Episodes
Saturday Dec 18, 2010
Kannada Chitrakaavya
Saturday Dec 18, 2010
Saturday Dec 18, 2010
ದಿನಾಂಕ 19 ಡಿಸೆಂಬರ್ 2010ರ ಸಂಚಿಕೆ...
ಚೆಲುವಗನ್ನಡದಲ್ಲಿ ಚಿತ್ರಕಾವ್ಯದ ಚಮತ್ಕಾರ
* ಶ್ರೀವತ್ಸ ಜೋಶಿ
ಕೆಲವು ವಾರಗಳ ಹಿಂದೆ ಈ ಅಂಕಣದಲ್ಲಿ ಮಾಘಕವಿಯ ಶಿಶುಪಾಲವಧ ಮಹಾಕಾವ್ಯ ಮತ್ತದರಲ್ಲಿನ ಅಕ್ಷರಚಮತ್ಕಾರವನ್ನು ಪರಿಚಯಿಸಿದ್ದೆನಷ್ಟೆ? ಹೈಸ್ಕೂಲು-ಕಾಲೇಜುಗಳಲ್ಲಿ ಸಂಸ್ಕೃತ ಕಲಿತವರಿಗೆ, ಸಂಸ್ಕೃತದ ಅಭಿಮಾನ ತುಸು ಹೆಚ್ಚೇ ಇರುವವರಿಗೆ ಅದು ಹಿಡಿಸಿತು. ಉಳಿದವರಿಗೆಲ್ಲ ‘ಕಬ್ಬಿಣದ ಕಡಲೆ ಉಸುಳಿ’ ಅನಿಸಿತು. ಎರಡೆರಡು ಸರ್ತಿ ಓದಿದರೂ ಅರ್ಥವಾಗಲಿಲ್ಲ ಎಂದು ಕೆಲವರೆಂದರೆ, ನಮ್ಮ ಕನ್ನಡ ಭಾಷೆಯಲ್ಲಿ ಇಂಥದ್ದಿದ್ದರೆ ಅದನ್ನೂ ಪರಿಚಯಿಸಿ ಎಂದು ಬರೆದರು ಇನ್ನು ಕೆಲವರು. ಸಂಸ್ಕೃತದಷ್ಟಲ್ಲದಿದ್ದರೂ ಕನ್ನಡದಲ್ಲೂ ಆ ರೀತಿಯ ಚಿತ್ರಕಾವ್ಯ ನಿದರ್ಶನಗಳು ಇವೆಯೆಂದೂ, ‘ಕನ್ನಡ ಚಿತ್ರಕಾವ್ಯ: ಸ್ವರೂಪ, ಇತಿಹಾಸ, ವಿಮರ್ಶೆ’ ಎಂಬ ಗ್ರಂಥವು (ಲೇಖಕರು: ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ; ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೮೭) ಅದರ ಕುರಿತಾಗಿಯೇ ಇದೆಯೆಂದೂ ಶತಾವಧಾನಿ ಆರ್.