Episodes
Sunday Mar 31, 2013
Desh Raaga - Delicious Dish
Sunday Mar 31, 2013
Sunday Mar 31, 2013
ದಿನಾಂಕ 6 ಎಪ್ರಿಲ್ 2013
ದೇಶ-ಭಾಷೆಗಳನ್ನು ಮೀರಿನಿಲ್ಲುವ ರಾಗ "ದೇಶ್"
* ಶ್ರೀವತ್ಸ ಜೋಶಿ
ರಾಗದ ಹೆಸರೇ ದೇಶ್ ಎಂದು. ಅದೆಷ್ಟು ಜನಪ್ರಿಯ, ಜನಾನುರಾಗಿ ರಾಗವೆಂದರೆ ದೇಶ-ಭಾಷೆಗಳ ಸೀಮೆಗಳನ್ನೆಲ್ಲ ದಾಟಿ ವಿಶ್ವವ್ಯಾಪ್ತಿ ಹೊಂದಿರುವಂಥದು. ರಾಗರಸಧಾರೆಯ ಜತೆಗೆ ವರ್ಷಧಾರೆಯನ್ನೂ ಸುರಿಸಬಲ್ಲ ಶಕ್ತಿಯುಳ್ಳದ್ದು. ದೇಶಭಕ್ತಿ ಮತ್ತು ದೈವಭಕ್ತಿ ಎರಡಕ್ಕೂ ಹೇಳಿಮಾಡಿಸಿದಂಥ ರಾಗವೆಂದರೆ ದೇಶ್. ರಾತ್ರಿಯ ಮೊದಲ ಪ್ರಹರ ಈ ರಾಗವನ್ನು ಹಾಡಲು ಅತ್ಯಂತ ಸೂಕ್ತವಾದದ್ದಂತೆ. ಈ ರಾಗದ ಶಾಸ್ತ್ರೀಯ ಲಕ್ಷಣಗಳನ್ನು ಸ್ಥೂಲವಾಗಿ ಪರಿಚಯಿಸುವುದಾದರೆ ಇದೊಂದು ಔಡವ-ಸಂಪೂರ್ಣ ರಾಗ. ಅಂದರೆ ಆರೋಹಣದಲ್ಲಿ ಐದು ಸ್ವರಗಳು (ಸ, ರಿ, ಮ, ಪ, ನಿ, ಸ) ಬಳಕೆಯಾದರೆ ಅವರೋಹಣದಲ್ಲಿ ಎಲ್ಲ ಏಳೂ ಸ್ವರಗಳು (ಸ, ನಿ1, ಧ, ಪ, ಮ, ಗ, ರಿ, ಗ, ನಿ, ಸ) ಬಳಕೆಯಾಗುತ್ತವೆ. ಅವರೋಹಣದಲ್ಲಿನ ಮೊದಲ ‘ನಿ’ ಕೋಮಲನಿಷಾಧ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲವೂ ಶುದ್ಧ ಸ್ವರಗಳು. ಹಾಗಾಗಿ ಹೊಸದಾಗಿ ಸಂಗೀತ ಕಲಿಯುವವರಿಗೆ, ಮತ್ತು ಸಂಗೀತಜ್ಞಾನವಿಲ್ಲದವರಿಗೂ ಸುಲಭವಾಗಿ ಗುರುತಾಗುವ, ಗ್ರಾಹ್ಯವಾಗುವ ರಾಗ. ಅದರ ವಿಶ್ವವ್ಯಾಪ್ತಿ ಅಥವಾ universal appealಗೂ ಅದೇ ಮುಖ್ಯ ಕಾರಣ. ದೇಶಭಕ್ತಿ-ದೈವಭಕ್ತಿಗಳ ಜತೆಜತೆಯಲ್ಲೇ ಬೇಕಿದ್ದರೆ ಕರುಣಾರಸವನ್ನೂ, ಶೃಂಗಾರರಸವನ್ನೂ ಸ್ಫುರಿಸಬಲ್ಲ ಶಕ್ತಿಯೂ ಈ ರಾಗಕ್ಕಿದೆ. ಮುಖ್ಯವಾಗಿ ಹಿಂದುಸ್ಥಾನಿ ಶೈಲಿಯಲ್ಲಿ ‘ದೇಶ್’ ಎನ್ನುವ ಹೆಸರಾದರೂ ಕರ್ನಾಟಕಶೈಲಿಯಲ್ಲೂ ಅದೇ ಹೆಸರಿಂದ ಪ್ರಚಲಿತವಾಗಿದೆ. ಇವೆರಡೂ ಶೈಲಿಗಳ ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ‘ಹಂಸಾನಂದಿ’ ರಾಮಪ್ರಸಾದ್ (ಕ್ಯಾಲಿಫೋರ್ನಿಯಾದಲ್ಲಿರುವ ನನ್ನೊಬ್ಬ ಮಿತ್ರ) ಹೀಗೆ ಬರೆಯುತ್ತಾರೆ: "ದೇಶ್ (ಅಥವಾ ದೇಸ್) ಎಂಬ ಹೆಸರಿನ ಹಿಂದೂಸ್ಥಾನಿ ರಾಗ ಈಗ ಕರ್ನಾಟಕ ಸಂಗೀತದಲ್ಲೂ ಪ್ರಚಲಿತವಾಗಿದೆ. ಹಿಂದೆ 14-15ನೇ ಶತಮಾನದಲ್ಲಿದ್ದ ದೇಶವಾಲ ಗೌಡವೆಂಬ ರಾಗವೇ ಇದರ ಮೂಲ. ಸಂಗೀತ ಎರಡು ಕವಲೊಡೆದಾಗ, ಉತ್ತರದಲ್ಲಿ ಅದು ದೇಶ್ ಆದರೆ, ದಕ್ಷಿಣದಲ್ಲಿ ಕೇದಾರಗೌಳ ವೆಂಬ ರಾಗವಾಗಿ ಬೆಳೆಯಿತು. ಕೆಲವು ಕಾಲ ಬೇರೆಬೇರೆ ದಾರಿಗಳಲ್ಲಿ ಹೊಮ್ಮಿದ ಈ ಎರಡು ರಾಗಗಳು ಹತ್ತೊಂಬತ್ತನೆ ಶತಮಾನದ ಕೊನೆಗೆ ಎರಡು ಬೇರೆ ಚಹರೆ ಹೊಂದಿದ ರಾಗಗಳಾಗಿ ಬದಲಾದವು. ಇಪ್ಪತ್ತನೆ ಶತಮಾನದಲ್ಲಿ, ಹಿಂದುಸ್ಥಾನಿಯ ದೇಶ್ ರಾಗವನ್ನು ಕರ್ನಾಟಕ ಸಂಗೀತದಲ್ಲೂ ದೇಶ್ ಅನ್ನುವ ಹೆಸರಿನಲ್ಲೇ ಮತ್ತೆ ಹಾಡುವ ಬಳಕೆಯೂ ಆರಂಭವಾಯಿತು. ಈಗ ಈ ರಾಗದಲ್ಲಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಶ್ಲೋಕ, ರಾಗಮಾಲಿಕೆ, ದೇವರನಾಮ, ಭಜನೆ ಮೊದಲಾದ ಪ್ರಕಾರಗಳನ್ನು ಹಾಡುತ್ತಾರೆ..." ಇದಿಷ್ಟು ಪೀಠಿಕೆ ಸಾಕು ಎಂದುಕೊಳ್ಳುತ್ತೇನೆ. ಈಗ ಅಣಿಯಾಗಿ, ದೇಶ್ ರಸಧಾರೆಯಿಂದ ಮನತಣಿಸಿಕೊಳ್ಳಲು. "ಕೋಶ ಓದಿನೋಡು, ದೇಶ ಸುತ್ತಿನೋಡು" ಅಂತೊಂದು ಗಾದೆ ಇದೆಯಷ್ಟೇ? ಅದಕ್ಕೆ "ದೇಶ್ ರಾಗ ಕೇಳಿನೋಡು" ಎಂದು ಸೇರಿಸಬಹುದೆಂದು ನನ್ನ ಅಂಬೋಣ. ನೀವೇನನ್ನುತ್ತೀರಾ ನೋಡೋಣವಂತೆ. * * * ರಾಗರಸಾಯನ ಸರಣಿಯ ಮೊತ್ತಮೊದಲ ಸಂಚಿಕೆ, ಶಿವರಂಜನಿ ರಾಗದಲ್ಲಿ, ಆಕಾಶವಾಣಿಯ ಸಹಿಸಂಗೀತ (signature tune) ಶಿವರಂಜನಿ ರಾಗದಲ್ಲಿ ಇರುವುದೆಂದು ಉಲ್ಲೇಖಿಸಿ ಅದರದೊಂದು ಧ್ವನಿತುಣುಕನ್ನು ಪ್ರಸ್ತುತಪಡಿಸಿದ್ದೆ. ಆಕಾಶವಾಣಿಯಲ್ಲಿ ಬೆಳಗಿನ ಪ್ರಸಾರ ಆರಂಭವಾಗುವಾಗ ಸಹಿಸಂಗೀತದ ಅನಂತರ ಮೊಳಗುವುದು "ವಂದೇ ಮಾತರಂ", ದೇಶ್ ರಾಗದಲ್ಲಿ! ಹೀಗೆ- [youtube=http://www.youtube.com/watch?v=3g8nQuX8dUg] *** *** *** *** *** *** *** 1997ರಲ್ಲಿ ಭಾರತ ದೇಶದ ಸ್ವಾತಂತ್ರ್ಯಸ್ವರ್ಣಸಂಭ್ರಮಕ್ಕೆಂದು ಎ.ಆರ್.ರೆಹಮಾನ್ "ವಂದೇ ಮಾತರಂ" ಆಲ್ಬಮ್ ನಿರ್ಮಿಸಿದರು. ಅದು the largest selling Indian non-film album to date. ಈಗಿನ ಯುವಪೀಳಿಗೆಯಲ್ಲಿ ರಾಷ್ಟ್ರಭಕ್ತಿ ಉಕ್ಕುವಂತೆ ಮಾಡಿದ ಖ್ಯಾತಿ ಆ ಅಲ್ಬಮ್ನದು. ಇಲ್ಲಿ ಅದನ್ನು ‘ವಂದೇ ಮಾತರಂ’ ವಿಚಾರಕ್ಕೋಸ್ಕರವಷ್ಟೇ ಪ್ರಸ್ತಾಪಿಸಿದೆನೇ ಹೊರತು ಅದರಲ್ಲಿ ಎ.ಆರ್.ರೆಹಮಾನ್ ಹಾಡಿದ ವಂದೇಮಾತರಂ ‘ದೇಶ್’ರಾಗವೆಂದು ಅನಿಸುವುದಿಲ್ಲ. ಹೆಚ್ಚೂಕಡಿಮೆ ಅದೇ ವರ್ಷ ನಮ್ಮ ಸುರಮಣಿ ಪ್ರವೀಣ ಗೋಡಖಿಂಡಿ ಮತ್ತು ಡಾ.ಕದ್ರಿ ಗೋಪಾಲನಾಥ್ ಸೇರಿ "ಯಾತ್ರಾ" ಎಂಬ ಆಲ್ಬಂ ಹೊರತಂದರು. ಅದರಲ್ಲಿ ಪ್ರವೀಣ್ ಗೋಡಖಿಂಡಿ ಕೊಳಲಿನಲ್ಲಿ ಮತ್ತು ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್ನಲ್ಲಿ ‘ವಂದೇ ಮಾತರಂ’ ಇದೆ. ದೇಶ್ ರಾಗದಲ್ಲೇ ಇದೆ. ಬಹಳ ಚೆನ್ನಾಗಿಯೂ ಇದೆ. ಈಗ ಅದನ್ನು ನಿಮಗೆ ಕೇಳಿಸುವುದೂ ಇದೆ! ದೇಶ್ ರಾಗದ ಈ ಸಂಗೀತ ಯಾತ್ರೆ ಇಲ್ಲಿಂದಲೇ ಆರಂಭವಾದರೆ ಒಳಿತಲ್ಲವೇ? [youtube=http://www.youtube.com/watch?v=NYG3A3diw_s] *** *** *** *** *** *** *** ಕನ್ನಡದ ಶ್ರೇಷ್ಠ ಮತ್ತು ಜನಪ್ರಿಯ ಕವಿತೆ. ಬೌದ್ಧಿಕತೆಯ ಭಾರವಿಲ್ಲದೆ, ಅರ್ಥದ ಹಂಗೂ ಇಲ್ಲದೆ ಭಾವಗಳನ್ನು ನೇರವಾಗಿ ಮನಸ್ಸಿಗೆ ತಲುಪಿಸುವ ಶಕ್ತಿ ಇರುವ ರಚನೆ. ಯಾತನೆ ಮತ್ತು ಯಾಚನೆ, ಸಂಶಯ ಮತ್ತು ಆಶ್ಚರ್ಯ ಈ ಭಾವಗಳು ಸಂದುಕಾಣದಂತೆ ಬೆರೆತಿವೆ ಇದರಲ್ಲಿ. ಎಂ.ಗೋಪಾಲಕೃಷ್ಣ ಅಡಿಗರು ಬರೆದ ಅಜರಾಮರ ಕೃತಿ, ಕನ್ನಡಿಗರೆಲ್ಲರ all time favorite ಯಾವ ಮೋಹನ ಮುರಲಿ ಕರೆಯಿತು - ಖ್ಯಾತ ಸುಗಮಸಂಗೀತ ಕಲಾವಿದೆ ರತ್ನಮಾಲಾ ಪ್ರಕಾಶ್ ಧ್ವನಿಯಲ್ಲಿ. ಈ ಗೀತೆ ಜನಮಾನಸವನ್ನು ಮುಟ್ಟಿ ತಟ್ಟುವಂತಾಗಲು ದೇಶ್ ರಾಗದ universal appeal ಸಹ ಕಾರಣವಾಗಿದೆ ಎಂದು ನನಗನಿಸುತ್ತದೆ. [youtube=http://www.youtube.com/watch?v=Zem6HJ9drn0] *** *** *** *** *** *** *** ರತ್ನಮಾಲಾ ಪ್ರಕಾಶ್ ಹಾಡಿದಷ್ಟೇ ಮಧುರವಾಗಿ ಕೊಳಲಿನಲ್ಲಿ ಯಾವ ಮೋಹನ ಮುರಲಿ ನುಡಿಸಿದ್ದಾರೆ ಸುರಮಣಿ ಪ್ರವೀಣ ಗೋಡಖಿಂಡಿ [youtube=http://www.youtube.com/watch?v=10f2MQQq_nI] *** *** *** *** *** *** *** ದೇಶ್ ರಾಗದ universal appealಗೆ ಮತ್ತೂ ದೊಡ್ಡದೊಂದು ಉದಾಹರಣೆಯೆಂದರೆ ಮಂಗಳಾರತಿ ಪದ್ಯ "ಓಂ ಜೈ ಜಗದೀಶ ಹರೇ"! ಒಂದು ಭಕ್ತಿಪರ ಹಾಡು, ಲೆಕ್ಕವಿಡಲೂ ಊಹಿಸಲೂ ಸಾಧ್ಯವಿಲ್ಲದಷ್ಟು ಸರ್ತಿ ಈ ಬುವಿಯಲ್ಲಿ ಮೊಳಗಿದೆಯಾದರೆ ಬಹುಶಃ ಆ ಕೀರ್ತಿ ನಿಸ್ಸಂಶಯವಾಗಿ "ಜೈಜಗದೀಶ ಹರೇ"ಗೇ ಸಲ್ಲುತ್ತದೆ. ನಮಗೆಲ್ಲ ಇದು ಉತ್ತರಭಾರತದ ‘ಮಂದಿರ’ಗಳಲ್ಲಿ ಆರತಿ ಪದ್ಯ ಅಂತ ಗೊತ್ತೇ ಹೊರತು ರಚಿಸಿದವರು ಯಾರು ಅಂತ ಗೊತ್ತಿರುವುದಿಲ್ಲ. ಪಂಜಾಬ್ನ ಪಂಡಿತ್ ಶಾರದಾರಾಮ್ ಫಿಲೌರಿ ಎಂಬುವರು ಸುಮಾರು 1870ರಲ್ಲಿ ಇದನ್ನು ರಚಿಸಿದರಂತೆ. ಜಯದೇವ ಕವಿಯ ಗೀತಗೋವಿಂದದಲ್ಲಿ ಬರುವ ದಶಾವತಾರ ಕೀರ್ತಿಧವಲಮ್ ಭಾಗವು ಈ ಪದ್ಯಕ್ಕೆ ಸ್ಫೂರ್ತಿ ಎನ್ನುತ್ತಾರೆ. ಆಮೇಲೆ ಪ್ರತಿಯೊಬ್ಬ ದೇವ-ದೇವಿಗೂ ಹೊಂದುವಂತೆ ಇದೇ ಧಾಟಿಯಲ್ಲಿ ಆರತಿ ಪದ್ಯಗಳು ತುಂಬಾ ಬಂದಿವೆ. ಚಲನಚಿತ್ರಗಳಲ್ಲೂ ಈ ಗೀತೆಯನ್ನು ಅಳವಡಿಸಿಕೊಂಡ ನಿದರ್ಶನಗಳಿವೆ. ಪೂರಬ್ ಔರ್ ಪಶ್ಚಿಮ್ ಚಿತ್ರದಲ್ಲಿ ಮಹೇಂದ್ರಕಪೂರ್ ಮತ್ತು ಸಂಗಡಿಗರು ಹಾಡಿರುವುದು ಇಲ್ಲಿದೆ- [youtube=http://www.youtube.com/watch?v=vdwIUrh_4OQ] *** *** *** *** *** *** *** ಎಷ್ಟು ಸರ್ತಿ ಕೇಳಿದರೂ ಬೇಸರ ತರಿಸದ ಶ್ರೇಷ್ಠ ಭಕ್ತಿಗೀತೆಯಾದ್ದರಿಂದ ಮತ್ತೊಮ್ಮೆ ಕೇಳೋಣ, ಓಂ ಜೈ ಜಗದೀಶ ಹರೇ - ವಾದ್ಯಸಂಗೀತದಲ್ಲಿ... [youtube=http://www.youtube.com/watch?v=FIU9nipJX74] *** *** *** *** *** *** *** ಈಗ, ಹಿಂದುಸ್ಥಾನಿ ಶೈಲಿಯಲ್ಲಿ ಬೆಂಗಳೂರಿನ ಸಮೀರ್ ರಾವ್ ಅವರ ಬಾನ್ಸುರಿ ವಾದನದಲ್ಲಿ ದೇಶ್ ರಾಗದ ಒಂದು ತುಣುಕು. ಪಕ್ವವಾದ ಮಾವಿನಹಣ್ಣಿನ ಸಿಪ್ಪೆ ತೆಗೆದಾಗ ಅದರಿಂದ ಮಧುರ ರಸ ತೊಟ್ಟಿಕ್ಕುವಂತೆ ಈ ಕೃತಿಯನ್ನು ಕೇಳುತ್ತಿರುವಾಗ ದೇಶ್ ರಾಗರಸ ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ ಎಂದು ಅನಿಸಿದರೆ ಅಶ್ಚರ್ಯವಿಲ್ಲ! [youtube=http://www.youtube.com/watch?v=mGOLGDO8JrA] *** *** *** *** *** *** *** ಮುಂದಿನ ಪ್ರಸ್ತುತಿ, ಕರ್ನಾಟಕ (ದಕ್ಷಿಣಾದಿ) ಸಂಗೀತಶೈಲಿಯಲ್ಲಿ ದೇಶ್ ರಾಗದಲ್ಲಿ ಒಂದು ತಿಲ್ಲಾನ. ಇದು ಖ್ಯಾತ ವಯಲಿನ್ ಕಲಾವಿದ ಲಾಲ್ಗುಡಿ ಜಿ.ಜಯರಾಮನ್ ಅವರ ರಚನೆ. ಅವರು ಹೊರತಂದಿರುವ Dance of Sound ಆಲ್ಬಮ್ನಲ್ಲಿ ಈ ಕೃತಿ ಇದೆ. ಇಲ್ಲಿರುವ ರೆಕಾರ್ಡಿಂಗ್, ಲಾಲ್ಗುಡಿ ಶ್ರೀಮತಿ ಬ್ರಹ್ಮಾನಂದನ್ ಅವರು ವಯಲಿನ್ನಲ್ಲಿ ನುಡಿಸಿರುವುದು. ಕೆನಡಾ ದೇಶದ ಮಾಂಟ್ರಿಯಲ್ನಲ್ಲಿ ನಡೆದ ಸಂಗೀತ ಕಛೇರಿ ಕಾರ್ಯಕ್ರಮದ್ದು. ತಿಲ್ಲಾನ ಸವಿಯುತ್ತಲೇ, ಚಿತ್ರಗಳಲ್ಲಿ ತಮಿಳುನಾಡು ರಾಜ್ಯದ ಸುಂದರ ದೃಶ್ಯಾವಳಿಯನ್ನುಕಣ್ತುಂಬ ನೋಡುವ ಅವಕಾಶ. [youtube=http://www.youtube.com/watch?v=_Lnv987hELY] *** *** *** *** *** *** *** ಈಗೊಂದು ಕನ್ನಡ ಚಿತ್ರಗೀತೆ. ಎರಡು ಕನಸು ಚಿತ್ರದಲ್ಲಿ ಪೂಜಿಸಲೆಂದೇ ಹೂಗಳ ತಂದೇ... ಡಾ.ರಾಜಕುಮಾರ್, ಕಲ್ಪನಾ, ಮಂಜುಳಾ ಅಭಿನಯದ ಮನೋಜ್ಞ ಚಿತ್ರ. ಚಿ.ಉದಯಶಂಕರ್ ಸಾಹಿತ್ಯ, ರಾಜನ್-ನಾಗೇಂದ್ರ ಸಂಗೀತ, ಎಸ್.ಜಾನಕಿ ಅವರ ಮಧುರ ಕಂಠ. ಈ ಹಾಡೂ ಅಷ್ಟೇ, ಕನ್ನಡ ಚಿತ್ರಗೀತೆಗಳಲ್ಲಿ ನಿತ್ಯಹರಿದ್ವರ್ಣವಾಗಿ, ಯಾವ ಹೊತ್ತಲ್ಲಿ ಕೇಳಿದರೂ ಕಿವಿಗಳಿಗೆ ಮನಸ್ಸಿಗೆ ತಂಪುಕೊಡುವ ಹಾಡುಗಳಲ್ಲೊಂದಾಗಿ ಕನ್ನಡಿಗರ ಮನೆಮನಗಳಲ್ಲಿ ನೆಲೆಸಿರುವಂಥದು. [youtube=http://www.youtube.com/watch?v=j5W1XYjO-3c] *** *** *** *** *** *** *** ಮುಂದಿನದು, Call of the Valley ಅಲ್ಬಂನಿಂದ ಒಂದು ಟ್ರ್ಯಾಕ್. ಈ Call of the Valley ಆಲ್ಬಂನ ಬಗ್ಗೆ ಒಂದೆರಡು ಮಾತು ಇಲ್ಲಿ ಉಲ್ಲೇಖನೀಯ. 1967ರಲ್ಲಿ EMI ಕಂಪನಿ ಬಿಡುಗಡೆಗೊಳಿಸಿದ ಈ ಆಲ್ಬಂನಲ್ಲಿ ಆಗತಾನೆ ಜನಪ್ರಿಯತೆಯ ಶಿಖರವೇರತೊಡಗಿದ್ದ ಬಾನ್ಸುರಿವಾದಕ ಹರಿಪ್ರಸಾದ್ ಚೌರಾಸಿಯಾ, ಸಂತೂರ್ ವಾದಕ ಶಿವಕುಮಾ ಶರ್ಮಾ ಮತ್ತು ಗಿಟಾರ್ವಾದಕ ಬ್ರಿಜ್ಭೂಷಣ್ ಕಾಬ್ರಾ - ಈ ಮೂವರ ಸಹಯೋಗದಲ್ಲಿ ಎಂಟು ಜನಪ್ರಿಯ ಹಿಂದುಸ್ಥಾನಿ ರಾಗಗಳ ತುಣುಕುಗಳನ್ನು ಪ್ರಸ್ತುತಪಡಿಸಿತು. ಕಾಶ್ಮೀರದ ಒಬ್ಬ ಕುರಿಕಾಯುವವನ ಬದುಕಿನ ಒಂದು ದಿನವನ್ನು ಎಂಟು ವಿವಿಧ ರಾಗಗಳಲ್ಲಿ ಚಿತ್ರಿಸಿದ ವಿಶಿಷ್ಟ ಪ್ರಯೋಗವಿದು. ಪಾಶ್ಚಾತ್ಯ ಜಗತ್ತಿಗೆ ಭಾರತೀಯ ಸಂಗೀತದ ಸವಿಯನ್ನುಣಿಸುವಲ್ಲಿ ಈ ಆಲ್ಬಂ ಬಹುಮುಖ್ಯ ಪಾತ್ರ ವಹಿಸಿತು. ಜಾರ್ಜ್ ಹ್ಯಾರಿಸನ್, ಡೇವಿಡ್ ಕ್ರಾಸ್ಬಿ, ಪೌಲ್ ಮೆಕಾರ್ಟ್ನಿ, ಬಾಬ್ ಡೈಲಾನ್ ಮುಂತಾದ ಪಾಶ್ಚಾತ್ಯ ಸಂಗೀತಗಾರರೆಲ್ಲ ಈ ಆಲ್ಬಂಗೆ ತಲೆದೂಗಿದರು. ಇದರ ಜನಪ್ರಿಯತೆ ಎಷ್ಟೆಂದರೆ ಮ್ಯೂಸಿಕ್ ಅಂಗಡಿಗಳವರು ಹೇಳುತ್ತಾರೆ- " "If the newcomer buys only one Indian classical recording, it should be "Call of the Valley"! ರಾಬರ್ಟ್ ಡೈನರಿ ಮತ್ತು ಮೈಕೇಲ್ ಲೈಡನ್ ಎಂಬಿಬ್ಬರು ಪಟ್ಟಿಮಾಡಿದ "1001 Albums You Must Hear Before You Die"ಯಲ್ಲೂ ಇದಕ್ಕೆ ಸ್ಥಾನ! [youtube=http://www.youtube.com/watch?v=1QVAEr087qA] *** *** *** *** *** *** *** ಮಲಯಾಳಂ ಚಿತ್ರಗೀತೆ ಇಲ್ಲದೆ ರಾಗರಸಾಯನ ಅಪೂರ್ಣ. ದೇಶ್ ರಾಗವೂ ಅದಕ್ಕೆ ಅಪವಾದವೇನಲ್ಲ. ಮಮ್ಮೂಟಿ ಮತ್ತು ನಮ್ರತಾ ಶಿರೋಡ್ಕರ್ ಅಭಿನಯದ ಏಳುಪುನ್ನತಾರಕನ್ ಚಿತ್ರದ ಗೀತೆ. ವಿದ್ಯಾಸಾಗರ್ ಸಂಗೀತನಿರ್ದೇಶನದಲ್ಲಿ ಕೆ.