Episodes

Saturday Jun 04, 2011
Digital Diet
Saturday Jun 04, 2011
Saturday Jun 04, 2011
ದಿನಾಂಕ 5 ಜೂನ್ 2011ರ ಸಂಚಿಕೆ...
ನಮಗೂ ಬೇಕಾದೀತು ‘ಡಿಜಿಟಲ್ ಡಯಟ್’
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇನ್ನೊಬ್ಬರೊಂದಿಗೆ ಆತ್ಮೀಯ ಸಂವಾದದಲ್ಲಿರುವ ಹೊತ್ತಿಗೇ ನಿಮ್ಮ ಮೊಬೈಲ್ ರಿಂಗಣಿಸುವ, ಅಥವಾ ನೀವೇ ಏತಕ್ಕೋ ಮೊಬೈಲನ್ನು ಬಳಸಬೇಕಾಗುವ ಸಂದರ್ಭಗಳು ಆಗಾಗ ಬರುತ್ತಿವೆಯೇ? ನಿಮ್ಮ ಮಗು ಶಾಲೆಯ ಸಮಾಚಾರಗಳನ್ನು ಆಸಕ್ತಿಯಿಂದ ನಿಮ್ಮಲ್ಲಿ ಹೇಳುತ್ತಿರುವಾಗ ನೀವೇನೋ ಮೊಬೈಲ್ನಲ್ಲಿ ಇಮೇಲ್ಸ್ ಚೆಕ್ಮಾಡುತ್ತಿರುವುದು, ಎಸ್ಸೆಮ್ಮೆಸ್ ಕಳಿಸುತ್ತಿರುವುದು ಆಗುತ್ತಿದೆಯೇ? ನೀವು ಫೇಸ್ಬುಕ್ನಲ್ಲಿ ಎನೌನ್ಸ್ ಮಾಡುವವರೆಗೂ, ಟ್ವಿಟ್ಟರ್ನಲ್ಲಿ ಟ್ವೀಟುವವರೆಗೂ, ಯಾವ ಮಹಾನ್ ಘಟನೆಯೇ ಆಗಲಿ ಘಟಿಸಿದಂತೆಯೇ ಅಲ್ಲ ಅಂತನಿಸಿದ್ದಿದೆಯೇ? ಬ್ಲಾಕ್ಬೆರ್ರಿಯ ಕೆಂಪುದೀಪ ಮಿನುಗತೊಡಗುತ್ತಿದ್ದಂತೆ ನಿಮ್ಮ ಎದೆಬಡಿತ ಹೆಚ್ಚುತ್ತದೆಯೇ? ಗಂಡಹೆಂಡತಿ ಅಕ್ಕಪಕ್ಕ ಕುಳಿತಿದ್ದೂ ಇಬ್ಬರೂ ಪರಸ್ಪರ ಹಾಂಹೂಂ ಎನ್ನದೆ ಬೇರೆಬೇರೆ ಇ-ಯಂತ್ರಗಳಲ್ಲಿ ತಾಸುಗಟ್ಟಲೆ ತಲ್ಲೀನರಾಗಿರುತ್ತೀರಾ? - ಈಪೈಕಿ ಯಾವುದೇ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೂ ನಿಮಗೆ ‘ಟೆಕ್ನಾಲಜಿಯ ಬೊಜ್ಜು’ ಬಂದಿದೆ ಮತ್ತು ನೀವು ‘ಡಿಜಿಟಲ್ ಡಯಟ್’ ಮಾಡಬೇಕಿದೆ ಎಂದು ಅರ್ಥ! ಹೀಗೆನ್ನುತ್ತಾನೆ ಡೇನಿಯಲ್ ಸೀಬರ್ಗ್. ಈತ ಅಮೆರಿಕದ ವಾರ್ತಾವಾಹಿನಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ವರದಿಗಾರ. ಕಳೆದ ವರ್ಷದವರೆಗೂ ಸ್ವತಃ ಒಬ್ಬ ಟೆಕ್ನೋ-ಎಡಿಕ್ಟ್ ಆಗಿದ್ದವನು. ಆಮೇಲೆ ಏಕಾಏಕಿ ಜ್ಞಾನೋದಯವಾಗಿ ತಾನೇ ಕಂಡುಕೊಂಡ ‘ಡಿಜಿಟಲ್ ಡಯಟ್’ ಎಂಬ ವ್ರತನೇಮವನ್ನು ಅನುಸರಿಸಿ, ಇದೀಗ ಅದೇ ಹೆಸರಿನ ಪುಸ್ತಕವನ್ನೂ ಬರೆದು ಪ್ರಕಟಿಸಿದವನು. ಈಗ ಈ ಪುಸ್ತಕ ಅಮೆರಿಕದಲ್ಲಿ ಸುದ್ದಿಯಲ್ಲಿದೆ. ವಾಷಿಂಗ್ಟನ್ಪೋಸ್ಟ್ ಪತ್ರಿಕೆಯಲ್ಲಿ ಪುಸ್ತಕದ ಕೆಲ ಭಾಗಗಳು ಮೊನ್ನೆ ಮುಖಪುಟ ಲೇಖನವಾಗಿ ಪ್ರಕಟವಾಗಿವೆ. “ಟೆಕ್ನಾಲಜಿಯಲ್ಲಿ ಎಲ್ಲಿಯವರೆಗೆ ಮುಳುಗಿ ಹೋಗಿದ್ದೆನೆಂದರೆ ವೈಯಕ್ತಿಕ ಜೀವನದಲ್ಲಿ ಅವಿಸ್ಮರಣೀಯವೆನಿಸಬೇಕಿದ್ದ ಚಿಕ್ಕದೊಡ್ಡ ಘಟನೆಗಳೆಲ್ಲ ನನ್ನ ಅರಿವಿಗೆ ಬರಲೇ ಇಲ್ಲ ಎನ್ನುವ ರೀತಿಯಲ್ಲಿ ಗತಿಸಿಹೋದವು. ನಾನು well-connected ಎಂದು ಬೀಗಿಕೊಳ್ಳುತ್ತಿರುವ ಹೊತ್ತಿಗೇ ನಿಜಕ್ಕೂ ನೋಡಿದರೆ most distracted and disconnected ಆಗಿಬಿಟ್ಟಿದ್ದೆ. ಸಕಾಲದಲ್ಲಿ ಎಚ್ಚೆತ್ತು ನನ್ನನ್ನು ಸುತ್ತುವರಿದಿದ್ದ ವಯರುಗಳ ಹುತ್ತವನ್ನು ಕೊಡವಿಕೊಂಡು ಮತ್ತೆ ಬದುಕನ್ನು ಗಳಿಸಿದೆ. ಈಗಲೂ ಟೆಕ್ನಾಲಜಿಯನ್ನು ಬಳಸುತ್ತೇನೆ, ಇಲ್ಲವೆಂದೇನಿಲ್ಲ. ಆದರೆ ಮುಂಚಿನಂತಲ್ಲ, ಹಿತವಾಗಿ ಮಿತವಾಗಿ...” ಎಂದು ಸಾಗುತ್ತದೆ ಡೇನಿಯಲ್ನ ಜ್ಞಾನೋದಯಗಾಥೆ.
ಅಮೆರಿಕದಲ್ಲಿ ಲಕ್ಷಾಂತರ ಜನರು ಟೆಕ್ನಾಲಜಿಯ ದಾಸರಾಗಿದ್ದಾರೆ; ಬ್ಲಾಕ್ಬೆರ್ರಿ, ಐಫೋನು, ಐಪ್ಯಾಡು, ಲ್ಯಾಪ್ಟಾಪು ಅದೂಇದೂ ಗ್ಯಾಡ್ಜೆಟ್ಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ದೇಶಿಸುವ ಅಧಿಕಾರ ಒಪ್ಪಿಸಿದ್ದಾರೆ. ಹಾಗಂತ ಟೆಕ್ನಾಲಜಿ ವಿರುದ್ಧ ಸಮರ ಸಾರಬೇಕೆಂದಾಗಲೀ, ಎಲ್ಲರೂ ಈಕೂಡಲೇ ಗ್ಯಾಡ್ಜೆಟ್-ಸನ್ಯಾಸ ಸ್ವೀಕರಿಸಬೇಕೆಂದಾಗಲೀ ಡೇನಿಯಲ್ನ ಬೋಧನೆಯಲ್ಲ. ಗ್ಯಾಡ್ಜೆಟ್ಗಳೊಂದಿಗೆ ಒಂಥರದ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು. ನಾವು ಹೇಳಿದಂತೆ ಅವು ಕೇಳಬೇಕೇ ಹೊರತು ಅವುಗಳೇ ನಮ್ಮನ್ನು ಆಳಬಾರದು. ಅದಕ್ಕಾಗಿ Re-think, Re-boot, Re-connect, Re-vitalize ಎಂಬ ನಾಲ್ಕು ಹಂತಗಳ ಡಯಟ್ ಪ್ಲಾನ್ಅನ್ನು ಅನುಸರಿಸಬೇಕು ಎನ್ನುತ್ತಾನೆ ಡೇನಿಯಲ್.
