Episodes
Sunday Sep 23, 2012
Vedhadhyayana Vismaya
Sunday Sep 23, 2012
Sunday Sep 23, 2012
ದಿನಾಂಕ 23 ಸೆಪ್ಟೆಂಬರ್ 2012
ವೇದಾಧ್ಯಯನ ವಿಧಾನದ ವಿಸ್ಮಯ
* ಶ್ರೀವತ್ಸ ಜೋಶಿ
* * * ಹದಿಮೂರ್ ಹದಿನೇಳ್ಲ ಎಷ್ಟು ಎಂದು ಕೇಳಿದರೆ ಬೆಚ್ಚಿಬಿದ್ದು ಕಾಲ್ಕ್ಯುಲೇಟರ್ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ (ಈಗ ಅದನ್ನೂ ಮರೆತ) ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು. ಅದೂ ರಿವರ್ಸ್ ಆರ್ಡರ್, ಡಯಾಗನಲ್ ಆರ್ಡರ್ ಹೀಗೆ ಯಾವ ನಮೂನೆಯಲ್ಲಿ ಬೇಕೊ ಹಾಗೆ ಮಗ್ಗಿಯನ್ನು ಒಪ್ಪಿಸುವ ಜಾಣರಿರುತ್ತಿದ್ದರು. ಯಾಕೆ ಆ ಜಾಣ್ಮೆ ಇರುತ್ತಿತ್ತೆಂದರೆ ಆಗ ಕ್ಯಾಲ್ಕುಲೇಟರ್ಗಳು ಇರಲಿಲ್ಲ, ಅದಕ್ಕೂ ಹಿಂದೆ ಮಗ್ಗಿ ಪುಸ್ತಕಗಳೂ ಇರುತ್ತಿರಲಿಲ್ಲವೇನೊ. ಎಲ್ಲವೂ ಬಾಯಿಪಾಠದ ಕಲಿಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಚಿಕ್ಕಂದಿನಲ್ಲೇ ಮಗ್ಗಿ-ಕೋಷ್ಟಕಗಳ, ಗಣಿತ ಸೂತ್ರಗಳ ಕಂಠಪಾಠದ ಅಭ್ಯಾಸ. ಅದರ ಒಳಿತು-ಕೆಡುಕುಗಳು ಏನೇ ಇರಲಿ ಆಗಿನ ಕಾಲದಲ್ಲಿ ಅದು ಅನಿವಾರ್ಯವೆಂಬ ವಿಷಯವೂ ಗಮನಾರ್ಹ. ಮಗ್ಗಿ-ಕೋಷ್ಟಕ, ಸೂತ್ರ-ಸ್ತೋತ್ರಗಳದೇ ಮಾತು ಅನ್ವಯವಾಗುತ್ತದೆ ವೇದಗಳಿಗೂ ಕೂಡ! ವೇದಗಳು ಭಗವಂತನ ಉಸಿರಿನಿಂದ ಉದ್ಭವವಾದುವು (“ಯಸ್ಯ ನಿಶ್ವಸಿತಂ ವೇದಾ:") ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಋಷಿಮುನಿಗಳು ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿ, ಒಂದಿನಿತೂ ಬದಲಾವಣೆ ಇಲ್ಲದಂತೆ ಜತನವಾಗಿ ಇರಿಸುವಲ್ಲಿ ಬಹಳ ಎಚ್ಚರ ಮತ್ತು ಶ್ರಮ ವಹಿಸಿದ್ದಾರೆ. ಲಿಖಿತ ದಾಖಲೆಗಳಿಲ್ಲದೆ ಬಾಯಿಂದ ಬಾಯಿಗೆ ಮಾತ್ರ (ತಂದೆಯಿಂದ ಮಗನಿಗೆ ಅಥವಾ ಗುರುವಿನಿಂದ ಶಿಷ್ಯನಿಗೆ) ವರ್ಗಾವಣೆ ಹೊಂದುತ್ತ ಸಹಸ್ರಾರು ವರ್ಷಗಳ ಕಾಲದಿಂದಲೂ ವೇದಗಳು ಅಸ್ತಿತ್ವದಲ್ಲಿ ಇವೆಯೆಂದರೆ ಈ ಮೂಲಸ್ವರೂಪ ರಕ್ಷಣೆಯ ಮಹತ್ವ ಮತ್ತು ಅದರ ವಿಸ್ಮಯಕರವಾದ ತಂತ್ರ ನಿಜಕ್ಕೂ ಅದ್ಭುತವಾದುದು! ವೇದಮಂತ್ರ ಪಠಣದ ಒಂದು ಮೂಲಭೂತ ಅವಶ್ಯಕತೆಯೆಂದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕಾದರೆ ಅಕ್ಷರಶುದ್ಧಿ (ಪ್ರತಿಯೊಂದು ಅಕ್ಷರದ ಸರಿಯಾದ ಉಚ್ಚಾರ), ಮಾತ್ರಾಶುದ್ಧಿ (ಪ್ರತಿ ಅಕ್ಷರ ಉಚ್ಚಾರಕ್ಕೆ ನಿಖರವಾದ ಅವಧಿ) ಮತ್ತು ಸ್ವರಶುದ್ಧಿ - ಈ ಮೂರರಲ್ಲೂ ಯಾವೊಂದು ಲೋಪವೂ ಇರಬಾರದು. ಅಷ್ಟೇ ಅಲ್ಲ, ಗೀತೀ ಶೀಘ್ರೀ ಶಿರಃಕಂಪೀ ತಥಾ ಲಿಖಿತಪಾಠಕಃ ಅನರ್ಥಜ್ಞಃ ಅಲ್ಪಕಂಠಶ್ಚ ಷಡೈತೆ ಪಾಠಕಾಧಮಾಃ || ಅಂದರೆ ಹಾಡು ಗುನುಗಿದಂತೆ, ಅವಸರದಲ್ಲಿ, ಸುಮ್ಮನೆ ತಲೆಯನ್ನು ಮೇಲೆ-ಕೆಳಗೆ ಅಲ್ಲಾಡಿಸುತ್ತ, ಪುಸ್ತಕದಿಂದ ಓದುತ್ತ, ಅರ್ಥವನ್ನು ತಿಳಿದುಕೊಳ್ಳದೆ ಮತ್ತು ಕ್ಷೀಣಸ್ವರದಲ್ಲಿ - ಈ ಆರು ನಮೂನೆಯ ವೇದಪಠಣ ನಿಷ್ಪ್ರಯೋಜಕ. ವೇದಗಳ ಸರಿಯಾದ ಪಠಣಕ್ಕೆ, ಜತೆಯಲ್ಲೇ ಅವುಗಳ ಮೂಲರೂಪ ರಕ್ಷಣೆಗೆ ದೋಷರಹಿತ ವಿಧಾನ ಮತ್ತು ನಿಯಮಗಳ ಅವಶ್ಯಕತೆ ಬಹಳವಾಗಿ ಇದೆ. ದೋಷರಹಿತ (error proof) ಯಾಕೆಂದರೆ ವೇದೋಚ್ಚಾರದಲ್ಲಿ ಒಂದೇಒಂದು ಅಕ್ಷರ, ಮಾತ್ರೆ ಅಥವಾ ಸ್ವರದ ಲೋಪವಾದರೂ ಆ ಮಂತ್ರದ ಪರಿಣಾಮ ತದ್ವಿರುದ್ಧವಾಗಬಹುದು (ಇಂದ್ರನನ್ನು ಕೊಲ್ಲಲು ಹೊರಟ ‘ವೃತ್ರ’ನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಕೇವಲ ಒಂದು ಸ್ವರವಷ್ಟೇ ತಪ್ಪಾಗಿದ್ದರಿಂದ ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು ಎಂದು ಕಥೆಯಿದೆ)! ವೇದೋಚ್ಚಾರದ ನಿಯಮಗಳೆಲ್ಲ ‘ಶೀಕ್ಷಾ’ ಎನ್ನುವ ವೇದಾಂಗದಲ್ಲೇ ಅಳವಡಿಸಲ್ಪಟ್ಟಿವೆ. ವರ್ಣ (ಅಕ್ಷರಗಳು), ಸ್ವರ (ಉದಾತ್ತ, ಅನುದಾತ್ತ ಮತ್ತು ಸ್ವರಿತ ಎಂಬ ಮೂರು ಸ್ವರಗಳು), ಮಾತ್ರಾಕಾಲ, ಬಲ (ಉಚ್ಚರಿಸಲು ಬೇಕಾದ ಧ್ವನಿಶಕ್ತಿ), ಸಾಮ (ಸ್ವರಗಳ ಏರಿಳಿತದಲ್ಲಿ ಏಕರೂಪ) ಮತ್ತು ಸಂತಾನ (ನಿರಂತರತೆ) - ಇವೆಲ್ಲವುಗಳಿಗೆ ಸಂಬಂಧಿಸಿದಂತೆ ‘ಶೀಕ್ಷಾ’ದಲ್ಲಿ ನಿಯಮಗಳಿವೆ. ಇಷ್ಟೆಲ್ಲ ಚಾಕಚಕ್ಯತೆ ವಹಿಸಿ ವೇದಪಠಣ ಮಾಡಬೇಕಿದ್ದರೆ ಅದರ ಅಭ್ಯಾಸದಲ್ಲೂ ಕಠಿಣ ಪರಿಶ್ರಮದ ಆವಶ್ಯಕತೆ ಇದೆಯೆಂದು ಬೇರೆ ಹೇಳಬೇಕಿಲ್ಲ. ವೇದಾಭ್ಯಾಸ ಒಂದು ಆಸಕ್ತಿಯ ವಿಷಯವಾಗುವಂತೆ, ಬರೀ ಬಾಯಿಪಾಠವಷ್ಟೇ ಎನಿಸದೆ ಬುದ್ಧಿವಂತಿಕೆಯ ಉಪಯೋಗವೂ ಚೆನ್ನಾಗಿ ಆಗುವಂತೆ ಮಾಡಬೇಕಾದರೆ ಪಠಣ ಕ್ರಮದಲ್ಲಿ ವೈವಿಧ್ಯವಿರಬೇಕಾಗುತ್ತದೆ. ಇದನ್ನು ಮನಗಂಡ ಋಷಿಗಳು ಕೆಲವು ‘ಪಾಠಕ್ರಮ’ಗಳನ್ನು ರೂಪಿಸಿದರು. ಅವುಗಳ ಮೂಲಕ ವೇದಕಲಿಕೆ ದೋಷರಹಿತವಾಗಿರುವಂತೆ ನೋಡಿಕೊಂಡರು. ಅಂತಹ ಪಾಠಕ್ರಮಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳುವುದಕ್ಕಾಗಿ ಈ ಲೇಖನ. ಬೇರೆಬೇರೆ ಕ್ರಮಗಳಲ್ಲಿ ಪದಗಳ ಜೋಡಣೆ ಅರ್ಥವಾಗುವುದಕ್ಕೋಸ್ಕರ ಸಂಸ್ಕೃತ ಮಂತ್ರಗಳ ಬದಲಿಗೆ, ನಮಗೆಲ್ಲ ಚಿರಪರಿಚಿತವಾದ ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’ ಎಂಬ ಕನ್ನಡ ಪದ್ಯದ ಸಾಲನ್ನು ಉದಾಹರಣೆಗಳಲ್ಲಿ ಅಳವಡಿಸಿಕೊಂಡಿದ್ದೇನೆ. ಕೇವಲ ಉದಾಹರಣೆಗಾಗಿ ಹೊರತು ವೇದಗಳನ್ನು ಲಘುವಾಗಿ ಪರಿಗಣಿಸುವುದಾಗಲೀ ಜಿ.ಪಿ.ರಾಜರತ್ನಂ ಪದ್ಯವನ್ನು ತಿರುಚುವುದಾಗಲಿ ಇಲ್ಲಿಯ ಉದ್ದೇಶವಲ್ಲ. * ಅತ್ಯಂತ ಪ್ರಾಥಮಿಕವಾದ ಮತ್ತು ಸರಳವಾದ (ಸೀದಾಸಾದಾ) ಪಾಠವೆಂದರೆ ‘ವಾಕ್ಯ ಪಾಠ’. ವೇದದ ಒಂದೊಂದೇ ಮಂತ್ರವನ್ನು ಒಂದು ವಾಕ್ಯದಂತೆ ಪಠಿಸುವುದು. ಇದನ್ನೇ 'ಸಂಹಿತಾಪಾಠ’ ಎಂದೂ ಕರೆಯುವರು. ವಾಕ್ಯಪಾಠದಲ್ಲಿ ನಮ್ಮ ತುತ್ತೂರಿಪದ್ಯದ ಸಾಲು ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ || ಎಂದು ಸುಲಭರೂಪದಲ್ಲೇ ಇರುತ್ತದೆ. ಮುಂದಿನದು ‘ಪದ ಪಾಠ’. ನಮಗೆ ಪ್ರಾಥಮಿಕಶಾಲೆಯಲ್ಲಿ ಒಂದನೆ, ಎರಡನೆ ತರಗತಿಯ ಪಠ್ಯಪುಸ್ತಕದಲ್ಲಿ ‘ಕಲಿತ ಪದಗಳು...’ ಎಂದಿರುತ್ತಿತ್ತಲ್ಲ? ಹಾಗೆ, ಮಂತ್ರದ ಪ್ರತಿಯೊಂದು ಪದವನ್ನೂ ಕಲಿತುಕೊಳ್ಳುವುದು. ಸಾಂಕೇತಿಕವಾಗಿ ತುತ್ತೂರಿಹಾಡು ಪದಪಾಠದಲ್ಲಿ ಈ ರೀತಿ ಉಚ್ಚರಿಸಲ್ಪಡುತ್ತದೆ. ಬಣ್ಣದ. ತಗಡಿನ. ತುತ್ತೂರಿ. ಕಾಸಿಗೆ. ಕೊಂಡನು. ಕಸ್ತೂರಿ. ಪದಪಾಠಕ್ಕಿಂತ ತುಸು ಸಂಕೀರ್ಣವಾದದ್ದು ‘ಕ್ರಮ ಪಾಠ’. ಇದರ ವೈಶಿಷ್ಟ್ಯವೆಂದರೆ ಮಂತ್ರದ ಎರಡೆರಡು ಪದಗಳನ್ನು, ಒಂದಕ್ಕೊಂದು ಓವರ್ಲ್ಯಾಪ್ ಆಗುವಂತೆ ಉಚ್ಚರಿಸುತ್ತ ಹೋಗುವುದು. 1-2, 2-3, 3-4, 4-5, 5-೬... ಈ ರೀತಿ. ಇದರಿಂದ ಮಂತ್ರದ ಪದಗಳನ್ನು ಕಲಿತಂತೆ ಆಗುತ್ತದೆಯಷ್ಟೇ ಅಲ್ಲ ಪದಗಳ ಜೋಡಣೆ ಮತ್ತು ಅದರಿಂದಾಗಬೇಕಾದ ಸ್ವರಬದಲಾವಣೆಯನ್ನೂ ಅಭ್ಯಸಿಸಿದಂತಾಗುತ್ತದೆ. (ಕ್ರಮಪಾಠದಲ್ಲಿ ವೇದಮಂತ್ರಪಠಣದ ನಿಷ್ಣಾತಿ ಹೊಂದಿದವರನ್ನು ‘ಕ್ರಮವಿತ್’ ಎನ್ನುತ್ತಾರೆ). ತುತ್ತೂರಿಪದ್ಯದ ಸಾಲು ಕ್ರಮಪಾಠದಲ್ಲಿ ಹೀಗೆ ಬರುತ್ತದೆ. ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ || ಗಮನಿಸಬೇಕಾದ ಅಂಶವೆಂದರೆ ಇದುವರೆಗಿನ ವಾಕ್ಯಪಾಠ, ಪದಪಾಠ ಮತ್ತು ಕ್ರಮಪಾಠ - ಈ ಮೂರರಲ್ಲೂ ಮಂತ್ರದ ಪದಗಳ ಅನುಕ್ರಮವು ಯಥಾಸ್ಥಿತಿಯಲ್ಲಿ, ಅಂದರೆ ಸ್ವಾಭಾವಿಕ ಹರಿವಿನಲ್ಲೇ ಇರುತ್ತದೆ. ಆದ್ದರಿಂದ ಈ ಮೂರು ವಿಧಾನಗಳನ್ನು ‘ಪ್ರಕೃತಿ’ ರೂಪದವು ಎನ್ನುತ್ತಾರೆ. ಮುಂದೆ ವಿವರಿಸಲಿರುವ ಪಾಠಕ್ರಮಗಳಲ್ಲಿ ಮಂತ್ರದ ಪ್ರತ್ಯೇಕ ಪದಗಳನ್ನೂ ಆಚೀಚೆ, ಹಿಂದೆಮುಂದೆ ಸ್ಥಾನಪಲ್ಲಟ ಮಾಡುವುದಿರುತ್ತದೆ. ಅಂದರೆ ಅವುಗಳ ಸ್ವಾಭಾವಿಕ ಅನುಕ್ರಮವನ್ನು ಬದಲಿಸಲಾಗುತ್ತದೆ. ಆದ್ದರಿಂದ ಇಂತಹ ಪಾಠಕ್ರಮಗಳಿಗೆ ‘ವಿಕೃತಿ’ ಎಂದು ಹೆಸರು. ಸಂಸ್ಕೃತ ಶ್ಲೋಕಗಳಲ್ಲಿ ಹೇಗೂ ಕರ್ತೃ-ಕರ್ಮ-ಕ್ರಿಯಾ ಇದೇ ಮಾದರಿಯಲ್ಲಿ (ಕನ್ನಡದಲ್ಲಿದ್ದಂತೆ) ಪದಗಳು ಬರಬೇಕೆಂದೇನಿಲ್ಲ, ಹಾಗಾಗಿ ವಿಕೃತಿಗೊಳಪಟ್ಟ ಶ್ಲೋಕವೂ ಅರ್ಥಪೂರ್ಣವೇ ಆಗಿರುತ್ತದೆ. ಜಟಾ ಮಾಲಾ ಶಿಖಾ ರೇಖಾ ಧ್ವಜೊ ದಂಡೊ ರಥೊ ಘನಃ ಇತ್ಯಷ್ಟಾಃ ವಿಕೃತಯಃ ಪ್ರೊಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ || ಮುಖ್ಯವಾದ ಎಂಟು ಪಾಠಕ್ರಮಗಳು - ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ - ಇವು ವಿಕೃತಿ ರೂಪದವು. ಇವುಗಳ ಪೈಕಿ ಜಟಾ ಮತ್ತು ಫ಼ನ ಪಾಠಕ್ರಮಗಳು ಮಾತ್ರ ತುಂಬ ಪ್ರಸಿದ್ಧವಾದುವು ಮತ್ತು ಚಾಲ್ತಿಯಲ್ಲಿರುವಂಥವು. ವಿಕೃತಿ ಪಾಠಕ್ರಮಗಳ ಪೈಕಿ ಕೆಲವನ್ನು ಈಗ ಪರಿಶೀಲಿಸೋಣ. ‘ಜಟಾ ಪಾಠ’ದಲ್ಲಿ ಪದಗಳು ಜಡೆ ಹೆಣೆದಂತೆ (ಜಟಾ ಎಂದರೆ ಜಡೆ) 1-2-2-1-1-2, 2-3-3-2-2-3, 3-4-4-3-3-4, 4-5-5-4-4-5... ಈ ಶ್ರೇಣಿರೂಪದಲ್ಲಿ ಆವರ್ತವಾಗುತ್ತವೆ. ತುತ್ತೂರಿಪದ್ಯದ ಸಾಲನ್ನು ಜಟಾಕ್ರಮದಲ್ಲಿ ಅಳವಡಿಸಿದಾಗ: ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || ‘ದಂಡ ಪಾಠ’ಕ್ರಮ ಸ್ವಾರಸ್ಯಕರವಾಗಿದೆ. ಇದರಲ್ಲಿಯೂ ಪದಯುಗ್ಮಗಳನ್ನು ಪೋಣಿಸುತ್ತ ಹೋಗಬೇಕು, ಒಂದೊಂದು ಸಲಕ್ಕೂ ಒಂದು ಪದವನ್ನು ಹೆಚ್ಚಿಸುತ್ತ ಹೋಗಬೇಕು ಮಾತ್ರವಲ್ಲ ಅವರೋಹಣ ಕ್ರಮದಲ್ಲಿ ಮೊದಲಿನ ಪದದವರೆಗೂ ಬರಬೇಕು. ತುತ್ತೂರಿಪದ್ಯದ ಸಾಲು ದಂಡಪಾಠದಲ್ಲಿ ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || ಘನಪಾಠಿ ವಿದ್ವಾಂಸ ಎಂಬ ವಿಶೇಷಣವನ್ನು ನೀವೆಂದಾದರೂ ಯಾರ ಬಗ್ಗೆಯಾದರೂ ಓದಿದ್ದೀರಿ/ಕೇಳಿದ್ದೀರಾದರೆ ಅವರು ಘನಪಾಠ ಕ್ರಮದಲ್ಲಿ ವೇದಗಳನ್ನುಚ್ಚರಿಸಬಲ್ಲ ಪಂಡಿತರೆಂದರ್ಥ. ಘನಪಾಠ ತುಂಬ ಜನಪ್ರಿಯವಾದದ್ದು. ಇದರಲ್ಲಿ ಪದಗಳ ಜೋಡಣೆ 1-2-2-1-1-2-3-3-2-1-1-2-3; 2-3-3-2-2-3-4-4-3-2-2-3-4; 3-4-4-3-3-4-5-5-4-3-3-4-5... ಈ ಕ್ರಮದಲ್ಲಿ. ಮತ್ತೆ ನಮ್ಮ ತುತ್ತೂರಿಪದ್ಯದ ಸಾಲಿಗೆ ಅನ್ವಯವಾಗುವಂತೆ ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಎಂಬ ಕಸ್ತೂರಿ || (ಇಲ್ಲಿ, ‘ಕಸ್ತೂರಿ ಎಂಬ ಕಸ್ತೂರಿ...’ ಸಾಲು ಎಲ್ಲಿಂದ ಬಂತು, ರಾಜರತ್ನಂ ಬರೆದ ಮೂಲಪದ್ಯದಲ್ಲಿ ಹಾಗಿರಲಿಲ್ಲವಲ್ಲ ಎಂದು ನಿಮಗೆ ಸಂಶಯ ಬರಬಹುದು. ವೇದಪಠಣದ ವಿವಿಧ ಕ್ರಮಗಳಲ್ಲಿ, ಸೂಕ್ತದ ಕೊನೆಯ ಪದವನ್ನುಪಯೋಗಿಸಿ ಈ ರೀತಿ ಉಚ್ಚರಿಸುವುದು ವಾಡಿಕೆ. ಉದಾಹರಣೆಗೆ ಒಂದು ಸೂಕ್ತವು ’ಸುವೃತ್ತಿ’ ಎಂಬ ಪದದೊಂದಿಗೆ ಮುಕ್ತಾಯವಾಗುವುದಿದ್ದರೆ ಸೂಕ್ತದ ಕೊನೆಯಲ್ಲಿ ‘ಸುವೃತ್ತಿ ಇತಿ ಸುವೃತ್ತಿ...’ ಎಂದು ಹೇಳಬೇಕು. ಆ ಕ್ರಮವನ್ನು ಕನ್ನಡಕ್ಕೆ ತಂದು ‘ಕಸ್ತೂರಿ ಎಂಬ ಕಸ್ತೂರಿ’ ಸಾಲನ್ನು ಸೇರಿಸಿದ್ದೇನೆ). ಘನಪಾಠದ ಘನತೆ ಎಷ್ಟಿದೆಯೆಂದರೆ ಅದು ಅತ್ಯಂತ ಕ್ಲಿಷ್ಟದ ಪಾಠಕ್ರಮವಾದ್ದರಿಂದ ಘನಪಾಠದಲ್ಲಿ ಮಂತ್ರವನ್ನು ಉಚ್ಚರಿಸುವುದರಿಂದ ಸಾವಿರಪಟ್ಟು ಹೆಚ್ಚು ಪುಣ್ಯ. ಸಹಜವಾಗಿಯೇ ಪದಗಳೆಲ್ಲ ಪುನರಾವರ್ತನೆ ಆಗುವುದರಿಂದ ಭಗವಂತನ ಗುಣಗಾನ, ಸದ್ಗುಣ ಚಿಂತನೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ. ಮೇಲಿನ ಪದ್ಯವನ್ನೇ ನೋಡಿ - ಕಸ್ತೂರಿ, ತುತ್ತೂರಿ ಪದಗಳು ಎಷ್ಟು ಸಲ ಬಂದುಹೋಗುತ್ತವೆ! ಅಂದಹಾಗೆ, ಘನಪಾಠ ರೀತಿಯಲ್ಲಿ ಸಂಪೂರ್ಣ ಋಗ್ವೇದವನ್ನು ಪಠಿಸಲು ಸುಮಾರು 450 ಗಂಟೆಗಳು ಬೇಕಾಗಬಹುದು! ಗಾಯತ್ರೀಮಂತ್ರವನ್ನು ಘನಪಾಠ ರೂಪದಲ್ಲಿ ಪಠಿಸುವುದು ಹೇಗೆಂದು ಈ ವಿಡಿಯೋದಲ್ಲಿ ನೋಡಬಹುದು: [youtube=http://www.youtube.com/watch?v=0gDJgnhF23Y] ಪದಪಾಠ, ಕ್ರಮಪಾಠ, ಜಟಾಪಾಠ ಮತ್ತು ಘನಪಾಠದಲ್ಲಿ ಗಾಯತ್ರೀ ಮಂತ್ರ: ಇನ್ನೊಂದು ವಿಡಿಯೋ- [youtube=http://www.youtube.com/watch?v=2_D1qGcxYxM] ಮಾಲಾ ಪಾಠಕ್ರಮದಲ್ಲಿ ಪುಷ್ಪಮಾಲಾ ಮತ್ತು ಕ್ರಮಮಾಲಾ ಎಂಬ ಎರಡು ನಮೂನೆಗಳಿವೆ. ದೇವರಿಗೆ ಅರ್ಪಿಸಲು ಹೂಮಾಲೆ ಕಟ್ಟುವವರು ಹೇಗೆ ಬೇರೆಬೇರೆ ಬಣ್ಣದ, ಜಾತಿಯ ಹೂಗಳಿದ್ದರೂ ಮಾಲೆಯು ಸಮಮಿತಿಯಲ್ಲಿರುವಂತೆ ಕಾಯ್ದುಕೊಳ್ಳುತ್ತಾರೊ ಹಾಗೆಯೇ ಪದಗಳ ಜೋಡಣೆಯ ಪಾಠಕ್ರಮವಿದು. ಶಿಖಾ ಪಾಠಕ್ರಮವೂ ಜಟಾ ಇದ್ದಂತೆ, ಆದರೆ ಎರಡೆರಡು ಪದಗಳ ಬದಲಿಗೆ ಮೂರುಮೂರು ಪದಗಳನ್ನು ಜೋಡಿಸುತ್ತ ಹೋಗಬೇಕು. ರಥ ಪಾಠಕ್ರಮದಲ್ಲಿ ದ್ವಿಪಾದ, ತ್ರಿಪಾದ ಮತ್ತು ಚತುಷ್ಪಾದ ರಥ (ಆಗಲೇ ಟು-ವ್ಹೀಲರ್, ತ್ರೀ-ವ್ಹೀಲರ್ ಕಾನ್ಸೆಪ್ಟ್ ಇತ್ತೇ?) ಎಂಬ ಉಪವಿಧಾನಗಳೂ ಇವೆ, ಒಂದೊಂದೂ ಜಟಿಲವಾಗುತ್ತ ಹೋಗುತ್ತವೆ. ಹಾಗೆಯೇ ರೇಖಾ ಮತ್ತು ಧ್ವಜ ಪಾಠಕ್ರಮಗಳೂ ತೀರಾ ಕ್ಲಿಷ್ಟವಾದುವು; ಈ ಲೇಖನದ ವ್ಯಾಪ್ತಿಗೆ ತೀರಾ ಭಾರವಾದುವು. ನಮ್ಮ ಪೂರ್ವಜರು ಕಂಡುಕೊಂಡ ಈ ಪಾಠಕ್ರಮಗಳು, ಅವುಗಳ ಸಂಕೀರ್ಣತೆ, ಅವುಗಳಲ್ಲಿ ಹೇರಳವಾಗಿ ಉಪಯೋಗವಾಗಿರುವ ಗಣಿತ-ಸಂಖ್ಯಾಶಾಸ್ತ್ರ - ಇವೆಲ್ಲ ಅಚ್ಚರಿ ಮೂಡಿಸುತ್ತವೆಯಲ್ಲವೆ? ಇಂತಹ ಪ್ರಮಾಣೀಕೃತ, ನಿಯಮಬದ್ಧ ಮೌಖಿಕ ವೇದಪಠಣ ಕ್ರಮವನ್ನು ಒಂದು ಅತ್ಯಮೂಲ್ಯ, ದುರ್ಲಭ ಸಂಪ್ರದಾಯವೆಂದು UNESCO (United Nations Educational Scientific and Cultural Organization) ಪ್ಯಾರಿಸ್ನಲ್ಲಿ 2003ರಲ್ಲಿ ನಡೆದ ಶೃಂಗಸಭೆಯಲ್ಲಿ ಘೋಷಿಸಿ ಗೌರವಿಸಿದೆ! ಹಿಂದೂಧರ್ಮದ, ಭಾರತೀಯ ಸಂಸ್ಕೃತಿಯ ಅರ್ಥಪೂರ್ಣ ಸತ್ಸಂಪ್ರದಾಯವೊಂದಕ್ಕೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ನಿಜಕ್ಕೂ ನಾವೆಲ್ಲರೂ ಹೆಮ್ಮೆಪಡುವಂಥದು! * * * ಈ ಲೇಖನವು 2006ರಲ್ಲಿ thatskannada.com ಅಂತರ್ಜಾಲ ಪತ್ರಿಕೆಯ ‘ವಿಚಿತ್ರಾನ್ನ’ ಅಂಕಣದಲ್ಲಿ ಪ್ರಕಟವಾಗಿ ಆಮೇಲೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಮರುಪ್ರಕಟಗೊಂಡಿತ್ತು. ಬೆಂಗಳೂರಿನ ‘ವೇದಪ್ರಕಾಶ’ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಲೇಖನವನ್ನೋದಿದ ಮೈಸೂರಿನ ಡಾ.ನ.ರತ್ನ ಅವರು ತಾವು ಬರೆಯುತ್ತಿದ್ದ 'ನಟ ಮತ್ತು ಮಾತು' ಪುಸ್ತಕದಲ್ಲಿ ಒಂದು ಅನುಬಂಧ (annexure) ಆಗಿ ಈ ಲೇಖನವನ್ನು ಅಳವಡಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಅನುಮತಿ ಕೋರಿದ್ದರು. ವೇದವನ್ನು ಕಂಠಪಾಠ ಮಾಡುವ ಕ್ರಮಬದ್ಧ ರೀತಿಯು ನಟನಟಿಯರಿಗೆ ಸಂಭಾಷಣೆ ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳುವುದಕ್ಕೆ ನೆರವಾಗುತ್ತದೆ ಎಂಬ ತರ್ಕ ಅವರದು. ಇದೀಗ 7Sep2012ರಂದು 'ನಟ ಮತ್ತು ಮಾತು’ ಪುಸ್ತಕ ಬಿಡುಗಡೆಯಾಗಿ ಡಾ.ನ.ರತ್ನ ಅವರು ಕೈಬರಹದ ಒಂದು ಪತ್ರದೊಂದಿಗೆ ಪುಸ್ತಕದ ಪ್ರತಿಯನ್ನು ನನಗೆ ಕಳಿಸಿದ್ದಾರೆ. ರಂಗಭೂಮಿಯ ವಾಚಿಕದ ಬಗ್ಗೆ ಪೂರ್ಣಪ್ರಮಾಣದ ಅತ್ಯಮೂಲ್ಯ ಆಕರಗ್ರಂಥ ರಚನೆಗಾಗಿ ನ.ರತ್ನ ಅವರನ್ನು ಅಭಿನಂದಿಸುತ್ತ ಅವರ ಪುಸ್ತಕಕ್ಕೆಂದು ವಿಶೇಷವಾಗಿ ಗುರುತಿಸಿದ ಈ ಲೇಖನವನ್ನು ಪಠ್ಯ ಮತ್ತು ಧ್ವನಿಮಾಧ್ಯಮದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ವಿಚಿತ್ರಾನ್ನ ಅಂಕಣದಲ್ಲಿ ಲೇಖನ ಪ್ರಕಟವಾದಾಗ ಬಂದಿದ್ದ ಪ್ರತಿಕ್ರಿಯೆಗಳು ಇಲ್ಲಿವೆ. * * * ["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Thursday Sep 20, 2012
nanna baravaNige beLeda bage
Thursday Sep 20, 2012
Thursday Sep 20, 2012
ದಿನಾಂಕ 21 ಸೆಪ್ಟೆಂಬರ್ 2012
ನನ್ನ ಬರವಣಿಗೆ ಬೆಳೆದ ಬಗೆ
* ಶ್ರೀವತ್ಸ ಜೋಶಿ
[ಖ್ಯಾತ ಲೇಖಕ, ಪತ್ರಕರ್ತ, ನನ್ನ ಆತ್ಮೀಯ ಸ್ನೇಹಿತ ‘ಜೋಗಿ’ (ಗಿರೀಶ್ ಹತ್ವಾರ್) ಅವರ ಪುಸ್ತಕ "ಹಲಗೆ ಬಳಪ- ಹೊಸ ಬರಹಗಾರರಿಗೆ ಪಾಠಗಳು" ಪುಸ್ತಕಕ್ಕೆಂದು ಬರೆದ ವಿಶೇಷ ಲೇಖನ ] [ಲೇಖನದ ಕೊನೆಯಲ್ಲಿರುವ "Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಇದನ್ನು ಧ್ವನಿಮಾಧ್ಯಮದಲ್ಲಿಯೂ ಆನಂದಿಸಬಹುದು!] * * * ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’ ಎನ್ನುತ್ತಾನೆ ಎದೆತುಂಬಿ ಹಾಡುವ, ಸ್ವಲ್ಪ ಫಿಲಾಸಫಿಕಲ್ ರೀತಿಯಲ್ಲಿ ಚಿಂತಿಸುವ ಹಾಡುಗಾರ. ಅವನು ಕೇವಲ ತನ್ನ ಆತ್ಮಸಂತೋಷಕ್ಕೆಂದು ಹಾಡುವವನು. ಅದೇ ಧಾಟಿಯಲ್ಲಿ ಒಬ್ಬ ಬರಹಗಾರನೂ ಹೇಳಬಹುದು- ‘ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಯಾರು ಓದದಿದ್ದರೂ ನನಗಿಲ್ಲ ಚಿಂತೆ...’ - ಅವನದೂ ಹೆಚ್ಚೂಕಡಿಮೆ ಫಿಲಾಸಫಿ ಕ್ಯಾಟಗರಿಯೇ. ‘ಯಾರಾದರೂ ಓದಲಿ ಎಂದು ನಾನು ಬರೆಯುವುದಿಲ್ಲ; ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂದು ಪ್ರಪಂಚದ ಪ್ರತಿಯೊಬ್ಬ ಬರಹಗಾರನೂ ಹೇಳಿದ್ದೇ ಆದರೆ ಬರಹಗಳೆಲ್ಲ ಬರೀ ಪರ್ಸನಲ್ ಡೈರಿಗಳಷ್ಟೇ ಆಗಬೇಕಿತ್ತಲ್ಲವೇ? ಪುಣ್ಯಕ್ಕೆ ಹಾಗಿಲ್ಲ ಪರಿಸ್ಥಿತಿ. ಪರ್ಸನಲ್ ಡೈರಿ ಮಾತ್ರ ನಮ್ಮ ಸಂತೋಷಕ್ಕೆ, ನಮ್ಮೊಳಗಿನ ಸ್ವಗತದ ರೂಪದಲ್ಲಿ, ನಮಗೋಸ್ಕರವಷ್ಟೇ ಬರೆಯುವುದು. ಮಿಕ್ಕೆಲ್ಲ ಬರಹಗಳೂ ಯಾರಾದರೂ ಓದಲಿ ಎಂದೇ ಬರೆಯುವಂಥವು. ಅಂದಮೇಲೆ ಅದರಲ್ಲಿ ಮುಚ್ಚುಮರೆ ಏಕೆ? ನಾನೇನೂ ಮಹಾನ್ ಬರಹಗಾರ ಅಲ್ಲ. ಆದರೆ ಬರೆದದ್ದಷ್ಟನ್ನು ನಾನು ಬೇರೆಯವರು ಓದಲೆಂದೇ ಬರೆದಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲೆ! ನನ್ನ ಬರವಣಿಗೆ ಹೇಗೆ ಆರಂಭವಾಯಿತು, ಹೇಗೆ ಮುಂದುವರಿಯಿತು ಎಂದು ನಾನೀಗ ವಿವರಿಸುವವನಿದ್ದೇನಲ್ಲ, ಆಗ ಈ ಮಾತು ಪುಷ್ಟಿಗೊಳ್ಳುತ್ತ ಹೋಗುತ್ತದೆ. ನೀವೇ ನೋಡುವಿರಂತೆ. ಕಡೆಗೆ ಈ ಬರಹವನ್ನಾದರೂ ನೀವು ಓದಬೇಕಂತಲೇ ತಾನೆ ನಾನು ಬರೆಯುತ್ತಿರುವುದು? ದೊಡ್ಡ ಕುಟುಂಬದಲ್ಲಿ ಅತಿ ಕಿರಿಯವನಾಗಿ ಹುಟ್ಟಿ ಬೆಳೆದ ನಾನು, ಸುಮಾರಾಗಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ನನ್ನ ಅಣ್ಣಂದಿರು ವಿದ್ಯಾಭ್ಯಾಸ ಅಥವಾ ವೃತ್ತಿಗಾಗಿ, ಮತ್ತು ಅಕ್ಕಂದಿರು ಮದುವೆಯಾಗಿ, ಪರವೂರಿನಲ್ಲಿದ್ದರು. ಅವರಿಗೆಲ್ಲ ತಿಂಗಳಿಗೊಮ್ಮೆ ಕ್ಷೇಮಸಮಾಚಾರದ ಪತ್ರ ಬರೆಯುವ ಕೆಲಸವನ್ನು ನಮ್ಮ ತಂದೆಯವರು ಹೆಚ್ಚಾಗಿ ನನ್ನ ಕೈಯಿಂದಲೇ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಮೊಬೈಲ್ ಬಿಡಿ, ಲ್ಯಾಂಡ್ಲೈನ್ ಟೆಲಿಫೋನ್ ಸಹ ನಮ್ಮಲ್ಲಿರಲಿಲ್ಲ. ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಲೆಟರ್ ಮತ್ತು ಕವರ್ಗಳೇ ಸಂದೇಶವಾಹಕಗಳು. ಹಾಗಾಗಿ ಶಾಲಾದಿನಗಳಲ್ಲಿ ಪಠ್ಯೇತರವಾಗಿ ನಾನೇನಾದರೂ ಬರೆದದ್ದಿದ್ದರೆ ಆ ಪತ್ರಗಳು ಮಾತ್ರ. ಆದರೆ, ವಿಷಯ-ವಿಚಾರಗಳನ್ನು, ಸಮಾಚಾರ-ಸ್ವಾರಸ್ಯಗಳನ್ನು ಇನ್ನೊಬ್ಬರೊಡನೆ ಎದುರು ಕುಳಿತು ಮಾತನಾಡುತ್ತಿರುವಂತೆ ವಿನಿಮಯ ಮಾಡಿಕೊಳ್ಳುವ ಧಾಟಿ ನನ್ನ ಬರವಣಿಗೆಯಲ್ಲಿ ಕಾಣಿಸಿಕೊಂಡಿದೆಯಾದರೆ ಅದು ಆ ಪತ್ರವ್ಯವಹಾರದಿಂದಲೇ ಎಂದು ನಾನು ದೃಢವಾಗಿ ನಂಬಿದ್ದೇನೆ. ಮತ್ತು ಅದಕ್ಕಾಗಿ ನನ್ನ ದಿ.ತೀರ್ಥರೂಪರವರಿಗೆ ಎಂದೆಂದಿಗೂ ಋಣಿಯಾಗಿದ್ದೇನೆ. ಅಣ್ಣಂದಿರಿಗೆ, ಅಕ್ಕಂದಿರಿಗಷ್ಟೇ ಅಲ್ಲ ನಾನು ಪತ್ರ ಬರೆಯುತ್ತಿದ್ದದ್ದು. ಬಾಲ್ಯದಲ್ಲಿ ಒಬ್ಬ ಆತ್ಮೀಯ ಸ್ನೇಹಿತನೆಂದೇ ಪರಿಗಣಿಸಿದ್ದ ‘ಮಂಗಳೂರು ಆಕಾಶವಾಣಿ’ಗೂ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಬಾಲವೃಂದ ಕಾರ್ಯಕ್ರಮದಲ್ಲಿ ಬರುತ್ತಿದ್ದ ರಸಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ, ಕೋರಿಕೆ ಕಾರ್ಯಕ್ರಮದಲ್ಲಿ ನೆಚ್ಚಿನ ಚಿತ್ರಗೀತೆ ಕೇಳಲಿಕ್ಕೆ, ಪತ್ರೋತ್ತರ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ತಿಳಿಸಲಿಕ್ಕೆ - ಹೀಗೆ ಆಕಾಶವಾಣಿಯೊಂದಿಗೆ ನನ್ನ ಪತ್ರವ್ಯವಹಾರ. ರೇಡಿಯೊದಲ್ಲಿ ನನ್ನ ಪತ್ರದ ಉಲ್ಲೇಖವಾದಾಗೆಲ್ಲ ಒಂಥರದ ರೋಮಾಂಚನ. ಮಾಧ್ಯಮದೊಂದಿಗೆ ಸಂಪರ್ಕ-ಸಂವಹನದ ನನ್ನ ಬರವಣಿಗೆಗೆ ಅದು ಭದ್ರ ಅಡಿಪಾಯ ಹಾಕಿತು. ಮುಂದೆ ನನ್ನ ಹೆಚ್ಚಿನ ಬರವಣಿಗೆಯೆಲ್ಲ ಮಾಧ್ಯಮಗಳಿಗೆಂದೇ ಬರೆದದ್ದು ಅಂತಾಯ್ತು. ದಾವಣಗೆರೆಯಲ್ಲಿ ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ‘ಸುಧಾ’ದಲ್ಲಿ ನನ್ನದೊಂದು ಪತ್ರ ಪ್ರಕಟವಾಯ್ತು. ಅದು ಸುಧಾ ಪತ್ರಿಕೆಯ ಬೆಳ್ಳಿಹಬ್ಬದ ವರ್ಷ. ‘ಸುಧಾ ಪತ್ರಿಕೆ ನಿಮಗೇಕೆ ಇಷ್ಟವಾಗುತ್ತದೆ ಅಥವಾ ಆಗುವುದಿಲ್ಲ?’ ಎಂದು ಓದುಗರಿಂದ ವಿಶೇಷವಾಗಿ ಪತ್ರಗಳನ್ನು ಆಹ್ವಾನಿಸಿದ್ದರು. ‘ಸುಧಾ ಬಗ್ಗೆ ನನ್ನ ಪರ-ವಿರೋಧ ನಿಲುವುಗಳನ್ನು ತಕ್ಕಡಿಯ ಎರಡು ತಟ್ಟೆಗಳಲ್ಲಿಟ್ಟಾಗ...’ ಎಂಬ ನನ್ನ ಪತ್ರವೂ ಆಯ್ಕೆಯಾಗಿ ಪ್ರಕಟವಾಯ್ತು. ನಮ್ಮ ಹಾಸ್ಟೆಲ್ನ ವಾಚನಾಲಯಕ್ಕೆ ತರಿಸುತ್ತಿದ್ದ ಪತ್ರಿಕೆಗಳಲ್ಲಿ ಸುಧಾ ಕೂಡ ಇರುತ್ತಿತ್ತು. ಆ ವಾರ ಸುಧಾದಲ್ಲಿ ನನ್ನ ಪತ್ರ/ಹೆಸರು ಪ್ರಕಟವಾಗಿದೆಯೆಂದು ನನಗೆಷ್ಟು ಪುಳಕವೋ ಅಷ್ಟೇ ಹಿಗ್ಗು ನನ್ನೆಲ್ಲ ಸಹಪಾಠಿಗಳಿಗೂ. ಗೌರವಧನವೆಂದು ಐವತ್ತು ರೂಪಾಯಿಗಳ ಚೆಕ್ ಮತ್ತು ಆ ವಾರದ ಸುಧಾ ಸಂಚಿಕೆ ಅಂಚೆಯಲ್ಲಿ ಬಂದಾಗಿನ ಸಂಭ್ರಮವಂತೂ ಸಾಟಿಯಿಲ್ಲದ್ದು! ಮುಂದೆ ನಾನು ಉದ್ಯೋಗಕ್ಕಾಗಿ ದಿಲ್ಲಿ ಮತ್ತು ಹೈದರಾಬಾದ್ನಲ್ಲಿ ಇದ್ದಾಗಲೂ ತಪ್ಪದೇ ಸುಧಾ ತರಿಸುತ್ತಿದ್ದೆ. ಸಮುದ್ರಮಥನ ವಿಭಾಗಕ್ಕೆ ಪತ್ರ ಬರೆಯುತ್ತಿದ್ದೆ. ಸುಧಾದಲ್ಲಿ ಆಗ ಅತ್ಯಂತ ಜನಪ್ರಿಯವಾಗಿದ್ದ ‘ಚೌ ಚೌ ಚೌಕಿ’ ಅಂಕಣದಲ್ಲಿ ಭಾಗವಹಿಸುತ್ತಿದ್ದೆ. ಸಿಲ್ಲಿ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ಬರೆದುಕಳಿಸುತ್ತಿದ್ದೆ. ಅವು ಪ್ರಕಟವೂ ಆಗುತ್ತಿದ್ದವು. ಹೈದರಾಬಾದ್ನಲ್ಲಿದ್ದಾಗ ನಾನು ‘ದ ಹಿಂದು’ ಪತ್ರಿಕೆ ಓದುತ್ತಿದ್ದೆ. ಅಂಕಣಬರಹಗಳ ಓದನ್ನು ನಾನು ಆರಂಭಿಸಿದ್ದು ಹಿಂದು ಪತ್ರಿಕೆಯಲ್ಲೇ. ಭಾನುವಾರಗಳಂದು ಪ್ರಕಟವಾಗುತ್ತಿದ್ದ ಅಮೆರಿಕನ್ ಹಾಸ್ಯಬರಹಗಾರ ಆರ್ಟ್ ಬಕ್ವಾಲ್ಡ್ನ ಅಂಕಣ ಮತ್ತು ವಿ.ಗಂಗಾಧರ್ ಬರೆಯುತ್ತಿದ್ದ Slice of Life ಅಂಕಣ ನನ್ನ ನೆಚ್ಚಿನ ಓದು. ಸೋಮವಾರಗಳಂದು Between You and Me ಎಂಬ ಅಂಕಣ ಬರುತ್ತಿತ್ತು. ಹಿಂದು ಪತ್ರಿಕೆಯ ಹೈದರಾಬಾದ್ ಆವೃತ್ತಿಯಲ್ಲಿ ಅದನ್ನು ನಡೆಸುತ್ತಿದ್ದವರು ಪ್ರೊ. ಕೆ. ಸುಬ್ರಹ್ಮಣ್ಯಂ (Know Your English ಅಂಕಣವನ್ನೂ ಅವರೇ ನಿರ್ವಹಿಸುತ್ತಿದ್ದರು). ಆ ಅಂಕಣಕ್ಕೆ ನಾನು ಆಗಾಗ ಪತ್ರ ಬರೆಯುತ್ತಿದ್ದೆ. ಅವು ಪ್ರಕಟವಾಗುತ್ತಿದ್ದವು. ಒಮ್ಮೆ ಸಿಕಂದರಾಬಾದ್ ರೈಲ್ವೇ ಸ್ಟೇಷನ್ನ ಯಾವುದೋ ಅವ್ಯವಸ್ಥೆಯ ಕುರಿತು ನಾನು ಬರೆದಿದ್ದ ಪತ್ರಕ್ಕೆ ಸುಬ್ರಹ್ಮಣ್ಯಂ ತಮ್ಮದೊಂದಿಷ್ಟು ವ್ಯಂಗ್ಯವನ್ನೂ ಸೇರಿಸಿ ಪ್ರಕಟಿಸಿದ್ದರು. ಮಾರನೇದಿನ ಹೋಗಿ ನೋಡಿದಾಗ ರೈಲ್ವೇ ಸ್ಟೇಷನ್ನ ಅವ್ಯವಸ್ಥೆ ರಿಪೇರಿ ಆಗಿತ್ತು! ಇದಿಷ್ಟು ಪತ್ರಲೇಖನದ ವಿಚಾರವಾಯ್ತು. ನನ್ನ ಬರವಣಿಗೆಗೆ ಪೂರಕವಾಗಿ ಪರಿಣಮಿಸಿದ ಇನ್ನೂ ಒಂದು ಮುಖ್ಯ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗಲೇ ಹೇಳಿದಂತೆ ನಾನು ಎಂಜಿನಿಯರಿಂಗ್ ಓದಿದ್ದು ದಾವಣಗೆರೆಯ ಬಿ.ಡಿ.ಟಿ ಕಾಲೇಜಿನಲ್ಲಿ, ಎಂಬತ್ತರ ದಶಕದ ಉತ್ತರಾರ್ಧದಲ್ಲಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಆಗಷ್ಟೇ ಶುರುವಾದದ್ದು. ವಿಭಾಗಕ್ಕೆ ಮುಖ್ಯಸ್ಥರಾಗಲಿ ಉಪನ್ಯಾಸಕರಾಗಲಿ ಯಾರೂ ಇರಲಿಲ್ಲ. ಪ್ರಯೋಗಾಲಯ ಸೌಲಭ್ಯವೂ ಅಷ್ಟಕ್ಕಷ್ಟೇ. ಬೇರೆ ವಿಭಾಗಗಳ ಅಥವಾ ಬೇರೆ ಕಾಲೇಜಿನ ಪ್ರಾಧ್ಯಾಪಕರು ಆಗೊಮ್ಮೆ ಈಗೊಮ್ಮೆ ಬಂದು ಪಾಠ ಮಾಡುವ ವ್ಯವಸ್ಥೆ. ವಿದ್ಯಾರ್ಥಿಗಳದು ಹೆಚ್ಚೂಕಡಿಮೆ ಏಕಲವ್ಯನ ಪರಿಸ್ಥಿತಿ. ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಸೆಮಿಸ್ಟರ್ ಆರಂಭದಿಂದಲೇ ಆಯಾಯ ಸಬ್ಜೆಕ್ಟ್ನ ಸಿಲೆಬಸ್ ಏನಿದೆ, ಯಾವ ಪಠ್ಯಪುಸ್ತಕಗಳನ್ನು ಶಿಫಾರಸು ಮಾಡಿದ್ದಾರೆ, ಹಿಂದಿನ ಪ್ರಶ್ನೆಪತ್ರಿಕೆಗಳ ಸ್ವರೂಪ ಹೇಗಿದೆ ಅಂತೆಲ್ಲ ಅಧ್ಯಯನ ನಡೆಸಿ ನನ್ನದೇ ನೋಟ್ಸ್ ತಯಾರಿಸುವುದು. ಅದೂ ಹೇಗೆ, ಒಂದೆರಡು ಸೆಮಿಸ್ಟರ್ಗಳಲ್ಲಿ ಒಂದೆರಡು ಸಬ್ಜೆಕ್ಟ್ಗಳಿಗಲ್ಲ, ಮೂರರಿಂದ ಎಂಟನೇ ಸೆಮಿಸ್ಟರ್ವರೆಗೂ ಅದೇ ಪದ್ಧತಿ. ಮೊದಮೊದಲಿಗೆ ನನಗೋಸ್ಕರವಷ್ಟೇ ಸಿದ್ಧಪಡಿಸಿಕೊಳ್ಳುತ್ತಿದ್ದ ಆ ನೋಟ್ಸ್, ಕ್ರಮೇಣ ಸಹಪಾಠಿಗಳಿಗೂ ಸರಳವಾಗಿದೆಯೆಂದು ತೋರಿತು. ಅವರೆಲ್ಲರೂ ಪಠ್ಯಪುಸ್ತಕಗಳಿಗಿಂತ ನನ್ನ ನೋಟ್ಸನ್ನೇ ಫೊಟೊಕಾಪಿ ಮಾಡಿ ಓದತೊಡಗಿದರು. ಅನಿವಾರ್ಯ ಪರಿಸ್ಥಿತಿಯಲ್ಲಿ ಆಲಂಗಿಸಿಕೊಂಡ ಆ ನೋಟ್ಸ್ ಕಲೆ ನನಗೆ ಚೆನ್ನಾಗಿ ಕರಗತವಾಯಿತು. ಯಾವುದೇ ವಿಷಯವಿರಲಿ, ಅದರ ಬಗ್ಗೆ ಸುಲಭಗ್ರಾಹ್ಯವಾಗುವಂಥ ಕಿರು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು, ಇನ್ನೊಬ್ಬರಿಗೆ ಅರ್ಥವಾಗುವಂತೆ ಆ ವಿಷಯವನ್ನು ಪ್ರಸ್ತುತಪಡಿಸುವುದು ಕರತಲಾಮಲಕವಾಗಿಹೋಯ್ತು. ಎಂಜಿನಿಯರಿಂಗ್ ಶಿಕ್ಷಣ ಮುಗಿದು ಸುಮಾರು ಹತ್ತು ವರ್ಷಗಳ ನಂತರ ನಾನು ಅಮೆರಿಕ ದೇಶಕ್ಕೆ ಬಂದಾಗ ಮೊದಲು ಮಾಡಿದ ಕೆಲಸವೆಂದರೆ ಇಲ್ಲಿ ಗಮನಿಸಿದ ಹೊಸಹೊಸ ಸಂಗತಿಗಳ ಬಗ್ಗೆ ಟಿಪ್ಪಣಿಗಳನ್ನು ತಯಾರಿಸಿ, ಪೂರಕ ಮಾಹಿತಿ ಸಂಗ್ರಹಿಸಿ, Let us know US ಎಂಬ ವೆಬ್ ಜರ್ನಲ್ ತಯಾರಿಸಿದ್ದು. ಅದಕ್ಕೆ ನೆರವಾದದ್ದೂ ನನ್ನ ಎಂಜಿನಿಯರಿಂಗ್ ಶಿಕ್ಷಣದ ನೋಟ್ಸ್ ಕಲೆಯೇ. Let us know US ವೆಬ್ ಜರ್ನಲ್ ಅಂತರಜಾಲದಲ್ಲಿ ಒಬ್ಬ ಅಮೆರಿಕನ್ ಶಿಕ್ಷಕಿಯ ಕಣ್ಣಿಗೆ ಬಿದ್ದು ಆಕೆ ಅದನ್ನು ಮೆಚ್ಚಿ ‘ನನ್ನ ವಿದ್ಯಾರ್ಥಿಗಳಿಗೆ ಮಾಹಿತಿಸಂಗ್ರಹಣೆಯ ಪ್ರಾಜೆಕ್ಟ್ಗೆ ಇದನ್ನು ಮಾದರಿಯಾಗಿ ಕೊಡುತ್ತಿದ್ದೇನೆ’ ಎಂದು ಇಮೇಲ್ ಬರೆದಿದ್ದನ್ನು ಓದಿ ನನಗಾದ ಸಂತಸ ಅಷ್ಟಿಷ್ಟಲ್ಲ. ಹಾಗೆ ನೋಡಿದರೆ ಆಮೇಲೆ ನಾನು ದಟ್ಸ್ಕನ್ನಡ ಡಾಟ್ ಕಾಮ್ ಅಂತರಜಾಲ ಪತ್ರಿಕೆಯಲ್ಲಿ ಬರೆದ ‘ವಿಚಿತ್ರಾನ್ನ’ ಅಂಕಣದಲ್ಲೂ, ಅದಾದಮೇಲೆ ಐದು ವರ್ಷಗಳ ಕಾಲ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ‘ಪರಾಗಸ್ಪರ್ಶ’ ಅಂಕಣದಲ್ಲೂ, ಈ ನೋಟ್ಸ್ ಕಲೆಯ ಬಲದಿಂದಲೇ ರಸಪಾಕ ಸಿದ್ಧಪಡಿಸುತ್ತಿದ್ದದ್ದು. ಜತೆಯಲ್ಲೇ ಓದುಗರೊಡನೆ ಸಂಭಾಷಿಸುತ್ತಿರುವೆನೋ ಎಂದೆನಿಸುವ ಶೈಲಿ, ಬಾಲ್ಯದಲ್ಲಿ ರೂಢಿಯಾಗಿದ್ದ ಪತ್ರಲೇಖನದ ಬಳುವಳಿ. ಅಂಕಣದ ಓದುಗರಿಗೆ ಅದು ಗೊತ್ತಾಗುತ್ತಿತ್ತೋ ಇಲ್ಲವೋ, ಪ್ರತಿ ವಾರದ ಅಂಕಣವನ್ನು ಸಿದ್ಧಪಡಿಸುವಾಗ ನನಗಂತೂ ಚೆನ್ನಾಗಿ ಗೊತ್ತಾಗುತ್ತಿತ್ತು. ಇನ್ನು, ಒಂದನೇ ತರಗತಿಯಿಂದ ಹತ್ತನೆಯವರೆಗೆ ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದದ್ದನ್ನೂ ನನ್ನ ಬರವಣಿಗೆಗೆ ಸತ್ವ ನೀಡಿದ ಪೋಷಕಾಂಶವೆಂದೇ ನಾನು ಗುರುತಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಓದಿದೆನೆಂಬ ಸಂಗತಿ ನನಗೆ ಒಂದು