Episodes

Saturday Jun 04, 2011
Digital Diet
Saturday Jun 04, 2011
Saturday Jun 04, 2011
ದಿನಾಂಕ 5 ಜೂನ್ 2011ರ ಸಂಚಿಕೆ...
ನಮಗೂ ಬೇಕಾದೀತು ‘ಡಿಜಿಟಲ್ ಡಯಟ್’
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇನ್ನೊಬ್ಬರೊಂದಿಗೆ ಆತ್ಮೀಯ ಸಂವಾದದಲ್ಲಿರುವ ಹೊತ್ತಿಗೇ ನಿಮ್ಮ ಮೊಬೈಲ್ ರಿಂಗಣಿಸುವ, ಅಥವಾ ನೀವೇ ಏತಕ್ಕೋ ಮೊಬೈಲನ್ನು ಬಳಸಬೇಕಾಗುವ ಸಂದರ್ಭಗಳು ಆಗಾಗ ಬರುತ್ತಿವೆಯೇ? ನಿಮ್ಮ ಮಗು ಶಾಲೆಯ ಸಮಾಚಾರಗಳನ್ನು ಆಸಕ್ತಿಯಿಂದ ನಿಮ್ಮಲ್ಲಿ ಹೇಳುತ್ತಿರುವಾಗ ನೀವೇನೋ ಮೊಬೈಲ್ನಲ್ಲಿ ಇಮೇಲ್ಸ್ ಚೆಕ್ಮಾಡುತ್ತಿರುವುದು, ಎಸ್ಸೆಮ್ಮೆಸ್ ಕಳಿಸುತ್ತಿರುವುದು ಆಗುತ್ತಿದೆಯೇ? ನೀವು ಫೇಸ್ಬುಕ್ನಲ್ಲಿ ಎನೌನ್ಸ್ ಮಾಡುವವರೆಗೂ, ಟ್ವಿಟ್ಟರ್ನಲ್ಲಿ ಟ್ವೀಟುವವರೆಗೂ, ಯಾವ ಮಹಾನ್ ಘಟನೆಯೇ ಆಗಲಿ ಘಟಿಸಿದಂತೆಯೇ ಅಲ್ಲ ಅಂತನಿಸಿದ್ದಿದೆಯೇ? ಬ್ಲಾಕ್ಬೆರ್ರಿಯ ಕೆಂಪುದೀಪ ಮಿನುಗತೊಡಗುತ್ತಿದ್ದಂತೆ ನಿಮ್ಮ ಎದೆಬಡಿತ ಹೆಚ್ಚುತ್ತದೆಯೇ? ಗಂಡಹೆಂಡತಿ ಅಕ್ಕಪಕ್ಕ ಕುಳಿತಿದ್ದೂ ಇಬ್ಬರೂ ಪರಸ್ಪರ ಹಾಂಹೂಂ ಎನ್ನದೆ ಬೇರೆಬೇರೆ ಇ-ಯಂತ್ರಗಳಲ್ಲಿ ತಾಸುಗಟ್ಟಲೆ ತಲ್ಲೀನರಾಗಿರುತ್ತೀರಾ? - ಈಪೈಕಿ ಯಾವುದೇ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೂ ನಿಮಗೆ ‘ಟೆಕ್ನಾಲಜಿಯ ಬೊಜ್ಜು’ ಬಂದಿದೆ ಮತ್ತು ನೀವು ‘ಡಿಜಿಟಲ್ ಡಯಟ್’ ಮಾಡಬೇಕಿದೆ ಎಂದು ಅರ್ಥ! ಹೀಗೆನ್ನುತ್ತಾನೆ ಡೇನಿಯಲ್ ಸೀಬರ್ಗ್. ಈತ ಅಮೆರಿಕದ ವಾರ್ತಾವಾಹಿನಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ವರದಿಗಾರ. ಕಳೆದ ವರ್ಷದವರೆಗೂ ಸ್ವತಃ ಒಬ್ಬ ಟೆಕ್ನೋ-ಎಡಿಕ್ಟ್ ಆಗಿದ್ದವನು. ಆಮೇಲೆ ಏಕಾಏಕಿ ಜ್ಞಾನೋದಯವಾಗಿ ತಾನೇ ಕಂಡುಕೊಂಡ ‘ಡಿಜಿಟಲ್ ಡಯಟ್’ ಎಂಬ ವ್ರತನೇಮವನ್ನು ಅನುಸರಿಸಿ, ಇದೀಗ ಅದೇ ಹೆಸರಿನ ಪುಸ್ತಕವನ್ನೂ ಬರೆದು ಪ್ರಕಟಿಸಿದವನು. ಈಗ ಈ ಪುಸ್ತಕ ಅಮೆರಿಕದಲ್ಲಿ ಸುದ್ದಿಯಲ್ಲಿದೆ. ವಾಷಿಂಗ್ಟನ್ಪೋಸ್ಟ್ ಪತ್ರಿಕೆಯಲ್ಲಿ ಪುಸ್ತಕದ ಕೆಲ ಭಾಗಗಳು ಮೊನ್ನೆ ಮುಖಪುಟ ಲೇಖನವಾಗಿ ಪ್ರಕಟವಾಗಿವೆ. “ಟೆಕ್ನಾಲಜಿಯಲ್ಲಿ ಎಲ್ಲಿಯವರೆಗೆ ಮುಳುಗಿ ಹೋಗಿದ್ದೆನೆಂದರೆ ವೈಯಕ್ತಿಕ ಜೀವನದಲ್ಲಿ ಅವಿಸ್ಮರಣೀಯವೆನಿಸಬೇಕಿದ್ದ ಚಿಕ್ಕದೊಡ್ಡ ಘಟನೆಗಳೆಲ್ಲ ನನ್ನ ಅರಿವಿಗೆ ಬರಲೇ ಇಲ್ಲ ಎನ್ನುವ ರೀತಿಯಲ್ಲಿ ಗತಿಸಿಹೋದವು. ನಾನು well-connected ಎಂದು ಬೀಗಿಕೊಳ್ಳುತ್ತಿರುವ ಹೊತ್ತಿಗೇ ನಿಜಕ್ಕೂ ನೋಡಿದರೆ most distracted and disconnected ಆಗಿಬಿಟ್ಟಿದ್ದೆ. ಸಕಾಲದಲ್ಲಿ ಎಚ್ಚೆತ್ತು ನನ್ನನ್ನು ಸುತ್ತುವರಿದಿದ್ದ ವಯರುಗಳ ಹುತ್ತವನ್ನು ಕೊಡವಿಕೊಂಡು ಮತ್ತೆ ಬದುಕನ್ನು ಗಳಿಸಿದೆ. ಈಗಲೂ ಟೆಕ್ನಾಲಜಿಯನ್ನು ಬಳಸುತ್ತೇನೆ, ಇಲ್ಲವೆಂದೇನಿಲ್ಲ. ಆದರೆ ಮುಂಚಿನಂತಲ್ಲ, ಹಿತವಾಗಿ ಮಿತವಾಗಿ...” ಎಂದು ಸಾಗುತ್ತದೆ ಡೇನಿಯಲ್ನ ಜ್ಞಾನೋದಯಗಾಥೆ.


Saturday May 21, 2011
Curry Leaves Of Barcelona
Saturday May 21, 2011
Saturday May 21, 2011
ದಿನಾಂಕ 22 ಮೇ 2011ರ ಸಂಚಿಕೆ...
ಬಾರ್ಸಿಲೊನಾದಲ್ಲಿ ಕರಿಬೇವು ಸಿಕ್ಕ ಸಂತಸ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಸ್ಪೆಷಲ್ ಏನೂ ಇಲ್ಲಾ ಸರ್, ಬಾರ್ಸಿಲೊನಾದಲ್ಲಿ ಒಳ್ಳೆಯ ಭಾರತೀಯ ರೆಸ್ಟೋರೆಂಟ್ ಇಲ್ಲ, ಹಾಗಾಗಿ ಮನೆ ಊಟವೇ ಇಂದು ಕೂಡ. ಶಾಕಾಹಾರಿಗಳಿಗೆ ಆಯ್ಕೆ ಮಾಡಲು ಇಲ್ಲಿ ಏನೂ ಇಲ್ಲ. ಕರಿಬೇವು ಸಿಕ್ಕ ದಿನವೇ ಸ್ಪೆಷಲ್!” - ಎಂದು ಬರೆದಿದ್ದರು ನನ್ನೊಬ್ಬ ಫೇಸ್ಬುಕ್ ಸ್ನೇಹಿತ. ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ನನ್ನ ಸೌಹಾರ್ದ ಪ್ರಶ್ನೆಗೆ ಉತ್ತರವಾಗಿ. ಅವರ ಹೆಸರು ರಂಗಸ್ವಾಮಿ ಮೂಕನಹಳ್ಳಿ. ಮೂಲತಃ ಬೆಂಗಳೂರಿನವರು, ಈಗ ಬಾರ್ಸಿಲೊನಾದಲ್ಲಿದ್ದಾರೆ. ಫೇಸ್ಬುಕ್ ಮೂಲಕವಷ್ಟೇ ನನಗೆ ಪರಿಚಯ. ಇನ್ನೂ ಫೇಸ್ ನೋಡಿಲ್ಲ, ಮಾತನಾಡಿಲ್ಲ. ಬಹುಶಃ ಸಾಫ್ಟ್ವೇರಿಗರೇ ಇರಬಹುದು ಎಂದುಕೊಳ್ಳುತ್ತೇನೆ. ಕನ್ನಡಾಭಿಮಾನಿ ಎಂದು ಅವರ ಪ್ರೊಫೈಲ್ನಿಂದ ಗೊತ್ತಾಗುತ್ತದೆ. ಜತೆಯಲ್ಲೇ ಸ್ಪಾನಿಷ್, ಪೋರ್ಚುಗೀಸ್ ಮತ್ತು ಇಟಾಲಿಯನ್ ಭಾಷೆಗಳನ್ನು ಕಲಿತಿದ್ದಾರೆಂದೂ ತಿಳಿಯುತ್ತದೆ. ಅಂದರೆ ಕೆಲವರ್ಷಗಳಿಂದ ಅಲ್ಲಿ ವಾಸವಾಗಿದ್ದಾರೆ ಎನ್ನಲಡ್ಡಿಯಿಲ್ಲ. ಫೇಸ್ಬುಕ್ ಕ್ಯಾಲೆಂಡರ್ ಯಾರದೆಲ್ಲ ಬರ್ತ್ಡೇ ಎಂದು ಸೂಚಿಸುತ್ತದೆಯೋ ಅವರಿಗೆಲ್ಲ ಆಯಾಯ ದಿನದಂದೇ ಪುಟ್ಟದೊಂದು ಶುಭಾಶಯ ಸಂದೇಶ ಕಳಿಸುವುದು ನನ್ನ ಕ್ರಮ. ಅದು ತೀರಾ ಔಪಚಾರಿಕವಾಗದಂತೆ ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ಪ್ರಶ್ನೆಯನ್ನೂ ಒಂದು ನಗುಮುಖ ಚಿತ್ರವನ್ನೂ ಕೊನೆಯಲ್ಲಿ ಸೇರಿಸುತ್ತೇನೆ. ಅದರಿಂದ ಪ್ರಯೋಜನವಿದೆ- ನನ್ನ ಗ್ರೀಟಿಂಗ್ ಆದರೋ ಎಲ್ಲ ದಿನಗಳಲ್ಲೂ ಎಲ್ಲರಿಗೂ ಒಂದೇ ಮಾದರಿ; ಆದರೆ ಬರುವ ಜವಾಬುಗಳು ಮಾತ್ರ ಸಖತ್ ವೆರೈಟಿಯವು. ವಿಭಿನ್ನ ಅಭಿರುಚಿ, ಖಯಾಲಿ ಮತ್ತು ಜೀವನಶೈಲಿಗಳನ್ನು ಪ್ರತಿಫಲಿಸುವಂಥವು. ರಂಗಸ್ವಾಮಿಯವರದು ಒಂದು ಒಳ್ಳೆಯ ಉದಾಹರಣೆ. ಅವರು ಬರೆದದ್ದರಲ್ಲಿ ಮೊದಲ ಭಾಗ ಅಂಥ ವಿಶೇಷವೇನಲ್ಲ. ಬಾರ್ಸಿಲೊನಾ ಅಷ್ಟೇಅಲ್ಲ ಯುರೋಪ್ನಲ್ಲಿ ಸುಮಾರಷ್ಟು ನಗರಗಳು ಸಸ್ಯಾಹಾರಿಗಳಿಗೆ ಹೇಳಿದಂಥವಲ್ಲ; ಅಲ್ಲಿ ಭಾರತೀಯ ರೆಸ್ಟೋರೆಂಟ್ಗಳಾಗಲೀ ದಿನಸಿ ಅಂಗಡಿಗಳಾಗಲೀ ಇರುವುದಿಲ್ಲವೆಂಬ ವಿಚಾರ ಗೊತ್ತಿದ್ದದ್ದೇ. ಆದರೆ ‘ಕರಿಬೇವು ಸಿಕ್ಕದಿನ ಭರ್ಜರಿ ಸಡಗರ’ ಎಂದಿದ್ದಾರಲ್ಲ ಆ ವಾಕ್ಯವನ್ನು ನಾವು- ತಾಯ್ನಾಡಿನಿಂದ ದೂರವಿರುವವರು- ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು. ನಮ್ಮ ಜೀವನಕ್ಕೆ ರಿಲೇಟ್ ಮಾಡಿಕೊಳ್ಳಬಲ್ಲೆವು. ಆದರೂ ನನ್ನಂತೆ ಹತ್ತುವರ್ಷಗಳ ಹಿಂದೆಯಷ್ಟೇ ಅಮೆರಿಕಕ್ಕೆ ಬಂದವರ, ವಾಷಿಂಗ್ಟನ್ನಂಥ ದೊಡ್ಡ ನಗರಗಳಲ್ಲಿರುವವರ ಸ್ಥಿತಿ ಎಷ್ಟೋ ವಾಸಿ. ನಮಗೆ ಭಾರತದಿಂದ ದೂರವಿದ್ದೇವೆ ಅನಿಸುವುದಿಲ್ಲ. ಎಪ್ಪತ್ತರ ದಶಕದಲ್ಲಿ ಇಲ್ಲಿಗೆ ಬಂದವರ ಅನುಭವಗಳೇ ಬೇರೆ. ಆಗ ಯಾವುದಾದರೂ ಚೈನಿಸ್/ಕೋರಿಯನ್ ತರಕಾರಿ ಅಂಗಡಿಯಲ್ಲಿ ಅಪರೂಪಕ್ಕೆ ಕೊತ್ತಂಬರಿಸೊಪ್ಪು ಸಿಕ್ಕಿದರೆ ನಿಧಿ ಸಿಕ್ಕಿದಂತೆಯೇ. ಹಿರಿಯಮಿತ್ರ ಮೈಸೂರು ನಟರಾಜ್ ನೆನಪಿಸಿಕೊಳ್ಳುತ್ತಿರುತ್ತಾರೆ, ಕೊತ್ತಂಬರಿಸೊಪ್ಪು ಬಂದಿದೆ ಎಂದು ಪರಸ್ಪರ ದೂರವಾಣಿ ಕರೆಗಳನ್ನು ಮಾಡಿಕೊಂಡು ಅಂಗಡಿಗೆ ಮುತ್ತಿಗೆಯಿಡುತ್ತಿದ್ದರಂತೆ. ತಾಜಾ ಇರುವಾಗ ತಂದು ಸಾರು ಮಾಡಿ ಮನೆಯಲ್ಲಿ ಘಮಘಮ ತುಂಬಿ ಸಂಭ್ರಮಿಸುತ್ತಿದ್ದರಂತೆ.