ದಿನಕ್ಕೆ ಸುಮಾರು ಎರಡು ಗಂಟೆ ಸಮಯವನ್ನು ಉದ್ಯೋಗ ಸಂಬಂಧವಲ್ಲದೆ ಹೀಗೇಸುಮ್ಮನೆ ಅಂತರ್ಜಾಲದಲ್ಲಿ ವಿಹರಿಸುತ್ತ, ಫೇಸ್ಬುಕ್ ಟ್ವಿಟ್ಟರ್ಗಳ ಮೂಲಕ ನಿಮ್ಮದೇ ಒಂದು ಭ್ರಾಮಕ ವ್ಯಕ್ತಿತ್ವವನ್ನು ಕೆತ್ತುತ್ತ್ತ ಕಳೆಯುತ್ತೀರಿ ಎಂದಿಟ್ಟುಕೊಳ್ಳಿ. ಅದೇನೂ ಟೈಮ್ಪಾಸ್ ಅಲ್ಲ, ಜ್ಞಾನಾರ್ಜನೆಯ ಜತೆಗೆ ಒಂದಿಷ್ಟು ಮನರಂಜನೆ ಎಂದು ಸಬೂಬು ಬೇರೆ ಕೊಡುತ್ತೀರಿ. ಆದರೆ ದಿನಕ್ಕೆ ಎರಡು ಗಂಟೆಗಳಂತೆ ಇಡೀವರ್ಷದ ಲೆಕ್ಕ ಹಾಕಿದರೆ ಭರ್ತಿ ಒಂದು ತಿಂಗಳು ಇಂಟರ್ನೆಟ್ ಓತ್ಲಾ ಅಂತಾಯಿತು! ಕೊನೆಗೂ ಏನು ಉಪಯೋಗಕ್ಕೆ ಬಂತು? ಆ ಸಮಯವನ್ನು ಯಾವುದಾದರೂ ರಚನಾತ್ಮಕ ಚಟುವಟಿಕೆಗೆ ಬಳಸಬಹುದಿತ್ತಲ್ವಾ? ಅದೇ, ಡೇನಿಯಲ್ ಹೇಳುವ ‘ರೀ-ಥಿಂಕ್’ ಹಂತ. ಎರಡನೆಯದು ‘ರೀ-ಬೂಟ್’, ಅಂದರೆ ಒಂದೊಮ್ಮೆ ಎಲ್ಲ ಗ್ಯಾಡ್ಜೆಟ್ಗಳಿಗೂ ತಾತ್ಕಾಲಿಕ ವಿರಾಮ ಘೋಷಣೆ. ಐಪ್ಯಾಡು, ಕ್ಯಾಮರಾ, ಲ್ಯಾಪ್ಟಾಪು ಇತ್ಯಾದಿ- ಯಾವುದಕ್ಕೆ ಚಾರ್ಜರ್ ಬೇಕೋ ಅಂಥ ಎಲ್ಲ ಉಪಕರಣಗಳನ್ನೂ- ಒಂದು ಪೆಟ್ಟಿಗೆಯೊಳಗಿಟ್ಟು ಬೀಗಹಾಕಿ. ಫೇಸ್ಬುಕ್ ಮತ್ತಿತರ ವೆಬ್ ಖಾತೆಗಳ ಪಾಸ್ವರ್ಡ್ ಬದಲಾಯಿಸಿ ಬಿಡುವಂತೆ ಯಾರಾದರೂ ಆಪ್ತರಿಗೆ ಹೇಳಿ. ಫೋನ್ ಕರೆ ಮಾಡಿದವರಿಗೆ ‘ಬಳಕೆದಾರರು ಲಭ್ಯರಿಲ್ಲ’ ಎಂಬ ಮೆಸೇಜು ಬರುವಂತೆ ಸೆಟ್ ಮಾಡಿ. ಎಸ್ಸೆಮ್ಮೆಸ್ ವಿನಿಮಯ ನಿಲ್ಲಿಸಿಬಿಡಿ. ದಿನಕ್ಕೆ ಒಂದುಸರ್ತಿ ಮಾತ್ರ ಇಮೇಲ್ ಚೆಕ್ಮಾಡಿ. ಹೀಗೆ ಒಂದೆರಡು ದಿನ ಕಟ್ಟುನಿಟ್ಟಿನ ಟೆಕ್ನೊ-ಉಪವಾಸ ಮಾಡಿನೋಡಿ. ಗ್ಯಾಡ್ಜೆಟ್ಗಳೊಂದಿಗೆ ವ್ಯಯಿಸುತ್ತಿದ್ದ ಸಮಯವನ್ನು ಮಗುವಿಗೆ ಕಥೆಪುಸ್ತಕ ಓದಿ ಹೇಳುವುದಕ್ಕೋ, ಮನೆಯ ಒಳಹೊರ ಸ್ವಚ್ಛ ಮಾಡಲಿಕ್ಕೋ, ಅಟ್ಟದಲ್ಲಿ ಧೂಳು ತಿನ್ನುತ್ತಿರುವ ಗಿಟಾರ್ಅನ್ನು ಹೊರತೆಗೆದು ಒಂದಿಷ್ಟು ಸಂಗೀತ ಅಭ್ಯಸಿಸುವುದಕ್ಕೋ ಉಪಯೋಗಿಸಿ ನೋಡಿ.
ಈಗ ಮೂರನೇ ಹಂತದಲ್ಲಿ ನಿಧಾನವಾಗಿ ನಿಮ್ಮ ಗ್ಯಾಡ್ಜೆಟ್ಗಳನ್ನು ಬಳಕೆಗೆ ಹಚ್ಚಿ. ಆದರೆ ಯಾವುದು ಎಷ್ಟು ಅಗತ್ಯವೋ ಅಷ್ಟೇ ಸಾಕು. ರಾತ್ರಿಹೊತ್ತು ಅವನ್ನೆಲ್ಲ ಲಿವಿಂಗ್ರೂಮ್ನಲ್ಲೋ ಅಡುಗೆಮನೆಯಲ್ಲೋ ಚಾರ್ಜ್ ಮಾಡಲಿಕ್ಕಿಡಿ, ಬೆಡ್ರೂಮ್ಗೆ ತರಬೇಡಿ. ಐಫೋನ್/ಬ್ಲಾಕ್ಬೆರ್ರಿಯಲ್ಲಿ ಅಲಾರಂ ಸಹ ಇದೆಯೆಂದು ಅದನ್ನೇ ಬಳಸಬೇಡಿ. ಬೆಳಿಗ್ಗೆ ಅಲಾರಂ ಮಾಡಿಯಷ್ಟೇ ಅವು ಸುಮ್ಮನಿರುವುದಿಲ್ಲ, ನಿಮ್ಮ ಗಮನವನ್ನೂ ಬೇಡುತ್ತವೆ. ಅದಕ್ಕಿಂತ ಒಂದು ಅಲಾರಂ ಗಡಿಯಾರವನ್ನೇ ಉಪಯೋಗಿಸಿ. ದಿನಕ್ಕೆ ಇಂತಿಷ್ಟು ಹೊತ್ತು ಮಾತ್ರ ಆನ್ಲೈನ್ ಇರಬಹುದೆಂದು ನಿಯಮ ಮಾಡಿ ಪಾಲಿಸಿ. ಮನೆಯೊಳಗೂ ಮನದೊಳಗೂ ಕಸ (ಜಂಕ್) ತುಂಬಿಸಿಕೊಳ್ಳಬೇಡಿ. ಕೊನೆಯದಾಗಿ ‘ರೀ-ವೈಟಲೈಜ್’ ಹಂತದಲ್ಲಿ ಟೆಕ್ನಾಲಜಿ ಪ್ರಪಂಚ ಮತ್ತು ಇಷ್ಟಮಿತ್ರ ಬಂಧುಬಾಂಧವರ ಒಡನಾಟದ ಪ್ರಪಂಚ - ಎರಡರ ನಡುವೆ ಆರೋಗ್ಯಕರ ಬ್ಯಾಲೆನ್ಸ್ ತಂದುಕೊಳ್ಳಿ.
ಟಿಪಿಕಲ್ ಸೆಲ್ಫ್-ಹೆಲ್ಪ್ ಪುಸ್ತಕಗಳ ಮಾದರಿಯಲ್ಲೇ ಇದೆ ಡೇನಿಯಲ್ನ ಪುಸ್ತಕವೂ. ‘ಮೂರು ವಾರಗಳಲ್ಲಿ ಮೂವತ್ತು ಪೌಂಡ್ ತೂಕ ಇಳಿಸಿ’, ‘ಹದಿನೈದು ದಿನಗಳಲ್ಲಿ ಹಿಂದೀ ಕಲಿಯಿರಿ’ ಅಂತೆಲ್ಲ ಇರುತ್ತವಲ್ಲ ಅದೇ ಧಾಟಿ. ಒಂಚೂರು ಉಪದೇಶ, ಒಂದಿಷ್ಟು ಆಪ್ತಸಲಹೆ, ಮತ್ತೆ ಸ್ವಲ್ಪ ಆತ್ಮಾವಲೋಕನಕ್ಕೆ ಅವಕಾಶ. ಕೆಲವು ಭಾಗಗಳಂತೂ ನಮ್ಮ ಜೀವನಶೈಲಿಯನ್ನು ನೋಡಿಯೇ ಬರೆದದ್ದಿರಬಹುದೇ ಅಂತನ್ನಿಸುವಷ್ಟು ನಾಟುತ್ತವೆ, ಮನಸ್ಸಾಕ್ಷಿಯನ್ನು ತಟ್ಟುತ್ತವೆ. ಹೌದು, ನಾವೆಲ್ಲರೂ ಸ್ವಲ್ಪ ಮಟ್ಟಿಗಾದರೂ ಟೆಕ್ನಾಲಜಿಗೆ ನಮ್ಮತನವನ್ನು ಒಪ್ಪಿಸಿದವರೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ಗ್ಯಾಡ್ಜೆಟ್ಗಳಿಗೆ ಮಾರುಹೋದವರೇ. ಈಗಲೇ ಎಚ್ಚರ ವಹಿಸದಿದ್ದರೆ ಮುಂದೊಮ್ಮೆ ನಮಗೂ ಡಿಜಿಟಲ್ ಡಯಟ್ನ ಅಗತ್ಯ ಬೀಳಬಹುದು. ಆ ನಿಟ್ಟಿನಲ್ಲಿ ಡೇನಿಯಲ್ ಸೀಬರ್ಗ್ನ ವಿಚಾರಧಾರೆ ಅರ್ಥವುಳ್ಳದ್ದೇ ಆಗಿದೆ. ಜಾಗೃತಿ ಮೂಡಿಸುವಂಥದೇ ಆಗಿದೆ.
ಹಾಗೆನ್ನುವಾಗಲೇ, ಸ್ನೇಹಿತ ಮಲ್ಲಿ ಸಣ್ಣಪ್ಪನವರ್ ರಚಿಸಿದ ‘ಫೇಸ್ಬುಕ್ ಇಷ್ಟೇನೇ...’ ಅಣಕುಹಾಡು ನೆನಪಾಗುತ್ತಿದೆ. ತಮಾಷೆಯೆಂದರೆ ಇದರ ಸಾಲುಗಳೂ ಹಾಗೆಯೇ, ತಮಾಷೆಯಾಗೇ ಕಂಡರೂ ಹೌದಲ್ವಾ ಫೇಸ್ಬುಕ್ ಕ್ರೇಜ್ ಹತ್ತಿದರೆ ನಿಜಕ್ಕೂ ಅದೇರೀತಿ ಆಗ್ತದಲ್ವಾ ಎಂದೆನಿಸುತ್ತದೆ. ಫೇಸ್ಬುಕ್ ಖಾತೆ ಇದ್ದವರು ಓದಲೇಬೇಕಾದ ಕವಿತೆ-
ಹಲ್ಲು ತಿಕ್ಕದೇ ಮುಖಾನು ತೊಳಿದೇ
ಬೆಳಿಗ್ಗೆ ಎದ್ದು ಲಾಗಿನ್ ಆಗಿ
ಎಲ್ಲರ ಸ್ಟೇಟಸ್ ಅಪ್ಡೇಟ್ ಮಾಡ್ಕೋ ಫೇಸ್ಬುಕ್ ಇಷ್ಟೇನೇ!
ಲೈಕ್ ಬಟನ್ ಒತ್ತು ಸ್ವಾಮಿ
ಡಿಸ್ಲೈಕ್ ಬಟನ್ ಇಲ್ಲ ಸ್ವಾಮಿ
ಬೇಡಾದವ್ರನ್ ಹೈಡ್ ಮಾಡ್ಕೊ ಫೇಸ್ಬುಕ್ ಇಷ್ಟೇನೇ!
ಮಕ್ಕಳ ಜತೆಗೆ ಆಡೋದ್ ಬಿಟ್ಟು
ಹೆಂಡ್ತಿ ಮುಖವ ನೋಡೋದ್ ಬಿಟ್ಟು
ಸಿಕ್ಕವ್ರ್ ವಿಡಿಯೋ ನೋಡ್ತಾ ಕುತ್ಕೋ ಫೇಸ್ಬುಕ್ ಇಷ್ಟೇನೇ!
ಯಾರ್ಯಾರ ಮನೇಲಿ ಏನೇನ್ ಅಡುಗೆ
ಯಾರ್ಯಾರ ಮೈಮೇಲ್ ಏನೇನ್ ಉಡುಗೆ
ಬರೀ ಕಾಂಪ್ಲಿಮೆಂಟ್ಸು ಇಲ್ಲಿ ಕೊಡುಗೆ ಫೇಸ್ಬುಕ್ ಇಷ್ಟೇನೇ!
ಬೇಡಾದವ್ರಿಗು ಕಾಮೆಂಟ್ ಹಾಕು
ಬೇಕಾದವ್ರಿಗು ಕಾಮೆಂಟ್ ಹಾಕು
ಕಾಮೆಂಟ್ ಹಾಕ್ತಾ ಖುಷಿಯಾಗಿರು ಫೇಸ್ಬುಕ್ ಇಷ್ಟೇನೇ... ಟಣ್ಟಣಾಟಣ್ಟಣ್!