ಎಸ್.ಚಿತ್ರಾ ಹಾಡಿದ್ದಾರೆ. ಹಾಡು ಶುರುವಾಗುವ ಮುನ್ನ ಸಂಗಡಿಗರು humಇಸುವ ಧಾಟಿ ಓಂ ಜೈ ಜಗದೀಶ ಹರೇ... ಟ್ಯೂನ್ಅನ್ನು ನೆನಪಿಸುತ್ತದೆ. [youtube=http://www.youtube.com/watch?v=fA_fPx1OsoE] *** *** *** *** *** *** *** ಈಗ ಒಂದು ಹಿಂದಿ ಭಜನ್ ಕೈಸೇ ಬನ್ಸಿ ಬಜೀ ತೋರೀ... ಹಿನ್ನೆಲೆಗಾಯಕಿ ಕವಿತಾ ಕೃಷ್ಣಮೂರ್ತಿ ಧ್ವನಿಯಲ್ಲಿ, ಖ್ಯಾತ ಬಾನ್ಸುರಿವಾದಕ ರೋನು ಮುಜುಂದಾರ್ ಅವರ ಕೊಳಲದನಿಯೊಂದಿಗೆ. [youtube=http://www.youtube.com/watch?v=v9xqa0o3FL8] *** *** *** *** *** *** *** ಇನ್ನೊಂದು ಹಳೆಯ (ಬ್ಲ್ಯಾಕ್ ಏಂಡ್ ವೈಟ್) ಕನ್ನಡ ಸಿನೆಮಾಹಾಡು- ಸಿಐಡಿ ರಾಜಣ್ಣ ಚಿತ್ರಕ್ಕಾಗಿ ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವ, ಬಸವಣ್ಣನವರ ವಚನ "ಕಳಬೇಡ ಕೊಲಬೇಡ..." [youtube=http://www.youtube.com/watch?v=9Qbu8_DJasU] *** *** *** *** *** *** *** ಮತ್ತೊಮ್ಮೆ ಹಿಂದುಸ್ಥಾನಿ ಸಂಗೀತದ ಒಂದು ತುಣುಕು- ಪಂಡಿತ್ ಶಿವಕುಮಾರ್ ಶರ್ಮಾ ಅವರಿಂದ ಸಂತೂರ್ ವಾದನದಲ್ಲಿ ದೇಶ್ ರಾಗದ ಒಂದು ಬಂದಿಶ್. [youtube=http://www.youtube.com/watch?v=0CjYshWuJOo] *** *** *** *** *** *** *** ‘ರೋಜಾ’! 1992ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಿಡುಗಡೆಯಾಡ ತಮಿಳು ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ? ತಮಿಳಿನ ನಂತರ ಇದು ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ಬಂತು. ಪ್ರಶಸ್ತಿಗಳನ್ನೆಲ್ಲ ಬಾಚಿಕೊಂಡಿತು. ಚಿತ್ರ ಎಷ್ಟು ಜನಪ್ರಿಯವಾಯ್ತೋ ಅದಕ್ಕಿಂತಲೂ ಹೆಚ್ಚಾಗಿ ಎ.ಆರ್.ರೆಹಮಾನ್ ಎಂಬ ಸಂಗೀತ ನಿರ್ದೇಶಕನ ಉಗಮವಾಯಿತು. ಆತನ ಪರಿಚಯ ಇಡೀ ಜಗತ್ತಿಗೆ ಆಯಿತು. ರೋಜಾ ಚಿತ್ರದ ಒಂದೊಂದು ಹಾಡು ಸಹ ಸೂಪರ್ಹಿಟ್ ಅನಿಸಿಕೊಂಡಿತು, ದೇಶ್ ರಾಗದಲ್ಲಿರುವ ಈ ಟೈಟಲ್ ಸಾಂಗ್ "ಕಾದಲ್ ರೋಜಾವೇ ಎಂಗೇ ನೀ ಎಂಗೇ..." ಸಹ! ವೈರಮುತ್ತು ರಚನೆಯನ್ನು ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸುಜಾತಾ. 2005ರಲ್ಲಿ ಅಮೆರಿಕದ TIME ಮ್ಯಾಗಜೀನ್ ಮಾಡಿದ "10 Best Soundtracks" of all time ಪಟ್ಟಿಯಲ್ಲಿ ಈ ಹಾಡು ಸ್ಥಾನಪಡೆದಿತ್ತು! [youtube=http://www.youtube.com/watch?v=f3WXbg8q8Bw] *** *** *** *** *** *** *** ವೀಣಾವಿದ್ವಾನ್ ಆರ್.ಕೆ.ಮೂರ್ತಿ ಅವರ ವೀಣಾವಾದನದಲ್ಲಿ ದೇಶ್ ರಾಗದ ಒಂದು ತುಣುಕು. [youtube=http://www.youtube.com/watch?v=8CfIunk5g6U] *** *** *** *** *** *** *** ಹಿಂದಿ ಚಲನಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತನಿರ್ದೇಶಕ ಆರ್.ಡಿ.ಬರ್ಮನ್ ಅವರ ಕಟ್ಟಕಡೆಯ ಚಿತ್ರ, ವಿಧು ವಿನೋದ್ ಚೋಪ್ರಾ ನಿರ್ದೇಶನದಲ್ಲಿ ಬಂದ 1942 A Love Story. ಅನಿಲ್ಕಪೂರ್ ಮತ್ತು ಮನಿಷಾ ಕೊಯಿರಾಲಾ ಅಭಿನಯದ ಈ ಚಿತ್ರದ ಎಲ್ಲ ಹಾಡುಗಳೂ ಸೂಪರ್ಹಿಟ್. ಅದು ಆರ್.ಡಿ.ಬರ್ಮನ್ ಮ್ಯಾಜಿಕ್. ಕವಿತಾ ಕೃಷ್ಣಮೂರ್ತಿ ಹಾಡಿದ "ಮೈನೇ ಕಹಾ ಚುಪ್ಕೇ ಸೇ..." ಹಾಡಿಗಂತೂ ದೇಶ್ ರಾಗದ ಮೆರುಗು ಮತ್ತಷ್ಟು ಜನಪ್ರಿಯತೆ ಗಳಿಸಿಕೊಟ್ಟಿತು. [youtube=http://www.youtube.com/watch?v=ZS5lwqn966k] *** *** *** *** *** *** *** ಇನ್ನೊಂದು ಸಂಗೀತತುಣುಕು, ತರುಣ ಕಲಾವಿದ ಸುವೇಂದು ಬ್ಯಾನರ್ಜಿ ನುಡಿಸಿದ ಹಾರ್ಮೋನಿಯಂನಲ್ಲಿ ದೇಶ್ ರಾಗದ ಒಂದು ರಚನೆ. [youtube=http://www.youtube.com/watch?v=o8vMOLEO-jY] *** *** *** *** *** *** *** ಕನ್ನಡಿಗರ ಎದೆಯೊಳಗೆ ನಾಡು-ನುಡಿಗಳ ಬಗ್ಗೆ ಭಕ್ತಿಯ ದೀಪ ಹಚ್ಚುವ ಗೀತೆ "ಹಚ್ಚೇವು ಕನ್ನಡದ ದೀಪ..." ಸಹ ದೇಶ್ ರಾಗದಲ್ಲಿದೆ ಎಂದಮೇಲೆ ಅದರ universal appealನ ರಹಸ್ಯ ಬಯಲಾಗುತ್ತದೆ. ಡಿ.ಎಸ್.ಕರ್ಕಿ ಅವರ ಈ ರಚನೆ ತಥಾಕಥಿತ "ನವೆಂಬರ್ ಕನ್ನಡಿಗ"ರಲ್ಲೂ ಕನ್ನಡಜ್ಯೋತಿಯನ್ನು ಬೆಳಗಿಸುವಲ್ಲಿ ಯಶಸ್ವಿಯಾಗುತ್ತದೆ. ಕನ್ನಡ ಸಾಹಿತ್ಯಪರಿಷತ್ನವರು 90ರ ದಶಕದಲ್ಲಿ ಹೊರತಂದ ಜನಪ್ರಿಯ ನಾಡಗೀತೆಗಳ ಧ್ವನಿಸುರುಳಿಗೆ ಈ ಗೀತೆಯದೇ ಹೆಸರನ್ನು ಕೊಡಲಾಗಿತ್ತು. ಸಿ.ಅಶ್ವತ್ಠ್ ಸಂಗೀತ ನಿರ್ದೇಶನದಲ್ಲಿ ಕನ್ನಡದ ಖ್ಯಾತಗಾಯಕಗಾಯಕಿಯರು ಈ ಹಾಡುಗಳನ್ನು ಹಾಡಿದ್ದಾರೆ. ನಿರೂಪಣೆ, ಬೆಂಗಳೂರು ಆಕಾಶವಾಣಿಯ ಚಿರಪರಿಚಿತ ಧ್ವನಿ ಮಾಲತಿ ಶರ್ಮಾ ಅವರಿಂದ. [youtube=http://www.youtube.com/watch?v=7hO4FpFBY9E] *** *** *** *** *** *** *** ಈಗೊಂದು ಜಾಹಿರಾತು. This part of the ರಾಗರಸಾಯನ ಕಾರ್ಯಕ್ರಮ is brought to you by "ಗಾರ್ಡನ್ ವರೇಲಿ" sarees... :-) [youtube=http://www.youtube.com/watch?v=yHJMuIini44] *** *** *** *** *** *** *** ಜಾಹಿರಾತಿನ ನಂತರ ರಾಗರಸಾಯನವನ್ನು ಮುಂದುವರಿಸುತ್ತ ಈಗ Steve Gorn ಮತ್ತು Benjy Wertheimer ಎಂಬಿಬ್ಬರು ಪಾಶ್ಚಾತ್ಯ ಕಲಾವಿದರು ಹೊರತಂದ "Priyagitah- the Nightingale" ಆಲ್ಬಂನಿಂದ ದೇಶ್ ರಾಗದ ಒಂದು ಟ್ರ್ಯಾಕ್. ಕೊಳಲು ಮತ್ತು ಸಾರಂಗಿ ವಾದನ ಕೇಳುತ್ತಿದ್ದರೆ ನುಡಿಸಿರುವವರು ಭಾರತೀಯ ಮಣ್ಣಿನಮಕ್ಕಳೇ ಇರಬೇಕು ಅಂತನಿಸುವಷ್ಟು ಆಪ್ಯಾಯಮಾನ! [youtube=http://www.youtube.com/watch?v=6m5k5X8mkNo] *** *** *** *** *** *** *** ಇಲ್ಲೊಬ್ಬ child prodigy. ಮಾಸ್ಟರ್ ಆಕಾಶ್. ನಮ್ಮ ಬೆಂಗಳೂರಿನವನು. SONY entertainment channelನ ಐಡಿಯಾ ಜಲ್ಸಾ ನ್ಯಾಷನಲ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ವಿಜೇತ. ಈ ಹುಡುಗ ಬಾನ್ಸುರಿಯಲ್ಲಿ ನುಡಿಸಿರುವ ದೇಶ್ ರಾಗ- [youtube=http://www.youtube.com/watch?v=d4icJtswiss] *** *** *** *** *** *** *** ಈಗೊಂದು ಯಕ್ಷಗಾನ ಪದ್ಯ, ಶೂರ್ಪನಖಾ ಮಾನಭಂಗ ಪ್ರಸಂಗದಿಂದ. ಭಾಗವತರು ರವಿಚಂದ್ರ ಕನ್ನಡಿಕಟ್ಟೆ. ಮದ್ದಳೆ ನುಡಿಸಿದವರು ಪದ್ಯಾಣ ಶಂಕರನಾರಾಯಣ ಭಟ್. ಇದು 22ಸಪ್ಟೆಂಬರ್2012ರಂದು ಮಂಗಳೂರಿನಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಿಂದ ಆಯ್ದ ವಿಡಿಯೋರೆಕಾರ್ಡಿಂಗ್. ಇದನ್ನಿಲ್ಲಿ ದೇಶ್ ರಾಗರಸಾಯನದಲ್ಲಿ ಸೇರಿಸಿಕೊಂಡದ್ದು, ನನ್ನ ಫೇಸ್ಬುಕ್ ಮಿತ್ರ (ಈ ವಿಡಿಯೋದ ನಿರ್ಮಾಪಕ) ರಾಮ್ನರೇಶ್ ಮಂಚಿ ಅವರಿಗೆ ಖುಷಿಯಾಗಬಹುದು. [youtube=http://www.youtube.com/watch?v=0JDfTwpM6xI] *** *** *** *** *** *** *** ಒಂದು ತೆಲುಗು ದೇಶಭಕ್ತಿಗೀತೆ ‘ಸ್ವತಂತ್ರ ಭಾರತ ಜನನಿ...’ [youtube=http://www.youtube.com/watch?v=p40WQyb1yQ8] *** *** *** *** *** *** *** ಹಾಗೆಯೇ ಒಂದು ‘ರಬೀಂದ್ರ ಸಂಗೀತ’-ಆಶಾ ಭೋಂಸ್ಲೆಯವರು ಹಾಡಿದ ರವೀಂದ್ರನಾಥ ಟಾಗೋರ್ ಅವರ ರಚನೆ ‘ಎಶೊ ಶ್ಯಾಮಲೋ ಸುಂದರೋ...’ [youtube=http://www.youtube.com/watch?v=cjomhLcv3KU] *** *** *** *** *** *** *** ಒಂದು ಹಿಂದಿ ಚಿತ್ರಗೀತೆ-‘ಸೆಹರಾ’ ಚಿತ್ರಕ್ಕಗಿ ಮಹಮ್ಮದ್ ರಫಿ ಹಾಡಿರುವ ತಕ್ದೀರ್ ಕಾ ಫಸಾನಾ [youtube=http://www.youtube.com/watch?v=hcZaFMbAb4Y] *** *** *** *** *** *** *** ‘ಸ್ವದೇಶ್’ ಚಿತ್ರದ ಥೀಮ್ ಮ್ಯೂಸಿಕ್ - ಬಿಸ್ಮಿಲ್ಲಾಖಾನ್ ಅವರ ಶೆಹನಾಯ್ಯ ಗೂಂಜ್. ಇದು ಕಿವಿಗಳೊಳಗೆ ಇಳಿಯುವ ಮೊದಲೇ ನೇರವಾಗಿ ಎದೆಯನ್ನು ತಲುಪುವಂಥ, ಕಣ್ಣಂಚುಗಳನ್ನು ಒದ್ದೆಯಾಗಿಸುವಂಥ ವಿಶೇಷತೆಯುಳ್ಳದ್ದು. ಎ.ಆರ್.ರೆಹಮಾನ್ ಮ್ಯಾಜಿಕ್ ಎಂದು ಬೇರೆಹೇಳಬೇಕಿಲ್ಲವಲ್ಲ? [youtube=http://www.youtube.com/watch?v=jhXvX9734Ls] *** *** *** *** *** *** *** ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಅವರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಂಕರ ಮಹಾದೇವನ್ ಜೊತೆಗೆ 2750 ಸಹಗಾಯಕರು ಮತ್ತು ವಾದ್ಯವೃಂದದವರಿಂದ ‘ಅಂತರ್ನಾದ’ಗಾಯನ "ಹೋ ಯಹೀ ಗುಂಜನ್ ಸಾ ಮನ್ಮೇ..." [youtube=http://www.youtube.com/watch?v=WiANdaNPmn4] *** *** *** *** *** *** *** ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ World music ಕೋರ್ಸ್ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನೂ ಕಲಿಸುತ್ತಾರೆ. ಸಮೂಹಗಾನದಲ್ಲಿ "Desh- an Indian Raga" ಸಹ ಸಿಲೆಬಸ್ನಲ್ಲಿ ಕಡ್ಡಾಯವಾಗಿ ಇರುತ್ತದೆ. Ethan Sperryಯವರಂಥ ಪ್ರಖ್ಯಾತ ಕೋರಸ್ ಕಲಾವಿದರು ಬೇರೆಬೇರೆ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ’ದೇಶ್ ರಾಗ’ದ ಗಾಯನ ಕಲಿಸುತ್ತಾರೆ. ಇಲ್ಲಿರುವ ಈ ರೆಕಾರ್ಡಿಂಗ್ ಎರಡು ವರ್ಷಗಳ ಹಿಂದೆ ಶಿಕಾಗೋದ ಒಂದು ಮ್ಯೂಸಿಕ್ ಕಾಲೇಜಿನ ಕಾರ್ಯಕ್ರಮದ್ದು. World musicನಲ್ಲಿ ಬೇರೆಬೇರೆ ದೇಶಗಳ ಸಂಗೀತತುಣುಕುಗಳಿರುತ್ತವಾದರೂ ಭಾಗವಹಿಸುವವರಲ್ಲಿ ಮತ್ತು ಪ್ರೇಕ್ಷಕರದಲ್ಲಿ ಏಕಪ್ರಕಾರವಾಗಿ ರೋಮಾಂಚನದ ವಿದ್ಯುತ್ಸಂಚಾರ ಮಾಡಿಸುವುದು ಯಾವಾಗಲೂ ‘Desh- an Indian Raga' choir music. "ದೇಶಭಾಷೆಗಳನ್ನು ಮೀರಿನಿಲ್ಲುವ ರಾಗ ದೇಶ್" ಎಂದು ಈ ಸಂಚಿಕೆಗೆ ನಾನೇಕೆ ತಲೆಬರಹ ಕೊಟ್ಟಿದ್ದೇನೆಂದು ಬಹುಶಃ ಈಗ ನಿಮಗೆ ಅರ್ಥವಾಗಿರುತ್ತದೆ. [youtube=http://www.youtube.com/watch?v=pLX05wYBNGI] *** *** *** *** *** *** *** ಈಗ, ಕಾಯಕ್ರಮದ Grand Finale- ಎಂಬತ್ತು/ತೊಂಬತ್ತರ ದಶಕಗಳಲ್ಲಿ ದೂರದರ್ಶನದಲ್ಲಿ ಪದೇಪದೆ ಪ್ರಸಾರಗೊಂಡು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ದೇಶಭಕ್ತಿಯ ಸಿಂಚನ ಮಾಡಿದ "ಬಜೇ ಸರಗಮ್ ಹರ್ ತರಫ್ ಸೇ..." [youtube=http://www.youtube.com/watch?v=MqYI0ijhk-8] *** *** *** *** *** *** *** ದೇಶ್ ರಾಗರಸಾಯನ ನಿಮಗೆ ಇಷ್ಟವಾದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆ ಸೂಚನೆ ತಿದ್ದುಪಡಿ ಇತ್ಯಾದಿ ಇದ್ದರೆ ಖಂಡಿತ ತಿಳಿಸುವಿರಲ್ಲ? * * * *Thursday Feb 28, 2013
Scilntillating Shuddha Dhanyasi
Thursday Feb 28, 2013
Thursday Feb 28, 2013
ದಿನಾಂಕ 7 ಮಾರ್ಚ್ 2013
ಇದೋ ಆಲಿಸಿ- ‘ಶುದ್ಧ ಧನ್ಯಾಸಿ’!