ಕೊರಗಾಗಿ, ಕೀಳರಿಮೆಯಾಗಿ ಯಾವತ್ತಿಗೂ ಅನಿಸಿದ್ದಿಲ್ಲ. ಬದಲಿಗೆ ಆಬಗ್ಗೆ ನನಗೆ ವಿಶೇಷ ಹೆಮ್ಮೆಯೇ ಇದೆ. ಹಾಗೆಯೇ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಸಂಸ್ಕೃತ ಭಾಷೆಯ ಕಲಿಕೆಯೂ ನನ್ನ ಬರವಣಿಗೆಗೆ ಕಿಂಚಿತ್ತಾದರೂ ಮೆರುಗು ಕೊಡುವುದರಲ್ಲಿ ನೆರವಾಗಿದೆ. ಭಾಷೆಗಳ ಬಗ್ಗೆ ನನಗಿರುವ ಕುತೂಹಲ, ಬೇರೆಬೇರೆ ಭಾಷೆಗಳ ನಡುವಿನ ಸಾಮ್ಯ-ವ್ಯತ್ಯಾಸಗಳ ವಿಶ್ಲೇಷಣೆ, ತೀರಾ ಮಡಿವಂತಿಕೆಯಿಲ್ಲದೆ ಸಂದರ್ಭೋಚಿತವಾಗಿ ಬೇರೆಬೇರೆ ಭಾಷೆಗಳ ಪದ-ವಾಕ್ಯಗಳ ಬಳಕೆ - ಇವೆಲ್ಲವೂ ಬರವಣಿಗೆಗೊಂದು ಬಣ್ಣ ಕೊಟ್ಟಿವೆ. ಅಷ್ಟೇಕೆ, ಪಿಯುಸಿ ಓದುತ್ತ ಉಜಿರೆಯ ಸಿದ್ಧವನ ಗುರುಕುಲದಲ್ಲಿ, ಎಂಜಿನಿಯರಿಂಗ್ ಓದುತ್ತ ದಾವಣಗೆರೆಯ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಅಭ್ಯಸಿಸಿದ್ದೂ ನನ್ನ ಬದುಕನ್ನು, ಬರವಣಿಗೆಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದೆ ಎಂದು ನಾನು ಗರ್ವದಿಂದ ಹೇಳುತ್ತೇನೆ. ಬರವಣಿಗೆಯಲ್ಲಿ ನಾನು ಅಳವಡಿಸಿಕೊಂಡ, ಅಭ್ಯಾಸಮಾಡಿಕೊಂಡ ಕೆಲವು ಸರಳ ತಂತ್ರಗಳ ಬಗ್ಗೆಯೂ ಹೇಳಿ ಈ ಬರಹವನ್ನು ಮುಗಿಸುತ್ತೇನೆ. ಮೊದಲನೆಯದಾಗಿ, ಎತ್ತರದ ಪೀಠದಲ್ಲಿ ಕುಳಿತು/ನಿಂತು ಕೆಳಗೆ ನೋಡುತ್ತ ಜನರಿಗೆ ಉಪದೇಶ ಕೊಡುತ್ತಿದ್ದೇನೆ ಎಂಬಂತೆ ಬರೆಯುವುದನ್ನು (ಇದನ್ನು ivory tower writing ಎನ್ನುತ್ತಾರೆ) ನಾನು ಸ್ವಲ್ಪವೂ ಇಷ್ಟಪಡುವುದಿಲ್ಲ. ‘ಏನೋ ಒಂದು ಸ್ವಾರಸ್ಯಕರ ವಿಷಯವಿದೆ ಎಲ್ಲರೂ ಸೇರಿ ಅದನ್ನು ತಿಳಿದುಕೊಳ್ಳೋಣ, ಆನಂದಿಸೋಣ’ ಎನ್ನುವಂಥ ಧಾಟಿಯೇ ನನಗೆ ಬಹಳ ಹಿಡಿಸುತ್ತದೆ. ಮತ್ತದೇ, ಎಂಜಿನಿಯರಿಂಗ್ ನೋಟ್ಸ್ ಕಲೆಯ ಪ್ರಭಾವ. ಎರಡನೆಯದಾಗಿ, ಓದುಗನಿಗೆ ಹಿತಾನುಭವ ಆಗಬೇಕು, ಅದು ಬರಹದುದ್ದಕ್ಕೂ ಆಗುತ್ತಲೇ ಇರಬೇಕು ಎನ್ನುವುದು ನನ್ನ ಮುಖ್ಯ ಕಾಳಜಿ. ಅಂದಮಾತ್ರಕ್ಕೆ ಓದುಗನನ್ನು ಪ್ಯಾಂಪರ್ ಮಾಡು ಅಂತಲ್ಲ. ನಡುನಡುವೆ ತುಂಟತನದ ಕಚಗುಳಿ, ಲಘುಹಾಸ್ಯದ ಕೀಟಲೆ, ತರ್ಕದ ತರ್ಲೆ ಎಲ್ಲ ಇರಬೇಕು. ಅನಾವಶ್ಯಕ ಕಿರಿಕಿರಿಯಾಗಬಾರದು, ಕೀಳರಿಮೆಗೆ ಆಸ್ಪದವಿರಬಾರದು ಅಷ್ಟೇ. ಮೂರನೆಯದಾಗಿ, ಯಾವುದೇ ಬರಹವು ‘ಹರಕೆ ಸಂದಾಯ’ ಆಗಬಾರದು. ಉಡಾಫೆ ಮತ್ತು ಅತಿಯಾದ ಆತ್ಮವಿಶ್ವಾಸ ಸಲ್ಲದು. ಬರೆದಾದ ನಂತರ ಲೇಖನವನ್ನು ಕಡ್ಡಾಯವಾಗಿ ಕನಿಷ್ಠ ಎರಡು-ಮೂರು ಸಲವಾದರೂ ಪೂರ್ತಿ ಓದಿನೋಡುವ ಪರಿಪಾಠವನ್ನಿಟ್ಟುಕೊಳ್ಳಬೇಕು. ನಾನು ಕೆಲವೊಮ್ಮೆ ನಾಲ್ಕೈದು ಸಲ, ‘ಬೇರೆಬೇರೆ ಓದುಗರ ಪಾದರಕ್ಷೆಗಳಲ್ಲಿ ನನ್ನ ಕಾಲುಗಳನ್ನಿಟ್ಟುಕೊಂಡಂತೆ ಊಹಿಸಿ’ ಓದಿ ನೋಡುವುದೂ ಇದೆ. ಬರಹದಲ್ಲಿನ ಸುಕ್ಕುಗಳನ್ನು, ನಿರಿಗೆಗಳನ್ನು ತೆಗೆಯಲು ಇದು ಸಹಾಯಕವಾಗುತ್ತದೆ. ಮೊದಲಿಂದ ಕೊನೆಯವರೆಗೂ ಅಡೆತಡೆಗಳಿಲ್ಲದೆ ಓದಿಸಿಕೊಳ್ಳುವ ಗುಣ ಬರಹದಲ್ಲಿ ಮೈದಳೆಯುತ್ತದೆ. ನಾನು ಬರೆಯುವುದು ಬರೀ ನನ್ನ ಆತ್ಮಸಂತೋಷಕ್ಕಲ್ಲ, ಓದುವವರಿಗೊಂದು ಆಪ್ತ ಅನುಭೂತಿಯಾಗುವುದಕ್ಕೆ, ಹಿತಾನುಭವ ಕೊಡುವುದಕ್ಕೆ ಎಂದು ಮೊದಲೇ ಹೇಳಿಬಿಟ್ಟಿದ್ದೆನಲ್ಲ? ಹಾಗಾಗಿ ಬರಹದಲ್ಲಿ ಸತ್ವ ಇರಲಿ ಇಲ್ಲದಿರಲಿ, ಬರಹ ಬಂಧುರವಾಗಿರಲಿ ಇಲ್ಲ ಬರಡಾಗಿರಲಿ ಓದಿಸಿಕೊಳ್ಳುವ ಗುಣವನ್ನಾದರೂ ಖಾತರಿಪಡಿಸುವುದು ನನ್ನ ಆದ್ಯತೆ. ಪ್ರಸ್ತುತ, ಈ ಬರಹದಲ್ಲೂ ಅದನ್ನಂತೂ ಸಾಧ್ಯವಾದಷ್ಟು ಪಾಲಿಸಿದ್ದೇನೆ ಎಂಬ ನಂಬಿಕೆ ನನ್ನದು! * * * ["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]Thursday Sep 13, 2012
Madhura Madhyamavathi
Thursday Sep 13, 2012
Thursday Sep 13, 2012
ದಿನಾಂಕ 14 ಸೆಪ್ಟೆಂಬರ್ 2012
ಮಧುರ ‘ಮಧ್ಯಮಾವತಿ’
* ಶ್ರೀವತ್ಸ ಜೋಶಿ
ರಾಗರಸಾಯನ ಸರಣಿಯನ್ನು ಮುಂದುವರಿಸುತ್ತ ಇವತ್ತು ‘ಮಧ್ಯಮಾವತಿ’ ರಾಗವನ್ನು ಸವಿಯುವವರಿದ್ದೇವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ರಾಗಗಳಲ್ಲೊಂದು ಮಧ್ಯಮಾವತಿ. ಈ ರಾಗಕ್ಕೆ ಸಂದಿರುವ ವಿಶೇಷ ಗೌರವವೆಂದರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕಾರ್ಯಕ್ರಮವನ್ನು ಮಧ್ಯಮಾವತಿ ರಾಗದ ಕೀರ್ತನೆಯೊಂದಿಗೆ, ಅಥವಾ ಕಡೇಪಕ್ಷ ಆ ರಚನೆ ಬೇರೆ ರಾಗದಲ್ಲಿದ್ದರೂ ಕೊನೆಯ ಚರಣವನ್ನು ಮಧ್ಯಮಾವತಿಯಲ್ಲಿ ಹಾಡಿ ಮುಗಿಸಬೇಕು. ಅಂದರೆ ಸಂಗೀತ ಕಛೇರಿಗೆ ಮಂಗಲವೀಯುವ ರಾಗ ಮಧ್ಯಮಾವತಿ. ಈ ಸಂಪ್ರದಾಯದ ಹಿಂದೆ ಒಂದು ನಂಬಿಕೆಯೂ ಇದೆ, ಅದೇನೆಂದರೆ ಸಂಗೀತಕಛೇರಿಯ ವೇಳೆ ಯಾವುದೇ ತಪ್ಪು ಸ್ವರಾಲಾಪನೆ ಆಗಿದ್ದರೆ, ಅಪಸ್ವರ ಮೂಡಿದ್ದರೆ, ತಾಳ ತಪ್ಪಿದ್ದರೆ - ಆ ಎಲ್ಲದಕ್ಕೂ ಒಂದೇ ಪರಿಹಾರವೆಂದರೆ ಕೊನೆಯಲ್ಲಿ ಮಧ್ಯಮಾವತಿ ರಾಗವನ್ನು ಹಾಡುವುದು. ಆಗ ತಪ್ಪುಗಳನ್ನೆಲ್ಲ ಗಾನದೇವತೆ ಮನ್ನಿಸುತ್ತಾಳೆಂಬ ನಂಬಿಕೆ! ಮಧ್ಯಮಾವತಿ ಕೂಡ ಪಂಚಸ್ವರಗಳ ರಾಗ. ಗಾಂಧಾರ (ಗ) ಮತ್ತು ಧೈವತ (ಧ) ಸ್ವರಗಳ ಬಳಕೆ ಇದರಲ್ಲಿಲ್ಲ. “ಸ ರಿ2 ಮ1 ಪ ನಿ2 ಸ" ಆರೋಹಣವಾದರೆ “ಸ ನಿ2 ಪ ಮ1 ರಿ2 ಸ" ಅವರೋಹಣ. 22ನೇ ಮೇಳಕರ್ತ ಖರಹರಪ್ರಿಯ ರಾಗದಿಂದ ಜನ್ಯವಾದ ರಾಗವಿದು. ಹಾರ್ಮೋನಿಯಂ/ಕೀಬೋರ್ಡ್ನಲ್ಲಿ ಕಪ್ಪು ಬಣ್ಣದ ಕೀಲಿಯಿಂದ ಶ್ರುತಿ ಹಿಡಿದರೆ ಮಧ್ಯಮಾವತಿ ರಾಗವನ್ನು ಕಪ್ಪುಬಣ್ಣದ ಕೀಲಿಗಳನ್ನಷ್ಟೇ ಬಳಸಿ ನುಡಿಸುವುದು ಸಾಧ್ಯ! ಮಧ್ಯಮಾವತಿಯಲ್ಲಿ ಚತುಶ್ರುತಿ ರಿಷಭ ಸ್ವರ ಬಳಕೆಯಾಗುತ್ತದೆ, ಅದರ ಬದಲು ಶುದ್ಧ ರಿಷಭ ಸ್ವರವನ್ನು ಬಳಸಿದರೆ ಆಗ ‘ರೇವತಿ’ ರಾಗವಾಗುತ್ತದೆ. ಪಂಚಸ್ವರಗಳ ರಾಗಗಳೆಲ್ಲ (ಮೋಹನ, ಹಿಂದೋಳ, ಉದಯಚಂದ್ರಿಕಾ ಮುಂತಾದುವು) ಹೆಚ್ಚಾಗಿ ಪರಸ್ಪರ ಕೇವಲ ಒಂದೊಂದು ಸ್ವರದ ವ್ಯತ್ಯಾಸದಿಂದ ಬೇರೆಯಾಗಿರುವಂಥವು, ಆದರೂ ವ್ಯತ್ಯಾಸಕ್ಕೆ ಅದೊಂದೇ ಸ್ವರ ಸಾಕು, ಇಡೀ ರಾಗವೇ ಬದಲಾಗುತ್ತದೆ. ಅದೇ ಸಂಗೀತದ ಹಿರಿಮೆ. ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಮಧ್ಯಮಾವತಿ ರಾಗಕ್ಕೆ ಸಮಾನವಾದದ್ದು ‘ಮಧುಮದ್ ಸಾರಂಗ್’ ಎಂಬ ರಾಗ. ಅಲ್ಲೂ ಅಷ್ಟೇ, ವೃಂದಾವನ್ ಸಾರಂಗ್, ಜಲಧರ ಸಾರಂಗ್, ಮಿಯಾಕೀ ಸಾರಂಗ್ ಮುಂತಾಗಿ ಸಾಮ್ಯವಿರುವ ಸಾರಂಗ್ ರಾಗಗಳ ಗುಂಪೇ ಇದೆ. ಶಾಸ್ತ್ರೀಯ ಸಂಗೀತವನ್ನು ಆಳವಾಗಿ ಅಭ್ಯಸಿಸಿದವರಿಗೆ ಆ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನಮ್ಮಂಥ ಅಜ್ಞಾನಿ/ಅಲ್ಪಜ್ಞಾನಿಗಳಿಗೆ 10000 ಅಡಿ ಎತ್ತರದಲ್ಲಿ ವಿಮಾನದಿಂದ ಭೂಮಿ ಮೇಲಿನ ವಸ್ತುಗಳು ಒಂದೇರೀತಿ (ಉದಾ: ಎಲ್ಲ ವಾಹನಗಳೂ, ಮನೆಗಳೂ ಬೆಂಕಿಪೆಟ್ಟಿಗೆಯಂತೆ) ಕಾಣುತ್ತವೋ ಹಾಗೆಯೇ ಸಂಗೀತದಲ್ಲಿ ಈ ರಾಗಗಳೂ. ಸರಿ, ಅದಷ್ಟು ಪೀಠಿಕೆಯ ನಂತರ ಈಗ ಮಧ್ಯಮಾವತಿ ರಾಗದ ರಸಧಾರೆ... * * * ಮೊದಲಿಗೆ, ಎಂ.ಎಸ್.ಸುಬ್ಬಲಕ್ಷ್ಮೀ ಅವರು ಹಾಡಿರುವ "ವಿನಾಯಕುನಿ ವಲೆನು" ಎಂಬ ಕೃತಿ. ತ್ಯಾಗರಾಜರ ರಚನೆ. [youtube=http://www.youtube.com/watch?v=iasgmyGATNQ] *** *** *** *** *** *** *** ಉತ್ತುಕ್ಕಾಡ್ ವೆಂಕಟಸುಬ್ಬೈಯರ್ ಎಂಬುವರು ತಮಿಳಿನಲ್ಲಿ ಶ್ರೀಕೃಷ್ಣನ ಕುರಿತು ರಚಿಸಿರುವ ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತವಲಯದಲ್ಲಿ ತುಂಬ ಪ್ರಸಿದ್ಧ. "ಆಡಾದ್ ಅಸಂಗಾದ್ ವಾ ಕಣ್ಣಾ ..." ಎಂಬ ಕೃತಿ ಅವುಗಳಲ್ಲೊಂದು. ಗೋಪಿಕೆಯರು ಕೃಷ್ಣನನ್ನು ವಿಧವಿಧ ರೂಪದಲ್ಲಿ ಕರೆಯುವ ಪರಿ. ಭರತನಾಟ್ಯ ಅರಂಗೇಟ್ರಂಗಳಲ್ಲಿ ಹೆಚ್ಚಾಗಿ ಈ ಕೃತಿಗೆ ನೃತ್ಯವನ್ನು ಅಳವಡಿಸಿಕೊಳ್ಳುತ್ತಾರೆ. ಇದು ಮಧ್ಯಮಾವತಿ ರಾಗದಲ್ಲಿದೆ. ಈಗ ಕುನ್ನಕ್ಕುಡಿ ವೈದ್ಯನಾಥನ್ ಅವರ ವಯಲಿನ್ ವಾದನದಲ್ಲಿ “ಆಡಾದ್ ಅಸಂಗಾದ್ ವಾ ಕಣ್ಣಾ..." ಆನಂದಿಸೋಣ. [youtube=http://www.youtube.com/watch?v=FjAXkMq8Vvo] *** *** *** *** *** *** *** ಶಾಸ್ತ್ರೀಯ ಸಂಗೀತದ ಝಲಕ್ ಬಳಿಕ ಈಗ ಸ್ವಲ್ಪ ಲಘು ಶಾಸ್ತ್ರೀಯ ಪ್ರಕಾರಕ್ಕೆ ಬರೋಣ. ಪುಟ್ಟ ಬಾಲೆಯೊಬ್ಬಳು ಕೃಷ್ಣನನ್ನು ಕುರಿತು ಮಧುರವಾಗಿ ಹಾಡಿರುವ “ಜಯಜನಾರ್ದನ ಕೃಷ್ಣ ರಾಧಿಕಾಪತೇ" ಭಕ್ತಿಗೀತೆಯನ್ನು ಕೇಳೋಣ. ಮಧ್ಯಮಾವತಿ ರಾಗದಲ್ಲಿರುವ ಈ ಹಾಡಿನಂತೆಯೇ ಇನ್ನೊಂದು ಜನಪ್ರಿಯ ಕೃತಿಯೂ ಇದೆಯಲ್ಲ ಎಂದು ನಿಮಗೆ ನೆನಪಾಗಲೂಬಹುದು. ಅದನ್ನೂ ಆಮೇಲೆ ಕೇಳುವವರಿದ್ದೇವೆ. ಈಗ “ಜಯ ಜನಾರ್ದನ..." ಕೇಳುತ್ತಿರುವಾಗ ನಿಮಗರಿವಿಲ್ಲದಂತೆಯೇ ತಲೆದೂಗಿ ನಿಮ್ಮ ಕೈಗಳು ತಾಳ ಹಾಕತೊಡಗಬಹುದು, ಅಷ್ಟು ಮಧುರವಾಗಿದೆ ಇದು! [youtube=http://www.youtube.com/watch?v=G_9VAy2FkLs] *** *** *** *** *** *** *** ಮಾಸ್ಟರ್ ಶಶಾಂಕ್ ಅವರ ಕೊಳಲು ಮತ್ತು ವಿಶ್ವಮೋಹನ ಭಟ್ ಅವರ ಮೋಹನವೀಣೆ ಜುಗಲ್ಬಂದಿಯಲ್ಲಿ ಮಧ್ಯಮಾವತಿ ರಾಗದ ಒಂದು