Episodes

Saturday Nov 05, 2011
Alliteration Everywhere
Saturday Nov 05, 2011
Saturday Nov 05, 2011
ದಿನಾಂಕ 06 ನವೆಂಬರ್ 2011ರ ಸಂಚಿಕೆ...
ಎಲ್ಲಿಂದ ಎಲ್ಲಿಗೆ ಎಲ್ಲಿಟರೇಷನ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ವೇಸ್ಟ್ ಲೇಖನದ ಕೊನೆಯ ವಾಕ್ಯ ಬೇರೆಬೇರೆ ಓದುಗರನ್ನು ಬೇರೆಬೇರೆ ಕಾರಣಗಳಿಂದ ಆಕರ್ಷಿಸಿದೆ. ಅದೊಂಥರ ಪಂಚ್ಲೈನ್ ರೀತಿಯಲ್ಲಿ ಖುಷಿಕೊಡ್ತು ಎಂದು ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಬೂಕಿನಕೆರೆ ಅಲ್ಲ ಬೂಕನಕೆರೆ ಅಂತಿರಬೇಕಿತ್ತು ಎಂದು ತಿದ್ದುಪಡಿ ತಿಳಿಸಿದವರಿದ್ದಾರೆ. ಯಡ್ಯೂರಪ್ಪನವರನ್ನು ಏಕವಚನದಲ್ಲಿ ಗುರುತಿಸಿದ್ದು ಒಳ್ಳೆಯದೆನಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದವರೂ ಇದ್ದಾರೆ. ಸೊರಬದಿಂದ ರಂಗನಾಥ ಬಾಪಟ್ ಬರೆದಿದ್ದಾರೆ- “ತೀರಾ ಬೂಕನಕೆರೆಯವನ ಅಂತ ಬರೆಯುವುದು ವಿಕದಂಥ ಪತ್ರಿಕೆಗೆ, ಪರಾಗಸ್ಪರ್ಶದಂಥ ಅಂಕಣಕ್ಕೆ ಚೆನ್ನಾಗಿ ಕಾಣೋಲ್ಲ. ಹಾಗೆ ಬರೆಯಲು ಬೇರೆ ಪತ್ರಿಕೆಗಳಿದ್ದಾವೆ. ನಿಮಗೆ ಗೊತ್ತಿರಬಹುದು, ಕಾರ್ಯದರ್ಶಿ ಬರೆದುಕೊಟ್ಟ ಮೆಮೊರಾಂಡಮ್ನಲ್ಲಿ ‘ಇಂದಿರಾ, ಜವಾಬ್ ದೋ’ ಅಂತಿದ್ದದ್ದನ್ನು ವಾಜಪೇಯಿಯವರು ಓದುವಾಗ ‘ಇಂದಿರಾಜೀ ಜವಾಬ್ ದೀಜಿಯೇ’ ಎಂದು ತಿದ್ದಿಕೊಂಡು ಓದಿದ್ದರಂತೆ.” ಹಾಗೆ ನೀವೂ ತಿದ್ದಿಕೊಂಡು ಓದಿ ಎಂದು ನಾನಿಲ್ಲಿ ಹೇಳುತ್ತಿಲ್ಲ. ಏಕವಚನದಲ್ಲಿ ಬರೆದದ್ದೇ ಸರಿ ಎಂದು ಉಡಾಫೆ ತೋರಿಸುತ್ತಲೂ ಇಲ್ಲ. ನಾನು ಆ ವಾಕ್ಯವನ್ನು ಬರೆದದ್ದು ಯಡ್ಯೂರಪ್ಪನವರಿಗೆ ಅಗೌರವ ಸೂಚಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಅಲ್ಲ. ಅಲ್ಲೊಂದು ಪದವಿನೋದ ಇತ್ತು. ಬಾಕ್ಸ್ಟರ್, ಬಿಜಿನೆಸ್, ಬೂಕನಕೆರೆ ಮತ್ತು ಬೆರಳಸಂಕೇತ ಈ ನಾಲ್ಕೂ ಪದಗಳು ಬಕಾರದಿಂದಲೇ (ಬಾ ಬಿ ಬೂ ಬೇ) ಆರಂಭವಾಗಿದ್ದವು. ಹೀಗೆ ವಾಕ್ಯದ ಎಲ್ಲ ಪದಗಳೂ ಒಂದೇ ಅಕ್ಷರ/ಉಚ್ಚಾರದಿಂದ ಆರಂಭವಾದರೆ ಅದನ್ನು ‘ಅನುಪ್ರಾಸ’ ಎನ್ನುತ್ತಾರೆ. ಇಂಗ್ಲಿಷ್ನಲ್ಲಿ alliteration ಎಂದು ಹೆಸರು. ತತ್ಕ್ಷಣಕ್ಕೆ ನೆನಪಾಗುವುದೆಂದರೆ ಅತಿಪ್ರಸಿದ್ಧ ಇಂಗ್ಲಿಷ್ ಎಲ್ಲಿಟರೇಷನ್ ವಾಕ್ಯ Peter piper picked a peck of pickled peppers. ಇನ್ನೊಂದು, ಎಲ್ಲಿಟರೇಷನ್ ಆಗಿದ್ದರೂ ಹೃಸ್ವ ರೂಪದಲ್ಲೇ ಪ್ರಖ್ಯಾತವಾಗಿ ಜಗದಗಲ ಹರಡಿರುವ world wide web (www). ಅದರ ಕೃಪೆಯಿಂದಲೇ ನನಗೆ ಗೊತ್ತಾದದ್ದು, ಏನೆಂದರೆ ಆ ‘ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟದ ಪದವಿನೋದ’ ಹುಟ್ಟಿದ್ದು ಜಾನ್ ಹಾರ್ರಿಸ್ (1756-1846) ಎಂಬಾತ ಬರೆದ Peter Piper's Practical Principles of Plain and Perfect Pronunciation ಪುಸ್ತಕದಲ್ಲಿ! ಅನುಪ್ರಾಸ ನನಗೆ ತುಂಬಾ ಇಷ್ಟ. ಅಂಕಣದ ತಲೆಬರಹ ಅಲಂಕರಣಕ್ಕೆ ನಾನು ಆಗಾಗ ಅನುಪ್ರಾಸ ಬಳಸುತ್ತೇನೆ. ‘ತವರೂರಿಂದ ತಿಂಡಿ ತರುವಾಗ ತರಾವರಿ ತೊಂದರೆ’, ‘ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್’, ‘ಮಧ್ಯರಾತ್ರಿ ಮೈಸೂರುಪಾಕ್ ಮೆಲ್ಲುವಾಸೆ’, ‘ಚೆಲುವಗನ್ನಡದಲ್ಲಿ ಚಿತ್ರಕಾವ್ಯದ ಚಮತ್ಕಾರ’, ಮತ್ತು ಇತ್ತೀಚೆಗಿನ ‘ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ’ ಮುಂತಾದ ಶೀರ್ಷಿಕೆಗಳು ನಿಮಗೆ ನೆನಪಿರಬಹುದು. ಈರೀತಿ ಎಲ್ಲಿಟರೇಷನ್ ರಚಿಸುವುದೊಂದೇ ಅಲ್ಲ, ಸಾಹಿತ್ಯದಲ್ಲಿ, ಆಡುಮಾತಿನಲ್ಲಿ ಅಲ್ಲಲ್ಲಿ ಕಾಣಸಿಗುವ ಎಲ್ಲಿಟರೇಷನ್ಅನ್ನು ಗುರುತಿಸಿ ಆನಂದಿಸುವುದು ಸಹ ನನಗೆ ಇಷ್ಟವೇ. ಇವತ್ತು ಆ ‘ಚಟ’ವನ್ನು ನಿಮಗೂ ತಗುಲಿಸಬೇಕೆಂದು ಒಂದು ಚಿಕ್ಕ ಬಯಕೆ. ಅದಕ್ಕೋಸ್ಕರ ಅಂಕಣವಿಡೀ ಅನುಪ್ರಾಸದ ಅಳವಡಿಕೆ.

Saturday Oct 29, 2011
Waste Management
Saturday Oct 29, 2011
Saturday Oct 29, 2011
ದಿನಾಂಕ 30 ಅಕ್ಟೋಬರ್ 2011ರ ಸಂಚಿಕೆ...
ಗಣಿ, ಸಗಣಿ ಎಲ್ಲ ‘ವೇಸ್ಟ್ ಕೇಸ್’ಗಳೇ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ರಸವಾರ್ತೆಯಂತೆ ಬಣ್ಣಿಸಲಿಕ್ಕೆ ಹೇಳಿಮಾಡಿಸಿದಂಥ ಸಂಗತಿ. ಮೊನ್ನೆ ಇಲ್ಲಿ ವಾಷಿಂಗ್ಟನ್ನ ಉಪನಗರವೊಂದರಲ್ಲಿ ನಡೆದದ್ದು. ಇಲ್ಲಿನ ಮಾಧ್ಯಮಗಳು ಇದನ್ನು ಸಾಕಷ್ಟು ರಸವತ್ತಾಗಿಯೇ ಕವರ್ ಮಾಡಿದ್ದವು. ನಿಮಗೆ ಕನ್ನಡದಲ್ಲಿ ವಿವರಿಸುವಾಗ ಮತ್ತಷ್ಟು ತಮಾಷೆಯಾಗಿಸಿ ಹೇಳಬೇಕೆನ್ನಿಸಿತು. ಅದಕ್ಕಾಗಿ ಜಿ.ಪಿ.ರಾಜರತ್ನಂ ಬರೆದ ನಾಯಿಮರಿ ಪದ್ಯಕ್ಕೆ ಒಂದು ವಿಚಿತ್ರ ಸಾಲಿನ ಸೇರ್ಪಡೆ ಮಾಡಿದ್ದೇನೆ- “ನಾಯಿಮರಿ ಇಶ್ಶಿ ಹಾಕಿದ್ರೇನು ಮಾಡುವೆ? ಕಾಲು ಕೆರೆದು ಜಗಳವಾಡಿ ಕೋರ್ಟಿಗ್ಹೋಗುವೆ!” ಆದದ್ದಿಷ್ಟೇ: ಕಿಂಬರ್ಲಿ ಎಂಬ ಮಹಿಳೆ ತನ್ನ ಸ್ನೇಹಿತೆ ಪ್ರವಾಸದಲ್ಲಿದ್ದಾಗಲೆಲ್ಲ ಆಕೆಯ ನಾಯಿಮರಿಯನ್ನು ತಾತ್ಕಾಲಿಕವಾಗಿ ತನ್ನ ಮನೇಲಿಟ್ಟುಕೊಳ್ಳುತ್ತಾಳೆ. ಮುದ್ದಾದ ಬಿಳಿಬಣ್ಣದ ಮರಿ. ‘ಬಾಕ್ಸ್ಟರ್’ ಎಂದು ಹೆಸರು. ಕಿಂಬರ್ಲಿ ಅದನ್ನು ದಿನಾಲೂ ವಾಕಿಂಗ್ಗೆ ಕರಕೊಂಡು ಹೋಗುತ್ತಾಳೆ. ಈ ದೇಶದಲ್ಲಿ ಹೇಗಪ್ಪಾ ಅಂದ್ರೆ ನಾಯಿಯನ್ನು ವಾಕಿಂಗ್ಗೆ ಕರಕೊಂಡು ಹೋಗುವವರು ಎರಡು ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ಒಂದು, ನಾಯಿಗೆ ಸರಪಳಿ ಕಟ್ಟಿದ್ದಿರಬೇಕು; ಎರಡು, ಮಾಲೀಕನ ಬಳಿ ಖಾಲಿ ಪ್ಲಾಸ್ಟಿಕ್ಚೀಲಗಳಿರಬೇಕು. ನಾಯಿ ‘ಬಿಜಿನೆಸ್’ ಮಾಡಿದ್ರೆ (ನಿಮಗಿದನ್ನು ಓದುವಾಗ ವಾಕರಿಕೆ ಬರಬಾರದೆಂದು, ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಬಳಸಿದ ಪದವನ್ನೇ ನಾನೂ ಬಳಸಿದ್ದೇನೆ) ಮಾಲೀಕನೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಸದತೊಟ್ಟಿಯಲ್ಲಿ ಬಿಸಾಡಬೇಕು. ಇಲ್ಲಿ ಬೆಕ್ಕು-ನಾಯಿಗಳನ್ನು ಮಕ್ಕಳಿಗಿಂತಲೂ ಮುದ್ದಾಗಿ ಸಾಕುವವರು ಈ ನಿಯಮಗಳನ್ನು ಯಾವೊಂದು ಬೇಸರವಿಲ್ಲದೆ ಪಾಲಿಸುತ್ತಾರೆ ಕೂಡ.



Saturday Oct 22, 2011
Naarada Also Uses Deodorant
Saturday Oct 22, 2011
Saturday Oct 22, 2011
ದಿನಾಂಕ 23 ಅಕ್ಟೋಬರ್ 2011ರ ಸಂಚಿಕೆ...