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday May 28, 2011
Midnight Mysurpak
Saturday May 28, 2011
Saturday May 28, 2011
ದಿನಾಂಕ 29 ಮೇ 2011ರ ಸಂಚಿಕೆ...
ಮಧ್ಯರಾತ್ರಿಯಲಿ ಮೈಸೂರ್ಪಾಕ್ ಮೆಲ್ಲುವಾಸೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇದೇನಿದು ಬಸುರಿಯ ಬಯಕೆ ಇದ್ದಹಾಗಿದೆ ಅಂದ್ಕೊಳ್ಳಬೇಡಿ! ಈಗ ಅಮೆರಿಕದಲ್ಲಿ ಭಾರತೀಯ ಪದಾರ್ಥಗಳೆಲ್ಲ ಎಷ್ಟು ಸುಲಭವಾಗಿ ಸಿಗುತ್ತವೆ ಅನ್ನೋದನ್ನು ಅಮೆರಿಕನ್ನಡಿಗ ಮಿತ್ರರೊಬ್ಬರು ಬಣ್ಣಿಸಿದ್ದು ಹೀಗೆ. ನ್ಯೂಯಾರ್ಕ್ನ ಯೂನಿವರ್ಸಿಟಿಯಲ್ಲಿ ಪ್ರೊಫೆಸರರಾಗಿರುವ ಮಹಾದೇವ ರಾವ್ ಹೇಳ್ತಾರೆ, “ನಮ್ಮಲ್ಲಿ ವೆಗ್ಮನ್ಸ್ ಎಂಬ ಅಮೆರಿಕನ್ ಗ್ರೋಸರಿ ಸ್ಟೋರ್ ಇದೆ. ದಿನದ 24ಗಂಟೆಯೂ ತೆರೆದಿರುವ ಬೃಹತ್ ಅಂಗಡಿ. ಅಲ್ಲಿ ಭಾರತೀಯ ಪದಾರ್ಥಗಳೂ ಸಿಗುತ್ತವೆ. ನಿಮಗೆ ಮಧ್ಯರಾತ್ರಿಯಲ್ಲಿ ಮೈಸೂರ್ಪಾಕ್ ತಿನ್ನಬೇಕೆಂಬ ಬಯಕೆಯಾದರೆ, ವೆಗ್ಮನ್ಸ್ಗೆ ಹೋಗಿ. ಅಲ್ಲಿ ಮೈಸೂರ್ಪಾಕ್ ಸಿಗಲಿಕ್ಕಿಲ್ಲವಾದರೂ ಕಡ್ಲೆಹಿಟ್ಟು, ಸಕ್ಕರೆ, ದೇಸೀತುಪ್ಪ ಎಲ್ಲ ಸಿಗುತ್ತದೆ. ತಂದು ಮನೆಯಲ್ಲಿ ಮೈಸೂರ್ಪಾಕ್ ಮಾಡಿ ತಿನ್ನಬಹುದು. ಇದನ್ನು ಕರ್ನಾಟಕದಲ್ಲಿ ಮಾಡಬಲ್ಲಿರಾ? ಮಧ್ಯರಾತ್ರಿಯಲ್ಲಿ ಮಂಡಿಪೇಟೆ ಸೆಟ್ಟರ ಮನೆಬಾಗಿಲು ತಟ್ಟಿ ಕಡ್ಲೆಹಿಟ್ಟು ಬೇಕಾಗಿತ್ತು ಎನ್ನೋಕಾಗುತ್ತ್ಯೇ? ನಿಮಗೇನ್ ತಲೆಕೆಟ್ಟಿದೆಯೇನ್ರಿ ಈ ಅಪರಾತ್ರಿಯಲ್ಲಿ ಬಂದು ನಿದ್ದೆಗೆಡಿಸ್ತಿದ್ದೀರಲ್ಲ ಎಂದು ಬೈಗುಳ ತಿನ್ನಬೇಕು ಅಷ್ಟೇ!”
ಕಳೆದವಾರ ‘ಬಾರ್ಸಿಲೊನಾದಲ್ಲಿ ಕರಿಬೇವು...’ ಬರೆಯುವಾಗ ಅಮೆರಿಕದ ವಿವಿಧೆಡೆಗಳಲ್ಲಿ ಮತ್ತು ವಿದೇಶಗಳಲ್ಲಿ ನೆಲೆಸಿರುವ ಕೆಲವು ಓದುಗಮಿತ್ರರನ್ನು ಸಂಪರ್ಕಿಸಿದ್ದೆ; ಯಾವ ವಸ್ತು ಯಾರನ್ನು ಹೇಗೆ ಭಾವಪರವಶವಾಗಿಸಿದೆಯೆಂಬ ಅನುಭವ-ಅನಿಸಿಕೆಗಳನ್ನು ಕಲೆಹಾಕಿದ್ದೆ. ಅವುಗಳಲ್ಲಿ ಕೆಲವನ್ನು ಇವತ್ತಿನ ಅಂಕಣದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಇದು ಭಾವೋದ್ವೇಗ ಪ್ರದರ್ಶನವಲ್ಲ. ಬದಲಿಗೆ, ಅಮೆರಿಕದಲ್ಲಿ/ವಿದೇಶಗಳಲ್ಲಿ ‘ಮಣ್ಣಿನ ವಾಸನೆಯನ್ನು ಹಿತವಾಗಿ ಕೊಡುವ’ ಯಾವುದೆಲ್ಲ ವಸ್ತುಗಳು ಈಗೀಗ ಸಿಗತೊಡಗಿವೆ ಎಂಬ ಒಂದು ಸ್ಥೂಲ ಚಿತ್ರಣ ಅಷ್ಟೇ.
ಪ್ರೊ.ರಾವ್ ಸ್ವಲ್ಪ ವ್ಯಂಗ್ಯ ಮತ್ತು ಉತ್ಪ್ರೇಕ್ಷೆ ಸೇರಿಸಿ ಹೇಳಿದರೆಂದ ಮಾತ್ರಕ್ಕೆ ಅಮೆರಿಕದ ಎಲ್ಲ ಊರುಗಳಲ್ಲೂ ಎಲ್ಲವೂ ಎಲ್ಲ ಕಾಲದಲ್ಲೂ ಸಿಗುತ್ತದೆಂದೇನಿಲ್ಲ ಬಿಡಿ. ಉದಾಹರಣೆಗೆ, “ಮದುವೆಯಾಗಿ ಅಮೆರಿಕಾ ದೇಶಕ್ಕೆ ಬಂದುಬಿದ್ದದ್ದು ಬ್ಲ್ಯಾಕ್ಸ್ಬರ್ಗ್ ಎಂಬ ಚಿಕ್ಕ ಊರಿಗೆ. ಅಲ್ಲಿ ಬದನೆಕಾಯಿ, ಆಲುಗೆಡ್ಡೆ, ಟೊಮೆಟೊ ಬಿಟ್ಟರೆ ಇನ್ನ್ಯಾವ ತರಕಾರಿ ಮೂಸಿನೋಡಲೂ ಸಿಗ್ತಿರ್ಲಿಲ್ಲ. ಹಣ್ಣುಗಳೆಂದರೆ ಬಾಳೆ, ಕಿತ್ತಳೆ, ಸೇಬು, ದ್ರಾಕ್ಷಿ ಅಷ್ಟೇ. ಅಮೆರಿಕಾ ದೇಶವೇ ಹೀಗೇನು? ಯಾಕಾದ್ರೂ ಇಲ್ಲಿಗೆ ಬಂದ್ವಿ ಎಂದು ನನ್ನ ನಸೀಬನ್ನು ಹಳಿದುಕೊಂಡಿದ್ದೆ...” ಎನ್ನುತ್ತಾರೆ ಅನು ನಿತಿನ್. ಆದರೆ ಮುಂದುವರಿಸುತ್ತ, “ವರ್ಷದಲ್ಲೇ ಯಜಮಾನ್ರ ಓದು ಮುಗಿದು ಶಿಕಾಗೊ ನಗರಕ್ಕೆ ಬಂದಾಗ ಇಲ್ಲಿ ಇಂಟರ್ನ್ಯಾಶನಲ್ ಮಾರ್ಕೆಟ್ ಇರೋದು ಗೊತ್ತಾಯ್ತು. ಮೊದಲಸರ್ತಿ ಆ ಅಂಗಡೀಲಿ ಕಾಲಿಟ್ಟಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ತೊಂಡೆ, ಬೆಂಡೆ, ಹೀರೆಕಾಯಿ, ಹಾಗಲಕಾಯಿ, ಗೋರಿಕಾಯಿ, ಮೂಲಂಗಿ, ಸಬ್ಬಸಿಗೆಸೊಪ್ಪು, ಕೊತ್ತಂಬರಿ... ಆಹಾ! ಚಿನ್ನದ ರಾಶಿ ಕಂಡರೂ ಅಷ್ಟು ಖುಷಿ ಆಗ್ತಿರ್ಲಿಲ್ಲವೇನೋ. ಜತೆಯಲ್ಲೇ ನನ್ನಿಷ್ಟದ ಸೀಬೆ, ಮಾವು, ದಾಳಿಂಬೆ ಹಣ್ಣುಗಳು! ಎರಡು ಕಾರ್ಟ್ ತುಂಬ ಪೇರಿಸಿಕೊಂಡು ಮನೆಗೊಯ್ದಿದ್ದೆ. ನಿಜಕ್ಕೂ ಅವತ್ತು ಕಣ್ಣಿಗೆ ಹಬ್ಬವಾಗಿತ್ತು. ಮನಸ್ಸು ಅರಳಿತ್ತು. ನನ್ನ ಬಾಲ್ಯದಿನಗಳನ್ನು ನೆನಪಿಸುವ ಹಣ್ಣುತರಕಾರಿಗಳು ನನಗೆ ಮತ್ತೆ ದೊರಕಿದ್ದವು!” ಎಂದು ಪುಳಕಗೊಳ್ಳುತ್ತಾರೆ. ಹೆಚ್ಚೂಕಡಿಮೆ ಇದೇ ಅನುಭವ ರಿಚ್ಮಂಡ್ನಲ್ಲಿರುವ ಶ್ರೀನಾಥ ಭಲ್ಲೆಯವರದೂ. ಈ ದೇಶಕ್ಕೆ ಬಂದು ಆರೇಳು ತಿಂಗಳ ನಂತರ ಇಂಡಿಯನ್ ಗ್ರೋಸರಿಸ್ಟೋರ್ನಲ್ಲಿ ಮೊದಲಬಾರಿ ಬೂದುಗುಂಬಳ, ಸೋರೆಕಾಯಿ, ದಂಟಿನಸೊಪ್ಪು ಇತ್ಯಾದಿಯನ್ನು ಕಂಡು ಆನಂದಬಾಷ್ಪ ಸುರಿಸಿದವರೇ ಅವರೂ.