* ಶ್ರೀವತ್ಸ ಜೋಶಿ
ರಾಗರಸಾಯನ ಸರಣಿಯಲ್ಲಿ ಇಲ್ಲಿಯತನಕ ಪ್ರಸ್ತಾಪಿಸಿದ್ದ ಶಿವರಂಜನಿ, ಕಲ್ಯಾಣಿ, ಮೋಹನ, ಮಧ್ಯಮಾವತಿ, ಅಭೇರಿ, ಮತ್ತು ಹಿಂದೋಳ- ಇವುಗಳ ಸಾಲಿನಲ್ಲೇ ನಿಲ್ಲುವ ಇನ್ನೊಂದು ರಾಗ ‘ಶುದ್ಧ ಧನ್ಯಾಸಿ’. ಇವೆಲ್ಲ ರಾಗಗಳು ಸಂಗೀತಜ್ಞಾನ ಇದ್ದವರಿಗಷ್ಟೇ ಅಲ್ಲ, ನಮ್ಮಂಥ ಪಾಮರರನ್ನೂ ಆಕರ್ಷಿಸುವ ಮತ್ತು ರಂಜಿಸುವ ಶಕ್ತಿಯುಳ್ಳವು . ಶಾಸ್ತ್ರೀಯವಾಗಿಯೂ ಇವುಗಳಲ್ಲಿ ಪರಸ್ಪರ ಹೋಲಿಕೆಗಳು ಕಂಡುಬರುತ್ತವೆ. ಈ ಸರಣಿಯದು ಶಾಸ್ತ್ರೀಯ ವಿಚಾರಮಂಥನಕ್ಕಿಂತ ಹೊಸಬರಿಗೆ, ಸಂಗೀತ ಹಾಡಲಿಕ್ಕಲ್ಲದಿದ್ದರೂ ಕೇಳಲಿಕ್ಕೆ ಆಸಕ್ತಿಯುಳ್ಳವರಿಗೆ, ಆ ಆಸಕ್ತಿಯನ್ನು ಉದ್ದೀಪನಗೊಳಿಸುವ ಉದ್ದೇಶ. ಅದೇ ಜಾಡಿನಲ್ಲಿ ಇವತ್ತಿನ ಪ್ರಸ್ತುತಿ: "ಇದೋ ಆಲಿಸಿ- ಶುದ್ಧ ಧನ್ಯಾಸಿ" "ಸ ಗ2 ಮ1 ಪ ನಿ2 ಸ" ಆರೋಹಣ ಮತ್ತು "ಸ ನಿ2 ಪ ಮ1 ಗ2 ಸ" ಅವರೋಹಣ - ಇದು ಶುದ್ಧ ಧನ್ಯಾಸಿ ರಾಗದ ಲಕ್ಷಣ. ಐದೇ ಸ್ವರಗಳು. ಐದು ಸ್ವರಗಳ ರಾಗಗಳನ್ನು ‘ಔಡವ ರಾಗ’ ಎನ್ನುತ್ತಾರೆ. ಶಿವರಂಜನಿ, ಮೋಹನ, ಮಧ್ಯಮಾವತಿ, ಹಿಂದೋಳ ಸಹ ಔಡವರಾಗಗಳೇ. ಇವೆಲ್ಲದರ ಇನ್ನೊಂದು ಲಕ್ಷಣವೆಂದರೆ ಆರೋಹಣದ ಸ್ವರಗಳೇ ಹಿಮ್ಮುಖ ಸಂಚರಿಸಿದಾಗ ಅವರೋಹಣ ಆಗುತ್ತದೆ. ಅಂಥ ಸಮಮಿತಿ(symmetry)ಯು ರಾಗದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಕಲಿಯುವವರಿಗೂ ಸುಲಭವೆನಿಸುತ್ತದೆ. ಶುದ್ಧ ಧನ್ಯಾಸಿ ರಾಗಕ್ಕೆ ಉದಯರವಿಚಂದ್ರಿಕಾ ಎಂದು ಇನ್ನೊಂದು ಹೆಸರೂ ಇದೆ. ಹಿಂದುಸ್ಥಾನಿಯಲ್ಲಿ ಶುದ್ಧಧನ್ಯಾಸಿಗೆ ಸಮಾನಾಂತರವಾದ ರಾಗದ ಹೆಸರು ‘ಧನಿ’ ಎಂದು (‘ಧಾನಿ’ ಎಂದೂ ಹೇಳುತ್ತಾರೆ). ‘ಧನ್ಯಾಸಿ’ ಎಂಬ ಹೆಸರಿನ ಇನ್ನೊಂದು ರಾಗವೂ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿದೆ. ಧನಿ-ಧನ್ಯಾಸಿ-ಶುದ್ಧಧನ್ಯಾಸಿ ಈ ಹೆಸರುಗಳಲ್ಲಿನ ಸಾಮಾನ್ಯ ಅಂಶವಾದ ‘ಧನಿ’ ಬಹುಶಃ ಧ್ವನಿ (sound ಎಂಬ ಅರ್ಥದಲ್ಲಿ) ಶಬ್ದದ ಅಪಭ್ರಂಶವಿರಲೂಬಹುದು! ಹಿಂದೋಳ (ಮಾಲಕೌಂಸ್) ಹೇಗೆ ಭಕ್ರಿರಸಪ್ರಧಾನ ರಾಗವೋ, ಶುದ್ಧಧನ್ಯಾಸಿ ಪ್ರೇಮರಸ ಪ್ರಧಾನ ಎನ್ನುತ್ತಾರೆ ವಿದ್ವಾಂಸರು. ಸಮಯಕ್ಕನುಗುಣವಾಗಿ ರಾಗಗಳನ್ನು ವರ್ಗೀಕರಿಸುವವರು ಶುದ್ಧ ಧನ್ಯಾಸಿಯನ್ನು ಮಧ್ಯಾಹ್ನ ಅಥವಾ ಅಪರಾಹ್ನದ ರಾಗ ಎಂದು ಗುರುತಿಸುತ್ತಾರೆ. ಸಂಗೀತಕಚೇರಿಯಲ್ಲಿ ಹೆಚ್ಚಾಗಿ ಕಚೇರಿಯ ಮಧ್ಯಭಾಗ ಅಥವಾ ಉತ್ತರಾರ್ಧದಲ್ಲಿ ವಿಸ್ತಾರವಾದ ಪ್ರಸ್ತುತಿಗೆ ಈ ರಾಗವನ್ನು ಆಯ್ದುಕೊಳ್ಳುತ್ತಾರೆ. ಮಹಾರಾಜಪುರಂ ಸಂತಾನಂರಂತಹ ಮಹಾನ್ ಕಲಾವಿದರು ಸಂಗೀತಕಚೇರಿಯಲ್ಲಿ ಸುಮಾರು ಒಂದು ಗಂಟೆಯುದ್ಧಕ್ಕೂ ಶುದ್ಧಧನ್ಯಾಸಿಯನ್ನು ವಿಸ್ತರಿಸಬಲ್ಲರು! ಶ್ರೋತೃಗಳ ಮೈಮನಗಳನ್ನು ‘ಸೆರೆಹಿಡಿದಿಟ್ಟು’ಕೊಳ್ಳಬಲ್ಲರು! ಅಷ್ಟೂ ಆಕರ್ಷಣಾ ಶಕ್ತಿಯಿದೆ ಈ ರಾಗಕ್ಕೆ. * * * ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶುದ್ಧಧನ್ಯಾಸಿ ರಾಗ ಎಂದೊಡನೆ ತತ್ಕ್ಷಣ ನೆನಪಾಗುವ ಅತ್ಯಂತ ಜನಪ್ರಿಯ ಕೃತಿಯೆಂದರೆ ಪುರಂದರದಾಸರ ರಚನೆ “ನಾರಾಯಣಾ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ..." ಇದು ಎಷ್ಟು ಜನಪ್ರಿಯವೆಂದರೆ ಕನ್ನಡೇತರ ಭಾಷೆಗಳ ಕಲಾವಿದರೂ, ಸಂಗೀತಗುರುಗಳೂ ಶುದ್ಧಧನ್ಯಾಸಿ ರಾಗವನ್ನು ಕಲಿಸುವಾಗ/ವಿವರಿಸುವಾಗ ಇದೇ ಕೀರ್ತನೆಯನ್ನು ಎತ್ತಿಕೊಳ್ಳುತ್ತಾರೆ. ಸಂಗೀತಕಚೇರಿಗಳಲ್ಲಿ ಈ ಕೀರ್ತನೆಯನ್ನು ಹಾಡಿ ನಾರಾಯಣ ನಾಮಾಮೃತದಿಂದ ಶ್ರೋತೃಗಳ ಮನತಣಿಸುತ್ತಾರೆ. ಅಂದಮೇಲೆ ಶುದ್ಧಧನ್ಯಾಸಿ ರಾಗರಸಾಯನ ಕಾರ್ಯಕ್ರಮದ ಶುಭಾರಂಭವನ್ನು ಈ ಕೀರ್ತನೆಯಿಂದಲೇ ಮಾಡುವುದು ಒಳ್ಳೆಯ ಕೆಲಸ. ಅದರಲ್ಲೂ ಸ್ವಲ್ಪ ವಿಶಿಷ್ಟತೆ ಇರಲಿ ಎನ್ನುವುದಕ್ಕೋಸ್ಕರ ಅಮೆರಿಕನ್ನಡಿಗ ಕಲಾವಿದೆಯರ ಪ್ರಸ್ತುತಿಯನ್ನು ಹುಡುಕಿತಂದಿದ್ದೇನೆ! ಶಿಕಾಗೊದಲ್ಲಿನ ವಿದ್ಯಾರಣ್ಯ ಕನ್ನಡ ಕೂಟದ ‘ದಾಸ ದಿನಾಚರಣೆ’ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶ್ರುತಿರಾಜ್ ಮತ್ತು ಶ್ರಿಯಾರಾಜ್ ಸಹೋದರಿಯರು ಹಾಡಿದ “ನಾರಾಯಣಾ ನಿನ್ನ ನಾಮದ ಸ್ಮರಣೆಯ..." ಪಕ್ಕವಾದ್ಯದಲ್ಲಿ ವಯಲಿನ್- ಮಂಜುಳಾ ರಾವ್; ಮೃದಂಗ- ಆತ್ರೇಯ ನಾಥನ್. [youtube=http://www.youtube.com/watch?v=jrrlKnYlen0] *** *** *** *** *** *** *** ಇದೇ “ನಾರಾಯಣಾ ನಿನ್ನ ನಾಮದ ಸ್ಮರಣೆಯ..." ಕೀರ್ತನೆಯನ್ನು ಈಗ ವೇಣುವಾದನದಲ್ಲಿ ಕೇಳೋಣ. ಕಲಾವಿದರು ಆರ್.ತ್ಯಾಗರಾಜನ್. ಇವರು ಪ್ರಖ್ಯಾತ ವೇಣುವಾದಕ ಎನ್.ರಮಣಿಯವರ ಮಗ. [youtube=http://www.youtube.com/watch?v=p_dCI9IHSMo] *** *** *** *** *** *** *** ಶುದ್ಧಧನ್ಯಾಸಿ ರಾಗದ ಜನಪ್ರಿಯ ಕೃತಿಗಳಲ್ಲಿ ಎರಡನೆಯ ಸ್ಥಾನ ಬಹುಶಃ “ಹಿಮಗಿರಿ ತನಯೇ ಹೇಮಲತೇ..." ಕೃತಿಗೇ ಸಲ್ಲುತ್ತದೆ. ಇದು ಹರಿಕೇಸನಲ್ಲೂರ್ ಮುತ್ತಯ್ಯ ಭಾಗವತರ್ ಅವರ ರಚನೆ. ಸಂಸ್ಕೃತ ಭಾಷೆಯಲ್ಲಿದೆ. ಮುತ್ತಯ್ಯ ಭಾಗವತರು ತೆಲುಗು ಮತ್ತು ಕನ್ನಡದಲ್ಲೂ ( ಭುವನೇಸ್ವರಿಯ ನೆನೆ ಮಾನಸವೇ...) ಸೇರಿದಂತೆ ಸುಮಾರು 400 ಕೃತಿಗಳನ್ನು ರಚಿಸಿದ ಮಹಾನ್ ಕಲಾವಿದ. ಮೋಹನಕಲ್ಯಾಣಿ ಸೇರಿದಂತೆ ಸುಮಾರು 20 ಹೊಸ ರಾಗಗಳನ್ನು ಕರ್ನಾಟಕ/ಹಿಂದುಸ್ಥಾನಿ ಶಾಸ್ತ್ರೀಯ ಪದ್ದತಿಗೆ ಪರಿಚಯಿಸಿಕೊಟ್ಟ ಖ್ಯಾತಿ ಅವರದು. ಪ್ರಸ್ತುತ "ಹಿಮಗಿರಿತನಯೇ ಹೇಮಲತೇ..." ಕೀರ್ತನೆ ನಾದಸ್ವರ ಮತ್ತು ಸ್ಯಾಕ್ಸೊಫೋನ್ ಕಲಾವಿದರ ಅಚ್ಚುಮೆಚ್ಚಿನದು. ಆದ್ದರಿಂದ ಸ್ಯಾಕ್ಸೊಫೋನ್ ವಾದನದಲ್ಲೇ ಇದನ್ನು ಮೊದಲಿಗೆ ಆನಂದಿಸೋಣ. ಕಲಾವಿದರು ಶ್ರೀಧರ ಸಾಗರ್. ಇವರು ಪ್ರಖ್ಯಾತ ಸ್ಯಾಕ್ಸೊಫೋನ್ ಕಲಾವಿದ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥರ ಶಿಷ್ಯ. [youtube=http://www.youtube.com/watch?v=Pen1BHNYFi8] *** *** *** *** *** *** *** ಈಗ, ಎಸ್.ಸೌಮ್ಯಾ ಅವರ ಗಾಯನದಲ್ಲಿ “ಹಿಮಗಿರಿ ತನಯೇ ಹೇಮಲತೇ..." [youtube=http://www.youtube.com/watch?v=KZGLGqd-NLI] *** *** *** *** *** *** *** ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜನಪ್ರಿಯ ಕೃತಿಗಳಲ್ಲೊಂದಾದ “ಎಂತ ನೇರ್ಚಿನಾ ಎಂತ ಚೂಚಿನಾ..." ತ್ಯಾಗರಾಜರ ರಚನೆಯನ್ನೂ ಇಲ್ಲಿ ನೆನೆಸಿಕೊಳ್ಳಬೇಕು. ಕಟ್ಟಾ ಸಂಪ್ರದಾಯವಾದಿ ಸಂಗೀತವಿದ್ವಾಂಸರು “ಇದು ಶುದ್ಧಧನ್ಯಾಸಿ ರಾಗದಲ್ಲಿಲ್ಲ, ಉದಯರವಿಚಂದ್ರಿಕಾ ರಾಗದಲ್ಲಿರುವ ಕೃತಿ" ಎಂದು ವಾದಿಸಬಹುದು. ಆದರೆ ನಮ್ಮಂಥ ಪಾಮರರಿಗೆ ಅವೆರಡೂ ಒಂದೇ ರಾಗದ ಬೇರೆಬೇರೆ ಹೆಸರುಗಳು. ಶುದ್ಧಧನ್ಯಾಸಿ ಮತ್ತು ಉದಯರವಿಚಂದ್ರಿಕಾ ಎರಡರಲ್ಲೂ ಅವೇ ಐದು ಸ್ವರಗಳು. ಅದೇರೀತಿಯ ಆರೋಹಣ ಅವರೋಹಣ. ಚೂರೇಚೂರು ವ್ಯತ್ಯಾಸವೆಂದರೆ ಶುದ್ಧಧನ್ಯಾಸಿಯಲ್ಲಿ ಗಮಕ ಹೆಚ್ಚು (analog wave ಇದ್ದಂತೆ), ಉದಯರವಿಚಂದ್ರಿಕಾದಲ್ಲಿ ಸ್ವರಗಳ ಮಧ್ಯೆ ಗಮಕ ಅಷ್ಟೇನೂ ಇರುವುದಿಲ್ಲ (ಹಾಗಾಗಿ digital waveನಂತೆ ಅಂದುಕೊಳ್ಳೋಣ) ಎನ್ನುತ್ತಾರೆ ಸಂಗೀತಜ್ಞಾನವಿರುವ ನನ್ನ ಒಬ್ಬ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಮಿತ್ರರು. ಈಗ ಆನಂದಿಸೋಣ, ಉದಯರವಿಚಂದ್ರಿಕಾ (ಅಂದರೆ ಗಮಕಗಳಿಲ್ಲದ ಶುದ್ಧಧನ್ಯಾಸಿ) ರಾಗದಲ್ಲಿ ಪ್ರಿಯಾ ಸಹೋದರಿಯರು ಹಾಡಿರುವ “ಎಂತ ನೇರ್ಚಿನಾ ಎಂತ ಚೂಚಿನಾ..." [youtube=http://www.youtube.com/watch?v=z39otOiAbsw] *** *** *** *** *** *** *** ಅದೇ “ಎಂತ ನೇರ್ಚಿನ ಎಂತ ಚೂಚಿನ..." ಕೃತಿ ನಾದಸ್ವರ ವಾದನದಲ್ಲಿ. ಕಲಾವಿದರು ಟಿ.ಎನ್.ಪಳನಿಸ್ವಾಮಿ. [youtube=http://www.youtube.com/watch?v=sbeEEWDSsh4] *** *** *** *** *** *** *** ಮುಂದಿನ ಕೃತಿ, ಅನ್ನಮಾಚಾರ್ಯರ ರಚನೆ "ಭಾವಮುಲೋನ ಬಾಹ್ಯಮುಲಂದುನು". ಅಂತರ್ಜಾಲದಲ್ಲಿ ಹುಡುಕಿದಾಗ ಈ ಕೃತಿಯನ್ನು ಬೇರೆಬೇರೆ ಕಲಾವಿದರು ಬಹಳ ಮಧುರವಾಗಿಯೇ ಹಾಡಿರುವಂಥ ವಿಡಿಯೋಗಳು ಸಿಕ್ಕಿದವು, ಆದರೆ ರಾಗರಸಾಯನದ ರುಚಿ ಹೆಚ್ಚುವುದು ಎಂ.ಎಸ್.ಸುಬ್ಬಲಕ್ಷ್ಮಿಯವರ ಗಾಯನವಿದ್ದರೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾದ್ದರಿಂದ ಎಂ.ಎಸ್.ಸುಬ್ಬಲಕ್ಷ್ಮಿಯವರು ಹಾಡಿರುವ ಆವೃತ್ತಿಯೇ ನನ್ನ ಆಯ್ಕೆ. ಬಹುಶಃ ಈ ಕೃತಿಯನ್ನು ಕೇಳಿದರೆ ಅದು ಒಳ್ಳೆಯದೇ ಆಯ್ಕೆ ಎಂದು ನಿಮಗೂ ಅನಿಸುತ್ತದೆ. [youtube=http://www.youtube.com/watch?v=m4tKfvd7Ajs] *** *** *** *** *** *** *** ಈಗ ಕುನ್ನಕ್ಕುಡಿ ವೈದ್ಯನಾಥನ್ ಅವರ ವಯಲಿನ್ ವಾದನದಲ್ಲಿ "ಭಾವಮುಲೋನ ಬಾಹ್ಯಮುಲಂದುನು" ಕೇಳಿ ಆನಂದಿಸೋಣ. ದೇವರ ಪಾಲಕಿ ಉತ್ಸವದ ದೃಶ್ಯವೈಭವಕ್ಕೆ ಇದನ್ನು ಹಿನ್ನೆಲೆಸಂಗೀತವಾಗಿ ಅಳವಡಿಸಿಕೊಂಡಿರುವ ಈ ವಿಡಿಯೋ ಸಹ ನೋಡಲು ಚೆನ್ನಾಗಿದೆ! [youtube=http://www.youtube.com/watch?v=zX8FIw6ppX0] *** *** *** *** *** *** *** ಮೈಸೂರು ವಾಸುದೇವಾಚಾರ್ಯರ ರಚನೆ “ಶ್ರೀ ಹರಿ ವಲ್ಲಭೇ..." ಕೂಡ ಶುದ್ಧಧನ್ಯಾಸಿ ರಾಗದ ಪ್ರಸಿದ್ಧ ಕೃತಿಗಳಲ್ಲೊಂದು. ಇಲ್ಲಿ ಈ ವಿಡಿಯೋದಲ್ಲಿ ಕೆನಡಾ ದೇಶದ ಹಿಂದೂದೇವಸ್ಥಾನವೊಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಓರ್ವ ಕಲಾವಿದೆ ಬಹಳ ಚೆನ್ನಾಗಿ ಆ ಕೃತಿಯನ್ನು ಹಾಡಿದ್ದಾರೆ. ಕಲಾವಿದೆಯ ಮತ್ತು ಪಕ್ಕವಾದ್ಯದವರ ಹೆಸರು-ವಿವರಗಳು ವಿಡಿಯೋದಲ್ಲಿಲ್ಲವಾದ್ದರಿಂದ ಇಲ್ಲಿ ನಮೂದಿಸುತ್ತಿಲ್ಲ. [youtube=http://www.youtube.com/watch?v=iov0m0-aWIc] *** *** *** *** *** *** *** ಶಾಸ್ತ್ರೀಯ ಸಂಗೀತದ ಅದಷ್ಟು ಪ್ರಸ್ತುತಿಗಳ ನಂತರ ಈಗ ಲಘು ಶಾಸ್ತ್ರೀಯ/ಜನಪದ/ಚಲನಚಿತ್ರ ಸಂಗೀತದತ್ತ ಹೊರಳೋಣ. ಶುದ್ಧ ಧನ್ಯಾಸಿ ರಾಗ ಆಧರಿಸಿದ ಒಂದು ಪ್ರಸಿದ್ಧ ಜನಪದಗೀತೆಯನ್ನು ಸವಿಯೋಣ. “ಎಲ್ಲೋ ಜೋಗಪ್ಪ ನಿನ್ನರಮನೆ..." - ಇದು ಬಿ.ಆರ್.ಛಾಯಾ ಮತ್ತು ಸಂಗಡಿಗರು ಹಾಡಿರುವ ಆವೃತ್ತಿ. (ಇದು ಶುದ್ಧಧನ್ಯಾಸಿ ರಾಗದಲ್ಲಿದೆ ಎಂದಮಾತ್ರಕ್ಕೇ ‘ಜೋಗಿ’ ಚಿತ್ರದಲ್ಲಿ ಈ ಹಾಡನ್ನು ಅಳವಡಿಸಿಕೊಂಡು ಬೇರೆರೀತಿಯಲ್ಲಿ ಹಾಡಿರುವುದನ್ನೂ ಶುದ್ಧಧನ್ಯಾಸಿ ರಾಗದ್ದು ಎಂದು ಹೇಳಲಾಗದು!) [youtube=http://www.youtube.com/watch?v=wBxV3kR2QoY] *** *** *** *** *** *** *** ಚಿತ್ರಗೀತೆಗಳಲ್ಲೂ ಸಾಕಷ್ಟು ಬಳಕೆಯಾಗುವ ರಾಗ ಶುದ್ಧಧನ್ಯಾಸಿ. ಆದರೆ ಚಿತ್ರಗೀತೆಗಳ ವಿಚಾರದಲ್ಲಿ ಏನಾಗುತ್ತದೆಂದರೆ ಇಡೀ ಹಾಡು ಒಂದೇ ರಾಗದಲ್ಲಿ ಇರುವುದಿಲ್ಲ. ಪಲ್ಲವಿ ಒಂದು ರಾಗದಲ್ಲಿದ್ದರೆ ಚರಣ ಬೇರೆಯೇ ರಾಗದಲ್ಲಿರುವುದೂ ಇದೆ. ಅಥವಾ ಅಲ್ಲಿಇಲ್ಲಿ ಸ್ವರವ್ಯತ್ಯಾಸ ಆಗಿ ಇಂಥದೇ ರಾಗ ಎಂದು ಹೇಳಲಾಗದ ಸ್ಥಿತಿ ಆಗುವುದೂ ಇದೆ. ಅಷ್ಟರಮಟ್ಟಿಗೆ ಔದಾರ್ಯ ತೋರಿಸಿದರೆ ಈ ಕೆಳಗಿನ ಚಿತ್ರಗೀತೆಗಳು ಶುದ್ಧಧನ್ಯಾಸಿ ರಾಗದವು ಎಂದೇ ಹೇಳಬಹುದು: ‘ನನ್ನ ತಮ್ಮ’ ಚಿತ್ರದ ಡಾ.ರಾಜಕುಮಾರ್ ಅಭಿನಯಕ್ಕಾಗಿ ಡಾ. ಪಿ.ಬಿ.ಶ್ರೀನಿವಾಸ್ ಹಾಡಿರುವ "ಇದೇ ಹೊಸ ಹಾಡು ಹೃದಯಸಾಕ್ಷಿ ಹಾಡು..." ಸಾಹಿತ್ಯ: ಕಣಗಾಲ್ ಪ್ರಭಾಕರ್ ಶಾಸ್ತ್ರಿ; ಸಂಗೀತ: ಘಂಟಸಾಲ. ಹಾಡಿನ ಪ್ರತಿಯೊಂದು ಸಾಲಿನ ಕೊನೆಯಲ್ಲಿ ‘ಹಾಡು’ ಎನ್ನುವ ಪದ ಈ ಹಾಡಿಗೇ ವಿಶೇಷ ಅರ್ಥ ಕೊಟ್ಟಿದೆ. [youtube=http://www.youtube.com/watch?v=3GmMLKfS72U] *** *** *** *** *** *** *** ‘ಆಪ್ತಮಿತ್ರ’ ಚಿತ್ರದಲ್ಲಿ ನಾಗವಲ್ಲಿ ಭೂತ ಮೈಮೇಲೆ ಬರುವ ಸನ್ನಿವೇಶದ ಸೂಪರ್ಹಿಟ್ ಗೀತೆ “ರಾ ರಾ ಸರಸಕು ರಾರಾ..." ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ನಂದಿತಾ ಮತ್ತು ರಾಜೇಶ್ ಹಾಡಿರುವ ಗೋಟೂರಿ (ತೆಲುಗು) ಅವರ ರಚನೆ. ಈ ಹಾಡಿನಲ್ಲಿ ಶುದ್ಧಧನ್ಯಾಸಿ ರಾಗದ ಛಾಯೆ ಗಾಢವಾಗಿ ಇದೆ ಎಂದು ತಿಳಿಸಿದ ನನ್ನ ಸ್ನೇಹಿತ ಕ್ಯಾಲಿಫೋರ್ನಿಯಾನಿವಾಸಿ ‘ಹಂಸನಾದ’ ರಾಮಪ್ರಸಾದ್ಗೆ ನನ್ನ ಸ್ಪೆಷಲ್ ಥ್ಯಾಂಕ್ಸ್ ಸಲ್ಲುತ್ತವೆ. :-) [youtube=http://www.youtube.com/watch?v=rrEZlbXRdak] *** *** *** *** *** *** *** ‘ನಮ್ಮೂರ ಮಂದಾರ ಹೂವೆ’ ಚಿತ್ರಕ್ಕಾಗಿ ಕೆ.ಕಲ್ಯಾಣ್ ರಚನೆಯನ್ನು ಇಳಯರಾಜಾ ಸಂಗೀತನಿರ್ದೇಶನದಲ್ಲಿ ಕೆ.ಎಸ್.