿಯವರೆಗೆ ಮುಳುಗಿ ಹೋಗಿದ್ದೆನೆಂದರೆ ವೈಯಕ್ತಿಕ ಜೀವನದಲ್ಲಿ ಅವಿಸ್ಮರಣೀಯವೆನಿಸಬೇಕಿದ್ದ ಚಿಕ್ಕದೊಡ್ಡ ಘಟನೆಗಳೆಲ್ಲ ನನ್ನ ಅರಿವಿಗೆ ಬರಲೇ ಇಲ್ಲ ಎನ್ನುವ ರೀತಿಯಲ್ಲಿ ಗತಿಸಿಹೋದವು. ನಾನು well-connected ಎಂದು ಬೀಗಿಕೊಳ್ಳುತ್ತಿರುವ ಹೊತ್ತಿಗೇ ನಿಜಕ್ಕೂ ನೋಡಿದರೆ most distracted and disconnected ಆಗಿಬಿಟ್ಟಿದ್ದೆ. ಸಕಾಲದಲ್ಲಿ ಎಚ್ಚೆತ್ತು ನನ್ನನ್ನು ಸುತ್ತುವರಿದಿದ್ದ ವಯರುಗಳ ಹುತ್ತವನ್ನು ಕೊಡವಿಕೊಂಡು ಮತ್ತೆ ಬದುಕನ್ನು ಗಳಿಸಿದೆ. ಈಗಲೂ ಟೆಕ್ನಾಲಜಿಯನ್ನು ಬಳಸುತ್ತೇನೆ, ಇಲ್ಲವೆಂದೇನಿಲ್ಲ. ಆದರೆ ಮುಂಚಿನಂತಲ್ಲ, ಹಿತವಾಗಿ ಮಿತವಾಗಿ...” ಎಂದು ಸಾಗುತ್ತದೆ ಡೇನಿಯಲ್ನ ಜ್ಞಾನೋದಯಗಾಥೆ. ಅಮೆರಿಕದಲ್ಲಿ ಲಕ್ಷಾಂತರ ಜನರು ಟೆಕ್ನಾಲಜಿಯ ದಾಸರಾಗಿದ್ದಾರೆ; ಬ್ಲಾಕ್ಬೆರ್ರಿ, ಐಫೋನು, ಐಪ್ಯಾಡು, ಲ್ಯಾಪ್ಟಾಪು ಅದೂಇದೂ ಗ್ಯಾಡ್ಜೆಟ್ಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ದೇಶಿಸುವ ಅಧಿಕಾರ ಒಪ್ಪಿಸಿದ್ದಾರೆ. ಹಾಗಂತ ಟೆಕ್ನಾಲಜಿ ವಿರುದ್ಧ ಸಮರ ಸಾರಬೇಕೆಂದಾಗಲೀ, ಎಲ್ಲರೂ ಈಕೂಡಲೇ ಗ್ಯಾಡ್ಜೆಟ್-ಸನ್ಯಾಸ ಸ್ವೀಕರಿಸಬೇಕೆಂದಾಗಲೀ ಡೇನಿಯಲ್ನ ಬೋಧನೆಯಲ್ಲ. ಗ್ಯಾಡ್ಜೆಟ್ಗಳೊಂದಿಗೆ ಒಂಥರದ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು. ನಾವು ಹೇಳಿದಂತೆ ಅವು ಕೇಳಬೇಕೇ ಹೊರತು ಅವುಗಳೇ ನಮ್ಮನ್ನು ಆಳಬಾರದು. ಅದಕ್ಕಾಗಿ Re-think, Re-boot, Re-connect, Re-vitalize ಎಂಬ ನಾಲ್ಕು ಹಂತಗಳ ಡಯಟ್ ಪ್ಲಾನ್ಅನ್ನು ಅನುಸರಿಸಬೇಕು ಎನ್ನುತ್ತಾನೆ ಡೇನಿಯಲ್. ದಿನಕ್ಕೆ ಸುಮಾರು ಎರಡು ಗಂಟೆ ಸಮಯವನ್ನು ಉದ್ಯೋಗ ಸಂಬಂಧವಲ್ಲದೆ ಹೀಗೇಸುಮ್ಮನೆ ಅಂತರ್ಜಾಲದಲ್ಲಿ ವಿಹರಿಸುತ್ತ, ಫೇಸ್ಬುಕ್ ಟ್ವಿಟ್ಟರ್ಗಳ ಮೂಲಕ ನಿಮ್ಮದೇ ಒಂದು ಭ್ರಾಮಕ ವ್ಯಕ್ತಿತ್ವವನ್ನು ಕೆತ್ತುತ್ತ್ತ ಕಳೆಯುತ್ತೀರಿ ಎಂದಿಟ್ಟುಕೊಳ್ಳಿ. ಅದೇನೂ ಟೈಮ್ಪಾಸ್ ಅಲ್ಲ, ಜ್ಞಾನಾರ್ಜನೆಯ ಜತೆಗೆ ಒಂದಿಷ್ಟು ಮನರಂಜನೆ ಎಂದು ಸಬೂಬು ಬೇರೆ ಕೊಡುತ್ತೀರಿ. ಆದರೆ ದಿನಕ್ಕೆ ಎರಡು ಗಂಟೆಗಳಂತೆ ಇಡೀವರ್ಷದ ಲೆಕ್ಕ ಹಾಕಿದರೆ ಭರ್ತಿ ಒಂದು ತಿಂಗಳು ಇಂಟರ್ನೆಟ್ ಓತ್ಲಾ ಅಂತಾಯಿತು! ಕೊನೆಗೂ ಏನು ಉಪಯೋಗಕ್ಕೆ ಬಂತು? ಆ ಸಮಯವನ್ನು ಯಾವುದಾದರೂ ರಚನಾತ್ಮಕ ಚಟುವಟಿಕೆಗೆ ಬಳಸಬಹುದಿತ್ತಲ್ವಾ? ಅದೇ, ಡೇನಿಯಲ್ ಹೇಳುವ ‘ರೀ-ಥಿಂಕ್’ ಹಂತ. ಎರಡನೆಯದು ‘ರೀ-ಬೂಟ್’, ಅಂದರೆ ಒಂದೊಮ್ಮೆ ಎಲ್ಲ ಗ್ಯಾಡ್ಜೆಟ್ಗಳಿಗೂ ತಾತ್ಕಾಲಿಕ ವಿರಾಮ ಘೋಷಣೆ. ಐಪ್ಯಾಡು, ಕ್ಯಾಮರಾ, ಲ್ಯಾಪ್ಟಾಪು ಇತ್ಯಾದಿ- ಯಾವುದಕ್ಕೆ ಚಾರ್ಜರ್ ಬೇಕೋ ಅಂಥ ಎಲ್ಲ ಉಪಕರಣಗಳನ್ನೂ- ಒಂದು ಪೆಟ್ಟಿಗೆಯೊಳಗಿಟ್ಟು ಬೀಗಹಾಕಿ. ಫೇಸ್ಬುಕ್ ಮತ್ತಿತರ ವೆಬ್ ಖಾತೆಗಳ ಪಾಸ್ವರ್ಡ್ ಬದಲಾಯಿಸಿ ಬಿಡುವಂತೆ ಯಾರಾದರೂ ಆಪ್ತರಿಗೆ ಹೇಳಿ. ಫೋನ್ ಕರೆ ಮಾಡಿದವರಿಗೆ ‘ಬಳಕೆದಾರರು ಲಭ್ಯರಿಲ್ಲ’ ಎಂಬ ಮೆಸೇಜು ಬರುವಂತೆ ಸೆಟ್ ಮಾಡಿ. ಎಸ್ಸೆಮ್ಮೆಸ್ ವಿನಿಮಯ ನಿಲ್ಲಿಸಿಬಿಡಿ. ದಿನಕ್ಕೆ ಒಂದುಸರ್ತಿ ಮಾತ್ರ ಇಮೇಲ್ ಚೆಕ್ಮಾಡಿ. ಹೀಗೆ ಒಂದೆರಡು ದಿನ ಕಟ್ಟುನಿಟ್ಟಿನ ಟೆಕ್ನೊ-ಉಪವಾಸ ಮಾಡಿನೋಡಿ. ಗ್ಯಾಡ್ಜೆಟ್ಗಳೊಂದಿಗೆ ವ್ಯಯಿಸುತ್ತಿದ್ದ ಸಮಯವನ್ನು ಮಗುವಿಗೆ ಕಥೆಪುಸ್ತಕ ಓದಿ ಹೇಳುವುದಕ್ಕೋ, ಮನೆಯ ಒಳಹೊರ ಸ್ವಚ್ಛ ಮಾಡಲಿಕ್ಕೋ, ಅಟ್ಟದಲ್ಲಿ ಧೂಳು ತಿನ್ನುತ್ತಿರುವ ಗಿಟಾರ್ಅನ್ನು ಹೊರತೆಗೆದು ಒಂದಿಷ್ಟು ಸಂಗೀತ ಅಭ್ಯಸಿಸುವುದಕ್ಕೋ ಉಪಯೋಗಿಸಿ ನೋಡಿ. ಈಗ ಮೂರನೇ ಹಂತದಲ್ಲಿ ನಿಧಾನವಾಗಿ ನಿಮ್ಮ ಗ್ಯಾಡ್ಜೆಟ್ಗಳನ್ನು ಬಳಕೆಗೆ ಹಚ್ಚಿ. ಆದರೆ ಯಾವುದು ಎಷ್ಟು ಅಗತ್ಯವೋ ಅಷ್ಟೇ ಸಾಕು. ರಾತ್ರಿಹೊತ್ತು ಅವನ್ನೆಲ್ಲ ಲಿವಿಂಗ್ರೂಮ್ನಲ್ಲೋ ಅಡುಗೆಮನೆಯಲ್ಲೋ ಚಾರ್ಜ್ ಮಾಡಲಿಕ್ಕಿಡಿ, ಬೆಡ್ರೂಮ್ಗೆ ತರಬೇಡಿ. ಐಫೋನ್/ಬ್ಲಾಕ್ಬೆರ್ರಿಯಲ್ಲಿ ಅಲಾರಂ ಸಹ ಇದೆಯೆಂದು ಅದನ್ನೇ ಬಳಸಬೇಡಿ. ಬೆಳಿಗ್ಗೆ ಅಲಾರಂ ಮಾಡಿಯಷ್ಟೇ ಅವು ಸುಮ್ಮನಿರುವುದಿಲ್ಲ, ನಿಮ್ಮ ಗಮನವನ್ನೂ ಬೇಡುತ್ತವೆ. ಅದಕ್ಕಿಂತ ಒಂದು ಅಲಾರಂ ಗಡಿಯಾರವನ್ನೇ ಉಪಯೋಗಿಸಿ. ದಿನಕ್ಕೆ ಇಂತಿಷ್ಟು ಹೊತ್ತು ಮಾತ್ರ ಆನ್ಲೈನ್ ಇರಬಹುದೆಂದು ನಿಯಮ ಮಾಡಿ ಪಾಲಿಸಿ. ಮನೆಯೊಳಗೂ ಮನದೊಳಗೂ ಕಸ (ಜಂಕ್) ತುಂಬಿಸಿಕೊಳ್ಳಬೇಡಿ. ಕೊನೆಯದಾಗಿ ‘ರೀ-ವೈಟಲೈಜ್’ ಹಂತದಲ್ಲಿ ಟೆಕ್ನಾಲಜಿ ಪ್ರಪಂಚ ಮತ್ತು ಇಷ್ಟಮಿತ್ರ ಬಂಧುಬಾಂಧವರ ಒಡನಾಟದ ಪ್ರಪಂಚ - ಎರಡರ ನಡುವೆ ಆರೋಗ್ಯಕರ ಬ್ಯಾಲೆನ್ಸ್ ತಂದುಕೊಳ್ಳಿ. ಟಿಪಿಕಲ್ ಸೆಲ್ಫ್-ಹೆಲ್ಪ್ ಪುಸ್ತಕಗಳ ಮಾದರಿಯಲ್ಲೇ ಇದೆ ಡೇನಿಯಲ್ನ ಪುಸ್ತಕವೂ. ‘ಮೂರು ವಾರಗಳಲ್ಲಿ ಮೂವತ್ತು ಪೌಂಡ್ ತೂಕ ಇಳಿಸಿ’, ‘ಹದಿನೈದು ದಿನಗಳಲ್ಲಿ ಹಿಂದೀ ಕಲಿಯಿರಿ’ ಅಂತೆಲ್ಲ ಇರುತ್ತವಲ್ಲ ಅದೇ ಧಾಟಿ. ಒಂಚೂರು ಉಪದೇಶ, ಒಂದಿಷ್ಟು ಆಪ್ತಸಲಹೆ, ಮತ್ತೆ ಸ್ವಲ್ಪ ಆತ್ಮಾವಲೋಕನಕ್ಕೆ ಅವಕಾಶ. ಕೆಲವು ಭಾಗಗಳಂತೂ ನಮ್ಮ ಜೀವನಶೈಲಿಯನ್ನು ನೋಡಿಯೇ ಬರೆದದ್ದಿರಬಹುದೇ ಅಂತನ್ನಿಸುವಷ್ಟು ನಾಟುತ್ತವೆ, ಮನಸ್ಸಾಕ್ಷಿಯನ್ನು ತಟ್ಟುತ್ತವೆ. ಹೌದು, ನಾವೆಲ್ಲರೂ ಸ್ವಲ್ಪ ಮಟ್ಟಿಗಾದರೂ ಟೆಕ್ನಾಲಜಿಗೆ ನಮ್ಮತನವನ್ನು ಒಪ್ಪಿಸಿದವರೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ಗ್ಯಾಡ್ಜೆಟ್ಗಳಿಗೆ ಮಾರುಹೋದವರೇ. ಈಗಲೇ ಎಚ್ಚರ ವಹಿಸದಿದ್ದರೆ ಮುಂದೊಮ್ಮೆ ನಮಗೂ ಡಿಜಿಟಲ್ ಡಯಟ್ನ ಅಗತ್ಯ ಬೀಳಬಹುದು. ಆ ನಿಟ್ಟಿನಲ್ಲಿ ಡೇನಿಯಲ್ ಸೀಬರ್ಗ್ನ ವಿಚಾರಧಾರೆ ಅರ್ಥವುಳ್ಳದ್ದೇ ಆಗಿದೆ. ಜಾಗೃತಿ ಮೂಡಿಸುವಂಥದೇ ಆಗಿದೆ. ಹಾಗೆನ್ನುವಾಗಲೇ, ಸ್ನೇಹಿತ ಮಲ್ಲಿ ಸಣ್ಣಪ್ಪನವರ್ ರಚಿಸಿದ ‘ಫೇಸ್ಬುಕ್ ಇಷ್ಟೇನೇ...’ ಅಣಕುಹಾಡು ನೆನಪಾಗುತ್ತಿದೆ. ತಮಾಷೆಯೆಂದರೆ ಇದರ ಸಾಲುಗಳೂ ಹಾಗೆಯೇ, ತಮಾಷೆಯಾಗೇ ಕಂಡರೂ ಹೌದಲ್ವಾ ಫೇಸ್ಬುಕ್ ಕ್ರೇಜ್ ಹತ್ತಿದರೆ ನಿಜಕ್ಕೂ ಅದೇರೀತಿ ಆಗ್ತದಲ್ವಾ ಎಂದೆನಿಸುತ್ತದೆ. ಫೇಸ್ಬುಕ್ ಖಾತೆ ಇದ್ದವರು ಓದಲೇಬೇಕಾದ ಕವಿತೆ- ಹಲ್ಲು ತಿಕ್ಕದೇ ಮುಖಾನು ತೊಳಿದೇ ಬೆಳಿಗ್ಗೆ ಎದ್ದು ಲಾಗಿನ್ ಆಗಿ ಎಲ್ಲರ ಸ್ಟೇಟಸ್ ಅಪ್ಡೇಟ್ ಮಾಡ್ಕೋ ಫೇಸ್ಬುಕ್ ಇಷ್ಟೇನೇ! ಲೈಕ್ ಬಟನ್ ಒತ್ತು ಸ್ವಾಮಿ ಡಿಸ್ಲೈಕ್ ಬಟನ್ ಇಲ್ಲ ಸ್ವಾಮಿ ಬೇಡಾದವ್ರನ್ ಹೈಡ್ ಮಾಡ್ಕೊ ಫೇಸ್ಬುಕ್ ಇಷ್ಟೇನೇ! ಮಕ್ಕಳ ಜತೆಗೆ ಆಡೋದ್ ಬಿಟ್ಟು ಹೆಂಡ್ತಿ ಮುಖವ ನೋಡೋದ್ ಬಿಟ್ಟು ಸಿಕ್ಕವ್ರ್ ವಿಡಿಯೋ ನೋಡ್ತಾ ಕುತ್ಕೋ ಫೇಸ್ಬುಕ್ ಇಷ್ಟೇನೇ! ಯಾರ್ಯಾರ ಮನೇಲಿ ಏನೇನ್ ಅಡುಗೆ ಯಾರ್ಯಾರ ಮೈಮೇಲ್ ಏನೇನ್ ಉಡುಗೆ ಬರೀ ಕಾಂಪ್ಲಿಮೆಂಟ್ಸು ಇಲ್ಲಿ ಕೊಡುಗೆ ಫೇಸ್ಬುಕ್ ಇಷ್ಟೇನೇ! ಬೇಡಾದವ್ರಿಗು ಕಾಮೆಂಟ್ ಹಾಕು ಬೇಕಾದವ್ರಿಗು ಕಾಮೆಂಟ್ ಹಾಕು ಕಾಮೆಂಟ್ ಹಾಕ್ತಾ ಖುಷಿಯಾಗಿರು ಫೇಸ್ಬುಕ್ ಇಷ್ಟೇನೇ... ಟಣ್ಟಣಾಟಣ್ಟಣ್! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20240320