Episodes

Thursday Sep 26, 2013
Are You You?
Thursday Sep 26, 2013
Thursday Sep 26, 2013
ದಿನಾಂಕ 22 ಸೆಪ್ಟೆಂಬರ್ 2013
ನೀನು ನೀನೇನಾ?
[ವಿಜಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿ ‘ವಿಜಯವಿಹಾರ’ದಲ್ಲಿ ಪ್ರಕಟವಾದ ಲೇಖನ ]* ಶ್ರೀವತ್ಸ ಜೋಶಿ
ಅದು, ಕೆಲ ದಿನಗಳ ಹಿಂದೆ ನನಗೆ ಬಂದಿದ್ದ ಒಂದು ಮಿಂಚಂಚೆಯ ವಿಷಯಸಾಲು (ಸಬ್ಜೆಕ್ಟ್ ಲೈನ್). ನಾನು ಚಂದಾದಾರನಾಗಿರುವ ಇಲ್ಲಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಇ-ಸುದ್ದಿಪತ್ರ ವಿಭಾಗದವರು ಕಳಿಸಿದ ಮಿಂಚಂಚೆಯದು. “Are you, you?” ಎಂದು ಅವರ ಪ್ರಶ್ನೆ. ನಾನು ನಾನೇ (ಅಂದರೆ ಅವರ ದೃಷ್ಟಿಕೋನದಿಂದಾದರೆ ನೀನು ನೀನೇ) ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಪ್ರಶ್ನೆ. ಹಾಗೆ ಕೇಳುತ್ತಿರುವುದಕ್ಕೆ ಕಾರಣವನ್ನೂ ಮಿಂಚಂಚೆಯಲ್ಲಿ ವಿವರಿಸಿದ್ದರು. ಇ-ಸುದ್ದಿಪತ್ರ ಪಡೆಯಲು ಯಾರೆಲ್ಲ ಯಾಹೂ ಇಮೇಲ್ ವಿಳಾಸ ಬಳಸುತ್ತಾರೋ ಅವರಿಗೆಲ್ಲ ಆ ಪ್ರಶ್ನೆ ಕೇಳಿದ್ದಾರಂತೆ. ಬೇನಾಮಿ ಇಮೇಲ್ ಐಡಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಯಾಹೂ ಕಂಪನಿ ಇತ್ತೀಚೆಗೆ ಪ್ರಕಟಣೆ ಹೊರಡಿಸಿದೆ; ನಿಮ್ಮ ಯಾಹೂ ಐಡಿ ಬೇನಾಮಿ ಅಲ್ಲ ತಾನೆ? ನೀವು ಈಗಲೂ ಅದನ್ನು ಬಳಸುತ್ತೀರಿ ತಾನೆ? ಅದೇ ಯಾಹೂ ವಿಳಾಸಕ್ಕೆ ನಾವು ಕಳಿಸುವ ಇ-ಸುದ್ದಿಪತ್ರ ನಿಮಗೆ ನಿಯಮಿತವಾಗಿ ತಲುಪುತ್ತಿದೆ ತಾನೆ? ಎಂದು ಮುಂತಾದ ಉಭಯಕುಶಲೋಪರಿ ವಿಚಾರಣೆ ಅವರ ಉದ್ದೇಶ. ಅಷ್ಟೇಅಲ್ಲ, ನೀನು ನೀನೇ ಹೌದು ಅಂತಾದರೆ ಈ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂಬ ಒಕ್ಕಣೆಯೂ ಆ ಮಿಂಚಂಚೆಯಲ್ಲಿತ್ತು.
ನನ್ನ ಯಾಹೂ ವಿಳಾಸ ಬೇನಾಮಿ ಏನಲ್ಲ. ನಾನದನ್ನು ದಿನಾ ಬಳಸುತ್ತೇನೆ. ವಾಷಿಂಗ್ಟನ್ ಪೋಸ್ಟ್ನ ಇ-ಸುದ್ದಿಪತ್ರ ಸಹ ನನ್ನ ಯಾಹೂ ಡಬ್ಬಕ್ಕೆ ಪ್ರತಿದಿನವೂ ಸುಸೂತ್ರವಾಗಿ ಬಂದು ಬೀಳುತ್ತದೆ. ಹಾಗಾಗಿ ಆ ಮಿಂಚಂಚೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಾದ್ದೇನಿಲ್ಲ. ಪರಂತು "Are you, you?" ಎಂಬ ಪ್ರಶ್ನೆ ಮಾತ್ರ ನನಗೆ ಮೊದಲು ಒಂಚೂರು ತಮಾಷೆಯಾಗಿ, ಆಮೇಲೆ ಸ್ವಲ್ಪ ಕೆಣಕು-ತಿಣುಕಾಗಿ, ಮತ್ತೂ ಯೋಚಿಸಿದರೆ ಜಿಜ್ಞಾಸೆಯಾಗಿ, ಆಳಕ್ಕಿಳಿದಂತೆಲ್ಲ ತತ್ತ್ವಜ್ಞಾನದ ಸವಾಲಾಗಿ ಕಂಡುಬಂತು! ಒಮ್ಮೆ ನೀವೂ ಯೋಚಿಸಿ ನೋಡಿ- "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ತತ್ಕ್ಷಣದ ಉತ್ತರ?
ಅಂತರಜಾಲದಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ಈ ‘ನೀನು ನೀನೇನಾ?’ ಎನ್ನುವ ಪ್ರಶ್ನೆ ಯಾವಾಗಲೂ ಪ್ರಸ್ತುತವೇ. ಅದಕ್ಕೋಸ್ಕರವೇ ಪಾಸ್ವರ್ಡುಗಳು, ಕಂಪ್ಯೂಟರ್ ಬಳಕೆದಾರನ ಪರಿಚಯವನ್ನು ಸರಿಯಾಗಿ ತಿಳಿದುಕೊಳ್ಳಲು ಪರಿಪರಿಯ ಪರಿಕರಗಳು ವಿಧಾನಗಳೆಲ್ಲ ಇರುವುದು. ಕೆಲವು ಜಾಲತಾಣಗಳಲ್ಲಂತೂ "ನೀನೊಬ್ಬ ರೋಬಾಟ್ ಅಲ್ಲ, ಸಾಮಾನ್ಯ ಮನುಷ್ಯ ಎಂದು ದೃಢಪಡಿಸುವುದಕ್ಕಾಗಿ ಇಂಥದನ್ನು ಮಾಡಿತೋರಿಸು..." ಎಂದು ನಿರ್ದೇಶನವೂ ಇರುತ್ತದೆ! ಕಂಪ್ಯೂಟರ್ ವ್ಯವಸ್ಥೆಯನ್ನು ಅತ್ಯಂತ ಸುಭದ್ರಗೊಳಿಸಿದ್ದೇವೆ ಎಂದು ಯಾರು ಎಷ್ಟು ಹೆಮ್ಮೆಯಿಂದ ಹೇಳಿಕೊಂಡರೂ ರಂಗೋಲಿ ಕೆಳಗೆ ತೂರಬಲ್ಲ ಚೋರಚಾಣಾಕ್ಷರು ಇರುವುದರಿಂದ ಅವೆಲ್ಲ ಅನಿವಾರ್ಯವೂ ಹೌದು. ಮತ್ತೆ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯವರು ನನಗೆ ಮಿಂಚಂಚೆ ಬರೆದು ನೀನು ನೀನೇನಾ ಎಂದು ಕೇಳಿದ್ದಾದರೂ ಆ ದಿಸೆಯಲ್ಲೇ.
ನನಗೆ ತಮಾಷೆ ಅನಿಸಿದ್ದೇನೆಂದರೆ ಒಂದುವೇಳೆ ಆ ಪ್ರಶ್ನೆಗೆ ಕಡ್ಡಾಯವಾಗಿ (ಹೌದು ಅಂತಾದ್ರೂ, ಅಲ್ಲ ಅಂತಾದ್ರೂ) ಉತ್ತರಿಸಲೇಬೇಕು ಅಂತಿದ್ದಿದ್ದರೆ ಹೇಗೆ ಉತ್ತರಿಸುವುದು? ಪುರಾವೆ ಹೇಗೆ ಒದಗಿಸುವುದು? ನೆನಪಿರಲಿ- ಅವರು ಕೇಳಿದ್ದು ‘ನೀನು ಶ್ರೀವತ್ಸ ಜೋಶಿನಾ?’ ಅಂತಲ್ಲ. ಹಾಗೊಂದು ವೇಳೆ ಕೇಳಿದ್ದಿದ್ದರೆ ನಾನೇ ಶ್ರೀವತ್ಸ ಜೋಶಿ ಎಂದು ಸಾರುವ ಯಾವುದಾದರೂ ಗುರುತುಪತ್ರವನ್ನು- ಡ್ರೈವಿಂಗ್ಲೈಸೆನ್ಸೋ ಪಾಸ್ಪೋರ್ಟೋ ಇನ್ನೊಂದೋ ಮತ್ತೊಂದೋ ಏನನ್ನಾದರೂ ತೋರಿಸಬಹುದಾಗಿತ್ತು. ಭಾರತದಲ್ಲಾಗಿದ್ರೆ ‘ಆಧಾರ್’ ಕಾರ್ಡನ್ನೇ ಆಧಾರವಾಗಿ ತೋರಿಸಬಹುದಾಗಿತ್ತು ಎನ್ನಿ. ಆದರೆ ಸಮಸ್ಯೆ ಇರೋದು ನಾನು ನಾನೇ ಎಂದು, ಅಥವಾ ನಾನು ನಾನಲ್ಲ ಎಂದು ಉತ್ತರಿಸುವುದರಲ್ಲಿ!
ಸಮಸ್ಯೆಯ ವಿಶ್ಲೇಷಣೆಗೆ ಮೊದಲು, ಒಂದೆರಡು ಲಘು ಪ್ರಸಂಗಗಳನ್ನು ಮೆಲುಕುಹಾಕೋಣ.
ನಾನು ಪಿಯುಸಿ ಓದುತ್ತಿದ್ದಾಗ ನಮ್ಮ ತರಗತಿಯಲ್ಲಿ ನಂದಾ ಮತ್ತು ನೀನಾ ಎಂಬ ಹೆಸರಿನ ಇಬ್ಬರು ಹುಡುಗಿಯರಿದ್ದರು. ಹಾಜರಿಪಟ್ಟಿಯಲ್ಲಿ ಅವರಿಬ್ಬರ ಹೆಸರುಗಳು ಅನುಕ್ರಮದಲ್ಲಿದ್ದವು. ನಮ್ಮ ಕೆಮೆಸ್ಟ್ರಿ ಪ್ರೊಫೆಸರರು ಬೇಕಂತಲೇ "ನಂದಾ ನೀನಾ?" ಎಂದು ಪ್ರಶ್ನೆಕೇಳುವ ಧಾಟಿಯಲ್ಲಿ ಹಾಜರಿ ಕರೆಯೋರು. ನಂದಾ ಮತ್ತು ನೀನಾ ಇಬ್ಬರೂ ಒಟ್ಟೊಟ್ಟಿಗೇ ಯಸ್ ಸಾರ್ ಎನ್ನೋರು. "ನಾನು ಒಬ್ಬಳನ್ನೇ ಮಾತಾಡ್ಸಿದ್ದಮ್ಮಾ ಇಬ್ಬರೂ ಯಾಕೆ ಎದ್ದುನಿಂತ್ರಿ?" ಎಂದು ಪ್ರೊಫೆಸರ್ ಪ್ರಶ್ನೆ. ಆಮೇಲೆ ನಂದಾಳನ್ನುದ್ದೇಶಿಸಿ “ನಿನ್ನ ಹೆಸರೇನಮ್ಮಾ?" ಎಂದು ಕೇಳಿದರೆ ಆಕೆ ‘ನಂದಾ’ ಎಂದಾಗ "ಹೌದಮ್ಮ ನಿನ್ನದೇ ಹೆಸರು ಕೇಳಿದ್ದು" ಎನ್ನೋರು. ಅಂತೂ ಒಳ್ಳೇ ತಮಾಷೆ. ನಂದಾ-ನೀನಾಗಳಂತೆಯೇ ಹೆಸರುಗಳಲ್ಲೇ ತರ್ಕ ಹುಟ್ಟಿಸಬಹುದಾದ ಇನ್ನೊಂದು ಪ್ರಸಂಗವೆಂದರೆ(ಇದು ಕಾಲ್ಪನಿಕ)- ಹಿಂದಿ ಚಿತ್ರರಂಗದ ನಾನಾ ಪಾಟೇಕರ್ ಮತ್ತು ನೀನಾ ಗುಪ್ತಾ ಇವರಿಬ್ಬರೂ ಕನ್ನಡದಲ್ಲಿ, ಅದರಲ್ಲೂ ಪರಸ್ಪರ ಹೆಸರು ಕೂಗಿ ಮಾತಾಡಿದರೆ? "ನಾನಾ? ನೀನಾ?" ಎಂಬ ಸಂದೇಹ ನಿವಾರಣೆಯಲ್ಲೇ ಕಾಲ ಕಳೆದುಹೋಗಬಹುದು. ಅವರ ಜತೆ ಮಾಧುರಿ ದೀಕ್ಷಿತ್ ‘ನೇನೆ’ ತೆಲುಗಿನಲ್ಲಿ ಮಾತನಾಡುತ್ತ ಸೇರಿಕೊಂಡರೆ ಕಥೆ ಮುಗೀತು. ಹಿನ್ನೆಲೆಯಲ್ಲಿ ಗಡಿಬಿಡಿ ಗಂಡ ಚಿತ್ರದ ಹಾಡು. ಅದೇ- ರವಿಚಂದ್ರನ್ ಮತ್ತು ತಾಯ್ನಾಗೇಶ್ ಪರಸ್ಪರ ಚಾಲೆಂಜ್ ಹಾಕಿಕೊಳ್ತಾರಲ್ಲ ‘ನೀನು ನೀನೇ ಇಲ್ಲಿ ನಾನು ನಾನೇ... ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯ ದಾಸಾನುದಾಸ...’