ಚಿತ್ರಾ ಹಾಡಿರುವ ‘ಹೇಳೇ ಕೋಗಿಲೆ ಇಂಪಾಗಲಾ...". [youtube=http://www.youtube.com/watch?v=Apl901jqomg] *** *** *** *** *** *** *** ಇನ್ನೂ ತುಂಬಾ ಇವೆ. ಕನ್ಯಾರತ್ನ ಚಿತ್ರದ “ಸುವ್ವಿ ಸುವ್ವಿ ಸುವ್ವಾಲೇ...", ವಾಲ್ಮೀಕಿ ಚಿತ್ರದ “ಜಲಲ ಜಲಲ ಜಲಧಾರೆ...", 'ಮಲ್ಲಿ ಮದುವೆ’ ಚಿತ್ರದ “ಆಡೋಣ ಬಾ ಬಾ ಗೋಪಾಲ...", ಭಕ್ತ ಕನಕದಾಸ ಚಿತ್ರದ “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ...", ಮರೆಯದ ಹಾಡು ಚಿತ್ರದ ‘ಸುಖದ ಸ್ವಪ್ನಗಾನ...’, ಒಲವುಗೆಲುವು ಚಿತ್ರದ ‘ನನ್ನೆದೆ ಕೋಗಿಲೆಯ...’ ಮುಂತಾದುವೆಲ್ಲ ಶುದ್ಧಧನ್ಯಾಸಿ ರಾಗದ ನೆರಳಿನಲ್ಲೇ ಇರುವಂಥವು. ಅಂದಹಾಗೆ ಸಂಗೀತಜ್ಞಾನವಿಲ್ಲದ ನಾನು ಈ ಮಾಹಿತಿಯನ್ನೆಲ್ಲ ಸಂಗೀತ ಬಲ್ಲ ಬೇರೆಯವರಿಂದ ಸಂಗ್ರಹಿಸಿ ಪರಾಮರ್ಶಿಸಿ ಇಲ್ಲಿ ಸಂಕಲನಮಾಡಿರುವುದು. ಆರೀತಿ ನನಗೆ ನೆರವಾಗುವ ಸಂಪನ್ಮೂಲ ವ್ಯಕ್ತಿಯೊಬ್ಬರು ನನ್ನ ಸೋದರಮಾವ ಚಿದಂಬರ ಕಾಕತ್ಕರ್. ಬಿಎಸ್ಸೆನ್ನೆಲ್ ಉದ್ಯೋಗಿಯಾಗಿದ್ದವರು ಈಗ ಮಂಗಳೂರಿನಲ್ಲಿ ನಿವೃತ್ತಜೀವನ ನಡೆಸುವವರು. ಅವರ ಅನೇಕ ಸೃಜನಾತ್ಮಕ ಹವ್ಯಾಸಗಳಲ್ಲಿ ಕೊಳಲುವಾದನವೂ ಒಂದು. ರಾಗರಸಾಯನ ಸರಣಿಯಲ್ಲಿ ವಿವಿಧ ರಾಗಗಳ ಹಾಡುಗಳನ್ನು ಪಟ್ಟಿಮಾಡುವಾಗ ಕೆಲವೊಮ್ಮೆ ಆಯಾಯ ಹಾಡನ್ನು ಕೊಳಲಿನಲ್ಲಿ ನುಡಿಸಿ ಅದು ಆ ರಾಗದಲ್ಲಿ ಇರುವುದು (ಅಥವಾ ಅಲ್ಪಸ್ವಲ್ಪವಾದರೂ ಆ ರಾಗವು ಆ ಹಾಡಿನಲ್ಲಿ ಕಾಣಿಸಿಕೊಂಡಿರುವುದು) ಹೌದೆಂದು ಕನ್ಫರ್ಮ್ ಮಾಡಿ ಅವರು ನನಗೆ ತಿಳಿಸುತ್ತಾರೆ! ಇದೊಂದು ಪ್ರಸ್ತುತಿ, ಚಿದಂಬರ ಕಾಕತ್ಕರ್ ಅವರದೇ ಕೊಳಲುವಾದನದಲ್ಲಿ "ಆಡೋಣ ಬಾ ಬಾ ಗೋಪಾಲ..." [youtube=http://www.youtube.com/watch?v=mjAcI00IipQ] [ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ರಚನೆಯನ್ನು ಜಿ.ಕೆ.ವೆಂಕಟೇಶ್ ಸಂಗೀತನಿರ್ದೇಶನದಲ್ಲಿ ಎಸ್.ಜಾನಕಿ ಹಾಡಿರುವ ಮೂಲ ಹಾಡಿನ ವಿಡಿಯೋ ಇಲ್ಲಿದೆ.] *** *** *** *** *** *** *** ತೆಲುಗಿನಲ್ಲಿ ಅತ್ಯಂತ ಜನಪ್ರಿಯವಾದ (ಆಮೇಲೆ ಕನ್ನಡದಲ್ಲೂ ಮರುನಿರ್ಮಾಣಗೊಂಡ) ಸ್ವಾತಿಮುತ್ಯಂ ಚಿತ್ರದ ಟೈಟಲ್ ಸಾಂಗ್ “ಮನಸು ಪಲಿಕೇ ಮೌನಗೀತಮ್ ಮಮತಲೊಲಿಕೇ ಸ್ವಾತಿಮುತ್ಯಂ..." ಶುದ್ಧ ಧನ್ಯಾಸಿ ರಾಗಾಧಾರಿತ ಚಿತ್ರಗೀತೆಗೆ ಒಳ್ಳೆಯ ಉದಾಹರಣೆ. ಸಿ.ನಾರಾಯಣ ರೆಡ್ಡಿ ರಚನೆ, ಇಳಯರಾಜ ಸಂಗೀತನಿರ್ದೇಶನ, ಎಸ್ಪಿಬಾಲು ಮತ್ತು ಎಸ್.ಜಾನಕಿ ಹಿನ್ನೆಲೆಗಾಯನ. [youtube=http://www.youtube.com/watch?v=jomEkMMJrm8] *** *** *** *** *** *** *** ತೆಲುಗಿನದೇ ಇನ್ನೊಂದು ಚಿತ್ರಗೀತೆ, ‘ಅನ್ನಮಯ್ಯ’ ಚಿತ್ರದ್ದು. ಅನ್ನಮಾಚಾರ್ಯರ ರಚನೆ “ವಿನರೋ ಭಾಗ್ಯಮು ವಿಷ್ಣುಕಥಾ..." ಎಸ್ಪಿಬಾಲು ಮತ್ತು ಸಂಗಡಿಗರ ಗಾಯನವನ್ನು ಸಂಗೀತಕ್ಕೆ ಅಳವಡಿಸಿದವರು ಎಂ.ಎಂ.ಕೀರವಾಣಿ. [youtube=http://www.youtube.com/watch?v=gInkCMzMUhk] *** *** *** *** *** *** *** ರಾಗರಸಾಯನದಲ್ಲಿ ಬೇರೆ ಯಾವ ಭಾಷೆಯ, ಯಾವ ಪ್ರಕಾರದ, ಹಾಡುಗಳನ್ನಾದರೂ ಬಿಟ್ಟುಬಿಟ್ಟೇನು, ಆದರೆ ಮಲಯಾಳಂನ ಮಧುರವಾದ ಹಾಡು ಒಂದಾದರೂ ಸೇರಿಕೊಳ್ಳದಿದ್ದರೆ ನನಗೆ ಸಮಾಧಾನವಿಲ್ಲ :-) ಮಲಯಾಳಂ ನನಗೆ ಅರ್ಥ ಆಗುವುದಿಲ್ಲ, ಆದರೆ ಆ ಭಾಷೆಯಲ್ಲಿನ ಚಿತ್ರಗೀತೆಗಳು, ಭಕ್ತಿಗೀತೆಗಳೆಲ್ಲ ಜೇನಿನಲ್ಲಿ ಅದ್ದಿ ತೆಗೆದಂತೆ. ಈ ಹಾಡೂ ಅಂತೆಯೇ. "ಮೆಲ್ಲೆ ಮೆಲ್ಲೆ ಮುಖಪಡಮ್..." - ಕೆ.ಜೆ.ಯೇಸುದಾಸ್ ಕಂಠಸಿರಿಯಲ್ಲಿ. ಚಿತ್ರದ ಹೆಸರು ‘ಒರು ಮಿನ್ನಮಿನುಂಗಿಂತೆ ನುರುಂಗುವೆಟ್ಟಮ್’ ’ (‘ಒಂದು ಮಿಂಚುಹುಳದ ಬೆಳಕು ಮೂಡಿದ ಕ್ಷಣ’ ಎಂದು ಅರ್ಥವಂತೆ) ಗೀತರಚನೆ ಒ.ಎನ್.ವಿ ಕುರುಪ್; ಸಂಗೀತನಿರ್ದೇಶನ ಜಾನ್ಸನ್. [youtube=http://www.youtube.com/watch?v=V3B2spNjzf8] *** *** *** *** *** *** *** ಮಲಯಾಳಂ ಗೀತೆಗಳು ಇಷ್ಟವಾದಷ್ಟು ತಮಿಳಿನವು ನನಗೆ ಇಷ್ಟವಾಗುವುದಿಲ್ಲ. ಆದರೂ ಪ್ರಾತಿನಿಧ್ಯ ಇರಲಿ ಎಂದು ತಮಿಳು ಚಿತ್ರಗೀತೆಗಳನ್ನೂ ಆಯ್ದುಕೊಳ್ಳುತ್ತೇನೆ. ಬಹುಶಃ ಎ.ಆರ್.ರೆಹಮಾನ್ ಸಂಗೀತದ ಪ್ರಭಾವವೂ ಇರಬಹುದು. ಆದರೆ ಇವತ್ತಿಲ್ಲಿ ಸೇರಿಸಿಕೊಂಡಿರುವುದು ಎ.ಆರ್.ರೆಹಮಾನ್ ಹಾಡನ್ನಲ್ಲ. ವಿದ್ಯಾಸಾಗರ್ ಸಂಗೀತ ನಿರ್ದೇಶನದಲ್ಲಿ ‘ಪಾರ್ತಿಬನ್ ಕನವು’ ಚಿತ್ರಕ್ಕಾಗಿ ಮಧು ಬಾಲಕೃಷ್ಣನ್ ಹಾಡಿರುವ ಯುಗಭಾರತಿ ರಚನೆ " ಕಣ್ಣಾ ಕಂಡೆನಡಿ..." ಈ ಹಾಡಿನ ಇಂಟರ್ಲ್ಯೂಡ್ನಲ್ಲಿ ಬರುವ ಸ್ಯಾಕ್ಸೊಫೋನ್ ವಾದನ (ಶುದ್ಧಧನ್ಯಾಸಿ ರಾಗದಲ್ಲಿ ಅಲ್ಲ, ಅದು ಅಭೇರಿ ರಾಗದಲ್ಲಿದೆ) ಬಹಳ ಚೆನ್ನಾಗಿದೆ! [youtube=http://www.youtube.com/watch?v=GqbECuQRXlc] *** *** *** *** *** *** *** ಶುದ್ಧಧನ್ಯಾಸಿಯ ಹಿಂದುಸ್ಥಾನಿ ರೂಪ ‘ಧಾನಿ’ ಎಂಬ ರಾಗ ಎಂದು ಪೀಠಿಕೆಯಲ್ಲೇ ವಿವರಿಸಿದ್ದೆನಷ್ಟೆ? ಈಗಿನ್ನು ‘ಧಾನಿ’ ರಾಗದ ಕೆಲವು ಪಲುಕುಗಳನ್ನು ನೋಡೋಣ. ಮೊದಲು ಒಂದೆರಡು ಹಿಂದೀ ಚಿತ್ರಗೀತೆಗಳು. ಚಿತ್ಚೋರ್ ಚಿತ್ರದ ಸಾರ್ವಕಾಲಿಕ ಸೂಪರ್ಹಿಟ್ ಹಾಡು "ಗೋರಿ ತೇರಾ ಗಾಂವ್ ಬಡಾ ಪ್ಯಾರಾ..." - ಕೆ.ಜೆ.ಯೇಸುದಾಸ್ ಹಾಡಿರುವ ಈ ಗೀತೆಯ ಸಾಹಿತ್ಯ ಮತ್ತು ಸಂಗೀತ: ರವೀಂದ್ರ ಜೈನ್. [youtube=http://www.youtube.com/watch?v=tA9ZgeE1fcA] *** *** *** *** *** *** *** ‘ಕ್ರಿಮಿನಲ್’ ಚಿತ್ರಕ್ಕಾಗಿ ಎಂ.ಎಂ.ಕೀರವಾಣಿ ಸಂಗೀತನಿರ್ದೇಶನದಲ್ಲಿ ಕುಮಾರ್ ಸಾನು ಮತ್ತು ಅಲ್ಕಾ ಯಾಜ್ಞಿಕ್ ಹಾಡಿರುವ “ತು ಮಿಲೇ ದಿಲ್ ಖಿಲೇ..." [youtube=http://www.youtube.com/watch?v=CdCj3wiDIjg] *** *** *** *** *** *** *** 'ಶರ್ಮಿಲೀ’ ಚಿತ್ರಕ್ಕಾಗಿ ಎಸ್.ಡಿ.ಬರ್ಮನ್ ಸಂಗೀತನಿರ್ದೇಶನದಲ್ಲಿ ಕಿಶೋರ್ ಕುಮಾರ್ ಹಾಡಿರುವ “ಖಿಲ್ತೆ ಹೇಂ ಗುಲ್ ಯಹಾಂ ..." [youtube=http://www.youtube.com/watch?v=HBgKPyi1aXA] *** *** *** *** *** *** *** ಚಿತ್ರಗೀತೆಗಳ ನಂತರ ಈಗ ಒಂದಿಷ್ಟು ಅಪ್ಪಟ ಶಾಸ್ತ್ರೀಯ ಸಂಗೀತ ಹಿಂದುಸ್ಥಾನಿ ಶೈಲಿಯದನ್ನು ‘ಧಾನಿ’ರಾಗದ ದೃಷ್ಟಿಯಿಂದ ಅವಲೋಕಿಸೋಣ. ಮೊದಲಿಗೆ, ಕರ್ನಾಟಕದವರೇ ಆದ ಪಂಡಿತ್ ವೆಂಕಟೇಶ ಕುಮಾರ್ ಅವರ ಗಾಯನದಲ್ಲಿ ಒಂದು ಬಂದಿಶ್. [‘ಬಂದಿಶ್’ ಎಂದರೆ ಸಂಪ್ರದಾಯಗೀತೆ/ಜನಪದಗೀತೆ ಇದ್ದಂತೆ. ರಚನೆಕಾರ ಯಾರೆಂದು ಗೊತ್ತಿಲ್ಲದೆ ತಲೆತಲಾಂತರಗಳಿಂದ ಪ್ರಸಿದ್ಧಿಯಲ್ಲಿರುವ ಹಾಡು.] [youtube=http://www.youtube.com/watch?v=0Pf194WjSGA] *** *** *** *** *** *** *** ಶಾಹಿದ್ ಪರ್ವೇಜ್ ಅವರ ಸಿತಾರ್ ವಾದನದಲ್ಲಿ ‘ಧಾನಿ’ ರಾಗದ ಒಂದು ಪ್ರಸ್ತುತಿ- [youtube=http://www.youtube.com/watch?v=dGKL6vmJaXc] *** *** *** *** *** *** *** ಸಿತಾರ್ನ ನಂತರ ಸಂತೂರ್. ಕೆನಡಾ ದೇಶದ ಮಾಂಟ್ರಿಯಲ್ನಲ್ಲಿ ನಡೆದ ಸಂಗೀತಕಚೇರಿಯೊಂದರಿಂದ ಆಯ್ದ ತುಣುಕು. ಈ ವಿಡಿಯೋದಲ್ಲಿ ಸಂಗೀತವನ್ನು ಆಲಿಸುತ್ತಲೇ ನೀವು ಗಮನಿಸಬೇಕಾದ ವಿಶೇಷ ಅಂಶವೆಂದರೆ ಸಂತೂರ್ ವಾದಕ ಜೊನಾದನ್ ವೊಯರ್ ಮತ್ತು ತಬಲಾ ವಾದಕ ಶಾನ್ ಮಟಿವೆಟ್ಸ್ಕಿ - ಇವರಿಬ್ಬರೂ ಭಾರತೀಯರಲ್ಲ, ಕೆನಡಾ ದೇಶದ ಪ್ರಜೆಗಳು! ಆದರೆ ಪಕ್ಕಾ ಭಾರತೀಯ ಉಡುಪು ಧರಿಸಿ, ಭಾರತೀಯರನ್ನೇ ನಾಚಿಸುವಷ್ಟು ಶ್ರದ್ಧೆಯಿಂದ ಸಂಗೀತ ಪ್ರಸ್ತುತಪಡಿಸಿದ್ದಾರೆ. ಸಂಗೀತಕ್ಕೆ ಸೀಮೆಗಳಿಲ್ಲ ಎನ್ನುವುದು ಇದಕ್ಕೇ ಇರಬೇಕು. [youtube=http://www.youtube.com/watch?v=maVvh7yVYI8] *** *** *** *** *** *** *** ಗ್ವಾಲಿಯರ್ ಘರಾಣಾಕ್ಕೆ ಸೇರಿದ ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ಮಾಲಿನಿ ರಾಜುರ್ಕರ್ ಅವರ ಗಾಯನದಲ್ಲಿ ‘ಧಾನಿ’ ರಾಗದ ಒಂದು ಬಂದಿಶ್. [youtube=http://www.youtube.com/watch?v=gNwFUWny7S0] ಇದರ ಎರಡನೇ ಭಾಗವನ್ನೂ ಕೇಳುವ ಆಸಕ್ತಿಯಿದ್ದವರಿಗೆ ಅದು ಇಲ್ಲಿದೆ. *** *** *** *** *** *** *** ತಬಲಾ ಮಾಂತ್ರಿಕ ಅಪ್ಪ-ಮಗ ಜೋಡಿ ಗೊತ್ತಲ್ಲ ನಿಮಗೆ? ಅವರೇ, ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್. ಈ ವಿಡಿಯೋದಲ್ಲಿ ಅಪ್ಪ-ಮಗ ಜೋಡಿಯ ತಬಲಾ ಸಾಥಿ ಸಿಕ್ಕಿರುವುದು ಫಜಲ್ ಖಾನ್ ಅವರ ಸಾರಂಗಿ ವಾದನಕ್ಕೆ. ರಾಗ ‘ಧಾನಿ’- [youtube=http://www.youtube.com/watch?v=v7_NnpSxDl4] *** *** *** *** *** *** *** ಕೊನೆಯಲ್ಲೊಂದು “ಧಾನಿ ರಿಪ್ಲೆಕ್ಷನ್"... ಸತೀಶ್ ರಾಹಿ ಎಂಬ ಸಂಗೀತಾಭ್ಯಾಸಿ ತರುಣನ ಕ್ರಿಯೇಟಿವ್ ರಚನೆ- [youtube=http://www.youtube.com/watch?v=a-1yOwlvVug] *** *** *** *** *** *** *** ಹೇಗನಿಸಿತು ‘ಶುದ್ಧ ಧನ್ಯಾಸಿ’/’‘ಧಾನಿ’ ರಾಗರಸಾಯನ? ನಿಮಗೆ ಇಷ್ಟವಾದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆ ಸೂಚನೆ ತಿದ್ದುಪಡಿ ಇತ್ಯಾದಿ ಇದ್ದರೆ ಖಂಡಿತ ತಿಳಿಸುವಿರಲ್ಲ? * * * *Thursday Oct 11, 2012
Hindola Highlights
Thursday Oct 11, 2012
Thursday Oct 11, 2012
ದಿನಾಂಕ 12 ಅಕ್ಟೋಬರ್ 2012
‘ಹಿಂದೋಳ’ ಕಲ್ಪ- ಇದು ಹಂಸತೂಲಿಕಾತಲ್ಪ!
* ಶ್ರೀವತ್ಸ ಜೋಶಿ
ಸಂಗೀತವನ್ನು ಕೇಳುತ್ತ ಕೇಳುತ್ತ ಅದರಲ್ಲಿನ ರಾಗವನ್ನು ಗುರುತಿಸುವುದು, ಅದರ ಮೂಲಕ ಕಲಿಕೆಯನ್ನು ಸುಲಭವಾಗಿಸುವುದು ಈ ರಾಗರಸಾಯನ ಮಾಲಿಕೆಯ ಉದ್ದೇಶ. ರಾಗವನ್ನು ಗುರುತಿಸುವುದು ಎಂದರೆ ರಾಗವನ್ನು ಕಣ್ಮುಂದೆ ತಂದುಕೊಳ್ಳಲಿಕ್ಕಾಗುತ್ತದೆಯೇ? ಅದಕ್ಕೆ ಅಂದದ ಹುಡುಗಿಯ ರೂಪವೋ, ಹಸನ್ಮುಖಿ ಪುರುಷನ ಆಕರ್ಷಕ ಮೈಕಟ್ಟೋ ಇರುತ್ತದೆಯೇ? ಬಹುಶಃ ಯಾವುದೇ ಒಂದು ರಾಗದ ಜಾಡನ್ನೇ ಹಿಡಿದು ಅದರದೇ ಧ್ಯಾನದಲ್ಲಿದ್ದರೆ ಒಂದೊಮ್ಮೆ ಆ ರಾಗ‘ಪುರುಷ’ (ಅಥವಾ ರಾಗ‘ಕನ್ಯೆ’) ರೂಪ ನಮ್ಮ ಮನಸ್ಸಿನಲ್ಲಿ ಮೂಡಲೂಬಹುದು. ನಮ್ಮಂಥ ಸಾಮಾನ್ಯರಿಗಲ್ಲದಿದ್ದರೂ ಸಂಗೀತದಲ್ಲಿ ಸಾಧನೆಗೈದ ಕಲಾವಿದರಿಗಂತೂ ಇಂತಹ ಸಾಕ್ಷಾತ್ಕಾರ ಖಂಡಿತ ಆಗಬಹುದು. ಇವತ್ತು ರಾಗರಸಾಯನ ಮಾಲಿಕೆಯಲ್ಲಿ ‘ಹಿಂದೋಳ’ರಾಗವನ್ನು ಎತ್ತಿಕೊಂಡಾಗ ಹೀಗೊಂದು ಯೋಚನೆ ಬಂತು. ಹಿಂದೋಳ ರಾಗಕ್ಕೆ ಯಾವ ರೂಪವಿರಬಹುದು? ಇಷ್ಟು ಮಧುರವಾದ, ಕೇಳಿದಷ್ಟೂ ಮತ್ತಷ್ಟು ಕೇಳಬೇಕೆನಿಸುವ ರಾಗ ನಮ್ಮ ಮೇಲೆ ಇಷ್ಟೊಂದು ಮೋಡಿ ಮಾಡಬೇಕಿದ್ದರೆ ಅದೆಷ್ಟು ಸ್ಫುರದ್ರೂಪಿಯಿರಬಹುದು? ಇರಲಿ, ‘ಹಿಂದೋಳ’ದ ಕಿರುಪರಿಚಯ ಮಾಡಿಕೊಳ್ಳುವುದಾದರೆ, ಇದು ಪಂಚಸ್ವರಗಳ ರಾಗ. ಇದರಲ್ಲಿರುವ ಸ್ವರಗಳು: ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ, ಕೈಷಿಕಿ ನಿಷಾಧ. ಇದರಲ್ಲಿ ಮಧ್ಯಮವು ಈ ರಾಗಕ್ಕೆ ಸೊಬಗನ್ನು ನೀಡುವ ಸ್ವರವಾದರೆ ಧೈವತ ಮತ್ತು ನಿಷಾಧಗಳು ಈ ರಾಗದ ‘ಜೀವಸ್ವರ’ಗಳಂತೆ. “ಗೌರೀ ಹಿಂದೋಳ ದ್ಯುತಿ ಹೀರ ಮಣಿಮಯ ಆಭರಣೇ..." ಎಂದಿದ್ದಾರೆ ದೀಕ್ಷಿತರು ‘ನೀರಜಾಕ್ಷಿ ಕಾಮಾಕ್ಷಿ...’ ಎಂಬ ಕೃತಿಯಲ್ಲಿ. ಹಿಂದೋಳ ರಾಗವನ್ನು ಆಲಿಸುತ್ತಿದ್ದರೆ ಉಯ್ಯಾಲೆಯಲ್ಲಿ ತೂಗಿದಂಥ ಅನುಭವವಾಗುತ್ತದಂತೆ ರಸಹೃದಯದ ಶ್ರೋತೃಗಳಿಗೆ. ಅದರಿಂದಾಗಿಯೇ (ಹಿಂದೋಳ ಪದಮೂಲ- ‘ಡೋಲ’ ಧಾತು - ತೂಗು ಎಂಬ ಅರ್ಥ) ರಾಗಕ್ಕೆ ಆ ಹೆಸರು ಬಂದಿರುವುದು ಎನ್ನುತ್ತಾರೆ ಸಂಗೀತವಿದ್ವಾಂಸರು. ತೊಟ್ಟಿಲಲ್ಲಿ ತೂಗಿದಾಗ ನಿದ್ದೆ ಬರುವಂತೆ ಈ ರಾಗ ಕೇಳಿದರೆ ನಿದ್ದೆ ಬರುತ್ತದೆಂದು ಅರ್ಥವಲ್ಲ. ಉಯ್ಯಾಲೆಯಲ್ಲಿ ಜೀಕಿದಂತೆ ರಾಗದ ಸ್ವರಸಂಚಾರ. ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಹಿಂದೋಳ ರಾಗಕ್ಕೆ ಸಮಾನವಾದದ್ದು ‘ಮಾಲಕೌಂಸ್’ ರಾಗ (ಹಿಂದುಸ್ಥಾನಿಯಲ್ಲಿ ‘ಹಿಂದೋಳ್’ ಎಂಬ ಹೆಸರಿನದೇ ಬೇರೆಯೇ ಒಂದು ರಾಗ ಇದೆಯಾದರೂ ಅದಕ್ಕೂ ಮಾಲಕೌಂಸ್/ಹಿಂದೋಳ ರಾಗಗಳಿಗೂ ಯಾವ ಸಂಬಂಧವೂ ಇಲ್ಲ). ಹಿಂದೋಳ/ಮಾಲಕೌಂಸ್ಗಳ ಆರೋಹಣ ಮತ್ತು ಅವರೋಹಣ ಸಮಮಿತಿ(symmetrical) ಆಗಿರುವುದರಿಂದ ರಾಗಕ್ಕೆ ಮತ್ತಷ್ಟು ಸೌಂದರ್ಯ. ಪಂಚಸ್ವರಗಳ (pentatonic) ಇನ್ನೊಂದು ಪ್ರಖ್ಯಾತ ರಾಗ ‘ಮೋಹನ’ವು ಚೈನೀಸ್ ಮತ್ತಿತರ ಪೌರ್ವಾತ್ಯ ದೇಶಗಳ ಸಂಗೀತದಲ್ಲಿ ಕೇಳಿಸಿಬರುವಂತೆಯೇ, ಹಿಂದೋಳದ ಛಾಯೆಯೂ ಆ ದೇಶಗಳ ಸಂಗೀತದಲ್ಲಿ ಗೋಚರಿಸುವುದಿದೆ. ಧ್ಯಾನಕ್ಕೆ, ಭಕ್ತಿಗೆ ಹೇಳಿಮಾಡಿಸಿದಂಥದ್ದು ಹಿಂದೋಳ ರಾಗ. ಆದ್ದರಿಂದಲೇ ಭಕ್ತಿಪ್ರಧಾನ ಹಾಡುಗಳು ಹೆಚ್ಚಾಗಿ ಹಿಂದೋಳ ರಾಗದಲ್ಲಿರುತ್ತವೆ. ಭಜನೆ ಮತ್ತು ಸ್ತೋತ್ರಗಳನ್ನು ರಾಗಬದ್ಧವಾಗಿ ಹಾಡುವವರು ಹಿಂದೋಳವನ್ನೇ ಆಯ್ದುಕೊಳ್ಳುತ್ತಾರೆ. ಪ್ರಳಯಾಂತಕ ತಾಂಡವನೃತ್ಯದ ನಂತರ ಪರಮೇಶ್ವರನನ್ನು ಶಾಂತಗೊಳಿಸಲು ಪಾರ್ವತಿಯು ಹಾಡಿದ್ದು ಹಿಂದೋಳ ರಾಗವಂತೆ! ಇದಿಷ್ಟು ಪೀಠಿಕೆಯ ನಂತರ ಈಗ ಹಿಂದೋಳದ ಹಂಸತೂಲಿಕಾತಲ್ಪದಲ್ಲಿ ಕುಳಿತು ಝೇಂಕಾರದ ಜೀಕು! * * * ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೊಫೋನ್ ವಾದನದಿಂದ ಈ ಕಾರ್ಯಕ್ರಮದ ಶುಭಾರಂಭ. ಹಿಂದೋಳ ರಾಗದಲ್ಲಿ "ಮಾಮವತು ಶ್ರೀ ಸರಸ್ವತೀ..." ಎಂಬ ಕೃತಿ. ಮೈಸೂರು ವಾಸುದೇವಾಚಾರ್ಯರ ರಚನೆ. [youtube=http://www.youtube.com/watch?v=-SkQm77GXtk] [ಇದೇ ಕೃತಿಯನ್ನು ನಿತ್ಯಶ್ರೀ ಮಹಾದೇವನ್ ಅವರ ಹಾಡುಗಾರಿಕೆಯಲ್ಲಿ ಕೇಳಲು ಇಲ್ಲಿ ಕ್ಲಿಕ್ಕಿಸಬಹುದು. ಪಾಶ್ಚಾತ್ಯ ವಾದ್ಯಗಳನ್ನೂ ಸೇರಿಸಿದ ಆರ್ಕೆಸ್ಟ್ರಾ ನಿಮಗೆ ಇಷ್ಟವಾಗುತ್ತದಾದರೆ ಇ.ಗಾಯತ್ರಿ ಅವರ ವೀಣಾವಾದನದಲ್ಲಿ ಈ ಕೃತಿಯ ವಿಡಿಯೋ ಇಲ್ಲಿದೆ.] *** *** *** *** *** *** *** ಇಲ್ಲಿಂದ ಮುಂದೆ, ಈ ರಾಗರಸಾಯನವನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ನಿಮ್ಮ ಆಸಕ್ತಿ-ಅಭಿರುಚಿಗಳನ್ನು ಅವಲಂಬಿಸಿ ನೇರವಾಗಿ ಆಯಾಯ ವಿಭಾಗಕ್ಕೆ ಹೋಗಬಹುದು ಅಥವಾ ಎಲ್ಲ ವಿಭಾಗಗಳನ್ನೂ ಒಂದಾದ ನಂತರ ಒಂದರಂತೆ ಆರಾಮದಿಂದ ಸವಿಯಬಹುದು ಭಾಗ-1 : ಭಜನಾವಳಿ ಭಾಗ-2: ಕನ್ನಡ ಚಿತ್ರಗೀತೆಗಳು ಭಾಗ-3 : ಇತರ ಭಾಷೆಗಳ ಚಿತ್ರಗೀತೆಗಳು ಭಾಗ-4 : ಸಾಮಜವರಗಮನ ಸ್ಪೆಷಲ್ ಭಾಗ-5 : ಹಿಂದೋಳ/ಮಾಲಕೌಂಸ್ heights & highlights ಹೀಗೆ ವಿಭಾಗಗಳನ್ನಾಗಿಸಿರುವುದರ ಕಾರಣ- ಬಾಳೆ ಎಲೆಯಲ್ಲಿ ಊಟ ಮಾಡುವುದು ಚೆನ್ನಾಗಿರುತ್ತದಾದರೂ ಪಾಯಸ ಹರಿದು ಪಲ್ಯವನ್ನು ಸೇರಿಕೊಳ್ಳುವುದು, ಜಿಲೇಬಿಗೆ ಚಿತ್ರಾನ್ನದ ಅಗಳುಗಳು ಅಂಟಿಕೊಳ್ಳುವುದು, ಉಪ್ಪು ಬಡಿಸುವವರು ಕೋಸಂಬರಿಯ ಮೇಲೆಯೇ ಉದುರಿಸುವುದು ಮುಂತಾದ ಅನನುಕೂಲಗಳು ಅಧ್ವಾನಗಳೂ ಆಗುವುದಿದೆ. compartmentಗಳಿರುವ ತಟ್ಟೆಯಲ್ಲಿ ಪ್ರತ್ಯೇಕವಾಗಿ ಪದಾರ್ಥಗಳನ್ನು ಬಡಿಸಿದರೆ ಒಂದರೊಡನೊಂದು ಮಿಕ್ಸ್ ಆಗುವ ಅಪಾಯ ತಪ್ಪುತ್ತದೆ. ಅಲ್ಲವೇ? ಅದೇ ಲಾಜಿಕ್ ಇಲ್ಲಿಯೂ ಅಳವಡಿಸಿಕೊಂಡದ್ದು :-) ಇನ್ನೂ ಒಂದು ಕಾರಣವೆಂದರೆ, ಈ ರಾಗರಸಾಯನದಲ್ಲಿ ಯಾವ ವಿಭಾಗ ನಿಮಗೆ ಇಷ್ಟವಾಯಿತು (ಅಥವಾ ಅಷ್ಟೊಂದು ಹಿಡಿಸಲಿಲ್ಲ) ಎಂದು ಪ್ರತಿಕ್ರಿಯೆಯಲ್ಲಿ ತಿಳಿಸುವುದು ಸುಲಭವಾಗುತ್ತದೆ. ಏನೇ ಆಗಲಿ ಇಷ್ಟು ಸ್ಪೂನ್ಫೀಡಿಂಗ್ ಬೇಡ ಮಾರಾಯ್ರೇ ಎಂದು ನೀವು ಅಂದುಕೊಳ್ಳದಿದ್ದರೆ ಸಾಕು :-) * * *ಭಾಗ-1 : ಭಜನಾವಳಿ
ಪುರಂದರ ದಾಸರ ಒಂದು ಜನಪ್ರಿಯ ಕೀರ್ತನೆ "ಯಾರೇ ರಂಗನ ಯಾರೇ ಕೃಷ್ಣನ ಕರೆಯಬಂದವರು..." ಶ್ರೀಮತಿ ಸುಂದರವಲ್ಲಿ ಅವರ ಧ್ವನಿಯಲ್ಲಿ. ಇದು ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮದಿಂದ ಆಯ್ದುಕೊಂಡಿರುವ ಭಾಗ. [youtube=http://www.youtube.com/watch?v=1cL3sG8ap6o] *** *** *** *** *** *** *** ಬೆಳ್ಳೂರು ಸಹೋದರಿಯರು ಹಾಡಿರುವ ಭಕ್ತಿಗೀತೆ, “ಹರಿ ಸರ್ವೋತ್ತಮ ವಾಯು ಜೀವೋತ್ತಮ..." ರಾಜ ಎಸ್ ಗುರುರಾಜಾಚಾರ್ಯ ಅವರ ರಚನೆಯನ್ನು ಸಂಗೀತಕ್ಕೆ ಅಳವಡಿಸಿದವರು ಎಂ.ರಂಗರಾವ್ [youtube=http://www.youtube.com/watch?v=UubhZaJ_Ty4] *** *** *** *** *** *** *** ಮುಂದಿನ ಭಕ್ತಿಗೀತೆ ವಿದ್ಯಾಭೂಷಣ ಅವರ ಅತ್ಯಂತ ಜನಪ್ರಿಯ ಧ್ವನಿಸುರುಳಿಯಿಂದ ಆಯ್ದುಕೊಂಡಿರುವ "ಮಧುಕರ ವೃತ್ತಿ ಎನ್ನದು ಬಲು ಚೆನ್ನದು..." ಪುರಂದರದಾಸರ ರಚನೆ, ಎಚ್.ಕೆ.ನಾರಾಯಣ ಅವರ ಸಂಗೀತನಿರ್ದೇಶನ. ಅಲ್ಲಿಇಲ್ಲಿ ಸಿಗುವ ಮಾಹಿತಿಯನ್ನು ಸಂಗ್ರಹಿಸಿ ಅದಕ್ಕೊಂದು ರೂಪುಕೊಡುವ ಈ ರಾಗರಸಾಯನವೂ ಒಂಥರದಲ್ಲಿ ’ಮಧುಕರ ವೃತ್ತಿ’ಯೆಂದೇ ನಾನಂದುಕೊಂಡಿದ್ದೇನೆ. [youtube=http://www.youtube.com/watch?v=TQqN_ttdV0c] *** *** *** *** *** *** *** ಪುತ್ತೂರು ನರಸಿಂಹ ನಾಯಕ್ ಅವರ ಧ್ವನಿಯಲ್ಲಿ ದಾಸರ ಕೃತಿ “ಅನುದಿನ ನಿನ್ನ ನೆನೆದು ಮನವೂ..." [youtube=http://www.youtube.com/watch?v=TQE9aUm40Fg] *** *** *** *** *** *** *** ಕಾರ್ಯಕ್ರಮದ ಈ ಭಾಗದ ಕೊನೆಯಲ್ಲಿ ಪಂಡಿತ್ ಭೀಮಸೇನ ಜೋಶಿ ಅವರು ಹಾಡಿರುವ ಮರಾಠಿ ಅಭಂಗ, ಸಂತ ತುಕಾರಾಮ ವಿರಚಿತ “ಅಣುರೇಣು ಯಾ ಥೋಕಡಾ ತುಕ ಆಕಾಶಾರೇವಢಾ..." [youtube=http://www.youtube.com/watch?v=MjEPzIj73QQ] *** *** *** *** *** *** *** ಮುಖಪುಟಕ್ಕೆಭಾಗ-2 : ಕನ್ನಡ ಚಿತ್ರಗೀತೆಗಳು
ಮೊದಲಿಗೆ ಕೇಳೋಣ ‘ಭಕ್ತಕುಂಬಾರ’ ಚಿತ್ರದ ಜನಪ್ರಿಯ ಗೀತೆಗಳಲ್ಲೊಂದಾದ “ಮಾನವ ಮೂಳೆ ಮಾಂಸದ ತಡಿಕೆ..." ಹುಣಸೂರು ಕೃಷ್ಣಮೂರ್ತಿಯವರ ಸಾಹಿತ್ಯಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ. ಡಾ.ರಾಜಕುಮಾರ್ ’ಶರೀರ’ಕ್ಕೆ ಡಾ.ಪಿ.ಬಿ.ಶ್ರೀನಿವಾಸ್ ’ಶಾರೀರ’- “ಪರತತ್ತ್ವವನು ಬಲ್ಲ ಪಂಡಿತನು ನಾನಲ್ಲ... ಹರಿನಾಮವೊಂದುಳಿದು ನನಗೇನೂ ತಿಳಿದಿಲ್ಲ..." [youtube=http://www.youtube.com/watch?v=jykgDmcLQw8] *** *** *** *** *** *** *** ಎರಡನೆಯದು ಇನ್ನೂಸ್ವಲ್ಪ ಹಳೆಯ ಚಿತ್ರಗೀತೆ, ಕಪ್ಪುಬಿಳುವು ಚಿತ್ರಗಳ ಜಮಾನಾದ್ದು. ‘ನಾಂದಿ’ ಚಿತ್ರದ “ಚಂದ್ರಮುಖಿ ಪ್ರಾಣಸಖೀ ಚತುರೇ ನೀ ಕೇಳೇ" ಆರ್. ಎನ್.ಜಯಗೋಪಾಲ್ ಅವರ ರಚನೆಯನ್ನು ವಿಜಯಭಾಸ್ಕರ್ ಸಂಗೀತನಿರ್ದೇಶನದಲ್ಲಿ ಹಾಡಿದವರು ಎಸ್.ಜಾನಕಿ ಮತ್ತು ಬೆಂಗಳೂರು ಲತಾ. ಹೆಣ್ಣಿನ ಶ್ರೇಷ್ಠತೆಯನ್ನು ಸರಳ ಶಬ್ದಗಳಲ್ಲಿ ಮನಮುಟ್ಟುವಂತೆ ಬಣ್ಣಿಸಿರುವ ಈ ಹಾಡು ಚಿರಕಾಲ ನೆನಪುಳಿವ ಕನ್ನಡ ಚಿತ್ರಗೀತೆಗಳ ಸಾಲಿನದು. ದುರ್ದೈವವೆಂದರೆ ಇದರ ಒಬ್ಬ ಗಾಯಕಿ ಬೆಂಗಳೂರು ಲತಾ ಹೆಚ್ಚು ಅವಕಾಶಗಳನ್ನು ಗಳಿಸಲೇ ಇಲ್ಲ, ಮಾತ್ರವಲ್ಲ ಈಗ ಅವರು ಈ ಲೋಕದಲ್ಲಿಯೇ ಇಲ್ಲ. [youtube=http://www.youtube.com/watch?v=4zvCXGCp2aE] *** *** *** *** *** *** *** ಶ್ರಾವಣ ಬಂತು ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ ಹಾಡಿರುವ “ಬಾನಿನ ಅಂಚಿಂದ ಬಂದೆ..." ಹಿಂದೋಳ ರಾಗವನ್ನು ಆಧರಿಸಿದ ಒಂದು ಸುಂದರ ಗೀತೆ. ಚಿ.ಉದಯಶಂಕರ್ ಅವರ ಸಾಹಿತ್ಯಕ್ಕೆ ಎಂ.ರಂಗರಾವ್ ಸಂಗೀತ. [youtube=http://www.youtube.com/watch?v=15cQsPmdVFo] *** *** *** *** *** *** *** ಇನ್ನೊಂದು ವಿಶಿಷ್ಟ ಚಿತ್ರಗೀತೆ, ಹಿಂದೋಳ ರಾಗರಸಾಯನದಲ್ಲಿ ಸೇರಲೇಬೇಕಾದ್ದು ಇದೆ, “ಗಡಿಬಿಡಿ ಗಂಡ" ಚಿತ್ರದಲ್ಲಿ ಶಾಸ್ತ್ರೀಯ ಸಂಗೀತದ ಪೈಪೋಟಿ ಸನ್ನಿವೇಶದ “ನೀನು ನೀನೇ ಇಲ್ಲಿ ನಾನು ನಾನೇ..." ತಾಯ್ ನಾಗೇಶ್ ಅಭಿನಯದ ಸಂಗೀತವಿದ್ವಾಂಸನೊಬ್ಬನಿಗೆ ರವಿಚಂದ್ರನ್ ಚ್ಯಾಲೆಂಜ್ ಹಾಕಿ ಶಾಸ್ತ್ರಬದ್ಧವಾಗಿ ಹಾಡಿ ಅವನನ್ನು ಸೋಲಿಸುವ ದೃಶ್ಯ. ಹಿಂದೋಳ ರಾಗದಲ್ಲಿ ಆರಂಭವಾಗುವ ಹಾಡು ಆಮೇಲೆ ಉದಯರವಿಚಂದ್ರಿಕಾ, ಮಧ್ಯಮಾವತಿ, ಮೋಹನ ಮುಂತಾಗಿ ವಿವಿಧ ರಾಗಗಳಲ್ಲಿ ಸಂಚರಿಸುತ್ತದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾಯನಪ್ರತಿಭೆ ಪ್ರಜ್ವಲಿಸಿದ ಮತ್ತೊಂದು ಉದಾಹರಣೆ. ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಅವರದು. [youtube=http://www.youtube.com/watch?v=HrVZxmzsiUE] *** *** *** *** *** *** *** ಗಾಳಿಮಾತು ಚಿತ್ರಕ್ಕಾಗಿ ಎಸ್.ಜಾನಕಿ ಹಾಡಿರುವ “ನಗಿಸಲು ನೀನು ನಗುವೆನು ನಾನು...". ಚಿ.ಉದಯಶಂಕರ್ ರಚನೆಗೆ ಸ್ವರಸಂಯೋಜನೆ ರಾಜನ್-ನಾಗೇಂದ್ರ ಅವರಿಂದ. [youtube=http://www.youtube.com/watch?v=O2p-JI85Tao] *** *** *** *** *** *** *** ಸಂಗೀತ ಪ್ರಧಾನ ಚಿತ್ರ ಮಲಯ ಮಾರುತ ದಲ್ಲಿ ಹೆಚ್ಚೂಕಡಿಮೆ ಎಲ್ಲ ಹಾಡುಗಳೂ ಶಾಸ್ತ್ರೀಯ ಸಂಗೀತದ ಗಾಢತೆಯನ್ನು ಹೊಂದಿರುವಂಥವು. ಅವುಗಳ ಪೈಕಿ “ನಟನ ವಿಶಾರದ ನಟಶೇಖರ..." ಹಾಡು ಹಿಂದೋಳ ರಾಗ ಆಧಾರಿತ. ವಿಜಯಭಾಸ್ಕರ್ ಸಂಗೀತನಿರ್ದೇಶನದಲ್ಲಿ ಹಾಡಿದವರು ಕೆ.ಜೆ.ಯೇಸುದಾಸ್. ಇದು ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ರಚನೆ. [youtube=http://www.youtube.com/watch?v=4yiIV6Fd3gQ] *** *** *** *** *** *** *** ಮುಖಪುಟಕ್ಕೆಭಾಗ-3 : ಇತರ ಭಾಷೆಗಳ ಚಿತ್ರಗೀತೆಗಳು
ಹಿಂದೋಳದ ಹಿಂದುಸ್ಥಾನಿ ರೂಪವಾದ ಮಾಲಕೌಂಸ್ ರಾಗ ಆಧರಿಸಿದ all time great ಎನಿಸಿಕೊಂಡ ಹಿಂದಿ ಚಿತ್ರಗೀತೆಗಳು ಒಂದೆರಡಿವೆ. ಮೊದಲನೆಯದು ‘ನವರಂಗ್’ ಚಿತ್ರಕ್ಕಾಗಿ ಆಶಾ ಭೋಂಸ್ಲೆ ಮತ್ತು ಮಹೇಂದ್ರಕಪೂರ್ ಹಾಡಿರುವ “ಆಧಾ ಹೈ ಚಂದ್ರಮಾ ರಾತ್ ಆಧೀ..." ಭರತ್ ವ್ಯಾಸ್ ಅವರ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಸಿ.ರಾಮಚಂದ್ರ. ಇದೇ ಹಾಡಿನ ಧಾಟಿಯಲ್ಲಿ “ಶಾರದಾ ದೇವಿಗೆ ವಂದಿಸುವೆವು ವಿದ್ಯಾಧಿದೇವತೆಗೆ ವಂದಿಸುವೆವು ನಾವು ವಂದಿಸುವೆವು..." ಎಂಬ ಭಜನೆಹಾಡನ್ನು ನಾವು ಪ್ರಾಥಮಿಕ ಶಾಲೆಯಲ್ಲಿ ಹೇಳುತ್ತಿದ್ದೆವು. [youtube=http://www.youtube.com/watch?v=aasw1WDNhgY] *** *** *** *** *** *** *** ಎರಡನೆಯದು, ಬೈಜುಬಾವ್ರಾ ಚಿತ್ರದ ಹೃದಯಸ್ಪರ್ಶಿ ಗೀತೆ, “ಮನ ತಡಪತ್ ಹರಿದರ್ಶನ ಕೋ ಆಜ್...". ಹಿಂದಿ ಚಿತ್ರಸಂಗೀತದಲ್ಲಿ ಅದೆಷ್ಟೋ ಭಜನೆ/ಭಕ್ತಿಗೀತೆಗಳು ಬಂದಿವೆ, ಆದರೆ ಈ ಹಾಡಿನ ವೈಶಿಷ್ಟ್ಯದವು ಖಂಡಿತ ಬೇರೊಂದಿಲ್ಲ. ಇದರ ಸಾಹಿತ್ಯ ಶಕೀಲ್ ಬದಾಯುನಿ. ಸಂಗೀತ ಸಂಯೋಜನೆ ನೌಷಾದ್ ಅವರದು. ಹಾಡಿದವರು ಮಹಮ್ಮದ್ ರಫಿ ಅಲ್ಲದೆ ಮತ್ತ್ಯಾರೂ ಅಲ್ಲ! ಇದೊಂದು ಅಂಶವನ್ನು ಗಮನಿಸಿದಿರಾ? ಗೀತರಚನಕಾರ ಮುಸ್ಲಿಂ; ಸಂಗೀತ ನಿರ್ದೇಶಕ ಮುಸ್ಲಿಂ; ಗಾಯಕ ಮುಸ್ಲಿಂ. ಹಾಡು ಶ್ರೀಹರಿಯ ಭಜನೆ! ಮನುಜಮತ ವಿಶ್ವಪಥ ಎಂದರೆ ಇದೇ! ಇನ್ನೂ ಒಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಭಕ್ತಿಪರ ಗೀತೆಯನ್ನು ಹಾಡಿದ್ದಕ್ಕೆ ಒಂದು ನಯಾಪೈಸೆಯೂ ಸಂಭಾವನೆ ತೆಗೆದುಕೊಳ್ಳಲು ಮಹಮ್ಮದ್ ರಫಿ ನಿರಾಕರಿಸಿದ್ದರಂತೆ! [youtube=http://www.youtube.com/watch?v=OyLdgQinxpY] [ಖ್ಯಾತ ಹಿಂದುಸ್ಥಾನೀ ಸಂಗೀತ ಕಲಾವಿದ ರೋನು ಮುಜುಂದಾರ್ ಅವರ ಬಾನ್ಸುರಿ ವಾದನಗಲ್ಲಿ ಈ ಹಾಡನ್ನು ಇಲ್ಲಿ ಕೇಳಬಹುದು.] *** *** *** *** *** *** *** ಸೂಪರ್ಹಿಟ್ ತೆಲುಗು ಚಿತ್ರ ‘ಸಾಗರ ಸಂಗಮಂ’ ಮತ್ತು ಅದರ ಹಾಡುಗಳು ತೆಲುಗು ಬಾರದ ಸಂಗೀತರಸಿಕರನ್ನೂ ಭಾವಪರವಶವಾಗಿಸಿವೆಯೆಂದರೆ ತಪ್ಪಾಗಲಾರದು. ಸಾಗರಸಂಗಮಂ ಚಿತ್ರದಲ್ಲಿ ಎಸ್.ಜಾನಕಿ ಹಾಡಿರುವ "ಓಂ ನಮಃ ಶಿವಾಯ ಚಂದ್ರಕಳಾಧರ ಸಹೃದಯ..." ಗೀತೆ ಹಿಂದೋಳ ರಾಗಾಧಾರಿತ ಚಿತ್ರಗೀತೆಗೆ ಒಳ್ಳೆಯ ಉದಾಹರಣೆ. ವೇಟೂರಿ ಸುಂದರರಾಮಮೂರ್ತಿ ಸಾಹಿತ್ಯ, ಇಳಯರಾಜಾ ಸಂಗೀತ. ಬಹುಶಃ ಇದನ್ನು ಎಸ್.ಜಾನಕಿ ಅಲ್ಲದೇ ಬೇರೆ ಯಾರೇ ಹಾಡಿದ್ದರೂ ಇಷ್ಟು ಚೆನ್ನಾಗಿ, ಅದ್ಭುತವಾಗಿ ಮೂಡಿಬರುತ್ತಿರಲಿಲ್ಲವೋ ಏನೋ. ’ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದಲ್ಲಿ ಎಸ್ಪಿಬಿ ಆಗಾಗ ಹೇಳುತ್ತಿರುತ್ತಾರಲ್ಲ "ಜಾನಕಮ್ಮನ ದೈತ್ಯಪ್ರತಿಭೆಯೆದುರು ನಾವೆಲ್ಲ ಪುಟಗೋಸಿಗಳು" ಅಂತ? ಜಾನಕಮ್ಮನ ಆ ದೈತ್ಯಪ್ರತಿಭೆ ಪೂರ್ಣವಾಗಿ ಪ್ರಕಾಶಿಸುವುದು ಇಂಥ ಹಾಡುಗಳಲ್ಲೇ. ಹಾಡಿನಲ್ಲಿ ಬರುವ “ನೀ ಮೌನಮೇ... ಎಂಬ ಸಾಲನ್ನು ಗಮನಿಸಿದರೆ ಜಾನಕಮ್ಮನ ದ್ವನಿ ಸ್ವರಸಪ್ತಕದ ಒಂದು ತುದಿಯಿಂದ ಇನ್ನೊಂದು ತುದಿವರೆಗೂ ಅದುಹೇಗೆ ಲೀಲಾಜಾಲವಾಗಿ ತೂಗುತ್ತದೆ ಎಂದು ಆಶ್ಚರ್ಯವಾಗುತ್ತದೆ. ಹೌದು, ಹಿಂದೋಳ ಎಂದಮೇಲೆ ತೂಗಲೇಬೇಕು, ತೂಗಿದಂತೆ ನಮಗೆ ಭಾಸವಾಗಲೇಬೇಕು! [youtube=http://www.youtube.com/watch?v=GW7ujCbbPec] [ಈ ಚಿತ್ರದಲ್ಲಿ ನೃತ್ಯಕಲಾವಿದೆ ‘ಶೈಲಜಾ’ ಆಗಿ ಅಭಿನಯಿಸಿದವರು ಎಸ್.ಪಿ.ಶೈಲಜಾ (ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ತಂಗಿ). ನೃತ್ಯ ಅದ್ಭುತವಾಗಿದೆ ಎಂದು ಪ್ರೇಕ್ಷಕರು ಚಪ್ಪಾಳೆತಟ್ಟುತ್ತಾರೆ, ಬೇರೆಲ್ಲ ಪತ್ರಿಕೆಗಳೂ ನಾಟ್ಯಮಯೂರಿ ಎಂದೆಲ್ಲ ಹೊಗಳಿ ಬರೆಯುತ್ತವೆ. ಬಾಲು ಎಂಬೊಬ್ಬ ವಿಮರ್ಶಕ (ಕಮಲಹಾಸನ್) ಮಾತ್ರ ಆ ನಾಟ್ಯ ತಪ್ಪುತಪ್ಪಾಗಿತ್ತು ಎಂದು ಬರೆಯುತ್ತಾನಷ್ಟೇ ಅಲ್ಲ, ಎಲ್ಲಿ ತಪ್ಪಿತ್ತು ಎಂದು ತಾನೇ ನೃತ್ಯ ಮಾಡಿ ತೋರಿಸಿ ಶೈಲಜಾ ಮುಖ ಕಪ್ಪಿಡುವಂತೆ ಮಾಡುತ್ತಾನೆ. ವಾಹ್ ಕಮಲಹಾಸನ್ ಅಂದರೆ ಏಕಮೇವಾದ್ವಿತೀಯ ಕಮಲಹಾಸನ್! ಇದೊಂದು ದೃಶ್ಯವನ್ನು ನೀವು ನೋಡಲೇಬೇಕು!] *** *** *** *** *** *** *** ಈಗ ಒಂದು ಮಧುರವಾದ ಮಲಯಾಳಂ ಚಿತ್ರಗೀತೆ.ಋತುಭೇದಮ್ ಚಿತ್ರಕ್ಕಾಗಿ ಕೆ.ಜೆ.ಯೇಸುದಾಸ್ ಹಾಡಿರುವ “ಋತು ಸಂಕ್ರಮ ಪಕ್ಷಿ ಪಾಡಿ..." ಇದು ತಕ್ಕಳಿ ಶಂಕರನಾರಾಯಣ್ ರಚನೆ, ಶ್ಯಾಮ್ ಸಂಗೀತನಿರ್ದೇಶನ. [youtube=http://www.youtube.com/watch?v=fbOeZK-fpZE] *** *** *** *** *** *** *** ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಒಂದು fast pace ತಮಿಳು ಚಿತ್ರಗೀತೆ, ಗಾಡ್ಫಾದರ್ ಚಿತ್ರಕ್ಕಾಗಿ ನರೇಶ್ ಐಯರ್, ಮಹತಿ ಮತ್ತು ಸಂಗಡಿಗರು ಹಾಡಿರುವ “ಇನ್ನಿಸೈ ವರಲರು..." [youtube=http://www.youtube.com/watch?v=3sa0ZLPspTM] *** *** *** *** *** *** *** ಮುಖಪುಟಕ್ಕೆಭಾಗ-4 : ಸಾಮಜವರಗಮನ ಸ್ಪೆಷಲ್