ನಾರದ ಮುನಿ ಪರಿಮಳಕ್ಕೆ ಅತ್ತರು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವರು ತ್ರಿಲೋಕಸಂಚಾರಿ. ತಂಬೂರಿ ಹಿಡಕೊಂಡು ಹೊರಟರೆಂದರೆ ತಿರುಗಾಟದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ರಲ್ಲ? “ಇದು ಎಂಥಾ ಲೋಕವಯ್ಯಾ...” ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ರಲ್ಲ? (ಈಗಾದ್ರೆ ಮೆಟ್ರೊ ರೈಲ್ನಲ್ಲೂ ಕಾಣಿಸಿಕೊಳ್ತಿದ್ರೋ ಏನೊ). ಇಂತಿರ್ಪ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ (ಟೂರ್ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ). ಯಾವಾಗ ನೋಡಿದರೂ ತಾಜಾ ಮೈ ಕಾಂತಿ. ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು!


Saturday Oct 15, 2011
Double Entendres Decent Ones
Saturday Oct 15, 2011
Saturday Oct 15, 2011
ದಿನಾಂಕ 16 ಅಕ್ಟೋಬರ್ 2011ರ ಸಂಚಿಕೆ...
ದ್ವಂದ್ವಾರ್ಥವೆಂದರೆ ಅಶ್ಲೀಲವೇ ಅಂತೇನಿಲ್ಲ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅದೊಂದು ಮಿಥ್ಯೆ. ಡಬಲ್ ಮೀನಿಂಗ್ ಎಂದರೆ ಪೋಲಿ, ಅಶ್ಲೀಲ, ಸಭ್ಯತೆಯ ಚೌಕಟ್ಟು ಮೀರಿದ ಅಂತಲೇ ಆಗಿಹೋಗಿದೆ. ಆ ಮಿಥ್ಯೆಯನ್ನು ಹೋಗಲಾಡಿಸಬೇಕಾದರೆ ಅಶ್ಲೀಲವೆನಿಸದ ಸುಂದರ ಸ್ವಾರಸ್ಯಕರ ದ್ವಂದ್ವಾರ್ಥ ಪ್ರಯೋಗಗಳನ್ನು ನಾವು ಹೆಚ್ಚುಹೆಚ್ಚು ಗುರುತಿಸಬೇಕು. ಅಂಥ ರಚನೆಗಳನ್ನು ನಮ್ಮ ಮಾತಿನಲ್ಲಿ, ಬರಹದಲ್ಲಿ ಹೆಚ್ಚುಹೆಚ್ಚು ಅಳವಡಿಸಿಕೊಳ್ಳಬೇಕು. ಏಕೆಂದರೆ ದ್ವಂದ್ವಾರ್ಥವೂ ಸಾಹಿತ್ಯದ ಒಂದು ಪ್ರಮುಖ ಅಲಂಕಾರ. ಅದನ್ನು ಶ್ಲೇಷಾಲಂಕಾರ ಅಥವಾ ಶ್ಲೇಷೆ ಎನ್ನುತ್ತಾರೆ. ಭಾಷೆಯಲ್ಲಿ ಅಲಂಕಾರ ಇರುವುದೇ ಓದುಗನ/ಕೇಳುಗನ ಆಹ್ಲಾದ ಹೆಚ್ಚಿಸುವುದಕ್ಕೆ. ಶ್ಲೇಷೆಯು ಮನಸ್ಸಿಗೆ ಆಹ್ಲಾದಕರವಷ್ಟೇ ಅಲ್ಲ ಪುಟ್ಟದೊಂದು