ಪ್ರಸ್ತುತಿ- [youtube=http://www.youtube.com/watch?v=SRt4rDJHG6U] *** *** *** *** *** *** *** ರಾಗರಸಾಯನ ಮಾಲಿಕೆಯ ಒಂದು ಉದ್ದೇಶವೆಂದರೆ ಅತ್ಯಂತ ಜನಪ್ರಿಯ, ಚಿರಪರಿಚಿತ ಹಾಡುಗಳ ಮೂಲಕ ರಾಗ ಗುರುತಿಸುವಿಕೆ ಮತ್ತು ಕಲಿತುಕೊಳ್ಳುವಿಕೆಯನ್ನು ಉತ್ತೇಜಿಸುವುದು. ಮಧ್ಯಮಾವತಿ ರಾಗಕ್ಕೆ ಅಂಥದೊಂದು ಹೇಳಿಮಾಡಿಸಿದ ಉದಾಹರಣೆಯೆಂದರೆ ಕನ್ನಡಿಗರಿಗೆಲ್ಲ ಚಿರಪರಿಚಿತ "ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ" ಜನಪದಗೀತೆ! ಹೆಂಗಸರಿಗೆ ಬಳೆ ಮತ್ತು ತವರು ಎಂಬ ಎರಡು ಪದಗಳು ಅದೆಷ್ಟು ರೋಮಾಂಚನ ತರಬಲ್ಲವೋ ಈ ಹಾಡನ್ನು ಕೇಳಿದಾಗ ಎಲ್ಲರಿಗೂ ಅಷ್ಟೇ ರೋಮಾಂಚನವಾಗುತ್ತದೆ. ಯೂಟ್ಯೂಬ್ನಲ್ಲಿ ಈ ಹಾಡಿನ ವಿಡಿಯೋ ಹುಡುಕುತ್ತಿದ್ದಾಗ ಚೆನ್ನಾಗಿರುವಂಥದ್ದು ಒಂದೂ ಸಿಗಲಿಲ್ಲ. ಬಳೆಗಾರ ಮತ್ತು ಬಳೆಗಳ ಚಿತ್ರಣವಿರುವಂಥದ್ದು ಒಂದಿರಬೇಕು ಎಂಬ ದೃಷ್ಟಿಯಿಂದ ನಾನೇ ಒಂದಿಷ್ಟು ಚಿತ್ರಗಳನ್ನು ಸಂಗ್ರಹಿಸಿ ಅದಕ್ಕೆ ನನ್ನಲ್ಲಿದ್ದ mp3 ಜೋಡಿಸಿ ಈ ವಿಡಿಯೋ ಏರಿಸಿದ್ದೇನೆ. ಬಳೆಗಳೆಂದಾಗ ನನಗೆ ಜಯಂತಕಾಯ್ಕಿಣಿ ಅವರದೊಂದು ಸಿಹಿಮಾತು ಕೂಡ ನೆನಪಾಗುತ್ತಿದೆ. ಮೂರು ವರ್ಷಗಳ ಹಿಂದೆ ಅಮೆರಿಕ ಭೇಟಿಯ ವೇಳೆ ಇಲ್ಲಿನ ಕನ್ನಡಿಗರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರು, ಕೈತುಂಬಾ ಬಳೆಗಳನ್ನು ತೊಟ್ಟುಕೊಂಡಿದ್ದ ಓರ್ವ ಅಮೆರಿಕನ್ನಡತಿಯನ್ನು "ಇದೇನು ಬಳೆ-ಸ್ಟ್ಯಾಂಡಾ?" ಎಂದು ತನ್ನ ಎಂದಿನ ಮುಗ್ಧನಗುವಿನೊಂದಿಗೆ ಕೇಳಿದ್ದರು. ಈಗ ಆನಂದಿಸೋಣ, ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ... ಹಾಡಿದವರು ಬಿ.ಆರ್.ಛಾಯಾ ಮತ್ತು ಶಶಿಧರ ಕೋಟೆ. ಸಂಗೀತ ನಿರ್ದೇಶನ ಬಿ.ವಿ.ಶ್ರೀನಿವಾಸ. [youtube=http://www.youtube.com/watch?v=ACtdhKaBGaE] *** *** *** *** *** *** *** ‘ಜಯ ಜನಾರ್ದನ ಕೃಷ್ಣ ರಾಧಿಕಾಪತೇ...’ ಗೀತೆಯ ಬಗ್ಗೆ ಹೇಳುವಾಗ ಅದೇ ಧಾಟಿಯ ಇನ್ನೊಂದು ಗೀತೆ ನೆನಪಾಗಬಹುದು ಎಂದಿದ್ದೆನಲ್ಲ? ಇಲ್ಲಿದೆ ನೋಡಿ, “ಹರಿವರಾಸನಂ ವಿಶ್ವಮೋಹನಂ..." ಕೆ.ಜೆ.ಯೇಸುದಾಸ್ ಅವರ ಸುಮಧುರ ಕಂಠದಲ್ಲಿ ಇದನ್ನು ಕೇಳಿದರೆ ಸಾಕ್ಷಾತ್ ಅಯ್ಯಪ್ಪಸ್ವಾಮಿಯೇ ಅರೆಕ್ಷಣ ಭಾವಪರವಶನಾಗಬಹುದು! ಹರಿವರಾಸನಂ... ಹಾಡು ಬೇರೆಬೇರೆ ಆವೃತ್ತಿಗಳದು ನಿಮಗೆ ಸಿಗಬಹುದು, ಆದರೆ ಈಗ ನಾವು ಕೇಳಲಿರುವ ಆವೃತ್ತಿ ಶಬರಿಮಲೈ ದೇವಸ್ಥಾನದಲ್ಲಿ ಪ್ರತಿದಿನವೂ ಮೊಳಗುವಂಥದು. [youtube=http://www.youtube.com/watch?v=nyBZL1TxnPs] *** *** *** *** *** *** *** ಮಧ್ಯಮಾವತಿ ರಾಗವನ್ನು ಆಧರಿಸಿದ ಚಿತ್ರಗೀತೆಗಳು ಕನ್ನಡದಲ್ಲೂ, ಬೇರೆ ಭಾಷೆಗಳಲ್ಲೂ ಸಾಕಷ್ಟು ಇವೆ. ಅವೆಲ್ಲ ಜನಪ್ರಿಯವೂ ಆಗಿವೆ. ‘ಬದುಕು ಬಂಗಾರವಾಯ್ತು’ ಚಿತ್ರದ ಹಾಡು “ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನಿಗೆ..." ಕೇಳಿ ಆನಂದಿಸದವರಾರು? ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಹಾಡಿರುವ ಚಿ.ಉದಯಶಂಕರ್ ರಚನೆ. ಹಳ್ಳಿಪರಿಸರದ ಮುಗ್ಧ ಹುಡುಗಿಯಾಗಿ ಮಂಜುಳಾ ಅಭಿನಯ. ಹಳ್ಳಿ ಬದುಕಿನಲ್ಲಿ ಮುಂಜಾನೆಯ ದೃಶ್ಯಾವಳಿ ಹೇಗಿರುತ್ತದೆ ಎಂಬ ಸುಂದರ ಚಿತ್ರಣ. [youtube=http://www.youtube.com/watch?v=GIoUjEQumc4] *** *** *** *** *** *** *** ಇನ್ನೊಂದು ಅಷ್ಟೇ ಜನಪ್ರಿಯವಾದ ಹಾಡು ‘ಆಲೆಮನೆ’ ಚಿತ್ರದ "ನಮ್ಮೂರ ಮಂದಾರ ಹೂವೆ..." ಡಾ.ದೊಡ್ಡರಂಗೇಗೌಡ ಅವರ ಲೇಖನಿಯಿಂದ ಮೂಡಿಬಂದ ಚಂದದ ಗೀತೆ, ಅಶ್ವತ್ಥ-ವೈದಿ ಸಂಗೀತ ನಿರ್ದೇಶನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವುದು. ಯಾವುದೋ ಒಂದು ಸಂದರ್ಶನದಲ್ಲಿ ಎಸ್.ಪಿ.ಬಾಲು ಈ ಹಾಡಿನ ಬಗ್ಗೆ ಹೇಳಿದ ನೆನಪು- ಮೊದಲು ಸಂಗೀತದ ಟ್ರ್ಯಾಕ್ಗಳನ್ನು ಧ್ವನಿಮುದ್ರಿಸಿಕೊಂಡು ಅದರಮೇಲೆ ಗಾಯಕನ ಧ್ವನಿಯನ್ನು over impose ಮಾಡಿ ಮುದ್ರಿಸಿಕೊಳ್ಳುವ ತಂತ್ರಜ್ಞಾನ ಬಳಸಿದ ಕನ್ನಡದ ಮೊದಲ ಚಿತ್ರಗೀತೆ ಇದಂತೆ (ಈಗಿನ ಕಾಲದಲ್ಲಿ ಈ ತಂತ್ರಜ್ಞಾನ ಬಹಳವೇ ಉಪಯೋಗವಾಗುತ್ತಿದೆ, ಆದರೆ ಎರಡು-ಮೂರು ದಶಕಗಳ ಹಿಂದೆ ಇಂಥ ಪ್ರಯೋಗ ವಿರಳವಾಗಿತ್ತು). [youtube=http://www.youtube.com/watch?v=hrzyzHY4Dyw] *** *** *** *** *** *** *** ಮತ್ತೊಂದು ಸುಂದರವಾದ ಹಾಡು, ‘ಬೆಳ್ಳಿಮೋಡಗಳು’ ಚಿತ್ರದಲ್ಲಿ ಉಪೇಂದ್ರಕುಮಾರ್ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಮತ್ತು ಮನೋ ಹಾಡಿರುವ ಕೆ.ವಿ.ರಾಜು ಅವರ ರಚನೆ "ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೇ ನಾ..." [youtube=http://www.youtube.com/watch?v=Wo8ZTjZXPEk] *** *** *** *** *** *** *** ಭಕ್ತಿಗೀತೆಯೂ ಚಿತ್ರಗೀತೆಯೂ ( ಚಿತ್ರ: ಭಾಗ್ಯವಂತ) ಆಗಿ ಜನಪ್ರಿಯಗೊಂಡ "ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ..." ಸಹ ಮಧ್ಯಮಾವತಿ ರಾಗವನ್ನು ಆಧರಿಸಿದೆ. ಚಿ.ಉದಯಶಂಕರ್ ರಚನೆ, ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ. ಭಕ್ತಿರಸದಲ್ಲಿ ಅದ್ದಿತೆಗೆದಂತಿರುವ ಧ್ವನಿ ಡಾ.ರಾಜಕುಮಾರ್ ಅವರದು. [youtube=http://www.youtube.com/watch?v=BHpe6V5-8-Y] *** *** *** *** *** *** *** ಈಗ ಒಂದು ಫ್ಯೂಷನ್ ಪ್ರಯೋಗವನ್ನು ಆನಂದಿಸುವ ಸಮಯ. ಭಗವದ್ಗೀತೆಯ "ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ..." ಶ್ಲೋಕವನ್ನು ಮಧ್ಯಮಾವತಿ ರಾಗ ಆಧಾರಿಸಿ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತವಾದ್ಯಗಳ ಹಿನ್ನೆಲೆಯೊಂದಿಗೆ ಹಾಡಿದ್ದಾರೆ ಗೋವಿಂದ ಬಾಲಸುಬ್ರಹ್ಮಣ್ಯಂ ಎಂಬುವರು. ಇಂಥ ‘ಪ್ರಯೋಗ’ಗಳು ಶುದ್ಧ ಶಾಸ್ತ್ರೀಯ ಸಂಗೀತವನ್ನಷ್ಟೇ ಬಯಸುವವರಿಗೆ ಇಷ್ಟವಾಗಲಿಕ್ಕಿಲ್ಲ, ಕೆಲವೆಡೆ ಉಚ್ಚಾರ ಸರಿಯಿಲ್ಲದೆ ತಪ್ಪುಗಳೂ ನುಸುಳಿವೆ, ಆವನ್ನೆಲ್ಲ ಮನ್ನಿಸಿ ಇದನ್ನು ಆನಂದಿಸಿದರೆ ಚೆನ್ನಾಗಿಯೇ ಇದೆ ಅಂತನಿಸುತ್ತದೆ. ನೀವೂ ಕೇಳಿನೋಡಿ. [youtube=http://www.youtube.com/watch?v=As-Tdf0d9no] *** *** *** *** *** *** *** ಮಧ್ಯಮಾವತಿ ರಾಗವನ್ನು ಆಧರಿಸಿದ ತೆಲುಗು ಚಿತ್ರಗೀತೆಗಳೂ ಬೇಕಷ್ಟಿವೆ. ಇಲ್ಲಿ ಒಂದೆರಡನ್ನು ಆಯ್ದುಕೊಂಡಿದ್ದೇನೆ, ಇವು ತೆಲುಗೇತರ ಜನರ ಮನಸ್ಸನ್ನೂ ಗೆದ್ದಿವೆ ಎಂಬ ಕಾರಣಕ್ಕಾಗಿ. ಮೊದಲನೆಯದು ‘ಅನ್ನಮಯ್ಯ’ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಅನ್ನಮಾಚಾರ್ಯರ ರಚನೆ “ಅದಿವೋ ಅಲ್ಲದಿವೋ ಶ್ರೀಹರಿ ವಾಸಮು..." ಸಂಗೀತ ನಿರ್ದೇಶನ- ಎಂ.ಎಂ.ಕೀರವಾಣಿ. [youtube=http://www.youtube.com/watch?v=5JiXkoYeZIA] *** *** *** *** *** *** *** ಇನ್ನೊಂದು ಚಿರಪರಿಚಿತ ಹಾಡು, ಸ್ವಾತಿಮುತ್ಯಂ ಚಿತ್ರದ “ಸುವ್ವಿ ಸುವ್ವಿ ಸುವ್ವಾಲಮ್ಮ ಸೀತಾಲಮ್ಮ..." ಕಮಲಹಾಸನ್ ಅಭಿನಯ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ, ಇಳೆಯರಾಜಾ ಸಂಗೀತನಿರ್ದೇಶನ, ಸಿ.ನಾರಾಯಣ ರೆಡ್ಡಿ ಸಾಹಿತ್ಯ - ಆಯಾಯ ಕ್ಷೇತ್ರಗಳ ದಿಗ್ಗಜರನ್ನು ಒಟ್ಟುಗೂಡಿಸಿ ಅದ್ಭುತವನ್ನೇ ಸೃಷ್ಟಿಸುವ ಕಲೆ ಚಿತ್ರನಿರ್ದೇಶಕ ಕೆ.ವಿಶ್ವನಾಥ್ ಅವರದು! ಅಂದಹಾಗೆ ಸ್ವಾತಿಮುತ್ಯಂ ಚಿತ್ರ ತಮಿಳು ಮತ್ತು ಮಲಯಾಳಂಗೆ ಡಬ್ ಆಗಿ, ಕನ್ನಡದಲ್ಲಿ ಸುದೀಪ್ ಅಭಿನಯದ ‘ಸ್ವಾತಿಮುತ್ತು’ ಎಂಬ ರಿಮೇಕ್ ಆಗಿ ಜನಪ್ರಿಯವಾಯಿತು. ಕನ್ನಡ ಆವೃತ್ತಿಯಲ್ಲೂ ‘ಸುವ್ವಿ ಸುವ್ವಿ' ಹಾಡನ್ನು ಅದೇ ಧಾಟಿಯಲ್ಲಿ ಅಳವಡಿಸಿಕೊಳ್ಳಲಾಯಿತು. ಆದರೂ ನಾವೀಗ ಆನಂದಿಸಲಿರುವುದು ತೆಲುಗಿನ ಒರಿಜಿನಲ್. [youtube=http://www.youtube.com/watch?v=ESdJpj3jJbw] *** *** *** *** *** *** *** 'ಶಂಕರಾಭರಣಂ’ ಚಿತ್ರ. ಕೆ.ವಿಶ್ವನಾಥ್ ನಿರ್ದೇಶನ. ವೇಟೂರಿ ಸುಂದರರಾಮಮೂರ್ತಿ ಸಾಹಿತ್ಯ. ಕೆ.ವಿ.