Episodes
Saturday Nov 06, 2010
Shishupaalavadha Maaghakaavya
Saturday Nov 06, 2010
Saturday Nov 06, 2010
ದಿನಾಂಕ 07 ನವೆಂಬರ್ 2010ರ ಸಂಚಿಕೆಯಲ್ಲಿ...
ಶಿಶುಪಾಲ ವಧೆಗೆ ಮಾಘ ಕವಿಯ ಚಕ್ರಬಂಧ
ಅಕ್ಷರಗಳಿಂದಲ್ಲ, ಅಡಕೆಗಳನ್ನು ಜೋಡಿಸಿ ನಾವು ಆ ರೀತಿಯ ವಿನ್ಯಾಸಗಳನ್ನು ಮಾಡುತ್ತಿದ್ದೆವು. ಚಕ್ರವ್ಯೂಹ, ಚಕ್ರಬಿಂಬಕೋಟೆ ಅಂತೆಲ್ಲ ಅದನ್ನು ಕರೆಯುತ್ತಿದ್ದೆವು. ವಿನ್ಯಾಸ ವರ್ಣಮಯವಾಗಬೇಕೆಂದು ಚೆನ್ನೆಬೀಜ (ಚೆನ್ನೆಮಣೆ ಆಟದಲ್ಲಿ ಉಪಯೋಗಿಸುವ ಕೆಂಪುಬೀಜ ‘ಮಂಜಟ್ಟಿ’), ಹುಣಿಸೆಬೀಜಗಳನ್ನು ಬಳಸುತ್ತಿದ್ದುದೂ ಉಂಟು. ಮನೆಯಲ್ಲಿ ದೊಡ್ಡವರು, ಕೆಲಸದಾಳುಗಳು ಅಡಕೆ ಸುಲಿಯುತ್ತಿರಬೇಕಾದರೆ ನಾವು ಚಿಕ್ಕಮಕ್ಕಳು ಆ ಸುಲಿದ ಅಡಕೆ(ಬೆಟ್ಟೆ)ಗಳನ್ನು ನೆಲದ ಮೇಲೆ ಹರಡಿ ಗೋಪುರ, ರಥ, ಮನೆ, ದನದಕೊಟ್ಟಿಗೆ ಮುಂತಾದ ವಿಧವಿಧ ಆಕೃತಿಗಳನ್ನು ರಚಿಸುತ್ತಿದ್ದೆವು. ಅಡಕೆ ಸುಲಿಯುತ್ತಿರುವ ಹಿರಿಯರಿಂದ ಪುರಾಣಕತೆಗಳನ್ನು ಹೇಳಿಸಿಕೊಳ್ಳುತ್ತಿದ್ದೆವು. ಮಹಾಭಾರತ ಯುದ್ಧದಲ್ಲಿನ ಚಕ್ರವ್ಯೂಹ ಹೇಗಿದ್ದಿರಬಹುದು, ವೀರ ಅಭಿಮನ್ಯು ಹೇಗೆ ಅದರೊಳಗೆ ಹೊಕ್ಕು ಕಾದಾಡಿರಬಹುದು ಎಂದೆಲ್ಲ ಚಿತ್ರಣಗಳು. ಆ ರೀತಿಯ ಕಾಲಕ್ಷೇಪವೇ ಆಗ ನಮಗೆ ಜ್ಞಾನ-ಮನರಂಜನೆಗಳ ನಿಕ್ಷೇಪ. ಮಾಘ ಕವಿ ಬರೆದಿರುವ ಸಂಸ್ಕೃತ ಶ್ಲೋಕವೊಂದರಲ್ಲಿ ಅಕ್ಷರಗಳ ವಿನ್ಯಾಸದಿಂದ ‘ಚಕ್ರಬಂಧ’ ರಚನೆಯಾಗುತ್ತದೆ ಎಂದು ಓದಿದಾಗ, ಚಕ್ರಬಂಧದ ಚಿತ್ರವನ್ನು ನೋಡಿದಾಗ, ನನಗೆ ಥಟ್ಟನೆ ನೆನಪಾದದ್ದು ಚಿಕ್ಕಂದಿನಲ್ಲಿ ಅಡಕೆಗಳನ್ನು ಜೋಡಿಸಿ ಮಾಡುತ್ತಿದ್ದ ಚಕ್ರವ್ಯೂಹ. ಇರಲಿ, ಬಾಲ್ಯದಾಟವನ್ನು ಮತ್ತೆ ಯಾವಾಗಾದರೂ ಮೆಲುಕುಹಾಕೋಣವಂತೆ, ಇವತ್ತು ಮಾಘ ಕವಿಯ ಚಕ್ರಬಂಧದ ಸ್ವಾರಸ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಆಮೂಲಕ ಸಂಸ್ಕೃತ ರಸಸಾಗರದಿಂದ ಬೊಗಸೆ ತುಂಬ ಅಮೃತದ ಸವಿಯನ್ನು ನಿಮಗೂ ಕೊಡಬಯಸುತ್ತೇನೆ. ಸಂಸ್ಕೃತದ ಮಹಾನ್ ಕವಿಗಳಲ್ಲೊಬ್ಬ ಮಾಘ. ಸುಮಾರು ಏಳನೇ ಶತಮಾನದಲ್ಲಿ ಬಾಳಿದವನು. ಕಾಳಿದಾಸ, ಭಾರವಿ, ದಂಡಿ ಮೊದಲಾದ ಕವಿಶ್ರೇಷ್ಠರ ಪಂಕ್ತಿಯವನು. ಅವರಿಗಿಂತಲೂ ತುಸು ಹೆಚ್ಚಿನವನು ಎಂಬ ಪ್ರಶಂಸೆಗೆ ಪಾತ್ರನಾದವನು. ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಂ | ದಂಡಿನಃ ಪದಲಾಲಿತ್ಯಂ ಮಾಘೇ ಸಂತಿ ತ್ರಯೋ ಗುಣಾಃ || ಎಂಬ ಸುಪ್ರಸಿದ್ಧ ಶ್ಲೋಕವೇ ಇದೆಯಲ್ಲ! ಕಾಳಿದಾಸನ ಉಪಮೆಗಳು, ಭಾರವಿಯ ಕಾವ್ಯದಲ್ಲಿನ ಅರ್ಥಸಂಪತ್ತು, ದಂಡಿಯ ಕೃತಿಗಳಲ್ಲಿನ ಪದಲಾಲಿತ್ಯ ನಮ್ಮ ಗಮನ ಸೆಳೆವಂಥವಾದರೆ ಮಾಘನಲ್ಲಿ ಈ ಮೂರೂ ಗುಣವಿಶೇಷಗಳು ಮೇಳೈಸಿವೆ ಎನ್ನುತ್ತದೆ ಆ ಶ್ಲೋಕ. ಇನ್ನೊಂದೆಡೆ “ತಾವತ್ ಭಾ ಭಾರವೇಃ ಭಾತಿ ಯಾವತ್ ಮಾಘಸ್ಯ ನೋದಯಃ” ಎನ್ನಲಾಗಿದೆ. ಮಾಘ ಬಂದೊಡನೆ ಭಾರವಿಯ ಕಳೆ ಕುಂದಿತು ಎಂಬರ್ಥದಲ್ಲಿ. ಮಾಘಮಾಸ (ಚಳಿಗಾಲ) ಬಂದೊಡನೆ ರವಿಯ ಕಳೆಗುಂದಿತು ಎಂದೂ ಅರ್ಥೈಸಬಹುದು. ಅದೇ ಮಾಘನ ಹೆಗ್ಗಳಿಕೆ. ಬರೆದಿದ್ದೆಷ್ಟೋ ಗೊತ್ತಿಲ್ಲ ಉಳಿದಿರುವ ಕೃತಿ ಒಂದೇ, ಮಾಘಕಾವ್ಯ ಎಂದೂ ಹೆಸರಾದ ‘ಶಿಶುಪಾಲವಧ’. ಸಂಸ್ಕೃತದ ಪಂಚಮಹಾಕಾವ್ಯಗಳ ಪೈಕಿಯದು (ಇತರ ನಾಲ್ಕು- ಕಾಳಿದಾಸನ ‘ರಘುವಂಶ’ ಹಾಗೂ ‘ಕುಮಾರಸಂಭವ’, ಭಾರವಿಯ ‘ಕಿರಾತಾರ್ಜುನೀಯ’ ಮತ್ತು ಶ್ರೀಹರ್ಷನ ‘ನೈಷಧೀಯ’). ಶಿಶುಪಾಲವಧ ಮಹಾಕಾವ್ಯದಲ್ಲಿ ಚಿತ್ರಿತವಾಗಿರುವುದು ಮಹಾಭಾರತದಲ್ಲಿ ಬರುವ ಶಿಶುಪಾಲನ ಕಥೆ. ಶಿಶುಪಾಲ, ಕೃಷ್ಣನ ಸೋದರತ್ತೆ ಶ್ರುತದೇವಿಯ ಮಗ. ಹುಟ್ಟುವಾಗ ಮೂರು ಕಣ್ಣು ಮತ್ತು ನಾಲ್ಕು ಬಾಹುಗಳ ವಿಕಾರ ರೂಪವಿದ್ದವನು. ಈಬಗ್ಗೆ ಅವನ ತಾಯಿ ದೇವರಲ್ಲಿ ಮೊರೆಯಿಡುತ್ತಾಳೆ. ‘ಯಾರ ಮಡಿಲಲ್ಲಿ ಮಲಗಿದಾಗ ಮಗುವಿಗೆ ಸುರೂಪ ಬರುವುದೋ ಮುಂದೆ ಅವನೇ ಅದಕ್ಕೆ ಮೃತ್ಯುವೂ ಆಗುತ್ತಾನೆ’ ಎಂದು ಅಶರೀರವಾಣಿ ಕೇಳಿಬರುತ್ತದೆ. ಒಂದು ದಿನ ಕೃಷ್ಣ ಶಿಶುಪಾಲನನ್ನು ಎತ್ತಿ ಮಡಿಲಲ್ಲಿಟ್ಟುಕೊಂಡಾಗ ಅವನಿಗೆ ಸುರೂಪ ಬರುತ್ತದೆ. ಈ ಮಗುವನ್ನು ಕೊಲ್ಲದಂತೆ ಶ್ರುತದೇವಿ ಕೃಷ್ಣನನ್ನು ಬೇಡಿಕೊಳ್ಳುತ್ತಾಳೆ. ಶಿಶುಪಾಲನ ನೂರು ತಪ್ಪುಗಳನ್ನು ಮನ್ನಿಸುವುದಾಗಿಯೂ ಆಮೇಲೆ ನಿರ್ದಾಕ್ಷಿಣ್ಯವಾಗಿ ಕೊಲ್ಲುವುದಾಗಿಯೂ ಕೃಷ್ಣ ಮಾತು ಕೊಡುತ್ತ್ತಾನೆ. ಮುಂದೆ ಯುಧಿಷ್ಠಿರ ರಾಜಸೂಯ ಯಾಗವನ್ನು ಕೈಗೊಂಡಾಗ ಅಲ್ಲಿ ಆಹ್ವಾನಿತರಾಗಿ ಕೃಷ್ಣನೂ ಶಿಶುಪಾಲನೂ ಉಪಸ್ಥಿತರಿರುತ್ತಾರೆ. ಯಾಗದಲ್ಲಿ ಕೃಷ್ಣನಿಗೆ ಅಗ್ರಪೂಜೆಯ ಗೌರವ ಸಿಕ್ಕಿದ್ದು ಶಿಶುಪಾಲನ ಹೊಟ್ಟೆಯುರಿಗೆ ಕಾರಣವಾಗುತ್ತದೆ. ಮೊದಲೇ ರುಕ್ಮಿಣೀಪರಿಣಯದ ವಿಚಾರದಲ್ಲಿ ಅವನಿಗೆ ಕೃಷ್ಣನ ಮೇಲಾಗಿದ್ದ ಹಗೆ ಈಗ ಭುಗಿಲೇಳುತ್ತದೆ. ಯುದ್ಧ ಸಾರುತ್ತಾನೆ. ಉಭಯಸೇನೆಗಳ ನಡುವೆ ಭೀಕರ ಕಾಳಗ ನಡೆಯುತ್ತದೆ. ಕೊನೆಗೂ ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನ ತಲೆಯನ್ನು ಕತ್ತರಿಸಿ ಅವನನ್ನು ಕೊಂದುಬಿಡುತ್ತಾನೆ. ಹಾಗೆನೋಡಿದರೆ ಮಾಘನ ಕಾವ್ಯದಲ್ಲಿ ಕಥೆ ಅಂತಿರುವುದು ಇಷ್ಟೇ. ಮಿಕ್ಕಂತೆ ಅವನ ವರ್ಣನಾಸಾಮರ್ಥ್ಯದ್ದೇ ದರ್ಬಾರು. ವರ್ಣಗಳೊಂದಿಗೆ ಅಂದರೆ ಅಕ್ಷರಗಳೊಂದಿಗೆ ಆಟವಾಡುತ್ತ ಶ್ಲೋಕರಚನೆಯ ಅದ್ಭುತ ಕೌಶಲ್ಯ. ಹತ್ತೊಂಬತ್ತನೆಯ ಸರ್ಗದಲ್ಲಂತೂ ಮಾಘ ಸೃಜನಶೀಲತೆಯ ಉತ್ತುಂಗಕ್ಕೇರಿದ್ದಾನೆ. ಚಿತ್ರಕಾವ್ಯದ (ಶ್ಲೋಕವನ್ನು ಬರೆದಾಗ ಅದರ ಅಕ್ಷರವಿನ್ಯಾಸದಲ್ಲಿ ವಿಶೇಷವೇನಾದರೂ ಇದ್ದರೆ, ಯಾವುದಾದರೂ ಚಿತ್ರದ ಆಕಾರ ಗೋಚರಿಸಿದರೆ ಅದನ್ನು ಚಿತ್ರಕಾವ್ಯ ಎನ್ನುತ್ತಾರೆ) ಬಗೆಬಗೆಯ ನಮೂನೆಗಳನ್ನು ಅಲ್ಲಿ ಪ್ರದರ್ಶಿಸಿದ್ದಾನೆ. ಉದಾಹರಣೆಗೆ ಹತ್ತೊಂಬತ್ತನೇ ಸರ್ಗದ ಮೂರನೇ ಶ್ಲೋಕ, ಕೃಷ್ಣನ ಸೇನೆಯಲ್ಲಿದ್ದ ಯೋಧನ ಬಣ್ಣನೆ- ಜಜೌಜೋಜಾಜಿಜಿಜ್ಜಾಜೀ ತಂತತೋತಿತತಾತತುತ್ ಭಾಭೋಭೀಭಾಭಿಭೂಭಾಭೂ ರಾರಾರಿರರಿರೀರರಃ ಇದರಲ್ಲಿ ಪ್ರತಿಯೊಂದು ಪಾದದ ಎಲ್ಲ ಅಕ್ಷರಗಳೂ ಒಂದೇ ವ್ಯಂಜನದವು. ಮೇಲ್ನೋಟಕ್ಕೆ ಅರ್ಥವೇ ಇಲ್ಲವೇನೋ ಎಂದೆನಿಸಿದರೂ ಶುದ್ಧಸಂಸ್ಕೃತ ಪದಗಳು ಸಂಧಿ, ಸಮಾಸ, ವಿಭಕ್ತಿಪ್ರತ್ಯಯ ಕ್ರಿಯೆಗೊಳಗಾಗಿ ರೂಪುಗೊಂಡಿರುವ ಅರ್ಥಪೂರ್ಣ ಶ್ಲೋಕ. ಹಾಗೆಯೇ, “ಭೂರಿಭಿರ್ಭಾರಿಭಿರ್ಭೀರೈರ್ಭೂಭಾರೈರಭಿರೇಭಿರೇ/ ಭೇರೀರೇಭಿಭಿರಭ್ರಾಭೈರಭೀರುಭಿರಿಭೈರಿಭಾಃ” (೧೯:೬೬) ಇದರಲ್ಲಿ ಎರಡೇಎರಡು ವ್ಯಂಜನಗಳ ಬಳಕೆ. ಅರ್ಥ- ‘ಭೂಮಿಭಾರವಾಗುವಂಥ ತೂಕದ, ನಗಾರಿಯಂತೆ ಘೀಳಿಡುವ, ಕಾರ್ಮೋಡಗಳ ಬಣ್ಣದ ನಿರ್ಭೀತ ಆನೆಯು ಎದುರಾಳಿ ಆನೆಯನ್ನು ಆಕ್ರಮಿಸಿತು’ ಎಂದು. ಇಡೀ ಶ್ಲೋಕ ಒಂದೇಒಂದು ವ್ಯಂಜನದಿಂದ ರಚಿತವಾದದ್ದೂ ಇದೆಯೆಂದರೆ ನಂಬುತ್ತೀರಾ!? ಇಲ್ಲಿ ನೋಡಿ- “ದಾದದೋ ದುದ್ದದುದ್ದಾದೀ ದಾದಾದೋ ದುದದೀದದೋಃ/ ದುದ್ದಾದಂ ದದದೇದುದ್ದೇ ದದಾದ ದದದೋಽದದಃ” (೧೯:೧೧೪). ಇದರ ಅರ್ಥ- ‘ದುಷ್ಟಶಿಕ್ಷಕ ಶಿಷ್ಟರಕ್ಷಕ ಪಾವನಚರಣನಾದ ಶ್ರೀಕೃಷ್ಣನು ಮಾರಣಾಂತಿಕ ಬಾಣವನ್ನು ಶತ್ರುವಿನತ್ತ ಹೂಡಿದನು’ ಎಂದು. ಇಡೀ ಶ್ಲೋಕವೇ ಒಂದು ಠಿಚಿಟiಟಿಜಡಿome ಆಗಿರುವಂಥವೂ ಇವೆ. ಸಂಸ್ಕೃತದಲ್ಲಿ ಇದಕ್ಕೆ ಗತಪ್ರತ್ಯಾಗತ ಎನ್ನುತ್ತಾರೆ. ತಂ ಶ್ರಿಯಾ ಘನಯಾಽನಸ್ತರುಚಾ ಸಾರತಯಾ ತಯಾ ಯಾತಯಾ ತರಸಾ ಚಾರುಸ್ತನಯಾಽನಘಯಾಶ್ರಿತಂ (೧೯:೮೮) ಲಕ್ಷ್ಮೀವಲ್ಲಭ ವಿಷ್ಣುವಿನ ವರ್ಣನೆ. ಇಡೀ ಶ್ಲೋಕವನ್ನು ಮೊದಲಿಂದ ಕೊನೆಗೂ ಕೊನೆಯಿಂದ ಮೊದಲಿಗೂ ಓದಬಹುದು! ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ ಸಕಾರನಾನಾರಕಾಸ ಕಾಯಸಾದದಸಾಯಕಾ ರಸಾಹವಾ ವಾಹಸಾರ ನಾದವಾದದವಾದನಾ (೧೯:೨೭) ಎಂಬ ಶ್ಲೋಕವನ್ನೂ ಕಟ್ಟಿದ್ದಾನೆ ಮಾಘ. ‘ಶತ್ರುವಿಗೆ ಕೇಡನ್ನು ತರುವ ನಡೆಯುಳ್ಳ ಸೇನೆಯು ವಾದ್ಯಘೋಷದಂತೆ ಜೈಕಾರ ಹಾಕುತ್ತ ಮುನ್ನಡೆಯಿತು’ ಎಂಬ ಅರ್ಥ ಬರುವ ಈ ಶ್ಲೋಕದ ವೈಶಿಷ್ಟ್ಯವೆಂದರೆ ನಾಲ್ಕು ಪಾದಗಳನ್ನು ಒಂದರ ಕೆಳಗೊಂದು ಬರೆದು, ಮತ್ತೊಮ್ಮೆ ಅವನ್ನೇ ಒಂದರ ಕೆಳಗೊಂದು ಬರೆದಾಗ ಅಕ್ಷರಗಳ ಒಟ್ಟು ಎಂಟು ಅಡ್ಡಸಾಲುಗಳು ಮತ್ತು ಎಂಟು ಕಂಬಸಾಲುಗಳು ಆಗುತ್ತವಷ್ಟೆ? ಅದನ್ನೀಗ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿಂದ ಕೆಳಕ್ಕೆ, ಕೆಳಗಿಂದ ಮೇಲಕ್ಕೆ ಹೇಗೆ ಬೇಕಾದರೂ ಓದಿಕೊಳ್ಳಬಹುದು! ಮಾಘನ ಚಿತ್ರಕಾವ್ಯ ಶೈಲಿಗೆ ಇನ್ನೂ ಕೆಲ ಉದಾಹರಣೆಗಳು. ಕೃಷ್ಣಸೈನ್ಯದ ವರ್ಣನೆಯ ಈ ಶ್ಲೋಕ ನೋಡಿ. ಸಾಸೇನಾಗಮನಾರಮ್ಭೇ ರಸೇನಾಸೀದನಾರತಾ ತಾರನಾದಜನಾಮತ್ತ ಧೀರನಾಗಮನಾಮಯಾ (೧೯:೨೯). ಇದು ‘ಮುರಜಬಂಧ’ ಎಂಬ ಶೈಲಿ. ಶ್ಲೋಕದ ನಾಲ್ಕೂ ಪಾದಗಳನ್ನು ಒಂದರ ಕೆಳಗೊಂದು ಬರೆದಾಗ ಅಲ್ಲಿ ಅಕ್ಷರವಿನ್ಯಾಸವು ಮೃದಂಗ ಅಥವಾ ನಗಾರಿಯ ಸುತ್ತ ಕ್ರಿಸ್ಕ್ರಾಸ್ ಆಗಿ ಕಟ್ಟಿದ ಹಗ್ಗದಂತೆ ಕಾಣಿಸಿಕೊಳ್ಳುತ್ತದೆ. ಅದಕ್ಕಿಂತಲೂ ಸ್ವಾರಸ್ಯದ ‘ಗೋಮೂತ್ರಿಕ’ ಶೈಲಿ! ಎಮ್ಮೆ ಉಚ್ಚೆ ಹೊಯ್ದ ಹಾಗೆ... ಎಂದು ತಾತ್ಸಾರದಿಂದ ಹೇಳುವುದಷ್ಟೇ ನಮಗೆ ಗೊತ್ತು, ಆದರೆ ಪುರಾತನ ಕವಿಗಳು ಹಸುವಿನ ಮೂತ್ರವಿಸರ್ಜನೆಯಲ್ಲೂ ಸೌಂದರ್ಯ ಕಂಡವರು! “ಪ್ರವೃತ್ತೇವಿಕಸದ್ಧ್ವಾನಂ/ ಸಾಧನೇಪ್ಯವಿಷಾದಿಭಿಃ/ ವವೃಷೇವಿಕನಾದ್ದಾನಂ/ ಯುಧಮಾಪ್ಯವಿಷಾಣಿಭಿಃ” (೧೯:೪೬; ಮದಗಜಗಳ ವರ್ಣನೆ) ಶ್ಲೋಕದ ನಾಲ್ಕೂ ಪಾದಗಳನ್ನು ಒಂದರ ಕೆಳಗೊಂದು ಬರೆದಾಗ ಅಲ್ಲಿ ಅಕ್ಷರವಿನ್ಯಾಸವು ಎತ್ತು ಉಚ್ಚೆ ಹೊಯ್ದಂತೆ ಕಾಣಿಸಿಕೊಳ್ಳುತ್ತದೆ. ಇವೆಲ್ಲದಕ್ಕೂ ಮುಕುಟಪ್ರಾಯವಾಗಿ, ‘ಚಕ್ರಬಂಧ’ ಶೈಲಿಯ ಈ ಶ್ಲೋಕ, ಮಾಘನ ಮಹಾಮಹಿಮೆಯ ಪರಮಾವಧಿ. ಇದು ಹತ್ತೊಂಬತ್ತನೇ ಸರ್ಗದ ಕೊನೆಯ ಶ್ಲೋಕ. ಮಾಘನೇ ಹಾಕಿಕೊಂಡ ನಿಯಮದಂತೆ ಇದರಲ್ಲಿ (ಪ್ರತಿ ಸರ್ಗದ ಕೊನೆಯ ಶ್ಲೋಕದಲ್ಲಿ) ‘ಶ್ರೀ’ ಎಂಬ ಅಕ್ಷರ ಬಳಕೆಯಾಗಲೇಬೇಕು. ಸತ್ವಂ ಮಾನವಿಶಿಷ್ಟಮಾಜಿರಭಸಾದಾಲಂಬ್ಯ ಭವ್ಯಹ್ಪುರೋ ಲಬ್ಧಾಘಕ್ಷಯ ಶುದ್ಧಿರುದ್ಧರತರ ಶ್ರೀವತ್ಸ ಭೂಮಿರ್ಮುದಾ ಮುಕ್ತ್ವಾಕಾಮಮಪಾಸ್ತಭೀಃ ಪರಮೃಗವ್ಯಾಧಸ್ಸನಾದಂ ಹರೇ ರೇಕೌಘೈಃ ಸಮಕಾಲಮಭ್ರಮುದಯೀ ರೋಪೈಸ್ತದಾ ತಸ್ತರೇ ಈಗ ಇದನ್ನು ಹೈಸ್ಕೂಲ್/ಕಾಲೇಜು ಸಂಸ್ಕೃತ ತರಗತಿಗಳಲ್ಲಿದ್ದಂತೆ ಪದವಿಂಗಡಣೆ ಮಾಡಿ ಅರ್ಥೈಸಿಕೊಳ್ಳೋಣ. ಭವ್ಯಃ- ಮಂಗಲಸ್ವರೂಪನೂ, ಲಬ್ಧಾಘಕ್ಷಯಶುದ್ಧಿಃ- ಪಾಪಗಳನ್ನೆಲ್ಲ ತೊಳೆದುಕೊಂಡು ಪರಿಶುದ್ಧನೂ, ಉದ್ಧರತರ ಶ್ರೀವತ್ಸ ಭೂಮಿಃ- ಶ್ರೀವತ್ಸವೆಂಬ ಗುರುತುಳ್ಳ ವಿಶಾಲ ವಕ್ಷಸ್ಥಳವುಳ್ಳವನೂ, ಕಾಮಂ ಅಪಾಸ್ತಭೀಃ- ಸಂಪೂರ್ಣವಾಗಿ ನಿರ್ಭೀತನೂ, ಪರಮೃಗವ್ಯಾಧಃ- ಶತ್ರುಗಳೆಂಬ ಮೃಗಗಳಿಗೆ ಬೇಡನೂ, ಉದಯೀ- ಅಭ್ಯುದಯಶೀಲನೂ ಆದ, ಸಃ- ಆ ಕೃಷ್ಣನು, ಪುರಃ- ಮೊದಲೇ, ಆಜಿರಭಸಾತ್- ಯುದ್ಧದಲ್ಲಿ ಆಸಕ್ತಿಯನ್ನು ಹೊಂದಿದ್ದರಿಂದ, ಮಾನವಿಶಿಷ್ಟಂ- ಸ್ವಾಭಿಮಾನದಿಂದ ತುಂಬಿದ, ಸತ್ವಂ- ಪರಾಕ್ರಮವನ್ನು, ಆಲಭ್ಯ- ಪಡೆದು, ಮುದಾ- ಉತ್ಸಾಹದಿಂದ, ಹರೇಃನಾದಂ- ಸಿಂಹಗರ್ಜನೆಯನ್ನು, ಮುಕ್ತ್ವಾ- ಮಾಡಿ, ತದಾ- ಆಗ, ಏಕೌಘೈಃ- ಏಕಕಾಲದಲ್ಲಿ ಪ್ರಯೋಗಿಸಿದ, ರೋಪೈಃ- ಬಾಣಗಳಿಂದ, ಸಮಕಾಲಂ- ಆಕ್ಷಣದಲ್ಲೇ, ಅಭ್ರಂ- ಆಕಾಶವು, ತಸ್ತರೇ- ಮುಚ್ಚುವಂತೆ ಮಾಡಿದನು. ಈ ಶ್ಲೋಕದ ವೈಶಿಷ್ಟ್ಯ ಏನಪ್ಪಾ ಅಂತಂದ್ರೆ, ಚಿತ್ರದಲ್ಲಿ ತೋರಿಸಿರುವಂತೆ ಶ್ಲೋಕದ ಸಾಲುಗಳನ್ನು ಒಂದು ಚಕ್ರದ ರೀತಿಯಲ್ಲಿ ಬರೆಯಬಹುದು. ಒಂದನೇ ಎರಡನೇ ಮತ್ತು ಮೂರನೇ ಸಾಲುಗಳು ಚಕ್ರದ ‘ಕಡ್ಡಿ’ಗಳಾಗುತ್ತವೆ. ಅವನ್ನು ಮೇಲಿನಿಂದ ಕೆಳಕ್ಕೆ ಓದಿಕೊಳ್ಳಬೇಕು. ನಡುವಿನ ರ ಅಕ್ಷರವು ಮೂರೂ ಸಾಲುಗಳಿಗೆ ಸಾಮಾನ್ಯ. ಮೂರನೇ ಸಾಲಿನ ಕೊನೆಯ ಅಕ್ಷರದಿಂದ ಮೊದಲ್ಗೊಂಡು ಪ್ರದಕ್ಷಿಣಾಕಾರವಾಗಿ ಚಕ್ರದ ಪರಿಧಿಯಗುಂಟ ನಾಲ್ಕನೇ ಸಾಲನ್ನು ಓದಿಕೊಳ್ಳಬೇಕು. ಮೊದಲಕ್ಷರ ಮತ್ತು ಕೊನೆಯಕ್ಷರ ಒಂದೇ. ಇಷ್ಟೇನಾ ವಿಶೇಷ? ಊಹುಂ. ಈಗ ಚಕ್ರದಲ್ಲೇ ಎರಡು ಒಳಚಕ್ರಗಳಿವೆಯಲ್ಲ, ಅವುಗಳಲ್ಲಿನ ಅಕ್ಷರಗಳನ್ನು ಪ್ರದಕ್ಷಿಣಾಕಾರವಾಗಿ ಓದಿ. ‘ಶಿಶುಪಾಲವಧ’ ಎಂದು ಒಳಗಿನ ಚಕ್ರದಲ್ಲೂ, ‘ಮಾಘಕಾವ್ಯಮಿದಂ’ ಎಂದು ಅದರ ಹೊರಗಿನ ಚಕ್ರದಲ್ಲೂ ಕಾಣಿಸಿತೇ? ಅದು, ಮಾಘ ಕವಿಯ ಸ್ವಾಭಿಮಾನದ ಸಿಹಿಸಿಹಿಯಾದ ಸಹಿ; ‘ಶಿಶುಪಾಲವಧ ಮಾಘಕಾವ್ಯಮಿದಂ’ ಎಂಬ ಅಧಿಕೃತ ಮೊಹರು. ಭಲೇ ಮಾಘ! ಹ್ಯಾಟ್ಸ್ ಆಫ್ ಟು ಯೂ!Version: 20240320
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.