ಗಣೇಶ್ ಈಹಿಂದೆ ನನ್ನಲ್ಲೊಮ್ಮೆ ಹೇಳಿದ್ದು ನೆನಪಾಯ್ತು. ಅದೃಷ್ಟವೋ ಎಂಬಂತೆ, ವಾಷಿಂಗ್ಟನ್ನಲ್ಲಿರುವ ‘ಲೈಬ್ರರಿ ಆಫ್ ಕಾಂಗ್ರೆಸ್’ನ ಕ್ಯಾಟಲಾಗ್ನಲ್ಲಿ ಹುಡುಕಿದಾಗ ಆ ಗ್ರಂಥ ಲೈಬ್ರರಿಯಲ್ಲಿ ಇದೆಯೆಂದು ಗೊತ್ತಾಯ್ತು! ಲೈಬ್ರರಿ ಆಫ್ ಕಾಂಗ್ರೆಸ್, ಜಗತ್ತಿನ ಅತಿದೊಡ್ಡ ಗ್ರಂಥಾಲಯ. ಕೋಟಿಗಟ್ಟಲೆ ಪುಸ್ತಕಗಳು ಅಲ್ಲಿವೆ. ಕನ್ನಡ ಪುಸ್ತಕಗಳೂ ಇವೆ. ಈ ಲೈಬ್ರರಿಯಿಂದ ಪುಸ್ತಕಗಳನ್ನು ಎರವಲು ಪಡೆಯುವಂತಿಲ್ಲ, ಅಲ್ಲಿಯೇ ಕುಳಿತು ಓದಬೇಕು. ಅಷ್ಟೇಅಲ್ಲ, ಕೆಲವು ಪುಸ್ತಕಗಳನ್ನು ದೂರದ ಗೋದಾಮಿನಲ್ಲಿಟ್ಟಿರುವುದರಿಂದ ನಮಗೆ ಬೇಕಾದ ಪುಸ್ತಕಕ್ಕೆ ‘ರಿಕ್ವೆಸ್ಟ್’ ಸಲ್ಲಿಸಿ ಪುಸ್ತಕವು ಲೈಬ್ರರಿಗೆ ಬಂತೆನ್ನುವ ಸಂದೇಶ ಬಂದಮೇಲೆ ಹೋಗಿ ಓದಬೇಕು. ಸರಿ,ನಾನು ‘ಕನ್ನಡ ಚಿತ್ರಕಾವ್ಯ’ ಪುಸ್ತಕಕ್ಕೆ ರಿಕ್ವೆಸ್ಟ್ ಸಲ್ಲಿಸಿದೆ, ಗೋದಾಮಿನಿಂದ ಪುಸ್ತಕ ಬಂದಬಗ್ಗೆ ಇಮೇಲ್ ಬಂತು. ಶನಿವಾರದ ಒಂದು ದಿನವನ್ನು ಅದಕ್ಕೇ ಮೀಸಲಿಟ್ಟೆ. ಲೈಬ್ರರಿಗೆ ಹೋಗಿ ಐನೂರಕ್ಕೂ ಹೆಚ್ಚು ಪುಟಗಳ ಆ ಗ್ರಂಥದ ಸಾರವನ್ನು ಆರೇಳು ಗಂಟೆಗಳಲ್ಲಿ ಸಾಧ್ಯವಾದಷ್ಟು ಹೀರಿಕೊಂಡು, ಟಿಪ್ಪಣಿಗಳನ್ನು ಬರೆದುಕೊಂಡು ಬಂದೆ. ವೆಂಕಟಾಚಲ ಶಾಸ್ತ್ರಿಗಳ ಸಂಶೋಧನಾವಿದ್ವತ್ತಿಗೆ ತಲೆಬಾಗಿ, ಗ್ರಂಥದಿಂದ ಹೆಕ್ಕಿತಂದ ಅಂಶಗಳನ್ನು ಸೇರಿಸಿ ಇವತ್ತಿನ ಈ ಅಂಕಣವನ್ನು ಬರೆದೆ. ಒಪ್ಪಿಸಿಕೊಳ್ಳಿ. ಚಿತ್ರಕಾವ್ಯ ಎಂದರೇನು? ಅಕ್ಷರವಿನ್ಯಾಸದಿಂದ ವಿಸ್ಮಯ ಹುಟ್ಟಿಸುವ ಪದ್ಯ ರಚನೆ. ಭಾವಕ್ಕಿಂತ ಬೆರಗಿಗೇ ಹೆಚ್ಚು ಒತ್ತು. ಸ್ವತಃ ಚಿತ್ರಕಾವ್ಯ ರಚನೆಯ ಪ್ರಗಲ್ಭಪಾಂಡಿತ್ಯವುಳ್ಳ ಶತಾವಧಾನಿ ಗಣೇಶ್ ಒಂದು ಒಳ್ಳೆಯ ಹೋಲಿಕೆ ಕೊಡುತ್ತಾರೆ- ಕಾವ್ಯವೆಂಬುದು ಭರತನಾಟ್ಯ ಅಂತಂದುಕೊಂಡರೆ ಚಿತ್ರಕಾವ್ಯವೆಂದರೆ ಸರ್ಕಸ್ ಇದ್ದಂತೆ! ಅಂದಮಾತ್ರಕ್ಕೆ ಲಘುವಾಗಿ ಪರಿಗಣಿಸಲಾಗದು. ಚಿತ್ರಕಾವ್ಯ ರಚನೆಗೂ ವಿದ್ವತ್ತು ಬೇಕು, ಪರಿಶ್ರಮ ಬೇಕು. ವ್ಯಾಕರಣ, ಛಂದಸ್ಸು, ಅರ್ಥ, ಅಲಂಕಾರ ಎಲ್ಲದರಲ್ಲಿ ಪರಿಣತಿಯೂ ಬೇಕು. ಆಯ್ತು, ಒಣವಿವರಣೆಗಿಂತ ಚಿತ್ರಕಾವ್ಯದ ಕೆಲವು ಪ್ರಾತಿನಿಧಿಕ ಉದಾಹರಣೆಗಳಿಂದಲೇ ತಿಳಿದುಕೊಳ್ಳೋಣವಂತೆ. ಮೊದಲಿಗೆ ವರ್ಣಚಿತ್ರ ಎಂಬ ಪ್ರಕಾರ. ನಿರ್ದಿಷ್ಟ ಸಂಖ್ಯೆಯ ವ್ಯಂಜನಾಕ್ಷರಗಳನ್ನಷ್ಟೇ ಬಳಸಿ ಪದ್ಯರಚನೆ. ‘ಆಚಣ್ಣಕವಿ’ ಎಂಬುವನು ಬರೆದ ವರ್ಧಮಾನಪುರಾಣ ಕಾವ್ಯದ ಈ ಪದ್ಯದ ಹಾಗೆ- ಕಲಿ ಕೊಂಕಲ್ಕೇಕಕ್ಕುಂ ಕೆಲಕ್ಕೆ ಕೋಲಿಕ್ಕೆ ಲಕ್ಕೆ ಲೆಕ್ಕಕ್ಕೆಲ್ಲಂ ಕಲಿ ಕೋಲಲೆ ಕಲಲ್ಕಕ್ಕುಂ ಕುಲಕಕ್ಕುಂ ಕಲಿ ಕಲಂಕಿ ಕೊಂಕೆ ಕಲಂಕಂ. ಇದರಲ್ಲಿ ಕ ಮತ್ತು ಲ ಎರಡೇ ವ್ಯಂಜನಗಳಿರುವುದು. ಪದ್ಯದ ಅರ್ಥ, “ಶೂರನಾದವನು ಏತಕ್ಕೆ ಹಿಂಜರಿಯಬೇಕು? ಶತ್ರುಗಳು ಪಕ್ಕಕ್ಕೆ ಬಾಣವನ್ನು ಬಿಸಾಡುವ ಹಾಗೆ ಲಕ್ಷಗಳ ಲೆಕ್ಕದಲ್ಲಿ ಸಮಸ್ತರನ್ನು ಕೊಲ್ಲುವುದಕ್ಕೆ ಕಲಿಯಬೇಕು. ಚಪಲಚಿತ್ತನಾಗಿ ಹಿಂಜರಿದರೆ ಕುಲಕ್ಕೆ ಕಳಂಕ ಉಂಟಾಗುವುದು” ಎಂದು. ಅಯ್ಯೋ ಇದು ಹಳಗನ್ನಡ, ಸಂಸ್ಕೃತಕ್ಕಿಂತಲೂ ಕಠಿಣ ಅಂತೀರಾ? ಗಾಬರಿಯಾಗಬೇಡಿ. ಮುಂದೆ ಕೆಲವು ಗಮ್ಮತ್ತಿನ ಪದ್ಯಗಳಿವೆ. ಹದಿನೇಳನೇ ಶತಮಾನದಲ್ಲಿ ಬಾಳಿದ್ದ ಎಳಂದೂರು ಹರೀಶ್ವರ ಕವಿಯ ‘ಪ್ರಭುದೇವರ ಪುರಾಣ’ದಲ್ಲಿನ ಈ ಪದ್ಯ ನೋಡಿ. ಪರಿವರ್ಧಿನೀ ಷಟ್ಪದಿ ಛಂದಸ್ಸಿನಲ್ಲಿದೆ. ಬಲ್ಲಿದ ಬಾಣನ ಬಾಗಿಲ ಕಾಯ್ವಡೆ ಬಿಲ್ಲಿಂ ಪೊಯ್ಯಲು ಬೀಗುವರೇ ಮಹ ಬುಲ್ಲಣೆಯಿಂದ ಬೂದಿಯ ಪೂಸುತ ಬೇಡುವರೇ ಮಗನಂ ನಿಲ್ಲದೆ ಬೈವರೆ ನಂಬಿಯ ವನದೊಳು ಸಲ್ವುದೆ ಬೋಗಣ್ಣನ ಪಿಂಪೋಪುದು ಮಲ್ಲಂಬೌದ್ಧನ ಬಂನಂಬಡಿಪುದು ಕಲ್ವರೆ ಬಃಸದನಾ (ಅರ್ಥ- ಬಲಶಾಲಿ ಬಾಣಾಸುರನ ಬಾಗಿಲನ್ನು ಕಾದುಕೊಂಡಿದ್ದು, ಅರ್ಜುನನು ಬಿಲ್ಲಿನಿಂದ ಹೊಡೆಯಲು ಸಂತೋಷಪಟ್ಟು, ಅತಿಶಯ ಸಡಗರದಿಂದ ವಿಭೂತಿ ಧರಿಸುತ್ತ ಸಿರಿಯಾಳನ ಮಗನನ್ನು ಬೇಡಿ, ವನದಲ್ಲಿ ನಂಬಿಯಣ್ಣನನ್ನು ಸಹಿಸದೆ ಬೈದು, ಕೆಂಭಾವಿ ಭೋಗಣ್ಣನ ಹಿಂದೆ ನಡೆಯುವುದು ಸಲ್ಲುತ್ತದೆಯೇ? ಕೊಬ್ಬಿದ ಬೌದ್ಧನ ಭಂಗಪಡಿಸುವುದನ್ನು ಕಲಿಯುವರೆ ಮೇರುಪರ್ವತವಾಸಿಯೇ ದೇವನೇ ನಿನಗೆ ಜಯವಾಗಲಿ). ಈ ಪದ್ಯದಲ್ಲಿ ಕವಿ ಬ, ಬಾ, ಬಿ, ಬೀ ಕಾಗುಣಿತದಿಂದ ಚಮತ್ಕಾರ ಮಾಡಿದ್ದಾನೆ. ಇನ್ನೊಂದು, ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಈ ಪದ್ಯ. ಇದರಲ್ಲಿ ಕಾಗುಣಿತಾಕ್ಷರಗಳೇ ಇಲ್ಲ! ಘನರಸಶಯನತನಯ ಮದಮಥನ ಧವಳಘನ ಘನವರದ ಶತದಳನಯನ ನಯನಪದಕಮಳ ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ ಸನಕನತ ಸಮದಶಯನ ಶಮನಶಮನ ಭವರ ಮನಭಯ ಶಮನ ಗರಳಧರ ಗರಳಧರ ಪರಗ ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ (ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ). ಇದೇರೀತಿ ನಾನೂ ಒಂದು ರಚಿಸಿದ್ದೇನೆ- ದಶರಥನ ಮಗ ಭರತನ ನವರಸದ ಸರಳ ಕವನ ಬರಹದ ಸಡಗರ ಅನವರತ; ಅವನ ಸತತ ತಪಸದ ಪರಮಫಲ. ಭರತನ poetic skills ಬಗ್ಗೆ ಯಾವ ರಾಮಾಯಣದಲ್ಲೂ ಉಲ್ಲೇಖಿಸಿಲ್ಲವಲ್ಲ ಎನ್ನಬೇಡಿ ಮತ್ತೆ! :-) ಪ್ಯಾಲಿಂಡ್ರೊಮ್ (ಸಂಸ್ಕೃತದಲ್ಲಿ ಗತಪ್ರತ್ಯಾಗತ) ಅಂತ ಕೇಳಿರಬಹುದು ನೀವು. ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಓದಬಹುದಾದ್ದು. ಅಂಥ ಪದಗಳು ಕನ್ನಡದಲ್ಲಿ ಬೇಕಷ್ಟಿವೆ. ಆದರೆ ಒಂದು ಇಡೀ ಪದ್ಯವೇ ಪ್ಯಾಲಿಂಡ್ರೊಮ್ ಆಗಿರುವಂಥದೂ ಇದೆ! ಇದನ್ನು ನನಗೆ ಪ್ರೊ.ಕೃಷ್ಣೇಗೌಡರು (ನಗುಮೊಗದವರು, ನಗುವನ್ನು ಮೊಗೆಮೊಗೆದು ಕೊಡುವವರು) ಹಿಂದೊಮ್ಮೆ ಹೇಳಿದ್ದರು, ಕನ್ನಡದಲ್ಲಿ ಪ್ಯಾಲಿಂಡ್ರೊಮ್ಗಳ ಬಗ್ಗೆ ಹೀಗೇ ನಾವಿಬ್ಬರು ವಿಚಾರವಿನಿಮಯಿಸುತ್ತಿದ್ದಾಗ. ಆಚಣ್ಣಕವಿ ವರ್ಧಮಾನಪುರಾಣದಲ್ಲಿ ಬರೆದ ಈ ಪದ್ಯ ಒಂದು ಗತಪ್ರತ್ಯಾಗತ. ಕುಂದಿನಿಂದೆಚ್ಚನದು ಬಂ ಟಂದ ಮಲ್ಲದೆ ನಿಂದುದೆಂ ದೆಂದುನಿಂದೆಲ್ಲ ಮದಟಂ ಬಂದು ನಚ್ಚದೆ ನಿಂದಿಕುಂ (ಅರ್ಥ- ಕೊರತೆಯಿರುವಂತೆ ಬಾಣಪ್ರಯೋಗ ಮಾಡಿದನು, ಅದು ಶೌರ್ಯದ ರೀತಿಯಲ್ಲದೆ ಹೋಯಿತು ಎಂದೆಲ್ಲ ಹೇಳುತ್ತ ಎಲ್ಲರೂ ಬಂದು ಶೌರ್ಯದ ಬಗ್ಗೆ ಭರವಸೆಯಿಲ್ಲದೆ ನಿಂದಿಸುತ್ತಾರೆ). ಇಂಥವನ್ನು ‘ಗತಿಚಿತ್ರ’ ಎನ್ನುತ್ತಾರೆ. ಈ ಪ್ರಕಾರದಲ್ಲೇ ಗೋಮೂತ್ರಿಕ ಶೈಲಿ ಕೂಡ. ಆಕಳು ಮೂತ್ರವಿಸರ್ಜಿಸುತ್ತ ನಡೆದಾಗ ಮರಳಿನ ಮೇಲೆ ಅದು ಜಿಗ್ಜಾಗ್ ಪ್ಯಾಟರ್ನ್ ಉಂಟುಮಾಡುತ್ತದಲ್ಲ, ಹಾಗೆ ಪದ್ಯದ ಸಾಲುಗಳನ್ನು ಒಂದರ ಕೆಳಗೊಂದು ಬರೆದು ಎರಡೂ ಸಾಲುಗಳಿಂದ ಪರ್ಯಾಯಕ್ರಮದಲ್ಲಿ ಅಕ್ಷರಗಳನ್ನೋದುತ್ತ ಹೋಗಬೇಕು. “ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ” ಎಂಬ ಮೊದಲ ಸಾಲು, “ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ” ಎಂಬ ಎರಡನೇ ಸಾಲನ್ನು ಹಾಗೆ ಬರೆದು ಓದಿನೋಡಿ. ಕವಿರಾಜಮಾರ್ಗ ಗ್ರಂಥದಲ್ಲಿ ಪ್ರಸ್ತಾಪಿತ ಈ ಪದ್ಯದ ಅರ್ಥ “ಮಳೆಗಾಲದಿಂದಾಗಿ ಮನ ಹುಚ್ಚೆದ್ದಿದೆ. ನವಿಲಿನಂತೆ ಕುಣಿಯುತ್ತಿದೆ. ಮಳೆಗಾಲದಿಂದ ನನಗೆ ಚಿತ್ತಚಾಂಚಲ್ಯ ಉಂಟಾಗುತ್ತಿದೆ. ಆದ್ದರಿಂದ ನಲ್ಲನನ್ನು ವಿಚಾರಿಸಬೇಕು” ಎಂದು. ಆಷಾಢಮಾಸದಲ್ಲಿ ತವರಿಗೆ ಹೋಗಿರುವ ಹೆಣ್ಣಿಗೆ ಹೀಗೆ ಅನಿಸಿರಬಹುದೇ? ಭಾಷಾಚಿತ್ರ ಅಂತ ಇನ್ನೊಂದು ಪ್ರಕಾರ. ಎರಡು ಅಥವಾ ಹೆಚ್ಚು ಭಾಷೆಗಳಿಂದ ರಚಿತ ಪದ್ಯ. ಅಜಿತಸೇನನ ‘ಅಲಂಕಾರ ಚಿಂತಾಮಣಿ’ಯಲ್ಲಿ ಬರುವ ಈ ಸಂಸ್ಕೃತ-ಕನ್ನಡ ಹೈಬ್ರಿಡ್ ಪದ್ಯ ಒಳ್ಳೆಯ ಉದಾಹರಣೆ. ಜಹಾತಿ ಕೀದೃಶೀ ಕಾಂತಂ ವಧೂಃ ಸಂಬುಧ್ಯತಾಂ ರಿಪುಃ| ಏನೆಂದು ಕರೆವಂ ನಾಥಂ ಕಾಂತೆಯಂ ಸಂಬುಭುಕ್ಷೆಯಂ|| ಸಂಸ್ಕೃತದಲ್ಲಿರುವ ಮೊದಲ ಸಾಲಿನ ಅರ್ಥ “ಶತ್ರುವಿಗೆ ತಿಳಿಸುವುದಾಗಲಿ. ಎಂತಹ ವಧು ಕಾಂತನನ್ನು ತೊರೆಯುವಳು?” ಎಂದು. ಎರಡನೇ ಸಾಲು ಕನ್ನಡದಲ್ಲಿದೆ. ಅರ್ಥ, “ಪತಿ ಪತ್ನಿಯನ್ನು ಬಾಯಾರಿಕೆಯಿಂದಾಗಿ ಏನೆಂದು ಕೂಗುತ್ತಾನೆ?” ಎರಡೂ ಪ್ರಶ್ನೆಗಳಿಗೆ ಒಂದೇ ಉತ್ತರ ‘ನೀರತಾರೇ’! ಹೇಗೆ? ನೀರತಾರೇ ಎಂಬ ಪದವನ್ನು ಸಂಸ್ಕೃತದಲ್ಲಿ ನೀರತಾ+ಅರೇ ಎಂದು ಒಡೆಯಬಹುದು. ನೀರತಾ (ರತಾನ್ನಿಷ್ಕ್ರಾಂತಾ ಇತಿ ನೀರತಾ) ಎಂದರೆ ರತಿಕ್ರೀಡೆ ಮುಗಿಸಿದವಳು ಅಥವಾ ಪ್ರೀತಿಇಲ್ಲದವಳು ಎಂದರ್ಥ. ಅರೇ ಎನ್ನುವುದು ಸಂಬೋಧನೆ (‘ಎಲೈ’, ಅಥವಾ ‘ಹೇ’ ಇದ್ದಂತೆ). ಕನ್ನಡದಲ್ಲಿ ‘ನೀರತಾರೇ’ ಎಂದರೆ ನೀರು ತೆಗೆದುಕೊಂಡು ಬಾರೇ ಎಂದರ್ಥ. ಇಂಥವನ್ನು ನಾವೂ ರಚಿಸಬಹುದು. Why didn't you go to school today? ಅನ್ನವಾಯಿತು ಒಲೆಯ ಮೇಲೆ ಇನ್ನೇನಿಡಲಿ? ಉತ್ತರ: ‘ಹಾಲಿಡೇ’! ಈರೀತಿ ಒಗಟು, ಪ್ರಶ್ನೋತ್ತರ ಅಥವಾ ಸಮಸ್ಯಾಪೂರಣ ಚಾತುರ್ಯದ ಪದ್ಯಗಳು ಬೇಕಾದಷ್ಟಿವೆ. “ದನಮಂ ಕೊಯ್ಕೊಯ್ದು ಬಸದಿಗೊಯ್ಯುತ್ತಿರ್ಪರ್” - ಎಂಥ ಆಭಾಸ! ಗೋಹತ್ಯೆಗೈದು ಜಿನಬಸದಿಗೆ ಒಯ್ಯುತ್ತಿದ್ದಾರಂತೆ! ಶಾಂತಂಪಾಪಂ. ಹಾಗಲ್ಲ, ಪದ್ಯದ ಪೂರ್ಣರೂಪ ಇದು: ವನದೊಳಗೆ ಪುಟ್ಟ ಕಂಪಿನ ತನಿರಸಮಂ ಪತ್ತು ದೆಸೆಗೆ ಬೀರುತ್ತಿರುವಾ ಘನತರ ಸುರುಚಿರ ಸಚ್ಚಂ ದನಮಂ ಕೊಯ್ಕೊಯ್ದು ಬಸದಿಗೊಯ್ಯುತ್ತಿರ್ಪರ್ ಶ್ರೀಗಂಧ(ಚಂದನ)ದ ಕೊರಡುಗಳನ್ನು ಬಸದಿಗೆ ಒಯ್ಯುತ್ತಿರುವುದು! ಇದು, ಕಂತಿ ಎಂಬ ಕವಯಿತ್ರಿ ಮತ್ತು ಹಂಪನೆಂಬ ಕವಿಯ ಮಧ್ಯೆ ನಡೆದ ವಾಗ್ವಾದಸರಣಿಯಲ್ಲಿ ಬರುತ್ತದೆ. ಗೂಢಚಿತ್ರ ಎಂಬ ಪ್ರಕಾರವನ್ನು ವಿವರಿಸುತ್ತ ಶಾಸ್ತ್ರಿಗಳು ಕೊಟ್ಟಿರುವ ಉದಾಹರಣೆ ಚೆನ್ನಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ರಜತೋತ್ಸವ ಸಂದರ್ಭದಲ್ಲಿ ಗೌರಿಬಿದನೂರಿನ ಒಬ್ಬ ಕವಿಯ ರಚನೆ. ಕುಸುಮ ಷಟ್ಪದಿ ಛಂದಸ್ಸಿನಲ್ಲಿರುವ ಪದ್ಯಗಳ ಮೊದಲಕ್ಷರಗಳನ್ನು ಜೋಡಿಸುತ್ತ ಹೋದರೆ ‘ಶ್ರೀ ಗೋರೀಬೀದನೂರ ಪರಸ್ಪರ ಸಹಾಯ ಸಂಘದಾ ರಾಜಭಕುತಿ ಇದು’ ಎಂಬ ವಾಕ್ಯವಾಗುತ್ತದೆ! ರಾಜಭಕ್ತಿಯದೇ ಇನ್ನೊಂದು ಪದ್ಯ, ಶ್ರೀಲಿಂಗರಾಜಕವಿಯ ‘ನರಪತಿಚರಿತ’ ಕಾವ್ಯದ್ದು- ಧನ್ಯಶ್ರೀಕರಚಿತ್ತನೇ ಕವಿಸಭಾಶಕ್ರದ್ರುವೇ ರಾತ್ರಿರಾ ಜನ್ಯಾಲಿಂಗನತರ್ಷಿಕೀರ್ತಿವಿಶದ ಶ್ರೀಬಂಧುತೇಜಸ್ವಿಯೇ ಜನ್ಯಾಗರ್ಹಿತಚರ್ಯಕೃಷ್ಣ ವಿಭುವೇಕ್ಷ್ಮಾಧರ್ಮಮಂ ರಕ್ಷಿಸೈ ಸೈನ್ಯಾಗಾಧವಿರಾಜಮಾನ ಜನರಂ ರಾಗಾಬ್ಧಿಯೇ ಮನ್ನಿಸೈ. ಇದನ್ನು ಚಿತ್ರದಲ್ಲಿರುವಂತೆ ‘ಚಕ್ರಬಂಧ’ದ ರೀತಿಯಲ್ಲಿ ಓದಬಹುದು. ಮೊದಲ ಮೂರು ಸಾಲುಗಳು ಚಕ್ರದ ಆರು ಅರ(spoke)ಗಳಾಗುತ್ತವೆ. ಕೊನೆಯ ಸಾಲು ಚಕ್ರದ ಪರಿಧಿಯಲ್ಲಿ ಪ್ರದಕ್ಷಿಣಾಕಾರ ಸಾಗುತ್ತದೆ. ಚಕ್ರದೊಳಗಿನಚಕ್ರದ ಸಂರಚನೆಯಲ್ಲಿ ‘ಶ್ರೀಲಿಂಗರಾಜರಚಿತ ಚಕ್ರಬಂಧ’ ಎಂದು ಕವಿಯ ನಾಮಾಂಕಿತ ಕಾಣಿಸಿಕೊಳ್ಳುತ್ತದೆ. ವ್ಹಾರೆವಾಹ್! ಸಂಸ್ಕೃತಕವಿಗಳಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದಂತೆ ಮೆರೆದಿದ್ದಾರೆ ಕನ್ನಡದ ಕವಿಗಳು! ಅದನ್ನು ಅಷ್ಟೇ ಚಂದವಾಗಿ ಸಂಗ್ರಹಿಸಿಟ್ಟಿದ್ದಾರೆ ವೆಂಕಟಾಚಲ ಶಾಸ್ತ್ರಿಗಳು. ಸಂದರ್ಭ ಸಿಕ್ಕರೆ ನೀವೂ ಆ ಪುಸ್ತಕದ ಮೇಲೊಮ್ಮೆ ಕಣ್ಣಾಡಿಸಬೇಕು. ಇಲ್ಲವಾದರೂ, ‘ಉದಯವಾಣಿ’ ಪತ್ರಿಕೆಯಲ್ಲಿ ಭಾನುವಾರದ ಸಾಪ್ತಾಹಿಕ ಸಂಪದದಲ್ಲಿ ಆರ್.ಗಣೇಶ್ ಬರೆಯುವ ‘ಚಮತ್ಕಾರ ಕವಿತ್ವ’ ಅಂಕಣವನ್ನು ಓದಬೇಕು. ======== ಈ ಲೇಖನವನ್ನು ವಿಜಯ ಕರ್ನಾಟಕ ಇ-ಪೇಪರ್ನಲ್ಲಿ ನೀವು ಇಲ್ಲಿ ಓದಬಹುದು. "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20230822
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.