Saturday May 14, 2011
Capital Bikeshare
Saturday May 14, 2011
Saturday May 14, 2011
ದಿನಾಂಕ 15 ಮೇ 2011ರ ಸಂಚಿಕೆ...
ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಸೈಕಲ್ ಎಂದ ಕೂಡಲೇ ಬಹುಶಃ ನಮ್ಮಲ್ಲಿ ಎಷ್ಟೋ ಜನರಿಗೆ ಹಳೆಯ ನೆನಪುಗಳ ದೊಡ್ಡ ಮೂಟೆಯೇ ಬಿಚ್ಚಿಕೊಳ್ಳುತ್ತದೆ. ಸೈಕಲ್ ಸವಾರಿ ಮಾಡುತ್ತ ನೆನಪಿನ ಓಣಿಗಳಲ್ಲಿ ಸುತ್ತಿಬಂದ ಹಾಯಾದ ಅನುಭವವಾಗುತ್ತದೆ. ಆ ಮಟ್ಟಿಗೆ ಹೇಳುವುದಾದರೆ ‘ಬುಲಂದ್ ಭಾರತ್ಕೀ ಬುಲಂದ್ ತಸ್ವೀರ್...’ ಎಂದು ಬಜಾಜ್ ಸ್ಕೂಟರ್ ಎಷ್ಟೇ ಬೀಗಿಕೊಂಡರೂ ಅದಕ್ಕಿಂತ ನೂರುಪಟ್ಟು ಬುಲಂದ್ ತಸ್ವೀರ್ (ವಿಶಾಲ ಚಿತ್ರಹಾಸು) ಸೈಕಲ್ನದು; ಸೈಕಲ್ ಎಂಬ ಪದದ ಪ್ರಸ್ತಾಪವೊಂದೇ ಹೊತ್ತುತರಬಲ್ಲ ಹಚ್ಚಹಸಿರು ನೆನಪುಗಳದು. ಇರಲಿ, ಈ ಲೇಖನ ಅಂತಹ ಸೈಕಲ್ ನೆನಪುಗಳದಲ್ಲ. ಬರೆಯಬೇಕೆಂದುಕೊಂಡಿರುವುದು ಬಾಡಿಗೆ ಸೈಕಲ್ ಬಗ್ಗೆ. ಆದರೆ ಬಾಡಿಗೆ ಸೈಕಲ್ ಎಂದರೇನು? ಮರೆತೇ ಹೋಗಿರಬಹುದಾದ, ಅಥವಾ ಈಗಿನ ಯುವಪೀಳಿಗೆಗೆ ಗೊತ್ತೇ ಇಲ್ಲದ ವಿಚಾರವಾಗಿರುವ ಸಾಧ್ಯತೆಯೂ ಇದೆ! ಅದಕ್ಕಾಗಿ, ಬಾಡಿಗೆ ಸೈಕಲ್ ನೆನಪುಗಳನ್ನು ತಾಜಾಗೊಳಿಸುವ ಒಂದೆರಡು ಉಲ್ಲೇಖಗಳನ್ನು ಇಲ್ಲಿ ಸೇರಿಸುತ್ತಿದ್ದೇನೆ. ಅಲ್ಲಿಇಲ್ಲಿ ಬ್ಲಾಗುಗಳಲ್ಲಿ ಸಿಕ್ಕಿದ ಈ ರಸಘಟ್ಟಿಗಳನ್ನು ಒಮ್ಮೆ ಹಾಗೇಸುಮ್ಮನೆ ಓದಿಕೊಳ್ಳಿ. ಇವು ನಿಮ್ಮದೇ ಅನುಭವಗಳಂತೆ ಭಾಸವಾದರೂ ಆಶ್ಚರ್ಯವಿಲ್ಲ. “ಬಳ್ಳಾರಿಯಲ್ಲಿ ಆರನೇ ತರಗತಿಯಲ್ಲಿದ್ದಾಗಿನ (1962-63) ಕಥೆ. ಕೌಲ್ಬಜಾರಿನ ಗಿರಣಿಗೆ ಅಕ್ಕಿ-ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇಬೇಕಾಗುತ್ತಿತ್ತು. ಅಕ್ಕಿ-ಗೋಧಿ ಚೀಲ ಹ್ಯಾಂಡಲಿಗೆ ತೂಗುಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕ್ಆಫ್ ಆದವನಿಗೆ ಗಿರಣಿಯೆದುರಿನ ಮೋಟುಜಗಲಿಯೇ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ಲ್ಯಾಂಡು!” - ಮಂಗಳೂರಿನ ಅತ್ರಿ ಬುಕ್ಸೆಂಟರ್ ಮಾಲೀಕ ಜಿ.ಎನ್.