Episodes

Saturday Jul 28, 2012
Maththakokila Melody
Saturday Jul 28, 2012
Saturday Jul 28, 2012
ದಿನಾಂಕ 29 ಜುಲೈ 2012
ಹುದುಗಿ ಹಾಡುವ ಮತ್ತಕೋಕಿಲ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ವಾಣಿ ಪತ್ರಿಕೆಯ ‘ವಿಜಯ ವಿಹಾರ’ ಸಾಪ್ತಾಹಿಕ ಪುರವಣಿಯಲ್ಲಿಯೂ ಭಾಗ-1 ಮತ್ತು ಭಾಗ-2 ಓದಬಹುದು.] * * * ರಸಋಷಿ ಕುವೆಂಪು ಬರೆದ ‘ದೋಣಿ ಗೀತೆ’ ಯಾರಿಗೆ ತಾನೆ ಗೊತ್ತಿಲ್ಲ? ಕನ್ನಡದ ಅತ್ಯುತ್ತಮ ಭಾವಗೀತೆಗಳಲ್ಲಿ ಒಂದಾಗಿ, ಸಿನೆಮಾದಲ್ಲಿ ಅಳವಡಿಸಲಾದ ಭಾವಗೀತೆಗಳ ಪೈಕಿ ಸರ್ವಶ್ರೇಷ್ಠ ದರ್ಜೆಯದಾಗಿ, ಜನಮಾನಸದಲ್ಲಿ ಹಚ್ಚಹಸುರಾಗಿ ನಿಂತಿರುವ ಅದ್ಭುತ ಗೀತೆ. ದೋಣಿಯ ಚಲನೆಯ ಲಯವೇ ಈ ಪದ್ಯದ ಲಯ ಕೂಡ. ಸುಂದರ ಮುಂಜಾವು, ಸೂರ್ಯೋದಯದ ಸೊಬಗು, ವಿಶಾಲವಾದ ಕೆರೆಯಲ್ಲಿ ದೋಣಿ ಯಾತ್ರೆ. ಗಾನರೂಪದಲ್ಲಿ ಪ್ರಕೃತಿಸೌಂದರ್ಯದ ವರ್ಣನೆಯ ಜತೆಯಲ್ಲೇ ಬದುಕು ಅನಂತವೆಂಬ ಸಂದೇಶ. ಆಹಾ! ಕಾವ್ಯದ ರಸಘಟ್ಟಿಯನ್ನೇ ನಮಗಿತ್ತಿದ್ದಾರೆ ಕುವೆಂಪು. ಈ ಗೀತೆಯ ಎರಡನೇ ಚರಣವನ್ನು ನೀವೊಮ್ಮೆ ವಿಶೇಷವಾಗಿ ಗಮನಿಸಬೇಕು. ಅದರಲ್ಲೂ ನಾಲ್ಕನೆಯ ಸಾಲು. ತತ್ರಾಪಿ ಮೂರನೇ ಪದ. ‘ಮತ್ತಕೋಕಿಲ’! ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ ಏನಿದು ಮತ್ತಕೋಕಿಲ? ಮಿಸ್ ಲೀಲಾವತಿ ಚಿತ್ರದ ‘ದೋಣಿ ಸಾಗಲಿ ಮುಂದೆ ಹೋಗಲಿ...’ಯನ್ನು ನೀವೇನಾದರೂ ಇಂಗ್ಲಿಷ್ ಸಬ್ಟೈಟಲ್ಗಳೊಂದಿಗೆ ನೋಡಿದರೆ ಅಲ್ಲಿ ಮತ್ತಕೋಕಿಲ ಮಧುರವಾಣಿಯನ್ನು the excited cuckoo's melody ಎಂದೇ ಅನುವಾದಿಸಿದ್ದಾರೆ. ಹುದುಗಿ ಹಾಡುವ ಎಂದರೆ ಮರೆಯಲ್ಲಿ ಅಡಗಿಕೊಂಡು ಹಾಡುವ ಎಂದರ್ಥ. ಸಂತಸದಿಂದ ಉನ್ಮತ್ತಗೊಂಡ ಕೋಗಿಲೆ ಇಂಪಾಗಿ ಹಾಡುತ್ತದಂತೆ. ಈ ಹಾಡಿನಲ್ಲಿ ಪ್ರಕೃತಿವರ್ಣನೆ ಇದೆ ನಿಜ, ಆದರೆ ಅದು ವಸಂತ ಋತುವಿನ ದೃಶ್ಯ ಅಂತೇನೂ ಕವಿ ಬಣ್ಣಿಸಿಲ್ಲ. ಉನ್ಮತ್ತ ಕೋಗಿಲೆ ಮಧುರವಾಗಿ ಉಲಿಯುತ್ತಿದೆ ಎನ್ನುವ ಅಂಶವೊಂದನ್ನು ಬಿಟ್ಟರೆ ದೋಣಿ ಹಾಡು ನಮಗೆ ಶರದೃತುವಿನಲ್ಲೂ ಹೇಮಂತ ಋತುವಿನಲ್ಲೂ ಅದೇ ಪ್ರಮಾಣದ ರೋಮಾಂಚನ ನೀಡಬಲ್ಲದು. ಅಂದಮೇಲೆ ಯಾವುದೋ ನಿರ್ದಿಷ್ಟ ಕಾರಣಕ್ಕಾಗಿ ‘ಮತ್ತಕೋಕಿಲ’ ಪದಪ್ರಯೋಗ ಮಾಡಿದ್ದಾರೆ ಕುವೆಂಪು. ಇರಲಿ, ಸದ್ಯಕ್ಕೆ ಆ ಪದವನ್ನಷ್ಟೇ ನೆನಪಿನಲ್ಲಿಟ್ಟುಕೊಳ್ಳೋಣ.


Monday May 28, 2012
Breaking News
Monday May 28, 2012
Monday May 28, 2012
ದಿನಾಂಕ 27 ಮೇ 2012ರ ಸಂಚಿಕೆ...
ಕೆಮ್ಮೋತ್ತರ ಬ್ರೇಕಿಂಗ್ ನ್ಯೂಸ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ಕನ್ನಡ ಚಿತ್ರಗೀತೆಗಳಿಗೆ ಸಂಬಂಧಪಟ್ಟ ರಸಪ್ರಶ್ನೆ ಕೇಳಿದ್ದರಿಂದಲೋ, ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಲಕ್ಷಣ ವಿಷಯವನ್ನು ಅಂಕಣಕ್ಕೆ ಆರಿಸಿಕೊಂಡಿದ್ದರಿಂದಲೋ, ಅಥವಾ, ಕಣ್ಣಿಗೆ ರಾಚುವಂಥ ತಪ್ಪೊಂದು ಅದರಲ್ಲಿ ನುಸುಳಿದ್ದರಿಂದಲೋ ಅಂತೂ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬಂದಿವೆ. ನನ್ನ ಮಿಂಚಂಚೆಪೆಟ್ಟಿಗೆ ತುಂಬಿತುಳುಕಿದೆ. ಲೇಖನವನ್ನು ಸಿದ್ಧಪಡಿಸುವಾಗ ನನಗೆ ಸ್ವಲ್ಪ ಅಳುಕಿತ್ತು, ಡಬ್ಬಾತೀತ ಯೋಚನೆ ಅಂತೆಲ್ಲ ಹೇಳಿ ಎಲ್ಲಿ ಡಬ್ಬ ಅನಿಸಿಕೊಳ್ಳುವುದೋ ಎಂದು. ಆದರೆ ಓದುಗರ ಸ್ಪಂದನ ಅದನ್ನು ಸುಳ್ಳಾಗಿಸಿದೆ. ರಸಪ್ರಶ್ನೆಗೆ ಉತ್ತರವಷ್ಟೇ ಅಲ್ಲ, ಸಿನೆಮಾದಲ್ಲಿ ಕೆಮ್ಮು ಅಂತೊಂದು ಸಂಶೋಧನಾಪ್ರಬಂಧ ಮಂಡಿಸಿ ಪಿಎಚ್ಡಿ ಗಳಿಸಬಹುದಾದಷ್ಟು ಪೂರಕ ಕೆಮ್ಮು ಪತ್ರಗಳಲ್ಲಿ ಪ್ರತಿಧ್ವನಿಸಿದೆ. ‘ಬಂಧನ’ ಚಿತ್ರದ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ...’ ಹಾಡು, ರಸಪ್ರಶ್ನೆಯ ಸರಿಯುತ್ತರ. ತುಂಬ ಜನಪ್ರಿಯ ಚಿತ್ರಗೀತೆ. ವಿಷ್ಣುವರ್ಧನ್ ಕೆಮ್ಮುತ್ತ ಅಭಿನಯಿಸಿದ, ಎಸ್ಪಿಬಿ ಕೆಮ್ಮುತ್ತ ಹಾಡಿದ ಅದ್ಭುತಗೀತೆ. ಉತ್ತರಕ್ಕಾಗಿ ತಲೆಕೆರೆದುಕೊಳ್ಳುವ ಅಗತ್ಯವಿಲ್ಲದೆ ಹೆಚ್ಚಿನವರಿಗೆ ನೆನಪಿಗೆ ಬಂದಿದೆ. ಕೆಲವರು ಮಾತ್ರ ಬಂಧನ ಸಿನೆಮಾ ಹೆಸರು ನೆನಪಾದರೂ ‘ನೂರೊಂದು ನೆನಪು ಎದೆಯಾಳದಿಂದ...’ ಕೆಮ್ಮಿನಹಾಡು ಎಂದುಕೊಂಡು ಅದೇ ಉತ್ತರವೆಂದಿದ್ದಾರೆ. ಸರಿಯುತ್ತರ ಬರೆದು ತಿಳಿಸಿದವರಿಗೆಲ್ಲ ಅಭಿನಂದನೆಗಳು. ‘ಕೆಮ್ಮು ಇರುವ ಚಿತ್ರಗೀತೆಗಳಲ್ಲಿಯೇ ಈ ಹಾಡಿಗೆ ಅಗ್ರಸ್ಥಾನ ಸಲ್ಲಬೇಕು. ಇದರಲ್ಲಿ ಎಸ್ಪಿಬಿಯವರು ಕೆಮ್ಮನ್ನು ಎಷ್ಟು ಲಯಬದ್ಧವಾಗಿ ಉಪಯೋಗಿಸಿದ್ದಾರೆಂದರೆ ಹಾಡಿನ ಲಯಕ್ಕೆ ಸ್ವಲ್ಪವೂ ತೊಂದರೆ ಇಲ್ಲದಂತೆ, ನಿಜವಾಗಿ ಹಾಡಿನ ಮಧ್ಯದಲ್ಲಿ ಕೆಮ್ಮು ಬಂದಿರುವಂತೆ ಕೇಳಿಸುತ್ತದೆ. ಬಾಲು ಅವರೇ ಹೇಳುವಂತೆ ಇದನ್ನು ಹಾಡುವಾಗ ಅವರ ದೇಹದ ರಕ್ತವೆಲ್ಲ ಅವರ ಮಿದುಳಿಗೆ ಹರಿದಿತ್ತಂತೆ!’ ಎಂದು ಹಾಡಿನ ಕುರಿತು ವ್ಯಾಖ್ಯಾನಿಸಿದ ಓದುಗಮಿತ್ರ ಚಿತ್ತಾಪುರದ ವಿನಯಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು. ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ತಿಳಿಸಿ ಎಂದಿದ್ದೆನಷ್ಟೆ? ಬಹುಮಂದಿ ಸೂಚಿಸಿರುವುದು ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ...’ ಗೀತೆಯನ್ನು. ‘ಅಣ್ಣಾವ್ರ ಹಾಡು ಲೇಖನದಲ್ಲೇ ಇರುತ್ತೆ ಅಂದ್ಕೊಂಡಿದ್ದೆ. ಅದರಲ್ಲಿ ಫ್ರಂಟ್-ಎಂಡ್ ಹಾಸ್ಯನಟ ಉಮೇಶ್. ಬ್ಯಾಕ್-ಎಂಡ್ ಅಣ್ಣಾವ್ರು. ಹಾಡಿನ ನಡುವೆ ಅಣ್ಣಾವ್ರಿಗೆ ಕೆಮ್ಮು ಬರುತ್ತೆ. ಅಲ್ಲಿದ್ದವರು ಫ್ರಂಟ್-ಎಂಡ್ ಉಮೇಶ್ಗೆ ಕೆಮ್ಮುನಿವಾರಣೆಗೆ ನೆರವಾಗ್ತಾರೆ. ನಾಯಕಿ ಮಾಧವಿಗೆ ಗೊತ್ತಾಗಿ ಆಕೆಯೂ ಅಣ್ಣಾವ್ರ ಜೊತೆ ಹಾಡತೊಡಗುತ್ತಾರೆ (ಬ್ಯಾಕ್-ಎಂಡ್ನಲ್ಲಿ). ಪ್ರೇಕ್ಷಕರು ಉಮೇಶ್ ಅವರೇ ಹೆಣ್ಣುಧ್ವನಿಯಲ್ಲಿ ಹಾಡ್ತಿದ್ದಾರೆ ಅಂದ್ಕೊಳ್ತಾರೆ! ತುಂಬ ಹಾಸ್ಯಮಯ.’ ಎಂದು ಹಾಡಿನ ದೃಶ್ಯಾವಳಿಯನ್ನೂ ವಿವರಿಸಿದ್ದಾರೆ ಮಂಗಳೂರಿನ ಗಿರೀಶ್ ಐತಾಳ. ‘ಗಡಿಬಿಡಿ ಗಂಡ’ ಚಿತ್ರದಲ್ಲಿ ರವಿಚಂದ್ರನ್ ಜತೆ ಗಾಯನಸ್ಪರ್ಧೆಗಿಳಿವ ತಾಯ್ ನಾಗೇಶ್ ‘ನೀನು ನೀನೇ ಇಲ್ಲಿ ನಾನು ನಾನೇ’ ಹಾಡುವ ಮೊದಲು ಗಂಟಲು ಟೆಸ್ಟ್ ಮಾಡಿಕೊಳ್ಳುವ ಕೆಮ್ಮನ್ನು ಜ್ಞಾಪಿಸಿದ್ದಾರೆ ಮೈಸೂರಿನ ಮೋಹನ್ರಾಜ್. ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ‘ಉಮಂಡ್ಘುಮಂಡ್ ಘನಗರಜೇ ಬದರಾ...’ ಹಾಡಿನ ಕೆಮ್ಮನ್ನೂ ಒಂದಿಬ್ಬರು ನೆನೆಸಿಕೊಂಡಿದ್ದಾರೆ. ಹಾಸ್ಯೋತ್ಸವದಲ್ಲಿ ಮಂಗಳಗೀತೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ...’ ಹಾಡುವಾಗ ಕಿರ್ಲೋಸ್ಕರ್ ಶಾಸ್ತ್ರಿಗಳಿಗೆ ಕೆಮ್ಮು ಬಂದು ಆಮೇಲೆ ಹಾಡನ್ನು ರಫೀಕ್ ಮುಂದುವರಿಸುವ ಸೂಪರ್ಹಾಸ್ಯದ ಸನ್ನಿವೇಶವೂ ಕೆಲವರಿಗೆ ನೆನಪಾಗಿದೆ. ಅಂತೆಯೇ ಡುಂಡಿರಾಜರ ಕೆಮ್ಮುಕವನ ‘ಪೆಹಲೇ ಕವಿತಾ ಪಢ್ನೇ ದೋ ಹಮ್ಕೊ, ಆಮೇಲೆ ಬೇಕಿದ್ರೆ ನೀ ಕೆಮ್ಕೊ’ ಕೂಡ. ರಸಪ್ರಶ್ನೆಯ ಉತ್ತರದ ಹೊರತಾಗಿ ಅತಿಹೆಚ್ಚು ಪತ್ರಗಳಲ್ಲಿ ಉಲ್ಲೇಖಗೊಂಡದ್ದು ಲೇಖನದಲ್ಲಿ ಕಂಡುಬಂದಿದ್ದ ಒಂದು ತಪ್ಪು. ‘ಹಾಲುಜೇನು’ ಚಿತ್ರದಲ್ಲಿ ಡಾ.ರಾಜ್ ಅವರೊಡನೆ ನಾಯಕಿಯಾಗಿ ನಟಿಸಿದವರು ಸರಿತಾ ಎಂಬರ್ಥದಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸರಿತಾ ಅಲ್ಲ, ಮಾಧವಿ ಅಂತಾಗಬೇಕಿತ್ತು. ಲೇಖನ ಬರೆಯುವುದಕ್ಕೆ ಸ್ವಲ್ಪ ಮೊದಲಷ್ಟೇ ಯೂಟ್ಯೂಬ್ನಲ್ಲಿ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಹಾಡಿನ ವಿಡಿಯೋ ನೋಡಿ ಅದರಲ್ಲಿ ಕೆಮ್ಮು ಇರುವುದನ್ನು ಖಾತರಿಪಡಿಸಿಕೊಂಡಿದ್ದೆ. ರಾಜ್-ಮಾಧವಿ ಜೋಡಿಯನ್ನೂ ಗಮನಿಸಿದ್ದೆ. ಆದರೆ ಯಾವುದೋ ಗುಂಗಿನಲ್ಲಿ ಟೈಪಿಸುವಾಗ ಮಾಧವಿ ಬದಲು ಸರಿತಾ ಪ್ರತ್ಯಕ್ಷವಾದರು. ಸ್ವಾರಸ್ಯವೆಂದರೆ ಆ ಚಿತ್ರದಲ್ಲಿ ಮಾಧವಿಗೆ ಕಂಠದಾನ ಮಾಡಿದ್ದು ಸರಿತಾ! ಕೆಲವರು ಸೂಕ್ಷ್ಮಮತಿಗಳು ಇನ್ನೂ ಒಂದು ತಪ್ಪನ್ನು ಕಂಡುಹಿಡಿದಿದ್ದಾರೆ. ಬೆಂಗಳೂರಿನಿಂದ ಸುಮಾ ಅಮೃತೇಶ್ ಬರೆಯುತ್ತಾರೆ: ‘ನಿಮ್ಮ ರಸಪ್ರಶ್ನೆಯಲ್ಲಿ, ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ ಎಂದಿದ್ದೀರಿ. ವಿಷ್ಣು ಸರ್ ಆ ಹಾಡಿನ ಕೊನೆಗೇ ಸಾಯುವುದಿಲ್ಲ. ಚಿತ್ರದ ಕೊನೆಯಲ್ಲಿ ಸುಹಾಸಿನಿಯ ಮಗುಗೆ ಜೀವ ಕೊಡು ಅಂತ ಬೆಳಕಲ್ಲಿ ದೇವ್ರನ್ನ ಕೇಳಿ ಜೀವಬಿಡ್ತಾರೆ. ಈಗಲೂ ಅದನ್ನು ನೆನೆಸಿಕೊಂಡರೆ ಕಣ್ಣೀರುಬರುತ್ತೆ.’ ಏನೇಇರಲಿ, ತಪ್ಪು ತಪ್ಪೇ. ನ್ಯೂನಾನಿಚಾತಿರಿಕ್ತಾಣಿ ಕ್ಷಮಸ್ವ ಪರಮೇಶ್ವರ ಎಂದು ಪೂಜೆಯ ಕೊನೆಯಲ್ಲಿ ಹೇಳುವಂತೆ ಅಂಕಣದಲ್ಲಿನ ನ್ಯೂನಗಳನ್ನೂ ಅತಿರಿಕ್ತಗಳನ್ನೂ (ಉದಾ: ವ್ಯಾಕರಣಬದ್ಧ ಗುಣಸಂಧಿಯ ಪದವಾಗದೆಯೂ ‘ಕೆಮ್ಮೋತ್ತರ’ ಎಂದು ಇವತ್ತಿನ ತಲೆಬರಹದಲ್ಲಿ ಬಳಸಿರುವಂಥದನ್ನು) ಓದುಗರು ದೊಡ್ಡಮನಸ್ಸಿನಿಂದ ಕ್ಷಮಿಸುವರೆಂಬ ನಂಬಿಕೆ.

Saturday May 19, 2012
Cough in Filmsongs
Saturday May 19, 2012
Saturday May 19, 2012
ದಿನಾಂಕ 20 ಮೇ 2012ರ ಸಂಚಿಕೆ...