ಇಷ್ಟದ ಹಣ್ಣು-ತರಕಾರಿ ಸಿಗುವುದು ಒಂದು ಖುಷಿಯಾದರೆ ಅದನ್ನು ನೋಡಿದಾಗ ಒತ್ತರಿಸಿ ಬರುವ ತಾಯ್ನೆಲದ ನೆನಪುಗಳು ಇನ್ನೊಂದು ಖುಷಿ. ವಾಷಿಂಗ್ಟನ್ನ ಸಸ್ಯೋದ್ಯಾನದಲ್ಲಿ ಒಂದೆಲಗ (ಬ್ರಾಹ್ಮಿ) ನೋಡಿ ಶೋಭಾ ಕಾರಣಿಕರಿಗೆ ಅಮ್ಮನಮನೆಯ ತೋಟದಲ್ಲಿ ಸುತ್ತಾಡಿದಂತೆ, ತವರುಮನೆಯವರನ್ನೆಲ್ಲ ಭೇಟಿಯಾದಂತೆ ಅನಿಸಿದ್ದು ಅದೇಕಾರಣಕ್ಕೆ. ಕ್ಯಾಲಿಫೋರ್ನಿಯಾದಲ್ಲಿ ಯಾರದೋ ಮನೆಯಲ್ಲಿ ಮೊದಲಬಾರಿ ತುಳಸಿಗಿಡ ನೋಡಿದಾಕ್ಷಣ ತನ್ನ ತವರುಮನೆಯ ಅಂಗಳದಲ್ಲಿ ತುಳಸಿಕಟ್ಟೆಯೆದುರು ನಿಂತಂಥ ಅನುಭವ ಕಾವ್ಯಾಭಟ್ಗೆ ಆದದ್ದೂ ಅದೇಕಾರಣಕ್ಕೆ.
ಇನ್ನು ಕೆಲವು ಪ್ರಾದೇಶಿಕ ಸೊಗಡಿನ ಸಂಭ್ರಮಗಳೂ ಇರುತ್ತವೆ. ಹಾಸನದ ಸ್ಪೆಷಾಲಿಟಿಯಾದ ಸಿಹಿಸೌತೆ, ಮಡುಹಾಗಲಕಾಯಿ ಅಮೆರಿಕದಲ್ಲೂ ಸಿಗುತ್ತವೆಯೆಂಬ ಖುಶಿ ಮೇರಿಲ್ಯಾಂಡ್ನ ಸೌಮ್ಯಾ ನಾಗಶಂಕರ್ ಅವರಿಗಾದರೆ ಮಂಗಳೂರಿನ ಸ್ಪೆಷಲ್ ದಿವಿಹಲಸು (ತುಳುವಿನಲ್ಲಿ ‘ಜೀಗುಜ್ಜೆ’) ಶಿಕಾಗೊದಲ್ಲಿ ಸಿಕ್ಕಿತೆಂದು ಹಿಗ್ಗಿದವರು ಶ್ವೇತಾ ಗರ್ಡೆ. ಬಾಸ್ಟನ್ನ ವೈಶಾಲಿ ಹೆಗಡೆ ಸ್ನೇಹಿತರೊಬ್ಬರ ಮನೆಯ ಹಿತ್ತಲಲ್ಲಿ ಬೆಳೆದ ಕನ್ನೆಕುಡಿ ಸೊಪ್ಪನ್ನು ಬಾಚಿಕೊಂಡು ಮನೆಗೆತಂದು ಸತತ ಮೂರುದಿನ ‘ಕಟ್ನೆ’ (ತಂಬ್ಳಿಯಂಥ ಪರಮರುಚಿಕರ ಪದಾರ್ಥ, ಹವ್ಯಕ ಸ್ಪೆಷಲ್) ಮಾಡಿ ಸವಿದಿದ್ದಾರಂತೆ. ವರ್ಜೀನಿಯಾದಲ್ಲಿ ಕೊರಿಯನ್ ಅಂಗಡಿಯಿಂದ ಆಮ್ಟೆಕಾಯಿ ತಂದು ತೊಕ್ಕು ಉಪ್ಪಿನಕಾಯಿ ಮಾಡಿ ತನ್ನ ಮಕ್ಕಳಿಗೂ ರುಚಿಹತ್ತಿಸಿದ್ದಾರೆ ಅನಿತಾ ರಾವ್. ಸ್ಯಾನ್ಹೋಸೆಯಲ್ಲಿ ಗೋಳಿಸೊಪ್ಪಿನ ಮುದ್ದಿಪಲ್ಯ ಮತ್ತು ಪಡವಲಕಾಯಿಯ ಬುರುಬುರಿ ಮಾಡಿ ಸವಿದದ್ದನ್ನು, ಹಸಿಶೇಂಗಾ ಚಪ್ಪರಿಸಿದ್ದನ್ನು ನೆನೆದಿದ್ದಾರೆ ಅನಿಲ್ ದೇಶಪಾಂಡೆ. ಬ್ರೆಝಿಲ್ ಮತ್ತು ಕೊಲಂಬಿಯಾ ದೇಶಗಳಿಂದ ಬರುವ ಕಾಫಿಹುಡಿಯದೇ ಅಭ್ಯಾಸವಾಗಿರುವಾಗ ಇಂಡಿಯನ್ ಸ್ಟೋರ್ನಲ್ಲಿ ಚಿಕ್ಕಮಗಳೂರಿನ ಕಾಫಿಹುಡಿ ಕಂಡಾಗಿನ ಸಂತಸ ಹಂಚಿಕೊಂಡಿದ್ದಾರೆ ಉಷಾ ಅಶ್ವತ್ಥ. ಒಟ್ಟಿನಲ್ಲಿ ಬಣ್ಣದಸೌತೆಯಿಂದ ಬ್ಯಾಡಗಿಮೆಣಸಿನವರೆಗೆ, ಬಾಳೆಹೂವಿನಿಂದ ಬೂದುಗುಂಬಳದವರೆಗೆ, ಕಳಲೆಯಿಂದ ಕೆಸುವಿನೆಲೆವರೆಗೆ ಕರ್ನಾಟಕದ ಉದ್ದಗಲದ ಶಾಕ-ಪಾಕ ವೈವಿಧ್ಯಗಳು ಇಲ್ಲಿನ ಅಂಗಡಿಗಳಲ್ಲಿ ರಾರಾಜಿಸಿವೆ; ವಲಸೆಬಂದವರನ್ನಷ್ಟೇ ಅಲ್ಲ, ಭಾರತದಿಂದ ಭೇಟಿಕೊಡುವ ತಂದೆತಾಯಿಗಳನ್ನೂ ಸಂಪ್ರೀತಗೊಳಿಸಿವೆ.
ಕೆಲವೊಮ್ಮೆ ತಮಾಷೆಪ್ರಸಂಗಗಳೂ ನಡೆದದ್ದಿವೆ, ಕ್ಯಾಲಿಫೋರ್ನಿಯಾದಲ್ಲಿ ಸರಸ್ವತಿ ವಟ್ಟಮ್ ಅವರಿಗಾದಂತೆ. ಮೆಕ್ಸಿಕನ್ ಮಾರ್ಕೆಟ್ನಲ್ಲಿ ದೊಡ್ಡಸೈಜಿನ ಇಡೀ ಹಲಸಿನಹಣ್ಣನ್ನು ಖರೀದಿಸಿ ಶಾಪಿಂಗ್ಕಾರ್ಟ್ನಲ್ಲಿ ಇಡುತ್ತಿದ್ದಾಗ ಪಕ್ಕದಲ್ಲಿದ್ದ ಅಮೆರಿಕನ್ ಮಹಿಳೆ ಕೇಳಿದ್ದಳಂತೆ- “ಏನದು? ಹೇಗೆ ತಿನ್ನುತ್ತೀರಿ ಅದನ್ನು?” ಬಹುಶಃ ಸಿಪ್ಪೆಸಮೇತ ತಿನ್ನುತ್ತಾರಿರಬಹುದು ಎಂದುಕೊಂಡು ಇವರನ್ನೊಮ್ಮೆ ಆಪಾದಮಸ್ತಕ ನೋಡಿದಳಂತೆ. ಅವಳಿಗೆ ಎಲ್ಲ ವಿವರಿಸಿಹೇಳುವಾಗ ಸಾಕುಸಾಕಾಯ್ತು ಎನ್ನುತ್ತಾರೆ ಸರಸ್ವತಿ. “ಪೂರ್ತಿ ಹಣ್ಣಾಗುವುದನ್ನೇ ಕಾಯುತ್ತಿದ್ದೇನೆ. ಮೈಸೂರಿನಲ್ಲಾಗಿದ್ದರೆ ಹಲಸಿನ ಪರಿಮಳಕ್ಕೆ ಮನೆಹೊರಗೆ ದನಗಳು ಬಂದುನಿಲ್ಲುವುದಿದೆ, ಹಣ್ಣಾಗಿದೆ ಎಂದು ಆಗ ನಮಗೆ ಗೊತ್ತಾಗುತ್ತದೆ. ಆದರೆ ಏನ್ಮಾಡೋದು ಈ ಅಮೆರಿಕದ ಬೀದಿಗಳಲ್ಲಿ ದನಗಳೂ ಇಲ್ಲ ನಾಯಿಗಳೂ ಇಲ್ಲ..." ಎಂಬ ಅವರ ಮಾತಿನಲ್ಲಿ ಏನನ್ನೋ ಕಳಕೊಂಡಿದ್ದೇನೆಂಬ ನೋವೂ ಸೇರಿಕೊಳ್ಳುತ್ತದೆ. ಕನೆಕ್ಟಿಕಟ್ನಲ್ಲಿರುವ ಮಲ್ಲಿ ಸಣ್ಣಪ್ಪನವರ್ ಅದನ್ನೇ ತಮಾಷೆಯಾಗಿ ಹೇಳುತ್ತಾರೆ “ಇಲ್ಲಿ ಕಬ್ಬಿನಹಾಲು, ಭೇಲ್ಪುರಿ, ಇಡ್ಲಿದೋಸೆ ತಳ್ಳುಅಂಗಡಿಗಳನ್ನು ಕಂಡಿದ್ದೇನೆ. ಯಾಕೋ ಅವು ತುಂಬ ಸೊಫೆಸ್ಟಿಕೇಟೆಡ್ ಅನ್ನಿಸುತ್ತವೆ. ನಮ್ಮೂರಿನ ಧೂಳು, ನೊಣಗಳು, ಬೆವರು ಎಲ್ಲ ಮಿಸ್ಸಿಂಗ್. ಅದಿಲ್ಲದೆ ರುಚಿಯಿಲ್ಲ...”
ಮಲ್ಲಿ ಹೇಳುವುದರಲ್ಲೂ ಅರ್ಥವಿದೆ. ಕೆಲವೊಂದು ವಸ್ತುಗಳನ್ನು ಆಸ್ವಾದಿಸಲು, ತಿಂಡಿತಿನಿಸನ್ನು ಸವಿಯಲು ಒಂದು ರೀತಿಯ ‘ವಾತಾವರಣ’ ಬೇಕಾಗುತ್ತದೆ. ಆಗಲೇ ಪರಮಾನಂದ. ಒಮ್ಮೊಮ್ಮೆ ಹೀಗೂ ಅನಿಸುತ್ತದೆ- ಪಿಜ್ಜಾಹಟ್, ಮೆಕ್ಡೊನಾಲ್ಡ್, ಸಬ್ವೇಗಳು ಈಗ ಪೂರ್ವಕ್ಕೆ ಪಸರಿಸಿವೆ. ಕಬ್ಬಿನಹಾಲು, ಭೇಲ್ಪುರಿ, ಮಸಾಲೆಮಜ್ಜಿಗೆ, ಸಮೋಸಾಗಳೂ, ಎಂಟಿಆರ್, ಹಲ್ದಿರಾಮ್, ಬೇಡೇಕರ್ಗಳೂ ಪಶ್ಚಿಮಕ್ಕೆ ಪಾದಾರ್ಪಣೆ ಮಾಡಿವೆ. ಆಹಾರಜಗತ್ತಿನ ಸಮತೋಲನ ಪ್ರಕ್ರಿಯೆ ಇರಬಹುದೇ?