ಕನ್ನಡ-ತೆಲುಗು ಅಷ್ಟೇಅಲ್ಲ. ಇಂಗ್ಲಿಷ್ನ ಮಜಾ ಕೇಳಿ. ಎಂಜಿನಿಯರಿಂಗ್ ಕಾಲೇಜಲ್ಲಿ ಯು.ಆರ್.ಸುಬ್ರಹ್ಮಣ್ಯ ಎಂಬ ಹೆಸರಿನ ಸಹಪಾಠಿಯೊಬ್ಬನಿದ್ದ. ಅವನನ್ನು ನಮ್ಮ ಲೆಕ್ಚರರ್ರು "ಆರ್ ಯೂ ಸುಬ್ರಹ್ಮಣ್ಯ?" ಎಂದು ಕೇಳಿದಾಗಲೆಲ್ಲ ಅವನು "ಯು.ಆರ್.ಸುಬ್ರಹ್ಮಣ್ಯ" ಎಂದು ಉತ್ತರಿಸುತ್ತಿದ್ದ, ತನ್ನ ಇನಿಶಿಯಲ್ಸನ್ನು ಆಚೀಚೆ ಮಾಡಿ ಕೇಳಿದ್ದಕ್ಕೆ ಮುನಿಸಿಕೊಂಡು. "ನನ್ನ ಹೆಸರು ಸುಬ್ರಹ್ಮಣ್ಯ ಅಲ್ಲಪ್ಪಾ, ನೀನು ಸುಬ್ರಹ್ಮಣ್ಯನಾ?" ಎಂದು ಕನ್ನಡದಲ್ಲಿ ಕೇಳಿ ಲೆಕ್ಚರರ್ ಗದರಿಸುತ್ತಿದ್ದರು ಹುಸಿಕೋಪದಿಂದ. "ಯು.ಆರ್" ಎಂಬ ಇನಿಶಿಯಲ್ಸ್ ಇರುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯವರಿಗೂ ಇಂಥದೇ ಸ್ವಾರಸ್ಯಕರ ಪೀಕಲಾಟಗಳು ಒಮ್ಮೆಯಾದರೂ ಎದುರಾಗಿವೆಯಿರಬಹುದು.ಹೆಸರಿನಿಂದಲೇ ಹುಟ್ಟಿಕೊಳ್ಳುವ ‘ಐಡೆಂಟಿಟಿ ಕ್ರೈಸಿಸ್’ ಅದು! ಆದರೂ ನಮ್ಮ ಐಡೆಂಟಿಟಿಗೆ ಮೊದಲನೆಯದಾಗಿ ಜೋಡಣೆಯಾಗುವುದು ನಮ್ಮ ಹೆಸರೇ. ಇಬ್ಬರು ವ್ಯಕ್ತಿಗಳಿಗೆ ಒಂದೇ ಹೆಸರಿದ್ದರೆ ಅಡ್ಡಹೆಸರು, ಊರಿನ ಹೆಸರು, ಇನಿಶಿಯಲ್ಸು ಇತ್ಯಾದಿ. ನಾಮದ ಬಲವೊಂದೇ ಸಾಕಾಗದಿದ್ದರೆ ಭಾವಚಿತ್ರ. ಹಾಗಾಗಿಯೇ "ಯಾವುದಾದರೂ ಫೋಟೊ ಐಡಿ ತೋರಿಸಲೇಬೇಕು" ಎನ್ನುವುದು ಜಾಗತಿಕವಾಗಿ ಒಂದು ರೂಢಿ ಎನ್ನುವುದಕ್ಕಿಂತಲೂ ನಿಯಮವೇ ಆಗಿಬಿಟ್ಟಿದೆ. ಭಾವಚಿತ್ರವೇ ಎಲ್ಲವನ್ನೂ ತಿಳಿಸಬಲ್ಲುದೇ? ನಿಮಗೆ ಒಂದು ಹಳೆಯ ಹಿಂದಿ ಸಿನೆಮಾಹಾಡು, ಕಿನಾರಾ ಚಿತ್ರದ್ದು, ನೆನಪಿರಬಹುದು- "ನಾಮ್ ಗುಮ್ ಜಾಯೇಗಾ... ಚೆಹರಾ ಯೇ ಬದಲ್ ಜಾಯೇಗಾ... ಮೇರೀ ಆವಾಜ್ ಹೀ ಪೆಹಚಾನ್ ಹೈ ಗರ್ ಯಾದ್ ರಹೇ..." ಅಂದರೆ, ಹೆಸರು ಮರೆತು ಹೋಗಬಹುದು; ಮುಖಚರ್ಯೆ ಬದಲಾಗಬಹುದು. ಆದರೆ ನನ್ನ ಧ್ವನಿಯನ್ನು ನೆನಪಿಟ್ಟುಕೊಂಡರೆ ಅದೇ ನನ್ನ ಪರಿಚಯದ ಗುರುತು ಎನ್ನುತ್ತಾಳೆ ಚಿತ್ರದ ನಾಯಕಿ!
ಹೆಸರು, ಮುಖಚರ್ಯೆ, ಧ್ವನಿ ಎಲ್ಲ ಪರಿಚಯವಾಗಿದ್ದರೂ ಶಕುಂತಲೆಯನ್ನು ಮರೆತೇಬಿಟ್ಟನಲ್ಲ ದುಷ್ಯಂತ ಮಹಾರಾಜ? ಅದಕ್ಕೇನನ್ನೋಣ? ಅವನು ಕೊಟ್ಟಿದ್ದ ಉಂಗುರವಾದರೂ ಪರಿಚಯಪ್ರಮಾಣ ಆಗಬಹುದೆಂದು ಆಕೆ ಬಗೆದರೆ ಅದೂ ಕಳೆದುಹೋಗಬೇಕೇ! ವಿಧಿವಿಪರೀತ ವಿಧಿಯಾ ಆಟ. ಮತ್ತದೇ ಪ್ರಶ್ನೆ. ನೀನು ನೀನೇನಾ ಎಂದು ಕೇಳಿದರೆ ಉತ್ತರಿಸುವುದೆಂತು? ನಾನು ನಾನೇ ಎನ್ನಲು ಆಧಾರವೆಂತು? ಈ ಪ್ರಪಂಚದಲ್ಲಿ ಒಬ್ಬೊಬ್ಬ ವ್ಯಕ್ತಿಯ ಬೆರಳಚ್ಚು ವಿನ್ಯಾಸ (ಫಿಂಗರ್ಪ್ರಿಂಟ್)ಗಳು ಅನನ್ಯವಾಗಿರುತ್ತವೆ ಎಂದು ವಿಜ್ಞಾನದಿಂದ ಕಂಡುಕೊಂಡಿದ್ದೇವೆ. ಅಕ್ಷರಸ್ಥರಾಗಿಯೂ ಹೆಬ್ಬೆಟ್ಟು ಒತ್ತುವ ಸಂದರ್ಭಗಳನ್ನು ನಿಯಮಗಳಿಗೋಸ್ಕರ ರೂಪಿಸಿಕೊಂಡಿದ್ದೇವೆ. ಅಮೆರಿಕದಲ್ಲಿ ವಿಮಾನನಿಲ್ದಾಣದಲ್ಲಿ ಇಳಿದೊಡನೆ ಊರಿನೊಳಗೆ ಪ್ರವೇಶಿಸುವ ಮೊದಲು ಫಿಂಗರ್ಪ್ರಿಂಟುಗಳ ತಪಾಸಣೆ ಆಗಲೇಬೇಕು. ಈಗ ಬೆರಳಚ್ಚುಗಳಷ್ಟೇ ಅಲ್ಲ, ಕಣ್ಣಿನ ಪಾಪೆ ಸಹ ಪ್ರತಿಯೊಬ್ಬ ವ್ಯಕ್ತಿಯದೂ ಅನನ್ಯ ವಿನ್ಯಾಸದ್ದಾಗಿರುತ್ತದೆಂದು ತಿಳಿದುಬಂದಿರುವುದರಿಂದ Iris identification ಅಂತಲೂ ಶುರುವಾಗಿದೆ. ಗುರುತಿನ ಅಗತ್ಯ ಮತ್ತಷ್ಟು ಗುರುತರವಾದರೆ ಡಿಎನ್ಎ ಟೆಸ್ಟಿಂಗ್ ಸಹ ಇದ್ದೇಇದೆಯಲ್ಲ?
ಆದರೆ ನನ್ನ ಜಿಜ್ಞಾಸೆಗೆ ಅದಾವುದೂ ಸಮರ್ಪಕವಾಗಿ ಉತ್ತರ ಕೊಡಲಾರದು. ಯಾಕೆ ಹೇಳಿ? ದೈಹಿಕ ಲಕ್ಷಣಗಳಿಂದ ನಾನು ನಾನೇ ಎಂದು ನಿರ್ಧರಿಸುವುದೇ ಆದಲ್ಲಿ ನನ್ನ ದೇಹದ ಒಂದೊಂದೇ ಅಂಗವನ್ನು ಬದಲಾಯಿಸುತ್ತಾ ಹೋದರೆ ನಾನು ನಾನಾಗಿಯೇ ಇರುತ್ತೇನೆಯೇ? ‘ಥೀಸಿಯಸ್ನ ಹಡಗಿನ ಕತೆ’ಯನ್ನು ನೀವು ಕೇಳಿರಬಹುದು/ಓದಿರಬಹುದು. ಮೊನ್ನೆಮೊನ್ನೆ ಅದೇ ಹೆಸರಿನ ಒಂದು ಸಿನೆಮಾ ಸಹ ಬಿಡುಗಡೆಯಾಗಿದೆಯಂತೆ. ಥೀಸಿಯಸ್ ಎಂಬ ನಾವಿಕ ಹಡಗಿನಲ್ಲಿ ಹೊರಟವನು ದಾರಿಯುದ್ದಕ್ಕೂ ತನ್ನ ಹಡಗಿನ ಒಂದೊಂದೇ ಭಾಗವನ್ನು ಬದಲಾಯಿಸುತ್ತ ಹೋಗಬೇಕಾಗುತ್ತದೆ. ಗಮ್ಯಸ್ಥಾನ ತಲುಪುವಾಗ ಅವನ ಹಡಗಿನ ಪ್ರತಿಯೊಂದು ಭಾಗವೂ ಹೊಸತು ಜೋಡಿಸಿದ್ದಾಗಿರುತ್ತದೆ. ಆದರೂ ಜನ ಅದನ್ನು ಥೀಸಿಯಸ್ನ ಹಡಗು ಎಂದೇ ಗುರುತಿಸುತ್ತಾರೆ. ಥೀಸಿಯಸ್ ಬಿಸಾಡಿದ ಭಾಗಗಳನ್ನೆಲ್ಲ ಸೇರಿಸಿ ಇನ್ನೊಂದು ಹಡಗನ್ನು ಒಬ್ಬಾತ ನಿರ್ಮಿಸುತ್ತಾನೆ. ಅಸಲಿಗೆ ಅದೇ ಥೀಸಿಯಸ್ನ ಒರಿಜಿನಲ್ ಹಡಗು ಅಲ್ಲವೇ? ಅದೇರೀತಿ ಒಂದುವೇಳೆ ನನ್ನ ದೇಹದ ಅಂಗಗಳನ್ನು (ನನಗೆ ಹೊಸದನ್ನು ಜೋಡಿಸುವಾಗ ಬಿಸಾಡಿದ ಹಳೆಯವನ್ನು) ಜೋಡಿಸಿ ಹೊಸದೊಂದು ವ್ಯಕ್ತಿಯಾದರೆ ಅದೂ ನಾನೇ ಆಗಿರುತ್ತೇನೆಯೇ? ಹಾಗಾದರೆ ನಾನು ಯಾರು? ಕನಕದಾಸರು ‘ನಾನು ಹೋದರೆ ಹೋದೇನು’ ಎಂದು ಹೇಳಿದಾಗಿನ ‘ನಾನು’ ನಾನೇ?
ತರ್ಕ ಮಾಡುತ್ತ ಹೋದರೆ ಈ ಜಿಜ್ಞಾಸೆಯು ದೇಹ-ಆತ್ಮ, ಪ್ರಕೃತಿ-ಪುರುಷ, ದ್ವೈತ-ಅದ್ವೈತ ಸಿದ್ಧಾಂತಗಳನ್ನೆಲ್ಲ ದಾಟಿ ಅಹಂ ಬ್ರಹ್ಮಾಸ್ಮಿ ಎಂದುಕೊಂಡು ಪರಬ್ರಹ್ಮನ ಪದತಲದವರೆಗೂ ಹೋಗಬಹುದೇನೋ. ತತ್ತ್ವಮಸಿ (ತತ್ ತ್ವಮ್ ಅಸಿ = ಅದು ನೀನೇ ಆಗಿರುವಿ) ಎಂಬ ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯದವರೆಗೂ ತಲುಪಬಹುದೇನೋ. ಅಣೋರಣೀಯನೂ ಮಹತೋಮಹೀಯನೂ ಅಪ್ರಮೇಯನೂ ನಿರಾಕಾರನೂ ಸರ್ವಾಂತರ್ಯಾಮಿಯೂ ಆದ ಪರಬ್ರಹ್ಮನಿಗೇ ನಾವು ತತ್ತ್ವಮಸಿ ಎಂದು ಗುರುತುಪತ್ರ ಕೊಡಬಲ್ಲೆವು, ಆದರೆ ನನಗೆ ನಿಮಗೆ ಸರಿಯಾದ ಗುರುತಿಲ್ಲವೆಂದರೆ ಆ ಪರಬ್ರಹ್ಮನಿಗೂ ನಗು ಬಂದೀತು!
ಅಬ್ಬಾ! ಒಂದು ಇಮೇಲ್ ಸಬ್ಜೆಕ್ಟ್ ಲೈನ್ ನಮ್ಮೆಲ್ಲ ಆಲೋಚನೆಗಳನ್ನು ಬುಡಮೇಲು ಮಾಡಿ ಇಷ್ಟು ಗಹನವಾದ ಸಬ್ಜೆಕ್ಟ್ ಆಗಿಬಿಟ್ಟಿತಲ್ಲ! ಪ್ರಶ್ನೆ ಇರೋದೇ ಸಬ್ಜೆಕ್ಟ್ ಯಾವುದು ಒಬ್ಜೆಕ್ಟ್ ಯಾವುದು ಎನ್ನುವುದಲ್ಲವೇ? ಈಗ ಹೇಳಿ, "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ಉತ್ತರ?


["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]

Wednesday Sep 25, 2013
Hasigodeyalli Haralu
Wednesday Sep 25, 2013
Wednesday Sep 25, 2013
ದಿನಾಂಕ 15 ಎಪ್ರಿಲ್ 2012ರ ಸಂಚಿಕೆ...
ಹಸಿ ಗೋಡೆಯಲಿ ನೆಟ್ಟ ಹರಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ‘ಹಳಗನ್ನಡ ಕಾವ್ಯದ ಪದ್ಯಭಾಗಗಳು ನಿಮ್ಮ ಸಂಗ್ರಹದಲ್ಲಿ ಯಾವುದಾದರೂ ಇವೆಯೇ, ಅಂತರ್ಜಾಲದಲ್ಲಿ ಸಿಕ್ಕಿದ್ದೂ ಆಗುತ್ತದೆ, ಅಥವಾ ನಿಮ್ಮ ಬಳಿ ಹಳೆಯ ಗ್ರಂಥಗಳಾವುದಾದರೂ ಇದ್ದರೆ ಅದರ ಒಂದೆರಡು ಪುಟಗಳನ್ನು ಸ್ಕ್ಯಾನ್ ಮಾಡಿದ್ದೂ ಆದೀತು. ಅರ್ಥಸಹಿತ ವಿವರಣೆಯಿದ್ದರೆ ಮತ್ತೂ ಒಳ್ಳೆಯದು. ಕಳಿಸಿಕೊಡಲಿಕ್ಕಾಗುತ್ತದೆಯೇ?’ - ಎಂಬ ಒಕ್ಕಣೆಯ ಪತ್ರವನ್ನು ಅಮೆರಿಕನ್ನಡಿಗ ಸ್ನೇಹಿತರೊಬ್ಬರು ಒಮ್ಮೆ ನನಗೆ ಬರೆದಿದ್ದರು. ಅವರಿರುವ ಊರಿನ ಕನ್ನಡಸಂಘದಲ್ಲಿ ಸಾಹಿತ್ಯಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದರಂತೆ. ಹೆಚ್ಚುಹೆಚ್ಚು ಜನ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು ಎಲ್ಲರನ್ನೂ ಉತ್ತೇಜಿಸಿದ್ದರಂತೆ (ಪ್ರೀತಿಯಿಂದ ಒತ್ತಾಯಿಸಿದ್ದರು ಅಂತಿಟ್ಕೊಳ್ಳಿ). ಅದಕ್ಕೆ ನನ್ನ ಸ್ನೇಹಿತ ಭರ್ಜರಿ ತಯಾರಿ ನಡೆಸಿದ್ದರು. ‘ಹಳಗನ್ನಡದ ಕಾವ್ಯವಾಚನ ಮಾಡಬೇಕೆಂಬ ಉಮೇದು ಬಂದಿದೆ. ನಿಮ್ಮಿಂದ ನೆರವು ಸಿಗಬಹುದೆಂದು ಊಹಿಸಿ ನಾನೂ ಹೆಸರು ಕೊಟ್ಟಿದ್ದೇನೆ’ ಎಂದು ಪತ್ರದಲ್ಲಿ ಸೇರಿಸಿದ್ದರು. ನನ್ನತ್ರ ಹಳಗನ್ನಡ ಕಾವ್ಯ ಸಿಕ್ಕೀತೆಂದು ಅವರಿಗೇಕೆ ಅನಿಸಿತೋ. ನಿಜಕ್ಕೂ ನನ್ನ ಬಳಿ ಅಂಥ ಪುಸ್ತಕಗಳಾವುವೂ ಇಲ್ಲ. ಆದರೆ ಅವರ ಉತ್ಸಾಹಭಂಗ ಮಾಡುವ ಮನಸ್ಸಾಗಲಿಲ್ಲ. ‘ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಇದ್ದ ಕೆಲವು ಪದ್ಯಗಳು ಬಹುಶಃ ಹಳಗನ್ನಡ ಕ್ಯಾಟೆಗರಿಗೆ ಸೇರುವಂಥವು; ಅವುಗಳ ಸಾಲುಗಳೇನಾದ್ರೂ ಸರಿಯಾಗಿ ನೆನಪಿಗೆ ಬಂದರೆ, ಅಥವಾ ಇಂಟರ್ನೆಟ್ನಲ್ಲಿ ಸಿಕ್ಕಿದ್ರೆ ಇಮೇಲ್ ಮಾಡ್ತೇನೆ’ ಎಂದು ಉತ್ತರ ಬರೆದೆ. ತತ್ಕ್ಷಣಕ್ಕೆ ಹೊಳೆದದ್ದು ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು. ಹಾಗೆಯೇ ‘ಲೋಹಿತಾಶ್ವನ ಸಾವು’ ಎಂಬ ಪದ್ಯ. ಅವೆರಡೂ ನಮಗೆ ಐದನೇ ತರಗತಿಯ ಪಠ್ಯದಲ್ಲಿ ಇದ್ದವು. ಸೋಮೇಶ್ವರ ಶತಕದ ಪದ್ಯಗಳು ಇಂಟರ್ನೆಟ್ನಲ್ಲಿ ಸುಲಭವಾಗೇ ಸಿಕ್ಕಿದವು. ‘ಪ್ರಜೆಯಂ ಪಾಲಿಸಬಲ್ಲೊಡಾತನರಸಂ...’, ‘ಉಡುರಾಜಂ ಕಳೆಗುಂದಿ ಪೆರ್ಚದಿಹನೆ...’, ಮತ್ತು ‘ರವಿಯಾಕಾಶಕೆ ಭೂಷಣಂ...’ ಮುಂತಾದ ಚೌಪದಿಗಳಿಗಂತೂ ಪ್ರತಿಯೊಂದು ಪದದ ಅರ್ಥವಿವರಣೆಯೂ ಇತ್ತು. ಕಾವ್ಯವಾಚನ ಕಾರ್ಯಕ್ರಮಕ್ಕೆ ಇದು ಧಾರಾಳವಾಯ್ತು. ಅಲ್ಲದೇ ಸೋಮೇಶ್ವರ ಶತಕ ಬರೆದ ಕವಿಯ ಬಗ್ಗೆಯೂ ನನ್ನ ಸ್ನೇಹಿತರಿಗೆ ಹೆಮ್ಮೆಯಿಂದ ತಿಳಿಸಬಹುದು ಎಂದುಕೊಂಡೆ. ‘ಸದ್ಯಕ್ಕೆ ಇದನ್ನು ನೋಡಿಟ್ಟುಕೊಳ್ಳಿ. ನಿಮಗೆ ವಾಚನಕ್ಕೆ ಸರಳವಾಗಿ ಅನುಕೂಲಕರವಾಗಿ ಇದೆ. ಅರ್ಥವಿವರಣೆಯೂ ಇದೆ. ಆದರೂ, ಲೋಹಿತಾಶ್ವನ ಸಾವು ಪದ್ಯವನ್ನು ಹೇಗಾದರೂ ಸಂಗ್ರಹಿಸಿ ನಿಮಗೆ ಕಳಿಸಿಕೊಡಬೇಕೆಂದೇ ನನಗೆ ಆಸೆ ಇರುವುದು. ನಿಮ್ಮ ಕಾರ್ಯಕ್ರಮದಲ್ಲಿ ನೀವು ಅದನ್ನೇನಾದ್ರೂ ವಾಚಿಸಿ ವ್ಯಾಖ್ಯಾನಿಸಿದ್ದೇ ಆದರೆ ಭಾರೀ ಮೆಚ್ಚುಗೆ ಗಳಿಸ್ತೀರಿ. ಒಂದೆರಡು ದಿನ ಕಾಲಾವಕಾಶ ಕೊಡಿ, ಹುಡುಕುತ್ತೇನೆ’ ಎಂದು ಅವರಿಗೆ ಪತ್ರಿಸಿದೆ. ‘ಲೋಹಿತಾಶ್ವನ ಸಾವು’ ಒಂದು ಅವಿಸ್ಮರಣೀಯ ಪದ್ಯ. ಕರುಳು ಕಿತ್ತುಬರುವಂತೆ ವಿಷಾದ ಮಡುಗಟ್ಟುವ ಪದ್ಯ. ನಾನು ಕಲಿತ ಏಕೋಪಾಧ್ಯಾಯ ಏಕಕೊಠಡಿಯ ಪ್ರಾಥಮಿಕ ಶಾಲೆಯಲ್ಲಿ, ಇಡೀ ಶಾಲೆಯೇ ಬಳಬಳನೆ ಕಣ್ಣೀರುಗರೆಯುತ್ತಿದ್ದ ಪದ್ಯಗಳೆಂದರೆ ಮೂರನೇ ತರಗತಿಯ ಪಠ್ಯದಲ್ಲಿದ್ದ ‘ಪುಣ್ಯಕೋಟಿ’ ಮತ್ತು ಐದನೇ ತರಗತಿಯ ಪಠ್ಯದಲ್ಲಿದ್ದ ‘ಲೋಹಿತಾಶ್ವನ ಸಾವು’. ಏಕೋಪಾಧ್ಯಾಯ ಏಕಕೊಠಡಿಯ ಶಾಲೆಯಾದ್ದರಿಂದ, ಆ ಪದ್ಯಗಳನ್ನು ಮಾಸ್ತರರು ಕಥೆಯಂತೆ ಬಣ್ಣಿಸುತ್ತಿದ್ದದ್ದನ್ನು ನಾವೆಲ್ಲ ಐದೈದು ವರ್ಷ ಕೇಳಿಸಿಕೊಂಡು ಕಣ್ಣೀರು ಸುರಿಸಿದ್ದೇವೆ. ಪುಣ್ಯಕೋಟಿಯದಾದರೂ ಸುಖಾಂತ್ಯ, ಆದರೆ ಲೋಹಿತಾಶ್ವ ಸತ್ತಾಗಿನ ಚಂದ್ರಮತಿಯ ಸಂಕಟವಂತೂ ವರ್ಣನಾತೀತ. ಈಗಲೂ ನೆನೆಸಿಕೊಂಡರೆ ಮನಸ್ಸು ಮಮ್ಮಲಮರುಗುತ್ತದೆ. ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ...’ ಎಂದು ಶುರುವಾಗುವ ಸಾಲುಗಳಿಂದ ಮೈಝುಮ್ಮೆನ್ನುತ್ತದೆ. ಅದು ನೆನಪುಳಿಯುವುದಕ್ಕೆ ಇನ್ನೊಂದು ಕಾರಣವೂ ಇದೆ. ಚಿಕ್ಕಂದಿನಲ್ಲಿ ಅಂತ್ಯಾಕ್ಷರಿ ಆಡುವಾಗ ನಾವು ಚಿತ್ರೇತರ ಗೀತೆಗಳನ್ನೂ ಸೇರಿಸಿಕೊಳ್ತಿದ್ವಿ. ‘ತ’ ಅಕ್ಷರ ಬಂದಾಗ ಮೊದಲು ನೆನಪಾಗ್ತಿದ್ದದ್ದು ಅದೇ ಪದ್ಯ. ಎಷ್ಟೆಂದರೂ ಶಾಲೆಯಲ್ಲಿ ಕಂಠಪಾಠ ಮಾಡಿದ್ದಲ್ವಾ? ಆದರೆ ಈಗ ಸರಿಯಾಗಿ ನೆನಪಿಗೆ ಬರ್ತಾ ಇಲ್ಲ! ಅರ್ಧಂಬರ್ಧವಾಗಿ, ತಪ್ಪುತಪ್ಪಾಗಿ ಬರೆದು ಕಳಿಸಿಕೊಡೋದು ತರವಲ್ಲ. ಅದು ಪದ್ಯಕ್ಕೆ, ಕವಿಗೆ ಅವಮಾನ. ಏನು ಮಾಡಲಿ? ಪದ್ಯದ ಸರಿಯಾದ ಸಾಹಿತ್ಯ ದೊರಕಿಸಿಕೊಳ್ಳುವ ಬಗೆಯೆಂತು? ಆಗ ನೆನಪಾದವರೇ ಜೆ.ಕೆ.ಮೋಹನ್ ರಾವ್ ಎಂಬೊಬ್ಬ ಹಿರಿಯ ಅಮೆರಿಕನ್ನಡಿಗರು. ಅವರು ಇಲ್ಲೇ ವಾಷಿಂಗ್ಟನ್ ಪ್ರದೇಶದಲ್ಲಿರುವವರು. ಒಂದೆರಡು ಸರ್ತಿ ಕನ್ನಡಸಂಘದಲ್ಲಿ ಭೇಟಿಯಾಗಿದ್ದೇನೆ. ಅವರೊಬ್ಬ ಕನ್ನಡ ಸಾಹಿತ್ಯದ ಹೈ-ಟೆಕ್ ಅಭಿಮಾನಿ ಎಂದೂ ಕೇಳ್ಪಟ್ಟಿದ್ದೇನೆ. ಹೈ-ಟೆಕ್ ಏಕೆಂದರೆ ಕನ್ನಡದ ಕೆಲವು ಹಳೆಯ ಗ್ರಂಥಗಳನ್ನು ಅವರು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅವರತ್ರ ‘ಲೋಹಿತಾಶ್ವನ ಸಾವು’ ಸಿಕ್ಕರೂ ಸಿಗಬಹುದು. ಒಮ್ಮೆ ಫೋನಾಯಿಸಿ ಕೇಳಲಿಕ್ಕೇನೂ ಅಡ್ಡಿಯಿಲ್ಲವಲ್ಲ. ಆ ಪದ್ಯವು ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಕೃತಿಯಲ್ಲಿ ಬರುತ್ತದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನು ಆಗಲೇ ಗುರುತುಮಾಡಿಟ್ಟಿದ್ದೆ. ಸ್ವಲ್ಪ ಅಳುಕುತ್ತಲೇ ದೂರವಾಣಿ ಕರೆಮಾಡಿ ‘ರಾಘವಾಂಕನ ಹರಿಶ್ಚಂದ್ರ ಕಾವ್ಯದ ಡಿಜಿಟಲ್ ಪ್ರತಿ ನಿಮ್ಮ ಸಂಗ್ರಹದಲ್ಲಿ ಇದೆಯೇ?’ ಎಂದು ಕೇಳಿದೆ. ‘ಖಂಡಿತವಾಗಿಯೂ ಇದೆ, ಈಗಲೇ ಕಳಿಸಿಕೊಡ್ತೇನೆ’ ಮೋಹನರಾಯರ ಉತ್ತರ. ಅದಾದ ಒಂದು ನಿಮಿಷದೊಳಗೆ ನನ್ನ ಇಮೇಲ್ ಇನ್ಬಾಕ್ಸ್ನಲ್ಲಿ ಹರಿಶ್ಚಂದ್ರ ಕಾವ್ಯ ಪಿಡಿಎಫ್ ಕಡತ ಪ್ರತ್ಯಕ್ಷ. ಇಂಟರ್ನೆಟ್ಟನ್ನು ಇನ್ವೆಂಟಿಸಿದ ಟಿಮ್ ಬರ್ನರ್ಸ್ಗೆ ಜೈ ಹೋ! ಖುಷಿಯಿಂದಲೇ ಪಿಡಿಎಫ್ ತೆರೆದೆ. ಸುಮಾರು ೨೦೦ ಪುಟಗಳ ಗ್ರಂಥ. ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೩೧ರಲ್ಲಿ ಪ್ರಕಟವಾದದ್ದು. ಬಿ.ಎಂ.ಶ್ರೀಕಂಠಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳು ಸಂಪಾದಿಸಿದ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಸಂಗ್ರಹ. ಮೊದಲ ಐವತ್ತು ಪುಟಗಳಲ್ಲಿ ಪೀಠಿಕೆ, ಕವಿ-ಕಾವ್ಯ ಪರಿಚಯ, ರಾಘವಾಂಕನ ಗುಣಗಾನ ಇತ್ಯಾದಿ. ರಸವತ್ತಾದ ಕಥನಕ್ರಮ, ಸ್ಫುಟವಾದ ಪಾತ್ರಪ್ರದರ್ಶನ, ಸಹಜತೆಯುಳ್ಳ ಸಂಭಾಷಣೆ, ಭಾವಪ್ರಪಂಚ ಬಾಹ್ಯಪ್ರಪಂಚಗಳ ಖಚಿತವಾದ ವರ್ಣನೆಗಳು ಹೇಗೆ ಈ ಕಾವ್ಯವನ್ನು ಕನ್ನಡದ ಮೇರುಕೃತಿಗಳ ಸಾಲಲ್ಲಿ ನಿಲ್ಲಿಸಿವೆಯೆಂಬ ಸೋದಾಹರಣ ವಿವರಗಳು. ಅದಾದಮೇಲೆ ಒಂಬತ್ತು ಕಾಂಡಗಳಿರುವ ಹರಿಶ್ಚಂದ್ರ ಕಾವ್ಯ ಶುರುವಾಗುತ್ತದೆ, ‘ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು...’ ಎಂದು ರಾಘವಾಂಕ ತನ್ನ ಅಧಿದೇವತೆ ಹಂಪೆಯ ವಿರೂಪಾಕ್ಷನನ್ನು ಸ್ತುತಿಸುವುದರ ಮೂಲಕ.
ಒಂದೊಂದೇ ಪುಟವನ್ನು ತಿರುವುತ್ತ ಹೋದೆ. ಎಂಟನೇ ಕಾಂಡದಲ್ಲಿ ಸಿಕ್ತು ನೋಡಿ ನಿಧಿ! ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆ ತಳುವಿದನೆನ್ನ ಕಂದನೆಂದೆನುತ ಸುಯ್ಯುತ್ತ ಮರುಗುತ್ತ ಬಸಿರಂ ಹೊಸೆದು ಕೊನೆವೆರಳ ಮುರಿದುಕೊಳುತ...’ ಹೌದು ಇವೇ ನಮ್ಮ ಪಠ್ಯದಲ್ಲಿದ್ದ ಸಾಲುಗಳು! ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಓದುತ್ತಿದ್ದಂತೆ ಕಾಲಚಕ್ರದಲ್ಲಿ ಹಿಂದಕ್ಕೆ ಸರಿದು ಐದನೇ ತರಗತಿಯಲ್ಲಿ ಮಾಸ್ತರರ ವರ್ಣನೆ ಕೇಳುತ್ತ ಕುಳಿತ ಅನುಭವ. ಕಣ್ಣುಗಳಲ್ಲಿ ಪಸೆ. ಮುಂದೆ- ‘ಅಡವಿಯೊಳು ಹೊಲಬುಗೆಟ್ಟನೊ ಗಿಡುವಿನೊಳಗೆ ಹುಲಿ ಹಿಡಿದುದೋ ಕಳ್ಳರೊಯ್ದರೊ ಭೂತಸಂಕುಲಂ ಹೊಡೆದುವೋ ನೀರೊಳದ್ದನೊ ಮರದ ಕೊಂಬೇರಿ ಬಿದ್ದನೋ ಫಣಿ ತಿಂದುದೋ ಕಡುಹಸಿದು ನಡೆಗೆಟ್ಟು ನಿಂದನೋ...’ ಮಗನಿಗೆ ಏನಾಗಿರಬಹುದೆಂದು ಪರಿಪರಿಯ ಯೋಚನೆ ಚಂದ್ರಮತಿಗೆ. ‘ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು ನಿಂದರಂ ಲೋಹಿತಾಶ್ವಾ ಎಂದು ಗಾಳಿಗಿರಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗರುವಿನಂತೆ’ ಚಿಂತೆಯಿಂದ ಅವಳಿಗೆ ಹುಚ್ಚು ಹಿಡಿದಂತಾಗಿದೆ. ಅಷ್ಟೊತ್ತಿಗೆ ಒಬ್ಬ ಹುಡುಗ ಬಂದು ‘ನಿನ್ನ ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು’ ಹೇಳುತ್ತಾನೆ. ‘ಏಕೆ ಕಚ್ಚಿತ್ತಾವ ಕಡೆ ಯಾವ ಹೊಲನಕ್ಕಟಾ ಕುಮಾರಂ...’ ಹುಲ್ಲು ತರಲಿಕ್ಕೆ ಬೇರೆ ಹುಡುಗರೂ ಹೋಗಿದ್ರು, ಆದರೂ ತನ್ನ ಮಗನಿಗೇ ಏಕೆ ಹಾವು ಕಚ್ಚಬೇಕು? ಚಂದ್ರಮತಿಯ ಪ್ರಶ್ನೆ. ‘ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ ಫಣಿಯಗಿಯೆ ಕೆಡೆದಂ’ ಎನ್ನುತ್ತಾನೆ ಆ ಹುಡುಗ. ‘ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕ ನೇಕ ಭಲ್ಲುಕ ಜಂಬುಕಂ ಘೂಕ ವೃಕಗಳೆಳೆಯದೆ ಬಿಡವು’ ಎಂದು ಎಚ್ಚರಿಸುತ್ತಾನೆ. ಅಬ್ಬಾ ಎಂಥ ದಾರುಣ ಸ್ಥಿತಿ ಚಂದ್ರಮತಿಯದು!
‘ಲೋಹಿತಾಶ್ವನ ಸಾವು’ ಪದ್ಯದ ಪೂರ್ಣಸಾಹಿತ್ಯವೇನೋ ನನಗೆ ಸಿಕ್ಕಿತು. ಆದರೆ ಜತೆಯಲ್ಲಿ ಒಂದು ಅದ್ಭುತ ಸತ್ಯವೂ ನನಗವತ್ತು ಮನವರಿಕೆಯಾಯ್ತು. ಅದರಿಂದ ಸ್ವಲ್ಪ ದಿಗಿಲೂ ಆಯ್ತು. ಅದೇನು ಗೊತ್ತೇ? ನಮಗೆ ಪಠ್ಯದಲ್ಲಿ ಇದ್ದದ್ದು ಅಲ್ಲಿನ ನಾಲ್ಕು ಷಟ್ಪದಿಗಳು ಮಾತ್ರ. ಇಡೀ ಪುಸ್ತಕದಲ್ಲಿ ನನಗೆ ಅವು ಮಾತ್ರ ಧೂಳೊರೆಸಿದ ಗಾಜಿನಂತೆ ಸುಸ್ಪಷ್ಟವಾಗಿ ಕಂಡುಬಂದದ್ದು. ಒಂದೊಂದು ಪದವನ್ನೂ ಅರ್ಥೈಸಬಲ್ಲೆ ಎಂಬ ವಿಶ್ವಾಸ ಮೂಡಿದ್ದು. ಮಿಕ್ಕ ಭಾಗವನ್ನು ಓದಿ ಅರಗಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗಲೇ ಇಲ್ಲ. ತುಂಬಾ ಕಷ್ಟವಿದೆ ಅನ್ನಿಸ್ತು. ಅಷ್ಟು ಕಷ್ಟದ ಪದ್ಯಗಳನ್ನು ಅರ್ಥೈಸುವುದು ಐದನೇ ತರಗತಿಯಲ್ಲಿ ಸಾಧ್ಯವಾದದ್ದು ಈಗ ಆಗುತ್ತಿಲ್ಲ! ‘ಹಸಿ ಗೋಡೆಯಲ್ಲಿ ಹರಳು ನೆಟ್ಟಂತೆ’ ಎಂಬ ನಾಣ್ಣುಡಿ ಎಷ್ಟು ಸತ್ಯ ಅಲ್ಲವೇ?
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Sunday Sep 23, 2012
Vedhadhyayana Vismaya
Sunday Sep 23, 2012
Sunday Sep 23, 2012
ದಿನಾಂಕ 23 ಸೆಪ್ಟೆಂಬರ್ 2012
ವೇದಾಧ್ಯಯನ ವಿಧಾನದ ವಿಸ್ಮಯ
* ಶ್ರೀವತ್ಸ ಜೋಶಿ
* * * ಹದಿಮೂರ್ ಹದಿನೇಳ್ಲ ಎಷ್ಟು ಎಂದು ಕೇಳಿದರೆ ಬೆಚ್ಚಿಬಿದ್ದು ಕಾಲ್ಕ್ಯುಲೇಟರ್ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ (ಈಗ ಅದನ್ನೂ ಮರೆತ) ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು. ಅದೂ ರಿವರ್ಸ್ ಆರ್ಡರ್, ಡಯಾಗನಲ್ ಆರ್ಡರ್ ಹೀಗೆ ಯಾವ ನಮೂನೆಯಲ್ಲಿ ಬೇಕೊ ಹಾಗೆ ಮಗ್ಗಿಯನ್ನು ಒಪ್ಪಿಸುವ ಜಾಣರಿರುತ್ತಿದ್ದರು. ಯಾಕೆ ಆ ಜಾಣ್ಮೆ ಇರುತ್ತಿತ್ತೆಂದರೆ ಆಗ ಕ್ಯಾಲ್ಕುಲೇಟರ್ಗಳು ಇರಲಿಲ್ಲ, ಅದಕ್ಕೂ ಹಿಂದೆ ಮಗ್ಗಿ ಪುಸ್ತಕಗಳೂ ಇರುತ್ತಿರಲಿಲ್ಲವೇನೊ. ಎಲ್ಲವೂ ಬಾಯಿಪಾಠದ ಕಲಿಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಚಿಕ್ಕಂದಿನಲ್ಲೇ ಮಗ್ಗಿ-ಕೋಷ್ಟಕಗಳ, ಗಣಿತ ಸೂತ್ರಗಳ ಕಂಠಪಾಠದ ಅಭ್ಯಾಸ. ಅದರ ಒಳಿತು-ಕೆಡುಕುಗಳು ಏನೇ ಇರಲಿ ಆಗಿನ ಕಾಲದಲ್ಲಿ ಅದು ಅನಿವಾರ್ಯವೆಂಬ ವಿಷಯವೂ ಗಮನಾರ್ಹ. ಮಗ್ಗಿ-ಕೋಷ್ಟಕ, ಸೂತ್ರ-ಸ್ತೋತ್ರಗಳದೇ ಮಾತು ಅನ್ವಯವಾಗುತ್ತದೆ ವೇದಗಳಿಗೂ ಕೂಡ! ವೇದಗಳು ಭಗವಂತನ ಉಸಿರಿನಿಂದ ಉದ್ಭವವಾದುವು (“ಯಸ್ಯ ನಿಶ್ವಸಿತಂ ವೇದಾ:") ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಋಷಿಮುನಿಗಳು ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿ, ಒಂದಿನಿತೂ ಬದಲಾವಣೆ ಇಲ್ಲದಂತೆ ಜತನವಾಗಿ ಇರಿಸುವಲ್ಲಿ ಬಹಳ ಎಚ್ಚರ ಮತ್ತು ಶ್ರಮ ವಹಿಸಿದ್ದಾರೆ. ಲಿಖಿತ ದಾಖಲೆಗಳಿಲ್ಲದೆ ಬಾಯಿಂದ ಬಾಯಿಗೆ ಮಾತ್ರ (ತಂದೆಯಿಂದ ಮಗನಿಗೆ ಅಥವಾ ಗುರುವಿನಿಂದ ಶಿಷ್ಯನಿಗೆ) ವರ್ಗಾವಣೆ ಹೊಂದುತ್ತ ಸಹಸ್ರಾರು ವರ್ಷಗಳ ಕಾಲದಿಂದಲೂ ವೇದಗಳು ಅಸ್ತಿತ್ವದಲ್ಲಿ ಇವೆಯೆಂದರೆ ಈ ಮೂಲಸ್ವರೂಪ ರಕ್ಷಣೆಯ ಮಹತ್ವ ಮತ್ತು ಅದರ ವಿಸ್ಮಯಕರವಾದ ತಂತ್ರ ನಿಜಕ್ಕೂ ಅದ್ಭುತವಾದುದು!
ವೇದಮಂತ್ರ ಪಠಣದ ಒಂದು ಮೂಲಭೂತ ಅವಶ್ಯಕತೆಯೆಂದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕಾದರೆ ಅಕ್ಷರಶುದ್ಧಿ (ಪ್ರತಿಯೊಂದು ಅಕ್ಷರದ ಸರಿಯಾದ ಉಚ್ಚಾರ), ಮಾತ್ರಾಶುದ್ಧಿ (ಪ್ರತಿ ಅಕ್ಷರ ಉಚ್ಚಾರಕ್ಕೆ ನಿಖರವಾದ ಅವಧಿ) ಮತ್ತು ಸ್ವರಶುದ್ಧಿ - ಈ ಮೂರರಲ್ಲೂ ಯಾವೊಂದು ಲೋಪವೂ ಇರಬಾರದು. ಅಷ್ಟೇ ಅಲ್ಲ,
ಗೀತೀ ಶೀಘ್ರೀ ಶಿರಃಕಂಪೀ ತಥಾ ಲಿಖಿತಪಾಠಕಃ
ಅನರ್ಥಜ್ಞಃ ಅಲ್ಪಕಂಠಶ್ಚ ಷಡೈತೆ ಪಾಠಕಾಧಮಾಃ ||
ಅಂದರೆ ಹಾಡು ಗುನುಗಿದಂತೆ, ಅವಸರದಲ್ಲಿ, ಸುಮ್ಮನೆ ತಲೆಯನ್ನು ಮೇಲೆ-ಕೆಳಗೆ ಅಲ್ಲಾಡಿಸುತ್ತ, ಪುಸ್ತಕದಿಂದ ಓದುತ್ತ, ಅರ್ಥವನ್ನು ತಿಳಿದುಕೊಳ್ಳದೆ ಮತ್ತು ಕ್ಷೀಣಸ್ವರದಲ್ಲಿ - ಈ ಆರು ನಮೂನೆಯ ವೇದಪಠಣ ನಿಷ್ಪ್ರಯೋಜಕ. ವೇದಗಳ ಸರಿಯಾದ ಪಠಣಕ್ಕೆ, ಜತೆಯಲ್ಲೇ ಅವುಗಳ ಮೂಲರೂಪ ರಕ್ಷಣೆಗೆ ದೋಷರಹಿತ ವಿಧಾನ ಮತ್ತು ನಿಯಮಗಳ ಅವಶ್ಯಕತೆ ಬಹಳವಾಗಿ ಇದೆ. ದೋಷರಹಿತ (error proof) ಯಾಕೆಂದರೆ ವೇದೋಚ್ಚಾರದಲ್ಲಿ ಒಂದೇಒಂದು ಅಕ್ಷರ, ಮಾತ್ರೆ ಅಥವಾ ಸ್ವರದ ಲೋಪವಾದರೂ ಆ ಮಂತ್ರದ ಪರಿಣಾಮ ತದ್ವಿರುದ್ಧವಾಗಬಹುದು (ಇಂದ್ರನನ್ನು ಕೊಲ್ಲಲು ಹೊರಟ ‘ವೃತ್ರ’ನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಕೇವಲ ಒಂದು ಸ್ವರವಷ್ಟೇ ತಪ್ಪಾಗಿದ್ದರಿಂದ ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು ಎಂದು ಕಥೆಯಿದೆ)!
ವೇದೋಚ್ಚಾರದ ನಿಯಮಗಳೆಲ್ಲ ‘ಶೀಕ್ಷಾ’ ಎನ್ನುವ ವೇದಾಂಗದಲ್ಲೇ ಅಳವಡಿಸಲ್ಪಟ್ಟಿವೆ. ವರ್ಣ (ಅಕ್ಷರಗಳು), ಸ್ವರ (ಉದಾತ್ತ, ಅನುದಾತ್ತ ಮತ್ತು ಸ್ವರಿತ ಎಂಬ ಮೂರು ಸ್ವರಗಳು), ಮಾತ್ರಾಕಾಲ, ಬಲ (ಉಚ್ಚರಿಸಲು ಬೇಕಾದ ಧ್ವನಿಶಕ್ತಿ), ಸಾಮ (ಸ್ವರಗಳ ಏರಿಳಿತದಲ್ಲಿ ಏಕರೂಪ) ಮತ್ತು ಸಂತಾನ (ನಿರಂತರತೆ) - ಇವೆಲ್ಲವುಗಳಿಗೆ ಸಂಬಂಧಿಸಿದಂತೆ ‘ಶೀಕ್ಷಾ’ದಲ್ಲಿ ನಿಯಮಗಳಿವೆ.
ಇಷ್ಟೆಲ್ಲ ಚಾಕಚಕ್ಯತೆ ವಹಿಸಿ ವೇದಪಠಣ ಮಾಡಬೇಕಿದ್ದರೆ ಅದರ ಅಭ್ಯಾಸದಲ್ಲೂ ಕಠಿಣ ಪರಿಶ್ರಮದ ಆವಶ್ಯಕತೆ ಇದೆಯೆಂದು ಬೇರೆ ಹೇಳಬೇಕಿಲ್ಲ. ವೇದಾಭ್ಯಾಸ ಒಂದು ಆಸಕ್ತಿಯ ವಿಷಯವಾಗುವಂತೆ, ಬರೀ ಬಾಯಿಪಾಠವಷ್ಟೇ ಎನಿಸದೆ ಬುದ್ಧಿವಂತಿಕೆಯ ಉಪಯೋಗವೂ ಚೆನ್ನಾಗಿ ಆಗುವಂತೆ ಮಾಡಬೇಕಾದರೆ ಪಠಣ ಕ್ರಮದಲ್ಲಿ ವೈವಿಧ್ಯವಿರಬೇಕಾಗುತ್ತದೆ. ಇದನ್ನು ಮನಗಂಡ ಋಷಿಗಳು ಕೆಲವು ‘ಪಾಠಕ್ರಮ’ಗಳನ್ನು ರೂಪಿಸಿದರು. ಅವುಗಳ ಮೂಲಕ ವೇದಕಲಿಕೆ ದೋಷರಹಿತವಾಗಿರುವಂತೆ ನೋಡಿಕೊಂಡರು. ಅಂತಹ ಪಾಠಕ್ರಮಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳುವುದಕ್ಕಾಗಿ ಈ ಲೇಖನ. ಬೇರೆಬೇರೆ ಕ್ರಮಗಳಲ್ಲಿ ಪದಗಳ ಜೋಡಣೆ ಅರ್ಥವಾಗುವುದಕ್ಕೋಸ್ಕರ ಸಂಸ್ಕೃತ ಮಂತ್ರಗಳ ಬದಲಿಗೆ, ನಮಗೆಲ್ಲ ಚಿರಪರಿಚಿತವಾದ ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ ಎಂಬ ಕನ್ನಡ ಪದ್ಯದ ಸಾಲನ್ನು ಉದಾಹರಣೆಗಳಲ್ಲಿ ಅಳವಡಿಸಿಕೊಂಡಿದ್ದೇನೆ. ಕೇವಲ ಉದಾಹರಣೆಗಾಗಿ ಹೊರತು ವೇದಗಳನ್ನು ಲಘುವಾಗಿ ಪರಿಗಣಿಸುವುದಾಗಲೀ ಜಿ.ಪಿ.ರಾಜರತ್ನಂ ಪದ್ಯವನ್ನು ತಿರುಚುವುದಾಗಲಿ ಇಲ್ಲಿಯ ಉದ್ದೇಶವಲ್ಲ.
* * *
["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]
Thursday Sep 20, 2012
nanna baravaNige beLeda bage
Thursday Sep 20, 2012
Thursday Sep 20, 2012
ದಿನಾಂಕ 21 ಸೆಪ್ಟೆಂಬರ್ 2012
ನನ್ನ ಬರವಣಿಗೆ ಬೆಳೆದ ಬಗೆ
* ಶ್ರೀವತ್ಸ ಜೋಶಿ
[ಖ್ಯಾತ ಲೇಖಕ, ಪತ್ರಕರ್ತ, ನನ್ನ ಆತ್ಮೀಯ ಸ್ನೇಹಿತ ‘ಜೋಗಿ’ (ಗಿರೀಶ್ ಹತ್ವಾರ್) ಅವರ ಪುಸ್ತಕ "ಹಲಗೆ ಬಳಪ- ಹೊಸ ಬರಹಗಾರರಿಗೆ ಪಾಠಗಳು" ಪುಸ್ತಕಕ್ಕೆಂದು ಬರೆದ ವಿಶೇಷ ಲೇಖನ ] [ಲೇಖನದ ಕೊನೆಯಲ್ಲಿರುವ "Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಇದನ್ನು ಧ್ವನಿಮಾಧ್ಯಮದಲ್ಲಿಯೂ ಆನಂದಿಸಬಹುದು!] * * * ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’ ಎನ್ನುತ್ತಾನೆ ಎದೆತುಂಬಿ ಹಾಡುವ, ಸ್ವಲ್ಪ ಫಿಲಾಸಫಿಕಲ್ ರೀತಿಯಲ್ಲಿ ಚಿಂತಿಸುವ ಹಾಡುಗಾರ. ಅವನು ಕೇವಲ ತನ್ನ ಆತ್ಮಸಂತೋಷಕ್ಕೆಂದು ಹಾಡುವವನು. ಅದೇ ಧಾಟಿಯಲ್ಲಿ ಒಬ್ಬ ಬರಹಗಾರನೂ ಹೇಳಬಹುದು- ‘ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಯಾರು ಓದದಿದ್ದರೂ ನನಗಿಲ್ಲ ಚಿಂತೆ...’ - ಅವನದೂ ಹೆಚ್ಚೂಕಡಿಮೆ ಫಿಲಾಸಫಿ ಕ್ಯಾಟಗರಿಯೇ. ‘ಯಾರಾದರೂ ಓದಲಿ ಎಂದು ನಾನು ಬರೆಯುವುದಿಲ್ಲ; ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂದು ಪ್ರಪಂಚದ ಪ್ರತಿಯೊಬ್ಬ ಬರಹಗಾರನೂ ಹೇಳಿದ್ದೇ ಆದರೆ ಬರಹಗಳೆಲ್ಲ ಬರೀ ಪರ್ಸನಲ್ ಡೈರಿಗಳಷ್ಟೇ ಆಗಬೇಕಿತ್ತಲ್ಲವೇ? ಪುಣ್ಯಕ್ಕೆ ಹಾಗಿಲ್ಲ ಪರಿಸ್ಥಿತಿ. ಪರ್ಸನಲ್ ಡೈರಿ ಮಾತ್ರ ನಮ್ಮ ಸಂತೋಷಕ್ಕೆ, ನಮ್ಮೊಳಗಿನ ಸ್ವಗತದ ರೂಪದಲ್ಲಿ, ನಮಗೋಸ್ಕರವಷ್ಟೇ ಬರೆಯುವುದು. ಮಿಕ್ಕೆಲ್ಲ ಬರಹಗಳೂ ಯಾರಾದರೂ ಓದಲಿ ಎಂದೇ ಬರೆಯುವಂಥವು. ಅಂದಮೇಲೆ ಅದರಲ್ಲಿ ಮುಚ್ಚುಮರೆ ಏಕೆ? ನಾನೇನೂ ಮಹಾನ್ ಬರಹಗಾರ ಅಲ್ಲ. ಆದರೆ ಬರೆದದ್ದಷ್ಟನ್ನು ನಾನು ಬೇರೆಯವರು ಓದಲೆಂದೇ ಬರೆದಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲೆ! ನನ್ನ ಬರವಣಿಗೆ ಹೇಗೆ ಆರಂಭವಾಯಿತು, ಹೇಗೆ ಮುಂದುವರಿಯಿತು ಎಂದು ನಾನೀಗ ವಿವರಿಸುವವನಿದ್ದೇನಲ್ಲ, ಆಗ ಈ ಮಾತು ಪುಷ್ಟಿಗೊಳ್ಳುತ್ತ ಹೋಗುತ್ತದೆ. ನೀವೇ ನೋಡುವಿರಂತೆ. ಕಡೆಗೆ ಈ ಬರಹವನ್ನಾದರೂ ನೀವು ಓದಬೇಕಂತಲೇ ತಾನೆ ನಾನು ಬರೆಯುತ್ತಿರುವುದು? ದೊಡ್ಡ ಕುಟುಂಬದಲ್ಲಿ ಅತಿ ಕಿರಿಯವನಾಗಿ ಹುಟ್ಟಿ ಬೆಳೆದ ನಾನು, ಸುಮಾರಾಗಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ನನ್ನ ಅಣ್ಣಂದಿರು ವಿದ್ಯಾಭ್ಯಾಸ ಅಥವಾ ವೃತ್ತಿಗಾಗಿ, ಮತ್ತು ಅಕ್ಕಂದಿರು ಮದುವೆಯಾಗಿ, ಪರವೂರಿನಲ್ಲಿದ್ದರು. ಅವರಿಗೆಲ್ಲ ತಿಂಗಳಿಗೊಮ್ಮೆ ಕ್ಷೇಮಸಮಾಚಾರದ ಪತ್ರ ಬರೆಯುವ ಕೆಲಸವನ್ನು ನಮ್ಮ ತಂದೆಯವರು ಹೆಚ್ಚಾಗಿ ನನ್ನ ಕೈಯಿಂದಲೇ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಮೊಬೈಲ್ ಬಿಡಿ, ಲ್ಯಾಂಡ್ಲೈನ್ ಟೆಲಿಫೋನ್ ಸಹ ನಮ್ಮಲ್ಲಿರಲಿಲ್ಲ. ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಲೆಟರ್ ಮತ್ತು ಕವರ್ಗಳೇ ಸಂದೇಶವಾಹಕಗಳು. ಹಾಗಾಗಿ ಶಾಲಾದಿನಗಳಲ್ಲಿ ಪಠ್ಯೇತರವಾಗಿ ನಾನೇನಾದರೂ ಬರೆದದ್ದಿದ್ದರೆ ಆ ಪತ್ರಗಳು ಮಾತ್ರ. ಆದರೆ, ವಿಷಯ-ವಿಚಾರಗಳನ್ನು, ಸಮಾಚಾರ-ಸ್ವಾರಸ್ಯಗಳನ್ನು ಇನ್ನೊಬ್ಬರೊಡನೆ ಎದುರು ಕುಳಿತು ಮಾತನಾಡುತ್ತಿರುವಂತೆ ವಿನಿಮಯ ಮಾಡಿಕೊಳ್ಳುವ ಧಾಟಿ ನನ್ನ ಬರವಣಿಗೆಯಲ್ಲಿ ಕಾಣಿಸಿಕೊಂಡಿದೆಯಾದರೆ ಅದು ಆ ಪತ್ರವ್ಯವಹಾರದಿಂದಲೇ ಎಂದು ನಾನು ದೃಢವಾಗಿ ನಂಬಿದ್ದೇನೆ. ಮತ್ತು ಅದಕ್ಕಾಗಿ ನನ್ನ ದಿ.ತೀರ್ಥರೂಪರವರಿಗೆ ಎಂದೆಂದಿಗೂ ಋಣಿಯಾಗಿದ್ದೇನೆ.
ಅಣ್ಣಂದಿರಿಗೆ, ಅಕ್ಕಂದಿರಿಗಷ್ಟೇ ಅಲ್ಲ ನಾನು ಪತ್ರ ಬರೆಯುತ್ತಿದ್ದದ್ದು. ಬಾಲ್ಯದಲ್ಲಿ ಒಬ್ಬ ಆತ್ಮೀಯ ಸ್ನೇಹಿತನೆಂದೇ ಪರಿಗಣಿಸಿದ್ದ ‘ಮಂಗಳೂರು ಆಕಾಶವಾಣಿ’ಗೂ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಬಾಲವೃಂದ ಕಾರ್ಯಕ್ರಮದಲ್ಲಿ ಬರುತ್ತಿದ್ದ ರಸಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ, ಕೋರಿಕೆ ಕಾರ್ಯಕ್ರಮದಲ್ಲಿ ನೆಚ್ಚಿನ ಚಿತ್ರಗೀತೆ ಕೇಳಲಿಕ್ಕೆ, ಪತ್ರೋತ್ತರ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ತಿಳಿಸಲಿಕ್ಕೆ - ಹೀಗೆ ಆಕಾಶವಾಣಿಯೊಂದಿಗೆ ನನ್ನ ಪತ್ರವ್ಯವಹಾರ. ರೇಡಿಯೊದಲ್ಲಿ ನನ್ನ ಪತ್ರದ ಉಲ್ಲೇಖವಾದಾಗೆಲ್ಲ ಒಂಥರದ ರೋಮಾಂಚನ. ಮಾಧ್ಯಮದೊಂದಿಗೆ ಸಂಪರ್ಕ-ಸಂವಹನದ ನನ್ನ ಬರವಣಿಗೆಗೆ ಅದು ಭದ್ರ ಅಡಿಪಾಯ ಹಾಕಿತು. ಮುಂದೆ ನನ್ನ ಹೆಚ್ಚಿನ ಬರವಣಿಗೆಯೆಲ್ಲ ಮಾಧ್ಯಮಗಳಿಗೆಂದೇ ಬರೆದದ್ದು ಅಂತಾಯ್ತು.