ಚಿತ್ರಗೀತೆಗಳಲ್ಲಿ ವಿಚಿತ್ರ ಕೆಮ್ಮು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಂಕಣಬರಹಕ್ಕೆ ನಿಮಗೆ ವಿಷಯ ಹೇಗೆ ಹೊಳೆಯುತ್ತದೆ? ಪೂರಕ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸುತ್ತೀರಿ? ಮೊದಲಿಂದ ಕೊನೆವರೆಗೂ ಓದಿಸಿಕೊಳ್ಳುವಂತೆ ವಿಷಯಗಳನ್ನು ಹೇಗೆ ಪೋಣಿಸುತ್ತೀರಿ? ಇದಕ್ಕೆಲ್ಲ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ? ನಮಗೂ ಸ್ವಲ್ಪ ಹೇಳಿಕೊಡ್ತೀರಾ? - ಪರಾಗಸ್ಪರ್ಶ ಓದುಗಮಿತ್ರರಲ್ಲಿ ಹಲವರು ಈ ಪ್ರಶ್ನೆಗಳನ್ನು ನನಗೆ ಈಗಾಗಲೇ ಕೇಳಿದ್ದಿದೆ. ಅವರಿಗೆಲ್ಲ ನಾನು ಪ್ರಾಮಾಣಿಕವಾಗಿ ಉತ್ತರಿಸಿದ್ದೂ ಇದೆ. ಪರಿಚಯವಾಗಿ ಮುಖತಾ ಭೇಟಿಯಾದಾಗ, ಅಥವಾ ಮಿಂಚಂಚೆಯಲ್ಲಿ ಈ ಪ್ರಶ್ನೋತ್ತರ ನಡೆಯುತ್ತಲೇ ಇರುತ್ತದೆ. ಇನ್ನೂ ಭೇಟಿಯಾಗದ ಮತ್ತು ಇದುವರೆಗೂ ಪತ್ರ ಬರೆಯದ ಅನೇಕರ ಮನಸ್ಸಿನಲ್ಲಿಯೂ ಬಹುಶಃ ಇದೇ/ಇಂಥದೇ ಪ್ರಶ್ನೆಗಳಿವೆ ಎಂದು ನನ್ನೆಣಿಕೆ. ಇವತ್ತು ನನಗೊಂದು ಐಡಿಯಾ ಬಂದಿದೆ, ಏನ್ಗೊತ್ತಾ? ಈ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಇಂದಿನ ಅಂಕಣವನ್ನು ಪ್ರಸ್ತುತಪಡಿಸುವುದು! ಆದರೆ ಇದು ಶುಷ್ಕ ವಿವರಣೆಯ ಥಿಯರಿ ಅಲ್ಲ, ಪ್ರಾಕ್ಟಿಕಲ್ ಎಕ್ಸಾಂಪಲ್. ‘ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್’ಗಳಿಗೆ ಉತ್ತರಗಳ ಜತೆಯಲ್ಲೇ ಈ ವಾರದ ಅಂಕಣವೂ ತಯಾರು. ಪ್ರಶ್ನೆಗಳಿಗೆ ಅಂಕಣವೇ ಉತ್ತರವೂ, ಉದಾಹರಣೆಯೂ. ಟೂ-ಇನ್-ವನ್. ಓದಿ ನೋಡಿ. ಇಷ್ಟವಾದರೆ ವಾಟೆನ್ ಐಡಿಯಾ ಸರ್ಜೀ! ‘ಡಬ್ಬದಿಂದ ಆಚೆಗೂ ಯೋಚಿಸು’ ಎಂಬ ಪದಪುಂಜವನ್ನು ಹಿಂದೊಮ್ಮೆ ಬಳಸಿದ್ದೆ, ನೀವು ಗಮನಿಸಿರಬಹುದು. ಅದು think outside the box ಎನ್ನುವುದಕ್ಕೆ ನನ್ನ ಕನ್ನಡ ತರ್ಜುಮೆ. ನಮ್ಮ ಆಲೋಚನೆಗಳು ಸೀಮಿತ ಚೌಕಟ್ಟಿನೊಳಕ್ಕೇ ಸುತ್ತುತ್ತಿರಬಾರದು, ಅದರಾಚೆಗೂ ವಿಸ್ತರಿಸಿಕೊಳ್ಳಬೇಕು, ಹೊಸ ಸಾಧ್ಯಾಸಾಧ್ಯತೆಗಳನ್ನು ಕಂಡುಕೊಳ್ಳಬೇಕು ಎಂಬ ಒಳ್ಳೆಯ ಅರ್ಥ-ಆಶಯ ಈ ನುಡಿಗಟ್ಟಿಗಿದೆ. ನಿಜಕ್ಕಾದರೆ ಇದನ್ನು ಬಳಸುವುದು ದೈನಂದಿನ ಬದುಕಿನಲ್ಲಿ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ. ಸಮಸ್ಯೆ ಪರಿಹಾರಕ್ಕೆ ಸುಲಭೋಪಾಯಗಳ ಹುಡುಕಾಟದಲ್ಲಿ. ಆದರೆ ನಾನು ಅಂಕಣಕ್ಕೆ ವಿಷಯ ಆರಿಸುವಾಗಲೂ ಡಬ್ಬದಿಂದ ಆಚೆಗೆ ಯೋಚಿಸುವುದುಂಟು. ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ ಇದ್ದರೂ ಅದರಲ್ಲಿ ವೈಶಿಷ್ಟ್ಯದ ಏನೋ ಒಂದು ಹೊಳಹನ್ನು ಹುಡುಕುವುದುಂಟು. ಅದು ಅಂಕಣದ ತಲೆಬರಹದಲ್ಲೇ ವ್ಯಕ್ತವಾದರೆ ಮತ್ತೂ ಒಳ್ಳೆಯದು. ಇವತ್ತಿನ ತಲೆಬರಹವನ್ನೇ ತೆಗೆದುಕೊಳ್ಳಿ. ಚಿತ್ರಗೀತೆಗಳೆಂದರೆ ಎಲ್ಲರಿಗೂ ಗೊತ್ತಿರುವ, ಎಲ್ಲರಿಗೂ ಇಷ್ಟವಾಗುವ ವಿಷಯ. ಆದರೆ ಚಿತ್ರಗೀತೆಗಳಲ್ಲಿ ಕೆಮ್ಮು? ಅದೂ ವಿಚಿತ್ರ ಕೆಮ್ಮು? ಇದೆಂಥದಪ್ಪಾ ಹೊಸ ವಿಚಾರ ಎಂದು ಓದುಗರಿಗೆ ಅಚ್ಚರಿ. ಇಡೀ ಲೇಖನವನ್ನು ಓದುವಂತೆ ತಲೆಬರಹದಿಂದಲೇ ಪ್ರೇರಣೆ. ವಿಷಯ ನಿಗದಿಪಡಿಸಿದ ಮೇಲೆ ಮತ್ತು ತಲೆಬರಹವನ್ನೂ ನಿರ್ಧರಿಸಿದ ಮೇಲೆ (ಕೆಲವೊಮ್ಮೆ ಲೇಖನ ಬರೆದಾದಮೇಲೆ ತಲೆಬರಹ ಕೊಡುವುದೂ ಇದೆ), ಲೇಖನದ ಆರಂಭ ಹೇಗಿರಬೇಕೆಂದು ಯೋಚಿಸುತ್ತೇನೆ. ಅಲ್ಲೂ ಅಷ್ಟೇ, ಸಾಂಪ್ರದಾಯಿಕ ಶೈಲಿಯಲ್ಲಿ ಸವಕಲು ಪದಗಳನ್ನು ಬಳಸಿ ಬರೆದರೆ ಚೆನ್ನಾಗಿರುವುದಿಲ್ಲ. ಒಳ್ಳೆಯ ಇಂಟ್ರೊ (ಪೀಠಿಕೆ) ಪರಿಣಾಮಕಾರಿಯಾಗಿ ಇರುವಂತೆ ಹೇಗೆ ಬರೆಯಬಹುದೆಂದು ಒಂದೆರಡು ನಮೂನೆಗಳನ್ನು ತೂಗಿನೋಡುತ್ತೇನೆ. ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಷಯವಿದ್ದ ಮಾತ್ರಕ್ಕೇ ಯಾವುದಾದರೂ ಚಿತ್ರಗೀತೆಯ ಸಾಲಿನಿಂದಲೋ, ಉಹ್ಹು ಉಹ್ಹು... ಎಂದು ಕೆಮ್ಮುತ್ತಲೋ ಆರಂಭಿಸಬೇಕೆಂದೇನಿಲ್ಲ. ಚಿತ್ರಗೀತೆಗಳನ್ನು (ಕನ್ನಡ ಅಥವಾ ಯಾವುದೇ ಭಾಷೆಯದಿರಲಿ) ಬರಿ ಹಾಡು ಎಂದುಕೊಳ್ಳದೆ ವಿಶೇಷ ಗಮನವಿಟ್ಟು ಕೇಳಿದರೆ ಅವುಗಳದ್ದೇ ವೈವಿಧ್ಯಮಯ ಲೋಕವೊಂದು ತೆರೆದುಕೊಳ್ಳುತ್ತದೆ. ಉದಾಹರಣೆಗೆ ನಡುವೆ ಸಂಭಾಷಣೆ ಸಾಲುಗಳು ಬರುವ ಚಿತ್ರಗೀತೆಗಳಿವೆ; ಗುರು ಹೇಳಿಕೊಟ್ಟದ್ದನ್ನು ಶಿಷ್ಯ/ಶಿಷ್ಯೆ ಪುನರುಚ್ಚರಿಸುವ ರೀತಿಯ ಚಿತ್ರಗೀತೆಗಳಿವೆ; ತಪ್ಪುತಪ್ಪಾಗಿ ಹೇಳಿದರೆ ಪ್ರೀತಿಯಿಂದ ತಿದ್ದುವ (‘ರಾಂಗೇನ ಹಾಲ್ಲಿಯಾಗೆ’ ಎಂದು ವಾಣಿಜಯರಾಂ ಹಾಡಿದಾಗ ‘ಹಾಲ್ಲಿಯಲ್ಲಮ್ಮ ಹಳ್ಳಿ ಹಳ್ಳಿ...’ ಎಂದು ಕಸ್ತೂರಿಶಂಕರ್ ತಿದ್ದಿಹೇಳುವ ‘ಬಿಳಿಹೆಂಡ್ತಿ’ ಚಿತ್ರದ ಗೀತೆ, ‘ಸಾವನ್ಕಾ ಮಹಿನಾ ಪವನ್ ಕರೇ ಶೋರ್...’ ಎಂದು ಲತಾ ಹಾಡಿದಾಗ ‘ಅರೇಬಾಬಾ ಶೋರ್ ನಹೀಂ ಸೋರ್ ಸೋರ್...’ ಎಂದು ಮುಕೇಶ್ ಅದನ್ನು ತಿದ್ದುವ ಹಾಡು), ಅಥವಾ ಸಿಟ್ಟಿನಿಂದ ಗದರಿಸುವ (‘ಶಂಕರಾಭರಣಂ’ ಚಿತ್ರದಲ್ಲಿ ‘ಗಪದಪದಪ ಗಪದಪದಪ’ ಎಂಬ ಸ್ವರಪಾಠವನ್ನು ವಿದ್ಯಾರ್ಥಿಯು ‘ಗಗಪದಪದ ಗಗಪದಪದ’ ಎಂದಾಗ ಶಂಕರಶಾಸ್ತ್ರಿಗಳು ‘ಊಂ’ ಎಂದು ಸಿಟ್ಟಾಗುವ) ಗೀತೆಗಳಿವೆ. ಹೀಗೆ ಪೀಠಿಕೆಯಲ್ಲಿ ಕೆಮ್ಮಿನ ಬಗ್ಗೆ ಏನೂ ಹೇಳದೆ, ಒಟ್ಟಾರೆಯಾಗಿ ಚಿತ್ರಗೀತೆಗಳಲ್ಲಿ ಯಾವ ರೀತಿ ವಿಶೇಷಗಳನ್ನು ಗುರುತಿಸಬಹುದೆಂದು ಸೋದಾಹರಣವಾಗಿ ವಿವರಿಸುತ್ತೇನೆ. ಅಲ್ಲಿಗೆ ಲೇಖನದ ವಿಷಯಗ್ರಹಿಕೆಗೆ ಓದುಗರ ಮನಸ್ಸನ್ನು ಅಣಿಗೊಳಿಸಿದಂತೆ. ಇನ್ನು, ಚಿತ್ರಗೀತೆಗಳಲ್ಲಿ ಕೆಮ್ಮು ಎಂದು ಶೀರ್ಷಿಕೆ ಕೊಟ್ಟ ಮೇಲೆ ಕೆಮ್ಮಿರುವ ಕೆಲವಾದರೂ ಚಿತ್ರಗೀತೆಗಳನ್ನು ಉಲ್ಲೇಖಿಸಬೇಕಲ್ಲ? ಅವೇನು ಸುಲಭವಾಗಿ ಸಿಗುತ್ತವೆಯೇ? ಹುಡುಕಬೇಕು, ನೆನಪಿಸಿಕೊಳ್ಳಬೇಕು. ಒಂದು ಸಂಗತಿಯನ್ನು ನೀವೂ ಗಮನಿಸಿರುತ್ತೀರಿ ಎಂದುಕೊಳ್ಳುತ್ತೇನೆ- ಚಿತ್ರಗೀತೆ ಬಿಡಿ, ಸಾಮಾನ್ಯವಾಗಿ ಸಿನೆಮಾಗಳಲ್ಲಿ ನಟನಟಿಯರಿಗೆ ಕೆಮ್ಮು ಸೀನು ಬಿಕ್ಕಳಿಕೆಗಳೆಲ್ಲ ಬರೋದೇ ಇಲ್ಲ! ಯಾವುದಾದರೂ ಪಾತ್ರ ಕೆಮ್ಮುತ್ತದೆಯೆಂದರೆ ಅದು ಮಾರಣಾಂತಿಕ ಸನ್ನಿವೇಶವೆಂದೇ ಅರ್ಥ. ಚಿತ್ರಗೀತೆಯಲ್ಲಿ ಕೆಮ್ಮು ಕೇಳಿಬರುವುದಂತೂ ದೂರದ ಮಾತು. ನಿರಾಶೆಗೊಂಡು ಲೇಖನಕ್ಕೆ ಆ ವಿಷಯವೇ ಬೇಡವೆಂದು ಬಿಟ್ಟುಬಿಡುವುದೇ? ಖಂಡಿತ ಇಲ್ಲ! ಕೆಮ್ಮಿನ ಚಿತ್ರಗೀತೆಗಳಿಲ್ಲ ಎಂದವರಾರು? ಶಂಕರಾಭರಣಂ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ‘ದೊರಕುನಾ ಇಟುವಂಟಿ ಸೇವಾ...’ ಕೇಳಿದ್ದೀರಾ? ಅದರಲ್ಲಿ ಶಂಕರಶಾಸ್ತ್ರಿಗಳಿಗೆ ವಿಪರೀತ ಕೆಮ್ಮು ಬರಲಾರಂಭಿಸುತ್ತದೆ. ಮೊದಲ ಚರಣದಲ್ಲಿ ‘ನಾದಾತ್ಮ ಕುಡವೈ ನಾಲೋನ ಚೆಲಗಿ...’ ಸಾಲು ಮುಗಿದಾಕ್ಷಣ ಸಂಗೀತನಿರ್ದೇಶಕ ಕೆ.ವಿ.