ಮಹಾದೇವನ್ ಸಂಗೀತ. ಸೋಮಯಾಜುಲು ಅಭಿನಯ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ. "ಶಂಕರಾ ನಾದಶರೀರಾಪರಾ..." ಹಾಡು. ಕ್ಷಮಿಸಿ, ಬಣ್ಣಿಸಲಿಕ್ಕೆ ನನ್ನಲ್ಲಿ ಪದಗಳಿಲ್ಲ! [youtube=http://www.youtube.com/watch?v=iZACVIMSbOM] *** *** *** *** *** *** *** ಒಂದು ಸಿಹಿಸಿಹಿಯಾದ ಮಲಯಾಳಂ ಚಿತ್ರಗೀತೆ, ‘ನೋಟ್ಟಮ್’ ಚಿತ್ರಕ್ಕಾಗಿ ಜಯಚಂದ್ರನ್ ತಾನೇ ಸಂಗೀತ ನಿರ್ದೇಶಿಸಿ ಹಾಡಿರುವ "ಮೆಲ್ಲೇ ಮೆಲ್ಲೇ...". ಜಯಚಂದ್ರನ್ ಅವರಿಗೆ ಈ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ರಿ ಬಂದಿದೆ. [youtube=http://www.youtube.com/watch?v=SsTCsTtRxZI] *** *** *** *** *** *** *** ಮಧ್ಯಮಾವತಿಯ ಹಿಂದುಸ್ಥಾನಿ ರೂಪ ‘ಮಧುಮದ್ ಸಾರಂಗ್’ ಎಂದು ಆಗಲೇ ಹೇಳಿದ್ದೆನಷ್ಟೆ? ಇಲ್ಲೊಂದು ‘Suspended Pentatonic- Improvisation' ಎಂಬ ಚಿಕ್ಕ ವಿಡಿಯೋ ತುಣುಕು ಇದೆ. ಕೀಬೋರ್ಡ್ನಲ್ಲಿ ನುಡಿಸಿದ ಮಧುಮದ್ ಸಾರಂಗ್ ರಾಗದ ಒಂದು ಝಲಕ್. [youtube=http://www.youtube.com/watch?v=GKoP6Dik2qM] *** *** *** *** *** *** *** ಇನ್ನು ಒಂದೆರಡು ಹಿಂದಿ ಚಿತ್ರಗೀತೆಗಳನ್ನು ಕೇಳೋಣ. ಮಧುಮದ್ ಸಾರಂಗ್ ರಾಗವನ್ನು ಆಧರಿಸಿದ ಗೀತೆಗಳು. ಮೊದಲನೆಯದು ‘ರಾಣಿ ರೂಪಮತಿ’ ಚಿತ್ರದಲ್ಲಿ ಮುಖೇಶ್ ಹಾಡಿರುವ “ಆ ಲೌಟ್ಕೇ ಆಜಾ ಮೇರೇ ಮೀತ್". ಭರತ್ ವ್ಯಾಸ್ ಅವರ ಸಾಹಿತ್ಯಕ್ಕೆ ಎಸ್.ಎನ್.ತ್ರಿಪಾಠಿ ಅವರಿಂದ ಸಂಗೀತ ನಿರ್ದೇಶನ. ಹಿತಮಿತವಾದ ವಾದ್ಯಬಳಕೆಯೊಂದಿಗೆ ಆ ಕಾಲದ ಹಾಡುಗಳು ಎಷ್ಟು ಮಧುರವಾಗಿರುತ್ತಿದ್ದವು! ಅಜರಾಮರವಾಗಿ ಉಳಿಯುವ ಶಕ್ತಿ ಆ ಹಾಡುಗಳದು! [youtube=http://www.youtube.com/watch?v=hyIVG9SM46Y] *** *** *** *** *** *** *** ಮನ್ನಾಡೇ ಮತ್ತು ಲತಾ ಮಂಗೇಶ್ಕರ್ ಹಾಡಿರುವ "ದಯ್ಯಾರೆ ದಯ್ಯಾರೆ ಚಡ್ ಗಯೋ ಪಾಪಿ ಬಿಛುವಾ...." ಹಾಡು, 1958ರಲ್ಲಿ ಬಿಡುಗಡೆಗೊಂಡ ‘ಮಧುಮತಿ’ ಚಿತ್ರದಿಂದ. ಶೈಲೇಂದ್ರ ಅವರ ರಚನೆಗೆ ಸಲಿಲ್ ಚೌಧರಿ ಸಂಗೀತ ನಿರ್ದೇಶನ. ‘ಮಧುಮತಿ’ ಚಿತ್ರವು ಪ್ರಶಸ್ತಿಗಳ ಕೊಳ್ಳೆಹೊಡೆದದ್ದಷ್ಟೇ ಅಲ್ಲ, ಮುಂದೆ ಅಂತಹ ಅನೇಕ ಚಿತ್ರಗಳಿಗೆ ಸ್ಫೂರ್ತಿಯೂ ಆಯಿತು. ಈ "ಚಡ್ ಗಯೋ ಪಾಪಿ ಬಿಛುವಾ" ಹಾಡು ಇವತ್ತಿಗೂ ಎಲ್ಲರಿಗೂ ಇಷ್ಟವಾಗುವುದು ಹೆಣ್ಣಿನ ಸೌಂದರ್ಯ ಮತ್ತು ಮಾದಕತೆಯನ್ನು ಅಶ್ಲೀಲತೆಯ ಯಾವುದೊಂದು ಸೋಂಕಿಲ್ಲದೆ, ಜನಪದ ಸೊಗಡಿನಲ್ಲಿ ಚಿತ್ರಿಸಿಟ್ಟ ಗೀತೆ ಎಂಬುದಕ್ಕಾಗಿ. [youtube=http://www.youtube.com/watch?v=1bRh8ycz5SM] *** *** *** *** *** *** *** ಈಗ ಮಧುಮದ್ ಸಾರಂಗ್ ರಾಗದಲ್ಲಿ ಒಂದು ಗಝಲ್, ಗುಲಾಮ್ ಅಲಿ ಹಾಡಿರುವ "ಬಿನ್ ಬಾರಿಷ್ ಬರಸಾತ್ ನ ಹೋಗೀ..." ಇದು ಅವರ ‘ಸೆಹರ್ ಹೋ ರಹೀ ಹೈ’ ಆಲ್ಬಮ್ನಿಂದ ಆಯ್ದುಕೊಂಡಿರುವುದು. [youtube=http://www.youtube.com/watch?v=Kd0UyVcjuAI] *** *** *** *** *** *** *** ಪಂಡಿತ್ ಜಸ್ರಾಜ್ ಧ್ವನಿಯಲ್ಲಿ ಮಧುಮದ್ ಸಾರಂಗ್ ರಾಗಕ್ಕೆ ಎಂತಹ ಮಾಧುರ್ಯ ಬರುತ್ತದೆಂದು ಈ "ರಸಿಕಾನಿ ರಾಧಾ..." ರಚನೆಯಿಂದ ತಿಳಿದುಕೊಳ್ಳಬಹುದು. ವೃಂದಾವನದ ದೃಶ್ಯಾವಳಿ ಕಣ್ಮುಂದೆ ಕಟ್ಟಿಕೊಡುವಂಥ ಗಾಯನ. [youtube=http://www.youtube.com/watch?v=80yuN4FoSk8] *** *** *** *** *** *** *** ‘ಶಿವಪುತ್ರ ಸಿದ್ಧರಾಮಯ್ಯ ಕೊಂಕಳಿಮಠ’ ಎಂದರೆ ಯಾರೆಂದು ನಿಮಗೆ ಗೊತ್ತಾಗಲಿಕ್ಕಿಲ್ಲ. ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ಹುಟ್ಟಿದವರು ಎಂದರೂ ಹೆಚ್ಚೇನೂ ಪರಿಚಯವಾಗಲಿಕ್ಕಿಲ್ಲ. ಅದೇ ಮಹಾನ್ ವ್ಯಕ್ತಿಯನ್ನು “ಕುಮಾರ ಗಂಧರ್ವ" ಹೆಸರಿನಿಂದ ಉಲ್ಲೇಖಿಸಿದರೆ!? ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಕೀರ್ತಿಶಿಖರ ಏರಿದ ಕಲಾವಿದನ ಚಿತ್ರ ಮನದಲ್ಲಿ ಮೂಡುತ್ತದೆ! ಅಂಥ ಮಹಾಕಲಾವಿದನ ಧ್ವನಿಯನ್ನು ಕೇಳುವುದೂ ಒಂದು ಪುಣ್ಯವೇ. ಕುಮಾರ ಗಂಧರ್ವ ಮಧುಮದ್ ಸಾರಂಗ್ ರಾಗದಲ್ಲಿ ಹಾಡಿರುವ ಒಂದು ಬಂದಿಷ್ "ರಂಗ್ ದೇ ರಂಗರೇಜವಾ..." [youtube=http://www.youtube.com/watch?v=lwOHgL4tTOg] *** *** *** *** *** *** *** ಮಧುಮದ್ ಸಾರಂಗ್ದಿಂದ ಮತ್ತೆ ಮಧ್ಯಮಾವತಿಗೆ ಮರಳುತ್ತ, ಒಂದು ಕನ್ನಡ ಭಕ್ತಿಗೀತೆ- ಮೌಲಿ ಶಾಸ್ತ್ರಿ ಎಂಬ ಗಾಯಕರ "ಸುಮಧುರ ಭಕ್ತಿ ಸುಧೆ" ಅಲ್ಬಮ್ನಿಂದ "ಶ್ರೀ ಹನುಮ ಜೈ ಜೈ ಹನುಮ ಪಾವನ ನಿನ್ನಯ ಜನುಮ..." [youtube=http://www.youtube.com/watch?v=w486xbJuzMc] *** *** *** *** *** *** *** ಮಧ್ಯಮಾವತಿ ರಾಗದಲ್ಲಿರುವ ಪ್ರಖ್ಯಾತ ಕೃತಿಗಳಲ್ಲಿ ಪಾಪನಾಶಂ ಶಿವನ್ ಅವರ "ಕರ್ಪಗಮೇ ಕಡೈಕ್ಕನ್ ಪಾರೈ"ಸಹ ಒಂದು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರನೇಕರು ಇದನ್ನು ತಮ್ಮ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆ. ಪ್ರಸಿದ್ಧ ವೀಣಾವಾದಕಿ ಇ.ಗಾಯತ್ರಿ ಅವರ ವೀಣಾವಾದನದಲ್ಲಿ "ಕರ್ಪಗಮೇ ಕಡೈಕ್ಕನ್ ಪಾರೈ" [youtube=http://www.youtube.com/watch?v=lnOGzEPu0jA] *** *** *** *** *** *** *** The one and only ever popular "ಭಾಗ್ಯದ ಲಕ್ಷ್ಮೀ ಬಾರಮ್ಮ..." ಉಲ್ಲೇಖವಿಲ್ಲದೆ ಮಧ್ಯಮಾವತಿ ರಾಗದ ವಿವರಣೆ ಪೂರ್ಣಗೊಳ್ಳುವುದಾದರೂ ಹೇಗೆ! ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ, ತಲೆತಲಾಂತರದ ಕಲಾವಿದರೆಲ್ಲರನ್ನೂ ಪರಿಗಣಿಸಿ, ಜಗದಗಲ ಹರಡಿರುವ ಹವ್ಯಾಸಿ/ಅಭ್ಯಾಸಿ/ ವೃತ್ತಿಪರ ಸಂಗೀತಗಾರರೆಲ್ಲರನ್ನೂ ಸೇರಿಸಿ ’ಅತ್ಯಂತ ಹೆಚ್ಚು ಹಾಡಲ್ಪಟ್ಟ ಕೃತಿ ಯಾವುದು’ ಎಂಬೊಂದು survey ನಡೆಸಿದರೆ ಬಹುಶಃ ಪ್ರಥಮಸ್ಥಾನ ಗಿಟ್ಟಿಸುವುದು "ಭಾಗ್ಯದ ಲಕ್ಷ್ಮಿ ಬಾರಮ್ಮ". ಸಂಗೀತ ಕಛೇರಿಯನ್ನು ಮಧ್ಯಮಾವತಿ ರಾಗದ ಕೀರ್ತನೆಯೊಂದಿಗೆ ಮುಕ್ತಾಯಗೊಳಿಸುವ ಸಂಪ್ರದಾಯವನ್ನು ಪಾಲಿಸಲು ಕಲಾವಿದರ ಕೈಗೆ ಕೂಡಲೆ ಸಿಗುವ ಕೃತಿ. ಪುರಂದರದಾಸರ ರಚನೆ. ಅದನ್ನು ಹಾಡುವುದರಿಂದಲೇ ಕಲಾವಿದನಿಗೆ ‘ಸಂಭಾವನೆ’ಯೆಂಬ ಲಕ್ಷ್ಮಿಯೂ ಒಲಿದುಬರುತ್ತಾಳೋ ಏನೋ! ಇರಲಿ, ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನ ಯಾವ ಆವೃತ್ತಿಯನ್ನು (ಅಂದರೆ ಯಾವ ಕಲಾವಿದರು ಹಾಡಿದ್ದನ್ನು ಅಥವಾ ವಾದ್ಯದಲ್ಲಿ ನುಡಿಸಿದ್ದನ್ನು) ಇಲ್ಲಿ ರಾಗರಸಾಯನದಲ್ಲಿ ಆಯ್ದುಕೊಳ್ಳಬೇಕೆಂದು ಸಾಕಷ್ಟು ತಲೆಕೆಡಿಸಿಕೊಂಡೆ. ಪಟ್ಟಿ ತುಂಬಾ ದೊಡ್ಡದೇ ಇತ್ತು, ಯಾವುದನ್ನೂ ಬಿಡುವ ಮನಸ್ಸಿಲ್ಲ. ಕೊನೆಗೂ randomಆಗಿ ಒಂದನ್ನು ಆಯ್ದುಕೊಂಡಾಗ ಸಿಕ್ಕಿದ್ದು ಎಸ್.ಜಾನಕಿ ಹಾಡಿರುವ ಆವೃತ್ತಿ. ಇದಂತೂ ನನಗೆ ತುಂಬತುಂಬ ಇಷ್ಟ. ನೀವೂ ಕೇಳಿ ಆನಂದಿಸಿ. [youtube=http://www.youtube.com/watch?v=TLFLASC8Ars] *** *** *** *** *** *** *** ಕೊನೆಯಲ್ಲೊಂದು ‘ಮಂಗಲ’ದ ತುಣುಕು. ಮಂಗಲಧ್ವನಿ ನಾದಸ್ವರದೊಂದಿಗೆ ಕೀಬೋರ್ಡ್! ಇದು ಕೆನಡಾದ ಮಾಂಟ್ರಿಯಲ್ ದೇವಸ್ಥಾನದಲ್ಲಿ ನಡೆದ ಸಂಗೀತಕಛೇರಿಯೊಂದರಿಂದ ಆಯ್ದ ವಿಡಿಯೋ. [youtube=http://www.youtube.com/watch?v=cC5q_GuWyZQ] *** *** *** *** *** *** *** ಇಲ್ಲಿಗೆ ಮಧ್ಯಮಾವತಿ ರಾಗರಸಾಯನ ಮುಗಿಯಿತು. ಇದರಲ್ಲಿನ ಹೆಚ್ಚಿನೆಲ್ಲ ಹಾಡುಗಳು ನಿಮಗೆ ಆಗಲೇ ಪರಿಚಯವಿದ್ದಿರಬಹುದಾದರೂ ಅವೆಲ್ಲವನ್ನೂ ಮಧ್ಯಮಾವತಿ ರಾಗ ಎಂಬ ಸಾಮಾನ್ಯಸೂತ್ರದಲ್ಲಿ ಪೋಣಿಸಿ ಪ್ರಸ್ತುತಪಡಿಸಿದಾಗಿನ ಸಂತೋಷ ಬೇರೆ ರೀತಿಯದು. ಈಗಿನ್ನು ಈ ಹಾಡುಗಳು ಒಂದಿಷ್ಟು ದಿನ ಮನಸ್ಸಲ್ಲಿ ಗುಂಯ್ಗುಡುತ್ತಿರುತ್ತವೆ. ಒಂದರನಂತರ ಇನ್ನೊಂದರಂತೆ medley ರೂಪದಲ್ಲಿ ಇವನ್ನು ಗುನುಗುನಿಸಿದರೆ (humming) ಓಹ್ ಹೌದಲ್ವಾ ಇವೆಲ್ಲ ಒಂದನ್ನೊಂದು ಹೋಲುತ್ತಿವೆ ಎಂದು ಅರಿವಾಗುತ್ತದೆ. ‘ರಾಗರಸಾಯನ’ದ ಉದ್ದೇಶ ಈಡೇರಿದಂತಾಗುತ್ತದೆ! ಎಂದಿನಂತೆ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ...Wednesday Aug 15, 2012
Mohana Mrushtaanna
Wednesday Aug 15, 2012
Wednesday Aug 15, 2012
ದಿನಾಂಕ 17 ಆಗಸ್ಟ್ 2012
‘ಮೋಹನ’ ಮೃಷ್ಟಾನ್ನ
* ಶ್ರೀವತ್ಸ ಜೋಶಿ ರಾಗರಸಾಯನ ಸರಣಿಯನ್ನು ಮುಂದುವರೆಸುತ್ತ ಇದೀಗ ಮೋಹನ ರಾಗ! ಈ ಸಲವೂ ಒಂದಷ್ಟು ವೈವಿಧ್ಯ, ಮತ್ತೊಂದು ಹೊಸತನ ಇರಲೆಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದೇನೆ. ನಿಮ್ಮ ಆಸಕ್ತಿ, ಸಮಯ, ಅನುಕೂಲ, ಇಂಟರ್ನೆಟ್ ಕನೆಕ್ಷನ್ ಕೆಪ್ಯಾಸಿಟಿ ಇತ್ಯಾದಿಗಳನ್ನು ನೋಡಿಕೊಂಡು ನಿಮಗೆ ಬೇಕಾದ್ದನ್ನು, ಬೇಕಾದಷ್ಟನ್ನೇ ಆಯ್ದುಕೊಳ್ಳಬಹುದು. ಭಾಗ-1 ರಲ್ಲಿ ಒಂದೇಒಂದು ವಿಡಿಯೋ ಇದೆ. ಮೋಹನ ರಾಗದ ಪರಿಚಯ, ವೈಶಿಷ್ಟ್ಯ, ಉದಾಹರಣೆಗಳು ಇತ್ಯಾದಿ ಎಲ್ಲವೂ ನಿಮಗೆ ಇದೊಂದೇ ವಿಡಿಯೋದಲ್ಲಿ ಪಠ್ಯರೂಪದಲ್ಲೂ, ಶ್ರಾವ್ಯರೂಪದಲ್ಲೂ ಸಿಗುತ್ತದೆ. ಇದೊಂಥರ mini-meal ಇದ್ದಂತೆ. ಸ್ವಲ್ಪವೇ ಹಸಿವಿರುವುದಾದರೆ, ಇದಿಷ್ಟೇ ಸಾಕಾಗಬಹುದು. ಭಾಗ-2 ರಲ್ಲಿ ಎಂದಿನಂತೆಯೇ ರಾಗ ಆಧಾರಿತ ವಿವಿಧ ಸಂಗೀತ ಪ್ರಕಾರಗಳ ಪ್ರಸ್ತುತಿಗಳಿವೆ. ಹತ್ತು ವಿಡಿಯೋ ತುಣುಕುಗಳಲ್ಲಿ ಮೋಹನ ರಾಗದ ಹತ್ತು ಸ್ಯಾಂಪಲ್ಗಳು. À-la-carte ಯಂತೆ ಅಥವಾ Buffet mealನಂತಾದರೂ ಸರಿ ನಿಮಗೆ ಇಷ್ಟವಾಗುವಷ್ಟನ್ನು ಆನಂದಿಸಬಹುದು. ಭಾಗ-3 ಈ ಸಲದ ಸ್ಪೆಷಲ್! ನಿಮಗೆ ನೆನಪಿರಬಹುದು, ವಿವಿಧಭಾರತಿಯಲ್ಲಿ ‘ಸಾಜ್ ಔರ್ ಆವಾಜ್’ ಎಂಬ ಕಾರ್ಯಕ್ರಮ ಬರುತ್ತಿತ್ತು, ಒಂದು ಹಾಡು (ಚಿತ್ರಗೀತೆಯಿರಬಹುದು ಅಥವಾ ಭಜನ್, ಗಜಲ್, ಶಾಸ್ತ್ರೀಯಸಂಗೀತದ ಒಂದು ಬಂದಿಷ್ ಇತ್ಯಾದಿ ಯಾವುದೇ ಇರಬಹುದು) ಮೊದಲು ವಾದ್ಯಸಂಗೀತದಲ್ಲಿ, ಆಮೇಲೆ ಗಾಯನರೂಪದಲ್ಲಿ ಪ್ರಸಾರವಾಗುತ್ತಿತ್ತು. ಒಂಥರದ ರೋಮಾಂಚಕ ಅನುಭವವಾಗುವ ಕಾರ್ಯಕ್ರಮ. ಇಲ್ಲಿ ಮೋಹನ ರಾಗರಸಾಯನದ ಮೂರನೇ ಭಾಗದಲ್ಲಿ ಅದೇ ರೀತಿಯ ರೋಮಾಂಚಕ ಅನುಭವವಾಗುವಂತೆ ಮೋಹನ ರಾಗ ಆಧಾರಿತ ಹತ್ತು ಹಾಡುಗಳು ‘ಸಾಜ್ ಔರ್ ಆವಾಜ್’ ರೂಪದಲ್ಲಿ ಇವೆ. ಮೂರೂ ಭಾಗಗಳನ್ನು ಆನಂದಿಸಿ Full-meal ಸವಿಯುತ್ತೀರಾದರೂ ಅಜೀರ್ಣವಂತೂ ಖಂಡಿತ ಆಗೋದಿಲ್ಲ ಎಂಬ ಭರವಸೆ ಕೊಡುತ್ತಿದ್ದೇನೆ. ಹಾಗಿದ್ದರೆ ಕಿವಿ ಮತ್ತು ಮನಸ್ಸೆಂಬ ತಟ್ಟೆ ಹಿಡಿದುಕೊಂಡು ಮೋಹನ ಮೃಷ್ಟಾನ್ನಕ್ಕೆ ಸಿದ್ಧರಾಗಿ! *** *** *** *** *** *** ***ಮೋಹನ ರಾಗರಸಾಯನ ಭಾಗ-1
ವಿವರಗಳೆಲ್ಲವೂ ವಿಡಿಯೋದಲ್ಲಿಯೇ ಇವೆ. ಪರದೆಯ ಮೇಲೆ ಮೂಡುವ ಪಠ್ಯವನ್ನು ಗಮನಿಸುತ್ತ ಸಂಗೀತವನ್ನು ಆಲಿಸಿದರಾಯ್ತು. [youtube=http://www.youtube.com/watch?v=yCzFLVhEkaw] *** *** *** *** *** *** ***ಮೋಹನ ರಾಗರಸಾಯನ ಭಾಗ-2
ಸಂಗೀತದ ಅಭ್ಯಾಸವನ್ನು ಮೊದಲಿಗೆ ಸರಳ ಸ್ವರಗಳು ಆಮೇಲೆ ಜಂಟಿ ಸ್ವರಗಳ ಕಲಿಕೆಯಿಂದ ಆರಂಭಿಸುತ್ತಾರೆ. ಸ್ವರ ಕಲಿಕೆ ಆದ ನಂತರ ಚಿಕ್ಕಿಚಿಕ್ಕ ‘ಗೀತ’ಗಳ ಗಾಯನ. ಲಂಬೋದರ ಲಕುಮಿಕರನನ್ನು ನಮಿಸಿದ ನಂತರ ಶಾರದೆಯ ವಂದನೆ. ಮೋಹನ ರಾಗದಲ್ಲಿ “ವರವೀಣಾ ಮೃದುಪಾಣಿ..." ಗೀತಗಾಯನದ ಕಲಿಕೆ. ಇಲ್ಲಿದೆ ನೋಡಿ ಸಂಗೀತಾಭ್ಯಾಸಿಯೋರ್ವನ ವಯಲಿನ್ ವಾದನದಲ್ಲಿ “ವರವೀಣಾ ಮೃದುಪಾಣಿ ವನರುಹಲೋಚನ ರಾಣಿ..." [youtube=http://www.youtube.com/watch?v=u3SLKacnGjY] *** *** *** *** *** *** *** ಮೋಹನ ರಾಗದ ಹಿಂದುಸ್ಥಾನಿ ರೂಪ ‘ಭೂಪ್’ ಅಥವಾ ‘ಭೂಪಾಲಿ’ ಎಂದು ಆಗಲೇ ಭಾಗ-1ರ ವಿಡಿಯೋದಲ್ಲಿ ತಿಳಿದುಕೊಂಡೆವಷ್ಟೆ? ಭೂಪ್ ರಾಗದ ‘ಲಕ್ಷಣಗೀತೆ’ ಇಲ್ಲಿದೆ. ರಾಗದಲ್ಲಿ ಯಾವ್ಯಾವ ಸ್ವರಗಳು ಬರುತ್ತವೆ, ಸಂವಾದಿ-ಪ್ರತಿವಾದಿ ಸ್ವರಗಳು ಯಾವುವು ಅಂತೆಲ್ಲ ಲಕ್ಷಣಗಳನ್ನು ಬಣ್ಣಿಸುವ ಗೀತೆ. ಭೂಪ್ ರಾಗದಲ್ಲೇ ಇದೆ ಎಂದು ಬೇರೆ ಹೇಳಬೇಕಿಲ್ಲ! [youtube=http://www.youtube.com/watch?v=jHWKX_pcGiQ] *** *** *** *** *** *** *** ಮೋಹನ ರಾಗ ಆಧಾರಿತ ಕನ್ನಡ ಚಿತ್ರಗೀತೆಗೊಂದು ಉದಾಹರಣೆ ಕೊಡಿ ಎಂದು ಕೇಳಿದರೆ ಬೇಕಾದಷ್ಟು ಇವೆ. ಆದರೆ ನನ್ನ ಆಯ್ಕೆ ‘ಬಯಲು ದಾರಿ’ ಚಿತ್ರದ all time favorite “ಬಾನಲ್ಲು ನೀನೇ ಭುವಿಯಲ್ಲು ನೀನೇ..." ರಾಜನ್-ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಚಿ.ಉದಯಶಂಕರ್ ರಚನೆ. ಕಲ್ಪನಾ ಅಭಿನಯಕ್ಕೆ ಎಸ್.ಜಾನಕಿಯವರ ಸುಮಧುರ ಕಂಠ. [youtube=http://www.youtube.com/watch?v=TutAMdYh2-4] *** *** *** *** *** *** *** ಸತ್ಯಸಾಯಿಬಾಬಾ ಅವರಿಂದ ಹೆಚ್ಚು ಪ್ರಚಾರಗೊಂಡ ಭಜನೆ “ಗೋವಿಂದ ಕೃಷ್ಣ ಜೈ ಗೋಪಾಲ ಕೃಷ್ಣ ಜೈ" ಕೇಳಿದ್ದೀರಾ? ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆಯ ಮಕ್ಕಳು ಹಾಡಿರುವ ಈ ಭಜನೆ ಶಂಕರ ಟಿವಿ ಚಾನೆಲ್ನಲ್ಲಿ ಪ್ರಸಾರವಾದಾಗಿನ ಧ್ವನಿಮುದ್ರಣ ಇಲ್ಲಿದೆ. [youtube=http://www.youtube.com/watch?v=b6P58rrGlko] *** *** *** *** *** *** *** ಭೂಪ್ ರಾಗ ಆಧಾರಿತ ಹಿಂದಿ ಚಿತ್ರಗೀತೆಗೊಂದು ಉದಾಹರಣೆ ಕೊಡಿ ಎಂದರೂ ತುಂಬಾನೇ ಇವೆ. ಭಾಗ-1ರ ವಿಡಿಯೋದಲ್ಲಿ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದೆ, ಮುಂದೆ ಭಾಗ-3ರಲ್ಲೂ ಒಂದೆರಡು ಸೂಪರ್ಹಿಟ್ ಹಿಂದಿ ಚಿತ್ರಗೀತೆಗಳು ಇವೆ. ಈಗ ನಾವು ನೋಡಲಿರುವುದು ‘ಸಿಲ್ಸಿಲಾ’ ಚಿತ್ರದ “ದೇಖಾ ಏಕ್ ಖ್ವಾಬ್ ತೋ ಯೇ" ಹಾಡನ್ನು. ನೆದರ್ಲ್ಯಾಂಡ್ಸ್ನ ಕ್ಯುಕೆನಾಫ್ ಟ್ಯುಲಿಪ್ಸ್ ಗಾರ್ಡನ್ನಲ್ಲಿ ಚಿತ್ರೀಕರಣಗೊಂಡ ಈ ಹಾಡು ಅಮಿತಾಭ್-ರೇಖಾ ನಿಜಜೀವನದ ಅಭಿನಯ ಎಂದೂ ಹೆಸರುವಾಸಿ. ಕಿಶೋರ್ಕುಮಾರ್ ಮತ್ತು ಲತಾ ಮಂಗೇಶ್ಕರ್ ಹಾಡಿರುವ ಈ ಗೀತೆಯ ಸಾಹಿತ್ಯ: ಜಾವೇದ್ ಅಖ್ತರ್; ಸಂಗೀತ: ಶಿವ್-ಹರಿ. [youtube=http://www.youtube.com/watch?v=rooHyXf9jWw] *** *** *** *** *** *** *** ಸಿಲ್ಸಿಲಾ ಚಿತ್ರದ ಗೀತೆಯ ಬಗ್ಗೆ ವಿವರಗಳನ್ನು ಕೊಡುವಾಗ ಸಂಗೀತ ನಿರ್ದೇಶನ “ಶಿವ್-ಹರಿ" ಎಂದಷ್ಟೇ ಹೇಳಿದ್ದೆ, ಬೇಕಂತಲೇ. ಶಿವ್-ಹರಿ ಎಂದರೆ ಯಾರು? ಅವರಿಬ್ಬರು ಭಾರತದ ಮಹಾನ್ ಸಂಗೀತಗಾರರು, ಗಂಧರ್ವಲೋಕದಿಂದ ನಮಗೋಸ್ಕರ ಇಳಿದುಬಂದವರು, ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ ಮತ್ತು ಬಾನ್ಸುರಿ ಬಾದಷಹ ಹರಿಪ್ರಸಾದ್ ಚೌರಾಸಿಯಾ! ಅವರಿಬ್ಬರ ಜುಗಲ್ಬಂದಿ ಸಂಗೀತ ಸಮಾರಾಧನೆಯೆಂದರೆ ಹೇಗಿರಬೇಡ!? ಅದರಲ್ಲೂ ಅವರು ‘ಭೂಪಾಲಿ’ ರಾಗವನ್ನೇ ಎತ್ತಿಕೊಂಡರೆ? ನೀವೇ ತಿಳಿದುಕೊಳ್ಳಿ ಹೇಗಿರುತ್ತದೆಂದು- [youtube=http://www.youtube.com/watch?v=J0bg56s3jFM] *** *** *** *** *** *** *** ಹುಯಿಲಗೋಳ ನಾರಾಯಣ ರಾಯರು ಬರೆದ ಕರ್ನಾಟಕ ಏಕೀಕರಣ ಗೀತೆ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಕೇಳದ ಕನ್ನಡಿಗರಿದ್ದಾರೆಯೇ? ಈ ‘ನಾಡಗೀತೆ’ಯನ್ನು ಪ್ರಸಿದ್ಧಗೊಳಿಸಿದ ಕೀರ್ತಿ ಪಿ.ಕಾಳಿಂಗರಾಯರಿಗೆ ಸಲ್ಲುತ್ತದೆ. ಕೆಲ ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ನವರು ‘ಹಚ್ಚೇವು ಕನ್ನಡದ ದೀಪ’ ಎಂಬ ಧ್ವನಿಸುರುಳಿಯನ್ನು ಹೊರತಂದರು. ಸಿ.ಅಶ್ವಥ್ ಮತ್ತು ಸಂಗಡಿಗರು ಹಾಡಿದ ಎಂಟು ಹಾಡುಗಳ ಗೀತಗುಚ್ಛವದು. ಅದರಲ್ಲಿ ಈ ಹಾಡು ಕೂಡ ಇತ್ತು. ಈಗ ಕೇಳೋಣ, ಮೋಹನ ರಾಗದಲ್ಲಿ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" [youtube=http://www.youtube.com/watch?v=OKts0q8BXHA] *** *** *** *** *** *** *** ಈಗ ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ. ಶಾಂತಸಾಗರದ ಯಾವುದೋ ಒಂದು ತೀರದಲ್ಲಿ, ನರಪಿಳ್ಳೆಯೂ ಇಲ್ಲದ ಪ್ರದೇಶದಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ ಸೂರ್ಯಾಸ್ತವನ್ನು ನೋಡುತ್ತ ಸಾಗರದ ಅಲೆಗಳ ವರ್ಣವೈಭವವನ್ನು ಸವಿಯುತ್ತ ನೀವು ಕುಳಿತಿದ್ದೀರಿ. ಬೇಕಿದ್ದರೆ ಧ್ಯಾನಮಗ್ನರಾಗಿದ್ದೀರಿ ಅಂತನೂ ಇಟ್ಕೊಳ್ಳಿ. ಸಾಗರದ ಅಲೆಗಳ ಜತೆಯಲ್ಲೇ ಸಂಗೀತಸಾಗರದ ಅಲೆಗಳು ಹಿತಮಿತವಾಗಿ ನಿಮ್ಮ ಕಿವಿಗಳಿಗೆ ಅಪ್ಪಳಿಸುತ್ತವೆ. ಅದೂ ಎಂಥ ಸಂಗೀತ? ಅಚ್ಚಭಾರತೀಯ ಶೈಲಿಯ ಹಿಂದುಸ್ಥಾನಿ ಗಾಯನ, ರಾಗ ‘ಭೂಪ್’ ಅಲೆಅಲೆಯಾಗಿ ಕೇಳಿಬರುತ್ತಿದೆ... ಅಂಥ ಅನುಭವ ನಿಮಗೀಗ ಕುಳಿತಲ್ಲೇ ಆಗಬೇಕಿದ್ದರೆ Princes of Sea ಆಲ್ಬಮ್ನ ಈ Waves Of Paradise ಟ್ರ್ಯಾಕ್ಅನ್ನು ನೀವು ಆಲಿಸಬೇಕು. ಉಸ್ತಾದ್ ಸಲಾಮತ್ ಅಲಿ ಖಾನ್ ಮತ್ತು ಉಸ್ತಾದ್ ಶಫ್ಕತ್ ಅಲಿ ಖಾನ್ ಅವರ ಗಾಯನದೊಂದಿಗೆ ರಘುನಾಥ ಸೇಠ್ ಮತ್ತು ಕ್ರಿಸ್ ಹಿನ್ಜೆ ಅವರ ಬಾನ್ಸುರಿ ವಾದನ. ಜತೆಯಲ್ಲೇ ಸಾಗರದ ಅಲೆಗಳ ಮೊರೆತ. [youtube=http://www.youtube.com/watch?v=X0wcnlgXfxc] *** *** *** *** *** *** *** ಮಂಟಪ ಪ್ರಭಾಕರ ಉಪಾಧ್ಯ ಹೆಸರು ಕೇಳಿರಬಹುದು ನೀವು. ಅವರ ‘ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ’ಗಳ ಬಗ್ಗೆಯೂ ಕೇಳಿರಬಹುದು ಅಥವಾ ನೋಡಿ ಆನಂದಿಸಿರಲೂಬಹುದು. ಮಂಟಪ ಉಪಾಧ್ಯರ ‘ವೇಣು ವಿಸರ್ಜನ’ ಯಕ್ಷಗಾನ ಪ್ರಸಂಗದಲ್ಲಿ “ನಂದ ತನಯನಾಗಮಿಸುವ ಸುಳಿವು ಸಿಕ್ಕಿದೆ..." ಪದ್ಯ, ಮೋಹನ ರಾಗದಲ್ಲಿ. ಭಾಗವತರು ವಿದ್ವಾನ್ ಗಣಪತಿ ಭಟ್. ಈ ಏಕವ್ಯಕ್ತಿ ಯಕ್ಷಗಾನಗಳ ಪರಿಕಲ್ಪನೆ ಮತ್ತು ಸಂಭಾಷಣೆ ಶತಾವಧಾನಿ ಡಾ.ಆರ್.ಗಣೇಶ್ ಅವರದು. [youtube=http://www.youtube.com/watch?v=2vLU-UpCR8s] *** *** *** *** *** *** *** ಮ್ಯಾಂಡೋಲಿನ್ ಸಂಗೀತದ child prodigy (ಬಾಲಪ್ರತಿಭೆ)ಯಾಗಿ ಹೆಸರುವಾಸಿಯಾಗಿ ಈಗ ಪ್ರಸಿದ್ಧಿಯ ಶಿಖರವೇರಿರುವ ಯು. ಶ್ರೀನಿವಾಸ್ ಮತ್ತು ಅವರ ಕಸಿನ್ ಯು. ರಾಜೇಶ್ ದ್ವಂದ್ವ ಮ್ಯಾಂಡೊಲಿನ್ ವಾದನದಲ್ಲಿ ಪಾಪನಾಸಂ ಶಿವನ್ ಅವರ ಕೃತಿ "ಕಪಾಲಿ". ಸಂಗೀತ ಕಚೇರಿಯ ಸಭಾಂಗಣದಲ್ಲೇ ಇದ್ದೇವೇನೋ ಅನಿಸುವಷ್ಟು ಮೋಹನ ರಾಗದ ಝೇಂಕಾರ ಇಲ್ಲಿ ನಿಮಗೆ ಕೇಳಿಬರುತ್ತದೆ. ಇದರೊಂದಿಗೆ ರಾಗರಸಾಯನ ಭಾಗ-2 ಮುಗಿಯುತ್ತದೆ. [youtube=http://www.youtube.com/watch?v=fjQqCWbNf3o] *** *** *** *** *** *** ***ಮೋಹನ ರಾಗರಸಾಯನ ಭಾಗ-3