ತ್ಯಾಗರಾಜರು ರಚಿಸಿದ “ಸಾಮಜವರಗಮನ..." ಕೃತಿ ಹಿಂದೋಳ ರಾಗದ ಅತಿಜನಪ್ರಿಯ ಕೃತಿ ಎನ್ನುವುದರಲ್ಲಿ ಎರಡುಮಾತಿಲ್ಲ. ಇದು ಜನಸಾಮಾನ್ಯರನ್ನೂ ತಲುಪಿದ್ದು ‘ಶಂಕರಾಭರಣಂ’ ಸಿನೆಮಾದಲ್ಲಿ ಅಳವಡಿಸಿಕೊಂಡಿದ್ದರಿಂದ ಎನ್ನುವುದೂ ಒಪ್ಪತಕ್ಕ ಮಾತೇ. ಆದರೆ ಶಂಕರಾಭರಣಂ ಚಿತ್ರದ ಗೀತೆಯಲ್ಲಿ ಪಲ್ಲವಿ ಮಾತ್ರ ತ್ಯಾಗರಾಜರ ಮೂಲ ಕೃತಿಯದು, ಉಳಿದಂತೆ ಚರಣಗಳ ಸಾಹಿತ್ಯ ವೇಟೂರಿ ಸುಂದರರಾಮಮೂರ್ತಿ ಅವರದು. ತ್ಯಾಗರಾಜರ ಮೂಲ ಕೃತಿ ಸಂಪೂರ್ಣವಾಗಿ ಸಂಸ್ಕೃತದಲ್ಲಿಯೇ ಇದೆ, ಶಂಕರಾಭರಣಂ ಆವೃತ್ತಿಯಲ್ಲಿ ತೆಲುಗು ಭಾಷೆ ಇದೆ. ಆದರೂ ಹಿಂದೋಳ ರಾಗದಲ್ಲಿಯೇ ಇದೆ ಎಂಬುದು ಗಮನಾರ್ಹ. ಸಾಮಜವರಗಮನ ಕೃತಿಯ ಇನ್ನೊಂದು ವೈಶಿಷ್ಟ್ಯವೆಂದರೆ, ತ್ಯಾಗರಾಜರ ಹೆಚ್ಚಿನೆಲ್ಲ ಕೃತಿಗಳೂ ಶ್ರೀರಾಮಚಂದ್ರನ ಕುರಿತು ಇರುವಂಥವು, ಇದು ಮಾತ್ರ ಶ್ರೀಕೃಷ್ಣನನ್ನು ಬಣ್ಣಿಸುವ ಅಮೋಘ ರಚನೆ! ಹಿಂದೋಳ ರಾಗರಸಾಯನದ ‘ಸಾಮಜವರಗಮನ ಸ್ಪೆಷಲ್’ ವಿಭಾಗದಲ್ಲಿ ಮೊದಲಿಗೆ ಕೇಳೋಣ ಶಂಕರಾಭರಣಂ ಚಿತ್ರಗೀತೆಯಾಗಿ ಸಾಮಜವರಗಮನ ... [youtube=http://www.youtube.com/watch?v=YXUvCUpMOWg] *** *** *** *** *** *** *** ಈಗ, ಕೆ.ಜೆ.ಯೇಸುದಾಸ್ ಅವರ ’ಕಂಚಿನ ಕಂಠ’ದಲ್ಲಿ ಸಾಮಜವರಗಮನ... [youtube=http://www.youtube.com/watch?v=UZeS0zfr5EU] *** *** *** *** *** *** *** ಪಿಯಾನೊ, ಅಕೌಸ್ಟಿಕ್ ಮತ್ತು ಬಾಸ್ ಗಿಟಾರ್, ಸಿಂಥೆಸೈಜರ್ ಪ್ಯಾಡ್ಸ್ & ಬೆಲ್ಸ್, ಜತೆಯಲ್ಲಿ ಹಗುರಾದ ಡ್ರಮ್ ಬೀಟ್ಸ್ - ಇವಿಷ್ಟನ್ನು ಬಳಸಿ ನುಡಿಸಿದ, Enneume ಎಂಬ ಸಂಗೀತಾಭ್ಯಾಸಿಯ Ambient Instrumental ಆಲ್ಬಮ್ನಿಂದ ಆಯ್ದುಕೊಂಡಿರುವ ಒಂದು ಫ್ಯೂಷನ್ ಪ್ರಯೋಗದಲ್ಲಿ ಸಾಮಜವರಗಮನ... [youtube=http://www.youtube.com/watch?v=hT_kGqpT0wQ] *** *** *** *** *** *** *** ಯು.ಪಿ.ರಾಜು (ಯು.ಶ್ರೀನಿವಾಸ್ ಅವರ ಕಸಿನ್) ಮ್ಯಾಂಡೋಲಿನ್ ವಾದನದಲ್ಲಿ ಸಾಮಜವರಗಮನ... [youtube=http://www.youtube.com/watch?v=b909miHhf4k] *** *** *** *** *** *** *** ವೀಣಾವಾದಕ ರಾಜೇಶ್ ವೈದ್ಯ ಅವರು ಸಾಕಷ್ಟು ಆರ್ಕೆಸ್ಟ್ರಾ ಎಫೆಕ್ಟ್ಸ್ ಸೇರಿಸಿ ಟೊರಾಂಟೊ (ಕೆನಡಾ)ದಲ್ಲಿ ನಡೆಸಿದ್ದ ಕನ್ಸರ್ಟ್ನಿಂದ ಆಯ್ದುಕೊಂಡಿರುವ ಸಾಮಜವರಗಮನ... [youtube=http://www.youtube.com/watch?v=YZ-GB7W9mew] *** *** *** *** *** *** *** ಕೌಲಾಲಂಪುರದಲ್ಲಿ ISKCON ಪಂಥಕ್ಕೆ ಸೇರಿದ ಕೆಲ್ವಿನ್ ಜಯಕಾಂತ್ ಮತ್ತು ಶ್ರೀಕಾಂತ್ ಶೇಷಾದ್ರಿ ನಿರ್ಮಿಸಿದ ‘Raadhe' ಆಲ್ಬಮ್ನಿಂದ ಆಯ್ದ ಸಾಮಜವರಗಮನ... [youtube=http://www.youtube.com/watch?v=8_vmebdHp4M] *** *** *** *** *** *** *** ಆರು ವರ್ಷದ ಹುಡುಗಿ ಗಾಯತ್ರಿ, ತ್ಯಾಗರಾಜ ಆರಾಧನೆಯ ದಿನ ಕೀಬೋರ್ಡ್ನಲ್ಲಿ ನುಡಿಸಿದ ಸಾಮಜವರಗಮನ... [youtube=http://www.youtube.com/watch?v=UwzEyx5wQSc] *** *** *** *** *** *** *** Golden Krithis ಸರಣಿಯಲ್ಲಿ ಬಂದ, ತುಂಬ ಜನಪ್ರಿಯತೆ ಗಳಿಸಿದ, ‘Colours' ಆಲ್ಬಮ್ನಲ್ಲಿ ಕುನ್ನಕ್ಕುಡಿ ವೈದ್ಯನಾಥನ್ ಅವರ ವಯಲಿನ್ ವಾದನ ಮತ್ತು ಝಾಕಿರ್ ಹುಸೇನ್ ಅವರ ತಬಲಾ ವಾದನದ ಜುಗಲ್ಬಂದಿಯಲ್ಲಿ ಸಾಮಜವರಗಮನ... [youtube=http://www.youtube.com/watch?v=lFxsVA_Iurc] *** *** *** *** *** *** *** ಮುಖಪುಟಕ್ಕೆಭಾಗ-5 : ಹಿಂದೋಳ/ಮಾಲಕೌಂಸ್ heights & highlights
ಕರ್ನಾಟಕ (ದಕ್ಷಿಣಾದಿ) ಶಾಸ್ತ್ರೀಯ ಸಂಗೀತ ಪದ್ಧತಿಯ ’ಹಿಂದೋಳ’ರಾಗಕ್ಕೆ ಹಿಂದುಸ್ಥಾನಿ (ಉತ್ತರಾದಿ) ಶಾಸ್ತ್ರೀಯ ಸಂಗೀತ ಪದ್ದತಿಯಲ್ಲಿ ಸಮಾನವಾದದ್ದು ‘ಮಾಲಕೌಂಸ್’ ರಾಗ ಎಂದು ಆಗಲೇ ತಿಳಿದುಕೊಂಡೆವು. ಏನೀ ಸಮಾನತೆ ಎನ್ನುವುದು ಶ್ರೋತೃಗಳಾದ ನಮಗೆ ಚೆನ್ನಾಗಿ ಮನವರಿಕೆಯಾಗುವುದು ದಕ್ಷಿಣಾದಿ-ಉತ್ತರಾದಿ ಕಲಾವಿದರು ಸೇರಿ ಜುಗಲ್ಬಂದಿ ಸಂಗೀತಕಛೇರಿ ನಡೆಸಿಕೊಟ್ಟಾಗ. ಅಂಥದೊಂದು ವಿಶೇಷ ಕಾರ್ಯಕ್ರಮ South Meets North ಎಂಬ ಶೀರ್ಷಿಕೆಯಲ್ಲಿ ಕೆಲ ದಶಕಗಳ ಹಿಂದೆ ದಿಲ್ಲಿಯಲ್ಲಿ ನಡೆದಿತ್ತು. ಖ್ಯಾತ ಸರೋದ್ ವಾದಕ ಅಮ್ಜದ್ ಆಲಿ ಖಾನ್ ಮತ್ತು ಖ್ಯಾತ ವಯಲಿನ್ ವಾದಕ ಲಾಲ್ಗುಡಿ ಜಿ ಜಯರಾಮನ್ ಅವರ ಜುಗಲ್ಬಂದಿ ಕಾರ್ಯಕ್ರಮ. ಆಮೇಲೆ ಅದರ ಧ್ವನಿಮದ್ರಿಕೆಯೂ ಕ್ಯಾಸೆಟ್, ಸಿ.ಡಿ, ಎಲ್.ಪಿ ರೆಕಾರ್ಡ್ಸ್ ಹೀಗೆ ವಿಧವಿಧ ರೂಪಗಳಲ್ಲಿ ಬಿಡುಗಡೆಯಾಗಿ ಜನಪ್ರಿಯಗೊಂಡಿದೆ. ನನ್ನ ನೆಚ್ಚಿನ ಸಂಗೀತಸಂಗ್ರಹದಲ್ಲಿಯೂ ಸೇರಿಕೊಂಡಿದೆ. ಸಾವಿರಕ್ಕೂ ಹೆಚ್ಚುಬಾರಿ ಆ ಧ್ವನಿಮುದ್ರಿಕೆ ನನ್ನ ಮ್ಯೂಸಿಕ್ಸಿಸ್ಟಂನಲ್ಲಿ, ಕಾರ್ ಸ್ಟೀರಿಯೋದಲ್ಲಿ ಮೊಳಗಿದೆಯೋ ಏನೋ! South Meets North ಆಲ್ಬಮ್ನಿಂದ ಈಗ ಸವಿಯೋಣ- ಹಿಂದೋಳ/ಮಾಲಕೌಂಸ್ ಜುಗಲ್ಬಂದಿ! ಅದಕ್ಕೆ ಮೊದಲು, ಆಲ್ಬಮ್ನ inlay cardನಲ್ಲಿ ಬರೆದಿರುವ ಈ ಭಾಗವನ್ನೊಮ್ಮೆ ಓದಿಕೊಳ್ಳಿ: The two instruments laugh and whisper, quarrel and tease and traipse across the scale like two lovers in a timeless play of hide and seek. The Carnatic violin, tremulous from the touch of the Sarod's demanding passage, coyly recedes in a flurry of glissando, that wing the air with a shower of notes, that scatter weightlessly like snowflakes of spring. The Sarod tiptoeing behind the Violin, in pianissimos as gentle as the heartbeats of a sleeping child, and metaphorically hold hands under the table, for brief electric moments that are unforgettable in their musical tension. The two instruments feast together in a banquet of notes. The Sarod and the Violin are at one in their search of the Raga in its entirety. At one time they are cajoling with Gandhara and at another essaying on the Madhyama and finally rising up in their yearning to the Dhaiwat as two devotees climaxing in the fullness of their worship. [youtube=http://www.youtube.com/watch?v=aDGQ5dkIsHY] [South Meets North ಆಲ್ಬಮ್ನ ಎರಡು ಫುಲ್ ಟ್ರ್ಯಾಕ್ಗಳು: ಮೂವತ್ತು ನಿಮಿಷ ಅವಧಿಯ ಮೋಹನ/ಭೂಪಾಲಿ ಜುಗಲ್ಬಂದಿ ಮತ್ತು ಮೂವತ್ತು ನಿಮಿಷ ಅವಧಿಯ ಹಿಂದೋಳ/ಮಾಲಕೌಂಸ್ ಜುಗಲ್ಬಂದಿಯ mp3 file download ಮಾಡಿಕೊಳ್ಳಲಿಚ್ಛಿಸುವವರು ಅನುಕ್ರಮವಾಗಿ ಇಲ್ಲಿ ಮತ್ತು ಇಲ್ಲಿ ಕ್ಲಿಕ್ಕಿಸಬಹುದು.] *** *** *** *** *** *** *** ಧೀಂ ಧೀಂ ಧೀಂ ಧಿಮಿ ನಟನ ಶಿವ... ಎಂಬೊಂದು ಸಾಯಿಭಜನೆ ಕೇಳಿದ್ದೀರಾ? ಧನ್ಯಾ ಸುಬ್ರಹ್ಮಣ್ಯನ್ ಮತ್ತು ವಿಸ್ಮಯಾ ಗೋಪಾಲನ್ ಎಂಬ ಗುರು-ಶಿಷ್ಯೆಯರು ಹಿಂದೋಳ ರಾಗವನ್ನು ಆ ಭಜನೆಯನ್ನು ಮೂಲಕ ಅಭ್ಯಾಸ ಮಾಡುತ್ತಿರುವುದು ಹೀಗೆ- [youtube=http://www.youtube.com/watch?v=WN-wIqqvvS8] *** *** *** *** *** *** *** ಇದೊಂದು ತಮಿಳು ಕೃತಿ, ತೋಂಡರಡಿಪೊಡಿ ಆಳ್ವಾರರ ’ದಿವ್ಯಪ್ರಬಂಧಮ್’ ರಚನೆ, “ಪಚ್ಚೈ ಮಾಮಲೈಪೋಲ್" - ಇದರಲ್ಲಿ ಹಳಗನ್ನಡ ಕಾವ್ಯಗಳಂತೆ ದ್ವಿತೀಯಪ್ರಾಸ (ಪ್ರತಿಯೊಂದು ಸಾಲಿನ ಎರಡನೇ ಅಕ್ಷರವು ಒಂದೇ ವ್ಯಂಜನದಿಂದಾಗಿರುವುದು) ಇದೆ. ಖ್ಯಾತ ಕಲಾವಿದ ಉನ್ನಿಕೃಷ್ಣನ್ ಹಾಡಿದ್ದಾರೆ, ಹಿಂದೋಳ ರಾಗದಲ್ಲಿ ಕರ್ಣಾನಂದಕರವಾಗಿ! [youtube=http://www.youtube.com/watch?v=Vt2CwZdptXo] *** *** *** *** *** *** *** ತೆಲುಗಿನಲ್ಲಿ ಸಂತ ಅನ್ನಮಾಚಾರ್ಯರು ರಚಿಸಿದ ಕೃತಿಗಳಲ್ಲಿ “ಕೊಂಡಲಲೊ ನಿಲಕುನ್ನ ಕೋನೇಟಿರಾಯುಡುವಾಡು..." ಸಹ ಪ್ರಖ್ಯಾತವಾದುದು. ಇದನ್ನು ‘ಅನ್ನಮಯ್ಯ’ ಸಿನೆಮಾದಲ್ಲಿಯೂ ಅಳವಡಿಸಿಕೊಳ್ಳಲಾಗಿತ್ತು. ‘ಶ್ರೀಹರಿನಾಮಮು’ ಎಂಬ ಆಲ್ಬಮ್ನಲ್ಲಿ ಅನ್ನಮಾಚಾರ್ಯರ ಕೆಲವು ಜನಪ್ರಿಯ ಕೃತಿಗಳನ್ನು ವಾದ್ಯವೃಂದದವರು ನುಡಿಸಿದ್ದಾರೆ. ಸಂಗೀತನಿರ್ದೇಶನ ತೆಲುಗು ಚಿತ್ರರಂಗದಲ್ಲಿ ಇದೀಗ ಹೆಸರುಮಾಡುತ್ತಿರುವ ಕಮಲಾಕರ್ ಅವರಿಂದ. ಇದು ಹಿಂದೋಳ ರಾಗದಲ್ಲಿದೆ, ಮತ್ತು ಕೇಳಲಿಕ್ಕೆ ಇಂಪಾಗಿದೆ ಎಂಬ ಕಾರಣಕ್ಕೆ ಇಲ್ಲಿ ಸೇರಿಸಿಕೊಂಡಿದ್ದೇನೆ. [youtube=http://www.youtube.com/watch?v=EyYVDf25m64] *** *** *** *** *** *** *** ಈಗ ಒಂದು ಪಕ್ಕಾ ಹಿಂದುಸ್ಥಾನಿ ಶೈಲಿಯ ಗಾಯನ, ಮಾಲಕೌಂಸ್ ರಾಗದಲ್ಲಿ ಪಂಡಿತ್ ಮಿಲಿಂದ್ ಚಿತ್ತಳ್ ಹಾಡಿರುವ "ಮನ ಮಂದಿರ್ ಮೇ ಆನ್ಬಸ..." ಮಿಲಿಂದ್ ಚಿತ್ತಳ್ ಅವರು Discovery of India (ಶ್ಯಾಮ್ ಬೆನಗಲ್ ನಿರ್ದೇಶನದ ಟಿವಿ ಸರಣಿ)ಗೆ ಹಿನ್ನೆಲೆಗಾಯನ ಮಾಡಿದ್ದ ಕಲಾವಿದ. ಹಲವಾರು ಪ್ರಶಸ್ತಿ-ಸಮ್ಮಾನಗಳನ್ನು ಗಳಿಸಿದವರು. [youtube=http://www.youtube.com/watch?v=c_8AY3ZQh2w] *** *** *** *** *** *** *** ಇನ್ನೊಂದು ಚಿಕ್ಕ ಕ್ಲಿಪ್ಪಿಂಗ್, percussion instrumentಗಳಿಂದಲೇ (ಮುಖ್ಯವಾಗಿ ತಬಲಾ) ಮಾಲಕೌಂಸ್ ರಾಗವನ್ನು ನುಡಿಸಿರುವುದು. ನಮಗೆ ಗೊತ್ತಿರುವಂತೆ ತಾಳವಾದ್ಯಗಳಿರುವುದು ‘ಲಯ’ ಒದಗಿಸಲಿಕ್ಕೆ. ಆದರೆ "ತಬ್ಲಾ ತರಂಗ್" ಎಂಬ ಈ ಪ್ರಯೋಗದಲ್ಲಿ ಹದಿನಾರು ತಬಲಾಗಳನ್ನು ಹದಿನಾರು ವಿಧಧ ಶ್ರುತಿಗೇರಿಸಿ ಲಯದ ಜತೆಜತೆಗೇ ನಾದವನ್ನು ಹೊರಹೊಮ್ಮಿಸಿರುವುದು. [youtube=http://www.youtube.com/watch?v=RC7E3QY9-rA] *** *** *** *** *** *** *** ಇನ್ನೊಂದು rare combination of instruments- ವಯಲಿನ್ ಜತೆಗೆ ನಾದಸ್ವರ ಮತ್ತು ತವಿಲ್! ಜತೆಗೆ ಮೃದಂಗ, ಘಟ, ಮೋರ್ಚಿಂಗ್, ಕೀಬೋರ್ಡ್ ಮತ್ತು ಗಿಟಾರ್. ಸಾಮಾನ್ಯವಾಗಿ ತವಿಲ್ ಪಕ್ಕವಾದ್ಯವಾಗಿ ವಿಜೃಂಭಿಸುವುದು. ಆದರೆ ಇಲ್ಲಿ ಖ್ಯಾತ ತವಿಲ್ ವಾದಕ ಪದ್ಮಶ್ರೀ ಎ.ಕೆ.ಪಳನಿವೇಲ್ ಅವರದೇ ಮುಖ್ಯಭೂಮಿಕೆ. ಅವರಿಗೆ ಪಕ್ಕವಾದ್ಯಗಾರರಾಗಿ ನಾದಸ್ವರಂ (ದುರೈ ಭಾರತೀದಾಸನ್) ಮತ್ತು ವಯಲಿನ್ (ಡಾ.ಜ್ಯೋತ್ಸ್ನಾ ಶ್ರೀಕಾಂತ್) ಜುಗಲ್ಬಂದಿ. ಹಿಂದೋಳ ರಾಗದ ಆಲಾಪನೆಗೆ ಲಯವಿನ್ಯಾಸ. ಇದು ಲಂಡನ್ನ ಶಿವ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಂಗೀತಕಛೇರಿಯಿಂದಾಯ್ದ ತುಣುಕು. [youtube=http://www.youtube.com/watch?v=fAZ_2JxG44c] *** *** *** *** *** *** *** ಈಗ ಹಿಂದೋಳ ರಾಗದಲ್ಲಿ ಒಂದು ಯಕ್ಷಗಾನ ಪದ್ಯ ಕೇಳೋಣ. ಭಾಗವತರು: ಸತ್ಯನಾರಾಯಣ ಪುಣಿಚಿತ್ತಾಯ. ಮದ್ದಳೆ: ಎನ್.ಜಿ.ಹೆಗಡೆ. ಭಾಗವತರ ಕಂಠಸಿರಿಯಷ್ಟೇ ಗಮನ ಸೆಳೆಯುತ್ತದೆ ಮದ್ದಳೆವಾದಕರ ಕರಾಮತ್ತು. ಸೂಕ್ಷ್ಮವಾಗಿ ಗಮನಿಸಿದರೆ ಅವರು ಬಾರಿಸುತ್ತಿರುವುದು ಒಂದೇ ಮದ್ದಳೆಯಲ್ಲ, ಒಂದೂವರೆ ಮದ್ದಳೆ! ಶ್ರುತಿ ಎಡ್ಜಸ್ಟ್ ಮಾಡಲಿಕ್ಕೆ ಬಳಸುವ ಸುತ್ತಿಗೆಯನ್ನೂ ಮದ್ದಳೆ ಬಾರಿಸಲಿಕ್ಕೆ ಉಪಯೋಗಿಸಿ ಹೊರಹೊಮ್ಮಿಸಿರುವ ಸ್ಪೆಷಲ್ ಎಫೆಕ್ಟ್ಗಳನ್ನು ವಿಶೇಷವಾಗಿ ಗಮನಿಸಬಹುದು! [youtube=http://www.youtube.com/watch?v=nM6qPGcvwtg] *** *** *** *** *** *** *** ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ವಾದನದಲ್ಲಿ ಮಾಲಕೌಂಸ್ ರಾಗ. ಬಿಸ್ಮಿಲ್ಲಾ ಖಾನ್ (1916-2006) ಭಾರತ ಕಂಡ ಅಸಾಮಾನ್ಯ ಅಗ್ರಗಣ್ಯ ಸಂಗೀತಕಲಾವಿದ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಮತ್ತು ಭಾರತರತ್ನ - ಈ ಎಲ್ಲ ಪ್ರಶಸ್ತಿಗಳನ್ನೂ (ಕ್ರಮವಾಗಿ 1961, 1968, 1980 ಮತ್ತು 2001ರಲ್ಲಿ) ಅತ್ಯಂತ ಅರ್ಹತೆಯಿಂದ ಪಡೆದುಕೊಂಡ ಏಕೈಕ ಸಂಗೀತಗಾರ. ಜತೆಯಲ್ಲೇ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್. ಕೋಟ್ಯಂತರ ಅಭಿಮಾನಿಗಳ ಪ್ರೀತಿಗೌರವ. ಆದರೇನಂತೆ, ಜೀವನದುದ್ದಕ್ಕೂ ಬಡತನದಿಂದ ಬೆಂದು, ಯಾವೊಂದು ಆಸ್ತಿಪಾಸ್ತಿ ಗಳಿಸದೆ, ಶುದ್ಧ ಸಂಗೀತವನ್ನಷ್ಟೇ ನಮ್ಮೆಲ್ಲರಿಗೂ ಮಹಾನ್ ಆಸ್ತಿಯಾಗಿ ಬಿಟ್ಟುಹೋದ ಸಂತ. ಬಿಸ್ಮಿಲ್ಲಾ ಖಾನ್ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿಯ ರೂಪದಲ್ಲಿ ಈ ವಿಡಿಯೋಕ್ಲಿಪ್ಪಿಂಗ್ ಇವತ್ತಿನ ರಾಗರಸಾಯನದಲ್ಲಿ ಸೇರಿಸಿದ್ದೇನೆ. [youtube=http://www.youtube.com/watch?v=so7yzog1xqw] *** *** *** *** *** *** *** ಕಾರ್ಯಕ್ರಮದ ಕೊನೆಯಲ್ಲಿ ಒಂದು ಭರತನಾಟ್ಯ ವಿಡಿಯೋ. ಹಿಂದೋಳ ರಾಗದ ತಿಲ್ಲಾನ, ವಿದ್ವಾನ್ ಮಧುರೈ ಎನ್.ಕೃಷ್ಣನ್ ಅವರ ರಚನೆ ಮತ್ತು ಸಂಗೀತನಿರ್ದೇಶನ. [youtube=http://www.youtube.com/watch?v=yYbIsv38Xto] *** *** *** *** *** *** *** ಇಲ್ಲಿಗೆ ಹಿಂದೋಳ(ಮಾಲಕೌಂಸ್) ರಾಗರಸಾಯನ ಮುಗಿಯಿತು. ಹಿಂದೋಳ ಸುಂದರ ಹೆಣ್ಣಿನಂತೆ ಇದೆಯೋ ಸ್ಫುರದ್ರೂಪಿ ಗಂಡಿನಂತೆ ಇದೆಯೋ ಗೊತ್ತಿಲ್ಲ. ಹಿಂದೋಳವನ್ನು ಕೇಳುತ್ತಲೇ ಇದ್ದರೆ ರಾಧಾ-ಕೃಷ್ಣರು ಜೋಕಾಲಿಯಲ್ಲಿ ಜೀಕುತ್ತಿರುವಂತೆಯೇ ನಮಗೂ ಜೀಕಿದ ಅನುಭವವಾಗುವುದಂತೂ ಹೌದು. ಇದು ನಿಮಗೆ ಇಷ್ಟವಾದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆ ಸೂಚನೆ ತಿದ್ದುಪಡಿ ಇತ್ಯಾದಿ ಇದ್ದರೆ ಖಂಡಿತ ತಿಳಿಸಿ. [ಸೂಚನೆ: ಈ ರಾಗರಸಾಯನದ ವಿಡಿಯೊಗಳನ್ನು ನೀವು YouTube Playlist ರೀತಿಯಲ್ಲಿ ಸುಮಾರು ನಾಲ್ಕು ಗಂಟೆಗಳ nonstop ಹಿಂದೋಳ/ಮಾಲಕೌಂಸ್ ರೀತಿಯಲ್ಲಿ ಕೇಳಲಿಚ್ಛಿಸುವಿರಾದರೆ ಇಲ್ಲಿ ಕ್ಲಿಕ್ಕಿಸಿ.] * * * *Thursday Sep 27, 2012
Amruthadantha Abheri
Thursday Sep 27, 2012
Thursday Sep 27, 2012
ದಿನಾಂಕ 28 ಸೆಪ್ಟೆಂಬರ್ 2012
ಅಮೃತಕ್ಕಿಂತಲೂ ರುಚಿ ‘ಅಭೇರಿ’
* ಶ್ರೀವತ್ಸ ಜೋಶಿ
ಶಿವರಂಜನಿ, ಕಲ್ಯಾಣಿ, ಮೋಹನ, ಮಧ್ಯಮಾವತಿ,... ಒಂದಕ್ಕಿಂತ ಒಂದು ಜನಪ್ರಿಯ ರಾಗಗಳ ರಸಾಯನ ಸವಿದೆವು. ಮುಂದಿನದು ಯಾವುದೆಂಬ ಕುತೂಹಲ, ನಿಮಗೂ ನನಗೂ! ಜನಪ್ರಿಯತೆಯಲ್ಲಿ, ಪ್ರಖ್ಯಾತಿಯಲ್ಲಿ ಆ ನಾಲ್ಕು ರಾಗಗಳಿಗೆ ಯಾವುದೇ ರೀತಿಯಲ್ಲಿ ಕಮ್ಮಿಯಿಲ್ಲದ್ದು ‘ಅಭೇರಿ’. ಇದು ದೈವಿಕ ರಾಗ, ದೇವರೇ ಸೃಷ್ಟಿಸಿದ್ದಂತೆ, ಅಂದಮೇಲೆ ದೇವರಿಗೆ ಇಷ್ಟದ್ದೂ ಆಗಿರಬೇಕು. ಮುತ್ತುಸ್ವಾಮಿ ದೀಕ್ಷಿತರು ಇದನ್ನು ’ದೇವಗಾಂಧಾರಂ’ ಎಂದೇ ಕರೆದಿದ್ದರಂತೆ. ಶಾಸ್ತ್ರೀಯ ಸಂಗೀತ ಪಠ್ಯಪುಸ್ತಕಗಳಲ್ಲಿ ಕರ್ನಾಟಕದೇವಗಾಂಧಾರಿ ಎಂಬ ಹೆಸರೂ ಈ ರಾಗಕ್ಕಿದೆ. ಅಂತೂ ದೇವರಿಗೆ ಹತ್ತಿರವಾದದ್ದಂತೂ ಹೌದು. 22ನೇ ಮೇಳಕರ್ತ ರಾಗ ‘ಖರಹರಪ್ರಿಯ’ದಿಂದ ಜನ್ಯ ರಾಗ ಇದು. ಆರೋಹಣದಲ್ಲಿ ಐದೇ ಸ್ವರಗಳು ("ಸ ಗ2 ಮ1 ಪ ನಿ2 ಸ") ; ಅವರೋಹಣದಲ್ಲಿ ಏಳೂ ಸ್ವರಗಳು (ಸ ನಿ2 ದ2 ಪ ಮ1 ಗ2 ರಿ2 ಸ) ಬಳಕೆಯಾಗುತ್ತವೆ. ಇಂಥವನ್ನು ಔಡವ-ಸಂಪೂರ್ಣ ರಾಗಗಳು ಎನ್ನುತ್ತಾರೆ (ಔಡವ ಎಂದರೆ ಐದು ಸ್ವರಗಳ, ಸಂಪೂರ್ಣ ಎಂದರೆ ಎಲ್ಲ ಏಳು ಸ್ವರಗಳ ಬಳಕೆ). ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಅಭೇರಿ ರಾಗಕ್ಕೆ ಸರಿಸುಮಾರಾಗಿ ಹತ್ತಿರವಾದದ್ದು ‘ಭೀಮ್ಪಲಾಸ್’ ಎಂಬ ರಾಗ. ಅದನ್ನು ’ಭೀಮ್ಪಲಾಸಿ’ ಎಂದೂ ಕರೆಯುತ್ತಾರೆ. ಹಿಂದುಸ್ಥಾನೀ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಸಂಗೀತದಲ್ಲಿ, ಹಿಂದಿ ಚಿತ್ರಗೀತೆಗಳಲ್ಲೂ ಭೀಮ್ಪಲಾಸ್ ರಾಗ ಪ್ರಮುಖ ಸ್ಥಾನ ಗಳಿಸಿದೆ. ಅಷ್ಟು ಕಿರುಪರಿಚಯ ಸಾಕು, ಈಗಿನ್ನು ರಾಗರಸಾಯನದ ಅಮೃತಪಾನ! * * * ತಿರುವಿಳ ಜಯಶಂಕರ್ ಅವರ ನಾದಸ್ವರ ವಾದನದಿಂದ ಈ ಕಾರ್ಯಕ್ರಮವನ್ನು ಆರಂಭಿಸೋಣ. ಅಭೇರಿ ರಾಗದಲ್ಲಿ "ಭಜರೇ ಮಾನಸ" ಎಂಬ ಕೃತಿ. ಮೈಸೂರು ವಾಸುದೇವಾಚಾರ್ಯರ ರಚನೆ. [youtube=http://www.youtube.com/watch?v=_SBDHfaWHgg] [ಯೂಟ್ಯೂಬ್ ಲಿಮಿಟೇಶನ್ನಿಂದಾಗಿ ಕೃತಿಯ ಪೂರ್ವಾರ್ಧವಷ್ಟೇ ಈ ವಿಡಿಯೋದಲ್ಲಿರುವುದು. ಉತ್ತರಾರ್ಧವನ್ನು ಕೇಳಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಬಹುದು.] *** *** *** *** *** *** *** ಒಂದು ಜನಪ್ರಿಯ ಕನ್ನಡ ಭಕ್ತಿಗೀತೆ, ಶೃಂಗೇರಿ ಶಾರದೆಯನ್ನು ಸ್ತುತಿಸುವ "ಇವಳೇ ವೀಣಾಪಾಣಿ ವಾಣಿ ತುಂಗಾತೀರವಿಹಾರಿಣಿ...". ಇದು ಆರ್.ಎನ್.ಜಯಗೋಪಾಲ್ ಅವರ ರಚನೆ, ಎಂ.ರಂಗರಾವ್ ಅವರ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಹಾಡಿದ್ದಾರೆ. ಅಭೇರಿ ರಾಗಕ್ಕೆ ಒಳ್ಳೆಯ ಉದಾಹರಣೆ ಎನ್ನುತ್ತಾರೆ ಅಷ್ಟಿಷ್ಟು ಸಂಗೀತ ಬಲ್ಲವರು. [youtube=http://www.youtube.com/watch?v=e13IayEM8Bc] *** *** *** *** *** *** *** ಎಲ್.ಶಂಕರ್ ಹೆಸರು ನೀವು ಕೇಳಿರಬಹುದು. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ವಯಲಿನ್ ವಾದಕ. ಏಳರ ಹುಡುಗನಾಗಿದ್ದಾಗಲೇ ಮೊತ್ತಮೊದಲ ಪೂರ್ಣಪ್ರಮಾಣದ ಸಂಗೀತಕಛೇರಿ ಕೊಟ್ಟವರು! ಎಲ್.ಶಂಕರ್, ಎಲ್.ಸುಬ್ರಹ್ಮಣ್ಯಮ್, ಮತ್ತು ಎಲ್.ವೈದ್ಯನಾಥನ್- ಇವರು ಮೂವರೂ ಒಡಹುಟ್ಟಿದವರು. ಮೊದಲ ಇಬ್ಬರು ವಯಲಿನ್ ವಾದನದಲ್ಲೂ, ಮೂರನೆಯವರು ಚಲನಚಿತ್ರಸಂಗೀತ ಕ್ಷೇತ್ರದಲ್ಲೂ ಕೀರ್ತಿಶಿಖರವೇರಿದವರು. ಎಲ್.ಶಂಕರ್ 1995ರಲ್ಲಿ ಬಿಡುಗಡೆ ಮಾಡಿದ "Raga Abheri- Music Of The World" ಸಿ.ಡಿಯಿಂದ ಅಭೇರಿ ರಾಗದ ಆಲಾಪನೆಯ track ಇಲ್ಲಿದೆ. ಡಬಲ್ ವಯಲಿಲ್ನಲ್ಲಿ ನುಡಿಸಿರುವ ಇದು Grammy awardsಗೆ ಸಹ ಆಯ್ಕೆಯಾಗಿತ್ತು. [youtube=http://www.youtube.com/watch?v=YYD7b-oXduU] [ಸುಮಾರು 40 ನಿಮಿಷಗಳಷ್ಟು ಅವಧಿಯ ಆಲಾಪನೆ ಮತ್ತು ಸ್ವರಪ್ರಸ್ತಾರದ ಮೊದಲ ಭಾಗವನ್ನು ಕೇಳಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಬಹುದು. ] *** *** *** *** *** *** *** ಅಭೇರಿ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ "the example" ಎಂದರೆ ತ್ಯಾಗರಾಜರ ‘ನಗುಮೋಮು ಗನಲೇನಿ...’ ಅತ್ಯಂತ ಜನಪ್ರಿಯವಾಗಿರುವ ಕೃತಿ. ದೊಡ್ಡದೊಡ್ಡ ಸಂಗೀತವಿದ್ವಾಂಸರಿಂದ ಹಿಡಿದು ಅರುಣಪ್ರತಿಭೆಗಳೂ ಸಂಗೀತಕಛೇರಿಗೆ ಕಳೆಕಟ್ಟಲು ಹಾಡುವ ಕೃತಿ. ಅಂದಮೇಲೆ ಅಭೇರಿ ರಾಗರಸಾಯನದಲ್ಲಿ ಅದಿಲ್ಲದಿರಲು ಸಾಧ್ಯವೇ? ಯಾವ ಕಲಾವಿದರು ಹಾಡಿದ್ದನ್ನು / ನುಡಿಸಿದ್ದನ್ನು ಆಯ್ದುಕೊಳ್ಳುವುದು ಎಂಬುದೇ ಸಮಸ್ಯೆ. ಎಂ.ಬಾಲಮುರಳಿಕೃಷ್ಣ ಅವರ ಗಾಯನದಲ್ಲಿರುವುದಂತೂ ಸಾರ್ವಕಾಲಿಕ ಶ್ರೇಷ್ಠವಾದುದು. ಅದನ್ನು ಆಮೇಲೆ ಕೇಳುವವರಿದ್ದೇವೆ, ಈಗ ಮ್ಯಾಂಡೋಲಿನ್ ವಾದನದಲ್ಲಿ ’ನಗುಮೊಮು...’. ನುಡಿಸಿರುವ ಕಲಾವಿದ ವಿಕಾಸ್ ರಾಮದಾಸ್. ಈತ ಮ್ಯಾಂಡೋಲಿನ್ ಯು.ಶ್ರೀನಿವಾಸ್ ಅವರ ಶಿಷ್ಯ. ಗುರುವಿಗೆ ಸರಿಸಾಟಿಯೆನಿಸುವ ಪ್ರತಿಭೆ! [youtube=http://www.youtube.com/watch?v=0rgF4N90uMQ] *** *** *** *** *** *** *** ಇನ್ನು ಒಂದಿಷ್ಟು ಕನ್ನಡ ಚಿತ್ರಗೀತೆಗಳನ್ನು ಸವಿಯಬೇಕು. ಅಭೇರಿ (ಅಥವಾ ಭೀಮ್ಪಲಾಸ್) ರಾಗವನ್ನು ಆಧರಿಸಿದ ಚಿತ್ರಗೀತೆಗಳು ತುಂಬಾ ಇವೆ. ಅವೆಲ್ಲವೂ ಜನಪ್ರಿಯ ಚಿತ್ರಗೀತೆಗಳೇ ಆಗಿವೆ. ಬಹುಶಃ ಚಿತ್ರಸಂಗೀತಕ್ಕೆ ಚೆನ್ನಾಗಿ ಒಪ್ಪುವ ರಾಗ ಅಭೇರಿ. ಇಲ್ಲಿ ಖ್ಯಾತ ಕೊಳಲುವಾದಕ ಪ್ರವೀಣ ಗೋಡಖಿಂಡಿ ಅವರ "ರಾಗಿಣಿ" (ನನ್ನ ನೆಚ್ಚಿನ ಸಿ.ಡಿಗಳಲ್ಲೊಂದು) ಆಲ್ಬಮ್ನಿಂದ ಎತ್ತಿಕೊಂಡಿರುವ ಒಂದು ಟ್ರ್ಯಾಕ್ ಇದೆ. ಭೀಮ್ಪಲಾಸ್ ರಾಗ ಆಧರಿಸಿದ ಕನ್ನಡ ಚಿತ್ರಗೀತೆಗಳ medley. ಇದರಲ್ಲಿರುವ ಮೂರು ಅತ್ಯಂತ ಜನಪ್ರಿಯ ಹಾಡುಗಳು ಯಾವುವೆಂದು ನೀವೇ ಕಂಡುಕೊಳ್ಳುವಿರಂತೆ. [youtube=http://www.youtube.com/watch?v=a4nzB3P80-Q] [ಈ flute-medleyಯಲ್ಲಿರುವ ಹಾಡುಗಳನ್ನು ಪ್ರತ್ಯೇಕವಾಗಿ ಸವಿಯಲಿಚ್ಛಿಸುವವರು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಕ್ಲಿಕ್ಕಿಸಬಹುದು.] *** *** *** *** *** *** *** ದೇವರ ಕಣ್ಣು ಚಿತ್ರದ "ನಿನ್ನ ನೀನು ಮರೆತರೇನು ಸುಖವಿದೆ" ಅಭೇರಿಗೊಂದು ಉದಾಹರಣೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಆವೃತ್ತಿಯೂ ಇದೆ, ಪಿ.ಸುಶೀಲಾ (ಸ್ವಲ್ಪ ‘ಅನುನಾಸಿಕ’ವಾಗಿ) ಹಾಡಿದ್ದೂ ಇದೆ. ನಾವೀಗ ಕೇಳಲಿರುವುದು ಅದೇ. ಚಿ.ಉದಯಶಂಕರ್ ರಚನೆ, ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ. [youtube=http://www.youtube.com/watch?v=1LXichRJweE] *** *** *** *** *** *** *** ‘ಹೊಸಬೆಳಕು’ ಚಿತ್ರದಲ್ಲಿ ಡಾ.ರಾಜಕುಮಾರ್ ಹಾಡಿರುವ “ಚೆಲುವೆಯೇ ನಿನ್ನ ನೋಡಲು... ಮಾತುಗಳು ಬರದವನು..." ಸಹ ಅಭೇರಿ ರಾಗ ಆಧಾರಿತ ಎಂದು ನನ್ನೊಬ್ಬ ಸಂಗೀತಜ್ಞ ಸ್ನೇಹಿತರ ಬ್ಲಾಗ್ನಿಂದ ತಿಳಿದುಕೊಂಡಿದ್ದೇನೆ. ಇದು ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಚಿ.ಉದಯಶಂಕರ್ ರಚನೆ. ಈ ವಿಡಿಯೋ ಗುಣಮಟ್ಟ ಅಷ್ಟೇನೂ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮೆಯಿರಲಿ. [youtube=http://www.youtube.com/watch?v=aq-YhrSxMtA] *** *** *** *** *** *** *** ರಾಗ ಆಧಾರಿತ ಚಿತ್ರಗೀತೆಗಳ ಪ್ರಸ್ತಾಪ ಮಾಡುವಾಗ ಕಡ್ಡಾಯವಾಗಿ ನೆನಪಲ್ಲಿಟ್ಟುಕೊಳ್ಳಬೇಕಾದ್ದೆಂದರೆ ಚಿತ್ರಗೀತೆ ಪೂರ್ಣವಾಗಿ ಒಂದೇ ರಾಗದಲ್ಲಿ ಇರುವುದಿಲ್ಲ. ಪಲ್ಲವಿ ಅಥವಾ ಚರಣದ ಯಾವುದೋ ಒಂದು ಸಾಲು ಅಥವಾ interlude musicನಲ್ಲಷ್ಟೇ ರಾಗದ ಛಾಯೆ ಕಂಡುಬರುವುದೂ ಇದೆ. ಆ ಹಾಡು ಇಂಥ ರಾಗದಲ್ಲಿದೆ ಎಂದು ಹೇಳಲಿಕ್ಕೆ ಅದು ಎಷ್ಟು ಸಬಲ ಪುರಾವೆ ಎನ್ನುವುದು ಅವರವರ ಸಂಗೀತಜ್ಞಾನಕ್ಕೆ ಬಿಟ್ಟದ್ದು. ಹಾಗೆ ನೋಡಿದರೆ, 'ಬಂಗಾರದ ಮನುಷ್ಯ’ ಚಿತ್ರ ಆರಂಭವಾಗುವ ‘ನಗುನಗುತಾ ನಲಿ ನಲಿ...’ ಹಾಡಿನಲ್ಲೂ ಅಭೇರಿ ಇದೆ ಎನ್ನುತ್ತಾರೆ ಕೆಲವರು. ಇರಲಿ, ಅಷ್ಟು ಸಾಕು ನಮ್ಮ ರಾಗರಸಾಯನದಲ್ಲಿ ಆ ಅತ್ಯುತ್ತಮ ಹಾಡು ಸೇರಿಕೊಳ್ಳಲು! ಹುಣಸೂರು ಕೃಷ್ಣಮೂರ್ತಿ ರಚನೆ, ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವ ಗೀತೆ- [youtube=http://www.youtube.com/watch?v=vywkneeLvYM] *** *** *** *** *** *** *** ಡಾ.ರಾಜಕುಮಾರ್ ಅವರದೇ ಇನ್ನೊಂದು ಚಿತ್ರರತ್ನ ‘ಸಾಕ್ಷಾತ್ಕಾರ’. ಇದರಲ್ಲಿನ ಶೀರ್ಷಿಕೆಗೀತೆ "ಒಲವೇ ಜೀವನ ಸಾಕ್ಷಾತ್ಕಾರ..." ಕೇಳುತ್ತಿದ್ದರೆ ಎಂಥ ಶುಷ್ಕಹೃದಯಿಗಳಿಗೂ ತಂಪೆರೆದು ಒಲವು ಚಿಗುರಬಲ್ಲದು! ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ ದುಂಬಿಯ ಹಾಡಿನ ಝೇಂಕಾರದಲ್ಲೂ ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ... ತುಂಬಿದೆ ಒಲವಿನ ಸಾಕ್ಷಾತ್ಕಾರ. ಈ ಹಾಡಿನಲ್ಲೂ ಅಲ್ಲಲ್ಲಿ ಅಭೇರಿ ರಾಗ ಇಣುಕಿದೆ ಎನ್ನುತ್ತಾರೆ ಸಂಗೀತ ಬಲ್ಲವರು. One of the all time favorites ಎಂದು ಅದೆಷ್ಟು ಜನ ಈ ಹಾಡನ್ನು ಮೆಚ್ಚಿಕೊಂಡಿದ್ದಾರೋ! ಕಣಗಾಲ್ ಪ್ರಭಾಕರ ಶಾಸ್ತ್ರಿ ರಚನೆ, ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಡಾ.ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ. ಪಿ.ಸುಶೀಲಾ ಹಾಡಿದ ಆವೃತ್ತಿಯೂ ಇದೆ. ಇಬ್ಬರೂ ಯುಗಳಗೀತೆಯಾಗಿ ಹಾಡಿದ್ದೂ ಇದೆ. [youtube=http://www.youtube.com/watch?v=Z5G1dEErCxc] *** *** *** *** *** *** *** ರಾಗರಸಾಯನದಲ್ಲಿ ನಾನು ಹೆಚ್ಚಾಗಿ ಕನ್ನಡ ಮತ್ತು ಹಿಂದಿ ಅಷ್ಟೇ ಅಲ್ಲದೇ ತೆಲುಗು ಮಲಯಾಳಂ ಮುಂತಾದ ಭಾಷೆಗಳ ಚಿತ್ರಗೀತೆಗಳನ್ನೂ ವೈವಿಧ್ಯಕ್ಕೋಸ್ಕರ ಬೆರೆಸುತ್ತೇನೆ. ಅವು ಎಲ್ಲರಿಗೂ ಅರ್ಥವಾಗದಿದ್ದರೂ ಕೇಳಲು ಮಧುರವಾಗಿರುತ್ತವೆ ಎಂಬ ಕಾರಣಕ್ಕಾಗಿ. ಇವತ್ತಿನ ‘ಅಭೇರಿ’ಯ ಮಟ್ಟಿಗೆ ಇದೊಂದು ತಮಿಳು ಚಿತ್ರಗೀತೆಯನ್ನು ಸೇರಿಸದಿದ್ದರೆ ರಸಾಯನದ ರುಚಿ ಪರಿಪೂರ್ಣವೆನಿಸದು. ಏಕೆಂದರೆ ಅಭೇರಿ ರಾಗಕ್ಕೆ ಅಪ್ಪಟ ಉದಾಹರಣೆ ಈ ಹಾಡು. ‘ಕೊಂಜುಂ ಸಲಂಗೈ’ ಚಿತ್ರದ “ಸಿಂಗಾರವೇಲನೇ ದೇವಾ..." ಇದನ್ನು ಎಸ್.