ಅಂದಹಾಗೆ ‘ಬಸುರಿಯ ಬಯಕೆ’ ಪದಪ್ರಯೋಗದಿಂದ ಆರಂಭಿಸಿದ ಈ ಪಾಕಪುರಾಣವನ್ನು ಈಗ ಶ್ರುತಿ ಸತೀಶ್ ಎಂಬುವರ ಪತ್ರವನ್ನು ಉಲ್ಲೇಖಿಸಿ ಕೊನೆಗೊಳಿಸಿದರೆ ಸರಿಹೊಂದುತ್ತದೆ. ಅವರು ಬರೆದಿದ್ದಾರೆ- “ಹತ್ತು ವರ್ಷಗಳ ಹಿಂದೆ ನ್ಯೂಜೆರ್ಸಿಯಲ್ಲಿದ್ದಾಗಿನ ಸಂಗತಿ. ಆಗ ನಾನು ಬಸುರಿ. ‘ಪಡ್ಡು’ ತಿನ್ನಬೇಕೆಂದು ಸಿಕ್ಕಾಪಟ್ಟೆ ಕ್ರೇವಿಂಗ್ ಆಗ್ತಿತ್ತು. ಆದರೆ ಪಡ್ಡು ಮಾಡುವ ಕಾವಲಿ ಇಲ್ಲವಲ್ಲ! ನ್ಯೂಜೆರ್ಸಿಯ ಅಂಗಡಿಗಳಲ್ಲೆಲ್ಲ ಹುಡುಕಿದ್ದೇ ಹುಡುಕಿದ್ದು. ಕೊನೆಗೂ ಬಾಣಂತಿಯಾಗಲಿಕ್ಕೆ ಇನ್ನೇನು ವಾರವಿದೆಯೆನ್ನುವಾಗ ಕಾವಲಿ ಸಿಕ್ಕಿತು; ಪಡ್ಡು ಮಾಡಿ ತಿಂದೆ, ಬಸುರಿಯ ಬಯಕೆ ತೀರಿಸಿಕೊಂಡೆ!”
ಮತ್ತೆ, ಮಧ್ಯರಾತ್ರಿಯಲಿ ಮೈಸೂರುಪಾಕ್ ಮೆಲ್ಲುವಾಸೆಯಾದರೆ? ಮಹಾದೇವರಾವ್ ಮಾತನ್ನು ಮನನ ಮಾಡಿದರಾಯ್ತು!
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday May 21, 2011
Curry Leaves Of Barcelona
Saturday May 21, 2011
Saturday May 21, 2011
ದಿನಾಂಕ 22 ಮೇ 2011ರ ಸಂಚಿಕೆ...
ಬಾರ್ಸಿಲೊನಾದಲ್ಲಿ ಕರಿಬೇವು ಸಿಕ್ಕ ಸಂತಸ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಸ್ಪೆಷಲ್ ಏನೂ ಇಲ್ಲಾ ಸರ್, ಬಾರ್ಸಿಲೊನಾದಲ್ಲಿ ಒಳ್ಳೆಯ ಭಾರತೀಯ ರೆಸ್ಟೋರೆಂಟ್ ಇಲ್ಲ, ಹಾಗಾಗಿ ಮನೆ ಊಟವೇ ಇಂದು ಕೂಡ. ಶಾಕಾಹಾರಿಗಳಿಗೆ ಆಯ್ಕೆ ಮಾಡಲು ಇಲ್ಲಿ ಏನೂ ಇಲ್ಲ. ಕರಿಬೇವು ಸಿಕ್ಕ ದಿನವೇ ಸ್ಪೆಷಲ್!” - ಎಂದು ಬರೆದಿದ್ದರು ನನ್ನೊಬ್ಬ ಫೇಸ್ಬುಕ್ ಸ್ನೇಹಿತ. ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ನನ್ನ ಸೌಹಾರ್ದ ಪ್ರಶ್ನೆಗೆ ಉತ್ತರವಾಗಿ. ಅವರ ಹೆಸರು ರಂಗಸ್ವಾಮಿ ಮೂಕನಹಳ್ಳಿ. ಮೂಲತಃ ಬೆಂಗಳೂರಿನವರು, ಈಗ ಬಾರ್ಸಿಲೊನಾದಲ್ಲಿದ್ದಾರೆ. ಫೇಸ್ಬುಕ್ ಮೂಲಕವಷ್ಟೇ ನನಗೆ ಪರಿಚಯ. ಇನ್ನೂ ಫೇಸ್ ನೋಡಿಲ್ಲ, ಮಾತನಾಡಿಲ್ಲ. ಬಹುಶಃ ಸಾಫ್ಟ್ವೇರಿಗರೇ ಇರಬಹುದು ಎಂದುಕೊಳ್ಳುತ್ತೇನೆ. ಕನ್ನಡಾಭಿಮಾನಿ ಎಂದು ಅವರ ಪ್ರೊಫೈಲ್ನಿಂದ ಗೊತ್ತಾಗುತ್ತದೆ. ಜತೆಯಲ್ಲೇ ಸ್ಪಾನಿಷ್, ಪೋರ್ಚುಗೀಸ್ ಮತ್ತು ಇಟಾಲಿಯನ್ ಭಾಷೆಗಳನ್ನು ಕಲಿತಿದ್ದಾರೆಂದೂ ತಿಳಿಯುತ್ತದೆ. ಅಂದರೆ ಕೆಲವರ್ಷಗಳಿಂದ ಅಲ್ಲಿ ವಾಸವಾಗಿದ್ದಾರೆ ಎನ್ನಲಡ್ಡಿಯಿಲ್ಲ. ಫೇಸ್ಬುಕ್ ಕ್ಯಾಲೆಂಡರ್ ಯಾರದೆಲ್ಲ ಬರ್ತ್ಡೇ ಎಂದು ಸೂಚಿಸುತ್ತದೆಯೋ ಅವರಿಗೆಲ್ಲ ಆಯಾಯ ದಿನದಂದೇ ಪುಟ್ಟದೊಂದು ಶುಭಾಶಯ ಸಂದೇಶ ಕಳಿಸುವುದು ನನ್ನ ಕ್ರಮ. ಅದು ತೀರಾ ಔಪಚಾರಿಕವಾಗದಂತೆ ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ಪ್ರಶ್ನೆಯನ್ನೂ ಒಂದು ನಗುಮುಖ ಚಿತ್ರವನ್ನೂ ಕೊನೆಯಲ್ಲಿ ಸೇರಿಸುತ್ತೇನೆ. ಅದರಿಂದ ಪ್ರಯೋಜನವಿದೆ- ನನ್ನ ಗ್ರೀಟಿಂಗ್ ಆದರೋ ಎಲ್ಲ ದಿನಗಳಲ್ಲೂ ಎಲ್ಲರಿಗೂ ಒಂದೇ ಮಾದರಿ; ಆದರೆ ಬರುವ ಜವಾಬುಗಳು ಮಾತ್ರ ಸಖತ್ ವೆರೈಟಿಯವು. ವಿಭಿನ್ನ ಅಭಿರುಚಿ, ಖಯಾಲಿ ಮತ್ತು ಜೀವನಶೈಲಿಗಳನ್ನು ಪ್ರತಿಫಲಿಸುವಂಥವು. ರಂಗಸ್ವಾಮಿಯವರದು ಒಂದು ಒಳ್ಳೆಯ ಉದಾಹರಣೆ. ಅವರು ಬರೆದದ್ದರಲ್ಲಿ ಮೊದಲ ಭಾಗ ಅಂಥ ವಿಶೇಷವೇನಲ್ಲ. ಬಾರ್ಸಿಲೊನಾ ಅಷ್ಟೇಅಲ್ಲ ಯುರೋಪ್ನಲ್ಲಿ ಸುಮಾರಷ್ಟು ನಗರಗಳು ಸಸ್ಯಾಹಾರಿಗಳಿಗೆ ಹೇಳಿದಂಥವಲ್ಲ; ಅಲ್ಲಿ ಭಾರತೀಯ ರೆಸ್ಟೋರೆಂಟ್ಗಳಾಗಲೀ ದಿನಸಿ ಅಂಗಡಿಗಳಾಗಲೀ ಇರುವುದಿಲ್ಲವೆಂಬ ವಿಚಾರ ಗೊತ್ತಿದ್ದದ್ದೇ. ಆದರೆ ‘ಕರಿಬೇವು ಸಿಕ್ಕದಿನ ಭರ್ಜರಿ ಸಡಗರ’ ಎಂದಿದ್ದಾರಲ್ಲ ಆ ವಾಕ್ಯವನ್ನು ನಾವು- ತಾಯ್ನಾಡಿನಿಂದ ದೂರವಿರುವವರು- ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು. ನಮ್ಮ ಜೀವನಕ್ಕೆ ರಿಲೇಟ್ ಮಾಡಿಕೊಳ್ಳಬಲ್ಲೆವು. ಆದರೂ ನನ್ನಂತೆ ಹತ್ತುವರ್ಷಗಳ ಹಿಂದೆಯಷ್ಟೇ ಅಮೆರಿಕಕ್ಕೆ ಬಂದವರ, ವಾಷಿಂಗ್ಟನ್ನಂಥ ದೊಡ್ಡ ನಗರಗಳಲ್ಲಿರುವವರ ಸ್ಥಿತಿ ಎಷ್ಟೋ ವಾಸಿ. ನಮಗೆ ಭಾರತದಿಂದ ದೂರವಿದ್ದೇವೆ ಅನಿಸುವುದಿಲ್ಲ. ಎಪ್ಪತ್ತರ ದಶಕದಲ್ಲಿ ಇಲ್ಲಿಗೆ ಬಂದವರ ಅನುಭವಗಳೇ ಬೇರೆ. ಆಗ ಯಾವುದಾದರೂ ಚೈನಿಸ್/ಕೋರಿಯನ್ ತರಕಾರಿ ಅಂಗಡಿಯಲ್ಲಿ ಅಪರೂಪಕ್ಕೆ ಕೊತ್ತಂಬರಿಸೊಪ್ಪು ಸಿಕ್ಕಿದರೆ ನಿಧಿ ಸಿಕ್ಕಿದಂತೆಯೇ. ಹಿರಿಯಮಿತ್ರ ಮೈಸೂರು ನಟರಾಜ್ ನೆನಪಿಸಿಕೊಳ್ಳುತ್ತಿರುತ್ತಾರೆ, ಕೊತ್ತಂಬರಿಸೊಪ್ಪು ಬಂದಿದೆ ಎಂದು ಪರಸ್ಪರ ದೂರವಾಣಿ ಕರೆಗಳನ್ನು ಮಾಡಿಕೊಂಡು ಅಂಗಡಿಗೆ ಮುತ್ತಿಗೆಯಿಡುತ್ತಿದ್ದರಂತೆ. ತಾಜಾ ಇರುವಾಗ ತಂದು ಸಾರು ಮಾಡಿ ಮನೆಯಲ್ಲಿ ಘಮಘಮ ತುಂಬಿ ಸಂಭ್ರಮಿಸುತ್ತಿದ್ದರಂತೆ.
ವಿದೇಶದಲ್ಲಿ ಅಪರೂಪವಾಗಿ ಅನಿರೀಕ್ಷಿತವಾಗಿ ನಮ್ಮ ನೆಲದ ವಸ್ತುವೇನಾದರೂ ಕಣ್ಣಿಗೆಬಿದ್ದಾಗಿನ ಸಂಭ್ರಮವಿದೆಯಲ್ಲ ಅದು ಮಾತಿನಲ್ಲಿ/ಅಕ್ಷರಗಳಲ್ಲಿ ವರ್ಣಿಸಲಾಗದ್ದು. ವಿದೇಶವೆಂದರೆ ವಿದೇಶವೇ ಆಗಬೇಕಂತೇನೂ ಇಲ್ಲ, ಆ ವಸ್ತು ಅಡುಗೆಪದಾರ್ಥವೇ ಆಗಿರಬೇಕಂತನೂ ಇಲ್ಲ. ನನ್ನದೇ ಒಂದು ಅನುಭವವನ್ನು ಹೇಳುತ್ತೇನೆ. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ ನಾನು ದಿಲ್ಲಿಯಲ್ಲಿ ಉದ್ಯೋಗಕ್ಕೆ ಸೇರಿದ್ದೆ. ಅದೇ ಮೊದಲಬಾರಿಗೆ ಕರ್ನಾಟಕದಿಂದ ಹೊರಗಿದ್ದದ್ದು. ದಿಲ್ಲಿಯಲ್ಲಿ ಆರೇಳು ತಿಂಗಳ ತರಬೇತಿಯ ನಂತರ ಹೈದರಾಬಾದ್ನಲ್ಲಿ ನನ್ನ ಪೋಸ್ಟಿಂಗ್. ದಿಲ್ಲಿಯಿಂದ ನೇರವಾಗಿ ಹೈದರಾಬಾದ್ಗೆ ನನ್ನ ಬಿಡಾರ ವರ್ಗಾಯಿಸಿದ್ದೆ. ರಜೆಯಲ್ಲೂ ಊರಿಗೆ ಹೋಗಿರಲಿಲ್ಲ, ಕರ್ನಾಟಕದೊಳಗೆ ಪ್ರವೇಶಿಸಿರಲಿಲ್ಲ. ಹೀಗಿರಲು ಒಂದುದಿನ ಹೈದರಾಬಾದ್ನಲ್ಲಿ ಸಿಟಿಬಸ್ನಲ್ಲಿ ಹೋಗುತ್ತಿದ್ದಾಗ ಅಲ್ಲಿನ ಮುಖ್ಯ ಬಸ್ನಿಲ್ದಾಣದಲ್ಲಿ ಒಂದೆರಡು ಕೆಎಸ್ಸಾರ್ಟಿಸಿ ಬಸ್ಸುಗಳು ಕಾಣಸಿಕ್ಕವು. ಹೈದರಾಬಾದ್ನಿಂದ ಗುಲ್ಬರ್ಗ ರಾಯಚೂರು ಮುಂತಾದೆಡೆಗಳಿಗೆ ಹೋಗುವ ಕೆಂಪುಬಸ್ಸುಗಳು. ಅವುಗಳನ್ನು ಕಂಡಾಗ ಆ ಕ್ಷಣದಲ್ಲಾಗಿದ್ದ ಒಂದು ಹಿತಕರ ರೋಮಾಂಚನ ನನಗೆ ಈಗಲೂ ನೆನಪಿದೆ.
ಇಂಗ್ಲೆಂಡ್ನಲ್ಲಿರುವ ನನ್ನ ಅಣ್ಣ ಕಳೆದವರ್ಷ ತನಗಾದ ಅಂತಹದೇ ಒಂದು ರೋಮಾಂಚಕ ಕ್ಷಣವನ್ನು ಬಣ್ಣಿಸಿದ್ದರು. ಅದಕ್ಕೆ ಕಾರಣವಾದ ವಸ್ತುವಿನ ಚಿತ್ರವನ್ನು ನನಗೆ ಇಮೇಲ್ನಲ್ಲಿ ಕಳಿಸಿದ್ದರು. ಅವರೆಲ್ಲ ಕುಟುಂಬಸಮೇತ ಫಿನ್ಲ್ಯಾಂಡ್ ದೇಶಕ್ಕೆ ಪ್ರವಾಸ ಹೋಗಿದ್ದರಂತೆ. ಅಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಒಂದು ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ‘ಲ್ಯಾಂಟರ್ನ್’ ದೀಪಗಳನ್ನು ಕಂಡರಂತೆ. ಥೇಟ್ ನಮ್ಮೂರಿನಲ್ಲಿ ಉಪಯೋಗಿಸುವ ಲಾಟೀನಿನದೇ ಆಕಾರ, ಗಾತ್ರ, ರಚನೆ. ಅದೇಥರ ಸರಿಗೆಗಳ ಬಂಧದೊಳಗೆ ಗಾಜಿನ ಬುರುಡೆ, ಸೀಮೆಎಣ್ಣೆ ಟ್ಯಾಂಕ್, ಬತ್ತಿಯ ಜ್ವಾಲೆ ಚಿಕ್ಕದುದೊಡ್ಡದು ಮಾಡಲು ದುಂಡಗಿನ ಬಿರಡೆ... ಎಲ್ಲವೂ ತದ್ರೂಪಿ ನಮ್ಮೂರಿನ ಲಾಟೀನು. ಜರ್ಮನಿಯಲ್ಲಿ ತಯಾರಾದ ಅದನ್ನು 20 ಯೂರೋ (ಸುಮಾರು 1250 ರೂ.) ಕೊಟ್ಟು ಖರೀದಿಸಿ ನೆನಪಿಗೋಸ್ಕರ ತಂದಿಟ್ಟುಕೊಂಡಿದ್ದಾರಂತೆ.
ಶಿಕಾಗೊದಲ್ಲಿರುವ ನನ್ನ ಸ್ನೇಹಿತ ಶ್ರೀನಿವಾಸ ರಾವ್ ಒಮ್ಮೆ ನನಗೆ ಇಮೇಲ್ನಲ್ಲಿ ಅಶೋಕ ವೃಕ್ಷದ ಫೋಟೊ ಕಳಿಸಿದ್ದರು. ಜತೆಯಲ್ಲಿ ಒಂದು ಚಿಕ್ಕ ಟಿಪ್ಪಣಿ- “ಶ್ರೀರಾಮ ನನ್ನ ಆರಾಧ್ಯದೈವ. ದಿನದ 24 ಘಂಟೆಯಲ್ಲಿ ಒಂದೆರಡು ನಿಮಿಷವಾದರೂ ನನ್ನ ರಾಮನ ಬಗ್ಗೆ ಏನಾದರೂ ಮೆಲುಕು ಹಾಕುತ್ತಿರುತ್ತೇನೆ. ಮೊನ್ನೆ ಇಲ್ಲಿ ಶಿಕಾಗೋದ ಬೊಟಾನಿಕಲ್ ಗಾರ್ಡನ್ಸ್ನಲ್ಲಿ ‘ಅಶೋಕ’ ವೃಕ್ಷವನ್ನು ನೋಡಿದಾಗ, ಅದರ ಕೆಳಗಿದ್ದ ಬೋರ್ಡ್ನಲ್ಲಿ ಮುದ್ದಾದ ಅಕ್ಷರಗಳಲ್ಲಿ Ashoka Tree ಎಂದು ಬರೆದದ್ದನ್ನು ಓದಿದಾಗ ಅರೆಕ್ಷಣ ನನ್ನನ್ನೇ ಮರೆತಿದ್ದೆ. ಚಿಕ್ಕ ಮರವಾದರೂ ಅದರ ಬುಡದಲ್ಲಿ ನನ್ನ ಸೀತಾಮಾತೆ ಒಮ್ಮೆ ಮಿಂಚಿಹೋದಳು. ಇಂದಿಗೂ ಆ ಕ್ಷಣವನ್ನು ನೆನೆಸಿಕೊಂಡರೆ ನನ್ನ ಮೈನವಿರೇಳುತ್ತದೆ!”
ಆಸ್ಟ್ರೇಲಿಯಾದಲ್ಲಿರುವ ಅನುರಾಧಾ ಶಿವರಾಂ (ಅಂಕಣದ ಓದುಗರಾಗಿ ನನಗೆ ಇ-ಪರಿಚಿತರು) ಸಹ ಇದೇರೀತಿಯ ಒಂದು ಅನುಭವವನ್ನು ಇಮೇಲ್ನಲ್ಲಿ ಬಣ್ಣಿಸಿದ್ದರು. “ಸಿಡ್ನಿಯಲ್ಲಿ ನಮ್ಮನೆ ಹತ್ತಿರ ವಾಕ್ ಹೋಗ್ತಿದ್ದಾಗ ಇದ್ದಕ್ಕಿದ್ದಂತೆ ಕೆಂಡಸಂಪಿಗೆ ಹೂವಿನ ಸುವಾಸನೆ ಗಾಳಿಯಲ್ಲಿ ತೇಲಿಬಂತು. ಆ ಪರಿಮಳದೊಡನೆ, ಊರು, ಬಾಲ್ಯ, ಹಬ್ಬ, ನೆನಪುಗಳ ಮೆರವಣಿಗೆಯೇ ಬಂತು. ಮನಸ್ಸು ತಡೆಯದೆ ಆ ಗಿಡವಿದ್ದ ಮನೆಯ ಬಾಗಿಲು ತಟ್ಟಿ ಗಿಡವನ್ನು ಎಲ್ಲಿಂದ ತಂದಿರಿ ಎಂದು ಕೇಳಿದೆ. ಏಕೆಂದರೆ ಅದುವರೆಗೂ ನನಗೆ ಈದೇಶದಲ್ಲಿ ಸಂಪಿಗೆಹೂ ಕಂಡುಬಂದದ್ದೇ ಇಲ್ಲ. ಸಂಪಿಗೆಹೂ ನಮಗೆ ಭಾರತೀಯರಿಗೆ ಎಷ್ಟು ಪ್ರಿಯವಾದದ್ದು, ಪೂಜ್ಯವಾದದ್ದು ಎಂದು ಅದರ ಹಿಂದಿನ ಕಥೆಯನ್ನೂ ಅವರಿಗೆ ವಿವರಿಸಿದೆ. ಅಪರೂಪದ ನರ್ಸರಿಯ ವಿಳಾಸ ಕೊಟ್ಟ ಆ ಆಸ್ಟ್ರೇಲಿಯನ್ ದಂಪತಿ ನಮಗೆ ಇಂದಿಗೂ ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದಾರೆ, ಸಂಪಿಗೆಯ ಸುವಾಸನೆಯಂತೆಯೇ!”