ಮಹಾದೇವನ್ ಒಂದು ಸಿಗ್ನಲ್ ನೋಟ್ ‘ಟೆಡೇಂ...’ ಎಂದು ಕೇಳುವಂತೆ ಮಾಡುತ್ತಾರೆ. ಅದು ಹಿನ್ನೆಲೆ ಕೆಮ್ಮು ಕಲಾವಿದನಿಗೆ ಸೂಚನೆ. ಅಲ್ಲಿಂದ ಏಕ್ದಂ ಕೆಮ್ಮು. ಹಾಡನ್ನು ಶಂಕರಶಾಸ್ತ್ರಿಗಳ ಶಿಷ್ಯ ಮುಂದುವರಿಸುತ್ತಾನೆ. ಹಾಡು ಮುಗಿದಾಗ ಶಾಸ್ತ್ರಿಗಳ (ಸೋಮಯಾಜುಲು) ಬದುಕಿನ ಹಾಡೂ ಮುಗಿಯುತ್ತದೆ. ಜತೆಯಲ್ಲೇ ಶಾರದೆ(ಮಂಜುಭಾರ್ಗವಿ)ಯದೂ. ‘ದೊರಕುನಾ ಇಟುವಂಟಿ ಸೇವಾ...’ ತೆಲುಗಿನಲ್ಲಿ ಎಸ್ಪಿಬಿ ಹಾಡಿದ್ದು ಮತ್ತು ಜತೆಗಿನ ಕೆಮ್ಮು ಅದೆಷ್ಟು ಪರ್ಫೆಕ್ಟಾಗಿ ಬಂದಿತ್ತೆಂದರೆ, ಶಂಕರಾಭರಣಂ ಚಿತ್ರ ಮಲಯಾಳಮ್ಗೆ ಡಬ್ ಆದಾಗ ಹಾಡಿನ ತೆಲುಗು ಆವೃತ್ತಿಯನ್ನೇ ಉಳಿಸಿಕೊಂಡಿದ್ದರಂತೆ.

Saturday May 12, 2012
Mothers Day 2012
Saturday May 12, 2012
Saturday May 12, 2012
ದಿನಾಂಕ 13 ಮೇ 2012ರ ಸಂಚಿಕೆ...
ಇವಳು ಸು‘ಸಂಸ್ಕೃತ’ ಅಮ್ಮ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮದರ್ಸ್ ಡೇ ಆಚರಣೆ ನಮಗೆ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದದ್ದು. ಆದರೇನಂತೆ, ಒಳ್ಳೆಯ ವಿಚಾರಗಳು ಎಲ್ಲೆಡೆಯಿಂದಲೂ ಹರಿದು ಬರಬೇಕು. ‘ಆನೋ ಭದ್ರಾ ಕೃತವೋ ಯಂತು ವಿಶ್ವತಃ’ ಎನ್ನುವವರು ನಾವು. ಗಾಂಧೀಜಿಯವರೂ ಅದನ್ನೇ ಹೇಳಿದ್ದರು- ಬೇರೆ ದೇಶಗಳ ಸಂಸ್ಕೃತಿಯ ತಂಗಾಳಿ ಹಿತವಾಗಿ ಸುಳಿದಾಡಲು ಅನುಕೂಲವಾಗುವಂತೆ ನಮ್ಮನೆಯ ಕಿಟಕಿಗಳು ತೆರೆದಿರಲಿ. ಆದರೆ ಯಾವಕಾಲಕ್ಕೂ ಅದು ಚಂಡಮಾರುತವಾಗಿ ನಮ್ಮ ಮನೆಯನ್ನೇ ಸರ್ವನಾಶ ಮಾಡದಿರಲಿ. ಮುಖ್ಯವಾಗಿ ನಮ್ಮತನದ ಅರಿವು ನಮ್ಮೆಲ್ಲರಲ್ಲೂ ಸದಾಕಾಲ ಜಾಗ್ರತವಾಗಿ ಇರಲಿ. ಇವತ್ತು ಅಮ್ಮಂದಿರ ದಿನದ ಸಂದರ್ಭದಲ್ಲೂ ನಮ್ಮ ನಿಲುವು ಅದೇ ಆಗಿರಬೇಕಲ್ಲವೇ? ವರ್ಷಕ್ಕೊಂದು ದಿನ ಮಾತ್ರ ಅಮ್ಮನ ನೆನಪಾಗುವುದೇ ಎಂದು ಮೂಗುಮುರಿಯುವುದು ಬೇಡ. ಇವತ್ತಿನ ದಿನ ಅಮ್ಮಂದಿರನ್ನು ವಿಶೇಷವಾಗಿಯೇ ಗೌರವಿಸೋಣ; ಅದೇವೇಳೆ ನಮ್ಮ ಭಾರತೀಯ ಸಂಸ್ಕೃತಿಯು ಹೇಗೆ ಅಮ್ಮನಿಗೆ ಅನುದಿನವೂ ಅತ್ಯುಚ್ಚ ಸ್ಥಾನವನ್ನು ನೀಡಿದೆ ಎನ್ನುವುದನ್ನು ಮನನ ಮಾಡಿಕೊಳ್ಳೋಣ.
Version: 20241125