ಜಾನಕಿ ಅವರ ಕಂಠದಲ್ಲಿ ಧ್ವನಿಮುದ್ರಿಸಿಕೊಂಡಮೇಲೆ ಕಾರೈಕುರುಚ್ಚಿ ಪಿ.ಅರುಣಾಚಲಂ ಅವರ ನಾದಸ್ವರ ಧ್ವನಿಯನ್ನು ಸೇರಿಸಿದ್ದಂತೆ. ಆದರೆ ಹಾಡುಗಾರಿಕೆ ಮತ್ತು ನಾದಸ್ವರ ಜುಗಲ್ಬಂದಿಯೋ ಎಂಬಂತೆ ಅದ್ಭುತವಾಗಿ ಮೂಡಿಬಂದಿದೆ. ಆ ಕಾಲದಲ್ಲಿ ಎಚ್ಎಂವಿ ಸಂಸ್ಥೆ 78rpm ಧ್ವನಿತಟ್ಟೆಗಳಲ್ಲಿ ಹಾಡುಗಳನ್ನು ಮುದ್ರಿಸುತ್ತಿದ್ದಾಗ ಈ ಹಾಡಿನ ಡಿಸ್ಕ್ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿತ್ತಂತೆ. [youtube=http://www.youtube.com/watch?v=oDRgGpEwSYw] *** *** *** *** *** *** *** ಒಂದು ಸಾಲದೆಂಬಂತೆ ಇನ್ನೊಂದು ತಮಿಳು ಚಿತ್ರಗೀತೆ, ಇದು ಎ.ಆರ್.ರೆಹಮಾನ್ ಸಂಗೀತನಿರ್ದೇಶನದ ‘ಜೀನ್ಸ್’ ಚಿತ್ರದಲ್ಲಿ ನಿತ್ಯಶ್ರೀ ಮಹಾದೇವನ್ ಹಾಡಿರುವ “ ಕಣ್ಣೋಡು ಕಾಣ್ಬದೆಲ್ಲ ತಲೈವಾ ಕಣ್ಗಳಿಕ್ಕ್..." ಹಾಡು. ಎ.ಆರ್.ರೆಹಮಾನ್ ಸಂಗೀತ ಇದರ ಜನಪ್ರಿಯತೆಗೆ ಎಷ್ಟು ಕಾರಣವಾಯ್ತು ಅಷ್ಟೇ ಕಾರಣ ಐಶ್ವರ್ಯಾ ರೈಯ ಅಭಿನಯ ಮತು ನರ್ತನ ಕೂಡ! [youtube=http://www.youtube.com/watch?v=fZXlCdySjcg] *** *** *** *** *** *** *** ಇನ್ನೊಂದು ಮಲಯಾಳಂ ಚಿತ್ರಗೀತೆ. 2009ರಲ್ಲಿ ಬಿಡುಗಡೆಯಾದ, ಪ್ರಶಸ್ತಿಗಳ ಕೊಳ್ಳೆಹೊಡೆದ ‘ಪಳಸ್ಸಿರಾಜಾ’ ಮಲಯಾಳಂ ಚಿತ್ರಕ್ಕಾಗಿ ಇಳಯರಾಜ ಸಂಗೀತ ನಿರ್ದೇಶನದಲ್ಲಿ ಕೆ.ಎಸ್.ಚಿತ್ರಾ ಹಾಡಿರುವ “ಕುಞತ್ತೆ ಕೊನ್ನಕ್ಕುಮ್..." ಈ ಹಾಡಿನ ವಿಡಿಯೋ ನೋಡಿದರೆ ಇಡೀ ಸಿನೆಮಾವನ್ನೇ ನೋಡಬೇಕೆನ್ನಿಸುವುದು ಸುಳ್ಳಲ್ಲ. [youtube=http://www.youtube.com/watch?v=lFNiJQ49lOE] *** *** *** *** *** *** *** ಈಗ ಒಂದು ತೆಲುಗು ಚಿತ್ರಗೀತೆ. ‘ಅಭಿನಂದನ’ ಚಿತ್ರದಲ್ಲಿ ಇಳಯರಾಜಾ ಸಂಗೀತ ನಿರ್ದೇಶನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಹಾಡಿರುವ "ಮಂಚು ಕುರಿಸೇ ವೇಳಲೋ..." ಇದು ಕೂಡ ಸುಮಾರಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಚಿತ್ರ. [youtube=http://www.youtube.com/watch?v=PMKN_-ajH1o] *** *** *** *** *** *** *** ಪ್ರಾದೇಶಿಕ ಭಾಷೆಯ ಚಿತ್ರಗೀತೆಗಳ ನಂತರ ಈಗ ಕೆಲವು ಹಿಂದಿ ಚಿತ್ರಗೀತೆಗಳನ್ನು ಸವಿಯೋಣ. ಭೀಮ್ಪಲಾಸ್ ರಾಗ ಆಧರಿಸಿದ ಇವೆಲ್ಲವೂ ಜನಪ್ರಿಯ ಗೀತೆಗಳು. ಮೊದಲಿಗೆ "ಮೇರಾ ಸಾಯಾ" ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿರುವ “ನೈನೋ ಮೇಂ ಬದರಾ ಛಾಯೇ." ಇದರ ಸಾಹಿತ್ಯ ರಾಜಾ ಮೆಹದೀ ಅಲಿಖಾನ್ ಅವರದು, ಸಂಗೀತ ನಿರ್ದೇಶನ ಮದನ್ ಮೋಹನ್. [youtube=http://www.youtube.com/watch?v=-bC44XZU0FA] *** *** *** *** *** *** *** ‘ಯಾದೇಂ’ ಚಿತ್ರಕ್ಕಾಗಿ ಅನು ಮಲ್ಲಿಕ್ ಸಂಗೀತ ನಿರ್ದೇಶನದಲ್ಲಿ ಕವಿತಾ ಕೃಷ್ಣಮೂರ್ತಿ, ಅಲ್ಕಾ ಯಾಗ್ನಿಕ್, ಹೇಮಾ ಸರ್ದೇಸಾಯ್ ಮತ್ತು ಉದಿತ್ ನಾರಾಯಣ್ ಹಾಡಿರುವ "ಏಲೀ ರೇ ಏಲೀ ಕ್ಯಾ ಹೇ ಯೇ ಪಹೇಲಿ..." ಆನಂದ್ ಬಕ್ಷಿ ಅವರ ಸಾಹಿತ್ಯ. [youtube=http://www.youtube.com/watch?v=i7nOnw1riyU] *** *** *** *** *** *** *** ಶಶಿಕಪೂರ್ ಅಭಿನಯದಲ್ಲಿ ಎಷ್ಟು ತಾಜಾತನವೋ ಅಷ್ಟೇ ತಾಜಾತನ ಕಿಶೋರ್ ಕುಮಾರ್ ಹಿನ್ನೆಲೆಗಾಯನದಲ್ಲಿ. ಅರಳುವ ಹೂವುಗಳ ಉಪಮೆ ಎಂದಮೇಲೆ ಕೇಳಬೇಕೇ, ಮತ್ತಷ್ಟು ತಾಜಾತನ. ಅಂಥ ಸೂಪರ್ ಫ್ರೆಶ್ ಹಾಡು ಇವತ್ತಿಗೂ ತಾಜಾ ಅನಿಸುವಂಥದು "ಶರ್ಮೀಲೀ" ಚಿತ್ರದ “ಖಿಲ್ತೆ ಹೈಂ ಗುಲ್ ಯಹಾಂ..." ಇದು ನೀರಜ್ ಅವರ ರಚನೆ, ಸಂಗೀತಕ್ಕೆ ಅಳವಡಿಸಿದವರು ಎಸ್.ಡಿ.ಬರ್ಮನ್. [youtube=http://www.youtube.com/watch?v=571G9MzqgNU] *** *** *** *** *** *** *** ಅನಿಲ್ ಕಪೂರ್, ಮಾಧುರಿ ದೀಕ್ಷಿತ್ ಅಭಿನಯದ ‘ಪುಕಾರ್’ ಚಿತ್ರದಲ್ಲಿ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಅನುರಾಧಾ ಪೌಡ್ವಾಲ್ ಮತ್ತು ಸೋನು ನಿಗಮ್ ಹಾಡಿರುವ "ಕಿಸ್ಮತ್ ಸೇ ತುಮ್ ಹಮ್ಕೊ ಮಿಲೇ ಹೋ...." ನನಗೆ ತುಂಬ ಇಷ್ಟದ್ದು. ಈ ಹಾಡಿನ ಸಾಹಿತ್ಯ ಜಾವೇದ್ ಅಖ್ತರ್ ಅವರದು. [youtube=http://www.youtube.com/watch?v=ZFQudP-UzdM] *** *** *** *** *** *** *** ಶಾಸ್ತ್ರೀಯ ರಾಗ ಆಧಾರಿತ ಹಾಡುಗಳೆಂದರೆ ಸ್ವಲ್ಪ ಗಂಭೀರವಾಗಿ, ಕಿವಿಗಳಿಗೂ ಹೃದಯಕ್ಕೂ ಮನಸ್ಸಿಗೂ ತಂಪನೆರೆಯುವಂತೆ ಜುಳುಜುಳು ನದಿ ಹರಿಯುವಂತೆ ಇರುತ್ತವೆಂದು ತಿಳಿದುಕೊಳ್ಳುತ್ತೇವೆ. ಆದರೆ ಇಲ್ಲೊಂದು ಅಭೇರಿ/ಭೀಮ್ಪಲಾಸ್ ಉದಾಹರಣೆಯನ್ನು ನೋಡಿದರೆ ಆ ನಂಬಿಕೆ ತಲೆಕೆಳಗಾಗಬಹುದು! ಮೊಹ್ರಾ ಚಿತ್ರದ, ವಿಜು ಶಾ ಸಂಗೀತ ನಿರ್ದೇಶನದ ‘ತೂ ಚೀಜ್ ಬಡೀ ಹೈ ಮಸ್ತ್ ಮಸ್ತ್...’ ಹಾಡು ಭೀಮ್ಪಲಾಸ್ ರಾಗದ ಗಾಢ ಛಾಯೆ ಹೊಂದಿದೆ ಎಂದರೆ ನಂಬಲಿಕ್ಕೇ ಆಗುವುದಿಲ್ಲ. ಆದರೂ ನಿಜ. ಪ್ರವೀಣ್ ಗೋಡಿಖಿಂಡಿಯವರು ಒಮ್ಮೆ ಇಲ್ಲಿ ವಾಷಿಂಗ್ಟನ್ನಲ್ಲಿ ಒಂದು ಕಾರ್ಯಕ್ರಮ ನಡೆಸಿದ್ದಾಗ ಈ ಹಾಡನ್ನು ಅಭೇರಿ ರಾಗದ ಪ್ರಾತ್ಯಕ್ಷಿಕೆ ರೂಪದಲ್ಲಿ ಪ್ರಸ್ತುತಪಡಿಸಿದ್ದರು. [youtube=http://www.youtube.com/watch?v=CGKWYIs7SZQ] *** *** *** *** *** *** *** ಈಗ ಒಂದು ಫ್ಯೂಷನ್ ಪ್ರಯೋಗವನ್ನು ನೋಡೋಣ. Listen To The Colour ಆಲ್ಬಮ್ನಿಂದ ಭೀಮ್ಪಲಾಸ್ ರಾಗದ ಒಂದು ‘ಖಿಚಡಿ’. ಕೀಬೋರ್ಶ್, ರಿದಂಪ್ಯಾಡ್ಸ್, ಗಿಟಾರ್, ಸಂತೂರ್ ಮತ್ತಿತರ ವಾದ್ಯಗಳೆಲ್ಲ ಇದರಲ್ಲಿ ಕೇಳಿಸುತ್ತವೆ. ಅದಕ್ಕೇ ಖಿಚಡಿ ಎಂದದ್ದು, ಚೆನ್ನಾಗಿದೆ! [youtube=http://www.youtube.com/watch?v=nFBI-hAK7pA] *** *** *** *** *** *** *** ನಾರಾಯಣ ಮಣಿ ಅವರ ವೀಣೆ ಮತ್ತು ಉಲ್ಲಾಸ್ ಬಾಪಟ್ ಅವರ ಸಂತೂರ್ ವಾದನ ಜುಗಲ್ಬಂದಿಯಲ್ಲಿ ರಾಗ ಭೀಮ್ಪಲಾಸ್. ಇದು, Conversations- A Musical Integration Of Veena & Santoor ಎಂಬ ಆಲ್ಬಮ್ನಿಂದ ಆಯ್ದುಕೊಂಡಿರುವುದು. ಎಂಜಿನಿಯರಿಂಗ್ ಮುಗಿಸಿ ನಾನು ದೆಹಲಿಯಲ್ಲಿ ಟ್ರೈನಿಯಾಗಿ ಉದ್ಯೋಗಕ್ಕೆ ಸೇರಿದ್ದಾಗ ಮೊದಲ ಸಂಬಳದ ಸದ್ವಿನಿಯೋಗದಲ್ಲಿ ಕೆಲವು ಮ್ಯೂಸಿಕ್ ಸಿ.ಡಿಗಳನ್ನು ಖರೀದಿಸಿದ್ದೆ, ಅವುಗಳ ಪೈಕಿ ಇದೂ ಒಂದು. ಆ ಮಟ್ಟಿಗೆ ನನಗೆ ಸ್ವಲ್ಪ ಸ್ಪೆಷಲ್. ಆದರೆ ಇದನ್ನು ಕೇಳಿದರೆ ನೀವೂ ಖಂಡಿತ ಇಷ್ಟಪಡುತ್ತೀರಿ. ’ಗಂಡು’ಧ್ವನಿಯಂತಿರುವ ವೀಣೆ, ಕಚಗುಳಿಯಿಡುವ ಚಂದದ ಹೆಣ್ಣಿನಂಥ ಸಂತೂರ್ನೊಂದಿಗೆ ಸಂಗೀತರೂಪದಲ್ಲಿ ಸಂಭಾಷಿಸುತ್ತಿದೆಯೋ ಎಂಬ ಅನುಭವ! [youtube=http://www.youtube.com/watch?v=UgUWac083yU] *** *** *** *** *** *** *** ಪಾಕಿಸ್ತಾನದ ಶ್ರೇಷ್ಠ ಗಾಯಕ, ಇತ್ತೀಚೆಗೆ ನಿಧನಹೊಂದಿದ ಮಹಾನ್ ಕಲಾವಿದ ಮೆಹದೀ ಹಸನ್ ಹಾಡಿರುವ ಒಂದು ಗಝಲ್- “ಜಿಂದಗೀ ಮೆ ತೊ ಸಭೀ..." ಇದರ ಕಿರುರೂಪವನ್ನು ‘ಅಜ್ಮತ್’ ಚಿತ್ರದಲ್ಲೂ ಅಳವಡಿಸಿಕೊಳ್ಳಲಾಗಿತ್ತು. ಇಲ್ಲಿರುವ ವಿಡಿಯೋ ಮೆಹದೀ ಹಸನ್ ಅವರ ಲೈವ್ ಕಾರ್ಯಕ್ರಮದ್ದು. ಇದರಲ್ಲಿ ಇನ್ನೊಬ್ಬ ಗಜಲ್ ಗಾಯಕ ಗುಲಾಂ ಅಲಿ ಸಹ ಒಬ್ಬ ಶ್ರೋತೃವಾಗಿ ಕಾಣಿಸಿಕೊಳ್ಳುತ್ತಾರೆ. [youtube=http://www.youtube.com/watch?v=KIWvaupRGBo] *** *** *** *** *** *** *** ಗಝಲ್ನ ನಂತರ ಈಗೊಂದು ಶುದ್ಧ ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ ಝಲಕ್. ಭೀಮ್ಪಲಾಸ್ ರಾಗದ ವಿವರಣೆ ಉಸ್ತಾದ್ ಶುಜಾತ್ ಖಾನ್ ಅವರಿಂದ, ಆಮೇಲೆ ಅಶ್ವಿನಿ ಭಿಡೆ ಅವರ ಗಾಯನದಲ್ಲಿ "ಜಾ ಜಾ ರೇ ಅಪ್ನೇ ಮಂದಿರ್ವಾ..." [youtube=http://www.youtube.com/watch?v=xc6VwKWhf3c] *** *** *** *** *** *** *** ಮತ್ತೆ ಅಭೇರಿಯತ್ತ ಮರಳಿದರೆ ಕನ್ನಡದ ಭಕ್ತಿಗೀತೆಗಳು ಮತ್ತು ಭಜನೆಗಳ ಸಾಲುಸಾಲೇ ಇದೆ. ಪುರಂದರ ದಾಸರ ರಚನೆ “ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ..."ಯನ್ನು ಅಭೇರಿ ರಾಗದಲ್ಲಿ ಹಾಡಿದ್ದಾರೆ ಪ್ರಿಯಾ ಸಹೋದರಿಯರು (ಷಣ್ಮುಖಪ್ರಿಯಾ ಮತು ಹರಿಪ್ರಿಯಾ). [youtube=http://www.youtube.com/watch?v=rcQEKbWT-co] *** *** *** *** *** *** *** ಅದಕ್ಕಿಂತಲೂ ತುಂಬಾ ಜನಪ್ರಿಯ ಭಜನೆ ಎಂದರೆ ಪುರಂದರದಾಸರದೇ ರಚನೆ "ಅಂಬಿಗ ನಾ ನಿನ್ನ ನಂಬಿದೆ." ಇದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲೂ ಹಾಡಲಾಗುತ್ತದೆ. ಖ್ಯಾತ ಕಲಾವಿದರ ಧ್ವನಿಸುರುಳಿಗಳಲ್ಲೂ ಈ ಕೀರ್ತನೆ ಕಾಣಿಸಿಕೊಳ್ಳುತ್ತದೆ. ಆದರೆ ರಾಗರಸಾಯನಕ್ಕೆ ಯೂಟ್ಯೂಬ್ ವಿಡಿಯೋಗಳನ್ನು ಹುಡುಕುವಾಗ ನಾನು ಬೇಕಂತಲೇ ಈ ಹಾಡು ‘ಭಜನೆ’ರೂಪದಲ್ಲಿ ಇರುವುದನ್ನೇ ಆಯ್ದುಕೊಳ್ಳಬೇಕೆಂದುಕೊಂಡಿದ್ದೆ. ಅಮೆರಿಕದ ಸೌತ್ ಕೆರೊಲಿನಾ ಸಂಸ್ಥಾನದ ಕನ್ನಡಿಗರು ಕಳೆದ ವರ್ಷ ‘ಪುರಂದರದಾಸರ ಆರಾಧನೆ’ಯಲ್ಲಿ ’ಅಂಬಿಗ ನಾ ನಿನ್ನ ನಂಬಿದೆ...’ ಹಾಡಿದ್ದ ವಿಡಿಯೋ ಸಿಕ್ಕಿತು, ಅದನ್ನೇ ಸೇರಿಸಿಕೊಂಡಿದ್ದೇನೆ. ನೀವೂ ನೋಡಿ/ಕೇಳಿ ಆನಂದಿಸಿ. [youtube=http://www.youtube.com/watch?v=-ztRjYonkxA] *** *** *** *** *** *** *** ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುವ “ಪವಮಾನ ಜಗದ ಪ್ರಾಣ..." ಕೀರ್ತನೆಯೂ ಬಹುತೇಕವಾಗಿ ಅಭೇರಿ ರಾಗದಲ್ಲೇ ಸಂಚರಿಸುತ್ತದೆ. ವಿಜಯವಿಟ್ಠಲ ದಾಸರ ರಚನೆ (ಕೊನೆಯಲ್ಲಿ ಅಂಕಿತವೂ ಇದೆ). [youtube=http://www.youtube.com/watch?v=N2q-obGUX8Q] *** *** *** *** *** *** *** ಇನ್ನೂ ಒಂದು ಭಕ್ತಿಗೀತೆ, ಅನ್ನಮಾಚಾರ್ಯರ ರಚನೆ "ಪಲುಕು ತೇನೆಲ ತಲ್ಲಿ ಪವಳಿಂಚೆನು..." ಇದನ್ನೂ ಪ್ರಿಯಾ ಸಹೋದರಿಯರೇ ಹಾಡಿದ್ದಾರೆ. [youtube=http://www.youtube.com/watch?v=_poKVkaWhvE] *** *** *** *** *** *** *** ಈಗ, ಡಾ.ಎಂ. ಬಾಲಮುರಳಿ ಕೃಷ್ಣ ಅವರ ಕಂಠಸಿರಿಯಲ್ಲಿ “ನಗುಮೊಮು ಗನಲೇನಿ..." ಆನಂದಿಸುವ ಸಮಯ! [youtube=http://www.youtube.com/watch?v=ZY0GQfLXkfE] *** *** *** *** *** *** *** ಚಂದ್ರಿಕಾ ಕೃಷ್ಣಮೂರ್ತಿ ಟಂಡನ್ ಭೀಮಪಲಾಸ್ ರಾಗದಲ್ಲಿ ಹಾಡಿರುವ ‘ನಮಃ ಶಿವಾಯ ನಮಃ ಶಿವಾಯ...’ ಧ್ಯಾನ ಭಜನ್, soul mantra ಎಂಬ ಆಲ್ಬಮ್ನಿಂದ- [youtube=http://www.youtube.com/watch?v=Gzpy979A63s] *** *** *** *** *** *** *** ಅಭೇರಿ ರಾಗರಸಾಯನಕ್ಕೆ ನಾನು ‘ಅಮೃತಕ್ಕಿಂತಲೂ ರುಚಿ ಅಭೇರಿ’ ಎಂದೇಕೆ ಶೀರ್ಷಿಕೆ ಕೊಟ್ಟಿದ್ದೇನೆ? ಅಮೃತ ಎನ್ನುವುದು ಎಷ್ಟು ರುಚಿಯಿರುತ್ತದೋ ನಮಗೆ ಗೊತ್ತಿಲ್ಲ ಆದರೆ ಮನಸ್ಸಿಗೆ ತಂಪನ್ನೆರೆಯುವ ಸಂಗೀತವೆಂದರೆ ಅಮೃತವೇ ಅಲ್ಲವೇ? ಅದರಲ್ಲೂ ಅಭೇರಿಯಂತಹ ದೈವಿಕ ರಾಗವಿದ್ದರಂತೂ ಮತ್ತೂಮತ್ತೂ ಕೇಳಬೇಕೆನಿಸುವಷ್ಟು ಮಧುರ. ಅಮೃತಕ್ಕಿಂತಲೂ ರುಚಿಯಾಗಿರುವುದು ಏನಾದರೂ ಇದ್ದರೆ ಅದು ಭಗವನ್ನಾಮಸ್ಮರಣೆ ಮಾತ್ರ! 13ನೆಯ ಶತಮಾನದಲ್ಲಿ ಬಾಳಿದ್ದ ಸಂತ ನಾಮದೇವ ಮಹಾರಾಜ್ ರಚಿಸಿದ ಮರಾಠಿ ಅಭಂಗ "ಅಮೃತಾಹುನೀ ಗೋಡ ನಾಮ ತುಝೇ ದೇವಾ..." ಅದನ್ನೇ ಹೇಳುತ್ತದೆ. ಪದ್ಮಶ್ರೀ ಮಾಣಿಕ ವರ್ಮಾ ಹಾಡಿರುವ ಈ ಭಕ್ತಿಗೀತೆ ಮರಾಠಿ ಜನರೆಲ್ಲರ ನಾಲಿಗೆತುದಿಯಲ್ಲಿದೆಯೆನ್ನುವಷ್ಟು ಜನಪ್ರಿಯವಾದದ್ದು. [youtube=http://www.youtube.com/watch?v=ffg4GqRtG2Q] *** *** *** *** *** *** *** ‘ಅಮೃತಾಹುನೀ ಗೋಡ’ ಅಭಂಗವನ್ನು ಚಿ.ಸದಾಶಿವಯ್ಯ ಅವರು 'ಸಂತ ತುಕಾರಾಮ್’ ಚಿತ್ರಕ್ಕಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಅದನ್ನು ಹಾಡಿದ್ದಾರೆ. ಯುಟ್ಯೂಬ್ನಲ್ಲಿ ಚಿತ್ರದ ವಿಡಿಯೋ ಸಿಕ್ಕಿಲ್ಲವಾದ್ದರಿಂದ ನಾನೇ ಮಾಡಿರುವ ವಿಡಿಯೋಕ್ಲಿಪ್ಪಿಂಗ್ನಲ್ಲಿ ನಾಮದೇವರ ಚಿತ್ರವನ್ನೂ ಕನ್ನಡಲಿಪಿಯಲ್ಲಿ ಹಾಡಿನ ಸಾಲುಗಳನ್ನೂ ಸೇರಿಸಿದ್ದೇನೆ (ಹಾಡನ್ನು ಕಲಿತುಕೊಳ್ಳಬೇಕೆನ್ನುವವರಿಗೆ ಅನುಕೂಲವಾಗುವಂತೆ). [youtube=http://www.youtube.com/watch?v=3W6E_rSQ6E4] ಇಲ್ಲಿಗೆ ಅಭೇರಿ(ಭೀಮ್ಪಲಾಸ್) ರಾಗರಸಾಯನ ಮುಗಿಯಿತು. ಇದನ್ನು ನೀವು YouTube Playlist ರೀತಿಯಲ್ಲಿ ಕೇಳಲಿಚ್ಛಿಸುವಿರಾದರೆ ಇಲ್ಲಿ ಕ್ಲಿಕ್ಕಿಸಿ. ನಿಮ್ಮ ಪ್ರತಿಕ್ರಿಯೆ ತಿಳಿಸುತ್ತೀರಲ್ಲ?Version: 20240320