ಪ್ರವೀಣ್ ಗೋಡಖಿಂಡಿಯವರ ಕೊಳಲಿನ ಇಂಪಿನೊಂದಿಗೆ ಈ ‘ಸಾಜ್ ಔರ್ ಆವಾಜ್’ ವಿಶೇಷ ಕಾರ್ಯಕ್ರಮವನ್ನು ಆರಂಭಿಸೋಣ: [youtube=http://www.youtube.com/watch?v=HKBSTTpek-A] * ಅದು ಯಾವ ಹಾಡು ಗೊತ್ತಾಯಿತೇ? "ಸ್ವಾಗತಮ್ ಕೃಷ್ಣ ಶರಣಾಗತಂ ಕೃಷ್ಣ..." ಈಗ ಕೆ.ಜೆ.ಯೇಸುದಾಸ್ ಅವರ ಧ್ವನಿಯಲ್ಲಿ ಕೇಳಿ ಆನಂದಿಸೋಣ. [youtube=http://www.youtube.com/watch?v=uwf-PSp2fJ8] *** *** *** *** *** *** *** ಭಾಗ-1ರ ವಿಡಿಯೋದಲ್ಲಿ ಮೋಹನ ರಾಗದ ಬಗ್ಗೆ ವಿವರಿಸುತ್ತ ಚೈನಾ, ಜಪಾನ್, ಮಲೇಷ್ಯಾ ಮುಂತಾದ ದೇಶಗಳ ಸಂಗೀತದಲ್ಲೂ ಮೋಹನ ರಾಗದ್ದೇ ಸ್ವರಗಳಿವೆ ಎಂದಿದ್ದನ್ನು ನೀವು ಗಮನಿಸಿರಬಹುದು. Chinese music beats ಬಳಸಿ ಆರ್ಕೆಸ್ಟ್ರಾದಲ್ಲಿ ನುಡಿಸಿದ ಒಂದು ತಮಿಳು ಚಿತ್ರಗೀತೆ ಇಲ್ಲಿದೆ. ಯಾವುದೆಂದು ಗುರುತಿಸಬಲ್ಲಿರಾ? [youtube=http://www.youtube.com/watch?v=Ubr7FzvD2wc] * ಇದು, ಮಣಿ ರತ್ನಂ ನಿರ್ದೇಶನದ ‘ಅಗ್ನಿ ನಕ್ಷತ್ರಮ್’ ತಮಿಳು ಚಿತ್ರದ ಹಾಡು “ನಿನ್ನುಕೋರಿ ವರ್ಣಮ್..." ಈಗ ಕೆ.ಎಸ್.ಚಿತ್ರಾ ಧ್ವನಿಯಲ್ಲಿ ಕೇಳೋಣ. ಸಂಗೀತ ನಿರ್ದೇಶನ: ಇಳಯರಾಜ. [youtube=http://www.youtube.com/watch?v=csUXes0FkBc] *** *** *** *** *** *** *** ಮತ್ತೊಮ್ಮೆ ಪ್ರವೀಣ್ ಗೋಡಖಿಂಡಿ! ಮತ್ತೊಮ್ಮೆ ಮೋಹನ ಮುರಳಿ! [youtube=http://www.youtube.com/watch?v=y3DD91ncjNY] * ಪುರಂದರ ದಾಸರ ಪದವನ್ನೂ ಮೋಹನ ರಾಗವನ್ನೂ ಅಜರಾಮರವಾಗಿಸಿದ ವಿದ್ಯಾಭೂಷಣರ ಕಂಠಸಿರಿಯಲ್ಲಿ “ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ..." [youtube=http://www.youtube.com/watch?v=klG7LzmubTM] *** *** *** *** *** *** *** ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೊಫೋನ್ ವಾದನದ ತುಣುಕನ್ನು ರಾಗರಸಾಯನದಲ್ಲಿ ಸೇರಿಸಬೇಕೆಂದು ಹಿಂದಿನ ಎರಡು ಸಂಚಿಕೆಗಳಲ್ಲೂ ನಾನು ಅಂದುಕೊಂಡಿದ್ದೆ, ಆದರೆ ಸೂಕ್ತವಾದ ಟ್ರ್ಯಾಕ್ ಸಿಕ್ಕಿರಲಿಲ್ಲ. ಈಗ ಸಿಕ್ಕಿತು! [youtube=http://www.youtube.com/watch?v=R5zDg7Hgxug] * ಮರಾಠಿ ಗೊತ್ತಿಲ್ಲದವರಿಗೂ ಮರಾಠಿ ಅಭಂಗ ಎಂದೊಡನೆ ಥಟ್ಟನೆ ನೆನಪಾಗುವಷ್ಟು ಜನಜನಿತವಾಗಿರುವ “ಮಾಝೆ ಮಾಹೇರ ಪಂಢರೀ..." ಸಂತ ಏಕನಾಥ ಮಹಾರಾಜರ ರಚನೆ, ಏಕಮೇವಾದ್ವಿತೀಯ ಪಂಡಿತ್ ಭೀಮಸೇನ್ ಜೋಷಿ ಗಾಯನ. ಅಭಂಗದ ಭಾವಾನುವಾದ ಮತ್ತು ಪ್ರತಿಸಾಲಿನ ಅರ್ಥವನ್ನೂ ಕೊಡಲಾಗಿದೆ, ಗಮನಿಸಿ. [youtube=http://www.youtube.com/watch?v=3H-n6XxKIWo] *** *** *** *** *** *** *** ಮತ್ತಮತ್ತೆ ಪ್ರವೀಣ್ ಗೋಡಖಿಂಡಿ, ಮತ್ತೆಮತ್ತೆ ಕೊಳಲು! ಏನೂ ಮಾಡೋಣ? ಮೋಹನ ರಾಗವನ್ನು ಕೊಳಲ ಧ್ವನಿಯಲ್ಲಿ, ಅದೂ ಪ್ರವೀಣ್ ಗೋಡಖಿಂಡಿ ನುಡಿಸಿದ್ದನ್ನು ಕೇಳುವುದೆಂದರೆ ಅಕ್ಷರಗಳಲ್ಲಿ ಹಿಡಿದಿಡಲಾಗದ ಅನುಭವ. ನೀವೂ ಒಪ್ಪುತ್ತೀರಿ ಈ ಕೆಳಗಿನ ಟ್ರ್ಯಾಕ್ಅನ್ನು ಕೇಳಿದರೆ: [youtube=http://www.youtube.com/watch?v=11D1ytgd2Ww] * ಎಂಥ ಅದ್ಭುತ ಕೊಳಲಗಾನ! ಈಗ, ಲತಾ ಮಂಗೇಶ್ಕರ್ ಹಾಡಿರುವ “ಪಂಖ್ ಹೊತೇ ತೋ ಉಡ್ ಆತೀರೇ..." ಹಾಡು. ಇದು ‘ಸೆಹ್ರಾ’ ಚಿತ್ರದ್ದು. ಗೀತರಚನೆ- ಹಸರತ್ ಜೈಪುರಿ; ಸಂಗೀತ- ರಾಮಲಾಲ್ ಹೀರಾಪನ್ನಾ [youtube=http://www.youtube.com/watch?v=cnBjhfrPKzo] *** *** *** *** *** *** *** ಮುಂದಿನ ಪ್ರಸ್ತುತಿ ಚಿದಂಬರ ಕಾಕತ್ಕರ್ ಅವರ ಕೊಳಲು ವಾದನ. ಮಂಗಳೂರಿನಲ್ಲಿ ಬಿಎಸ್ಎನ್ಎಲ್ ಉದ್ಯೋಗಿ (ಈಗ ನಿವೃತ್ತ) ಆದ ಇವರು ನನ್ನ ಸೋದರಮಾವ. ಹವ್ಯಾಸಕ್ಕೆಂದು ಸಂಗೀತ ಕಲಿತು (ಅದೂಹೇಗೆ ಏಕಲವ್ಯವಿದ್ಯೆಯಂತೆ) ಕ್ರಿಯಾಶೀಲರಾಗಿ ಪ್ರಯೋಗಗಳನ್ನು ಮಾಡುತ್ತಿರುವವರು. ಇದೂ ಅಂಥದೇ ಒಂದು ಪ್ರಯೋಗ! [youtube=http://www.youtube.com/watch?v=GQwO1WLsjlE] * ‘ಸಾಗರ ಸಂಗಮಂ’ ತೆಲುಗು ಚಿತ್ರದಲ್ಲಿ, ಇಳಯರಾಜ ಸಂಗೀತ ನಿರ್ದೇಶನದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಹಾಡಿದ “ವೇ ವೇಲಾ ಗೋಪೆಮ್ಮಲಾ" [youtube=http://www.youtube.com/watch?v=3RrA8OOxtkk] *** *** *** *** *** *** *** ‘ಬುಲ್ಬುಲ್ ತರಂಗ’ ಎಂಬ ಒಂದು ವಾದ್ಯವಿದೆ ಗೊತ್ತೇ? ಅದಕ್ಕೆ ಶಾಹಿಬಾಜಾ ಎಂದೂ ಹೆಸರಿದೆಯಂತೆ. ವಿನಯ್ ಕಂಟಕ್ ಎಂಬುವರು ಬುಲ್ಬುಲ್ತರಂಗದಲ್ಲಿ ಅದ್ಭುತವಾಗಿ ನುಡಿಸಿರುವ ಹಾಡನ್ನು ಕೇಳಿ. ಯಾವ ಹಾಡು ಎಂದು ನಿಮಗೆ ತತ್ಕ್ಷಣದಲ್ಲೇ ಗೊತ್ತಾಗಬಹುದು. ಆದರೆ ನೀವು ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಹಾಡಿನುದ್ದಕ್ಕೂ ಅವರು ಬುಲ್ಬುಲ್ತರಂಗದಲ್ಲಿ ಎರಡು ನಿರ್ದಿಷ್ಟ ಬಟನ್ಗಳನ್ನು ಮುಟ್ಟುವುದೇ ಇಲ್ಲ! ಅವು ಕ್ರಮವಾಗಿ ‘ಮ’ (ಮಧ್ಯಮ) ಮತ್ತು ‘ನಿ’ (ನಿಷಾಧ) ಸ್ವರಗಳ ಬಟನ್ಗಳು. ಮೋಹನರಾಗದಲ್ಲಿ ‘ಮ’ ಮತ್ತು ‘ನಿ’ ಸ್ವರಗಳಿಲ್ಲ. [youtube=http://www.youtube.com/watch?v=PJ0ijgS9Zfc] * ಬುಲ್ಬುಲ್ತರಂಗದಲ್ಲಿ ಬಾರಿಸಿದ ಹಾಡು ಯಾವುದೆಂದು ಗೊತ್ತಾಯ್ತಲ್ಲ? ‘ಸಂತ ತುಕಾರಾಮ್’ ಚಿತ್ರಕ್ಕಾಗಿ ಚಿ.ಸದಾಶಿವಯ್ಯ (ಚಿ.ಉದಯಶಂಕರರ ತಂದೆ) ರಚಿಸಿದ ಗೀತೆಗೆ ಸಂಗೀತ ನಿರ್ದೇಶನ ವಿಜಯ ಭಾಸ್ಕರ್. ಡಾ.ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ಕನ್ನಡಿಗರ ಮನೆಮನೆಯಲ್ಲೂ ಮೊಳಗಿದ “ಜಯತು ಜಯ ವಿಟ್ಠಲಾ..." [youtube=http://www.youtube.com/watch?v=Rld8ggpEd60] *** *** *** *** *** *** *** ಈಗ ಎಲಕ್ಟ್ರಾನಿಕ್ ಸಿಂಥೆಸೈಜರ್ನಲ್ಲಿ ನುಡಿಸಿರುವ ಒಂದು ಜನಪ್ರಿಯ ಹಿಂದಿ ಚಿತ್ರಗೀತೆಯ ಟ್ಯೂನ್ ಕೇಳೋಣ. [youtube=http://www.youtube.com/watch?v=bR_iU0z7H5I] * ರಾಗದ ಹೆಸರು ಭೂಪ್ ಎಂದು ಇರುವುದಕ್ಕೂ, ಆ ರಾಗವನ್ನು ತನ್ನ ಉಸಿರೆಂದೇ ತಿಳಿದುಕೊಂಡು ಹಾಡುವ ಗಾಯಕನ ಹೆಸರು ‘ಭೂಪೇನ್’ ಎಂದಿರುವುದಕ್ಕೂ ಏನಾದರೂ ಸಂಬಂಧ? ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಭೂಪೇನ್ ಹಜಾರಿಕಾ ಸಂಗೀತ ನಿರ್ದೇಶಿಸಿ ಸ್ವಯಂ ಹಾಡಿರುವ “ದಿಲ್ ಹುಮ್ ಹುಮ್ ಕರೇ..." ಗೀತೆಯಿಲ್ಲದೆ ಮೋಹನ/ಭೂಪ್ ಕುರಿತ ಯಾವ ಕಾರ್ಯಕ್ರಮವೂ ಪರಿಪೂರ್ಣವಾಗಲಿಕ್ಕಿಲ್ಲ. ‘ರುಡಾಲಿ’ ಚಿತ್ರದ ಈ ಗೀತೆಯ ಸಾಹಿತ್ಯ ಗುಲ್ಜಾರ್ ಅವರದು. [youtube=http://www.youtube.com/watch?v=oVPXE0pOzOg] *** *** *** *** *** *** *** ಮತ್ತೊಮ್ಮೆ ಕೊಳಲು ವಾದನ, ಆದರೆ ಇದು ಪ್ರವೀಣ್ ಗೋಡಖಿಂಡಿಯಲ್ಲ, ಚಿದಂಬರ ಕಾಕತ್ಕರರೂ ಅಲ್ಲ. ವಿಶಾಲ್ ಪೊನ್ನಿರ ಎಂಬೊಬ್ಬ ಹವ್ಯಾಸಿ ಸಂಗೀತಕಲಾವಿದರದು. [youtube=http://www.youtube.com/watch?v=1YzPPnxzhWM] * ಆ ಟ್ಯೂನ್ ಕೇಳುತ್ತಿದ್ದಾಗಲೇ ಬಹುಶಃ ನಿಮ್ಮ ಕಣ್ಮುಂದೆ ಭಕ್ತ ಕುಂಬಾರನಾಗಿ ಡಾ.ರಾಜಕುಮಾರ್ ಬಂದಿರಬಹುದು. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಹುಣಸೂರು ಕೃಷ್ಣಮೂರ್ತಿಯವರ ರಚನೆ. ಡಾ.ರಾಜ್ ಅವರ ‘ಶಾರೀರ’ವಾಗಿ ಅಮೋಘ ಹಿನ್ನೆಲೆಗಾಯನ ಮಾಡಿದ ಮಹಾನ್ ಕಲಾವಿದ ಡಾ. ಪಿ.ಬಿ.ಶ್ರೀನಿವಾಸ್ ಕಂಠಸಿರಿಯಲ್ಲಿ “ಹರಿ ನಾಮವೇ ಚಂದ ಅದ ನಂಬಿಕೋ ಕಂದ..." [youtube=http://www.youtube.com/watch?v=DED-rdLKox8] *** *** *** *** *** *** *** ಕಾರ್ಯಕ್ರಮ ಮುಗಿಯುತ್ತ ಬಂತು. ಹೋಗಿ ಬರುತ್ತೇನೆ ಎನ್ನಲು ಯಾವ ಟ್ಯೂನ್? [youtube=http://www.youtube.com/watch?v=0a1w-S1gr00] * ಲವ್ ಇನ್ ಟೋಕಿಯೋ ಚಿತ್ರಕ್ಕಾಗಿ ಹಸರತ್ ಜೈಪುರಿ ಬರೆದ ಗೀತೆ, ಸಂಗೀತ ನಿರ್ದೇಶನ ಶಂಕರ್ ಜೈಕಿಷನ್. ಲತಾ ಮಂಗೇಶ್ಕರ್ ಧ್ವನಿಯಲ್ಲಿ “ಸಾಯೋನಾರಾ ಸಾಯೋನಾರಾ..." [ಜಪಾನಿಸ್ ಭಾಷೆಯಲ್ಲಿ, ಹೋಗಿ ಬರುತ್ತೇನೆ, ಹೋಗಿ ಬರುತ್ತೇನೆ...!] [youtube=http://www.youtube.com/watch?v=QHT28UX8i_I] *** *** *** *** *** *** *** ಇಲ್ಲಿಗೆ ಮೋಹನ ಮಾಧುರ್ಯ ಮುಗಿಯಿತು. ಹೇಗನಿಸಿತು ಈಸಲದ ರಾಗರಸಾಯನ? ನಿಮ್ಮ ಅನಿಸಿಕೆ, ಸಲಹೆ, ಸೂಚನೆಗಳಿಗೆ ಆತ್ಮೀಯ ಸ್ವಾಗತವಿದೆ! * * * ರಾಗರಸಾಯನ ಮಾಲಿಕೆಯಲ್ಲಿ ಹಿಂದಿನ ಸಂಚಿಕೆಗಳು: 1. ಶಿವರಂಜನಿ ರಾಗರಸಾಯನ 2. ಕಲ್ಯಾಣಿ ಕಲರವ *** *** *** *** *** *** ***Version: 20240320