ಅಶೋಕವರ್ಧನ ‘ಅತ್ರಿ ಬುಕ್ ಸೆಂಟರ್’ ಹೆಸರಿನದೇ ಒಂದು ಬ್ಲಾಗ್ ಬರೆಯುತ್ತಾರೆ. ಅದರಲ್ಲಿ ಬಾಡಿಗೆ ಸೈಕಲ್ ಸವಾರಿಯ ಸುಮಾರಷ್ಟು ನೆನಪುಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಹರ್ಷ ಎಂಬುವರ ಬ್ಲಾಗಿನಲ್ಲೂ ಅಂತಹದೇ ನೆನಪು- “ಆರನೇ ಕ್ಲಾಸಿನಲ್ಲಿದ್ದಾಗ, ಆ ವಯಸ್ಸಿನ ಬಹಳಷ್ಟು ಹುಡುಗರಿಗೆ (ಆ ಕಾಲದಲ್ಲಿ) ಬರುವ ಬಯಕೆಯಂತೆ, ಸೈಕಲ್ ಹೊಡೆಯುವ ಹುಚ್ಚು. ಅದಕ್ಕಾಗಿ ನಾನು ಮನೆಯಲ್ಲಿ ಸಾಕಷ್ಟು ಅಳು-ಜಗಳದ ಅಪ್ಲಿಕೇಶನ್ನುಗಳನ್ನು ಹಾಕಿದ್ದೆ. ಯಾವುದೂ ವರ್ಕೌಟ್ ಆಗುವುದಿಲ್ಲ ಅನ್ನಿಸಿ ಅನಿರ್ದಿಷ್ಟ ಉಪವಾಸ ಹೂಡಿ ಏಟುಗಳನ್ನೂ ತಿಂದಿದ್ದೆ. ನನ್ನ ಬಯಕೆ ತಡೆಯಲಾಗದೆ ಪಾಕೆಟ್ಮನಿಯನ್ನು ಉಳಿಸಿ ಬಾಡಿಗೆ ಸೈಕಲ್ ಓಡಿಸಿದ್ದೆ. ದೊಡ್ಡ ಅಟ್ಲಾಸ್ ಸೈಕಲನ್ನು ‘ಒಳಗಾಲು’ ಹಾಕಿ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ...” ಇನ್ನು, ಚಿಕ್ಕಮಗಳೂರಿನ ಕಾಫಿತೋಟದ ಮಾಲೀಕ ಎಸ್.ಎಂ.ಪೆಜತ್ತಾಯರ ಆತ್ಮಕಥೆ ‘ಕಾಗದದ ದೋಣಿ’ಯಲ್ಲಿ ‘ನಾನೂ ಸೈಕಲ್ ಸವಾರಿ ಕಲಿತೆ’ ಎಂಬ ಅಧ್ಯಾಯ ಬರುತ್ತದೆ. “ನಮ್ಮನೆ ಹತ್ತಿರ ರಾಮ ಎಂಬ ಲೋಕಲ್ ರೌಡಿಯೊಬ್ಬ ಹೊಸದಾಗಿ ಸೈಕಲ್ ಅಂಗಡಿ ತೆರೆದ. ಅವನಲ್ಲಿ ಎಲ್ಲಾ ಸೈಜಿನ ಸೈಕಲ್ಗಳು ಬಾಡಿಗೆಗೆ ಸಿಗುತ್ತಿದ್ದುವು. ಬಾಡಿಗೆ ಒಂದು ಗಂಟೆಗೆ ಎರಡಾಣೆ ಮಾತ್ರ. ಆದರೆ ಪಾಕೆಟ್ಮನಿ ಪದ್ಧತಿ ಇಲ್ಲದ ಆ ಕಾಲದಲ್ಲಿ ಅದು ನಮಗೆ ದೊಡ್ಡ ಮೊತ್ತವೇ ಆಗಿತ್ತು. ಅಲ್ಲದೇ, ರೌಡಿ ರಾಮನು ಸೈಕಲ್ ಹೊಡೆಯಲು ಬರದ ಹುಡುಗರಿಗೆ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ. ಪ್ರತೀ ಬಾಡಿಗೆದಾರ ಹುಡುಗನೂ ರೌಡಿ ರಾಮನೆದುರು ಸೈಕಲ್ಸವಾರಿ ಮಾಡಿ ತೋರಿಸಿಯೇ ಅವನಿಂದ ಸೈಕಲ್ ಪಡೆಯಬೇಕಾಗಿತ್ತು..." ಅಂಥ ನಿರ್ದಯಿ ರಾಮನಿಂದ ಬಾಡಿಗೆ ಸೈಕಲ್ ಪಡೆದು ತನ್ನ ಮಿತ್ರ ರವಿಯ ನೆರವಿನಿಂದ ಸೈಕಲ್ ಕಲಿತ ಸ್ವಾರಸ್ಯಕರ ಪ್ರಸಂಗಗಳನ್ನು ಪೆಜತ್ತಾಯ ಬಣ್ಣಿಸುತ್ತಾರೆ. ಅದೂ ಒಂದು ಕಾಲ. ನಗರಗಳಲ್ಲಿ, ಹದಾ ದೊಡ್ಡ ಎನ್ನಬಹುದಾದ ಪಟ್ಟಣಗಳಲ್ಲಿ ಬಾಡಿಗೆ ಸೈಕಲ್ ಬಳಕೆ ತೀರಾಸಾಮಾನ್ಯ. ಹೆಚ್ಚಾಗಿ ಸೈಕಲ್ ರಿಪೇರಿ ಅಂಗಡಿಗಳಲ್ಲೇ ಸಾಲಾಗಿ ನಿಲ್ಲಿಸಿಟ್ಟ ಬಾಡಿಗೆ ಸೈಕಲ್ಗಳು ಇರುತ್ತಿದ್ದವು. ಗಂಟೆಗೆ ಇಂತಿಷ್ಟು ದುಡ್ಡು ಬಾಡಿಗೆ ಲೆಕ್ಕ. ಸೈಕಲ್ ಪಡೆದು ಉಪಯೋಗದ ನಂತರ ಅಲ್ಲಿಗೇ ಹಿಂದಿರುಗಿಸಬೇಕು. ಬಹುತೇಕ ಮುಖಪರಿಚಯ ಮತ್ತು ನಂಬುಗೆಯಿಂದಲೇ ವ್ಯವಹಾರ. ಕ್ರಮೇಣ ಜನರಲ್ಲಿ ಸ್ವಂತ ವಾಹನ, ಅದರಲ್ಲೂ ಇಂಧನಚಾಲಿತ ವಾಹನ ಬಳಕೆ ಹೆಚ್ಚಿದಂತೆ ಸೈಕಲ್ ರಿಪೇರಿ ಅಂಗಡಿಗಳು ಮುಚ್ಚಿದವು. ಬಾಡಿಗೆ ಸೈಕಲ್ಗಳೂ ಕಣ್ಮರೆಯಾದವು. ಕಾಲಗರ್ಭದಲ್ಲಿ ಹುದುಗಿಹೋದವು. ಕಾಲಾಯ ತಸ್ಮೈನಮಃ. ಆದರೆ ಕಾಲವೂ ಒಂದು ಚಕ್ರ. ಸೈಕಲ್ಚಕ್ರದಂತೆಯೇ ತಿರುಗುತ್ತದೆ. 21ನೇ ಶತಮಾನದ ಮೊದಲ ದಶಕ ಕಳೆಯಿತೆನ್ನುವಾಗ ಇದೀಗ ಮತ್ತೆ ಪ್ರತ್ಯಕ್ಷವಾಗಿವೆ ಬಾಡಿಗೆ ಸೈಕಲ್ಗಳು. ಅದೂ ಎಲ್ಲಿ? ಕಾರ್ ಕಾರ್ ಎಲ್ನೋಡಿದ್ರೂ ಕಾರ್... ನಾಡಾದ ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ! ಕಳೆದವರ್ಷ ಸಪ್ಟೆಂಬರ್ನಲ್ಲಿ ಇಲ್ಲಿ Capital Bikeshare ಎಂಬ ಹೊಸ ವ್ಯವಸ್ಥೆ ಆರಂಭವಾಗಿದೆ. ನಗರದ ವಿವಿಧೆಡೆಗಳಲ್ಲಿ ಬಾಡಿಗೆ ಸೈಕಲ್ ಸ್ಟ್ಯಾಂಡ್ಗಳು. ದಿನದ ೨೪ ಗಂಟೆಗಳೂ ಸಾರ್ವಜನಿಕರ ಸೇವೆಗೆ ತೆರೆದಿರುವ ಈ ಸ್ಟ್ಯಾಂಡ್ಗಳು ಸಂಪೂರ್ಣ ಸ್ವಯಂಚಾಲಿತ. ರೌಡಿರಾಮನೂ ಇಲ್ಲ, ಸೈಕಲ್ ಪಡೆವ ಮುನ್ನ ಅವನಿಂದ ಪರೀಕ್ಷೆಯೂ ಇಲ್ಲ. ಬಾಡಿಗೆ ಸೈಕಲ್ ಬಳಸಲಿಚ್ಛಿಸುವವರು ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯ ಸದಸ್ಯರಾಗಬೇಕು. ವಾರ್ಷಿಕ (75 ಡಾಲರ್), ಮಾಸಿಕ(25 ಡಾಲರ್), ಸಾಪ್ತಾಹಿಕ(15 ಡಾಲರ್) ಅಥವಾ ದೈನಂದಿನ (5 ಡಾಲರ್) ಸದಸ್ಯತ್ವ ಶುಲ್ಕ ಪಾವತಿಸಿ ‘ಕೀ’ ಕಾರ್ಡ್ ಪಡೆದುಕೊಳ್ಳಬೇಕು. ಅದು ಸೈಕಲ್ನ ಬೀಗದಕೈ. ಯಾವುದೇ ಸ್ಟ್ಯಾಂಡ್ಗಾದರೂ ಹೋಗಿ ಅಲ್ಲಿಂದ ಸೈಕಲ್ ಪಡೆದುಕೊಂಡು ಎಷ್ಟು ಸಮಯ ಬೇಕಾದರೂ ಬಳಸಿ ಯಾವುದೇ ಸ್ಟ್ಯಾಂಡ್ನಲ್ಲಾದರೂ ಹಿಂದಿರುಗಿಸಬಹುದು. ಮೊದಲ ಅರ್ಧ ಗಂಟೆ ಬಳಕೆಗೆ ಚಾರ್ಜ್ ಇಲ್ಲ. ಆಮೇಲೆ ಗಂಟೆ ಲೆಕ್ಕದಲ್ಲಿ ಬಳಕೆ ಶುಲ್ಕ. ಇದೀಗ ಆರೇಳು ತಿಂಗಳೊಳಗೇ ಅಪಾರ ಜನಪ್ರಿಯತೆ ಗಳಿಸಿರುವ ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯಲ್ಲಿ ಸುಮಾರು 11000 ಸದಸ್ಯರಿದ್ದಾರೆ, ನೂರಕ್ಕೂ ಹೆಚ್ಚು ಸ್ಟ್ಯಾಂಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಸೈಕಲ್ಗಳಿವೆ. ಗಟ್ಟಿಮುಟ್ಟಾದ ಅಲ್ಯುಮಿನಿಯಂ ಫ್ರೇಮ್, ಕೆಂಪುಬಣ್ಣ, ಮುಂದುಗಡೆ ಕ್ಯಾರಿಯರ್ ಬ್ಯಾಸ್ಕೆಟ್- ಆಕರ್ಷಕ ಸೈಕಲ್ಗಳು. ಗಂಡಸರು-ಹೆಂಗಸರೆನ್ನದೆ, ಸಾಮಾಜಿಕ ಸ್ತರಗಳ ಭೇದವಿಲ್ಲದೆ ಎಲ್ಲ ವರ್ಗದ ಬಳಕೆದಾರರು. ಈಗ ಬೇಸಿಗೆಯ ದಿನಗಳಲ್ಲಂತೂ ಬೈಸಿಕಲ್ಗಳ ಭರಾಟೆ ವಿಪರೀತ. ಮೊನ್ನೆ ಬಿನ್ಲಾಡನ್ ಹತ್ಯೆಯ ವಾರ್ತೆ ಬಂದಾಗ ವಾಷಿಂಗ್ಟನ್ನಲ್ಲಿ ತಡರಾತ್ರೆಯಾಗಿತ್ತು, ಮೆಟ್ರೊರೈಲು/ಸಿಟಿಬಸ್ಸುಗಳ ಸಂಚಾರ ಮುಗಿದಿತ್ತು. ಆ ಅಪರಾತ್ರಿಯಲ್ಲಿ ವ್ಹೈಟ್ಹೌಸ್ ಪ್ರಾಂಗಣದಲ್ಲಿ ಹರ್ಷಾಚರಣೆಗೆ ಬಹಳಷ್ಟು ಜನರು ಹೋದದ್ದು ಬಾಡಿಗೆ ಸೈಕಲ್ ತುಳಿದುಕೊಂಡು!




Saturday Apr 23, 2011
One Zero One Zero One Zero...
Saturday Apr 23, 2011
Saturday Apr 23, 2011
ದಿನಾಂಕ 24 ಏಪ್ರಿಲ್ 2011ರ ಸಂಚಿಕೆ...
ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
* 1 *
ಪುಢಾರಿ ನೀನು ದುಡ್ಡು ತಿಂದು ದೇಶವನ್ನು ಕೊಲ್ಲುವೇ
ವಿನಾಶಕಾರಿ ಬುದ್ಧಿಯಿಂದ ಓಟು ಕಿತ್ತು ಗೆಲ್ಲುವೇ
ಹಜಾರೆ ನೀನು ಸಂಪು ಹೂಡಿ ನಮ್ಮ ಹೀರೊ ಆಗುವೇ
ಮಹಾತ್ಮಗಾಂಧಿ ಹೇಳಿದಂಥ ಸತ್ಯಮಾರ್ಗ ತೋರುವೇ
* 2 *
ಪ್ರಭಾತ ವೇಳೆಯಲ್ಲಿ ನೀನು ಯಾವ ತಿಂಡಿ ತಿನ್ನುವೇ
ಮಸಾಲೆದೋಸೆ ಪೂರಿ ಭಾಜಿ ಇಡ್ಲಿಚಟ್ನಿ ಮೆಲ್ಲುವೇ
ಹಜಾರದಲ್ಲಿ ಆಚೆ ಈಚೆ ನೂರು ಹೆಜ್ಜೆ ಹಾಕುವೇ
ಅದಾದಮೇಲೆ ಕೊಂಚ ಹೊತ್ತು ನಿದ್ದೆಯನ್ನು ಮಾಡುವೇ
ಅದಷ್ಟು ಪ್ರಮಾಣಿಕಾ ವಿಚಾರ. ಪ್ರಮಾಣಿಕಾ ವೃತ್ತಕ್ಕೆ ತದ್ವಿರುದ್ಧವಾದದ್ದೆಂದರೆ ‘ಸಮಾನಿಕಾ’ ಎಂಬ ವೃತ್ತ. ಇದರಲ್ಲಿ ಗುರು-ಲಘು-ಗುರು-ಲಘು ಆವರ್ತನವಾಗುತ್ತ ಹೋಗುತ್ತದೆ. ಕಂಪ್ಯೂಟರ್ ಭಾಷೆಯಲ್ಲಿ ಬರೆದರೆ 10101010 ರೀತಿಯಲ್ಲಿ ಒಂದು ಸೊನ್ನೆ ಒಂದು ಸೊನ್ನೆ ಪ್ಯಾಟರ್ನ್. ಇದಕ್ಕೂ ಶಂಕರಾಚಾರ್ಯರದೇ ಒಂದು ರಚನೆ ಒಳ್ಳೆಯ ಉದಾಹರಣೆ. ಕಾಲಭೈರವಾಷ್ಟಕಂ ಅಂತೊಂದು ಸ್ತೋತ್ರವಿದೆ. ‘ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ| ವ್ಯಾಲಯಜ್ಞ ಸೂತ್ರಮಿಂದುಶೇಖರಂ ಕೃಪಾಕರಂ’ ಎಂದು ಶುರುವಾಗುತ್ತದೆ. ಇದನ್ನು ಗಮನವಿಟ್ಟು ನೋಡಿ- ಗುರು ಲಘು ಗುರು ಲಘು... ಮತ್ತದೇ ಮಾರ್ಚ್ಪಾಸ್ಟ್. ಧೀಂತ ಧೀಂತ ಧೀಂತ ಧೀಂತ ನರ್ತನ. ಇನ್ನೊಂದು ಉದಾಹರಣೆ- ‘ಭಾಗ್ಯವಂತ’ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಅಭಿನಯಿಸಿ ಹಾಡಿದ್ದ ಗೀತೆಯ ಪಲ್ಲವಿ- ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ... ಮಿನುಗು ತಾರೆ ಅಂದ ನೋಡು ಎಂಥ ಚಂದ ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ’ ಇದರಲ್ಲಿ ಮಿನುಗು ಮತ್ತು ಮಲಗು ಎಂಬೆರಡು ಪದಗಳು ಮಾತ್ರ ಮೂರಕ್ಷರಗಳೂ ಲಘು ಆದ್ದರಿಂದ ಸರಿಹೊಂದುವುದಿಲ್ಲ. ಉಳಿದಂತೆ ಇಡೀ ಪಲ್ಲವಿ ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಪ್ಯಾಟರ್ನ್. ಅದೇ ಪುನೀತ್ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಹಾಡಿರುವ ‘ಕಾಣದಂತೆ ಮಾಯವಾದನೂ’ ಸಾಲು ಕೂಡ ಹಾಗೆಯೇ! ನೋಡಿದ್ರಾ? ಸಮಾನಿಕಾ-ಪ್ರಮಾಣಿಕಾ ಎಂದರೆ ಕಷ್ಟವೇನಿಲ್ಲ. ಬಹುಶಃ ಈಗ ನಿಮಗೂ ಇದರ ನಶೆ ಏರತೊಡಗಿರಬಹುದು. ಅಂದಹಾಗೆ ಪದ್ಯವೇ ಆಗಬೇಕಂತಿಲ್ಲ, ಕಥೆ ಬರೆಯುತ್ತ ಹೋಗುವಾಗಲೂ ಒಂದು ಸೊನ್ನೆ ಒಂದು ಸೊನ್ನೆ ಎನ್ನುತ್ತ ಅಕ್ಷರಮಾಲೆ ಕಟ್ಟಬಹುದು- ರಾಮಚಂದ್ರ ಕಾಡಿನಲ್ಲಿ ಜಿಂಕೆಯನ್ನು ಕೊಂದ. ಲಂಕೆರಾಜ ಭಿಕ್ಷೆಗೆಂದು ಸೀಮೆ ದಾಟಿ ಬಂದ. ಸೀತೆಯನ್ನು ಕದ್ದುಕೊಂಡು ದೂರ ಹಾರಿ ಹೋದ. ಯುದ್ಧದಲ್ಲಿ ರಾಮ ಗೆದ್ದು ಸೀತೆಗೆಷ್ಟು ಚಂದ! ಹಾಗಾಗಿ, ಅಮೆರಿಕದವರಿಗಷ್ಟೇ ಅಲ್ಲ pattern recognition ಗೊತ್ತಿರುವುದು. ಭಾರತೀಯರಿಗೆ ಆದಿಶಂಕರರ ಕಾಲದಿಂದಲೇ ಗೊತ್ತಿದೆ. ಬೇರೆಲ್ಲ ಬಿಡಿ, ‘ಎಂಥ ಅಂದ ಎಂಥ ಚಂದ ಶಾರದಮ್ಮ’ ಎಂಬ ಸಾಲಿಗಷ್ಟೇ ಗುರು-ಲಘು ಹಾಕಿನೋಡಿ. ಅಲ್ಲಿಯೂ ನಿಮಗೆ ಕಾಣುವುದು ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಕೊನೆಗೆ ಆ ‘ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ’ ಎಂಬುದಕ್ಕೇ ಗುರು-ಲಘು ಹಾಕಿ ನೋಡಿ. ಅಲ್ಲಿಯೂ ಅದೇ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು. ಅಲ್ಲಿ ಪ್ರಕಟವಾದ ಲೇಖನದಲ್ಲಿ ‘ಸಮಾನಿಕಾ’ ಮತ್ತು ’ಪ್ರಮಾಣಿಕಾ’ಹೆಸರುಗಳು ಅದಲುಬದಲಾಗಿದ್ದವು. ಆ ತಪ್ಪನ್ನು ಹಿರಿಯ ಓದುಗರೊಬ್ಬರು ನನ್ನ ಗಮನಕ್ಕೆ ತಂದ ನಂತರ ಇಲ್ಲಿ ಅದನ್ನು ಸರಿಪಡಿಸಿಕೊಂಡಿದ್ದೇನೆ.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125