ದಾವಣಗೆರೆಯಲ್ಲಿ ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ‘ಸುಧಾ’ದಲ್ಲಿ ನನ್ನದೊಂದು ಪತ್ರ ಪ್ರಕಟವಾಯ್ತು. ಅದು ಸುಧಾ ಪತ್ರಿಕೆಯ ಬೆಳ್ಳಿಹಬ್ಬದ ವರ್ಷ. ‘ಸುಧಾ ಪತ್ರಿಕೆ ನಿಮಗೇಕೆ ಇಷ್ಟವಾಗುತ್ತದೆ ಅಥವಾ ಆಗುವುದಿಲ್ಲ?’ ಎಂದು ಓದುಗರಿಂದ ವಿಶೇಷವಾಗಿ ಪತ್ರಗಳನ್ನು ಆಹ್ವಾನಿಸಿದ್ದರು. ‘ಸುಧಾ ಬಗ್ಗೆ ನನ್ನ ಪರ-ವಿರೋಧ ನಿಲುವುಗಳನ್ನು ತಕ್ಕಡಿಯ ಎರಡು ತಟ್ಟೆಗಳಲ್ಲಿಟ್ಟಾಗ...’ ಎಂಬ ನನ್ನ ಪತ್ರವೂ ಆಯ್ಕೆಯಾಗಿ ಪ್ರಕಟವಾಯ್ತು. ನಮ್ಮ ಹಾಸ್ಟೆಲ್ನ ವಾಚನಾಲಯಕ್ಕೆ ತರಿಸುತ್ತಿದ್ದ ಪತ್ರಿಕೆಗಳಲ್ಲಿ ಸುಧಾ ಕೂಡ ಇರುತ್ತಿತ್ತು. ಆ ವಾರ ಸುಧಾದಲ್ಲಿ ನನ್ನ ಪತ್ರ/ಹೆಸರು ಪ್ರಕಟವಾಗಿದೆಯೆಂದು ನನಗೆಷ್ಟು ಪುಳಕವೋ ಅಷ್ಟೇ ಹಿಗ್ಗು ನನ್ನೆಲ್ಲ ಸಹಪಾಠಿಗಳಿಗೂ. ಗೌರವಧನವೆಂದು ಐವತ್ತು ರೂಪಾಯಿಗಳ ಚೆಕ್ ಮತ್ತು ಆ ವಾರದ ಸುಧಾ ಸಂಚಿಕೆ ಅಂಚೆಯಲ್ಲಿ ಬಂದಾಗಿನ ಸಂಭ್ರಮವಂತೂ ಸಾಟಿಯಿಲ್ಲದ್ದು! ಮುಂದೆ ನಾನು ಉದ್ಯೋಗಕ್ಕಾಗಿ ದಿಲ್ಲಿ ಮತ್ತು ಹೈದರಾಬಾದ್ನಲ್ಲಿ ಇದ್ದಾಗಲೂ ತಪ್ಪದೇ ಸುಧಾ ತರಿಸುತ್ತಿದ್ದೆ. ಸಮುದ್ರಮಥನ ವಿಭಾಗಕ್ಕೆ ಪತ್ರ ಬರೆಯುತ್ತಿದ್ದೆ. ಸುಧಾದಲ್ಲಿ ಆಗ ಅತ್ಯಂತ ಜನಪ್ರಿಯವಾಗಿದ್ದ ‘ಚೌ ಚೌ ಚೌಕಿ’ ಅಂಕಣದಲ್ಲಿ ಭಾಗವಹಿಸುತ್ತಿದ್ದೆ. ಸಿಲ್ಲಿ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ಬರೆದುಕಳಿಸುತ್ತಿದ್ದೆ. ಅವು ಪ್ರಕಟವೂ ಆಗುತ್ತಿದ್ದವು.
ಹೈದರಾಬಾದ್ನಲ್ಲಿದ್ದಾಗ ನಾನು ‘ದ ಹಿಂದು’ ಪತ್ರಿಕೆ ಓದುತ್ತಿದ್ದೆ. ಅಂಕಣಬರಹಗಳ ಓದನ್ನು ನಾನು ಆರಂಭಿಸಿದ್ದು ಹಿಂದು ಪತ್ರಿಕೆಯಲ್ಲೇ. ಭಾನುವಾರಗಳಂದು ಪ್ರಕಟವಾಗುತ್ತಿದ್ದ ಅಮೆರಿಕನ್ ಹಾಸ್ಯಬರಹಗಾರ ಆರ್ಟ್ ಬಕ್ವಾಲ್ಡ್ನ ಅಂಕಣ ಮತ್ತು ವಿ.ಗಂಗಾಧರ್ ಬರೆಯುತ್ತಿದ್ದ Slice of Life ಅಂಕಣ ನನ್ನ ನೆಚ್ಚಿನ ಓದು. ಸೋಮವಾರಗಳಂದು Between You and Me ಎಂಬ ಅಂಕಣ ಬರುತ್ತಿತ್ತು. ಹಿಂದು ಪತ್ರಿಕೆಯ ಹೈದರಾಬಾದ್ ಆವೃತ್ತಿಯಲ್ಲಿ ಅದನ್ನು ನಡೆಸುತ್ತಿದ್ದವರು ಪ್ರೊ. ಕೆ. ಸುಬ್ರಹ್ಮಣ್ಯಂ (Know Your English ಅಂಕಣವನ್ನೂ ಅವರೇ ನಿರ್ವಹಿಸುತ್ತಿದ್ದರು). ಆ ಅಂಕಣಕ್ಕೆ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಅವು ಪ್ರಕಟವಾಗುತ್ತಿದ್ದವು. ಒಮ್ಮೆ ಸಿಕಂದರಾಬಾದ್ ರೈಲ್ವೇ ಸ್ಟೇಷನ್ನ ಯಾವುದೋ ಅವ್ಯವಸ್ಥೆಯ ಕುರಿತು ನಾನು ಬರೆದಿದ್ದ ಪತ್ರಕ್ಕೆ ಸುಬ್ರಹ್ಮಣ್ಯಂ ತಮ್ಮದೊಂದಿಷ್ಟು ವ್ಯಂಗ್ಯವನ್ನೂ ಸೇರಿಸಿ ಪ್ರಕಟಿಸಿದ್ದರು. ಮಾರನೇದಿನ ಹೋಗಿ ನೋಡಿದಾಗ ರೈಲ್ವೇ ಸ್ಟೇಷನ್ನ ಅವ್ಯವಸ್ಥೆ ರಿಪೇರಿ ಆಗಿತ್ತು!
ಇದಿಷ್ಟು ಪತ್ರಲೇಖನದ ವಿಚಾರವಾಯ್ತು. ನನ್ನ ಬರವಣಿಗೆಗೆ ಪೂರಕವಾಗಿ ಪರಿಣಮಿಸಿದ ಇನ್ನೂ ಒಂದು ಮುಖ್ಯ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗಲೇ ಹೇಳಿದಂತೆ ನಾನು ಎಂಜಿನಿಯರಿಂಗ್ ಓದಿದ್ದು ದಾವಣಗೆರೆಯ ಬಿ.ಡಿ.ಟಿ ಕಾಲೇಜಿನಲ್ಲಿ, ಎಂಬತ್ತರ ದಶಕದ ಉತ್ತರಾರ್ಧದಲ್ಲಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಆಗಷ್ಟೇ ಶುರುವಾದದ್ದು. ವಿಭಾಗಕ್ಕೆ ಮುಖ್ಯಸ್ಥರಾಗಲಿ ಉಪನ್ಯಾಸಕರಾಗಲಿ ಯಾರೂ ಇರಲಿಲ್ಲ. ಪ್ರಯೋಗಾಲಯ ಸೌಲಭ್ಯವೂ ಅಷ್ಟಕ್ಕಷ್ಟೇ. ಬೇರೆ ವಿಭಾಗಗಳ ಅಥವಾ ಬೇರೆ ಕಾಲೇಜಿನ ಪ್ರಾಧ್ಯಾಪಕರು ಆಗೊಮ್ಮೆ ಈಗೊಮ್ಮೆ ಬಂದು ಪಾಠ ಮಾಡುವ ವ್ಯವಸ್ಥೆ. ವಿದ್ಯಾರ್ಥಿಗಳದು ಹೆಚ್ಚೂಕಡಿಮೆ ಏಕಲವ್ಯನ ಪರಿಸ್ಥಿತಿ. ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಸೆಮಿಸ್ಟರ್ ಆರಂಭದಿಂದಲೇ ಆಯಾಯ ಸಬ್ಜೆಕ್ಟ್ನ ಸಿಲೆಬಸ್ ಏನಿದೆ, ಯಾವ ಪಠ್ಯಪುಸ್ತಕಗಳನ್ನು ಶಿಫಾರಸು ಮಾಡಿದ್ದಾರೆ, ಹಿಂದಿನ ಪ್ರಶ್ನೆಪತ್ರಿಕೆಗಳ ಸ್ವರೂಪ ಹೇಗಿದೆ ಅಂತೆಲ್ಲ ಅಧ್ಯಯನ ನಡೆಸಿ ನನ್ನದೇ ನೋಟ್ಸ್ ತಯಾರಿಸುವುದು. ಅದೂ ಹೇಗೆ, ಒಂದೆರಡು ಸೆಮಿಸ್ಟರ್ಗಳಲ್ಲಿ ಒಂದೆರಡು ಸಬ್ಜೆಕ್ಟ್ಗಳಿಗಲ್ಲ, ಮೂರರಿಂದ ಎಂಟನೇ ಸೆಮಿಸ್ಟರ್ವರೆಗೂ ಅದೇ ಪದ್ಧತಿ. ಮೊದಮೊದಲಿಗೆ ನನಗೋಸ್ಕರವಷ್ಟೇ ಸಿದ್ಧಪಡಿಸಿಕೊಳ್ಳುತ್ತಿದ್ದ ಆ ನೋಟ್ಸ್, ಕ್ರಮೇಣ ಸಹಪಾಠಿಗಳಿಗೂ ಸರಳವಾಗಿದೆಯೆಂದು ತೋರಿತು. ಅವರೆಲ್ಲರೂ ಪಠ್ಯಪುಸ್ತಕಗಳಿಗಿಂತ ನನ್ನ ನೋಟ್ಸನ್ನೇ ಫೊಟೊಕಾಪಿ ಮಾಡಿ ಓದತೊಡಗಿದರು.
ಅನಿವಾರ್ಯ ಪರಿಸ್ಥಿತಿಯಲ್ಲಿ ಆಲಂಗಿಸಿಕೊಂಡ ಆ ನೋಟ್ಸ್ ಕಲೆ ನನಗೆ ಚೆನ್ನಾಗಿ ಕರಗತವಾಯಿತು. ಯಾವುದೇ ವಿಷಯವಿರಲಿ, ಅದರ ಬಗ್ಗೆ ಸುಲಭಗ್ರಾಹ್ಯವಾಗುವಂಥ ಕಿರು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು, ಇನ್ನೊಬ್ಬರಿಗೆ ಅರ್ಥವಾಗುವಂತೆ ಆ ವಿಷಯವನ್ನು ಪ್ರಸ್ತುತಪಡಿಸುವುದು ಕರತಲಾಮಲಕವಾಗಿಹೋಯ್ತು. ಎಂಜಿನಿಯರಿಂಗ್ ಶಿಕ್ಷಣ ಮುಗಿದು ಸುಮಾರು ಹತ್ತು ವರ್ಷಗಳ ನಂತರ ನಾನು ಅಮೆರಿಕ ದೇಶಕ್ಕೆ ಬಂದಾಗ ಮೊದಲು ಮಾಡಿದ ಕೆಲಸವೆಂದರೆ ಇಲ್ಲಿ ಗಮನಿಸಿದ ಹೊಸಹೊಸ ಸಂಗತಿಗಳ ಬಗ್ಗೆ ಟಿಪ್ಪಣಿಗಳನ್ನು ತಯಾರಿಸಿ, ಪೂರಕ ಮಾಹಿತಿ ಸಂಗ್ರಹಿಸಿ, Let us know US ಎಂಬ ವೆಬ್ ಜರ್ನಲ್ ತಯಾರಿಸಿದ್ದು. ಅದಕ್ಕೆ ನೆರವಾದದ್ದೂ ನನ್ನ ಎಂಜಿನಿಯರಿಂಗ್ ಶಿಕ್ಷಣದ ನೋಟ್ಸ್ ಕಲೆಯೇ. Let us know US ವೆಬ್ ಜರ್ನಲ್ ಅಂತರಜಾಲದಲ್ಲಿ ಒಬ್ಬ ಅಮೆರಿಕನ್ ಶಿಕ್ಷಕಿಯ ಕಣ್ಣಿಗೆ ಬಿದ್ದು ಆಕೆ ಅದನ್ನು ಮೆಚ್ಚಿ ‘ನನ್ನ ವಿದ್ಯಾರ್ಥಿಗಳಿಗೆ ಮಾಹಿತಿಸಂಗ್ರಹಣೆಯ ಪ್ರಾಜೆಕ್ಟ್ಗೆ ಇದನ್ನು ಮಾದರಿಯಾಗಿ ಕೊಡುತ್ತಿದ್ದೇನೆ’ ಎಂದು ಇಮೇಲ್ ಬರೆದಿದ್ದನ್ನು ಓದಿ ನನಗಾದ ಸಂತಸ ಅಷ್ಟಿಷ್ಟಲ್ಲ.