ಅಚ್ಚರಿಯನ್ನೂ ತಂದುಕೊಡುತ್ತದೆ. ತರ್ಕಬದ್ಧ ಯೋಚನೆಗೆ ಹಚ್ಚುತ್ತದೆ. ಮೆದುಳನ್ನು ಚುರುಕಾಗಿಸುತ್ತದೆ. ಹೇಗೆ? ಇಲ್ಲಿದೆ ನೋಡಿ- ಇವತ್ತು ಅಂಕಣದ ಮೈತುಂಬ ಶ್ಲೇಷಾಲಂಕಾರ! ಸ್ವಲ್ಪ ತರ್ಲೆ ರೀತಿಯ, ಆದರೂ ಭಲೇ ತಮಾಷೆ ಎನಿಸುವ ಒಂದೆರಡು ಉದಾಹರಣೆಗಳಿಂದ ಆರಂಭಿಸೋಣ. ದ್ವಂದ್ವಾರ್ಥವೆಂದರೆ ಹೀಗೂ ಉಂಟೇ ಎಂದು ನಿಮಗೆ ಅನಿಸಬೇಕೆಂದೇ ಇದನ್ನು ಆಯ್ದುಕೊಂಡಿದ್ದೇನೆ. ಕೆಎಸ್ಸಾರ್ಟಿಸಿ ಬಸ್ಸುಗಳನ್ನು ನೀವು ನೋಡೇಇರ್ತೀರಲ್ವಾ? ಅವುಗಳ ಮೇಲೆ (ಮೇಲೆ ಅಂದ್ರೆ ಹಿಂಭಾಗದಲ್ಲಿ, ಎರಡೂ ಸೈಡುಗಳಲ್ಲಿ) ‘ಕರ್ನಾಟಕ ಸಾರಿಗೆ’ ಅಂತ ಬರೆದಿರುವುದನ್ನೂ ನೋಡಿರ್ತೀರಿ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ ಎಂದು ಉದ್ದಕ್ಕೆ ಬರೆಯುವ ಬದಲು ‘ಕರ್ನಾಟಕ ಸಾರಿಗೆ’ ಎಂದು ಚಿಕ್ಕದಾಗಿ ಚೊಕ್ಕವಾಗಿ ಬರೆದಿರ್ತಾರೆ. ಹೌದು, ಅದ್ರಲ್ಲೇನು ವಿಶೇಷ? ನಿಮ್ಮವು ಸಾಮಾನ್ಯ ಕಣ್ಣುಗಳಾದರೆ ವಿಶೇಷ ಏನಿಲ್ಲ. ಆದರೆ ಸ್ವಾರಸ್ಯ ಹುಡುಕುವ ಕಣ್ಣುಗಳಾದರೆ ಅಲ್ಲಿ ನಿಮಗೊಂದು ವಿಶೇಷ ಕಾಣಿಸುತ್ತದೆ. ಏನದು? ‘ಕರ್ನಾಟಕ ಸಾರಿಗೆ’ ಎಂದಿರುವುದರ ಪಕ್ಕದಲ್ಲೇ ‘ತಮಿಳುನಾಡು ಸಾಂಬಾರಿಗೆ’ ಅಂತಿದೆಯೆಂದು ಊಹಿಸಿ. ಒಂದು ಕಿರುನಗು ಮಿನುಗುತ್ತದೆ ನಿಮ್ಮ ಮುಖದಲ್ಲಿ. ಅರ್ಥ ಆಗ್ಲಿಲ್ವಾ? ಹೋಗಲಿ, ‘ಸುರಕ್ಷತೆಯತ್ತ ಗಮನ: ಸಾರಿಗೆ ಸಚಿವರ ಭರವಸೆ’ ಎಂದು ಪತ್ರಿಕೆಯಲ್ಲಿ ಹೆಡ್ಡಿಂಗ್ ಓದ್ತೀರಿ. ಆಯ್ತು, ಸಾರಿಗೇನೋ ಭರವಸೆ ಸಿಕ್ತು; ಪಲ್ಯ, ತೊವ್ವೆ, ಹುಳಿ, ತಂಬುಳಿಗಳ ಗತಿಯೇನು? ನಿಮ್ಮಲ್ಲೇ ಪ್ರಶ್ನಿಸಿಕೊಳ್ಳಿ. ಇನ್ನೂ ಅರ್ಥಆಗಿಲ್ವಾ? ‘ಸಾರಿಗೆ ಬಸ್ಸು ಬಿದ್ದು ನಾಲ್ವರು ಜಖಂ’ ಎಂಬ ದಪ್ಪಕ್ಷರ ತಲೆಬರಹ. ಅರ್ರೆ! ಸಾರಿಗೆ ಬಸ್ಸು ಬಿದ್ದರೆ ಟೊಮೆಟೊ ಚಟ್ನಿ ಆದೀತೇ ಹೊರತು ಜನರಿಗೇಕೆ ಜಖಂ ಆಗಬೇಕು? ನೋಡಿದ್ರಾ, ‘ಸಾರಿಗೆ’ ಪದ ಹುಟ್ಟಿಸಿದ ದ್ವಂದ್ವಾರ್ಥದ ತಮಾಷೆ!
Version: 20241125