ಕುವೆಂಪು ಅದನ್ನೇ ತಾನೆ ಹೇಳಿದ್ದು? ‘ತನ್ನ ನಾಡಿನ ನೀಲಿಯಬಾನು... ತನ್ನ ನಾಡಿನ ಹಸುರಿನಕಾನು... ತನ್ನ ನಾಡಿನ ಹೊಳೆ-ಕೆರೆ-ಬೆಟ್ಟ... ತನ್ನ ನಾಡಿನ ಪಶ್ಚಿಮಘಟ್ಟ... ದೂರದೇಶಕೆ ಹೋದ ಸಮಯದಿ ತನ್ನ ನಾಡನು ನೆನೆನೆನೆದುಬ್ಬದ.. ಮಾನವನಿದ್ದರೆ ಲೋಕದಲಿ ತಾವಿಲ್ಲವನಿಗೆ ನಾಕದಲಿ...’ ದಯವಿಟ್ಟು ತಪ್ಪುತಿಳಿಯಬೇಡಿ. ಇದು ಅನಿವಾಸಿಗಳ ಹುಚ್ಚು ಹಳವಂಡ ಎಂದುಕೊಳ್ಳಬೇಡಿ. ಬಾರ್ಸಿಲೊನಾದಲ್ಲಿ ಕರಿಬೇವಿನ ರುಚಿ, ಸಿಡ್ನಿಯಲ್ಲಿ ಸಂಪಿಗೆ ಪರಿಮಳ, ನ್ಯೂಯಾರ್ಕ್ನ ಕೆನಡಿ ಏರ್ಪೋರ್ಟ್ನಲ್ಲಿ ರಾಶಿರಾಶಿ ವಿಮಾನಗಳ ಮಧ್ಯೆ ಏರ್ಇಂಡಿಯಾ ವಿಮಾನ ನಿಂತ ದೃಶ್ಯ, ವಾಷಿಂಗ್ಟನ್ನ ಕೆನಡಿ ಆರ್ಟ್ಸೆಂಟರ್ನಲ್ಲಿ ರಘುದೀಕ್ಷಿತ್ ಬಣ್ಣದ ಲುಂಗಿಯುಟ್ಟು ಹಾಡಿದ ‘ಕೋಡಗನ ಕೋಳಿ ನುಂಗಿತ್ತಾ...’ ಹಾಡಿನ ಕೇಳ್ಮೆ, ಡಿಸ್ನಿಲ್ಯಾಂಡ್ನ ಗೈಡ್ ‘ದಿಸ್ ಈಸ್ ಎಲಿಫೆಂಟ್ ಹೆಡೆಡ್ ಗಾಡ್ ಆಫ್ ಇಂಡಿಯಾ’ ಎಂದು ತೋರಿಸುವ ಕಲ್ಲಿನ ಗಣೇಶನನ್ನು ತಡವಿದಾಗಿನ ಸ್ಪರ್ಶ- ಈರೀತಿ ಪಂಚೇಂದ್ರಿಯಗಳ ಪರಮಾನಂದಗಳು, ರೋಮಾಂಚಕಾರಿ ಹಿತಾನುಭವದ ನಿದರ್ಶನಗಳು ಇನ್ನೂ ತುಂಬಾ ಇವೆ. ಮುಂದಿನವಾರ ನೋಡೋಣ.
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday May 14, 2011
Capital Bikeshare
Saturday May 14, 2011
Saturday May 14, 2011
ದಿನಾಂಕ 15 ಮೇ 2011ರ ಸಂಚಿಕೆ...
ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಸೈಕಲ್ ಎಂದ ಕೂಡಲೇ ಬಹುಶಃ ನಮ್ಮಲ್ಲಿ ಎಷ್ಟೋ ಜನರಿಗೆ ಹಳೆಯ ನೆನಪುಗಳ ದೊಡ್ಡ ಮೂಟೆಯೇ ಬಿಚ್ಚಿಕೊಳ್ಳುತ್ತದೆ. ಸೈಕಲ್ ಸವಾರಿ ಮಾಡುತ್ತ ನೆನಪಿನ ಓಣಿಗಳಲ್ಲಿ ಸುತ್ತಿಬಂದ ಹಾಯಾದ ಅನುಭವವಾಗುತ್ತದೆ. ಆ ಮಟ್ಟಿಗೆ ಹೇಳುವುದಾದರೆ ‘ಬುಲಂದ್ ಭಾರತ್ಕೀ ಬುಲಂದ್ ತಸ್ವೀರ್...’ ಎಂದು ಬಜಾಜ್ ಸ್ಕೂಟರ್ ಎಷ್ಟೇ ಬೀಗಿಕೊಂಡರೂ ಅದಕ್ಕಿಂತ ನೂರುಪಟ್ಟು ಬುಲಂದ್ ತಸ್ವೀರ್ (ವಿಶಾಲ ಚಿತ್ರಹಾಸು) ಸೈಕಲ್ನದು; ಸೈಕಲ್ ಎಂಬ ಪದದ ಪ್ರಸ್ತಾಪವೊಂದೇ ಹೊತ್ತುತರಬಲ್ಲ ಹಚ್ಚಹಸಿರು ನೆನಪುಗಳದು. ಇರಲಿ, ಈ ಲೇಖನ ಅಂತಹ ಸೈಕಲ್ ನೆನಪುಗಳದಲ್ಲ. ಬರೆಯಬೇಕೆಂದುಕೊಂಡಿರುವುದು ಬಾಡಿಗೆ ಸೈಕಲ್ ಬಗ್ಗೆ. ಆದರೆ ಬಾಡಿಗೆ ಸೈಕಲ್ ಎಂದರೇನು? ಮರೆತೇ ಹೋಗಿರಬಹುದಾದ, ಅಥವಾ ಈಗಿನ ಯುವಪೀಳಿಗೆಗೆ ಗೊತ್ತೇ ಇಲ್ಲದ ವಿಚಾರವಾಗಿರುವ ಸಾಧ್ಯತೆಯೂ ಇದೆ! ಅದಕ್ಕಾಗಿ, ಬಾಡಿಗೆ ಸೈಕಲ್ ನೆನಪುಗಳನ್ನು ತಾಜಾಗೊಳಿಸುವ ಒಂದೆರಡು ಉಲ್ಲೇಖಗಳನ್ನು ಇಲ್ಲಿ ಸೇರಿಸುತ್ತಿದ್ದೇನೆ. ಅಲ್ಲಿಇಲ್ಲಿ ಬ್ಲಾಗುಗಳಲ್ಲಿ ಸಿಕ್ಕಿದ ಈ ರಸಘಟ್ಟಿಗಳನ್ನು ಒಮ್ಮೆ ಹಾಗೇಸುಮ್ಮನೆ ಓದಿಕೊಳ್ಳಿ. ಇವು ನಿಮ್ಮದೇ ಅನುಭವಗಳಂತೆ ಭಾಸವಾದರೂ ಆಶ್ಚರ್ಯವಿಲ್ಲ. “ಬಳ್ಳಾರಿಯಲ್ಲಿ ಆರನೇ ತರಗತಿಯಲ್ಲಿದ್ದಾಗಿನ (1962-63) ಕಥೆ. ಕೌಲ್ಬಜಾರಿನ ಗಿರಣಿಗೆ ಅಕ್ಕಿ-ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇಬೇಕಾಗುತ್ತಿತ್ತು. ಅಕ್ಕಿ-ಗೋಧಿ ಚೀಲ ಹ್ಯಾಂಡಲಿಗೆ ತೂಗುಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕ್ಆಫ್ ಆದವನಿಗೆ ಗಿರಣಿಯೆದುರಿನ ಮೋಟುಜಗಲಿಯೇ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ಲ್ಯಾಂಡು!” - ಮಂಗಳೂರಿನ ಅತ್ರಿ ಬುಕ್ಸೆಂಟರ್ ಮಾಲೀಕ ಜಿ.ಎನ್.ಅಶೋಕವರ್ಧನ ‘ಅತ್ರಿ ಬುಕ್ ಸೆಂಟರ್’ ಹೆಸರಿನದೇ ಒಂದು ಬ್ಲಾಗ್ ಬರೆಯುತ್ತಾರೆ. ಅದರಲ್ಲಿ ಬಾಡಿಗೆ ಸೈಕಲ್ ಸವಾರಿಯ ಸುಮಾರಷ್ಟು ನೆನಪುಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಹರ್ಷ ಎಂಬುವರ ಬ್ಲಾಗಿನಲ್ಲೂ ಅಂತಹದೇ ನೆನಪು- “ಆರನೇ ಕ್ಲಾಸಿನಲ್ಲಿದ್ದಾಗ, ಆ ವಯಸ್ಸಿನ ಬಹಳಷ್ಟು ಹುಡುಗರಿಗೆ (ಆ ಕಾಲದಲ್ಲಿ) ಬರುವ ಬಯಕೆಯಂತೆ, ಸೈಕಲ್ ಹೊಡೆಯುವ ಹುಚ್ಚು. ಅದಕ್ಕಾಗಿ ನಾನು ಮನೆಯಲ್ಲಿ ಸಾಕಷ್ಟು ಅಳು-ಜಗಳದ ಅಪ್ಲಿಕೇಶನ್ನುಗಳನ್ನು ಹಾಕಿದ್ದೆ. ಯಾವುದೂ ವರ್ಕೌಟ್ ಆಗುವುದಿಲ್ಲ ಅನ್ನಿಸಿ ಅನಿರ್ದಿಷ್ಟ ಉಪವಾಸ ಹೂಡಿ ಏಟುಗಳನ್ನೂ ತಿಂದಿದ್ದೆ. ನನ್ನ ಬಯಕೆ ತಡೆಯಲಾಗದೆ ಪಾಕೆಟ್ಮನಿಯನ್ನು ಉಳಿಸಿ ಬಾಡಿಗೆ ಸೈಕಲ್ ಓಡಿಸಿದ್ದೆ. ದೊಡ್ಡ ಅಟ್ಲಾಸ್ ಸೈಕಲನ್ನು ‘ಒಳಗಾಲು’ ಹಾಕಿ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ...” ಇನ್ನು, ಚಿಕ್ಕಮಗಳೂರಿನ ಕಾಫಿತೋಟದ ಮಾಲೀಕ ಎಸ್.ಎಂ.