ಹಾಗೆ ನೋಡಿದರೆ ಆಮೇಲೆ ನಾನು ದಟ್ಸ್ಕನ್ನಡ ಡಾಟ್ ಕಾಮ್ ಅಂತರಜಾಲ ಪತ್ರಿಕೆಯಲ್ಲಿ ಬರೆದ ‘ವಿಚಿತ್ರಾನ್ನ’ ಅಂಕಣದಲ್ಲೂ, ಅದಾದಮೇಲೆ ಐದು ವರ್ಷಗಳ ಕಾಲ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ‘ಪರಾಗಸ್ಪರ್ಶ’ ಅಂಕಣದಲ್ಲೂ, ಈ ನೋಟ್ಸ್ ಕಲೆಯ ಬಲದಿಂದಲೇ ರಸಪಾಕ ಸಿದ್ಧಪಡಿಸುತ್ತಿದ್ದದ್ದು. ಜತೆಯಲ್ಲೇ ಓದುಗರೊಡನೆ ಸಂಭಾಷಿಸುತ್ತಿರುವೆನೋ ಎಂದೆನಿಸುವ ಶೈಲಿ, ಬಾಲ್ಯದಲ್ಲಿ ರೂಢಿಯಾಗಿದ್ದ ಪತ್ರಲೇಖನದ ಬಳುವಳಿ. ಅಂಕಣದ ಓದುಗರಿಗೆ ಅದು ಗೊತ್ತಾಗುತ್ತಿತ್ತೋ ಇಲ್ಲವೋ, ಪ್ರತಿ ವಾರದ ಅಂಕಣವನ್ನು ಸಿದ್ಧಪಡಿಸುವಾಗ ನನಗಂತೂ ಚೆನ್ನಾಗಿ ಗೊತ್ತಾಗುತ್ತಿತ್ತು.
ಇನ್ನು, ಒಂದನೇ ತರಗತಿಯಿಂದ ಹತ್ತನೆಯವರೆಗೆ ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದದ್ದನ್ನೂ ನನ್ನ ಬರವಣಿಗೆಗೆ ಸತ್ವ ನೀಡಿದ ಪೋಷಕಾಂಶವೆಂದೇ ನಾನು ಗುರುತಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಓದಿದೆನೆಂಬ ಸಂಗತಿ ನನಗೆ ಒಂದು ಕೊರಗಾಗಿ, ಕೀಳರಿಮೆಯಾಗಿ ಯಾವತ್ತಿಗೂ ಅನಿಸಿದ್ದಿಲ್ಲ. ಬದಲಿಗೆ ಆಬಗ್ಗೆ ನನಗೆ ವಿಶೇಷ ಹೆಮ್ಮೆಯೇ ಇದೆ. ಹಾಗೆಯೇ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಸಂಸ್ಕೃತ ಭಾಷೆಯ ಕಲಿಕೆಯೂ ನನ್ನ ಬರವಣಿಗೆಗೆ ಕಿಂಚಿತ್ತಾದರೂ ಮೆರುಗು ಕೊಡುವುದರಲ್ಲಿ ನೆರವಾಗಿದೆ. ಭಾಷೆಗಳ ಬಗ್ಗೆ ನನಗಿರುವ ಕುತೂಹಲ, ಬೇರೆಬೇರೆ ಭಾಷೆಗಳ ನಡುವಿನ ಸಾಮ್ಯ-ವ್ಯತ್ಯಾಸಗಳ ವಿಶ್ಲೇಷಣೆ, ತೀರಾ ಮಡಿವಂತಿಕೆಯಿಲ್ಲದೆ ಸಂದರ್ಭೋಚಿತವಾಗಿ ಬೇರೆಬೇರೆ ಭಾಷೆಗಳ ಪದ-ವಾಕ್ಯಗಳ ಬಳಕೆ - ಇವೆಲ್ಲವೂ ಬರವಣಿಗೆಗೊಂದು ಬಣ್ಣ ಕೊಟ್ಟಿವೆ. ಅಷ್ಟೇಕೆ, ಪಿಯುಸಿ ಓದುತ್ತ ಉಜಿರೆಯ ಸಿದ್ಧವನ ಗುರುಕುಲದಲ್ಲಿ, ಎಂಜಿನಿಯರಿಂಗ್ ಓದುತ್ತ ದಾವಣಗೆರೆಯ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಅಭ್ಯಸಿಸಿದ್ದೂ ನನ್ನ ಬದುಕನ್ನು, ಬರವಣಿಗೆಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದೆ ಎಂದು ನಾನು ಗರ್ವದಿಂದ ಹೇಳುತ್ತೇನೆ.
ಬರವಣಿಗೆಯಲ್ಲಿ ನಾನು ಅಳವಡಿಸಿಕೊಂಡ, ಅಭ್ಯಾಸಮಾಡಿಕೊಂಡ ಕೆಲವು ಸರಳ ತಂತ್ರಗಳ ಬಗ್ಗೆಯೂ ಹೇಳಿ ಈ ಬರಹವನ್ನು ಮುಗಿಸುತ್ತೇನೆ.
ಮೊದಲನೆಯದಾಗಿ, ಎತ್ತರದ ಪೀಠದಲ್ಲಿ ಕುಳಿತು/ನಿಂತು ಕೆಳಗೆ ನೋಡುತ್ತ ಜನರಿಗೆ ಉಪದೇಶ ಕೊಡುತ್ತಿದ್ದೇನೆ ಎಂಬಂತೆ ಬರೆಯುವುದನ್ನು (ಇದನ್ನು ivory tower writing ಎನ್ನುತ್ತಾರೆ) ನಾನು ಸ್ವಲ್ಪವೂ ಇಷ್ಟಪಡುವುದಿಲ್ಲ. ‘ಏನೋ ಒಂದು ಸ್ವಾರಸ್ಯಕರ ವಿಷಯವಿದೆ ಎಲ್ಲರೂ ಸೇರಿ ಅದನ್ನು ತಿಳಿದುಕೊಳ್ಳೋಣ, ಆನಂದಿಸೋಣ’ ಎನ್ನುವಂಥ ಧಾಟಿಯೇ ನನಗೆ ಬಹಳ ಹಿಡಿಸುತ್ತದೆ. ಮತ್ತದೇ, ಎಂಜಿನಿಯರಿಂಗ್ ನೋಟ್ಸ್ ಕಲೆಯ ಪ್ರಭಾವ.
ಎರಡನೆಯದಾಗಿ, ಓದುಗನಿಗೆ ಹಿತಾನುಭವ ಆಗಬೇಕು, ಅದು ಬರಹದುದ್ದಕ್ಕೂ ಆಗುತ್ತಲೇ ಇರಬೇಕು ಎನ್ನುವುದು ನನ್ನ ಮುಖ್ಯ ಕಾಳಜಿ. ಅಂದಮಾತ್ರಕ್ಕೆ ಓದುಗನನ್ನು ಪ್ಯಾಂಪರ್ ಮಾಡು ಅಂತಲ್ಲ. ನಡುನಡುವೆ ತುಂಟತನದ ಕಚಗುಳಿ, ಲಘುಹಾಸ್ಯದ ಕೀಟಲೆ, ತರ್ಕದ ತರ್ಲೆ ಎಲ್ಲ ಇರಬೇಕು. ಅನಾವಶ್ಯಕ ಕಿರಿಕಿರಿಯಾಗಬಾರದು, ಕೀಳರಿಮೆಗೆ ಆಸ್ಪದವಿರಬಾರದು ಅಷ್ಟೇ.
ಮೂರನೆಯದಾಗಿ, ಯಾವುದೇ ಬರಹವು ‘ಹರಕೆ ಸಂದಾಯ’ ಆಗಬಾರದು. ಉಡಾಫೆ ಮತ್ತು ಅತಿಯಾದ ಆತ್ಮವಿಶ್ವಾಸ ಸಲ್ಲದು. ಬರೆದಾದ ನಂತರ ಲೇಖನವನ್ನು ಕಡ್ಡಾಯವಾಗಿ ಕನಿಷ್ಠ ಎರಡು-ಮೂರು ಸಲವಾದರೂ ಪೂರ್ತಿ ಓದಿನೋಡುವ ಪರಿಪಾಠವನ್ನಿಟ್ಟುಕೊಳ್ಳಬೇಕು. ನಾನು ಕೆಲವೊಮ್ಮೆ ನಾಲ್ಕೈದು ಸಲ, ‘ಬೇರೆಬೇರೆ ಓದುಗರ ಪಾದರಕ್ಷೆಗಳಲ್ಲಿ ನನ್ನ ಕಾಲುಗಳನ್ನಿಟ್ಟುಕೊಂಡಂತೆ ಊಹಿಸಿ’ ಓದಿ ನೋಡುವುದೂ ಇದೆ. ಬರಹದಲ್ಲಿನ ಸುಕ್ಕುಗಳನ್ನು, ನಿರಿಗೆಗಳನ್ನು ತೆಗೆಯಲು ಇದು ಸಹಾಯಕವಾಗುತ್ತದೆ. ಮೊದಲಿಂದ ಕೊನೆಯವರೆಗೂ ಅಡೆತಡೆಗಳಿಲ್ಲದೆ ಓದಿಸಿಕೊಳ್ಳುವ ಗುಣ ಬರಹದಲ್ಲಿ ಮೈದಳೆಯುತ್ತದೆ.
ನಾನು ಬರೆಯುವುದು ಬರೀ ನನ್ನ ಆತ್ಮಸಂತೋಷಕ್ಕಲ್ಲ, ಓದುವವರಿಗೊಂದು ಆಪ್ತ ಅನುಭೂತಿಯಾಗುವುದಕ್ಕೆ, ಹಿತಾನುಭವ ಕೊಡುವುದಕ್ಕೆ ಎಂದು ಮೊದಲೇ ಹೇಳಿಬಿಟ್ಟಿದ್ದೆನಲ್ಲ? ಹಾಗಾಗಿ ಬರಹದಲ್ಲಿ ಸತ್ವ ಇರಲಿ ಇಲ್ಲದಿರಲಿ, ಬರಹ ಬಂಧುರವಾಗಿರಲಿ ಇಲ್ಲ ಬರಡಾಗಿರಲಿ ಓದಿಸಿಕೊಳ್ಳುವ ಗುಣವನ್ನಾದರೂ ಖಾತರಿಪಡಿಸುವುದು ನನ್ನ ಆದ್ಯತೆ.
ಪ್ರಸ್ತುತ, ಈ ಬರಹದಲ್ಲೂ ಅದನ್ನಂತೂ ಸಾಧ್ಯವಾದಷ್ಟು ಪಾಲಿಸಿದ್ದೇನೆ ಎಂಬ ನಂಬಿಕೆ ನನ್ನದು!
* * *
["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Version: 20241125