ಪೆಜತ್ತಾಯರ ಆತ್ಮಕಥೆ ‘ಕಾಗದದ ದೋಣಿ’ಯಲ್ಲಿ ‘ನಾನೂ ಸೈಕಲ್ ಸವಾರಿ ಕಲಿತೆ’ ಎಂಬ ಅಧ್ಯಾಯ ಬರುತ್ತದೆ. “ನಮ್ಮನೆ ಹತ್ತಿರ ರಾಮ ಎಂಬ ಲೋಕಲ್ ರೌಡಿಯೊಬ್ಬ ಹೊಸದಾಗಿ ಸೈಕಲ್ ಅಂಗಡಿ ತೆರೆದ. ಅವನಲ್ಲಿ ಎಲ್ಲಾ ಸೈಜಿನ ಸೈಕಲ್ಗಳು ಬಾಡಿಗೆಗೆ ಸಿಗುತ್ತಿದ್ದುವು. ಬಾಡಿಗೆ ಒಂದು ಗಂಟೆಗೆ ಎರಡಾಣೆ ಮಾತ್ರ. ಆದರೆ ಪಾಕೆಟ್ಮನಿ ಪದ್ಧತಿ ಇಲ್ಲದ ಆ ಕಾಲದಲ್ಲಿ ಅದು ನಮಗೆ ದೊಡ್ಡ ಮೊತ್ತವೇ ಆಗಿತ್ತು. ಅಲ್ಲದೇ, ರೌಡಿ ರಾಮನು ಸೈಕಲ್ ಹೊಡೆಯಲು ಬರದ ಹುಡುಗರಿಗೆ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ. ಪ್ರತೀ ಬಾಡಿಗೆದಾರ ಹುಡುಗನೂ ರೌಡಿ ರಾಮನೆದುರು ಸೈಕಲ್ಸವಾರಿ ಮಾಡಿ ತೋರಿಸಿಯೇ ಅವನಿಂದ ಸೈಕಲ್ ಪಡೆಯಬೇಕಾಗಿತ್ತು..." ಅಂಥ ನಿರ್ದಯಿ ರಾಮನಿಂದ ಬಾಡಿಗೆ ಸೈಕಲ್ ಪಡೆದು ತನ್ನ ಮಿತ್ರ ರವಿಯ ನೆರವಿನಿಂದ ಸೈಕಲ್ ಕಲಿತ ಸ್ವಾರಸ್ಯಕರ ಪ್ರಸಂಗಗಳನ್ನು ಪೆಜತ್ತಾಯ ಬಣ್ಣಿಸುತ್ತಾರೆ. ಅದೂ ಒಂದು ಕಾಲ. ನಗರಗಳಲ್ಲಿ, ಹದಾ ದೊಡ್ಡ ಎನ್ನಬಹುದಾದ ಪಟ್ಟಣಗಳಲ್ಲಿ ಬಾಡಿಗೆ ಸೈಕಲ್ ಬಳಕೆ ತೀರಾಸಾಮಾನ್ಯ. ಹೆಚ್ಚಾಗಿ ಸೈಕಲ್ ರಿಪೇರಿ ಅಂಗಡಿಗಳಲ್ಲೇ ಸಾಲಾಗಿ ನಿಲ್ಲಿಸಿಟ್ಟ ಬಾಡಿಗೆ ಸೈಕಲ್ಗಳು ಇರುತ್ತಿದ್ದವು. ಗಂಟೆಗೆ ಇಂತಿಷ್ಟು ದುಡ್ಡು ಬಾಡಿಗೆ ಲೆಕ್ಕ. ಸೈಕಲ್ ಪಡೆದು ಉಪಯೋಗದ ನಂತರ ಅಲ್ಲಿಗೇ ಹಿಂದಿರುಗಿಸಬೇಕು. ಬಹುತೇಕ ಮುಖಪರಿಚಯ ಮತ್ತು ನಂಬುಗೆಯಿಂದಲೇ ವ್ಯವಹಾರ. ಕ್ರಮೇಣ ಜನರಲ್ಲಿ ಸ್ವಂತ ವಾಹನ, ಅದರಲ್ಲೂ ಇಂಧನಚಾಲಿತ ವಾಹನ ಬಳಕೆ ಹೆಚ್ಚಿದಂತೆ ಸೈಕಲ್ ರಿಪೇರಿ ಅಂಗಡಿಗಳು ಮುಚ್ಚಿದವು. ಬಾಡಿಗೆ ಸೈಕಲ್ಗಳೂ ಕಣ್ಮರೆಯಾದವು. ಕಾಲಗರ್ಭದಲ್ಲಿ ಹುದುಗಿಹೋದವು. ಕಾಲಾಯ ತಸ್ಮೈನಮಃ. ಆದರೆ ಕಾಲವೂ ಒಂದು ಚಕ್ರ. ಸೈಕಲ್ಚಕ್ರದಂತೆಯೇ ತಿರುಗುತ್ತದೆ. 21ನೇ ಶತಮಾನದ ಮೊದಲ ದಶಕ ಕಳೆಯಿತೆನ್ನುವಾಗ ಇದೀಗ ಮತ್ತೆ ಪ್ರತ್ಯಕ್ಷವಾಗಿವೆ ಬಾಡಿಗೆ ಸೈಕಲ್ಗಳು. ಅದೂ ಎಲ್ಲಿ? ಕಾರ್ ಕಾರ್ ಎಲ್ನೋಡಿದ್ರೂ ಕಾರ್... ನಾಡಾದ ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ! ಕಳೆದವರ್ಷ ಸಪ್ಟೆಂಬರ್ನಲ್ಲಿ ಇಲ್ಲಿ Capital Bikeshare ಎಂಬ ಹೊಸ ವ್ಯವಸ್ಥೆ ಆರಂಭವಾಗಿದೆ. ನಗರದ ವಿವಿಧೆಡೆಗಳಲ್ಲಿ ಬಾಡಿಗೆ ಸೈಕಲ್ ಸ್ಟ್ಯಾಂಡ್ಗಳು. ದಿನದ ೨೪ ಗಂಟೆಗಳೂ ಸಾರ್ವಜನಿಕರ ಸೇವೆಗೆ ತೆರೆದಿರುವ ಈ ಸ್ಟ್ಯಾಂಡ್ಗಳು ಸಂಪೂರ್ಣ ಸ್ವಯಂಚಾಲಿತ. ರೌಡಿರಾಮನೂ ಇಲ್ಲ, ಸೈಕಲ್ ಪಡೆವ ಮುನ್ನ ಅವನಿಂದ ಪರೀಕ್ಷೆಯೂ ಇಲ್ಲ. ಬಾಡಿಗೆ ಸೈಕಲ್ ಬಳಸಲಿಚ್ಛಿಸುವವರು ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯ ಸದಸ್ಯರಾಗಬೇಕು. ವಾರ್ಷಿಕ (75 ಡಾಲರ್), ಮಾಸಿಕ(25 ಡಾಲರ್), ಸಾಪ್ತಾಹಿಕ(15 ಡಾಲರ್) ಅಥವಾ ದೈನಂದಿನ (5 ಡಾಲರ್) ಸದಸ್ಯತ್ವ ಶುಲ್ಕ ಪಾವತಿಸಿ ‘ಕೀ’ ಕಾರ್ಡ್ ಪಡೆದುಕೊಳ್ಳಬೇಕು. ಅದು ಸೈಕಲ್ನ ಬೀಗದಕೈ. ಯಾವುದೇ ಸ್ಟ್ಯಾಂಡ್ಗಾದರೂ ಹೋಗಿ ಅಲ್ಲಿಂದ ಸೈಕಲ್ ಪಡೆದುಕೊಂಡು ಎಷ್ಟು ಸಮಯ ಬೇಕಾದರೂ ಬಳಸಿ ಯಾವುದೇ ಸ್ಟ್ಯಾಂಡ್ನಲ್ಲಾದರೂ ಹಿಂದಿರುಗಿಸಬಹುದು. ಮೊದಲ ಅರ್ಧ ಗಂಟೆ ಬಳಕೆಗೆ ಚಾರ್ಜ್ ಇಲ್ಲ. ಆಮೇಲೆ ಗಂಟೆ ಲೆಕ್ಕದಲ್ಲಿ ಬಳಕೆ ಶುಲ್ಕ. ಇದೀಗ ಆರೇಳು ತಿಂಗಳೊಳಗೇ ಅಪಾರ ಜನಪ್ರಿಯತೆ ಗಳಿಸಿರುವ ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯಲ್ಲಿ ಸುಮಾರು 11000 ಸದಸ್ಯರಿದ್ದಾರೆ, ನೂರಕ್ಕೂ ಹೆಚ್ಚು ಸ್ಟ್ಯಾಂಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಸೈಕಲ್ಗಳಿವೆ. ಗಟ್ಟಿಮುಟ್ಟಾದ ಅಲ್ಯುಮಿನಿಯಂ ಫ್ರೇಮ್, ಕೆಂಪುಬಣ್ಣ, ಮುಂದುಗಡೆ ಕ್ಯಾರಿಯರ್ ಬ್ಯಾಸ್ಕೆಟ್- ಆಕರ್ಷಕ ಸೈಕಲ್ಗಳು. ಗಂಡಸರು-ಹೆಂಗಸರೆನ್ನದೆ, ಸಾಮಾಜಿಕ ಸ್ತರಗಳ ಭೇದವಿಲ್ಲದೆ ಎಲ್ಲ ವರ್ಗದ ಬಳಕೆದಾರರು. ಈಗ ಬೇಸಿಗೆಯ ದಿನಗಳಲ್ಲಂತೂ ಬೈಸಿಕಲ್ಗಳ ಭರಾಟೆ ವಿಪರೀತ. ಮೊನ್ನೆ ಬಿನ್ಲಾಡನ್ ಹತ್ಯೆಯ ವಾರ್ತೆ ಬಂದಾಗ ವಾಷಿಂಗ್ಟನ್ನಲ್ಲಿ ತಡರಾತ್ರೆಯಾಗಿತ್ತು, ಮೆಟ್ರೊರೈಲು/ಸಿಟಿಬಸ್ಸುಗಳ ಸಂಚಾರ ಮುಗಿದಿತ್ತು. ಆ ಅಪರಾತ್ರಿಯಲ್ಲಿ ವ್ಹೈಟ್ಹೌಸ್ ಪ್ರಾಂಗಣದಲ್ಲಿ ಹರ್ಷಾಚರಣೆಗೆ ಬಹಳಷ್ಟು ಜನರು ಹೋದದ್ದು ಬಾಡಿಗೆ ಸೈಕಲ್ ತುಳಿದುಕೊಂಡು!
ಮುಂದುವರೆದ ದೇಶಗಳಲ್ಲಿ ಈರೀತಿಯ ಬಾಡಿಗೆ ಸೈಕಲ್ ವ್ಯವಸ್ಥೆ ಶುರುವಾಗುವುದಕ್ಕೆ, ಅತ್ಯಂತ ಜನಪ್ರಿಯವಾಗುವುದಕ್ಕೆ ಪ್ರಬಲ ಕಾರಣಗಳಿವೆ. ತಾಳ್ಮೆಗೆಡಿಸುವ ಸಂಚಾರ ದಟ್ಟಣೆ; ಏರುತ್ತಲೇ ಇರುವ ಇಂಧನ ಬೆಲೆ; ಜತೆಯಲ್ಲೇ ಪರಿಸರ ಮಾಲಿನ್ಯ. ಸಾರ್ವಜನಿಕರು ರೋಸಿಹೋಗಿದ್ದಾರೆ; ಸರಕಾರಗಳು ಸಕಾಲದಲ್ಲಿ ಎಚ್ಚೆತ್ತಿವೆ. ಚೈನಾ ದೇಶದ ಷಾಂಘಾಯ್ನಲ್ಲಿ ಸ್ವಂತ ಕಾರು ಖರೀದಿ ಮತ್ತು ಬಳಕೆ ಬಲುದುಬಾರಿಯಾಗುವಂತೆ ಮಾಡಿದ್ದಾರಂತೆ. ಅಲ್ಲಿ ಮೆಟ್ರೊ ರೈಲ್ವೇನಿಲ್ದಾಣಗಳು ಮತ್ತು ಬಸ್ ನಿಲುಗಡೆ ಸ್ಥಳಗಳ ನಡುವೆ ಜನಸಂಚಾರಕ್ಕೆ ಉಚಿತವಾಗಿ ಬಾಡಿಗೆ ಸೈಕಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ಯುರೋಪ್ನಲ್ಲೂ ಬಾಡಿಗೆ ಸೈಕಲ್ ವ್ಯವಸ್ಥೆ ಕಳೆದ ನಾಲ್ಕೈದು ವರ್ಷಗಳಿಂದ ಚಾಲ್ತಿಯಲ್ಲಿದೆ. ಪ್ಯಾರಿಸ್ನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅಂತೆಯೇ ಡಬ್ಲಿನ್, ಕೊಪನ್ಹೇಗಾನ್, ಬಾರ್ಸಿಲೊನಾ, ಲಂಡನ್ ಮುಂತಾದ ನಗರಗಳಲ್ಲಿ. ಅಮೆರಿಕಾದಲ್ಲಿ ಸದ್ಯಕ್ಕೆ ವಾಷಿಂಗ್ಟನ್ನಲ್ಲಿ (ಬಿಳಿಮನೆಯೂರಿನಲ್ಲಿ = ವ್ಹೈಟ್ಹೌಸ್ ನಗರದಲ್ಲಿ) ಮಾತ್ರ ಆರಂಭವಾಗಿದ್ದು ಇನ್ನು ನ್ಯೂಯಾರ್ಕ್, ಷಿಕಾಗೊ, ಸ್ಯಾನ್ಫ್ರಾನ್ಸಿಸ್ಕೊ ಮೊದಲಾದ ನಗರಗಳಿಗೂ ವ್ಯಾಪಿಸಲಿದೆ.
ಸೈಕ್ಲಿಂಗ್ ಮತ್ತು ರೀಸೈಕ್ಲಿಂಗ್- ಬಹುಶಃ ನಾವು ಮಾಡದಿದ್ದರೂ ಪ್ರಕೃತಿಯೇ ನಮ್ಮಿಂದ ಮಾಡಿಸುತ್ತದೆ!
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125

